Powered By Blogger

ಗುರುವಾರ, ಜೂನ್ 4, 2020

ಕುಂಭಸಂಭವೀಯಂ ಎಂಬ ಅಗಸ್ತ್ಯ ಚರಿತೆ- ಉರ್ವಶೀಜನನ ವೃತ್ತಾಂತ


ನಾನೇಕೆ ಬರೆಯುತ್ತೇನೆ ಎಂದು ಗೊತ್ತಿಲ್ಲ. ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಆನಂದ ದೊರೆಯುತ್ತದೆ, ಹಾಗೆ ನನಗೆ ಸಂತೋಷ ಸಿಗುತ್ತಿರುವ ಈ ಮಾರ್ಗದಲ್ಲಿ ನಾನೂ ಒಂದಷ್ಟು ದೂರ ನಡೆದಿದ್ದೇನೆ. ಇದೊಂದು ದೊಡ್ಡ ರಾಜ ಮಾರ್ಗ! ವ್ಯಾಸವಾಲ್ಮೀಕಿಕಾಳಿದಾಸರಿಂದ ಮೊದಲಾಗಿ ಅದೆಷ್ಟೋ ಜನ ಮಹಾನುಭಾವರು ಸಾಗಿ, ತಮ್ಮ ಹೆಜ್ಜೆಗುರುತನ್ನು ಉಳಿಸಿ ಹೋದ ಮಾರ್ಗ. ಈ ಮಾರ್ಗವನ್ನು ನೋಡುವುದೇ ಒಂದು ಸಂತೋಷವಾದರೆ, ಅಂತಹವರು ನಡೆದ ದಾರಿಯಲ್ಲಿ ನಡೆಯುವುದು ಇನ್ನೆಷ್ಟು ಸಂತೋಷವನ್ನು ಕೊಡುವುದಿಲ್ಲ! 

ಇಲ್ಲಿ ನನಗೆ ಜೊತೆಯಾಗಿ ನಡೆದ ಸ್ನೇಹಿತರೂ, ಕೈ ಹಿಡಿದು ನಡೆಸಿದ ಹಿರಿಯರೂ ಎಷ್ಟೋ ಜನ. ಅವರೆಲ್ಲರ ಪ್ರೀತಿಯ ಕಾರಣ ಎಷ್ಟು ದೂರ ಸಾಗಿದ್ದೇನೆ ಎಂಬುದರ ಅರಿವೂ ಇಲ್ಲ. ಇಂದಿನ ಈ ಸಾಮಾಜಿಕಮಾಧ್ಯಮಗಳ ಕಾಲದಲ್ಲಿ ನನಗಿಂತ ಹಿಂದೆ ನಡೆದವರಿಗಿಂತ ಹೆಚ್ಚಿನ ಸೌಕರ್ಯ ನನಗಿದೆ. ಹಾಗಾಗಿ ನನ್ನ ಈ ಎಳೆಯ ಹೆಜ್ಜೆಗುರುತುಗಳು ಅಳಿಸದ ಹಾಗೆ ಇಲ್ಲಿ ಅಚ್ಚಾಗಿಸಿದ್ದೇನೆ. ಇಲ್ಲಿರುವ ಎಷ್ಟೋ ವಿಷಯಗಳಲ್ಲಿ ನನ್ನ ದೃಷ್ಟಿ ಈಗ ಬದಲಾಗಿರಬಹುದು. ಆದರೂ ಆ ದಿನ ಹಾಗೆ ಇತ್ತು ಎಂಬ ಕಾರಣ ಹಾಗೆಯೇ ಉಳಿಸಿದ್ದೇನೆ.

ಕನ್ನಡವೇ ಕಷ್ಟವೆನ್ನುವ ಕಾಲದಲ್ಲಿ ಈ ಹಳಗನ್ನಡದ ಪಾ(ಹಾ)ಡನ್ನು ಕೇಳುವವರಾದರೂ ಯಾರು! ಬರೆಯುವುದು ನನ್ನ ಇಷ್ಟದ ಕೆಲಸವಾದರೂ ಕೇಳುವವರಿಹರೆಂದು ನಾ ಬಲ್ಲೆ.. ಹಾಗಾಗಿ ಅರ್ಥಸಹಿತವಾಗಿ ಇದೋ.....

ಕುಂಭಸಂಭವೀಯಂ 
ಎಂಬ 
ಅಗಸ್ತ್ಯಚರಿತೆ
೧೮-೦೫-೨೦೧೫
~ ಪ್ರಥಮಂ ಸರ್ಗಂ ~
ಕಂದಪದ್ಯ||
ಆರಿಂ ವಿಘ್ನಂ ಜನಿಯಿಕು-
ಮಾರಿಂದಂ ಕೞೆವುದಂತೆ ಸಂಕಷ್ಟಂಗಳ್|
ಗೌರಿಯ ತನೂಜನವನೇ 
ಸ್ಫಾರಾಂಗಂ ಗೆಯ್ಗೆ ಗಣಪನೊಳ್ಪನಜಸ್ರಂ ||೧||
(ಯಾರಿಂದ ವಿಘ್ನವು ಜನಿಸುವುದೋ, ಹಾಗೆಯೇ ಯಾರಿಂದ ಸಂಕಷ್ಟಗಳು ಕಳೆಯುವುದೋ, ಗೌರಿಯ ಮಗನಾದ ಆತನೇ ಪ್ರಕಾಶಮಾನವಾದ ಶರೀರವುಳ್ಳ ಗಣಪತಿ ಯಾವಾಗಳೂ ಒಳ್ಳೆಯದನ್ನು ಮಾಡಲಿ)
ಮಾತೆ ಸರಸ್ವತಿ ಮುನಿದೊಡೆ
ಮಾತೆಸಕಂಬೊಂದಲೆಂತು ಶಕ್ಯಂ ಕವಿಸಂ-
ಜಾತೆ ಕರುಣಿಸಲ್ ಕವಿಸಂ-
ಜಾತಕವಿತೆಯಪ್ಪುದಲ್ತೆ ಚಿರಮುಂ ವರಮುಂ ||೨||
(ಮಾತೆ ಸರಸ್ವತಿ ಮುನಿಸಿಕೊಂಡರೆ, ಮಾತಿನಲ್ಲಿ ಹೊಳಪು ಇರಲು ಹೇಗೆ ಸಾಧ್ಯ? ಬ್ರಹ್ಮಸಂಜಾತೆ ಶಾರದೆ ಕರುಣಿಸಿದರೆ ಮಾತ್ರ ಕವಿಸಂಜಾತವಾದ ಕವಿತೆ ಚೆನ್ನಾಗಿರುತ್ತದೆ ಹಾಗೂ ಚಿರಕಾಲ ಉಳಿಯುತ್ತದೆ.)
ಪೂರ್ವಕವೀಶ್ವರರೆಲ್ಲರ
ಚಾರ್ವಾಖ್ಯಾನಂಗಳಿಂದೆ ಬಳೆವರ್ ಕವಿಗಳ್
ಸರ್ವರಿನುಪಕೃತರಾಗಿಯು-
ಮೊರ್ವರುಮಂ ಸ್ತುತಿಸಿ ಪೇೞದಿರ್ದೊಡೆ ಚೆನ್ನೇಂ! ||೩||
(ಹಿಂದಾದ ಎಲ್ಲ ಕವಿಗಳ ಮಧುರವಾದ ಕಥಾನಕಗಳಿಂದಲೆ ಮುಂದಿನ ಕವಿಗಳು ಬೆಳೆಯುತ್ತಾರೆ. ಹೀಗೆ ಎಲ್ಲರಿಂದಲೂ ಉಪಕೃತರಾಗಿಯೂ ಒಬ್ಬರನ್ನೂ ಸ್ಮರಿಸದಿದ್ದರೆ ಚೆನ್ನಾಗಿರುವುದೇ?)
ವ್ಯಾಸಂ ವಾಲ್ಮೀಕಿಯುಮಾ 
ಭಾಸಂ ಕವಿಕಾಳಿದಾಸಶೂದ್ರಕಬಾಣರ್
ಭಾಸುರಕೃತಿಗಳಿನಾವಗ-
ಮೀ ಸಂಸ್ಕೃತದೊಳಗೆ ವಂದ್ಯರಮರುಕನುಂ ದಲ್ ||೪||
(ವ್ಯಾಸ ವಾಲ್ಮೀಕಿ ಭಾಸ ಕವಿ ಕಾಳಿದಾಸ ಶೂದ್ರಕ ಬಾಣ, ಮತ್ತು ಅಮರುಕ ಇವರುಗಳು ತಮ್ಮ ಸೊಗಸಾದ ಕೃತಿಗಳಿಂದ ವಂದ್ಯರಲ್ಲವೇ!)
ಕನ್ನಡದೊಳಗಭಿವಂದ್ಯರ್
ರನ್ನಂ ಪಂಪಂ ವಲಂ ಕುಮಾರವ್ಯಾಸಂ
ಮುನ್ನಮಿರೆ ನಾಗವರ್ಮಂ
ಸನ್ನುತ ಲಕ್ಷ್ಮೀಶರಾಘವರ್ ಮುದ್ದಣನುಂ ||೫||
(ಕನ್ನಡದಲ್ಲಿ ಅಭಿವಂದ್ಯರಾದವರು ರನ್ನ, ಪಂಪಮ ಕುಮಾರವ್ಯಾಸ, ಹಿಂದಿದ್ದ ನಾಗವರ್ಮ, ಸ್ತುತ್ಯನಾದ ಲಕ್ಷ್ಮೀಶ, ರಾಘವಾಂಕ ಹಾಗೂ ಮುದ್ದಣ)
ಸಮಕಾಲೀನರ್ ಪಲವರ್ 
ಕಮನೀಯಾಖ್ಯಾನಕರ್ತೃಗಳ್ ಸಂದಿರ್ಪರ್
ಸಮರಿಲ್ಲದ ಪ್ರತಿಭೆಯಿಂ-
ದಮಮಾ! ಗೆಲ್ದಿರ್ಪರಲ್ತೆ ರಸಿಕಜಗತ್ತಂ ||೬||
(ಸಮಕಾಲೀನರು ಹಲವರು ಕಮನೀಯವಾದ ಕಥಾನಕಗಳ ಕರ್ತೃಗಳೂ ಇದ್ದಾರೆ, ಅವರಿಗೆ ಸಮಾನರಿಲ್ಲದ ಪ್ರತಿಭೆಯಿಂದ ಅಬ್ಬ! ರಸಿಕ ಜಗತ್ತನ್ನೇ ಗೆದ್ದುಬಿಟ್ಟಿದ್ದಾರೆ!)
ಕವಿಗಳನಿವಱಂ ಪೂಜಿಸಿ
ಕವಿತಾವಲ್ಲಿಯೊಳರಳ್ದ ಪೂತಿಱಿಯಲ್ಕಾಂ
ಕವಿಯೆನಿಸುತೆ ಬಂದಾಗಳ್
ತವೆ ಕಯ್ಗೆಟುಕಿರ್ಪ ಪುಷ್ಪಚಯಮಂ ಕೊಂಡೆಂ ||೭||
(ಈ ಕವಿಗಳನ್ನು ಪೂಜಿಸಿ, ಕವಿತೆಯೆಂಬ ಬಳ್ಳಿಯೊಳಗೆ ಅರಳಿದ ಹೂವನ್ನು ತಿರಿಯಲು ನಾನು ಕವಿ ಎಂದೆನಿಸಿಕೊಂಡು ಬಂದಾಗ ನನ್ನ ಕೈಗೆ ಎಟುಕಿದ ಹೂವಿನ ಗೊಂಚಲನ್ನು ಕೊಂಡೆ)
ಕಟ್ಟುವೆನದಱಿಂದೀಗಳ್
ನೆಟ್ಟಗೆನಿಪ್ಪೊಂದು ಮಾಲ್ಯಮಂ ರಸಿಕರ್ಗಂ
ಕೊಟ್ಟೊಡೆ ಮೆಚ್ಚಿರಲೆಲ್ಲರ್
ಪುಟ್ಟುಗುಮಾನಂದಬಿಂದುವೊಂದೆನ್ನೆರ್ದದೆಯಿಂ ||೮||
(ಅದರಿಂದ ಈಗ ಚೆನ್ನಾಗಿ ಒಂದು ಮಾಲೆಯನ್ನು ರಸಿಕರಿಗೆಂದು ಕಟ್ಟುವೆ, ಅದನ್ನು ಕೊಟ್ಟಾಗ ಎಲ್ಲರೂ ಮೆಚ್ಚಿದರೆ, ಆನಂದಬಿಂದುವೊಂದು ನನ್ನ ಎದೆಯಿಂದ ಹುಟ್ಟುತ್ತದೆ)
ಕದಳಿಯಪಥ್ಯಂ ಮತ್ತಂ 
ಚದುರಲ್ತಾ ನಾಳಿಕೇರರಸಮಂ ಬಯಸಲ್
ಮೃದುಹೃದಯದ ಬುಧರೆಲ್ಲರ್
ಮುದದಿಂದಂ ಸವಿವರಲ್ತೆ ದ್ರಾಕ್ಷಾರಸಮಂ ||೯||
(ಬಾಳೆಯ ಹಣ್ಣು (ಕಾವ್ಯದಲ್ಲಿ ಕದಳೀಪಾಕ)ಅಪಥ್ಯ, ತೆಂಗನ್ನು (ನಾರಿಕೇಳಪಾಕವನ್ನು)ಬಯಸುವುದೂ ಬುದ್ಧಿವಂತಿಕೆಯಲ್ಲ. ಮೃದು ಹೃದಯದವಾರದ ಬುದ್ಧಿವಂತರೆಲ್ಲರೂ ಸಂತೋಷದಿಂದ ದ್ರಾಕ್ಷಾರಸವನ್ನೇ(ದ್ರಾಕ್ಷಾಪಾಕವನ್ನೇ) ಸವಿಯುವರಲ್ಲವೇ!)
ಕೊಳೆವುದು ಕಾಲದೆ ಕದಳಿಯು-
ಮೞಿವುದು ಬರಡಾಗಿ ನಾಳಿಕೇರಂ ಪೇೞ-
ಲ್ಕುಳಿವುದು ದ್ರಾಕ್ಷಿಯ ಸವಿಯೇ-
ಗಳೆನುತ್ತಾದತ್ತು ಚಿತ್ತಮದಱೊಳ್ ಲಗ್ನಂ ||೧೦||
(ಕಾಲದಲ್ಲಿ ಬಾಳೆಹಣ್ಣು (ಕದಳೀಪಾಕ)ಕೊಳೆತು ಹೋಗುತ್ತದೆ, ನಾರಿಕೇಳಪಾಕ- ತೆಂಗಿನ ಕಾಯಿ ಬರಡಾಗಿ ಅಳಿದು ಹೋಗುತ್ತದೆ. ಇನ್ನು ಹೇಳಬೇಕೆಂದರೆ ದ್ರಾಕ್ಷಿಯ ಸವಿಯೊಂದೇ (ಒಣದ್ರಾಕ್ಷಿಯ ರೂಪದಲ್ಲಿ) ಯಾವಾಗಳೂ ಉಳಿಯುವುದು. ಹಾಗಾಗಿ ನನ್ನ ಮನಸ್ಸು ಅದರಲ್ಲೇ ನಟ್ಟಿದೆ)
ಬಗೆಯೊಳ್ ಕವಿತಾವಿರಹಂ-
ಬುಗೆ ಪುಟ್ಟಲ್ಕೆಂತು ಶಕ್ಯಮಲ್ತೇ ಕಂದಂ!
ಸೊಗಮಾವಗಮಿರೆ ಸಂಗಂ
ಜಗಮೇ ಮಱೆಯಕ್ಕುಮಲ್ತೆ ಸೃಷ್ಟಿಕ್ರಿಯೆಯೊಳ್ ||೧೧||
(ಮನಸ್ಸಿನಲ್ಲಿ ಕವಿತೆಯ ಜೊತೆ ವಿರಹ ಸೃಷ್ಟಿಯಾದಾಗ ಕಂದ(ಕಂದಪದ್ಯ) ಹೇಗೆ ತಾನೆ ಹುಟ್ಟಲು ಸಾಧ್ಯ! ಯಾವಾಗಳೂಕವಿತೆಯ ಸಂಗವೇ ಸೊಗಸು, ಸೃಷ್ಟಿಕ್ರಿಯೆಯಲ್ಲಿ ಜಗತ್ತೇ ಮರೆಯಾಗಿಬಿಡುವುದಲ್ಲವೇ!)
ವೇಗಂ ಲಾಘವಮಂತುಟೆ
ರಾಗಂ ಪೆರ್ಚಲ್ಕೆ ನಿಚ್ಚಮುಂ ಬರೆಯೆಂಬಾ
ರಾಗಾನ್ವಿತಗುರ್ವಾಜ್ಞೆಯಿ-
*ನೀಗಳ್ ಸಲೆ ಕುಂಭಸಂಭವೀಯಮನುಲಿವೆಂ ||೧೨||
(*ನೀಗಳ್ ನೋಂತಿಂತಗಸ್ತ್ಯಚರಿತೆಯನುಲಿವೆಂ)
(ಬರೆಹದಲ್ಲಿ ವೇಗವೂ, ಲಾಘವವೂ ಹಾಗೆಯೇ ರಕ್ತಿಯೂ ಹೆಚ್ಚಲು ನಿತ್ಯವೂ ಬರೆಯಬೇಕು ಎನ್ನುವ ಪ್ರೀತಿ ತುಂಬಿದ ಗುರುವಿನಾಜ್ಞೆಯಿಂದಾಗಿ ಈಗ ಕುಂಭಸಂಭವೀಯಂ ಎಂಬ ಅಗಸ್ತ್ಯಚರಿತೆಯನ್ನು ಹೇಳುತ್ತಿರುವೆ )
ಪದದೊಳ್ ರತ್ನಾಕರಮುಂ
ಹೃದಯಸ್ಥಾನದೊಳೆ ಕಾಂಚನಾದ್ರಿಯುಮಿರ್ದುಂ
ಮುದದಿಂ ಶಿರದೊಳ್ ಕೈಲಾ-
ಸದೆ ಸಲ್ವ ವಿರಾಗದಿಂದೆ ಭಾರತಮಿರ್ಕುಂ ||೧೩||
(ಕಾಲಿನಲ್ಲಿ ರತ್ನಾಕರವೂ(ಸಮುದ್ರ), ಹೃದಯಸ್ಥಾನದಲ್ಲಿ ಕಾಂಚನಾದ್ರಿಯೂ(ಮೇರು) ಇದ್ದರೂ ಸಂತೋಷದಿಂದ ತಲೆಯಲ್ಲಿ ಕೈಲಾಸದಿಂದ ಸಲ್ಲುವ ವಿರಾಗದಿಂದ(ಕೆಂಪು ಬಣ್ಣವಿಲ್ಲದಿರುವಿಕೆಯಿಂದ/ ಸಂಸಾರಾಸಕ್ತಿಯಿಲ್ಲದಿರುವಿಕೆಯಿಂದ) ಭಾರತದೇಶವಿರುವುದು  )
ಪಣ್ಯಂ ಸ್ವರ್ಗದೊಳೇಗಳ್
ಪುಣ್ಯಂ ಮೇಣದನೆ ಪಡೆಯಲೆಂದಲ್ಲಿಂದಂ 
ಗಣ್ಯರ್ ಜನಿಸುತ್ತಿರ್ಪರ-
ಗಣ್ಯಂ ಭಾರತದೆ ಪುಣ್ಯದಸ್ಥಾನಂಗಳ್ ||೧೪||
(ಸ್ವರ್ಗದಲ್ಲಿ ಪುಣ್ಯವನ್ನೇ ಎಲ್ಲೆಡೆ ವ್ಯಯಮಾಡಬೇಕೆಂದು ಅದನ್ನೇ ಪಡೆಯುವುದಕ್ಕೋಸ್ಕರ ಅಲ್ಲಿಂದ ಗಣ್ಯರಾದವರು ಹುಟ್ಟುತ್ತಿದ್ದರು. ಭಾರತದಲ್ಲಿ ಪುಣ್ಯವನ್ನು ಕೊಡುವ ಸ್ಥಾನಗಳು ಎಣಿಕೆಗೆ ಸಿಗುವುದಿಲ್ಲವಷ್ಟೆ!)
ಇಂತಿರೆ ಸಾರ್ಚಿ ಕರಂಗಳ-
ನಂತರ್ಕಂ ತಾನೆ ನಿಚ್ಚಮುಂ ಭಾರತಕಂ
ಶಾಂತಂ ದಾಂತಂ ಸಂದಂ
ನೋಂತಂ ಮಿತ್ರಾಖ್ಯನಾಮಮಂ ಪಡೆದಿರ್ದಂ ||೧೫||
(ಹೀಗಿರುವಾಗ,ಸೂರ್ಯನು ಭಾರತಕ್ಕೆ  ತನ್ನ ಕರಗಳನ್ನು(ಕಿರಣ/ಕೈ) ಚಾಚಿ ಶಾಂತನೂ ದಾಂತನೂ ಆಗಿ ವ್ರತತೊಟ್ಟವನು “ಮಿತ್ರ” ಎಂಬ ಹೆಸರನ್ನು ಪಡೆದಿದ್ದನು )
ಪರಮಾತ್ಮನ ಲೀಲೆಯದೇಂ
ನರನಾರಾಯಣರೆನಿಪ್ಪ ರೂಪದಿನೊರ್ಮೆ
ಸ್ಫುರಿಸಿ ತಪಸ್ಸಂ ಗೆಯ್ದುದು-
ಮರರೇ! ಕೇಳ್ದರ್ಗೆ ಚಿತ್ರಮೆನಿಪಂತಾಯ್ತೈ ||೧೬||
(ಪರಮಾತ್ಮನ ಲೀಲೆ ಅದೆಂತೋ! ನರ-ನಾರಾಯಣ ಎಂಬ ರೂಪದಿಂದ ಒಮ್ಮೆ ಸೃಜಿಸಿ ತಪಸ್ಸನ್ನು ಮಾಡಿದರು. ಅರರೇ! ಇದು ಕೇಳುವವರಿಗೆ ವಿಚಿತ್ರವೆನಿಸುವಂತಾಯ್ತು)
ತಪದಿಂ ಪೊಣ್ಮುವ ತೇಜ-
ಸ್ಸುಪನದಿಯಿಂದುರ್ಕುತಿರ್ಪ ನದಿಯಂತಾಗಲ್
ತಪಿಪ ತಪಸ್ವಿಗಳಿರ್ಪೆಡೆ-
ಗಪರಿಮಿತಚ್ಛವಿಯೆ ಸಂದುದತಿಶಯಮಲ್ಲಂ ||೧೭||
(ತಪಸ್ಸಿನಿಂದ ಹೊಮ್ಮುವ ತೇಜಸ್ಸು, ಉಪನದಿಗಳಿಂದ ಕೂಡಿ ಉಕ್ಕುತ್ತ ಬರುವ ನದಿಯಂತಾಗಿ, ತಪಸ್ವಿಗಳು ಇರುವ ತಾಣಕ್ಕೆ  ಅಪರಿಮಿತವಾದ ಕಾಂತಿಯನ್ನು ತಂದುಕೊಟ್ಟಿತು. ಇದು ಅತಿಶಯವೇನಲ್ಲ!)
ಬದರಿಕ್ಷೇತ್ರದೊಳಿವಱಿಂ-
ದೊದವಿತ್ತಾ ಹಿಮಕೆ ಜೀವನತ್ವಂ ಸತ್ತ್ವಂ
ಹೃದಯವಿಶಾಲತೆಯೊದವ-
ಲ್ಕದಱಿಂದೊಳ್ಪಕ್ಕುಮಲ್ತೆ ಲೋಕಕ್ಕೆಲ್ಲಂ||೧೮||
(ಬದರಿಕ್ಷೇತ್ರದಲ್ಲಿ ಇವರಿಂದ ಹಿಮಕ್ಕೆ ಜೀವನತ್ವವೂ(ದ್ರವರೂಪವೂ) ಸತ್ತ್ವವೂ(ಒಳ್ಳೆಯ ತನವೂ) ಒದಗಿತು. ಹೃದಯದಲ್ಲಿ ವಿಶಾಲತೆ ಇದ್ದಾಗ  ಅದರಿಂದ ಲೋಕಕ್ಕೆಲ್ಲ ಒಳ್ಳೆಯದೇ ಆಗುವುದಿಲ್ಲವೇ! )
೧೯-೦೫-೨೦೧೫
ತವಸಿಗಳಿರ್ದೊಡೆ ತಪದೊಳ್
ಭವಭಾವಂಗಳಿನತೀತರಾಗಾ ನೆಲೆಯೊಳ್
ಕವಿಯಲ್ ಪ್ರೇಮಿಗಳೆಲ್ಲರ
ಸವಿಯೆನಿಪಂತಾ ವಸಂತಸಮಯಂ ಸರಯಂ||೧೯||
(ಆ ನೆಲೆಯಲ್ಲಿ ಭವಭಾವಗಳಿಂದೆಲ್ಲ ಅತೀತರಾಗಿ ತಪಸ್ವಿಗಳು ತಪಸ್ಸಿನಲ್ಲಿದ್ದಾಗ, ಪ್ರೇಮಿಗಳ ಎಲ್ಲರ ಸವಿಯೆನ್ನುವಂತಹ ವಸಂತಸಮಯ ವೇಗದಿಂದ ಕವಿದು ಬಂತು)
ನವನೀತಂ ಘೃತಮಪ್ಪಂ-
ತವಿರಳಮಾಗಿರ್ದ ತುಹಿನರಾಶಿ ದ್ರವಿಸಲ್
ನವೆಯದೆ ಮುಪ್ಪಂ ತ್ಯಜಿಸುತೆ
ನವಯೌವನಮಂ ಧರಿಪ್ಪ ತೆಱದಿಂ ಕಾಣ್ಗುಂ||೨೦||
(ಬೆಣ್ಣೆ ತುಪ್ಪವಾಗುವಂತೆ ದಟ್ಟವಾಗಿದ್ದ ಹಿಮರಾಶಿ ದ್ರವಿಸಿತು. ಆಗ ತೊಂದರೆಯಿಲ್ಲದೆ ಮುಪ್ಪನ್ನು ತ್ಯಜಿಸಿ ಹೊಸಜವ್ವನವನ್ನು ಪಡೆದಂತೆ ಭೂಮಿ ಕಾಣುತ್ತಿತ್ತು)
ಗಿರಿಯ ಶಿರಂ ಕಣಿವೆಗಳುಂ
ಭರದಿಂ ತಳೆಯಲ್ಕೆ ಪೂಗಳಂ ಚೆಲ್ವಿಂದಂ
ಗಿರಿಶಂ ಗೌರಿಯ ರಮಿಸಲ್
ಸ್ಫುರಿಸಿರ್ಪಂ ಕುಸುಮಮಂಚಮಂ ತಾನೆನಿಕುಂ||೨೧||
(ಪರ್ವತದ ತುದಿಗಳು, ಕಣಿವೆಗಳು ಎಲ್ಲವೂ ಭರದಿಂದ ಹೂವನ್ನು ತಳೆದಾಗ ಚೆಲುವಿನಿಂದ ಗಿರಿಶನಾದ ಶಿವ ಗೌರಿಯನ್ನು ರಮಿಸಲು ಹೂವಿನ ಮಂಚವನ್ನು ಸ್ಫುರಿಸಿದ್ದಾನೆ ಎಂಬಂತೆ ಕಾಣುತ್ತಿತ್ತು)
ಹಿಮಮೆಂಬ ಭಸ್ಮಚಯದಿಂ-
ದೆ ಮೃತಂ ಮಾರಂ ನೆಗೞ್ದು ಪುಟ್ಟಿರ್ಪವೊಲೇ
ಸುಮರಾಜಿಯಿಂದೆ ತರುಗಳ್
ಕಮನೀಯತೆವೆತ್ತು ರಾಜಿಸಿರ್ದಪುವಾಗಳ್||೨೨||
(ಹಿಮವೆನ್ನುವ ಭಸ್ಮದ ರಾಶಿಯಿಂದ ಸತ್ತು ಹೋದ ಮನ್ಮಥ ಮತ್ತೆ ಹುಟ್ಟಿದಂತೆ ಹೂವುಗಳಿಂದ ಮರಗಳು ಸೌಂದರ್ಯವನ್ನು ಹೆತ್ತು ಶೋಭಿಸುತ್ತಿದ್ದವು)
ಶಶಿಯ ಶ್ವೇತಕರಂಗಳ್
ನಿಶೆಯಂತ್ಯದೆ ಪೋಪ ತೆಱದೊಳಲ್ಲಿಯ ಹಿಮಮುಂ
ಕೃಶಮಾಗಲ್ ರವಿಕಿರಣಂ
ದಿಶೆಯೊಳ್ ಪರ್ವಿರ್ಪವೋಲೆ ಕಂಡವು ಪೂಗಳ್ ||೨೩||
(ಚಂದ್ರನ ಬಿಳಿಯ ಕಿರಣಗಳು ರಾತ್ರಿಯ ಕೊನೆಯಲ್ಲಿ ಹೋಗುವ ಹಾಗೆ ಅಲ್ಲಿಯ ಹಿಮವೂ ಕೃಶವಾಗುತ್ತಿತ್ತು, ಸೂರ್ಯನ ಕಿರಣಗಳು ಪೂರ್ವದಿಕ್ಕಿನಲ್ಲಿ ಹಬ್ಬುವಂತೆ ಹೂಗಳು ಕಂಡವು)
ಪರಿದುದು ಮಲಯಾನಿಲಮುಂ
ಪರಿದುದು ಮೆಯ್ದುಂಬಿದಲಕನಂದಾ ನದಿಯುಂ
ಸೊರಗಿತು ಬಿರಯಿಗಳೆರ್ದೆಯುಂ
ಸೊರಗಿತು ಹಿಮಗಿರಿಯ ಕೊರ್ವಿ ತೋರ್ದಾ ಮೆಯ್ಯುಂ||೨೪||
(ದಕ್ಷಿಣದ ಬೆಟ್ಟಗಳ ಗಾಳಿ ಹರಿದು ಬಂತು, ಹಾಗೆಯೇ ಅಲಕನಂದಾ ನದಿಯೂ ಮೈತುಂಬಿ ಹರಿಯಿತು. ವಿರಹಿಗಳ ಎದೆ ಸೊರಗತೊಡಗಿತು, ಹಾಗೆಯೇ ಹಿಮಗಿರಿಯ ಕೊಬ್ಬಿನಿಂದ ಕೂಡಿದಂತೆ ಕಾಣುತ್ತಿದ್ದ ಮೈಯೂ ಸೊರಗತೊಡಗಿತು )
ರುಚಿರ ಸುಮಾಳಿಯನೀಕ್ಷಿಸು-
ತಚಿರದೆ ಚಂಚಲತೆವೆತ್ತು ವಾಱಡಿಗಳ್ ತಾ-
ಮಚಲಮನಸ್ಕರೆನಿಪ್ಪರ್
ಸ್ವಚಿತ್ತನಿಗ್ರಹದೆ ಸೋಲ್ತರಾ ಕಿತ್ತಡಿಗಳ್||೨೫||
(ಸುಂದರವಾದ ಹೂವುಗಳನ್ನು ನೋಡುತ್ತಾ ಶೀಘ್ರದಲ್ಲಿಯೇ ದುಂಬಿಗಳು ಚಂಚಲತೆಯನ್ನು ಹೊಂದಿದವು. ತಾವು ಅಚಲವಾದ ಮನಸ್ಸುಳ್ಳವರು ಎಂಬಂತಹ ಋಷಿಗಳೂ ತಮ್ಮ ಚಿತ್ತನಿಗ್ರಹದಲ್ಲಿ ಸೋತು ಹೋಗುತ್ತಿದ್ದರು)
ನರನಾರಾಯಣರಚಲತೆ
ಸುರಪನೊಳೆಂತೆಂತೊ ಚಂಚಲತೆಯಂಬುಗಿಸ-
ಲ್ಕರರೇ! ನೋೞ್ಪೆನೆನುತ್ತುಂ
ಸ್ಮರನಂ ಗೆಲ್ದಿರ್ಪ ಚೆಲ್ವೆಯರನೆ ಕಳುಪಿದಂ||೨೬||
(ಆದರೆ ನರನಾರಾಯಣರ ಅಚಲತೆ ದೇವತೆಗಳ ಒಡೆಯನಾದ ಇಂದ್ರನಲ್ಲಿ ಚಂಚಲತೆಯನ್ನು ಹುಟ್ಟಿಸಿತು. ಅವನು “ಅರರೇ! ನೋಡುವೆ” ಎಂದು ಮನ್ಮಥನನ್ನೇ ಗೆದ್ದ ಚೆಲುವೆಯರನ್ನು ಕಳುಹಿಸಿದನು)
ವನದೇವತೆಯರ ಪಾಂಗಿಂ
ಮನದೊಳ್ ಸ್ಮರನರ್ಚಿಯಂ ಸದಾ ಪೆರ್ಚಿಪರಾ
ವನಿತೆಯರೆಯ್ದಿದರಾಗಳ್
ಮುನಿಜನರೆರ್ದೆಗಸಿಯ ತಿವಿತದಂದದೆ ತೋರ್ದರ್||೨೭||
(ವನದೇವತೆಯರ ಹಾಗಿರುವ ಆ ವನಿತೆಯರು ಮನಸ್ಸಿನಲ್ಲಿ ಕಾಮಜ್ವಾಲೆಯನ್ನು ಹೆಚ್ಚಿಸುತ್ತಿದ್ದರು. ಹಾಗೆ ಅಲ್ಲಿಗೆ ಬಂದವರು ಮುನಿಜನರ ಎದೆಗೆ ಕತ್ತಿಯ ತಿವಿತದಂತೆ ತೋರುತ್ತಿದ್ದರು)
ಅಕಟಾ! ನಿರ್ದಯಿ ಮಾರಂ
ಪ್ರಕಟಂಗೊಂಡಿರ್ಪನಿವರ ಕುಡಿನೋಟದೊಳೀ
ವಿಕಟತೆಯಿಂ ಬೆರ್ಚುತ್ತುಂ
ಸಕಲಮುನೀಶರ್ಕಳಕ್ಷಿ ತೆರೆಯಲ್ಕಾಱರ್||೨೮||
(“ಅಯ್ಯೋ! ದಯೆಯಿಲ್ಲದ ಮನ್ಮಥ, ಇವರ ಕುಡಿನೋಟದಲ್ಲೇ ಪ್ರಕಟವಾಗಿದ್ದಾನೆ.” ಎಂದು ಈ ವಿಕಟತೆಯಿಂದ ಹೆದರುತ್ತ ಸಕಲ ಮುನೀಶರು ಕಣ್ಣುಗಳನ್ನೇ ತೆರೆಯಲಾರರು)
ಪೊಱಗಣ ಕಷ್ಟಂಗಳನಾಂ 
ಪರಿಹರಿಸಲ್ಕಾರ್ಪೆವಾದೊಡಂತಸ್ಥಂಗಳ್
ಪರಿತಾಪಮನೀಯುತಿರ-
ಲ್ಕರಿದಾದತ್ತಲ್ತೆ ಮೋಕ್ಷಮೆಂಬರ್ ಮುನಿಗಳ್||೨೯||
(ಹೊರಗಿನ ಕಷ್ಟಗಳನ್ನು ಪರಿಹರಿಸಲು ನಾವು ಸಮರ್ಥರು. ಆದರೆ ಒಳಗಡೆ ಹುಟ್ಟುವಂತಹವು ಪರಿತಾಪವನ್ನು ಕೊಡುತ್ತಿರುವಾಗ ಮೋಕ್ಷವೆನ್ನುವುದು ಕಷ್ಟವಾಗುವುದಲ್ಲವೇ!” ಎಂದು ಮುನಿಗಳು ಹೇಳಿದರು.)
ಕೆಟ್ಟೆವು ಸ್ಮರಶರದಿಂದಂ
ದಿಟ್ಟಿಸಿದೊಡನಂದು ಸತ್ತನಿಲ್ಲಂ ಶಿವನಿಂ
ದಿಟ್ಟಿಯೊಳೀ ನಾರಿಯರೊಳ್
ಗಟ್ಟಿಗನಾಗಿರ್ಪನೆಂದು ಪೇೞ್ದರ್ ಮುನಿಗಳ್||೩೦||
(ಈ ಮನ್ಮಥನ ಬಾಣದಿಂದ ನಾವು ಕೆಟ್ಟೆವು. ಅಂದು ದಿಟ್ಟಿಸಿದಾಗ ಶಿವನಿಂದ ಸತ್ತಿಲ್ಲ. ಈ ನಾರಿಯರ ದೃಷ್ಟಿಯಲ್ಲಿ ಮತ್ತೆ ಗಟ್ಟಿಗನಾಗಿದ್ದಾನೆ” ಎಂದು ಮುನಿಗಳು ಹೇಳಿದರು.)
ಲೋಕದ ಪೂರ್ವದೆ ಪುಟ್ಟಿದ-
ನೇ ಕಾವಂ ಕಾವನಲ್ತು ಜಗದೊಳಗೇಗಳ್
ವ್ಯಾಕುಲತೆಯನೞಿಪಂ ನಿ-
ರ್ವ್ಯಾಕುಲನಾ ಹರಿಯೆ ಕಾವನಮ್ಮಂ ಕಾವಂ ||೩೧||
(ಜಗತ್ತಿನ ಪೂರ್ವದಲ್ಲಿಯೇ ಹುಟ್ಟಿದ ಕಾವನು(ಮನ್ಮಥ/ಕಾಪಾಡುವವನು) ಕಾಪಾಡುವವನಲ್ಲ. ಜಗತ್ತಿನಲ್ಲಿ ಯಾವಾಗಳೂ ವ್ಯಾಕುಲತೆಯನ್ನು ನಾಶಮಾಡುವ ನಿರ್ವ್ಯಾಕುಲನಾದ ಕಾಮನ ಅಪ್ಪನಾದ ಹರಿಯೆ ಕಾಪಾಡುವವನು)
ಎನುತುಂ ಚಿಂತಿಸಿ ನುತಿಸಲ್
ಮುನಿಗಳ್ ತಪದೊಳಗೆ ಮಗ್ನನಾಗಿರ್ಪಾತಂ
ಮನದೊಳಗಱಿತೆಲ್ಲಮುಮಂ
ಮುನಿಯದೆ ನಿಜಲೀಲೆಯಿಂದ ನಕ್ಕಂ ಬೞಿಕಂ||೩೨||
(ಹೀಗೆಂದು ಚಿಂತಿಸಿ ಮುನಿಗಳು ಸ್ತುತಿಸಲು ತಪಸ್ಸಿನಲ್ಲಿ ಮಗ್ನನಾಗಿರುವವನು ತನ್ನ ಮನಸ್ಸಿನಲ್ಲಿಯೇ ಎಲ್ಲವನ್ನೂ ತಿಳಿದುಕೊಂಡು ಸಿಟ್ಟಾಗದೆ ತನ್ನ ಲೀಲೆಯಿಂದ ಬಳಿಕ ಒಮ್ಮೆ ನಸುನಕ್ಕನು)
ನಾರಾಯಣನೊರ್ಮೆಗೆ ತ-
ನ್ನೂರುಮನೇ ತುಱಿಸಲದಱಿನಾದುದು ಚಿತ್ರಂ
ಕ್ಷೀರಾಬ್ಧಿಯ ಮಂಥನದಿಂ
ಶ್ರೀರಮೆ ಪುಟ್ಟಿರ್ಪ ತೆಱದೆ ಪುಟ್ಟಿದಳೊರ್ವಳ್||೩೩||
(ನಾರಾಯಣ ಒಂದು ಬಾರಿ ತನ್ನ ತೊಡೆಯನ್ನು ತುರಿಸಿದನಷ್ಟೆ. ಅದರಿಂದ ವಿಚಿತ್ರವೊಂದು ಜರುಗಿತು. ಕ್ಷೀರಸಾಗರವನ್ನು ಕಡೆದಾಗ ಅದರಿಂದ ಲಕ್ಷ್ಮಿಯೇ ಹುಟ್ಟಿ ಬಂದಂತೆ ನಾರಾಯಣನ ತೊಡೆಯಿಂದ ಒಬ್ಬಳು ಹುಟ್ಟಿದಳು)
ಅರರೇ! ಸೌಂದರ್ಯಮಿದೇ-
ನರಿದೋ ದಿಟದಿಂದ ಬಣ್ಣಿಸಲ್ ವಾಣಿಗಮಿಂ-
ತಿರೆ ಶಬ್ದಂಗಳ್ ಜಿಹ್ವೆಯ
ಪೊಱಗಡೆಗಂ ಸಾರ್ದುವಿಲ್ಲಮಾರ್ಗಂ ನೋಡಲ್||೩೪||
(ಅರರೇ! ಇದೇನು ಸೌಂದರ್ಯ! ಮಾತಿನ ದೇವತೆಯಾದ ವಾಣಿಗೂ ಸಹ ಇದನ್ನು ಬಣ್ಣಿಸಲು ಕಷ್ಟ. ಹಾಗಿರುವಾಗ ನೋಡಲು ಯಾರಿಗೂ ನಾಲಗೆಯ ಹೊರಗಡೆಗೆ ಶಬ್ದಗಳು ಹೊರಡಲೇ ಇಲ್ಲ.)
ಸುಂದರಿಯುರ್ವಶಿಯೆನಿಪಳ್
ಮುಂದೆಯ್ದಳ್ ನರ್ತಿಸಿರ್ಪ ಬರ್ದಿಲವೆಣ್ಗಳ್
ಕುಂದಿದ ತೇಜದೊಳಲ್ಲಿಂ
ಪಿಂದೆಯ್ದರ್ ಮೇಣ್ ದಿವಂಗತರ್ ಸಂದಿರ್ದರ್ ||೩೫||
(ಸುಂದರಿಯಾದ ಅವಳು ಉರ್ವಶಿ ಎಂಬವಳು ನರ್ತನ ಮಾಡುತ್ತಿದ್ದ ದೇವತಾಸ್ತ್ರೀಯರ ಮುಂದೆ ಬಂದಳು. ಆಗ ಅವರ ತೇಜಸ್ಸೆಲ್ಲ ಕುಂದಿತು, ಅವರು ಹಿಂದೆ ಸಾಗಿದರು. ದಿವಂಗತರಾದರು (ಸ್ವರ್ಗಕ್ಕೆ ಹೋದರು) )
ಸುರಪನ ಸೊರ್ಕಂ ಮುರಿದಳ್
ಪೆಱತೇನೀಗಳ್ ವಧೂಟಿಯಾರ್ಗಕ್ಕುಮೆನಲ್ 
ಹರಿ ಪರಿಹರಿಸಲ್ ಯೋಚಿಸಿ
ವರಮೆಂದಿತ್ತಿರ್ದನವಳನಾ ಮಿತ್ರಂಗಂ||೩೬||
(ದೇವೇಂದ್ರನ ಸೊಕ್ಕನ್ನು ಮುರಿದಳು, ಇನ್ನೇನು ಈಗ ಈ ವಧು ಯಾರಿಗೆ ಸಲ್ಲುವಳು ಎಂದು ಹರಿ ಪರಿಹಾರವನ್ನು ಯೋಚಿಸಿ “ಮಿತ್ರ”ನಿಗೆ ವರ ಎಂದು ನೀಡಿದನು )
ಬೞಿಕಂ ತಪದೊಳ್ ನೆಱೆದುದು
ಪಲಕಾಲಂ ಮೌನಿಯುಗ್ಮಮಾ ಬದರಿಯೊಳೇ
ಸಲೆ ಪುಣ್ಯಾಶ್ರಯಮಾದುದು
ನೆಲೆಸಿರ್ಪವರಿಂದೆ ತೀರ್ಥಮಾದುದು ನದಿಯುಂ||೩೭||
(ಆ ಬಳಿಕ ತಪಸ್ಸಿನಲ್ಲಿ ಹಲವು ಕಾಲ ಕಳೆಯಿತು. ನರನಾರಾಯಣರಿಬ್ಬರೂ ಬದರಿಯಲ್ಲಿಯೇ ಸಲ್ಲುತ್ತಿರಲು ಅದು ಪುಣ್ಯಾಶ್ರಯವಾಯಿತು. ನೆಲೆಸಿರುವ ಅವರಿಂದಾಗಿ ನದಿಯೂ ತೀರ್ಥವಾಯಿತು.)
ಹಿಮಗಿರಿ ಬದರಿಕ್ಷೇತ್ರದ
ಸಮೀಪದೊಳಗಿರ್ದುದಂತೆ ಪುಣ್ಯಾಶ್ರಮಮುಂ
ಕ್ರಮದಿಂದಗಣಿತಮೆನಿಸ-
ಲ್ಕೆ ಮುನಿಗಳಲ್ಲಿಗೆ ಬರುತ್ತುಮಿರ್ದರ್ ನಿಚ್ಚಂ ||೩೮||
(ಹಿಮಗಿರಿಯ ಬದರಿಕ್ಷೇತ್ರದ ಸಮೀಪದಲ್ಲಿಯೇ ಹಾಗೆಯೇ ಪುಣ್ಯಾಶ್ರಮಗಳೂ ಅಗಣಿತವೆನಿಸಿದವು. ನಿತ್ಯವೂ ಮುನಿಗಳು ಅಲ್ಲಿಗೆ ಬರುತ್ತಿದ್ದರು) 
ತವಸಿಗಳಿಂದಂ ಜ್ಞಾನಕೆ 
ಭವತಪ್ತರ್ ಯಾತ್ರೆಗೆಂದು ಸಾರ್ದಪರೇಗಳ್
ಕವಿದಿರೆ ಕೞ್ತಲ್ ಸರ್ವರ್
ರವಿಯಾಗಮನಕ್ಕೆ ಕಾಂಕ್ಷಿಪಂದದೊಳಿದು ದಲ್||೩೯||
(ತಪಸ್ವಿಗಳಿಂದ ಜ್ಞಾನಕ್ಕೆಂದು ಸಂಸಾರದಲ್ಲಿ ಬೆಂದವರು ಯಾತ್ರಗೆಂದು ಯಾವಾಗಳೂ ಬರುತ್ತಿದ್ದರು. ಎಲ್ಲೆಡೆ ಕತ್ತಲು ಕವಿದಾಗ ಸೂರ್ಯನ ಬರುವಿಕೆಯನ್ನೇ ಆಶಿಸುವಂತೆಯೇ ಇದೂ ಅಲ್ಲವೇ!)
ಮತ್ತಂ ಮಂತ್ರಂಗಳೆ ತಾ-
ಮುತ್ತರ ದಿಗ್ಭಾಗಕಾಗಿ ದುರ್ಗಮದುರ್ಗಂ
ಸತ್ತಂ ಕಾಯಲ್ಕೆನುತುಂ
ಧುತ್ತನೆ ಘನಮಾದವೋಲೆ ಕಾಣ್ಬಂ ನಗಪಂ ||೪೦||
(ಮತ್ತೆ ಮಂತ್ರಗಳೇ ಉತ್ತರದಿಕ್ಕಿನಲ್ಲಿ ಹೋಗಲು ಅಸಾಧ್ಯವಾಗುವಂತಹ ಕೋಟೆಯಂತೆಯೇ ಒಳ್ಳೆಯತನವನ್ನು ಕಾಯಲು ಧುತ್ತನೆ ಗಟ್ಟಿಯಾಗಿ ನಿಂತ ಹಾಗೆ ಪರ್ವತಗಳು ಕಾಣುತ್ತಿದ್ದವು)
ಕಾಂಚನಮುಂ ಕಳೆಗುಂದಲ್
ಸಂಚಿತದೋಷಂಗಳಂ ಕೞೆಯಲೆಂದೆನುತುಂ
ಮುಂಚಿನ ಸಂಸ್ಕಾರಂಗಳು-
ಮಂ ಚಿರದೊಳ್ ಗೆಯ್ವರಲ್ತೆ ಪೆಱತೇನಂತೇ! ||೪೧||
(ಬಂಗಾರವೂ ಕಳೆಗುಂದಿದರೆ ಅದರಲ್ಲಿ ಸಂಚಿತವಾದ ದೋಷಗಳನ್ನು ಕಳೆಯಲು ಮೊದಲಿನ ಸಂಸ್ಕಾರಗಳನ್ನು ಮತ್ತೆ ತತ್ಕ್ಷಣದಲ್ಲಿ ಮಾಡುವುದಿಲ್ಲವೇ ಹಾಗೇ...)
ಕೃತ ಪುಣ್ಯಕ್ಷಯದಿಂದಂ
ಪತಿತರ್ ತಾಮಪ್ಪರೆಂಬ ಭೀತಿಯೊಳಂ ದಲ್
ಹಿತಮಪ್ಪಂದದೆ ತಪದೆ ನಿ
ರತರಪ್ಪರ್ ಬರ್ದಿಲರ್ಕಳಲ್ಲಿಗೆ ಬರ್ಪರ್ ||೪೨||
(ಮಾಡಿದ ಪುಣ್ಯವು ಕ್ಷಯಿಸುತ್ತಿರಲು, ನಾವು ಪತಿತರಾಗುತ್ತೇವೆ ಎಂಬ ಭೀತಿಯಿಂದಲೂ ಕೂಡ ಅಲ್ಲಿಗೆ ಬರುವ ದೇವತೆಗಳು ಹಿತವಾಗುವಂತೆ ತಪಸ್ಸಿನಲ್ಲಿ ನಿರತರಾಗುತ್ತಿದ್ದರು) 
ಕ್ಷಯಮಾಗುತ್ತಿರಲಾಯುವು 
ಚಯಮಾಗಿರ್ಪೆಲ್ಲ ಪಾಪದಿಂ ಕೆಟ್ಟೆವಲಾ
ನಿಯಮಕೆ ದೂರಾಗಿರ್ದಪೆ-
ವಯಸ್ಸು ಕೀಳ್ ಕೂಡೆ ಸೆಳೆವ ಚುಂಬಕಮುಂಟೇ! ||೪೩||
(ಆಯಸ್ಸು  ಕ್ಷಯವಾಗುತ್ತಿರುವಾಗ ಒಟ್ಟು ಗೂಡುತ್ತಿರುವ ಪಾಪದಿಂದ ನಾವು ಕೆಟ್ಟೆವು. ನಿಯಮಕ್ಕೆ ದುರವಾಗುತ್ತಿದ್ದೆವು. ಕಬ್ಬಿಣಕ್ಕೆ ಕಿಲುಬು ಹಿಡಿದಾಗಳೂ ಸೆಳೆಯುವ ಅಯಸ್ಕಾಂತವಿದೆಯೇ)
ಎಂಬರ್ ಲೋಗರ್ ತೀರ್ಥದೊ-
ಳಂ ಬಂದರ್ ಮಿಂದು ಪಾಪಮಂ ಕೞೆಯುತ್ತುಂ
ಕಾಂಬರ್ ಪುಣ್ಯದ ನದಿಯಂ 
ಬಾಂಬೊಳೆಯಂ ಸೇರ್ವುದಲಕನಂದಾ ಎನುತುಂ||೪೪||
(ಎನ್ನುವ ಜನರು ತೀರ್ಥದಲ್ಲಿ ಬಂದು ಸ್ನಾನಮಾಡಿದರು, ಪಾಪವನ್ನು ಕಳೆಯುತ್ತಾ ಪುಣ್ಯವನ್ನು ಕೊಡುವ ಗಂಗಾನದಿಯನ್ನು ಸೇರುವ ಅಲಕನಂದಾ ನದಿಯನ್ನು ನೋಡುವರು.)
ನಾರಾಯಣನೂರುವಿನಿಂ-
ದಾ ರಮಣಿಯವಳ್ ಪ್ರಜಾತಳಾದಾ ಬಳಿಕಂ
ಸೇರಿರ್ಪಳ್ ನೇಸಱನಾ
ನಾರಿಯ ಕಥೆಯಾದುದಂತು ಮುಂದೆ ವಿಚಿತ್ರಂ||೪೫||
(ನಾರಾಯಣನ ತೊಡೆಯಿಂದ ಆ ರಮಣಿ ಹುಟ್ಟಿದ ಬಳಿಕ ಸೂರ್ಯನನ್ನು ಸೇರಿದಳು. ಆ ನಾರಿಯ ಕಥೆ ಮುಂದೆ ವಿಚಿತ್ರವಾಯಿತು)
ನೆಲೆಸಲ್ ಭಾಸ್ವದ್ಭಾಸ್ಕರ-
ನೊಲವಿಂದಂ ಸಖಿಯರೊಡನೆ ದಿವ್ಯಾಂಗನೆ ತಾಂ
ಕೞೆಯುತ್ತಿರ್ದಳ್ ಕಾಲಮ-
ನಲೆಯುತ್ತುಂ ಕೇಳಿಯಿಂದಮತ್ತಲ್ ಮತ್ತಂ ||೪೬||
(ಪ್ರಕಾಶಮಾನವಾದ ಭಾಸ್ಕರನ ಪ್ರೀತಿ ನೆಲೆಸಿರುವಾಗ ಸಖಿಯರೊಡನೆ ದಿವ್ಯಾಂಗನೆ ಅತ್ತಿತ್ತ ಅಲೆಯುತ್ತಾ ಆಟದಿಂದ ಕಾಲವನ್ನು ಕಳೆಯುತ್ತಿದ್ದಳು. )
ಹರಿದಶ್ವನ ನೆಱವಿಂದ
ಚ್ಚರಸಿಯರೊಡನಾಟಮೊದವಿದುದು ಸರ್ವತ್ರಂ
ಚರಿಸಲ್ ಶಕ್ತಿಯುಮಂತುಟೆ
ಧರಿಸಲ್ ನಿಜಕಾಮರೂಪಮಂ ಬಲ್ಲಳ್ಗಂ ||೪೭||
(ಸೂರ್ಯನ ನೆರವಿನಿಂದ ಅಪ್ಸರೆಯರೊಡನೆ ಎಲ್ಲಾ ಕಡೆಗಳಲ್ಲಿಯೂ ಸಂಚರಿಸುವ ಶಕ್ತಿ ಹಾಗೆಯೇ ಮನಸ್ಸಿಗೆ ಬಂದ ರೂಪವನ್ನು ಧರಿಸುವ ಶಕ್ತಿ ಅವಳಿಗೆ ಒದವಿತ್ತು)
ಮಣಿಮಯಮಾಲ್ಯಂ ನೂತ್ನಂ 
ಗಣಿಸಲ್ ಮಂಜೂಷಸಂಸ್ಥಮಾಗಲ್ ಚೆನ್ನಂ 
ಗಣಿಸದೆ ಮೌಲ್ಯಮನಿಟ್ಟೊಡ-
ಮಣಮುಂ ಸಂತೋಷಮಿಲ್ಲದಿರ್ಕುಂ ಮನಕಂ ||೪೮||
(ಹೊಸದಾದ ಮಣಿಮಯವಾದ ಮಾಲೆಯನ್ನು ಚೆನ್ನಾಗಿ ಪೆಟ್ಟಿಗೆಯೊಳಗಿಟ್ಟರೆ ಚೆನ್ನ. ಅದರ ಮೌಲ್ಯವನ್ನು ಲೆಕ್ಕಿಸದೆ ಎಲ್ಲೋ ಇಟ್ಟಾಗ ಮನಸ್ಸಿಗೆ ಸ್ವಲ್ಪವೂ ಸಂತೋಷವಿಲ್ಲದೇ ಹೋಗುತ್ತದೆ)
ಎನಿಪಂತಿವಳಂ ಗಣಿಸದೆ
ದಿನಪಂ ನಿಜಕರ್ಮನಿರತನಾಗಿರ್ದಪನಾ
ಮನಸಿಜ ಶರಕಂ ನಿಕಷಾ-
ಭೆ ನಿರಂಕುಶಳಾಗಿ ಚರಿಸುತಿರ್ದಳ್ ಜಗದೊಳ್||೪೯||
(ಅಂತಿರುವವಳ ಇವಳನ್ನು ಲೆಕ್ಕಿಸದೆ ಸೂರ್ಯನು ತನ್ನ ಕರ್ಮದಲ್ಲಿ ನಿರತನಾಗಿದ್ದ. ಮನ್ಮಥನ ಬಾಣಕ್ಕೆ ಒರೆಗಲ್ಲಂತಿರುವ ಇವಳು ನಿರಂಕುಶಳಾಗಿ ಜಗತ್ತಿನಲ್ಲಿ ಓಡಾಡುತ್ತಿದ್ದಳು.)
ಮಾಲಿನೀ||
ಹರಿಯ ತೊಡೆಯಿನಾಗಳ್ ಪುಟ್ಟಿದಳ್ ಸಾಗುವಾಗಳ್
ಸ್ಮರನ ಶರದ ವೇಗಂ ಪೆರ್ಚುಗುಂ ಕರ್ಪುರಕ್ಕಂ
ಪರಿದೊಡನಲನೇ ತಾಂ ಶಕ್ಯಮೇ ನಿಲ್ಲಲಂತೇ
ಸುರರ ನಗರದೊಳ್ ತಾನುರ್ವಶಿ ಖ್ಯಾತಳಾದಳ್||೫೦||
(ಹರಿಯ ತೊಡೆಯಿಂದ ಅಂದು ಹುಟ್ಟಿರುವವಳು ಸಾಗುವಾಗ ಮನ್ಮಥನ ಬಾಣದ ವೇಗ ಹೆಚ್ಚುತ್ತಿತ್ತು. ಕರ್ಪೂರಕ್ಕೆ ಬೆಂಕಿ ತಾಗಿದಾಗ ನಿಲ್ಲಲು ಸಾಧ್ಯವೇ! ಹಾಗೇ ಸುರರ ನಗರದಲ್ಲಿ ಉರ್ವಶಿ ಖ್ಯಾತಳಾದಳು)

||ಇಂತುರ್ವಶೀಜನನವೃತ್ತಾಂತಮೆಂಬ ಪ್ರಥಮಂ ಸರ್ಗಂ||

2 ಕಾಮೆಂಟ್‌ಗಳು: