Powered By Blogger

ಶುಕ್ರವಾರ, ಅಕ್ಟೋಬರ್ 18, 2024

ನನ್ನ ನವರಾತ್ರಿ

ಒಂಭತ್ತು ದಿನ ಎಲ್ಲಿ ನೋಡಿದರೂ ನವರಾತ್ರಿ ವೈಬ್ಸು. ನವರಾತ್ರಿಯನ್ನು ಆಚರಿಸಲಿ ಬಿಡಲಿ, ಮೊಬೈಲನ್ನಂತೂ ವ್ರತ ತೊಟ್ಟವರ ಹಾಗೆ ಕೈಯಲ್ಲೇ ಹಿಡಿದಿರುತ್ತೇನಲ್ಲ! ಹೀಗಾಗಿ ತಿಳಿದೋ ತಿಳಿಯದೆಯೋ ಪ್ರಥಮಂ ಶೈಲಪುತ್ರಿಯಿಂದ ಹಿಡಿದು ನವಮಂ ಸಿದ್ಧಿಧಾತ್ರಿಯವರೆಗೆ ಒಂಭತ್ತೂ ದಿನ, ಹಗಲು ರಾತ್ರಿಯೆನ್ನದೇ ನವರಾತ್ರಿ ಉತ್ಸವದಲ್ಲಿ ಭಾಗಿಯಾಗಿದ್ದೇನೆ ಎನ್ನಬಹುದು. ವಾಟ್ಸಪ್ಪು ಸ್ಟೇಟಸ್ಸುಗಳಲ್ಲಿ ಪ್ರತಿದಿನವೂ ಆಯಾ ದೇವಿಯ ಹೆಸರು, ಆ ದಿನದ ವಿಶೇಷ, ಅದರ ಹಿಂದಿನ ಕತೆಗಳನ್ನು ಒಬ್ಬರಲ್ಲ ಒಬ್ಬರು ಹಾಕಿಯೇ ಇರುತ್ತಿದ್ದರು. ಹಾಗಾಗಿ ನೋಡಿದ ಪುಣ್ಯವಂತೂ ದಕ್ಕಿದೆ ಅಂದುಕೊಂಡಿದ್ದೇನೆ. ಹಾಡುಗಾರರಂತೂ ಪ್ರತಿದಿನವೂ ಒಂದೊಂದು ದೇವಿಯ ಹಾಡನ್ನು ಹಾಡಿ ಸೋಶಿಯಲ್‌ ಮೀಡಿಯಾದಲ್ಲಿ ಬಿಟ್ಟಿದ್ದರಿಂದ ಅವನ್ನು ಕೇಳಿದ ಪುಣ್ಯವೂ ಸಿಕ್ಕಿದೆ ಅಂತ ನನ್ನ ಭಾವನೆ. ಆ ಮೂಲಕ ಎಷ್ಟೋ ಕೇಳಿರದ ದೇವಿ ಹಾಡುಗಳೂ, ಭಜನೆಗಳೂ ಸಜೆಸ್ಟ್‌ ಆಗತೊಡಗಿದವು. ಹಾಗೆಯೇ ಒಂದು ಹವ್ಯಕ ಭಜನೆಯೂ ಸಜೆಸ್ಟ್ ಆಗಿತ್ತು. ಹಾಡು ಆರಂಭವಾಗುವುದಕ್ಕೆ ಮುನ್ನ, ಆಕಾಶವಾಣಿ ರೇಡಿಯೋ ಕಾರ್ಯಕ್ರಮದಲ್ಲಿ ಹೇಳುವ ಹಾಗೆ ಹಾಡಿದವರು ಶ್ರೀಮತಿ ಸುಬ್ರಾಯ ಹೆಗಡೆ” ಎಂದು ಅನೌನ್ಸ್ ಮಾಡಿದರು. ಇದೇನು “ಸುಬ್ರಾಯ” ಎನ್ನುವವನಿಗೆ “ಶ್ರೀಮತಿ” ಎನ್ನುವ ಪೂರ್ವಪ್ರತ್ಯಯ ಸೇರಿಸಿದ್ದಾರಲ್ಲ ಅಂತ ನನ್ನ ತಲೆಯಲ್ಲಿ. ಅಥವಾ ಹವ್ಯಕರಲ್ಲಿ ಸುಬ್ಬಿ, ಗಣಪಿ ಎಂಬ ಹೆಸರುಗಳೆಲ್ಲ ಹಳೆ ಕಾಲದಲ್ಲಿ ಇರುತ್ತಿದ್ದರಿಂದ “ಸುಬ್ರಾಯಿ” ಅಂತಿಟ್ಟರೆ ಚೆನ್ನಾಗಿರುವುದಿಲ್ಲವೆಂದು “ಸುಬ್ರಾಯ” ಅಂತಲೇ ಇಟ್ಟಿರಬಹುದೆಂದೂ ಅಂದುಕೊಂಡೆ. ಇತ್ತೀಚೆಗೆ ಸಿನೆಮಾ ನಟಿಯೊಬ್ಬಳ ಮಗಳಿಗೆ “ನೇಸರ” ಎಂಬ ಹುಡುಗನ ಹೆಸರಿಟ್ಟಿದ್ದನ್ನು ಕೇಳಿದ್ದೆ. ಹಾಗಾಗಿ ಹಳೆಕಾಲದವರು ಹೆಣ್ಣುಮಕ್ಕಳಿಗೆ “ಸುಬ್ರಾಯ” ಅಂತಿಟ್ಟರೇನು ತಪ್ಪು ಅಂತ ನನ್ನ ತಲೆಯಲ್ಲಿ ಓಡುತ್ತಿತ್ತು. ಆ ಅನೌನ್ಸ್ಮೆಂಟನ್ನು ಕೇಳಿಸಿಕೊಂಡಿದ್ದ ನನ್ನ ಪತಿರಾಯ ನನ್ನ ಗೊಂದಲ ಅರ್ಥವಾದವನಂತೆ ನಗಲಿಕ್ಕಾರಂಭಿಸಿದ. ನನ್ನ ಟ್ಯೂಬ್‌ಲೈಟ್‌ ತಲೆಗೆ ಅವನು ಹೇಳಿದ ಮೇಲೆಯೇ ಹೊಳೆದದ್ದು. ಹಾಡುತ್ತಿರುವವರ ಹೆಸರೇ “ಶ್ರೀಮತಿ” ಎಂದು! ಶ್ರೀಮತಿ ಎಂಬ ಗೃಹಿಣಿಯ ಗಂಡನ ಹೆಸರು “ಸುಬ್ರಾಯ” ಎಂದಾಗಿದ್ದರಿಂದ ಅವರ ಹೆಸರು ಶ್ರೀಮತಿ ಸುಬ್ರಾಯ ಹೆಗಡೆ” ಎಂದಾಗಿತ್ತು. ಆದರೆ ನನ್ನ ಗೊಂದಲ ಅಲ್ಲಿಗೇ ನಿಲ್ಲಲಿಲ್ಲ. ಅವರನ್ನು ಯಾವುದಾದರೂ ಕಾರ್ಯಕ್ರಮಗಳಲ್ಲಿ ಗೌರವಪೂರ್ವಕವಾಗಿ ಸಂಬೋಧಿಸುವುದಾದರೆ, “ಶ್ರೀಮತಿ ಶ್ರೀಮತಿ ಸುಬ್ರಾಯ ಹೆಗಡೆ” ಎಂದು ಕರೆಯಬೇಕಲ್ಲಾ ಎಂದು ನನ್ನ ಸಮಸ್ಯೆ! ಅಲ್ಲಿಗೆ ನಮ್ಮ ಪ್ರತಿ ವಾರದ ವ್ಯಾಸಂಗಗೋಷ್ಠಿಯಲ್ಲಿ ಹವ್ಯಕರ ವಿಷಯ ಬಂದಾಗ ಹೇಳಿದ್ದೇ ಜೋಕುಗಳನ್ನು ಮತ್ತೆ ಮತ್ತೆ ಹೇಳಿ ಉಳಿದವರಿಗೂ ಅದನ್ನು ಗಟ್ಟು ಹೊಡೆಸಿದ್ದ ನನ್ನ ಪತಿರಾಯನಿಗೆ ಒಂದು ಹೊಸ ಜೋಕು ಸಿಕ್ಕ ಹಾಗಾಯ್ತು!

ಹೀಗೆ ಸೋಶಿಯಲ್‌ ಮೀಡಿಯಾದಲ್ಲಿ ಕೇಳಿದ ಹಾಡುಗಳ ಪೈಕಿ ಮೈಸೂರಿನ ನಾಡಗೀತೆಯಾಗಿದ್ದ ಕಾಯೌ ಶ್ರೀ ಗೌರಿ ಕರುಣಾಲಹರಿ” ಹಾಡು ತಲೆಯೊಳಗೆ ಹೊಕ್ಕಿಬಿಟ್ಟಿತ್ತು. ಅದೊಂದು ಸಾಲನ್ನು ಬಾಯಿ ತೆಗೆದಾಗೆಲ್ಲ ಹಾಡಲು ಆರಂಭಿಸಿದ್ದೆ. ಅದನ್ನು ಕೇಳಿ ಇವನಿಗೂ ಹಾಡಬೇಕಿನಿಸಿರಬಹುದು. ಅದನ್ನು ಮತ್ತೆ ಮತ್ತೆ ಯೂಟ್ಯೂಬಿನಲ್ಲಿ ಕೇಳಿ ತಾನೂ ಹಾಡಲಾರಂಭಿಸಿದ. ಇವನು ಎದ್ದೋಡಿ ರಾಗದಲ್ಲಿ ಹಾಡಲು ಶುರು ಮಾಡಿದ್ದಕ್ಕೆ ನಾನು ಅವನಿದ್ದಲ್ಲಿಂದ ಎದ್ಹೋಗಬೇಕಾಯ್ತು. ಹೇಗೋ ಅವನ ಬಾಯಿಯನ್ನು ಮುಚ್ಚಿಸಿ ನನ್ನ ಬಾಯನ್ನೂ ಮುಚ್ಚಿಕೊಂಡೆ!

ಹಬ್ಬವಾಗಿದ್ದರೂ ನಾನು ಮನೆಯಲ್ಲಿ ಟೀಶರ್ಟು ಪ್ಯಾಂಟು ಧರಿಸಿಕೊಂಡು ಹೋಮ್‌ಲೆಸ್‌ ತರ ಇದ್ದೆ. ಆದರೆ ಆಫೀಸಿಗೆ ಹೋಗುವ ಮಹಿಳೆಯರು, ಕಾಲೇಜಿಗೆ ಹೋಗುವ ಹುಡುಗಿಯರು ಪ್ರತಿದಿನ ಆಯಾ ದಿನದ ಕಲರ್‌ಕೋಡ್‌ ಪ್ರಕಾರ ಕಲರ್‌ ಕಲರ್‌ ಬಟ್ಟೆ ಧರಿಸಿ ತೆಗದುಕೊಂಡ ಸೆಲ್ಫಿ ಹಾಕುತ್ತಿದ್ದರಲ್ಲ. ಅದನ್ನು ನೋಡಿಯೇ ಕಣ್ಣು ತುಂಬಿಕೊಂಡೆ. ನಾವೆಲ್ಲಾ ಕಾಲೇಜಿಗೆ ಹೋಗುವಾಗ ಇದೆಲ್ಲ ಇರಲೇ ಇಲ್ಲವಲ್ಲ ಅಂತನಿಸಿತು. ಇದು ಶುರುವಾಗಿದ್ದು ಹೇಗೆಂಬ ಯೋಚನೆಯೂ ಬಂತು. ಇನ್ನು ಬರುವ ವರ್ಷಗಳಲ್ಲಿ ಗಂಡಸರಿಗೂ ಈ ಡ್ರೆಸ್‌ಕೋಡ್‌ ಬಂದರೆ... ಅವರು ಕಟ್ಟುನಿಟ್ಟಾಗಿ ಪಾಲಿಸಿದರೆ.. ನೋಡುವುದು ಕಷ್ಟವಿದೆ ಎಂದುಕೊಂಡೆ! ಕೆಲವರು ತಾವು ನಿತ್ಯವೂ ಮಾಡಿದ ಪೂಜೆಯ ಫೋಟೋಗಳನ್ನು ಹಾಕಿದ್ದರು. ಇನ್ನು ಕೆಲವರು ಹಾಕಿದ್ದ ನವರಾತ್ರಿಯ ಫಳಾರದ ಫೋಟೋವನ್ನು ನೋಡಿ ಬಾಯಲ್ಲಿ ನೀರೂರಿದ್ದು ಸುಳ್ಳಲ್ಲ. ಸೋಶಿಯಲ್‌ ಮೀಡಿಯಾ ಕೃಪೆಯಿಂದ ಈ ಬಾರಿ ನಮ್ಮ ಸ್ವರ್ಣವಲ್ಲಿಯ, ಶೃಂಗೇರಿಯ ದೇವಿಯರ ಅಲಂಕಾರವನ್ನು ನೋಡಿದ ಹಾಗೂ ಆಯ್ತು. ಈ ಬಾರಿ ನಮ್ಮೂರಿನ ಕವಡಿಕೆರೆ ಅಮ್ಮನವರ ನಿತ್ಯ ಅಲಂಕಾರವನ್ನೂ ನೋಡಲು ಸಿಕ್ಕಿದ್ದು ವಿಶೇಷ. ಹೀಗಾಗಿ ಆ ದೇವರುಗಳ ಮೇಲೆಲ್ಲ ನನ್ನ ದೃಷ್ಟಿ ಬಿದ್ದಿದೆ ಎನ್ನಬಹುದು!

ಕೆಲವರ ಮನೆಯಲ್ಲಂತೂ ಗೊಂಬೆಗಳದ್ದೇ ದರ್ಬಾರು. ಚಂದ ಚಂದದ ಗೊಂಬೆಗಳು, ಕತೆ ಹೇಳುವ ಗೊಂಬೆಗಳು, ಬೇರೆ ಬೇರೆ ಕಾನ್ಸೆಪ್ಟುಗಳ ಪ್ರಕಾರ ಕ್ರಮವಾಗಿ ಜೋಡಿಸಿದ ಗೊಂಬೆಗಳು. ಆ ಮನೆಗಳಲ್ಲಿನ ಜನರ, ವಿಶೇಷವಾಗಿ ಹೆಂಗಸರ ಉತ್ಸಾಹಕ್ಕೆ ಕೈ ಮುಗಿಯಲೇ ಬೇಕು. ನಾನು ನವರಾತ್ರಿಯ ಮೊದಲ ದಿನ ಅಂದುಕೊಂಡಿದ್ದು, ದಿನವೂ ಲಲಿತಾ ಸಹಸ್ರನಾಮವನ್ನೋ ಸೌಂದರ್ಯಲಹರಿಯನ್ನೋ ಒಂಭತ್ತು ದಿನಗಳ ಕಾಲವೂ ಓದಿ ಸ್ವಲ್ಪವಾದರೂ ದೇವಿಯನ್ನು ನನ್ನ ಕಡೆಗೆ ಒಲಿಸಿಕೊಳ್ಳಬೇಕು ಎಂದು. ಎರಡು ದಿನ ಭರ್ಜರಿ ಉತ್ಸಾಹ. ಮೂರನೇ ದಿನವೇ ಯಾವುದೋ ಚಿಕ್ಕ ಕಾರಣಕ್ಕೆ ಟುಸ್‌ ಆಯಿತು. ನನ್ನ ಕನ್ಸಿಸ್ಟನ್ಸಿಯ ಕತೆ ಹೀಗಿರುವಾಗ ನವರಾತ್ರಿಗೆ ಇನ್ನೂ ಒಂದು ವಾರ ಬಾಕಿಯಿದೆಯೆನ್ನುವಾಗಲೇ ಗೊಂಬೆ ಜೋಡಿಸಿ ಎಲ್ಲ ರೀತಿಯ ತಯಾರಿಯನ್ನೂ ಮಾಡಿಕೊಂಡು ಒಂಭತ್ತು ದಿನವೂ ಉಪವಾಸ ವೃತಗಳನ್ನು ಮಾಡಿ, ಪೂಜೆ ಪುನಸ್ಕಾರಗಳನ್ನು ಮಾಡಿ ಗೊಂಬೆ ನೋಡಲು ಬಂದವರಿಗೆ ಆತಿಥ್ಯ ನೀಡಿ ಅವರೊಂದಿಗೆ ಒಂದಿಷ್ಟು ಸಮಯವನ್ನೂ ಕಳೆದು ಕಳಿಸುವ ಅವರ ಶ್ರದ್ಧೆ ಎಷ್ಟು ದೊಡ್ಡದು ಎಂದು ನನಗನಿಸಿತು. ಜೊತೆಗೆ ನನ್ನ ಬಗ್ಗೆ ನನಗೆ ಸ್ವಲ್ಪ ನಾಚಿಕೆಯೂ ಆಯಿತು. ಆದರೆ ಯೂಟ್ಯೂಬಿನಲ್ಲಿ ನವರಾತ್ರಿಗೆ ಸಂಬಂಧಪಟ್ಟ ವೀಡಿಯೋವೊಂದರಲ್ಲಿ “ಯಥಾಶಕ್ತಿ” ಆಚರಿಸಿದರೂ ದೇವಿಯ ಕೃಪೆಗೆ ಪಾತ್ರರಾಗುತ್ತೇವೆಂಬ ಮಾತನ್ನು ಕೇಳಿದ್ದೆ. ಹಾಗಾಗಿ ನನ್ನ ಶಕ್ತಿಯೇ ಏನನ್ನೂ ಆಚರಿಸಲಾರದಷ್ಟು ಕಮ್ಮಿ ಎಂದುಕೊಂಡು ಸುಮ್ಮನಾದೆ.

ನನ್ನ ಕತೆ ಹಾಗಿರಲಿ. ಊರಲ್ಲಿ ನನ್ನ ಗೆಳತಿಯ ಮನೆಯಲ್ಲಿ ಶಾರದೆಯನ್ನು ಪ್ರತಿಷ್ಠಾಪನೆ ಮಾಡಿ ಅದೆಷ್ಟು ಚೆನ್ನಾಗಿ ಅಲಂಕಾರ ಮಾಡಿದ್ದರು. ವೀಡಿಯೋ ನೋಡಿ ಅವರ ಮನೆಯ ಶಾರದೆ ನಿಜಕ್ಕೂ ಪುಣ್ಯ ಮಾಡಿದ್ದಳು ಅಂತನಿಸಿತು. ನಂದಬಟ್ಟಲಿನಿಂದ ಹಿಡಿದು ತಾವರೆ ಹೂವಿನವರೆಗೂ ಬಗೆಬಗೆಯ ಹೂವುಗಳ ಅಲಂಕಾರ. ಹುಲ್ಲುಮೀಸೆಯ ಹೂವಿನ ದಂಡೆ, ಶಂಖಪುಷ್ಪದ ಹೂವಿನ ಮಾಲೆ, ಹೆಸರೇ ಗೊತ್ತಿರದ ಕೆಲವು ವಿಶೇಷ ಹೂವುಗಳು.. ಬೆಂಗಳೂರಲ್ಲಿ ಸಾಮಾನ್ಯವಾಗಿ ಕರ್ನಾಟಕದ ಬಾವುಟದ ಎರಡು ಬಣ್ಣಗಳನ್ನು ಬಿಟ್ಟು ಬೇರಾವ ಬಣ್ಣದ ಹೂವನ್ನೂ ಏರಿಸಿಕೊಳ್ಳುವ ಭಾಗ್ಯ ದೇವಿಗಿರುವುದಿಲ್ಲ. ಇನ್ನು ಊರಿನ ನಮ್ಮ ಮನೆಗಳಲ್ಲಿ ದಿನವೂ ದೇವಿ ಪಾರಾಯಣ ಓದುವುದಂತೂ ಇದ್ದೇ ಇದೆ. ಏನಿಲ್ಲವೆಂದರೂ ತಟ್ಟೆ ಪಾಯಸವಾದರೂ (ಅನ್ನಕ್ಕೆ ಹಾಲು, ಬೆಲ್ಲ/ಸಕ್ಕರೆ ಹಾಕಿ ಒಂದು ತಟ್ಟೆಯಲ್ಲಿ ಮಿಕ್ಸ್‌ ಮಾಡಿದರೆ ಅದೇ ತಟ್ಟೆ ಪಾಯಸ!) ದೇವಿಗೆ ಸಿಗುತ್ತದೆ. ಬೆಂಗಳೂರಿನ ನಮ್ಮ ಮನೆಯ ದೇವಿಗೆ ನೈವೇದ್ಯದ ಭಾಗ್ಯ ಎಲ್ಲಿಂದ ಬರಬೇಕು? ನವರಾತ್ರಿಯ ಒಂಭತ್ತೂ ದಿನವೂ, ಸಾಲದೆಂಬಂತೆ ವಿಜಯದಶಮಿಯಂದೂ ಬೆಳ್ಳುಳ್ಳಿಯನ್ನೋ ಈರುಳ್ಳಿಯನ್ನೋ ತಿಂದವರಿಂದ ದೇವಿ ನೈವೇದ್ಯವನ್ನು ಬಯಸಿರಲಿಕ್ಕಿಲ್ಲ ಎಂದುಕೊಳ್ಳುತ್ತೇನೆ. ತನಗೆ ನೈವೇದ್ಯ ಮಾಡುವುದು ಹಾಗಿರಲಿ, ಇವರಾದರೂ ನೆಟ್ಟಗೆ ಹೊತ್ತಿಗೆ ಸರಿಯಾಗಿ ಮಾಡಿಕೊಂಡು ತಿನ್ನಲಿ ಎಂದು ಆಕೆ ಅಂದುಕೊಂಡಿರುತ್ತಾಳೆ.

ಇನ್ನು ದಸರೆಯ ವೈಭವ ನೋಡಲು ಮೈಸೂರಿಗೇ ಹೋಗಬೇಕಿಲ್ಲ, ಇನ್ಸ್ಟಾಗ್ರಾಂ ನೋಡಿದರೆ ಸಾಕು! ಬೇರೆ ಬೇರೆ ಆ್ಯಂಗಲ್ಲುಗಳಿಂದ ವೀಡಿಯೋ ಮಾಡಿ ಎಡಿಟ್‌ ಮಾಡಿದ ರೀಲುಗಳ ಮೂಲಕವೇ ಮೈಸೂರು ದಸರಾ ನೋಡಿದ್ದಾಯ್ತು. ಈ ನಡುವೆ ನನ್ನ ಪತಿರಾಯ ಗಜಾನನ ಶರ್ಮರ “ಕೆಂಪನಂಜಮ್ಮಣ್ಣಿ” ಕಾದಂಬರಿಯನ್ನು ಓದುತ್ತಿದ್ದ. ಅದರಲ್ಲಿ ಬಂದ ಇತಿಹಾಸದ ವಿವರಗಳನ್ನು ಸ್ವಲ್ಪಮಟ್ಟಿಗೆ ನನ್ನೊಟ್ಟಿಗೆ ಹಂಚಿಕೊಂಡಿದ್ದ. ಕೆಂಪನಂಜಮ್ಮಣ್ಣಿಯ ಪ್ರಭಾವವೇ ಇರಬೇಕು. ಒಂದೆರಡು ದಿನ ಕಳೆಯುವಷ್ಟರಲ್ಲಿ ಮನೆಗೆ ಮೈಸೂರ್‌ ಸ್ಯಾಂಡಲ್‌ ಸಾಬೂನುಗಳೂ ಪ್ರತ್ಯಕ್ಷವಾಗಿದ್ದವು! ಎರಡು ವರ್ಷದ ಹಿಂದೆ ಮೈಸೂರು ದಸರೆಗೆ ಹೋಗಿ ಬಂದು ಹುಷಾರು ತಪ್ಪಿದ್ದರ ನೆನಪಿದ್ದದ್ದರಿಂದ ಈ ಬಾರಿ ಮೈಸೂರಿಗೆ ಹೋಗುವ ಸುದ್ದಿಯನ್ನೇ ನಾನು ಎತ್ತಲಿಲ್ಲ. ಅಷ್ಟಕ್ಕೂ ಈ ಬಾರಿ ಎಲ್ಲೂ ಹೋಗದೆಯೇ ಹುಷಾರು ತಪ್ಪಿತ್ತು! ಕೆಲವಷ್ಟು ಜನರು ನವರಾತ್ರಿಯ ನೆಪದಲ್ಲಿ ಮೂರ್ನಾಲ್ಕು ದಿನ ದೂರದೂರಿಗೆ ಟ್ರಿಪ್ಪುಗಳನ್ನೂ ಮಾಡಿ ಫೋಟೋ ಹಾಕಿದ್ದರು. ಇವನೊಟ್ಟಿಗೆ ಸ್ವಲ್ಪ ರಗಳೆ ಮಾಡಿದ್ದರೆ ಎಲ್ಲಾದರೂ ಕರಕೊಂಡು ಹೋಗುತ್ತಿದ್ದ ಅಂತ ಅನಿಸಿದ್ದು ನಿಜ. ಆದರೆ ಈ ಉದ್ದ ವೀಕೆಂಡಿನಲ್ಲಿ ಎಲ್ಲ ಕಡೆ ಆಗಬಹುದಾದ ಜನಜಾತ್ರೆಯನ್ನು ನೆನೆಸಿಕೊಂಡೆ. “ಮನೆಯೇ ಮಂತ್ರಾಲಯ ಮನಸೇ ದೇವಾಲಯ” ಎಂದುಕೊಂಡು ತೆಪ್ಪಗೆ ಮನೆಯಲ್ಲಿಯೇ ನವರಾತ್ರಿ ರಜೆಯನ್ನು ಕಳೆಯುವುದೆಂದು ತೀರ್ಮಾನಿಸಿದ್ದೆ.

ಇಷ್ಟೆಲ್ಲ ನೋಡಿದ ಮೇಲೆ ನಾನು ಏನೂ ಮಾಡದಿದ್ದರೆ ಹೇಗೆ? ಸ್ಟೇಟಸ್ಸಿಗೆ ಹಾಕುವುದು ಹಾಗಿರಲಿ, ಕನಿಷ್ಠ ಪಕ್ಷ ಅತ್ತೆ ಕಾಲ್‌ ಮಾಡಿದಾಗ ಹೇಳುವುದಕ್ಕಾದರೂ ಏನೋ ಒಂದು ಮಾಡಬೇಕಲ್ಲ! ಅವರಂತೂ ಅಲ್ಲಿ ನಿತ್ಯ ಪಾರಾಯಣ ಮಾಡಿ, ದಿನವೂ ಒಂದೊಂದು ಸಿಹಿತಿಂಡಿ ಮಾಡಿ ನೈವೇದ್ಯ ಮಾಡದೇ ಬಿಡುವವರಲ್ಲ. ಹೀಗೆಲ್ಲ ಯೋಚಿಸುವಾಗ ನೆನಪಾಗಿದ್ದು ನಾವು ಚಿಕ್ಕವರಿರುವಾಗ ಆಚರಿಸುತ್ತಿದ್ದ ನವರಾತ್ರಿ. ಆಗ ನವರಾತ್ರಿಯೆಂದರೆ ಅಕ್ಟೋಬರ್‌ ರಜೆ, “ದುರ್ಗೆಕೂಸು” ಮಾಡಿಸಿಕೊಳ್ಳುವುದು ಮತ್ತು ವಿಜಯದಶಮಿಯ ದಿನ ಶಾಲೆಯಲ್ಲಿ ನಡೆಯುತ್ತಿದ್ದ ಶಾರದಾ ಪೂಜೆ.

ಹೇಗೂ ರಜೆ ಇರುತ್ತಿದ್ದರಿಂದ ಓದಿ ಬರೆದು ಮಾಡುವ ತಲೆಬಿಸಿಯೂ ಇರುತ್ತಿರಲಿಲ್ಲ. ಯಾವ ಸಬ್ಜೆಕ್ಟಿನಲ್ಲಿ ಚೆನ್ನಾಗಿ ಮಾರ್ಕು ಬರಬೇಕೆಂದಿದೆಯೋ, ಅಥವಾ ಯಾವ ವಿಷಯ ಕಷ್ಟವೆನಿಸುತ್ತಿತ್ತೋ ಆ ಎಲ್ಲ ಪಠ್ಯಪುಸ್ತಕಗಳನ್ನೂ ಶಾರದೆಯ ಮುಂದೆ ಇಟ್ಟರಾಯ್ತು! ಮುಂದಿನ ಜವಾಬ್ದಾರಿಯೆಲ್ಲ ಅವಳದ್ದು. ಒಂದಾನುವೇಳೆ ಮೇಷ್ಟ್ರು ಹೋಂವರ್ಕ್‌ ಕೊಟ್ಟಿದ್ದರೂ, ನುಣುಚಿಕೊಳ್ಳಲು ಇದೊಂದು ಒಳ್ಳೇ ದಾರಿ. ಶಾರದಾಪೂಜೆಗೆ ಪುಸ್ತಕವನ್ನು ದೇವರೆದುರಿಗೆ ಇಟ್ಟಿದ್ದೆ ಎಂದು ಹೇಳಿದರೆ ಮೇಷ್ಟ್ರಿಗೂ ಬಯ್ಯುವುದು ಕಷ್ಟ!

ನಮ್ಮ ಊರಲ್ಲಿ ಇದ್ದವೇ ಕೇವಲ ಹತ್ತೋ ಹನ್ನೆರಡೋ ಮನೆಗಳು. ಹೆಣ್ಣು ಮಕ್ಕಳ ಸಂಖ್ಯೆಯೂ ಕಡಿಮೆಯಿತ್ತು. ಹಾಗಾಗಿ ನಾನು ಮತ್ತು ನನ್ನಕ್ಕ ನವರಾತ್ರಿಯ ಒಂಭತ್ತು ದಿನಗಳ ಮಟ್ಟಿಗಂತೂ ಊರಲ್ಲಿಯೇ “ಮೋಸ್ಟ್‌ ವಾಂಟೆಡ್‌” ಹೆಣ್ಣುಮಕ್ಕಳು. ಎಲ್ಲ ಮನೆಯಿಂದಲೂ ಆಹ್ವಾನ ಬರುತ್ತಿತ್ತೋ ಇಲ್ಲವೋ. ನಾವಂತೂ ಯಾವ ಮನೆಯನ್ನೂ ತಪ್ಪಿಸುತ್ತಿರಲಿಲ್ಲ. ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ನವರಾತ್ರಿ ಪೂಜೆ. ಪಾದಪೂಜೆ ಮಾಡಿ ನಮಗೆ ಅಕ್ಕಿ, ಕಾಯಿ, ಕಣ ಕೊಟ್ಟು, ದಕ್ಷಿಣೆಯನ್ನೂ ಇಟ್ಟು, ಹಬ್ಬದೂಟವನ್ನೂ ಹಾಕಿ ಕಳಿಸುತ್ತಿದ್ದರು. ಹೀಗಾಗಿ ನಾವು ಯಾರ ಮನೆಯನ್ನೂ ಬಿಡುವ ಮಾತೇ ಇರಲಿಲ್ಲ. ಅರಿಶಿನ ಕುಂಕುಮ ಹಚ್ಚಿಸಿಕೊಳ್ಳುವ, ಆರತಿ ಎತ್ತಿಸಿಕೊಳ್ಳುವ, ವರ್ಷದಲ್ಲಿ ಒಂದೇ ಬಾರಿ ಸಿಗುವ ಈ ಅವಕಾಶವನ್ನು ಹೇಗೆ ಬಿಡಲಾಗುತ್ತದೆ? ಹೀಗೆ ಈ ಎಲ್ಲ ಉಪಚಾರ ಮಾಡಿಸಿಕೊಳ್ಳಲು ಎಲಿಜಿಬಿಲಿಟಿ ಇರುವ ಹೆಣ್ಣುಮಕ್ಕಳಿಗೆ ನಮ್ಮ ಕಡೆ “ದುರ್ಗೆ ಕೂಸು” ಎನ್ನುತ್ತಾರೆ. ಕೆಲವರ ಮನೆಯಲ್ಲಿ ಹತ್ತು ರೂಪಾಯಿ ಕೊಟ್ಟರೆ ಕೆಲವು ಕಡೆ ಐದು ರೂಪಾಯಿ ಕೊಡುತ್ತಿದ್ದರು. ಒಂದೇ ದಿನ ಎರಡು ಮನೆಯಲ್ಲಿ ಪೂಜೆ ಇದ್ದರೆ, ನಮ್ಮ ಆದ್ಯತೆ ಯಾರ ಮನೆಯಲ್ಲಿ ದಕ್ಷಿಣೆ ಜಾಸ್ತಿಯೋ ಆ ಮನೆಗೆ! ಊಟಕ್ಕೆ ಮುಂಚೆ ಗಂಗೋದಕ ನೀಡುವಾಗ ಒಂದೋ ಎರಡೋ ರೂಪಾಯಿಯ ನಾಣ್ಯವೂ ನಮ್ಮ ಕೈ ಸೇರುತ್ತಿತ್ತು. ಹೀಗಾಗಿ ನವರಾತ್ರಿಯಲ್ಲಿ ನಮ್ಮ ಸಂಪಾದನೆ ಐವತ್ತರಿಂದ ನೂರು ರೂಪಾಯಿಗಳಿಗೆನೂ ಕಮ್ಮಿ ಇರುತ್ತಿರಲಿಲ್ಲ. ನಮಗಷ್ಟೇ ಅಲ್ಲ. ದಂಪತಿಪೂಜೆಯೂ ಇರುತ್ತಿತ್ತು, ಸ್ವಲ್ಪ ಹೊಸಜೋಡಿಯಾಗಿದ್ದರೆ ಅಥವಾ ದಂಪತಿಗಳು ಮುದ್ದಾಗಿದ್ದರೆ, ಅವರನ್ನು ನೋಡಿ ನಮ್ಮ ಫ್ಯೂಚರ್‌ ಬಗ್ಗೆ ಅಲ್ಪ-ಸಲ್ಪ ಡಿಸೈನ್‌ ಹಾಕಿರುತ್ತಿದ್ದೆವು. ಬಾಕಿ ಯಾವುದಾದರೂ ಪೂಜೆ ಮಾಡುತ್ತಿದ್ದರೂ ಇರಬಹುದು. ನಮ್ಮ ಕಣ್ಣಂತೂ ಕೊಡುತ್ತಿದ್ದ ದಕ್ಷಿಣೆಯ ಮೇಲೇ ಇರುತ್ತಿತ್ತು. ಶಕ್ತಿ ಮೀರಿ ಊಟ ಮಾಡುತ್ತಿದ್ದೆವೇ ಹೊರತು, “ಹೆಣ್ಣೆಂದರೆ ಶಕ್ತಿ” ಎಂಬುದೆಲ್ಲ ತಲೆಗೆ ಹೋಗುತ್ತಿರಲಿಲ್ಲ. ಎಲ್ಲ ಮುಗಿಸಿ ಮಟ ಮಟ ಮಧ್ಯಾಹ್ನ ಅರಿಶಿನ ಕುಂಕುಮ ಹಚ್ಚಿಸಿಕೊಂಡಿದ್ದ ಮುಖ ಹೊತ್ತು ಹೊರಬಿದ್ದರೆ ನಮ್ಮದು ಸಾಕ್ಷಾತ್‌ ದುರ್ಗಿಯ ಅಪರಾವತಾರ!

ಇದು ಬ್ರಾಹ್ಮಣರ ಮನೆಯ ಕತೆಯಾದರೆ, ಇತರೇ ಪೈಕಿಯವರಲ್ಲಿ ಒಬ್ಬರ ಮನೆಗೆ ಕರೆಯುತ್ತಿದ್ದರು. ಅವರಂತೂ ನಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡೇ ಹೋಗಿ ಮನೆಯೊಳಗೆ ಕೂಡಿಸುತ್ತಿದ್ದರು. ನಿಜಕ್ಕೂ ವಿಐಪಿ ಫೀಲ್‌ ಬರುತ್ತಿದ್ದುದು ಆವಾಗ. ನಮ್ಮವರ ಮನೆಗಳಲ್ಲಿ ಬ್ಲೌಸ್‌ಪೀಸ್‌ಗೇ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಅವರ ಮನೆಯಲ್ಲಿ ಮಾತ್ರ ಚಂದದೊಂದು ಡ್ರೆಸ್‌ ಭಾಗ್ಯ ನಮ್ಮ ಪಾಲಿಗೆ. ಅಲ್ಲಿಗೆ ಮುಂದಿನ ವರ್ಷದ ನವರಾತ್ರಿಗೆ ಕಾಯಲು ನಮಗೆ ಕಾರಣವೊಂದು ಸಿಕ್ಕಿರುತ್ತಿತ್ತು.

ವಿಜಯದಶಮಿಯಂದು ಸಂಜೆ ನಮ್ಮ ಶಾಲೆಯಲ್ಲಿ ಶಾರದಾ ಪೂಜೆ. ಅದೊಂದು ರೀತಿ ನಮಗೆ ಆ್ಯನ್ಯುವಲ್‌ ಡೇ ಇದ್ದ ಹಾಗೆ. ನಾವು ಆ ದಿನವೂ ದುರ್ಗೆಕೂಸುಗಳಾಗಿ ನಮ್ಮ ದಕ್ಷಿಣೆ ಪಡೆದುಕೊಂಡಾದ ಮೇಲೆ ಪುರುಸೊತ್ತು ಮಾಡಿಕೊಂಡು ಶಾರದಾ ಪೂಜೆಗೆ ತಯಾರಾಗುತ್ತಿದ್ದುದು. ಸಂಜೆ ಹಾಡು, ನೃತ್ಯ, ಪೂಜೆ, ಪ್ರಸಾದ ವಿತರಣೆ, ಶಾಲೆಯ ಸ್ಥಿತಿಗತಿಗಳ ಕುರಿತು ಮಾತುಕತೆ, ಊರಿನ ಜನರಿಗೆ ಗಾಯನ ಸ್ಪರ್ಧೆ, ಅದಾದ ನಂತರ ಸವಾಲು ಕರೆಯುವುದು. ಇಷ್ಟಾದರೆ ವಾರ್ಷಿಕೋತ್ಸವ ಕಮ್ ಶಾರದಾ ಪೂಜೆ ಮುಗಿದಂತೆ. ಈ ಶಾರದಾ ಪೂಜೆಗೆ ಬರುತ್ತಿದ್ದ ನಮ್ಮ ಮೇಷ್ಟ್ರ ಹೆಂಡತಿ ಮತ್ತು ಅವರ ಮಗಳು ನಮಗೆ ಸ್ಪೆಷಿಯಲ್‌ ಗೆಸ್ಟ್‌ಗಳು. ಅವರಿಗೇ ಮುಜುಗರವಾಗುವಷ್ಟು ಅವರನ್ನು ನೋಡುವುದು! ಕೆಲವೊಮ್ಮೆ ಮೈಸೂರಲ್ಲಿದ್ದ ಅತ್ತೆಯ ಮಗಳೂ ಸಹ ರಜೆಗೆ ಬಂದಿರುತ್ತಿದ್ದಳು, ಎಷ್ಟೆಂದರೂ ಮೈಸೂರಿನ ಕಾನ್ವೆಂಟ್‌ ಶಾಲೆಯಲ್ಲಿ ಓದುತ್ತಿದ್ದವಳು. ಅವಳ ಅಲಂಕಾರಗಳು, ಅವಳ ಮೈಸೂರು ಭಾಷೆ, ಅವಳು ಕಲಿಯುತ್ತಿದ್ದ ಯೋಗ, ಭರತನಾಟ್ಯ ಇವೆಲ್ಲ ನಮಗೆ ಇಂದಿಗೂ ಸೋಜಿಗವೇ. ಹಾಗಾಗಿ ನಾವು ಅವಳೊಟ್ಟಿಗೆ ಓಡಾಡುತ್ತಿದ್ದೇವೆಂದರೆ ನಮಗೆ ಒಂದು ರೀತಿಯ ಕೋಡು ಬಂದ ಹಾಗೆ. ಶಾಲೆಯಲ್ಲಿದ್ದುದೇ ಹತ್ತೋ ಹನ್ನೆರಡೋ ಮಕ್ಕಳು. ಅವರ ಮುಂದೆಯೇ ಸಾಧ್ಯವಾದಷ್ಟು ಬೀಗುವುದು. ನಮ್ಮದೊಂದು ಹಾಡು ಇಲ್ಲವೇ ನೃತ್ಯ ಮಾಡಿಬಿಟ್ಟರೆ ಆಯಿತು. ಭಾರೀ ಚೆನ್ನಾಗಿ ಮಾಡಿಬಿಟ್ಟೆವು ಅಂತ ಓಡಾಡಿಕೊಂಡಿರುವುದೇ ನಮ್ಮ ಕೆಲಸ. ಊರ ಜನರಿಗಾಗಿ ದೇಶಭಕ್ತಿಗೀತೆಯೋ, ಭಾವಗೀತೆಯೋ, ಭಕ್ತಿಗೀತೆಯೋ ಯಾವುದಾದರೂ ಸ್ಪರ್ಧೆ ಇರುತ್ತಿತ್ತು. ಅಲ್ಲಿ ಹಾಡುತ್ತಿದ್ದ ದೊಡ್ಡವರೆಲ್ಲ ನಮ್ಮ ಲೆಕ್ಕದಲ್ಲಿ ಸೆಲೆಬ್ರಿಟಿಗಳು. ಈ ವೈಭವಗಳೆಲ್ಲ ಮುಗಿದ ಮೇಲೆ ಸವಾಲು. ದೇವಿಯ ಎದುರಿಗಿಟ್ಟಿದ್ದ ಅನೇಕ ವಸ್ತುಗಳ ಮೇಲೆ ಸವಾಲ್‌ ನಡೆಯುತ್ತಿತ್ತು. ನನ್ನ ಅಮ್ಮ ಅವಳಿಗೆ ಬೇಕಾದ್ದನ್ನು ಪಡೆದುಕೊಳ್ಳದೇ ಬಿಡುತ್ತಿರಲಿಲ್ಲ. ಆಮೇಲೆ ಮನೆಗೆ ಬಂದಮೇಲೆ ಅಪ್ಪನ ಬಳಿ ಬೈಸಿಕೊಳ್ಳುವುದು. ಸವಾಲಿನಲ್ಲಿ ತನಗಾಗದವರು ಬೇಕಂತಲೇ ತಾನು ಬಯಸಿದ್ದರ ಬೆಲೆಯನ್ನು ಏರಿಸಿ ಏರಿಸಿ ಕಡೆಗೆ ಅದನ್ನು ತನ್ನ ತಲೆಗೆ ಕಟ್ಟುತ್ತಿದ್ದರೆಂದು ಅವಳ ದೂರು. ಅವರಿಗೆ ಅದು ನಿಜವಾಗಿಯೂ ಬೇಕಿದ್ದರಿಂದಲೇ ಏರಿಸುತ್ತಿದ್ದರೊ ಅಮ್ಮನ ಹಠವನ್ನು ಗೊತ್ತಿದ್ದರಿಂದ ಹಾಗೆ ಮಾಡುತ್ತಿದ್ದರೋ ನಮಗಂತೂ ಬಗೆಹರಿಯುತ್ತಿರಲಿಲ್ಲ.

ಇನ್ನು ನಮ್ಮ ತಂಗಿ ನಮಗಿಂತ ಹತ್ತು ವರ್ಷ ಚಿಕ್ಕವಳು. ಹತ್ತು ವರ್ಷದಲ್ಲಿ ನಾವು ಬೇರೆ ಊರಿಗೆ ಬಂದಾಗಿತ್ತು. ಹೀಗಾಗಿ ತಂಗಿಗೆ ಆ ಊರಲ್ಲಿದ್ದ ಹಾಗೆ ಮನೆಮನೆಗೆ ಹೋಗುವ ಅವಕಾಶಗಳಿರಲಿಲ್ಲ. ಆದರೆ ಅವಳನ್ನು ನಮ್ಮ ಅಜ್ಜನಮನೆಯವರು ಪರ್ಮನೆಂಟ್‌ ದುರ್ಗಿಯನ್ನಾಗಿ ನೇಮಕ ಮಾಡಿಕೊಂಡಿದ್ದರು. ಅಲ್ಲಿ ನವರಾತ್ರಿಯ ನಿತ್ಯ ಪೂಜೆ ಪಾರಾಯಣಗಳು ನಡೆಯುತ್ತವೆ. ಹೀಗಾಗಿ ಅವಳು ಅಕ್ಟೋಬರ್‌ ರಜೆಗೆ ಅಲ್ಲಿ ಹೋದರೆ ನವರಾತ್ರಿ ಮುಗಿಸಿಕೊಂಡೇ ಬರುತ್ತಿದ್ದುದು. ಅವರಿಗೂ ಬೇರೆ ದುರ್ಗಿಯರು ಸಿಗುತ್ತಿರಲಿಲ್ಲ. ಅವಳೂ ತನ್ನ ಇಂಪಾರ್ಟನ್ಸ್ ಅನ್ನು ಗೊತ್ತುಮಾಡಿಕೊಂಡು ಹೆಚ್ಚು ದಕ್ಷಿಣೆಯನ್ನು ಡಿಮಾಂಡ್‌ ಮಾಡುತ್ತಿದ್ದಳಂತೆ. ಇಷ್ಟು ದಕ್ಷಿಣೆ ಕೊಟ್ಟರೆ ಮಾತ್ರ ಬರುತ್ತೇನೆಂದು ಅಜ್ಜನೊಟ್ಟಿಗೆ ಡೀಲ್‌ ಮಾಡಿಕೊಳ್ಳುತ್ತಿದ್ದಳು ಎಂಬುದೂ ನಮ್ಮ ಕಿವಿಗೆ ಬಿದ್ದಿತ್ತು. ಈಗ ಕೇಳಿದರೆ ಐದು ಹತ್ತು ರೂಪಾಯಿಗಳಿಗಿಂತ ಹೆಚ್ಚೇನೂ ದಕ್ಷಿಣೆ ಸಿಗುತ್ತಿರಲಿಲ್ಲ ಎನ್ನುತ್ತಾಳೆ. ಹೆಚ್ಚೇ ಸಂಪಾದಿಸಿರುತ್ತಾಳೆಂದು ನಮ್ಮ ಗುಮಾನಿ.

ಹೈಸ್ಕೂಲು ಕಾಲೇಜು ಕೆಲಸ ಮದುವೆ ಅಂತೆಲ್ಲ ಆದಮೇಲೆ ಈ ದುರ್ಗೆಕೂಸಿಗೆ ಹೋಗುವುದೆಲ್ಲ ನಮ್ಮ ಜೂನಿಯರ್‌ಗಳಿಗೆ ಬಿಟ್ಟುಕೊಟ್ಟಾಗಿತ್ತು. ಇಲ್ಲಿ ಬೆಂಗಳೂರಿನಲ್ಲಂತೂ ಯಾವುದೇ ಹಬ್ಬವಿರಲಿ ಹೆಂಗಸರದ್ದೇ ದರ್ಬಾರು. ಆದರೆ ನಮ್ಮಲ್ಲಿ ಹಾಗಲ್ಲವಲ್ಲ. ಗಂಡನ ಹಸ್ತ ಮುಟ್ಟಿದ್ದರೆ ಸಾಕಾಗುತ್ತದೆ. ಸಾಮಾನ್ಯವಾಗಿ ಹಬ್ಬಕ್ಕೆ ಊರಿಗೆ ಹೋಗಿರುತ್ತೇವೆ. ಅಲ್ಲಿ ಅತ್ತೆಯೋ ಅಮ್ಮನೋ ಹಾಗೆಲ್ಲ ಜವಾಬ್ದಾರಿಯನ್ನು ಬಿಟ್ಟುಕೊಡುವುದಿಲ್ಲ! ಒಂದು ವೇಳೆ ಬಿಟ್ಟುಕೊಟ್ಟರೂ ಅವರು ಹೇಳುವ ಮಡಿಯನ್ನು ನಾನು ಫಾಲೋ ಮಾಡುವ ರೀತಿಯನ್ನು ನೋಡಿ ತಲೆಕೆಟ್ಟು ತಾವೇ ಮಾಡಿಕೊಳ್ಳುತ್ತಾರೆ. ಇಲ್ಲಿದ್ದಾಗಲಂತೂ ಏನೇ ಮಾಡಿದರೂ ಮಾಡದಿದ್ದರೂ ಕೇಳುವವರಿಲ್ಲ. ಹೀಗಿರುವಾಗ ಬೆಂಗಳೂರಿನಲ್ಲಿದ್ದಾಗಿನ ನಮ್ಮ ಹಬ್ಬಗಳು ಎಷ್ಟೋ ಬಾರಿ ನಮ್ಮ ಓನರ್‌ ಆಂಟಿ ಕೊಡುವ ಸ್ವೀಟೊಂದರಿಂದಲೇ ಕೊನೆಗೊಂಡಿವೆ. ಆದರೂ ಎರಡು ವರ್ಷದ ಹಿಂದೆ ಏನೋ ಪ್ರೇರಣೆಯಾಗಿ ನವರಾತ್ರಿಗೆ ನಮ್ಮ ಬಿಲ್ಡಿಂಗಿನ ಇಬ್ಬರು ಹೆಣ್ಣುಮಕ್ಕಳಿಗೆ ದುರ್ಗೆಕೂಸಿಗೆ ಕರೆದಿದ್ದೆ! ಮತ್ತೆರಡು ವರ್ಷ ಏನೇನೋ ಕಾರಣಗಳಿಗಾಗಿ ಮಾಡಲಿಕ್ಕಾಗಿರಲಿಲ್ಲ. ಎರಡು ವರ್ಷ ಕಳೆಯುವಷ್ಟರಲ್ಲಿ ನಮ್ಮ ಬಿಲ್ಡಿಂಗಿನಲ್ಲಿ ಮತ್ತೆ ಮೂವರು ಪುಟ್ಟ ದುರ್ಗಿಯರು ಸೃಷ್ಟಿಯಾಗಿದ್ದರು. ಅಮ್ಮ ಇಲ್ಲಿ ಬಂದಾಗ ಅವರನ್ನೆಲ್ಲ ನೋಡಿದ್ದರಿಂದ ಅವರಿಗೆಲ್ಲ ಅರಿಶಿನ ಕುಂಕುಮವನ್ನಾದರೂ ಕೊಡು ಎಂದು ನವರಾತ್ರಿಯ ಮೊದಲ ದಿನವೇ ಕಾಲ್‌ ಮಾಡಿ ಹೇಳಿಯಾಗಿತ್ತು. ಅವರು ಹೇಳದಿದ್ದರೂ ನಾನು ಈ ಬಾರಿ ಮಾಡುವವಳೇ ಇದ್ದೆ ಎಂದುಕೊಳ್ಳಿ! ಆರನೆಯ ದಿನದವರೆಗೂ ತಯಾರಿಗೆ ಮುಹೂರ್ತ ಬರಲಿಲ್ಲ! ಇನ್ನು ತಡಮಾಡಿದರೆ ನವರಾತ್ರಿ ನನಗಾಗಿ ಕಾಯುತ್ತ ಕೂರುವುದಿಲ್ಲವೆಂದು ಬಳೆ ಅಂಗಡಿಗೆ ಓಡಿದೆ. ನಾನು ಹೇಗೂ ಖರೀದಿ ಮಾಡುತ್ತೇನೆಂದು ಗೊತ್ತಾಗಿ ಅಂಗಡಿಯವನೂ ಅವನ ಹೆಂಡತಿಯೂ ಒಂದಿಷ್ಟು ಸಲಹೆ ನೀಡಿದ್ದರು. ನಾನು ನನ್ನ ಲಿಸ್ಟಿನಲ್ಲಿದ್ದದ್ದರ ಜೊತೆಗೆ ಅವರು ಹೇಳಿದ್ದನ್ನೂ ಕೊಂಡುಕೊಂಡೆ. ಬಳೆ ಕ್ಲಿಪ್ಪು ನೇಲ್‌ಪಾಲಿಶ್‌ ಎನ್ನುತ್ತಾ ಸುಮಾರು ವ್ಯಾಪಾರವೇ ನಡೆಯಿತು. ಅವರಿಬ್ಬರೂ ಫುಲ್‌ ಖುಷ್‌. ಅದೇ ಖುಷಿಗೆ ಮಾತಾಡಲೂ ಆರಂಭಿಸಿದರು. ಆನ್ಲೈನ್‌ ಹಾವಳಿಯಿಂದ ತನ್ನ ಕಾಸ್ಮೆಟಿಕ್‌ ವ್ಯಾಪಾರಕ್ಕಾದ ನಷ್ಟವನ್ನು ಹೇಳಿಕೊಂಡರು. ನಾನು ಇವನ್ನೆಲ್ಲ ಆನ್ಲೈನ್‌ ತರಿಸಬೇಕು ಎಂದುಕೊಂಡಿದ್ದವಳು ಹಾಗೆ ಮಾಡದೇ ಒಳ್ಳೆಯದು ಮಾಡಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಕಷ್ಟಸುಖಗಳನ್ನೂ ಮಾತಾಡಿಯಾಯ್ತು. “ಮೇಡಂ.. ಎಲ್ಲರೂ ನಿಮ್ಮ ಹಾಗೆ ಮಾತಾಡ್ಸೊಲ್ಲ ಮೇಡಂ, ನೀವು ಇಷ್ಟೊತ್ತು ಮಾತಾಡಿದ್ದು ಖುಷಿ ಆಯ್ತು” ಅಂದಿದ್ದ. ಆಗ ನಾನೂ ಫುಲ್‌ ಖುಷ್‌! ಅಲ್ಲಿಗೆ ಮುಂದಿನ ವರ್ಷವೂ ಅವನಿಗೆ ನನ್ನ ಕಡೆಯಿಂದ ಒಳ್ಳೆ ವ್ಯಾಪಾರ ಆಗಲಿದೆ.

ಷಷ್ಠಿಗೆ ಸಾಮಾನು ತಂದಿದ್ದು. ಸಪ್ತಮಿಯ ದಿನ ಎಲ್ಲ ತಯಾರಿ ನಡೆಸುವುದು, ಅಷ್ಟಮಿಯ ದಿನ ಎಲ್ಲರನ್ನೂ ಕುಂಕುಮಕ್ಕೆ ಕರೆಯುವುದು ಎಂಬುದು ನನ್ನ ಪ್ಲಾನ್‌. ನೋಡಿದರೆ ಅಷ್ಟಮಿಯ ದಿನ ಒಬ್ಬರು ಊರಿಗೆ ಹೊರಡುವರು, ಇನ್ನೊಬ್ಬರು ಆಸ್ಪತ್ರೆಗೆ, ಮತ್ತೊಬ್ಬರು ಟ್ರಿಪ್ಪಿಗೆ, ಮಗದೊಬ್ಬರು ದೇವಸ್ಥಾನಕ್ಕೆ ಹೋಗುವವರಿದ್ದಾರೆ ಎಂದಾಯ್ತು. ಸಪ್ತಮಿಗೇ ಕರೆಯೋಣವೆಂದರೆ ಮಧ್ಯಾಹ್ನ ಎರಡು ಗಂಟೆಯಾದರೂ ನನ್ನ ಸ್ನಾನವೂ ಆಗಿರಲಿಲ್ಲ. ಸ್ವಚ್ಛತಾ ಕಾರ್ಯಕ್ರಮವನ್ನಂತೂ ಶುರುವಿನಿಂದ ಮಾಡುವ ಅನಿವಾರ್ಯವಿತ್ತು. ನಿತ್ಯದ ಆಫೀಸ್ ಕೆಲಸವೂ ಮುಗಿದಿಲ್ಲ. ಬಂದವರಿಗೆ ಕೊಡಲಿಕ್ಕಾದರೂ ಏನಾದರೂ ಮಾಡಬೇಕು. ಆ ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಎಲ್ಲರೂ ಒಟ್ಟಿಗೇ ಸಿಗುವುದಿಲ್ಲ! ಒಂದೇ ಸಲಕ್ಕೆ ತಲೆಬಿಸಿಯಾಗಿ ಬಿಪಿ ಹಾರ್ಟ್‌ರೇಟ್‌ ಎಲ್ಲಾ ಔಟ್‌ ಆಫ್‌ ರೇಂಜ್‌ ಹೋಗಿದ್ದವು. ಆಗಿದ್ದಾಗಲಿ ಅಂದೇ ಮಾಡುವುದೆಂದು ಗಟ್ಟಿ ಮನಸು ಮಾಡಿಕೊಂಡೆ. ಉಳಿದಿದ್ದ ಆಫೀಸ್‌ ಕೆಲಸವನ್ನೆಲ್ಲ ಗೆಳತಿಯ ತಲೆಗೆ ಕಟ್ಟಿದೆ. ಹಾಗಾಗಿ ಸಲ್ಪ ಪುಣ್ಯ ಬಂದಿದ್ದರೆ ಅವಳಿಗೂ ಪಾಲುಕೊಡಬೇಕಾದ ಪರಿಸ್ಥಿತಿಯಿದೆ.

ನವದುರ್ಗಿಯರು ಮೈ ಮೇಲೆ ಬಂದರೋ, ನಾನೇ ಆವಾಹಿಸಿಕೊಂಡೆನೋ ಗೊತ್ತಿಲ್ಲ. ಆ ಅವತಾರವನ್ನು ನೋಡಬೇಕಿತ್ತು. ಗುಡಿಸುವುದೇನು, ನೆಲ ಒರೆಸುವುದೇನು, ಪಾತ್ರೆ ತಿಕ್ಕುವುದೇನು, ಜೊತೆಗೆ ಬಾತ್ರೂಮ್‌ ತೊಳೆಯುವುದೂ ಅದೇ ದಿನ ಆಗಬೇಕು. ನವದುರ್ಗಿಯರ ಜೊತೆ ಓಸಿಡಿ ದೇವಿಯ ಅವತಾರವೂ ಮೈಮೇಲೆ ಬಂದು ನನಗೆ ತಡೆಯಲಿಕ್ಕಾಗುತ್ತಿರಲಿಲ್ಲ. ವರ್ಷಾನುಗಟ್ಟಲೆಯಿಂದ ಸ್ವಚ್ಛಮಾಡದ ಯಾವುದೋ ಮೂಲೆ ಇಂದೇ ಸ್ವಚ್ಛಗೊಳ್ಳಬೇಕು. ಕಸ ಎಂದು ಕಾಣಿಸಿದ ಎಲ್ಲವನ್ನೂ ನಾಪತ್ತೆ ಮಾಡಿಬಿಡಬೇಕು. ಕೈಗಳು ಬುದ್ಧಿಗಿಂತ ವೇಗವಾಗಿ ಕೆಲಸ ಮಾಡಲು ತೊಡಗಿದವು. ಇನ್ನು ತಡೆಯಲಿಕ್ಕಾಗದು ಎಂದು ಹೇಗೋ ಸಮಾಧಾನ ತಂದುಕೊಂಡೆ.

ಇಷ್ಟೆಲ್ಲ ಮಾಡಿದ ಮೇಲೆ ತಲೆಯಿಂದಲೇ ಸ್ನಾನವಾಗಬೇಕು. ಸ್ನಾನವಾದ ಮೇಲೆ ಚಕಚಕನೆ ಒಂದು ಟೇಬಲ್ಲಿನ ಮೇಲೆ ಇವನ ಹೊಳೆಯುವ ಶಾಲನ್ನು ಹಾಸಿದೆ. ಅದರ ಮೇಲೆ ಶಾರದೆಯ ಮೂರ್ತಿಯನ್ನಿರಿಸಿದ್ದಾಯ್ತು. ಇನ್ನಾದರೂ ಓದಲು ಮನಸ್ಸು ಬರಲಿ ಎಂದು ದೇವಿಯೆದುರು ರಾಮಾಯಣ ಮಹಾಭಾರತದ ಪುಸ್ತಕಗಳನ್ನೂ ಇಟ್ಟೆ. ದೀಪ, ಆರತಿತಟ್ಟೆ, ಅರಿಶಿನಕುಂಕುಮದ ಬಟ್ಟಲು ಯಾವುದೂ ತೊಳೆಯದೇ ಇಡುವ ಪರಿಸ್ಥಿತಿಯಲ್ಲಿರಲಿಲ್ಲ. ಫ್ರಿಜ್ಜಿನ ವಾಸನೆಯನ್ನು ಹೀರಿಕೊಂಡು ಸ್ವಂತ ಪರಿಮಳವನ್ನು ಮರೆತು ಹೋದ ಅದೇ ಎರಡು ಜಾತಿಯ ಹೂಗಳನ್ನೇ ಇಡಬೇಕಾಯ್ತು. ಅದೇ ದಿನ ಪಾಟ್‌ನಲ್ಲಿದ್ದ ಶಂಖಪುಷ್ಪ ಬಳ್ಳಿಗೆ ಅಪರೂಪಕ್ಕೆ ಒಂದು ನೀಲಿ ಶಂಖಪುಷ್ಪವೂ ಅರಳಿತ್ತು. ಈ ಹೂವಿಗಾಗಿಯೇ ದೇವಿ ಇಂದೇ ಪೂಜೆ ಮಾಡಿಸಿಕೊಳ್ಳುತ್ತಿದ್ದಾಳೆ ಅಂದುಕೊಂಡೆ!

ಪುಟ್ಟ ಮಕ್ಕಳೂ, ಅವರ ಅಮ್ಮಂದಿರೂ ಸೇರಿ 12 ಜನ ಬರುವವರಿದ್ದರು. ಚಿಕ್ಕ ಕವರುಗಳಲ್ಲಿ ಪ್ರತ್ಯೇಕವಾಗಿ ಡ್ರೈಫ್ರೂಟ್‌ಗಳನ್ನು ತುಂಬಿ, ಮಕ್ಕಳಿಗೆಂದು ತಂದಿದ್ದ ನೇಲ್‌ಪಾಲಿಷ್‌, ಕ್ಲಿಪ್ಪು, ಬಳೆಯನ್ನೂ ಸೇರಿಸಿ, ಅಂಗಡಿಯವ ಕೊಟ್ಟಿದ್ದ ಹೊಳೆಯುವ ಕವರಿನಲ್ಲಿ ತುರುಕಿದೆ. ಇನ್ನು ಹೆಂಗಸಿರಿಗೆ ಅವರವರ ಅಳತೆಯ ಪ್ರಕಾರ ಗಾಜಿನ ಬಳೆಗಳು. ನನಗೆ ಬೇರೆಯವರು ಕೊಟ್ಟಿದ್ದ ಬ್ಲೌಸ್‌ ಪೀಸ್‌ಗಳು ಈಗ ಉಪಯೋಗಕ್ಕೆ ಬಂದವು! ಬೇರೆಯವರು ಕೊಟ್ಟಿದ್ದರಲ್ಲೇ ಚೆನ್ನಾಗಿರುವುದನ್ನು ಆರಿಸಿಕೊಂಡಿದ್ದರಿಂದ ಖಂಡಿತವಾಗಿಯೂ ಅವುಗಳಿಂದ ಬ್ಲೌಸ್‌ ಹೊಲಿಸಿಕೊಳ್ಳಬಹುದು! ಹೆಂಗಸಿರಿಗೆಲ್ಲ ಬಿಂಗ್ಲಿಟು ಕಿವಿಯೋಲೆ, ನಮ್ಮ ಓನರ್ ಆಂಟಿ ಬಂಗಾರ ಮಾತ್ರ ಧರಿಸುವುದರಿಂದ ಅವರಿಗೆ ಕಿವಿಯೋಲೆಯ ಬದಲಿಗೆ ಬಿಂದಿ. ಇದರ ಜೊತೆಗೆ ನೋಟನ್ನಾಗಲೀ, ನಾಣ್ಯವನ್ನಾಗಲೀ ಇಡಬೇಕಲ್ಲ. ಹಾಳಾದ್ದು ಈ ಆನ್ಲೈನ್‌ ಬಂದಾಗಿನಿಂದ ದುಡ್ಡಿನ ಮುಖವನ್ನೇ ಸರಿಯಾಗಿ ನೋಡಿಲ್ಲ. ಎಲ್ಲಿಂದ ತರುವುದು? ಇವನಿಗೆ ಬೇರೆ ಸಾಮಾನುಗಳ ಜೊತೆ ಚಿಲ್ಲರೆಯನ್ನೂ ತರಲು ಹೇಳಿದ್ದೆ. ಅವರ ಬಳಿಯೂ ಸಿಗಲಿಲ್ಲವಂತೆ. ಇದ್ದಬದ್ದ ಕಡೆಯೆಲ್ಲ ಹುಡುಕಿ ಹೇಗೋ ಸಲ್ಪ ಹರಿದ ನೋಟಿನಿಂದಲೇ ಮ್ಯಾನೇಜು ಮಾಡುವ ಹಾಗಾಯ್ತು.

(ಎಡಗೈಲಿ ಕೊಟ್ಟಿದ್ದು ಬಲಗೈಗೂ ತಿಳಿಯಬಾರದು ಅನ್ನುತ್ತಾರೆ. ಅಂಥದ್ದರಲ್ಲಿ ನಾನು ಮಾಡಿದ ಇಷ್ಟು ಸಣ್ಣ ಕೆಲಸಕ್ಕೆ ಇಷ್ಟುದ್ದ ಬರೆಯುತ್ತಿದ್ದೇನೆಂದು ತಪ್ಪು ತಿಳಿದುಕೊಳ್ಳಬೇಡಿ. ನಿಮ್ಮ ಹಿತಾಸಕ್ತಿಯನ್ನು ತಲೆಯಲ್ಲಿಟ್ಟುಕೊಂಡು ಒಂದಷ್ಟು ವಿವರಗಳನ್ನು ಬರೆಯದೇ ಬಿಟ್ಟಿದ್ದೇನೆ! ಆವತ್ತಿದ್ದ ಸಮಯ ಕಡಿಮೆ. ದಿಢೀರನೇ ಮಾಡುವುದೆಂದು ನಿಕ್ಕಿ ಮಾಡಿದ್ದರಿಂದ ಟೆನ್ಶನ್ನಿಗೆ ಕೈಕಾಲೇ ಬಿದ್ದು ಹೋದಂತಾಗಿತ್ತು. ನನಗಾದ ಗಡಿಬಿಡಿಯನ್ನು ಹೇಳುವುದಷ್ಟೇ ಉದ್ದೇಶ.)

ಇಷ್ಟೆಲ್ಲ ಮಾಡುವಷ್ಟರಲ್ಲಿ ಅನ್ನಪೂರ್ಣೆಯನ್ನು ಆವಾಹನೆ ಮಾಡಿಕೊಳ್ಳುವ ಸಮಯವಾಗಿತ್ತು. ಆ ದಿನದ ಮಟ್ಟಿಗೆ ಅನ್ನಪೂರ್ಣೆಯೇನು ಅಷ್ಟೊಂದು ದಯೆ ತೋರಲಿಲ್ಲ. ಉಸ್ಳಿ ಹೋಗಿ ಕಿಚ್ಡಿಯಾಗಿತ್ತು. ಮಸಾಲೆ ರೈಸ್‌ ಮಾಡಿದ್ದು ಚಿತ್ರಾನ್ನಕ್ಕೂ ಕಡೆಯಾಗಿತ್ತು. ನನ್ನ ತಂಗಿಯಾದರೂ ಇದ್ದಿದ್ದರೆ ರುಚಿ ನೋಡಿ ಅದು ಕಮ್ಮಿ ಇದು ಜಾಸ್ತಿ ಅಂತ ಹೇಳಿ ನನಗೆ ಸಹಾಯ ಮಾಡುತ್ತಿದ್ದಳು! ಪಣಚಾಕರಿ ಕೆಲಸಕ್ಕೆ, ವೀಡಿಯೋಗ್ರಫಿ ಮಾಡುವುದಕ್ಕೆಲ್ಲ ಜನ ಬೇಕಿತ್ತು ಎಂದು ಅವಳನ್ನು ತುಂಬಾ ಮಿಸ್‌ ಮಾಡಿಕೊಂಡೆ. ಈ ಮಧ್ಯೆ ನನ್ನ ಪತಿರಾಯನ ಆಗಮನವಾಗಿ ಅವನಿಂದ ತಯಾರಾಗುವ ಅದೃಷ್ಟ ಪಾಯಸಕ್ಕೆ ಬಂತು. ತಕ್ಕಮಟ್ಟಿಗೆ ಪಾಸಿಂಗ್‌ ಮಾರ್ಕ್ಸ್‌ ಬಂದಿದ್ದು ಪಾಯಸಕ್ಕೆ ಮಾತ್ರವೇ.

ಎಲ್ಲ ತಯಾರಿಗಳು ಒಂದು ಹಂತಕ್ಕೆ ಬಂದಿದೆ ಎನ್ನುವಾಗ ನನಗೆ ತಯಾರಾಗುವ ಸಂಭ್ರಮ. ಕುಂಕುಮಕ್ಕೆ ಕರೆದು ನಾನೇ ಸೀರೆ ಉಡದಿದ್ದರೆ ಹೇಗೆ? ಫಟಾ ಫಟ್‌ ಸೀರೆಯುಟ್ಟು ಲೈಟಾಗಿ ಬಣ್ಣ ಬಳಿದುಕೊಂಡು ರೆಡಿಯಾದೆ ಎನ್ನುವಷ್ಟರಲ್ಲಿ ಎಲ್ಲರೂ ಒಬ್ಬಬ್ಬೊರಾಗಿ ಬರತೊಡಗಿದರು. ನಾನು ನನ್ನ ಟೆನ್ಶನ್ನನ್ನೂ, ಎಕ್ಸೈಟ್‌ಮೆಂಟನ್ನೂ ಸ್ವಲ್ಪವೂ ತೋರಿಸದೇ ಅವರನ್ನು ಬರಮಾಡಿಕೊಂಡೆ. ಇನ್ನೂ ಜನ ಬರುವವರಿದ್ದ ಕಾರಣ ಸ್ಟೇಜ್‌ ಖಾಲಿ ಬಿಡಬಾರದೆಂದು ಈಗಾಗಲೇ ಬಂದಿದ್ದ ಹುಡುಗಿಯಿಂದ ಶ್ಲೋಕ ಹೇಳಿಸಿದೆ. ನಂತರ ಅವಳೂ ಆಂಟಿ ನೀವೊಂದು ಹಾಡ್ಹೇಳಿ ಎಂದು ಕ್ಯೂಟಾಗಿ ಕೇಳಿದಾಕ್ಷಣ ಅದಕ್ಕೇ ಕಾದಿದ್ದೆ ಎನ್ನುವಳ ಹಾಗೆ ಹಾಡನ್ನೂ ಹೇಳಿದೆ. ಈ ಮಧ್ಯೆ ದುರ್ಗೆಕೂಸಿಗೆ ಕರೆದಿದ್ದ ಹುಡುಗಿಯೊಟ್ಟಿಗೆ ಅವಳ ಅಣ್ಣನೂ ಬಂದಿದ್ದ. ಒಟ್ಟಿಗೇ ಇಷ್ಟೊಂದು ಹೆಣ್ಣು ಜೀವಗಳನ್ನು ನೋಡಿ ಹೆದರಿದನೋ ನಾಚಿದನೋ ಗೊತ್ತಾಗಲಿಲ್ಲ. ಕರೆದರೂ ಬರದೇ ಓಡಿ ಹೋಗಿದ್ದ!

ಎಲ್ಲರೂ ಬಂದ ಮೇಲೆ ಓನರ್‌ ಆಂಟಿಯ ಕೈಯಿಂದಲೇ ಶಾರದೆಗೆ ಆರತಿ ಎತ್ತಿಸಿ ಅವರಿಗೂ ಗೌರವ ಸೂಚಿಸಿದ್ದಾಯಿತು. ಈ ಮಹಿಳಾಮಣಿಗಳ ಮಧ್ಯೆ ನನ್ನ ಪತಿರಾಯ ಒಬ್ಬ ಗಂಡು ಜೀವ. ಬೆಕ್ಕಿನಮರಿಯ ಹಾಗೆ ಸುಳಿಮಿಳಿ ಮಾಡುತ್ತಾ ಏನು ಮಾಡುವುದೆಂದು ತಿಳಿಯದೇ ಮುಖಮುಖ ನೋಡುತ್ತಿದ್ದ. ಹಾಗಾಗಿ ಅವನಿಗೆ ಅಡುಗೆ ಮನೆಯ ಜವಾಬ್ದಾರಿ ಕೊಟ್ಟಿದ್ದೆ. ಪುಟ್ಟ ದುರ್ಗೆಯರಿಗೆ ಅರಿಶಿನ ಕುಂಕುಮ ಹಚ್ಚಿ ಹೂವು ಹಣ್ಣು ಕೊಡುವಾಗ ತಮಗ್ಯಾಕೆ ಇಷ್ಟು ಮರ್ಯಾದಿ ಕೊಡುತ್ತಿದ್ದಾರೆ ಅಂತ ಅವರಿಗೆ ಮಜಾ ಅನಿಸಿತೇನೋ. ಹೊಳೆಯುವ ಬಣ್ಣದ ಕವರಿನಲ್ಲಿ ಏನಿರಬಹುದೆಂದು ಕುತೂಹಲ ಅವರಿಗೆ! ಇನ್ನೂ ಎರಡು ಮೂರು ವರ್ಷದ ಕೂಸುಗಳು. ಒಬ್ಬಳಂತೂ ಹೆಂಗಸರು ತಾಳಿಗೆ ಅರಿಶಿನ-ಕುಂಕುಮ ಹಚ್ಚಿಸಿಕೊಳ್ಳುವ ಹಾಗೆ ಅವಳ ಕುತ್ತಿಗೆಯಲ್ಲಿರುವ ದೃಷ್ಟಿ ಲಾಕೆಟ್ಟಿಗೂ ಹಚ್ಚು ಅಂತ ಹೇಳಿ ಹಚ್ಚಿಸಿಕೊಂಡಳು. ಈ ಕಾರ್ಯಕ್ರಮ ಮುಗಿಯುವವರೆಗೆ ರಾತ್ರಿ ಊಟದ ಸಮಯವೂ ಕಳೆದಿತ್ತು, ಎಲ್ಲರಿಗೂ ಹೊರಡುವ ಗಡಿಬಿಡಿ. ಹೆಂಗಸರ ಕೈಯಲ್ಲೂ ಹೊಳೆಯುವ ಕವರು ಹಿಡಿಸಿದ್ದಾಯ್ತು. ಪ್ರಸಾದದ ಲೆಕ್ಕದಲ್ಲಿ ಮಾಡಿದ್ದ ಅಡುಗೆಯನ್ನು ಕೊಟ್ಟುಕಳಿಸುವವರೆಗೆ ಹೆಂಗಸರಿಗೆ ಕುಂಕುಮ ಕೊಡುವ ಮುಖ್ಯ ಕಾರ್ಯಕ್ರಮವೇ ಮರೆತು ಹೋಗಿತ್ತು!



ನನ್ನ ಗೆಳತಿ ಬಂದವಳಿಗೆ ನನ್ನ ಸಾಹಸವನ್ನು ಸ್ವಲ್ಪ ಕೇಳು ಅಂತ ಸ್ವಲ್ಪ ಹೊತ್ತು ಕೂರಿಸಿಕೊಂಡೆ. ನನ್ನ ಕ್ಲೀನಿಂಗ್‌ನ ಗೋಳನ್ನು ಹೇಳಿದಾಗ, ನೀನು ಮಾಡಿದ್ದು ಒಳ್ಳೆಯದೇ ಆಯ್ತು ನೋಡು, ಬಂದವರಲ್ಲಿ ಕೆಲವರು ಬಾತ್ರೂಮಿಗೆ ಕೈತೊಳೆಯಲಿಕ್ಕೆ ಹೋಗಿದ್ದರು ಎಂದಳು. ಆಮೇಲೆ ಗೊತ್ತಾಗಿದ್ದು, ಅವರು ಬಾತ್ರೂಮಿನ ಲೈಟ್‌ ಹಾಕಿಕೊಳ್ಳದೆಯೇ ಹೋಗಿದ್ದರಂತೆ! ಇಷ್ಟೆಲ್ಲ ಕಷ್ಟಪಟ್ಟಿದ್ದು ನೋಟೀಸ್‌ ಆಗದೇ ಹೋಯ್ತಲ್ಲ ಎಂದು ನಿರಾಶೆ ನನಗೆ. ಹೀಗಾಗಿ ನೀನಾದರೂ ಲೈಟ್‌ ಹಾಕಿಕೊಂಡು ಹೋಗಿ ಬಾ ಎಂದು ಅವಳಿಗೆ ಹೇಳಿ ಕಳಿಸಿದ್ದೆ!

ಇಷ್ಟೆಲ್ಲ ಆಗುವವರೆಗೆ ರಾತ್ರಿ 9:30 ದಾಟಿತ್ತು. ನನಗೆ ನಾನೇನೋ ಮಾಡಿದೆ ಎನ್ನುವ ಆನಂದ. ಮಕ್ಕಳು ಬಂದು ಬಳೆ ಹಾಕಿಕೊಂಡು ವಯ್ಯಾರದಿಂದ ತೋರಿಸಿ ಹೋದರು. ಇಷ್ಟು ಕಡಿಮೆ ಸಮಯದಲ್ಲಿ ಚೆನ್ನಾಗಿ ಮಾಡಿದಿರಿ ಎಂದು ಕೆಲವರು ಮೆಸೇಜೂ ಮಾಡಿದ್ದರು. ನನಗೆ ಆದಿನ ನಿದ್ರೆ ಬಾರದಿರಲು ಅಷ್ಟು ಸಾಕಾಗಿತ್ತು!

ಇವೆಲ್ಲ ಯಾರೂ ಮಾಡದಿರುವ ಕೆಲಸವೇನಲ್ಲ. ನಮ್ಮ ಓನರ್‌ ಆಂಟಿ ಪ್ರತಿ ಹಬ್ಬಕ್ಕೂ ಎಲ್ಲರನ್ನೂ ಕುಂಕುಮಕ್ಕೆ ಕರೆದು ಎಂಟ್ಹತ್ತು ಮನೆಗೆ ಮಾಡಿದ ಅಡುಗೆಯನ್ನೆಲ್ಲ ಹಂಚುತ್ತಾರೆ. ಊರಲ್ಲಿ ನನ್ನ ವಾರಗೆಯ ಹೆಣ್ಣುಮಕ್ಕಳು ತಿಂಗಳಿಗೆ ಇಂತಹ ಒಂದೆರಡು ಕಾರ್ಯಕ್ರಮವನ್ನಾದರೂ ಮಾಡಿರುತ್ತಾರೆ. ಅತ್ತೆಮಾವನನ್ನೂ ಸಂಭಾಳಿಸಿಕೊಂಡು, ಮಕ್ಕಳನ್ನೂ ನೋಡಿಕೊಂಡು ಇವೆಲ್ಲವನ್ನ ಚಾಚೂ ತಪ್ಪದೇ ಮಾಡುತ್ತಾರೆ. ನನಗೆ ಮಾಡಬಾರದು ಅನ್ನುವುದೇನಿಲ್ಲ. ಹಾಗೆಯೇ ಮಾಡದಿದ್ದರೇನಾಗುತ್ತದೆ ಅಂತಲೂ ಅನಿಸುತ್ತಿರುತ್ತದೆ. ಭಕ್ತಿ ಮನಸ್ಸಲ್ಲಿದ್ದರೆ ಸಾಕು ಎನ್ನುವ ಅಸಡ್ಡೆ ಬೇರೆ ಸೇರಿಕೊಂಡಿದೆ. ಇದೆಲ್ಲ ಮನೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಿರುವುದರ ಸೈಡ್‌ ಇಫೆಕ್ಟು ಅಂತ ನನ್ನ ವಿಶ್ಲೇಷಣೆ.

ಊರಲ್ಲಿ ಎಲ್ಲ ಆಚರಣೆಗಳಲ್ಲಿ ಪಾಲ್ಗೊಂಡರೂ ಇಲ್ಲಿ ಎಂದಿಗೂ ಇವುಗಳನ್ನೆಲ್ಲ ಮಾಡದ ನನಗೆ ಇದೊಂದು ವಿಶೇಷ. ದಿನವೂ ಮನೆ ಗುಡಿಸಿ ಒರೆಸಿ ಮಾಡಲು ಆಲಸ್ಯ. ಈವತ್ತಿಗೂ ಬ್ಯಾಚ್ಯುಲರ್‌ ರೀತಿಯೇ ಬದುಕು. ಯಾರಾದರೂ ನೋಡಿದರೆ ಏನಾದರೂ ಅಂದುಕೊಂಡಾರೆಂದು ಬಾಗಿಲು ಹಾಕಿಕೊಂಡು ಗುಮ್ಮನ ಹಾಗೆ ಕೂತಿರುವವರ ಪೈಕಿ ನಾನು. ಯಾರನ್ನಾದರೂ ಮನೆಗೆ ಕರೆಯಬೇಕೆಂದರೆ ಅಥವಾ ಅವರೇ ಬರುತ್ತೇನೆಂದರೆ ಮನೆ ಸ್ವಚ್ಛ ಮಾಡಬೇಕಲ್ಲಾ ಎನ್ನುವುದರೊಂದಿಗೆ ಚಿಂತೆ ಆರಂಭವಾಗುತ್ತದೆ. ಮನೆಯೂ ಚಿಕ್ಕದು, ಜಾಗವೂ ಸಾಲದೆಂಬ ಯೋಚನೆ ಇದಕ್ಕೆ ಸಾಥ್‌ ಕೊಡುತ್ತದೆ. ಯಾರನ್ನೂ ಕರೆದಿಲ್ಲವಂತಲ್ಲ. ಆದರೂ ನಾಲ್ಕು ಜನ ಊಟಕ್ಕೆ ಬರುತ್ತಾರೆಂದರೆ ಚಕಚಕನೇ ಮಾಡಿ ಬಡಿಸುವ ರೂಢಿಯಿಲ್ಲ. ಯೂಟ್ಯೂಬು ನೋಡಿ ಮಾಡಬೇಕಲ್ಲ!

ಯಾವ ಆಚರಣೆಯೂ ನಾನೊಬ್ಬಳು ಮಾಡಿದ್ದರಿಂದ ಮುಂದುವರೆಯುತ್ತದೆ ಅಥವಾ ಮಾಡದಿದ್ದರೆ ಅಳಿದುಹೋಗುತ್ತದೆ ಎನ್ನುವ ಭ್ರಮೆ ನನಗಿಲ್ಲ. ಆದರೆ ಇವೆಲ್ಲ ಮಾಡುವುದರಿಂದ ಮನಸಿಗಾಗುವ ಸಂಸ್ಕಾರ ಎಂತಹುದೆಂದು ಮಾಡಿದಾಗಲೇ ನನ್ನ ಅನುಭವಕ್ಕೆ ಬಂದದ್ದು. ನಮ್ಮ ಆಚಾರವಿಚಾರಗಳು, ನಮ್ಮ ಸಂಸ್ಕೃತಿ-ಪರಂಪರೆಗಳು ನಮ್ಮ ಭಾವ ಸೌಂದರ್ಯವನ್ನು ಹೆಚ್ಚು ಮಾಡುವುದರಲ್ಲಿ ಸಂದೇಹವಿಲ್ಲವೆನಿಸಿದ್ದು ಆಗಲೇ. ಈ ನಡುವೆ ಡಿವಿಜಿಯವರು ಸಂಸ್ಕೃತಿ ಪುಸ್ತಕದಲ್ಲಿ ಹೇಳಿದ್ದು ನೆನಪಿಗೆ ಬಂತು. ಅದನ್ನು ಇಲ್ಲಿ ಹಾಗೆಯೇ ಪೇಸ್ಟು ಮಾಡಿದ್ದೇನೆ.

“ಸೊಗಸೆಂಬುದು ಎಲ್ಲರೂ ಎಲ್ಲೆಲ್ಲಿಯೂ ಬಯಸುವ ಒಂದು ಪರಿಸ್ಥಿತಿಯಲ್ಲವೇ? ನಾವು ಮೈಯನ್ನು ತೊಳೆದು ವಸ್ತ್ರಾಭರಣಗಳಿಂದ ಸೊಗಸುಪಡಿಸುತ್ತೇವೆ. ಮನೆಗೆ ಸುಣ್ಣ ಬಣ್ಣ ಮಾಡಿಸುತ್ತೇವೆ. ನಮ್ಮ ಕಣ್ಣಿಗೆ ಕಾಣಬರುವುದರಲ್ಲೆಲ್ಲ ಅಂದ ಚಂದಗಳನ್ನು ಹುಡುಕುತ್ತೇವೆ. ಅದರಂತೆ ನಮ್ಮ ಲೋಕಸಂಬಂಧಗಳಲ್ಲಿಯೂ ಒಂದು ಇಂಪು ಬೇಡವೇ ? ಆ ನಡೆನುಡಿಗಳ ಸೊಗಸೇ ಸಂಸ್ಕೃತಿ. ಅದು ಭಾವಸೌಂದರ್ಯ ಮತ್ತು ಶೀಲಸೌಂದರ್ಯ, ಆ ಆಭರಣವನ್ನು ತೊಡದಿರುವ ಜೀವ ಕಾಡುಮೃಗ, ನಾವು ದೇಹಗೇಹಗಳನ್ನು ಚೊಕ್ಕಟ ಚೆಲುವೆನಿಸಲು ಪ್ರಯತ್ನ ಪಡುವಂತೆ ನಮ್ಮ ಲೋಕಬಾಂಧವ್ಯವನ್ನು ರಮ್ಯವೆನಿಸುವುದಕ್ಕೂ ಬುದ್ಧಿಪೂರ್ವಕವಾಗಿ ಪರಿಶ್ರಮಿಸಬೇಕು. ಅದೇ ಸಂಸ್ಕೃತಿಯ ಸಾರಾಂಶ.

ನಡೆ ನುಡಿಗಳ ಚೊಕ್ಕಟವೇ ಸಂಸ್ಕೃತಿ. ಚೊಕ್ಕಟವೆಂದರೆ ಕೊಳಕನ್ನು ಕಳೆದುಹಾಕುವುದು. ಆದದ್ದರಿಂದ ಸಂಸ್ಕೃತಿಯು ಮನಸ್ಸನ್ನು ತಿಕ್ಕಿ, ತೊಳೆದು. ಶುಚಿಮಾಡುವ ಕೆಲಸ.

ಸಂಸ್ಕೃತಿಯಲ್ಲಿ ಜೀವನ ಸಂದರ್ಭಗಳ ಯುಕ್ತಾಯುಕ್ತ ವಿವೇಚನೆ ಒಂದು ಅಂಶ; ವಸ್ತುಗಳ ಮೂಲ್ಯ ತಾರತಮ್ಯಗಣನೆ ಇನ್ನೊಂದಂಶ; ಪರೇಂಗಿತ ಪರಿಜ್ಞಾನ ಮತ್ತೊಂದು ಅಂಶ; ಸರಸತಾಭಿರುಚಿ ಮತ್ತೊಂದು ಅಂಶ; ಧರ್ಮ ಚಿಂತನೆಯ ಜಾಗರೂಕತೆ ಮತ್ತೊಂದಂಶ. ಆತ್ಮಶೋಧನೆ ಆತ್ಮಸಂಯಮಗಳು ಮತ್ತೊಂದಂಶ, ಹೀಗೆ ನಾನಾ ವಿಜ್ಞಾನ ನಾನಾ ವಿವೇಕಗಳ ಸಮಾವೇಶದ ಫಲಿತಾಂಶ ಸಂಸ್ಕೃತಿ.”

ನಾನು ನೋಡಿ ಬೆಳೆದ ಸಂಸ್ಕೃತಿಯ ಅನುಸರಣೆ ನನ್ನ ಪುಟ್ಟ ಪ್ರಪಂಚವನ್ನು ಆ ದಿನದ ಮಟ್ಟಿಗಾದರೂ ರಮ್ಯವೆನಿಸುವಂತೆ ಮಾಡಿದ್ದು ನಿಜ.

ಬೇರೆಯವರು ಕರೆದಾಗ ಅಯ್ಯೋ ಹೋಗಬೇಕಲ್ಲ ಅಂದುಕೊಂಡು ಹೋಗುವವಳು ನಾನು. ಕೈಬೀಸಿಕೊಂಡು ಹೋದವಳಿಗೆ ಅವರು ಏನಾದರೂ ಕೈತುಂಬಿಸಿ ಕೊಡುತ್ತಿದ್ದರು. ಅದರ ಮೇಲೂ ನನ್ನದು ಮನಸ್ಸಿನೊಳಗೇ ಏನಾದರೂ ಅಸಮಧಾನ ಇರುತ್ತಿತ್ತು. ಅಷ್ಟೆಲ್ಲ ಮಾಡುವುದರ ಹಿಂದಿನ ಶ್ರಮ ಶ್ರದ್ಧೆ ಮನಸ್ಸಿಗೆ ಮುಟ್ಟುತ್ತಿರಲಿಲ್ಲ. ಆ ದಿನ ನನಗೆ ನಿದ್ರೆ ಬೇಗ ಹತ್ತಲಿಲ್ಲ. ಅವರ್ಯಾರೂ ನಾನು ಕರೆದ ಕೂಡಲೇ ಬರಲೇಬೇಕೆಂದಿರಲಿಲ್ಲವಲ್ಲ! ಅವರಲ್ಲಿ ಇಬ್ಬರು ಆಫೀಸು ಕೆಲಸ ಮುಗಿಸಿ ಸುಸ್ತಾಗಿ ಬಂದವರು. ಇನ್ನೊಬ್ಬರಿಗೆ ಇದನ್ನು ಮುಗಿಸಿ ಮನೆಗೆ ಹೋಗಿ ಅಡುಗೆ ಮಾಡಬೇಕು. ಮತ್ತೊಬ್ಬರು ಹುಷಾರಿಲ್ಲದಿದ್ದರೂ ಬಂದಿದ್ದರು. ಇನ್ನುಳಿದವರು ಇನ್ನೆಲ್ಲೋ ಹೋಗಿ ಬಂದವರು. ಆದರೂ ಬಂದಿದ್ದರು. ಅವರನ್ನು ಬರುವಂತೆ ಮಾಡಿದ್ದು ಯಾವುದು? ನನ್ನ ಮೇಲಿದ್ದ ಆದರವಾ, ದೇವರ ಮೇಲಿದ್ದ ಭಕ್ತಿಯಾ? ನನಗೆ ಎಲ್ಲ ಮಕ್ಕಳು ಬಂದ ಮೇಲೆ ಎಲ್ಲರಿಗೂ ಒಟ್ಟಿಗೆ ಕುಂಕುಮವಿಟ್ಟು ಅವರ ಕಣ್ಣಲ್ಲಿ ಖುಷಿಯನ್ನು ನೋಡುವ ಆಸೆ. ನಾನು ದುರ್ಗೆ ಕೂಸಾಗಿ ಪಟ್ಟ ಖುಷಿಯನ್ನು ಆ ಮಕ್ಕಳಲ್ಲಿಯೂ ಒಟ್ಟೊಟ್ಟಿಗೇ ನೋಡುವಾಸೆ. ಮೊದಲು ಬಂದಿದ್ದವರು ಅರ್ಧಗಂಟೆಗೂ ಹೆಚ್ಚು ಹೊತ್ತು ಕಾಯಬೇಕಾಯ್ತು. ಎಲ್ಲರನ್ನು ಕರೆಯುವುದು ಎಷ್ಟು ದೊಡ್ಡದೋ ಕರೆದಾಗ ಬಂದು, ಇದ್ದು, ಕಾದು ವಾತಾವರಣ ಕಳೆಗಟ್ಟುವ ಹಾಗೆ ಮಾಡುವುದೂ ದೊಡ್ಡದೆಂದು ನನಗನಿಸಿತು. ಕಪಾಟಿನಲ್ಲಿರುವ ಬ್ಲೌಸ್‌ಪೀಸುಗಳು ನಾನು ಎಷ್ಟು ಜನರ ಮನೆಗೆ ಹೋಗಿ ಆತಿಥ್ಯ ಪಡೆದಿದ್ದೇನೆಂಬುದನ್ನು ಈಗಾಗಲೇ ತೋರಿಸಿದ್ದವು. ಜೊತೆಗೆ ಒಮ್ಮೆಯಾದರೂ ನಾನು ಅವರನ್ನೆಲ್ಲ ಕರೆದು ಊಟಹಾಕಬೇಕೆಂಬುದನ್ನೂ ನೆನಪಿಸಿದ್ದವು.

ಅವರ್ಯಾರಿಗೂ ಇದು ಹೊಸದೇನಲ್ಲ. ನಾನು ಕೊಡುವ ಬಳೆ ಕ್ಲಿಪ್ಪಿನ ಆಸೆಯಿಂದ ಕಾದವರೂ ಅಲ್ಲ. ಇಲ್ಲಿ ಅವರಿಗಾದ ಲಾಭವೇನೂ ಇಲ್ಲ. ಆದ ಲಾಭವೆಲ್ಲ ನನಗೆ. ಇದೆಲ್ಲ ಮಾಡಿದ ಆನಂದವೂ ನನಗೆ. ಎಷ್ಟುದ್ದ ಬರೆದರೂ ನನ್ನಲ್ಲುಂಟಾದ ಸದ್ಭಾವವನ್ನು ವರ್ಣಿಸುವ ಸಾಮರ್ಥ್ಯ ನನಗಿಲ್ಲ. ಆ ತಾಯಿ ನನ್ನಿಂದ ಇಷ್ಟನ್ನಾದರೂ ಮಾಡಿಸಿಕೊಳ್ಳುವ ಮನಸ್ಸು ಮಾಡಿದಳಲ್ಲ ಎನ್ನುವ ಭಾವವೇ ನನ್ನ ಕಣ್ಣನ್ನು ಈಗಲೂ ಒದ್ದೆಯಾಗಿಸುತ್ತದೆ. ಆಕೆಗೆ ನನ್ನ ಮೇಲೆ ಅದೆಷ್ಟು ಕರುಣೆಯೆಂದು ಅನಿಸುತ್ತದೆ. ಅಪ್ಪ ಅಮ್ಮ ಏನಾದರೂ ದಾನ ಮಾಡಿದರೆ ಹೇಳುವ ಮಾತು, “ಹೂ ಕೊಡುವಲ್ಲಿ ಹೂವಿನ ಎಸಳನ್ನಾದರೂ ಕೊಡುವುದು”. ಇದರ ಭಾವ ನನ್ನ ಅನುಭವಕ್ಕೆ ಬಂತೆಂದು ಅಂದುಕೊಂಡಿದ್ದೇನೆ. ಇನ್ನೂ ಮಾಡಬೇಕಿತ್ತು, ಇನ್ನೂ ಕೊಡಬೇಕಿತ್ತು. ಆದರೆ ಕೈಲಾದಷ್ಟನ್ನು ಮಾಡಿದ್ದೇನೆನ್ನುವ ಭಾವ. ಊರಲ್ಲೆಲ್ಲ ಎಷ್ಟು ಜನರನ್ನು ಕರೆಯುತ್ತಾರೆ, ಎಷ್ಟೆಲ್ಲ ಅನ್ನದಾನ ಮಾಡುತ್ತಾರೆ, ಅವರಿಗೆ ಎಷ್ಟೆಲ್ಲ ಒಳ್ಳೆಯ ಅನುಭೂತಿಯಾಗಿರಬೇಡ ಎಂದೂ ಅಂದುಕೊಂಡೆ. ಇದೇ ರೀತಿಯ ಅನುಭವ ರಾಮನ ಪ್ರತಿಷ್ಠೆಗೆಂದು ಬಿಲ್ಡಿಂಗಿನ ಎಲ್ಲರನ್ನೂ ಸಂಜೆ ಮನೆಗೆ ಕರೆದು ಭಜನೆ ಆರತಿ ಎಲ್ಲ ಮಾಡಿದಾಗ ಆಗಿತ್ತು. ಆದರೆ ಆವಾಗ ಇಷ್ಟು ಗಡಿಬಿಡಿಯಾಗಿರಲಿಲ್ಲ. ಎಲ್ಲವನ್ನೂ ಸ್ಲೋ ಮೋಷನ್ನಿಗೆ ತಂದುಕೊಂಡು ಮಾಡುವ ನಾನು, ಸ್ವಲ್ಪ ಹಸಿವು ಆಯಾಸವನ್ನೂ ತಡೆಯದ ನಾನು, ಆದಿನ ಎಲ್ಲವನ್ನೂ ತಡೆದುಕೊಂಡು ಚುರುಕಿನಿಂದ ಅಂದುಕೊಂಡದ್ದನ್ನೆಲ್ಲ ತಕ್ಕಮಟ್ಟಿಗೆ ಮಾಡಿದೆನೆಂದರೆ ಅದೆಲ್ಲ ಅವಳಿಚ್ಛೆಯೇ ಇರಬೇಕೆಂದು ಭಾವಿಸುತ್ತೇನೆ. ಚಿಕ್ಕವಳಿರುವಾಗ ದುರ್ಗೆಕೂಸಾಗಿ ಎಷ್ಟು ಖುಷಿ ಪಟ್ಟೆನೋ, ಈಗ ದೊಡ್ಡವಳಾಗಿ ಈ ಮಕ್ಕಳನ್ನು ದುರ್ಗೆಕೂಸು ಮಾಡಿದಾಗಲೂ ಅಷ್ಟೇ ಖುಷಿಪಟ್ಟಿದ್ದೇನೆ. ಆಗ ಅರಿಶಿನಕುಂಕುಮ ಹಚ್ಚಿಸಿಕೊಂಡಿದ್ದೂ, ಈಗ ಇವರಿಗೆ ಹಚ್ಚಲು ಸಾಧ್ಯವಾಗಿದ್ದು ಎರಡೂ ನನ್ನ ಸೌಭಾಗ್ಯವೇ ಸರಿ. ಅಷ್ಟಾದರೂ ಯಾವ ಆಯಾಸವೂ ಆದಿನ ನನ್ನನ್ನು ಬಾಧಿಸಲಿಲ್ಲ. ದೇವರ ಕಾರ್ಯವನ್ನು ಎಷ್ಟು ಮಾಡಿದರೂ ಆಯಾಸವಾಗುವುದಿಲ್ಲವಂತೆ! ಅತ್ತೆ ಹೇಳಿದ್ದು ನೆನಪಾಯ್ತು.

ಮಾಡಿದ ಅಡುಗೆ ಅಷ್ಟೇನೂ ರುಚಿಯಾಗಿರಲಿಲ್ಲ, ಯಾವುದಕ್ಕೆ ಕರೆದಿದ್ದೆನೋ ಅದನ್ನೇ ಮರೆತಿದ್ದೆ. ಮುಖ್ಯ ಕೆಲಸವಾಗಿದ್ದ ಹೆಂಗಸರಿಗೆ ಕುಂಕುಮ ಹಚ್ಚುವುದನ್ನೇ ಮರೆತಿದ್ದೆ. ಎಲ್ಲರೂ ಬರಲಿ ಅಂತ ಬಂದವರನ್ನೂ ಕಾಯಿಸಿ ಎಲ್ಲರಿಗೂ ತಡಮಾಡಿದೆ ಅಂತ ಇವನೂ ಸಲ್ಪ ತಕರಾರು ಮಾಡಿದ. ಯಾವುದೂ ನನ್ನ ಆನಂದಕ್ಕೆ ಭಂಗ ತರಲಿಲ್ಲ.

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ।

ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।।

ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು?

ಒರಟು ಕೆಲಸವೋ ಬದುಕು – ಮಂಕುತಿಮ್ಮ ಎಂದುಕೊಂಡು ಸಮಾಧಾನದಿಂದಿದ್ದೆ.

ಮುಂದೆ ಇಂತಹ ಸಂದರ್ಭದಲ್ಲಿ ಟೆನ್ಶನ್ನು ಮಾಡಿಕೊಳ್ಳದೇ ಹೇಗೆ ಪೂರ್ವತಯಾರಿ ಮಾಡಿಕೊಳ್ಳಬೇಕೆಂಬ ಪಾಠವೂ ನನಗೆ ಆದಂತಾಗಿದೆ. ಇದಕ್ಕೆ ಸಂಬಂಧಿಸಿದ ಟೈಮ್‌ ಮ್ಯಾನೇಜ್ಮೆಂಟ್‌, ಪ್ರಯಾರಿಟೀಸ್‌ ಎಲ್ಲ ಅರ್ಥವಾದವು. ಅತ್ತೆಗೂ ಅಮ್ಮನಿಗೂ ಪೋಟೋ ವೀಡಿಯೋಗಳನ್ನು ಕಳಿಸಿ ಶಹಭಾಸ್‌ ಅನಿಸಿಕೊಂಡಿದ್ದೇನೆ. ಮುಂದಿನ ನವರಾತ್ರಿಯಷ್ಟರಲ್ಲಿ ಈ ವಿಷಯದಲ್ಲಿ ಪ್ರೋ ಆಗಿರುತ್ತೇನೆಂದು ನಿರೀಕ್ಷಿಸಬಹುದು. ಏನೋ ಮಾಡಿ ಅಲ್ಪಸ್ವಲ್ಪ ಪುಣ್ಯ ಸಂಪಾದಿಸಿಕೊಂಡೆ ಅಂದುಕೊಂಡಿದ್ದೆ. ಆದರೆ ಈಗ ಇಷ್ಟೆಲ್ಲ ಬರೆದು ಅದನ್ನು ಓದುವ ತಲೆನೋವನ್ನು ನಿಮಗೆ ಕೊಟ್ಟು ಮಾಡಿದ ಪುಣ್ಯವನ್ನೆಲ್ಲ ವ್ಯಯಮಾಡಿಕೊಂಡೆನೇನೋ!

 

-      ಸುಮನ



ಶುಕ್ರವಾರ, ಮಾರ್ಚ್ 19, 2021

ವೈನತೇಯವಿಜಯಂ- ಗರುಡನ ಕಥೆ-೬

(ಕದ್ರೂವಿನತೆಯರು ಪಂದ್ಯದ ಫಲವಾಗಿ ವಿನತೆ ದಾಸಿಯಾಗುವುದು,ಸಂಧ್ಯಾಕಾಲ ಚಂದ್ರೋದಯದ ವರ್ಣನೆ, ಗರುಡನ ಜನನ)

ವ॥ ಅಂತು ಸ್ತುತಿಸುತ್ತುಂ ನೋಡುತ್ತುಮಿರೆ

(ಹೀಗೆ ಸ್ತುತಿಸುತ್ತ ನೋಡುತ್ತಾ ಇರಲು)


ಕಂ॥ ಕಂಡುದು ಹಯಪುಚ್ಛಮೊ ಆ

ಖಂಡಲದಿಙ್ಮುಖದೊಳಿರ್ಪ ಸರ್ಪಗ್ರಸ್ತಾ-

ಖಂಡೇಂದುವೆಂಬ ತೆಱದಿಂ

ಮಂಡಿತಘನನೀಲವರ್ಣರೋಮದಿನಾಗಳ್ ॥೨೩॥

(ಕುದುರೆಯ ಪುಚ್ಛವೋ ಅಥವಾ, ಇಂದ್ರನ ದಿಕ್ಕಿನಲ್ಲಿರುವ (ಪೂರ್ವದಲ್ಲಿರುವ) ಸರ್ಪದಿಂದ ಕಚ್ಚಿಕೊಂಡಿರುವ ಚಂದ್ರನೋ (ಗ್ರಹಣ ಹಿಡಿದಿರುವ ಚಂದ್ರನೋ) ಎಂಬ ರೀತಿಯಲ್ಲಿ ಮೋಡಗಳಿಗಿರುವ ನೀಲವರ್ಣದಿಂದ ಕೂಡಿದ ಕೂದಲುಗಳನ್ನುಳ್ಳದ್ದಾಗಿ ಕಾಣುತ್ತಿತ್ತು)


ವ॥ ಆಗಳ್ ವಿನತೆಯಿಂತು ಚಿಂತಿಸಿದಳ್

(ಆಗ ವಿನತೆಯು ಹೀಗೆ ಚಿಂತಿಸಿದಳು)


ಕಂ॥ ಕಡುಗರ್ಪಿನ ಬಣ್ಣಮಿದೇಂ

ಕೆಡೆದಿರ್ಕುಂ ಬಾಲಕೆಂತುಟಿಂತಾಗಿರ್ಕುಂ

ಬಡಬಾನಲನಿಂ ಸುಟ್ಟುದೊ

ಕಡಲಿಂದೊಗೆತಂದ ವಿಷಮಡರ್ದುದೊ ಕಾಣೆಂ ॥೨೪॥

(ಕಡುಗಪ್ಪಾದ ಬಣ್ಣವಿದೇನು ಬಿದ್ದಿದೆ! ಬಾಲಕ್ಕೆ ಹೇಗೆ ಹೀಗಾಗಿದೆ! ಸಮದ್ರದಲ್ಲಿ ಇರುವ ಬಡಬಾಗ್ನಿಯಿಂದ ಕುದುರೆಯ ಬಾಲವು ಸುಟ್ಟು ಹೋಯಿತೋ! ಅಥವಾ ಕಡಲಿನಿಂದ ಹುಟ್ಟಿದ ವಿಷವು ಹೀಗೆ ಹತ್ತಿಕೊಂಡಿದೆಯೋ ಕಾಣೆ!)


ಕಡೆವಾಗಳ್ ಮಂದರಕಂ

ತೊಡೆದಿರ್ಕುಂ ಮೆಯ್ಯ ಬಣ್ಣಮಾ ವಾಸುಕಿಯಾ

ನಡೆಯುತೆ ಬೀಸಲ್ ಬಾಲಕೆ

ಬಡಿದಿರ್ಕುಂ ತೋರ್ಪ ಕರ್ಪುಮುಚ್ಛೈಶ್ರವದಾ ॥೨೫॥

(ಸಮುದ್ರವನ್ನು ಕಡೆಯುವಾಗ ಮಂದರಪರ್ವತಕ್ಕೆ ಆ ವಾಸುಕಿಯ ಮೈಯ ಕಪ್ಪು ಬಣ್ಣ ಮೆತ್ತಿಕೊಂಡಿದ್ದು,ಈಗ ಕಾಣುತ್ತಿರುವ ಕಪ್ಪು ಉಚ್ಚೈಶ್ರವಸ್ಸು ನಡೆಯುವಾಗ ಇದರ ಬಾಲಕ್ಕೆ ಬಡಿದಿದೆ.)


ಬಾೞ್ತೆಯ ಶೇಷಂ ಸವತಿಯ

ತೊೞ್ತಾಗುತೆ ಬಾೞ್ವುದಾಯ್ತೆ ಪರಿಕಿಸಿ ಹಯಮಂ

ತೞ್ತುದನೞಿಪೆಂ ನೋಡೆ ನೆ

ಗೞ್ತೆಯನಾಂ ಪಡೆವೆನೆಂದು ಯೋಚಿಸುತಿರ್ದಳ್ ॥೨೬॥

(ಬದುಕಿನ ಉಳಿದ ಭಾಗವನ್ನು ಸವತಿಗೆ ದಾಸಿಯಾಗಿ ಬಆಲಬೇಕಾಯ್ತೇ! ಕುದುರೆಯನ್ನು ಪರೀಕ್ಷಿಸಿ ಹತ್ತಿಕೊಂಡ (ಕಪ್ಪು ಬಣ್ಣವನ್ನು) ಅಳಿಸಿ ನೋಡಿ ಹೆಸರನ್ನು ಪಡೆಯುತ್ತೇನೆ- ಎಂದು ಯೋಚಿಸುತ್ತಿದ್ದಳು)


ಮ॥ ಭಳಿರೇ! ಭಾಗ್ಯಮಿದಾಯ್ತು ಪುತ್ರನಿಚಯಂ ಸೇರುತ್ತುಮೀ ಪುಚ್ಛಕಂ

ನೆಲೆಸಲ್ ಗೆಲ್ದೆನಲಾ ಸಪತ್ನಿಯೆನಗಂ ಸಂದಳ್ ಗಡಾ ದಾಸಿವೊಲ್

ಛಲದಿಂ ವೀಕ್ಷಿಸಲೀಯದಂತೆ ಭರದಿಂ ಸಾಗಿಪ್ಪೆನಿನ್ನೆಂದು ತಾಂ

ನಲವಿಂ ನಿಂತು ನಿರೀಕ್ಷಿಸುತ್ತೆ ನಿಡುಸುಯ್ದಳ್ ಕದ್ರುವಾ ವೇಳೆಯೊಳ್॥೨೭॥

(ಭಳಿರೇ! ಇದು ನನ್ನ ಭಾಗ್ಯವೇ ಆಯ್ತು. ನನ್ನ ಮಕ್ಕಳ ಗುಂಪು ಈ ಬಾಲವನ್ನು ಸೇರಿಕೊಂಡು ನೆಲೆಸಿರಲು ನಾನೇ ಗೆದ್ದೆನಲಾ! ಈ ಸವತಿ ನನಗೆ ದಾಸಿಯಾಗಿ ಸಂದಳು. ಈಗ ಛಲದಿಂದ ಇವಳು ನೋಡಲು ಕೊಡದೇ ಭರದಿಂದ ಸಾಗಿಸಿಕೊಂಡು ಹೋಗುತ್ತೇನೆ” ಎಂದು ಸಂತೋಷದಿಂದ ಅದನ್ನು ನೋಡುತ್ತಾ ನಿಂತ ಕದ್ರು ನಿಟ್ಟುಸಿರನ್ನು ಬಿಟ್ಟು ಹೀಗೆಂದುಕೊಂಡಳು)

ವ॥ ಬೞಿಕ್ಕಂ (ಆಮೇಲೆ)

ಕಂ॥ ಎಲಗೇ ದಾಸಿಯೆ ನಡೆ ನಡೆ

ನಿಲದೇ ಪೊತ್ತೆನ್ನನೇಗಳುಂ ಪೇೞ್ದೆಡೆಗಂ

ಚಲಿಸೌ ಮನೆಯೆಡೆಗೀಗಳ್

ಸಲೆ ಪುಸಿಯಾಡಿರ್ಪ ನಿನ್ನ ದೆಸೆಯಂ ನೋಡಾ!॥೨೮॥

(ಎಲೌ! ದಾಸಿಯೇ! ನಡೆ ನಡೆ! ನನ್ನನ್ನು ಹೊತ್ತುಕೊಂಡು ನಿಲ್ಲದೆಯೇ ನಾನು ಹೇಳಿದ ಕಡೆಗೆ ಚಲಿಸು. ಈಗ ಮನೆಯ ಕಡೆ ಹೊರಡು, ವೃಥಾ ಸುಳ್ಳು ಹೇಳಿದ ನಿನ್ನ ದೆಸೆಯನ್ನು ನೋಡು!)


ವ॥ ಎಂದು ಮೂದಲಿಸೆ ವಿನುತೆ 

(ಎಂದು ಮೂದಲಿಸಿರಲು, ವಿನತೆಯು-)


ಚಂ॥ಕೆಳದಿ! ವಿಚಿತ್ರಮಾದುದೆನಿಸಿರ್ಪುದು ವಾಜಿಯ ಪುಚ್ಛಮೀಗಳೇ!

ಬಳಿಗೆನೆ ಸಾಗುವಂ, ನಿರುಕಿಪಂ ದಿಟದಿಂದದು ಪಾಂಡುವೆಂಬುದಂ

ತಿಳಿದೊಡೆ ಸತ್ಯಮಂ ನಡೆವಮಿಲ್ಲಿಗೆ ಸಾಲ್ಗುಮಿದೆಲ್ಲ ಪಂಥಮುಂ

ನಳಿನಮುಖೀ! ಸಖಿತ್ವಮಿದೆ ಸಲ್ಗೆ ನಿವಾರಿಸಿ ಬೇಸರೆಲ್ಲಮಂ ॥೨೯॥

(ಗೆಳತಿಯೇ!ಈ ಕುದುರೆಯ ಬಾಲವು ವಿಚಿತ್ರವಾಗಿದೆ ಎನಿಸುತ್ತಿದೆ. ಈಗಳೇ ನಾವು ಅದರ ಬಳಿ ಸಾಗೋಣ.  ದಿಟವಾಗಿಯೂ ಅದು ಬಿಳಿಯ ಬಣ್ಣ ಎಂದು ನೋಡೋಣ. ಸತ್ಯವನ್ನು ತಿಳಿದ ಮೇಲೆ ಹೋಗೋಣ. ಈ ಪಂದ್ಯವೆಲ್ಲ ಸಾಕು. ನಳಿನಮುಖಿಯೇ! ಬೇಸರೆಲ್ಲವನ್ನೂ ಕಳೆದು ಈ ಗೆಳತಿಯಾಗಿರುವುದೇ ಸಲ್ಲುವಂತಿರಲಿ)

ವ॥ವಿನತೆಯಿಂತೆನೆ ಕೋಪಾಟೋಪದಿಂ ಕದ್ರುವಿಂತೆಂದಳ್- (ವಿನತೆ ಹೀಗೆ ಹೇಳಿದಾಗ,ಕೋಪಾಟೋಪದಿಂದ ಕದ್ರು ಮಾರ್ನುಡಿದಳು)

ಶಾ॥ ನಿನ್ನೀ ಮಾತುಗಳೆನ್ನ ಕಾಣ್ಮೆ ಪುಸಿಯೆಂದೇಂ ಪೇೞ್ವುದೋ! ಮೋಸದಿಂ

ಬನ್ನಂಗೆಯ್ವೆನೆನುತ್ತೆ ಪೇೞ್ವೆಯೊ ವಲಂ! ಪಂಥಕ್ಕೆ ಮೇಣ್ ತಪ್ಪುತುಂ

ಮುನ್ನಂ ನಿನ್ನಯ ಸುಳ್ಳನಿಂತು ಜವದಿಂ ಕಾಪಿಟ್ಟೆಯೇಂ! ತೊೞ್ತೆ! ನೀ

ನೆನ್ನಂ ಪೊತ್ತು ವಿಲಂಬಮಾಗದೆಯೆ ಸಾಗೌ ಗೇಹಕಂ ಮೂಢೆಯೇ ॥೩೦॥

(ನಿನ್ನ ಈ ಮಾತುಗಳು ನನಗೆ ಕಂಡಿರುವುದು ಸುಳ್ಳು ಎಂದು ಹೇಳುವುದೇನು! ಮೋಸದಿಂದ ನಾನು ಕಷ್ಟವನ್ನು ಕೊಡುತ್ತೇನೆಂದು ಹೇಳುತ್ತೀಯೋ! ಪಂದ್ಯಕ್ಕೆ ತಪ್ಪುತ್ತಾ ಮೊದಲು ಹೇಳಿದ ನಿನ್ನ ಸುಳ್ಳನ್ನು ಕಾಪಾಡಿಕೊಳ್ಳುತ್ತಿದ್ದೀಯಾ! ದಾಸಿಯೇ! ನೀನು ನನ್ನನ್ನು ಹೊತ್ತುಕೊಂಡು ತಡಮಾಡದೆಯೇ ಮನೆಯ ಕಡೆ ಸಾಗು! ಮೂರ್ಖೆಯೇ!)


ವ॥ ಎಂತೆನೆ ಅನ್ಯಮಾರ್ಗಮಂ ಕಾಣದೆ ವಿನತೆ ದಾಸ್ಯಕೆ ನೋಂತಳಾಗಳ್

(ಎಂದು ಹೇಳಲು ಬೇರೆ ಮಾರ್ಗವನ್ನು ಕಾಣದೇ ವಿನತೆಯು ದಾಸ್ಯಕ್ಕೆ ನೋಂತಳು)


ಶಿಖರಿಣಿ॥ ಜಗುಳ್ದಂ ಸೂರ್ಯಂ ಕೆಂಪಡರ್ದ ಗಗನಂ ರಾಜಿಸುತಿರಲ್

ಸೊಗಂಗಾಣಂ ಚಿಂತಾಕುಲನೆನಿಸುವಂತತ್ತಲರುಣಂ

ಮಗಂ ತಾಯ್ಗಂ ಕಷ್ಟಂ ದೊರೆತುದಕಟಾ ಎಂದು ಮಱುಕಂ-

ಬುಗುತ್ತುಂ ನಿಂತಿರ್ಪಂತೆಸೆದುದಪರಾಂಬೋಧಿಯೆಡೆಯೊಳ್ ॥೩೧॥

(ಆಗ ಸೂರ್ಯನು ಸರಿಯತೊಡಗಿದನು. ಕೆಂಬಣ್ಣದಿಂದ ತುಂಬಿಕೊಂಡ ಆಕಾಶವು ರಾರಾಜಿಸುತ್ತಿರುವಾಗ, ಆ ಕಡೆ ಅರುಣನೂ ಸೊಗಸಿಲ್ಲದೇ ಚಿಂತೆಯಿಂದ ಕೂಡಿದವನಂತೆ ಕಾಣುತ್ತಿದ್ದ. ಪಶ್ಚಿಮ ದಿಕ್ಕಿನ ಸಮುದ್ರದ ಕಡೆಯಲ್ಲಿ ಆ ಅರುಣನು ತನ್ನ ತಾಯಿಗೆ ಕಷ್ಟವು ಬಂದಿದೆ ಎಂದು ಮರುಕದಿಂದ ನಿಂತುಕೊಂಡು ನೋಡುತ್ತಿರುವಂತೆ ಕಾಣುತ್ತಿತ್ತು)


ಕಂ॥ವಿನತೆಯ ಭವಿತವ್ಯಮಿದೇಂ ಘನತಿಮಿರಾನ್ವಿತಮೆ ಸಲ್ಗುಮೆಂಬುದನುಲಿಯು- ತ್ತಿನಿತೇಂ ವಿರಿಂಚಿಯೇ ಗೆ- ಯ್ದನೊ ಎಂಬಂತಾಯ್ತು ಕೞ್ತಲೆತ್ತಲ್ ನೋಡಲ್ ॥೩೨॥ (ವಿನತೆಯ ಭವಿಷ್ಯವು ಇದೇನು ಪೂರ್ತಿ ಕತ್ತಲೆಯಿಂದಲೇ ಸಲ್ಲುತ್ತದೆ ಎಂದು ಹೇಳುತ್ತಾ ಹೀಗೆ ಬ್ರಹ್ಮನೇ ಮಾಡಿದನೋ ಎಂಬಂತೆ ಎತ್ತ ನೋಡಿದರೂ ಕತ್ತಲಾಗುತ್ತಿತ್ತು)

ಚಂ॥ ಅದೊ! ಅದೊ! ಆಕೆಯೇ ವಿನತೆ! ಕದ್ರುವಿಗಾದಳೆ ದಾಸಿ ನೋಡಿರೇ!

ಚದುರರೆ! ಕಾಣಿಮಾಕೆಯೆಸಗಿರ್ಪುದನೆಂದು ನಭಶ್ಚರರ್ ನಗ-

ಲ್ಕೊದವಿದ ದಂತಕಾಂತಿಯೆನಿಪಂದದೆ ತಾರಕೆ ಮಿಂಚುತಲ್ಲಿ ಸಂ

ದುದು ಪರಕಷ್ಟಕಂ ನಗುವರಿರ್ಪುದು ಸಾಜಮೆ ಸರ್ವಕಾಲದೊಳ್ ॥೩೩॥

(ಅದೊ ಅದೋ! ಆಕೆಯೇ ವಿನತೆ, ಕದ್ರುವಿಗೆ ದಾಸಿಯಾದಳು, ನೋಡಿರೇ! ಚತುರೆಯರೇ! ನೋಡಿ, ಆಕೆ ಮಾಡಿದ್ದನ್ನು ನೋಡಿ, ಎಂದು ಆಕಾಶಗಾಮಿಗಳು ಹೇಳಿಕೊಂಡು ನಗುತ್ತಿರುವಾಗ ಅವರ ದಂತಕಾಂತಿಯೇ ಕಾಣುತ್ತಿರುವುದೋ ಎಂಬಂತೆ ನಕ್ಷತ್ರಗಳು ಅಲ್ಲಲ್ಲಿ ಮಿಂಚತೊಡಗಿದವು. ಎಲ್ಲಾ ಕಾಲದಲ್ಲಿಯೂ ಬೇರೆಯವರ ಕಷ್ಟವನ್ನು ಕಂಡು ನಗುವವರು ಇರುವುದು ಸಹಜವೇ ಆಗಿದೆ.)


ಪೊಡವಿಯ ಮೇರೆಯಿಂದೆಸೆದು ಬಂದುದಮರ್ದಿನ ಕುಂಭಮೋ ಮಗುಳ್

ಜಡಧಿಯೊಳಿರ್ಪುದದ್ಭುತದ ರತ್ನಮೆ ಸಾರ್ದುದೊ ಅಲ್ತದಲ್ತು ಮೇ

ಣೊಡಲಿನಿನಿಟ್ಟ ಮೊಟ್ಟೆಯಿದೊ ಕಾಯುವರಿಲ್ಲಮೆನುತ್ತೆ ನನ್ನ ಪಿಂ

ನಡೆದುದೊ ಎಂಬವೊಲ್ ವಿನತೆ ಖೇದದೊಳೀಕ್ಷಿಪಳೈ ಶಶಾಂಕನಂ ॥೩೪॥

(ಭೂಮಿಯ ಒಂದು ಮೇರೆಯಿಂದ ಅಮೃತದ ಕಲಶವೇ ಎದ್ದು ಬರುತ್ತಿದೆಯೋ, ಅಥವಾ ಸಮುದ್ರದಲ್ಲಿ ಇದ್ದ ಒಂದು ಅದ್ಭುತವಾದ ರತ್ನವೇ ಬಂತೋ! "ಅಲ್ಲ ಅಲ್ಲ, ನನ್ನ ಬಸಿರಿನಿಂದಲೇ ಇಟ್ಟಿರುವ ಮೊಟ್ಟೆ ಇದು, ತನ್ನನ್ನು ಕಾಪಾಡುವವರಿಲ್ಲ ಎಂದು ನನ್ನ ಹಿಂದೆಯೇ ಬರುತ್ತಿದೆಯೋ!” ಎಂದು ದುಃಖದಲ್ಲಿ ಚಂದ್ರನನ್ನು ವಿನತೆ ನೋಡಿದಳು.)


ವ॥ಅಂತು ನಿಶೆಯಾವರಿಸುತ್ತುಮಿರಲ್ ವಿನತೆ ಕದ್ರುವಿನೊಡಂ ನಡೆದು ದಾಸ್ಯದ ಕಾರಣದಿಂದಾಕೆಯ ಸೇವೆಯಂ ಗೆಯ್ಯುತ್ತೆ ನಿತಾಂತಮುವಳೊಡನೆಯೇ ಇರ್ದಪಳ್, ಆಗಳಿತ್ತಲ್

(ಹೀಗೆ ರಾತ್ರಿ ಆವರಿಸುತ್ತಿರುವಾಗ, ವಿನತೆ ಕದ್ರುವಿನ ಜೊತೆ ನಡೆದು, ದಾಸ್ಯದ ಕಾರಣದಿಂದ ಸದಾಕಾಲ ಅವಳ ಸೇವೆಯನ್ನು ಮಾಡುತ್ತ ಅವಳ ಜೊತೆಯಲ್ಲಿಯೇ ಇದ್ದಳು. ಆಗ ಇತ್ತ ಕಡೆಯಲ್ಲಿ)


ಕಂ॥ ಆರುಂ ಕಾಯ್ವರ್ಕಳ್ ಮೇ

ಣಾರೈವರ್ ನೋೞ್ಪರಂತೆ ಜತೆಯೊಳಗಿರದರ್

ಓರಂತಿರ್ದಪುದಂಡಂ

ಧೀರರ್ಗಂ ಸಾಹ್ಯಮೀವರೇತಕೆ ವೇಳ್ಕುಂ ॥೩೫॥

(ಯಾರೂ ಕಾಯುವವರೂ, ಆರೈಕೆ ಮಾಡುವವರೂ, ನೋಡುವವರೂ ಹಾಗೆ ಜೊತೆಯಲ್ಲಿ ಇರದವರು (ಆಗಿರಲು) ಆ (ಗರುಡನಿರುವ) ಮೊಟ್ಟೆಯು ಚೆನ್ನಾಗಿಯೇ ಇತ್ತು. ಧೀರರಾದವರಿಗೆ ಸಹಾಯವನ್ನು ಕೊಡುವವರು ಏಕೆ ಬೇಕು!)


ತೇಟಗೀತಿ॥ ಕಳೆಯುತಿರ್ದೊಡಂ ಕಾಲದೊಳಗೆಂತೊ ಗರುಡಂ

ತಳೆದು ನಿಸ್ತುಲಂ ಬಲ್ಮೆಯಂ ಲೋಕವೀರಂ

ಬಳೆದು ಪೊಱಮಡಲ್ ಶಕ್ತನಾಗುತ್ತುಮಿರ್ದಂ

ಪಳಿಕುಗವಿಯೊಳಗೆ ಕುಳಿತಿರ್ಪ ತವಸಿಯಂದಂ॥೩೬॥

(ಕಾಲವು ಕಳೆಯುತ್ತಿರುವಾಗ ಹೇಗೋ ಗರುಡನು, ಹೋಲಿಕೆಯಿಲ್ಲದ ಬಲ್ಮೆಯನ್ನು ಪಡೆದು, ಲೋಕವೀರನಾದವನು ಬೆಳೆಯುತ್ತಾ ಹೊರಗೆ ಬರಲು ಶಕ್ತನಾಗುತ್ತ ಇದ್ದನು. ಅವನು ಮೊಟ್ಟಯೊಳಗಿರುವುದು ಸ್ಫಟಿಕದ ಗುಹೆಯೊಳಗೆ ಕುಳಿತು ತಪಸ್ಸನ್ನು ಮಾಡುತ್ತಿರುವ ತಪಸ್ವಿಯ ಹಾಗೆ ಕಾಣುತ್ತಿತ್ತು)


ಆಟವೆಲದಿ॥ ತ್ರುಟಿತಮಿಲ್ಲದಂತೆ ಪ್ರತಿಯೊಂದು ಜೀವಿಗಂ

ಸ್ಫುಟಮೆನಿಪ್ಪ ತೆಱದೊಳಂ ಭವಿಷ್ಯಂ

ಘಟಿತಮಾಯ್ತಲಿಖತಲೇಖದೊಳ್ ಬ್ರಹ್ಮನಿಂ

ಚಟುಲಗತಿಯೊಳದುವೆ ಚಲಿಪುದನಿಶಂ ॥೩೭॥

(ಯಾವುದೇ ತ್ರುಟಿ ಇಲ್ಲದಂತೆ ಪ್ರತಿಯೊಂದು ಜೀವಿಗೂ ಸ್ಪಷ್ಟವಾದ ಭವಿಷ್ಯವು ಬ್ರಹ್ಮನಿಂದ ಹಣೆಯ ಬರೆಹದಲ್ಲಿ ಬರೆಯಲ್ಪಟ್ಟಿದೆ. ಅದು ವೇಗವಾದ ಗತಿಯಲ್ಲಿ ನಡೆಯುತ್ತಲೇ ಇರುತ್ತದೆ.)


ವ॥ಅಂತೆಯೆ ಗರುಡನ ಬಹಿರಾಗಮಸಮಯಮಾಗಲ್ಕೆ

(ಹಾಗೆಯೇ ಗರುಡನು ಹೊರಗೆ ಬರುವ ಸಮಯವಾಗಿರಲು)


ಮ.ಸ್ರ॥ಎರೞ್ವುಟ್ಟಂ ಪೊಂದಲಾಗಳ್ ನಿಡಿದೆನಿಸುತೆ ಮೆಯ್ಯಂ ಮಗುಳ್ ಸಾರ್ಚುತುಂ ತ-

ನ್ನೆರಡುಂ ಪಕ್ಷಂಗಳಂ ಬಿತ್ತರಿಸುತೆ ತೆರೆದಂ ಚಂಚುವಂ ಕ್ರೀಂಕರಿಪ್ಪಂ

ಗರುಡಂ ಭವ್ಯಾದ್ಭುತಾಂಗಸ್ಫುರಿತರುಚಿರರಾಗಂ ಜಗುಳ್ದೊಲ್ದು ನೋೞ್ಪಂ

ಬಿರಿಯಲ್ಕಿನ್ನೊಂದಜಾಂಡಂ ಜನಿಸಿದನಲನೆಂಬಂದದಿಂದಂ ನೆಗೞ್ದಂ ॥೩೮॥

(ಗರುಡನು ಎರಡನೇ ಜನ್ಮವನ್ನು ಪಡೆಯುವುದಕ್ಕೆಂದು ತನ್ನ ಮೈಯನ್ನು ಹಿಗ್ಗಿಸುತ್ತಾ, ರೆಕ್ಕೆಗಳೆರಡನ್ನೂ ಚಾಚುತ್ತಾ, ವಿಸ್ತರಿಸುತ್ತಾ, ಕೊಕ್ಕನ್ನು ತೆರೆದು ಕ್ರೀಂಕಾರವನ್ನು ಮಾಡಿದ. ಭವ್ಯವಾದ ಅದ್ಭುತವಾದ ದೇಹದ ಕಾಂತಿಯಿಂದ ಹೊಮ್ಮುತ್ತಿರುವ ಕೆಂಬಣ್ಣದಿಂದ ಸರಿಯುತ್ತಾ ಹೊರಗೆ ನೋಡುತ್ತಿರಲು, ಮತ್ತೊಂದು ಬ್ರಹ್ಮಾಂಡವೇ ಬಿರಿದು ಅಗ್ನಿಯೇ ಮತ್ತೆ ಹುಟ್ಟಿದಂತೆ ಕಾಣುತ್ತಿದ್ದ)


ಕಂ॥ ಅತಿಶಯರಾಗದ ರುಚಿಯಿಂ 

ಹುತಭುಙ್ನಿಭನೊಲ್ದು ವೈನತೇಯಂ ಪುಟ್ಟಲ್

ಚ್ಯುತಮಾದ ಕೋಶಮುಳಿದುದು

ಚಿತಮಾದುದು ಬೆಂಕೆಯಿತ್ತ ಭಸ್ಮದ ತೆಱದಿಂ ॥೩೯॥

(ಅತಿಶಯವಾದ ಕೆಂಬಣ್ಣದ ಕಾಂತಿಯಿಂದ ಅಗ್ನಿಯಂತೆ ಕಾಣುವ ಈ ವೈನತೇಯನು ಹುಟ್ಟಲು, ಹೊರಗೆ ಉಳಿದ ಮೊಟ್ಟೆಯ ಕೋಶವು ಬೆಂಕಿ ಕೊಟ್ಟ ಭಸ್ಮದಂತೆ ಸಂಚಿತವಾಗಿತ್ತು)


ವ॥ ಬೞಿಕ್ಕಂ ಕೋಶಮನೆರಡಾಗಿ ಸೀಳ್ದು ಪುಟ್ಟಿದ ಕೆಂಬಣ್ಣದ ಮುತ್ತಿನಂತೆ ಮೆಱೆದಪ ಗರುತ್ಮಂತಂ ಖೇಚರಕುಲಪತಿಯೆನಿಪ್ಪನೆಂಬುದನಱಿತು ಪಾಡಿರೆ ಪಿಕಂಗಳ್, ನರ್ತಿಸೆ ನವಿಲುಗಳ್, ಸ್ತುತಿಪದ್ಯಂಗಳಂ ಪಠಿಸೆ ಪಂಡಿತವಕ್ಕಿಗಳ್, ಮಚ್ಚರದೆ ಗೂಗೆ ಬಿಲ್ಲುಂಬೆಱಗಾದ ತೆಱದೆ ಮಿಳ್ಮಿಳನೆ ನೋಡೆ ಪಿಸುಣತೆಯಿಂ ಕಾಗೆ ಪಾರುತ್ತುಂ ಕರ್ಕಶರವಂಗೆಯ್ಯೆ ಶುಭಶಕುನಮಂ ಶಕುನಿಗಳ್ ಸೂಚಿಸೆ, ಪರ್ದುಗಳ್ ಪಾರೆ, ಸಿಂಹಾಸನಮಂ ಪಣ್ಣಿದಪೆನೆಂದು ಮರಕುಟಿಗಂ ಮರನಂ ಕಡಿಯುತಿರೆ,ಪದಾಯುಧಂಗಳ್ ಸುಭಟರಂತೆ ನಿಂತಿರೆ,ಕಾಜಾಣಮೊಲವಿಂದೆ ತೂರ್ಯಸ್ವನಂ ಗೆಯ್ಯೆ,

(ಆಮೇಲೆ, ಕೋಶವನ್ನು ಎರಡಾಗಿ ಸೀಳಿದ ಕೆಂಪು ಬಣ್ಣದ ಮುತ್ತಿನಂತೆ ಮೆರೆಯುವ ಗರುತ್ಮಂತನು ಪಕ್ಷಿಗಳ ಸಂಕುಲಕ್ಕೇ ರಾಜನಾಗುತ್ತಾನೆ ಎಂದು ತಿಳಿದುಕೊಂಡು ಕೋಗಿಲೆಗಳು ಹಾಡತೊಡಗಿದವು, ನವಿಲುಗಳು ನರ್ತಿಸತೊಡಗಿದವು, ಪಂಡಿತವಕ್ಕಿಗಳಾದ ಗಿಳಿಗಳು ಸ್ತುತಿಪದ್ಯಗಳನ್ನು ವಾಚಿಸಿದವು, ಮತ್ಸರದಿಂದ ಬೆರಗಾದಂತೆ ಗೂಬೆಗಳು ಮಿಳ್ಮಿಳನೆ ಕಣ್ಣನ್ನು ಅರಳಿಸಿ ನೋಡುತ್ತಿರಲು, ಕಾಗೆಗಳು ಪಿಸುಣತೆಯಿಂದ ಕರ್ಕಶವಾದ ಶಬ್ದವನ್ನು ಮಾಡಲು, ಶಕುನಿಪಕ್ಷಿಗಳು ಶುಭಶಕುನವನ್ನು ಸೂಚಿಸುತ್ತಿರಲು, ಹದ್ದುಗಳು ನೋಡಲು, ಸಿಂಹಾಸನವನ್ನೇ ನಿರ್ಮಾಣ ಮಾಡುತ್ತೇನೆ ಎಂದು ಮರಕುಟಿಗವು ಮರವನ್ನು ಕಡಿಯಲು ಪ್ರಾರಂಭಿಸಿರಲು, ಸುಭಟರ ಹಾಗೆ ಪದಾಯುಧಗಳಾದ ಕೋಳಿಗಳು ನಿಂತುಕೊಂಡಿರಲು, ಕಾಜಾಣಗಳು ತೂರ್ಯಧ್ವನಿಯನ್ನು ಮಾಡುತ್ತಿರಲು)


ಕಂ॥ಪರಿಕಿಸುತುಂ ಪರಿಪರಿಯಿಂ

ಪೊಱಮಡೆ ಬಂಧುಗಳದಾರೆನುತ್ತುಂ ಜಗದೊಳ್

ಗರುಡಂ ತಿಳಿಯದೆ ತಾಯಂ

ಭರದಿಂ ಕಾಣದೆಯೆ ಶೋಕದಿಂ ತಪಿಸಿರ್ದಂ ॥೪೦॥

(ಗರುಡನು ಪರಿಪರಿಯಾಗಿ ನೋಡುತ್ತಾ, ಹೊರಬರಲು, ಜಗತ್ತಿನಲ್ಲಿ ತನ್ನ ಬಂಧುಗಳು ಯಾರು ಎಂದು ಹುಡುಕಿ ತಿಳಿಯಲಾರದೇ, ತಾಯಿಯನ್ನೂ ಕಾಣದೆಯೇ ಬಹಳ ದುಃಖದಿಂದ ಪರಿತಪಿಸುತ್ತಿದ್ದ)


ಚಂ॥ ಅಕಟ! ಸಮಸ್ತಲೋಕದೊಳಗಿರ್ಪ ಸಮಸ್ತಚರಾಚರಪ್ರಜಾ

ನಿಕರಕೆ ಪುಟ್ಟಿದಾಗಳೆದುರಿರ್ದಪಳೊಲ್ಮೆಯ ಮೂರ್ತಿ ಪೆತ್ತವಳ್

ಸಕರುಣನಾದನಲ್ತೆ ಗರುಡಂ ಗಡ ಕೂರ್ಮೆಯ ತೋರುವರ್ಕಳಾರ್

ವಿಕಲತೆವೆತ್ತನಣ್ಣನೊ ತೆ! ದಾಸ್ಯದೆ ಸಿಲ್ಕಿದ ಮಾತೆಯೋ ವಲಂ! ॥೪೧॥

(ಅಯ್ಯೋ! ಎಲ್ಲಾ ಲೋಕದಲ್ಲಿರುವ ಎಲ್ಲಾ ಚರಾಚರವಾದ ವಸ್ತುಗಳಿಗೂ ಕೂಡ ಹುಟ್ಟಿದ ಹೊತ್ತಿನಲ್ಲಿ  ಪ್ರೀತಿಯ ಮೂರ್ತಿಯೇ ಆಗಿರುವ ಹೆತ್ತವಳು ಎದರಿನಲ್ಲಿ ಇರುತ್ತಾಳಲ್ಲವೇ!ಗರುಡನು ಕರುಣೆಗೆ ಪಾತ್ರನಾದನು. ಪ್ರೀತಿಯನ್ನು ತೋರುವವರಾದರೂ ಯಾರು! ಅಂಗವಿಕಲನಾದ ಅಣ್ಣನೋ! ಬಿಡು, ದಾಸ್ಯದಲ್ಲಿ ಸಿಕ್ಕಿಕೊಂಡಿರುವ ತಾಯಿಯೊ!)


ಉ॥ಜೀವನದಂತ್ಯದನ್ನೆಗಮುಮಿರ್ದೊಡೆ ತಾಯಿಯ ಕೂರ್ಮೆಯೆಲ್ಲರುಂ

ಭಾವಿಪರಲ್ತೆ ಪುಣ್ಯಮೆನುತುಂ ಗಡ! ಬಾಲ್ಯದೆ ಪೋಗೆ ಖೇದಮೈ!

ನೋವಿದು ಪುಟ್ಟಿದಾಗಳಿರದಾದೊಡೆ ಪಾರಲದೆಂತು ಶಕ್ಯಮೈ

ತೀವಿದ ಲೋಕದೊಳ್ ಜನನಿಗಂ ಸರಿಸಾಟಿಯೆನಿಪ್ಪರಾರೊಳರ್ ॥೪೨॥

(ಎಲ್ಲರೂ ತಮ್ಮ ಜೀವನದ ಕೊನೆಯ ವರೆಗೂ ತಾಯಿಯ ಪ್ರೀತಿ ಇದೆ ಎಂದಾದರೆ ತಾವೇ ಪುಣ್ಯಶಾಲಿಗಳು ಎಂದು ಭಾವಿಸುತ್ತಾರಲ್ಲವೇ! ಬಾಲ್ಯದಲ್ಲೇ ಹೋದರೆ ದುಃಖವೇ ಸರಿ. ಹುಟ್ಟಿದಾಗಳೇ ಇಲ್ಲ ಎಂದರೆ ಎಷ್ಟೊಂದು ನೋವಲ್ಲವೇ! ನೋಡುವುದಕ್ಕೆ ಹೇಗೆ ಸಾಧ್ಯ! ತುಂಬಿಕೊಂಡಿರುವ ಲೋಕದಲ್ಲಿ ತಾಯಿಗೆ ಯಾರು ತಾನೇ ಸಾಟಿಯಾಗುತ್ತಾರೆ!)


ಪಟ್ಟಮನಿತ್ತೊಡೆಂತು ಬಹುಶಕ್ತಿಯುಮಿರ್ದೊಡಮೆಂತು ಲೋಕದೊಳ್

ಗಟ್ಟಿಗನಾದೊಡೆಂತು ಚಿರಜೀವನಮಿರ್ದೊಡಮೆಂತು ವಿತ್ತಮಂ

ಕಟ್ಟುತುಮಿಟ್ಟೊಡೆಂತು ಘನಸಿದ್ಧಿಯುಮಿರ್ದೊಡಮೆಂತು ತನ್ನವರ್

ಗೊಟ್ಟಿಯೊಳಿಲ್ಲದಿರ್ದೊಡನಿದೆಲ್ಲಮುಮಪ್ಪುದು ತುಚ್ಛಮೇ ವಲಂ ॥೪೩॥

(ದೊಡ್ಡ ಅಧಿಕಾರದ ಪಟ್ಟವಿದ್ದರೇನು, ಬಹಳ ಶಕ್ತಿಯಿದ್ದರೇನು, ಲೋಕದಲ್ಲಿ ಗಟ್ಟಿಗನಾದರೇನು, ಚಿರಂಜೀವಿಯಾದರೂ ಏನು, ಧನವನ್ನು ಗಂಟುಕಟ್ಟಿಟ್ಟರೇನು, ದೊಡ್ಡ ಸಿದ್ಧಿಗಳಿದ್ದರೇನು! ತನ್ನವರು ಎಂಬವರು ಜೊತೆಯಲ್ಲಿ ಇಲ್ಲದಿದ್ದರೇ ಇದೆಲ್ಲವೂ ತುಚ್ಛವೇ ಆಗುತ್ತವೆಯಲ್ಲವೇ!)


ವ॥ಅಂತೆನಿಸೆ ಗರುತ್ಮಂತಂ ಬಹುಖೇದದಿಂ ತನ್ನವರಂ ಪಂಬಲಿಸುತೊರ್ಮೆಗಂ ಕ್ರೇಂಕಾರಮಂ ಗೆಯ್ದೊಡಂ

(ಹೀಗೆನ್ನಿಸಿ, ಗರುತ್ಮಂತನೂ ಬಹಳ ಖೇದದಿಂದ ತನ್ನವತನ್ನು ಹಂಬಲಿಸಿ ಒಮ್ಮೆ ಕ್ರೇಂಕಾರವನ್ನು ಮಾಡಲು-)


ಕಂ॥ಮುನಿಪಂ ತಂದೆಯೆ ಬಂದಂ

ವಿನತೆಯೆ ತಾನಿರ್ಪ ತಾಣಮಂ ಮೇಣ್ ಪೇೞ್ದಂ

ಘನತರಬಲಯುತಪಕ್ಷಿಯೆ

ತನೂಜನಾಗಿರ್ಪನೆಂದು ಮುದಮಂ ತಾಳ್ದಂ ॥೪೪॥

(ಮುನೀಂದ್ರನಾದ ಕಶ್ಯಪನು ಬಂದನು. ವಿನತೆಯು ಇರುವ ತಾಣವನ್ನೂ ಹೇಳಿದನು. ಬಲಶಾಲಿಯಾದ ಪಕ್ಷಿಯೇ ತನಗೆ ಮಗನಾಗಿದ್ದಾನೆ ಎಂದು ಸಂತೋಷವನ್ನೂ ತಳದೆನು.)


(ಮುಂದಿನ ಸಂಚಿಕೆಯಲ್ಲಿ ಗರುಡನು ತಾಯಿಯನ್ನು ಕಂಡು ಅವಳ ಜೊತೆಯಲ್ಲಿ ಕದ್ರುವಿನ ಹಾಗೂ ಅವಳ ಮಕ್ಕಳ ಸೇವೆಯನ್ನು ಮಾಡುತ್ತ ಇರುವುದು)

ಮಂಗಳವಾರ, ಸೆಪ್ಟೆಂಬರ್ 8, 2020

ವೈನತೇಯವಿಜಯಂ- ಗರುಡನ ಕಥೆ-೫

(ಸೂತಪುರಾಣಿಕರು ಕಥೆಯನ್ನು ಮುಂದುವರೆಸಿ ಹೇಳುವುದು. ಕದ್ರೂವಿನತೆಯರು ಸಮುದ್ರವನ್ನು ಕಾಣುವುದು. ಸಮುದ್ರದ ವರ್ಣನೆ, ಉಚ್ಚೈಶ್ರವಸ್ಸಿನ ದರ್ಶನ)

 ॥ದ್ವಿತೀಯಾಶ್ವಾಸಂ॥

ಕಂ॥ ಕಥನಕುತೂಹಲಚಿತ್ತೋ

ನ್ಮಥಿತರಸಜ್ಞದ್ವಿರೇಫನಿಕುರುಂಬವರ-

ಪ್ರಥಿತಸುಮಾತ್ತಮರಂದಂ

ಕಥಿಸಲ್ ತಗುಳ್ದಂ ನೆಗೞ್ದ ಸೂತಂ ಬೞಿಕಂ॥೧॥

(ಟೀ-ಕಥನಕುತೂಹಲಚಿತ್ತೋನ್ಮಥಿತರಸಜ್ಞದ್ವಿರೇಫನಿಕುರುಂಬವರಪ್ರಥಿತಸುಮಾತ್ತಮರಂದಂ-(ಕಥನ-ಕುತೂಹಲ-ಚಿತ್ತ+ಉನ್ಮಥಿತ-ರಸಜ್ಞ-ದ್ವಿರೇಫ-ನಿಕುರುಂಬ-ವರ-ಪ್ರಥಿತ-ಸುಮ+ಆತ್ತ-ಮರಂದಂ)ಕಥೆಯನ್ನು ಹೇಳುವುದರಿಂದ ಉಂಟಾದ ಕುತೂಹಲವುಳ್ಳ ಮನಸ್ಸನ್ನು ಕಡೆಯುವುದರ ಮೂಲಕ ಹುಟ್ಟಿದ ರಸವನ್ನು ತಿಳಿದ ದುಂಬಿಗಳ ಗುಂಪಿನಲ್ಲಿ ಶ್ರೇಷ್ಠವಾಗಿ ಪ್ರಸಿದ್ಧವಾದ ಹೂವಿನಿಂದ ಹೊಂದಿದ ಮಕರಂದದಂತಿರುವ, ನೆಗೞ್ದ-ಪ್ರಸಿದ್ಧನಾದ, ಸೂತಂ-ಸೂತನು (ಸೂತಪುರಾಣಿಕರು) ಕಥಿಸಲ್-ಕಥೆಯನ್ನು ಹೇಳಲು, ಬೞಿಕಂ-ಆಮೇಲೆ, ತಗುಳ್ದಂ-ತೊಡಗಿದನು, ಕಂದಪದ್ಯ

ಹಳಗನ್ನಡದಲ್ಲಿ ಹಾಗೂ ಸಂಸ್ಕೃತದಲ್ಲಿ ಹಲವು ಕಾವ್ಯಗಳಲ್ಲಿ ಪ್ರತಿಯೊಂದೂ ಆಶ್ವಾಸದ ಆರಂಭದಲ್ಲಿ ಶ್ರೀಕಾರದಿಂದ, ಅಥವಾ ಕಥಾನಾಯಕನ ಸ್ತುತಿಯಿಂದ ಪ್ರಾರಂಭವಾಗುವ ರೂಢಿಯಿದೆ. ಪ್ರಸ್ತುತ ಕಾವ್ಯದಲ್ಲಿ ಅಂತಹ ಯಾವ ಪದ್ಧತಿಯನ್ನೂ ಅನುಸರಿಸಿಲ್ಲ. ಆದರೆ ಕುಮಾರವ್ಯಾಸನು "ಕೇಳು ಜನಮೇಜಯಧರಿತ್ರೀಪಾಲ.." ಎಂದು ವೈಶಂಪಾಯನನು ಕಥೆಯನ್ನು ಹೇಳುವಂತೆ ಆರಂಭಿಸುವುದನ್ನು ಅನುಕರಿಸುವಂತೆಯೇ, ಉಳಿದ ಆಶ್ವಾಸಗಳ ಆರಂಭದಲ್ಲಿ ಕಥೆಯನ್ನು ಹೇಳುತ್ತಿರುವ ಸೂತಪುರಾಣಿಕರು ಮುಂದೆ ಹೇಳುತ್ತಿರುವಂತೆ ಉಲ್ಲೇಖಿಸಿ ಕಥೆಯನ್ನು ಮುಂದುವರೆಸಲಾಗಿದೆ.)


ವ॥ಅಂತು ಕಥಾನಕಮಂ ಮುಂದೆ ಪೇೞುತ್ತುಂ ಕದ್ರುವುಂ ವಿನತೆಯುಂ ಉಚ್ಚೈಶ್ರವಸ್ಸಂ ನೋಡಲ್ಕೆ ಪೋದುದಂ ಬಣ್ಣಿಸುತ್ತೆ-

(ಅಂತು-ಹೀಗೆ, ಕಥಾನಕಮಂ-ಕಥೆಯನ್ನು, ಮುಂದೆ-ಮುಂದಿನ ಭಾಗವನ್ನು, ಪೇೞುತ್ತುಂ-ಹೇಳುತ್ತಾ, ಕದ್ರುವುಂ-ಕದ್ರುವೂ. ವಿನತೆಯುಂ-ವಿನತೆಯೂ, ಉಚ್ಚೈಶ್ರವಸ್ಸಂ-ಉಚ್ಚೈಶ್ರವಸ್ಸನ್ನು, ನೋಡಲ್ಕೆ-ನೋಡಲು/ನೋಡುವುದಕ್ಕೋಸ್ಕರ, ಪೋದುದಂ-ಹೋದದ್ದನ್ನು, ಬಣ್ಣಿಸುತ್ತೆ-ವರ್ಣಿಸುತ್ತಾ-)


ಕಂ॥ ವಿನತೆಯೆ ಪಿಂತಾದೆಲ್ಲಮು

ಮೆನಿತೋ ಸಯ್ಪಿಂದೆ ಸಂದುದೆಂದೆನುತಾಗಳ್

ಮನದೊಳ್ ಚಿಂತಿಸುತಿರ್ದೊಡೆ

ತನಗೇ ಜಯಮೆಂದು ಮತ್ತೆ ನಸುನಗುತಿರ್ದಳ್ ॥೨॥

(ಟೀ- ವಿನತೆಯೆ-ವಿನತೆಯು, ಪಿಂತೆ-ಹಿಂದೆ, ಆದ-ಆದ, ಎಲ್ಲಮುಂ-ಎಲ್ಲವೂ, ಎನಿತೋ-ಹೇಗೋ, ಸಯ್ಪಿಂದೆ-ಪುಣ್ಯದಿಂದ, ಸಂದುದು-ಆಗಿದೆ, ಎಂದೆನುತೆ-ಎಂದುಕೊಳ್ಳುತ್ತ, ಆಗಳ್-ಆಗ, ಮನದೊಳ್-ಮನಸ್ಸಿನಲ್ಲಿ, ಚಿಂತಿಸುತೆ-ಚಿಂತಿಸುತ್ತ, ಇರ್ದೊಡೆ-ಇದ್ದಿರಲು, ತನಗೇ-ತನಗೇ, ಜಯಂ-ಗೆಲುವು, ಎಂದು-ಎಂದುಕೊಳ್ಳುತ್ತ, ಮತ್ತೆ-ಮತ್ತೆ, ನಸುನಗುತಿರ್ದಳ್-ನಸುನಗುತ್ತ ಇದ್ದಳು. ಕಂದಪದ್ಯ)


ವ.ತಿ॥

ಆಪಃಪ್ರಜಾತಘನವೀಚಿಯೆ ಲಕ್ಷ್ಮಿಯೇ ಮೇಣ್

ಸೈಪಿಂದೆ ಚಂದ್ರಮನೆ ವಾರುಣಿಯೇ ವಲಕ್ಷಂ

ಲೋಪಂ ಗಡೆಂತು ಹಯದೊಳ್! ಸಲೆ ಕದ್ರುವೀಗಳ್

ಕೂಪಕ್ಕೆ ರಾತ್ರಿಯೊಳೆ ಕಂಡು ಪಗಲ್ ಜಗುಳ್ದಳ್ ॥೩॥

(ಟೀ-ಆಪಃ-ಪ್ರಜಾತ-ಘನ-ವೀಚಿಯೆ- ನೀರಿನಿಂದ ಉಂಟಾದ ದೊಡ್ಡ ಅಲೆಗಳೇ, ಲಕ್ಷ್ಮಿಯೇ-ಸಂಪತ್ತಿನ ದೇವತೆಯಾದ ಲಕ್ಷ್ಮಿಯೇ, ಮೇಣ್-ಅಥವಾ, ಸೈಪಿಂದೆ-ಪುಣ್ಯದಿಂದ, ಚಂದ್ರಮನೆ-ಚಂದ್ರನೇ, ವಾರುಣಿಯೇ-ವಾರುಣಿಯೆಂಬ ಸುರೆಯೇ(ಮದ್ಯವೇ) ವಲಕ್ಷಂ-ಬಿಳಿಯ ಬಣ್ಣದ್ದು. ಹಯದೊಳ್- ಕುದುರೆಯಲ್ಲಿ, ಲೋಪಂ-ಲೋಪವು/ತ್ರುಟಿಯು   ಎಂತು+ಗಡ-ಹೇಗೆ! ಸಲೆ-ಸಲ್ಲುತ್ತಿರಲು, ಕದ್ರುವು-ಕದ್ರುವು, ಈಗಳ್-ಈಗ, ರಾತ್ರಿಯೊಳೆ-ರಾತ್ರಿಯಲ್ಲಿ ಕಂಡು-ನೋಡಿಕೊಂಡು, ಪಗಲ್-ಹಗಲು, ಕೂಪಕ್ಕೆ-ಬಾವಿಗೆ, ಜಗುಳ್ದಳ್-ಬಿದ್ದಳು. ವಸಂತತಿಲಕಾವೃತ್ತ.

ಸಮುದ್ರದಲ್ಲಿ ಹುಟ್ಟಿರುವ ಅಲೆಯಾಗಲೀ, ವಾರುಣಿಯಾಗಲೀ ಲಕ್ಷ್ಮಿಯಾಗಲೀ ಅಥವಾ ಚಂದ್ರಮನೇ ಆಗಲಿ, ಎಲ್ಲವೂ ಬೆಳ್ಳಗಿರುವಾಗ ಕುದುರೆಯಲ್ಲಿ ಲೋಪವಾಗುವುದಕ್ಕೆ ಹೇಗೆ ಸಾಧ್ಯ! ಕದ್ರುವು ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೊತ್ತು ಬಿದ್ದಳು. ಎಂದು ವಿನತೆಯ ಆಲೋಚನೆಯ ಈ ಪದ್ಯವು ಸಮಸ್ಯಾಪೂರಣದ ರೀತಿಯಲ್ಲಿ ಮಾಡಲ್ಪಟ್ಟಿದೆ. ಈ ಕೊನೆಯ ಪಾದವೂ ಕೂಡ ಹಿಂದೊಮ್ಮೆ ಪದ್ಯಪಾನದ ಆಶುಕವಿತಾಗೋಷ್ಠಿಯಲ್ಲಿ ಕೊಟ್ಟ ಸಮಸ್ಯೆಯ ಪಾದವೇ ಆಗಿದೆ)


ಸ್ವೋಪಜ್ಞದಿಂ ಧವಳವರ್ಣಮನಾಂತ ಕ್ಷೀರಾ-

ಕೂಪಾರಜಾತಮಹಿತಪ್ರಥಿತಂ ಸಿತಾಂಗಂ

ಲೋಪಕ್ಕೆ ಸಲ್ವುದೆನಿತಾ ಹಯಮಿಂತು ನೋಡಲ್

ಕೂಪಕ್ಕೆ ರಾತ್ರಿಯೊಳೆ ಕಂಡು ಪಗಲ್ ಜಗುಳ್ದಳ್ ॥೪॥

(ಟೀ-ಸ್ವೋಪಜ್ಞದಿಂ-ಸ್ವೋಪಜ್ಞವಾಗಿ/ಸ್ವತಃ ತಾನಾಗಿಯೇ,  ಧವಳವರ್ಣಮನಾಂತ- ಬಿಳಿಯಬಣ್ಣವನ್ನು ಹೊಂದಿದ, ಕ್ಷೀರಾಕೂಪಾರಜಾತಮಹಿತಪ್ರಥಿತಂ (ಕ್ಷೀರ+ಅಕೂಪಾರ-ಜಾತ-ಮಹಿತ-ಪ್ರಥಿತಂ) ಕ್ಷೀರಸಾಗರದಿಂದ ಹುಟ್ಟಿದ ಮಹಾತ್ಮೆಯನ್ನುಳ್ಳ ಪ್ರಸಿದ್ಧವಾದ, ಸಿತಾಂಗಂ (ಸಿತ+ಅಂಗಂ)-ಬಿಳಿಯ ಮೈಯುಳ್ಳ,  ಆ ಹಯಂ- ಆ ಕುದುರೆಯು, ಇಂತು-ಹೀಗೆ, ನೋಡಲ್-ನೋಡಿದರೆ, ಲೋಪಕ್ಕೆ-ದೋಷಕ್ಕೆ, ಎನಿತು-ಹೇಗೆ, ಸಲ್ವುದು-ಸಲ್ಲುತ್ತದೆ, ರಾತ್ರಿಯೊಳೆ-ರಾತ್ರಿಯಲ್ಲಿ ಕಂಡು-ನೋಡಿಕೊಂಡು, ಪಗಲ್-ಹಗಲು, ಕೂಪಕ್ಕೆ-ಬಾವಿಗೆ, ಜಗುಳ್ದಳ್-ಬಿದ್ದಳು. ವಸಂತತಿಲಕಾವೃತ್ತ.

ಸ್ವಭಾವತಃ ಬಿಳಿಯದಾದ ಕ್ಷೀರಸಾಗರಲ್ಲಿ ಹುಟ್ಟಿದ ಈ ಕುದುರೆಯೂ ಬೆಳ್ಳಗಿರಲೇಬೇಕು, ಹಾಗಾಗಿ ಕದ್ರುವು ಇರುಳು ಕಂಡ ಬಾವಿಗೆ ಹಗಲು ಬಿದ್ದ ಹಾಗಾಯ್ತು- ಎಂದು ತಾತ್ಪರ್ಯ, ಇದೂ ಕೂಡ ಹಿಂದಿನ ಪದ್ಯದ ಮುಂದುವರೆದ ಕಲ್ಪನೆಯೇ ಆಗಿದೆ)


ವ.ಕ॥ ನಲವಿಂದೆ ನೋಡುವೊಡೆ ವಾಜಿಯ ಮೆಯ್ಯೆ ಬೆಳ್ಪಿಂ

ಸಲಲಂತು ಗೆಲ್ವೆನೆನುತುಂ ಮಿಗೆ ತೋಷದಿಂದಂ

ಲಲಿತಾಂಗಿಯಾ ವಿನತೆ ಸಾಗುತುಮಿರ್ದಳಲ್ತೇ

ಬಲವತ್ತರಂ ವಿಧಿಯದೆಂಬುದನಾರೊ ಬಲ್ಲರ್! ॥೫॥

(ಟೀ-ನಲವಿಂದೆ-ಸಂತೋಷದಿಂದ, ನೋಡುವೊಡೆ-ನೋಡುತ್ತಿರಲು, ವಾಜಿಯ-ಕುದುರೆಯ, ಮೆಯ್ಯೆ-ಶರೀರವೇ, ಬೆಳ್ಪಿಂ-ಬಿಳಿಯ ಬಣ್ಣದಿಂದ, ಸಲಲ್-ಸಲ್ಲುತ್ತಿರಲು, ಅಂತು-ಹಾಗೆ, ಗೆಲ್ವೆಂ-ಗೆಲ್ಲುತ್ತೇನೆ, ಎನುತುಂ-ಎಂದುಕೊಳ್ಳುತ್ತಾ, ಮಿಗೆ-ಅತಿಶಯವಾಗಿ, ತೋಷದಿಂದಂ-ಆನಂದದಿಂದ, ಲಲಿತಾಂಗಿಯು- ಕೋಮಲಾಂಗಿಯಾದ, ಆ ವಿನತೆ-ವಿನತೆಯು, ಸಾಗುತುಂ-ಹೋಗುತ್ತಾ ಇರ್ದಳಲ್ತೇ-ಇದ್ದಳಲ್ಲವೇ, ಅದು ವಿಧಿಯು- ಆ ನಿಯತಿಯು,  ಬಲವತ್ತರಂ-ಶಕ್ತಿಶಾಲಿಯು, ಎಂಬುದಂ- ಎನ್ನುವುದನ್ನು, ಆರೊ-ಯಾರೋ ಬಲ್ಲರ್-ತಿಳಿದವರು!

ವಸಂತಕಲಿಕಾವೃತ್ತ,(ನನಗೆ ತಿಳಿದಂತೆ ಈ ವೃತ್ತವನ್ನು ವಿದ್ವನ್ಮಿತ್ರರಾದ ರಾಮಕೃಷ್ಣಪೆಜತ್ತಾಯರು ಮೊದಲ ಬಾರಿಗೆ ಪದ್ಯಪಾನ ಜಾಲತಾಣದಲ್ಲಿ ಬಳಸಿದ್ದರು. ಅದಕ್ಕೆ ಶತಾವಧಾನಿ ಡಾ.ಆರ್. ಗಣೇಶರು ವಸಂತಕಲಿಕಾವೃತ್ತವೆಂದು ನಾಮಕರಣ ಮಾಡಿದರು. ವಸಂತತಿಲಕದ ಮೊದಲ ಒಂದು ಗುರು ಅಕ್ಷರದ ಬದಲಿಗೆ ಇದರಲ್ಲಿ ಎರಡು ಲಘುಗಳು ಬರುತ್ತವೆ.) ಮುಂದೆ ಆಗುವುದರ ಕಲ್ಪನೆಯಿಲ್ಲದೇ ವಿನತೆಯು ಬಹಳ ಸಂತೋಷದಿಂದ ಹೋಗುತ್ತಿದ್ದಳು. ವಿಧಿಯು ಎಲ್ಲಕ್ಕಿಂತ  ಹೆಚ್ಚು ಶಕ್ತಿಶಾಲಿ ಎಂಬುದನ್ನು ಯಾರು ತಾನೇ ಬಲ್ಲರು- ಎಂಬಲ್ಲಿ ಅರ್ಥಾಂತರನ್ಯಾಸಾಲಂಕಾರದ ಸ್ಪರ್ಶವಿದೆ)


ವ॥ ಅಂತು ಪೋಗುತ್ತುಂ ಮುಂದೆ ಸಾಗಿರೆ ಉಲ್ಲೋಲಕಲ್ಲೋಲವಿಲಾಸವಿಭ್ರಮದಿಂ ಕೂಡಿರ್ಪ ಸಮುದ್ರಮಂ ಕಂಡರ್- ಅದೆಂತಿರ್ದುದೆನೆ

(ಅಂತು-ಹೀಗೆ, ಪೋಗುತ್ತುಂ-ಹೋಗುತ್ತಾ, ಮುಂದೆ-ಮುಂದೆ, ಸಾಗಿರೆ-ಸಾಗಿರಲು, ಉಲ್ಲೋಲಕಲ್ಲೋಲವಿಲಾಸವಿಭ್ರಮದಿಂ-ಉಲ್ಲೋಲಕಲ್ಲೋಲವಾದ ವಿಲಾಸದ ವಿಭ್ರಮದಿಂದ (ಅಲೆಗಳು ಉಕ್ಕೇರುವುದರ ವಿಲಾಸದಿಂದ ಬೆಡಗಿನಿಂದ) ಕೂಡಿರ್ಪ-ಕೂಡಿರುವ, ಸಮುದ್ರಮಂ-ಸಮುದ್ರವನ್ನು, ಕಂಡರ್-ನೋಡಿದರು, ಅದೆಂತು-ಅದು ಹೇಗೆ ಇರ್ದುದೆನೆ-ಇದ್ದಿತ್ತು ಎನ್ನುವುದಾದರೆ-)


#ಸಮುದ್ರವರ್ಣನೆ#


ಮಾಲಿನಿ॥ ಒಳಗೊಳಗೆ ನೆಗೞ್ವಾವರ್ತದಿಂ ಮೇಲೆ ತೋರ್ವಾ

ಅಲೆಗಳೊಳಗೆ ಚಂಚದ್ರೋಚಿಯಿಂದಂತರಂಗಂ

ಸುಲಲಿತಮೆನಿಸಿರ್ದುಂ ಗೂಢಮಾಗಿಂತು ಕಾಣ್ಗುಂ

ಲಲನೆಯ ಮತಿಯಂದಂ ರೌದ್ರಮುದ್ರಂ ಸಮುದ್ರಂ॥೬॥

(ಟೀ- ಒಳಗೊಳಗೆ (ಒಳಗೆ+ಒಳಗೆ)-ಒಳಗೊಳಗೇ/ಅಂತರಂಗದಲ್ಲೇ,  ನೆಗೞ್ವ-ಹುಟ್ಟಿಕೊಳ್ಳುವ/ಮೇಲೇಳುವ, ಆವರ್ತದಿಂ-ಸುಳಿಗಳಿಂದ, ಮೇಲೆ-ಮೇಲುಗಡೆ, ತೋರ್ವಾ-ತೋರುವ/ಕಾಣಿಸಿಕೊಳ್ಳುವ, ಅಲೆಗಳೊಳಗೆ-ಅಲೆಗಳಲ್ಲಿ/ತರಂಗಗಳಲ್ಲಿ, ಚಂಚದ್ರೋಚಿಯಿಂದ(ಚಂಚತ್+ರೋಚಿ)-ಚಂಚಲವಾದ ರುಚಿ/ಕಾಂತಿಯಿಂದ, ಅಂತರಂಗಂ-ಅಂತರಂಗವು/ಒಳಗು/ಮನಸ್ಸು, ಸುಲಲಿತಂ-ಸರಳವಾದದ್ದು/ಲಲಿತವಾದದ್ದು, ಎನಿಸಿರ್ದುಂ-ಎಂದೆನಿಸಿದ್ದರೂ, ಗೂಢಂ+ಆಗಿ-ರಹಸ್ಯವಾಗಿ ಇಂತು-ಹೀಗೆ, ಸಮುದ್ರಂ-ಸಮುದ್ರವು, ಲಲನೆಯ-ಹೆಣ್ಣಿನ, ಮತಿಯಂದಂ-ಮನಸ್ಸಿನಂತೆಯೇ, ರೌದ್ರಮುದ್ರಂ-ರುದ್ರತೆಯನ್ನು/ರೌದ್ರವನ್ನು ಮುದ್ರಿಸಿಕೊಂಡಿರುವುದಾಗಿ/ ಭಯಂಕರೂಪವನ್ನೇ ಅಡಗಿಸಿಕೊಂಡಿರುವುದಾಗಿ,  ಕಾಣ್ಗುಂ-ಕಾಣುತ್ತದೆ. ಮಾಲಿನೀವೃತ್ತ.

ಇಲ್ಲಿ ಹೆಣ್ಣಿನ ಮನಸ್ಸನ್ನು ಸಮುದ್ರಕ್ಕೆ ಹೋಲಿಸಿದೆ. "ರೌದ್ರಮುದ್ರಂ ಸಮುದ್ರಂ" ಎಂಬ ಪದಪುಂಜವು ಕನ್ನಡದ ಚಂಪೂಕವಿಗಳಲ್ಲಿ ಬಹುಪ್ರಸಿದ್ಧವಾದದ್ದೇ ಆಗಿದೆ. ಕಾವ್ಯಾರಂಭದಲ್ಲಿಯೇ ಷಡಕ್ಷರಿಯೇ ಮೊದಲಾದವರು ಸಮುದ್ರವನ್ನು ವರ್ಣಿಸುತ್ತಾ ಸ್ರಗ್ಧರಾಮಹಾಸ್ರಗ್ಧರಾ ವೃತ್ತಗಳಲ್ಲಿ ಈ ಪದಪುಂಜವನ್ನು ಬಳಸುವುದನ್ನು ಕಾಣಬಹುದು. ಇಲ್ಲಿಯೂ ಕೂಡ ಅವರ ಪದ್ಯಗಳಿಗಿಂತ ಕಲ್ಪನೆಯಲ್ಲಿಯೂ ಛಂದಸ್ಸಿನಲ್ಲಿಯೂ ಭಿನ್ನವಾಗಿ ಮಾಲಿನೀವೃತ್ತದಲ್ಲಿ ಅದೇ ಪದಪುಂಜವು ಬಳಸಲ್ಪಟ್ಟಿದೆ)


ಶಾಲಿನಿ॥ ಪಾರಾವಾರಂ  ಪರ್ವದೊಳ್ ಲೋಗರಂ ಪೋ-

ಲ್ತೇರುತ್ತಾಡುತ್ತೇಗಳುಂ ಕಾಮಿಯಂದಂ

ಜಾರುತ್ತಿರ್ಕುಂ ಚಂಚಲಂ ಚೆಲ್ವಿನಿಂದಂ 

ಮಾರಾಂತಿರ್ಕುಂ ಬಾನ್ಗೆ ತಾಂ ಬಿಂಬದಂದಂ ॥೭॥

(ಟೀ- ಪಾರಾವಾರಂ-ಸಮುದ್ರವು, ಏಗಳುಂ-ಯಾವತ್ತೂ, ಪರ್ವದೊಳ್-ಹಬ್ಬದಲ್ಲಿ/ಪರ್ವಕಾಲದಲ್ಲಿ, ಲೋಗರಂ-ಜನರನ್ನು, ಪೋಲ್ತು-ಹೋಲುವಂತೆ, ಏರುತ್ತೆ-ಏರುತ್ತಾ, ಆಡುತ್ತೆ-ಆಡುತ್ತಾ,  ಕಾಮಿಯಂದಂ-ಕಾಮಿಗಳಂತೆ, ಚಂಚಲಂ-ಚಂಚಲವಾಗಿ, ಜಾರುತ್ತಿರ್ಕುಂ-ಜಾರುತ್ತಾ ಇದೆ, ಚೆಲ್ವಿನಿಂದಂ-ಚೆಲುವಿನಿಂದ/ಸೌಂದರರ್ಯದಿಂದ, ಬಾನ್ಗೆ-ಆಕಾಶಕ್ಕೆ, ತಾಂ-ತಾನು, ಬಿಂಬದಂದಂ-ಪ್ರತಿಬಿಂಬದಂತೆ, ಮಾರಾಂತಿರ್ಕುಂ-ಪ್ರತಿಸ್ಪರ್ಧಿಯಾಗಿದೆ/ಎದುರು ನಿಂತಿದೆ. ಶಾಲಿನೀವೃತ್ತ)


ಕಂ॥ ಸುರುಚಿರವಾರುಣಿಯಂ ತಾಂ

ಭರದಿಂದೀಂಟಿರ್ಪರಂತೆ ಪರಿಪರಿಯಿಂದಂ

ಪೊರಳಾಡುತೆ ಪುರುಳಿಲ್ಲದೆ

ನೊರೆಯಂ ಮೇಣುಗುಳಿದತ್ತು ನೋಡೆ ಸಮುದ್ರಂ ॥೮॥

(ಟೀ-ಸಮುದ್ರಂ-ಸಮುದ್ರವು, ನೋಡೆ-ನೋಡಲು,  ಸುರುಚಿರ-ವಾರುಣಿಯಂ-ಚೆನ್ನಾಗಿರುವ ಮದ್ಯವನ್ನು, ತಾಂ-ತಾನು, ಭರದಿಂದೆ-ಬೇಗದಲ್ಲಿ, ಈಂಟಿರ್ಪರಂತೆ-ಕುಡಿದಿರುವವರಂತೆ, ಪರಿಪರಿಯಿಂದಂ-ವಿಧವಿಧವಾಗಿ , ಪುರುಳಿಲ್ಲದೆ-ಅರ್ಥವಿಲ್ಲದೇ, ಪೊರಳಾಡುತೆ-ಹೊರಳಾಡುತ್ತ,  ನೊರೆಯಂ-ನೊರೆಯನ್ನು, ಮೇಣ್-ಮತ್ತೆ, ಉಗುಳಿದತ್ತು-ಉಗುಳುತ್ತಿತ್ತು. ಕಂದಪದ್ಯ)

ಸ್ರ॥ ಎನ್ನಿಂದಂ ಪುಟ್ಟಿತೆಲ್ಲಂ ಜಗದೆ ಮೆರವುದೀ ಬಲ್ಮೆವೆತ್ತಿರ್ಪ ಸಂಪ-

ತ್ತೆನ್ನಿಂದಂ ಚಂದ್ರನುಂ ವಾರುಣಿಯುಮಮೃತಮುಂ ವಾಜಿಯುಂ ಹಸ್ತಿಯುಂ ಮೇ

ಣೆನ್ನುತ್ತೇಗಳ್ ವಿಕತ್ಥಿಪ್ಪನೆ ಕುಣಿದಪನೈ ಕಾರಣಂ ಮಾಜುತಿರ್ಪಂ

ಮುನ್ನಂ ಮಂಥಾನದೊಳ್ ಮಂದರಗಿರಿಚಲಿತಕ್ಷೋಭೆಯಿರ್ಪಂ ಸಮುದ್ರಂ ॥೯॥

(ಟೀ-ಎನ್ನಿಂದಂ-ನನ್ನಿಂದಲೇ, ಜಗದೆ-ಜಗತ್ತಿನಲ್ಲಿ, ಮೆರವುದೀ-ಮೆರೆಯುತ್ತಿರುವ ಈ, ಬಲ್ಮೆವೆತ್ತಿರ್ಪ-ಬಲ್ಮೆಯನ್ನು ಹೊಂದಿರುವ/ಶಕ್ತವಾದ, ಸಂಪತ್ತು-ಲಕ್ಷ್ಮಿಯು/ಧನವು/ಐಶ್ವರ್ಯವು, ಎಲ್ಲಂ-ಎಲ್ಲವೂ, ಪುಟ್ಟಿತು-ಹುಟ್ಟಿತು,  ಎನ್ನಿಂದಂ-ನನ್ನಿಂದಲೇ, ಚಂದ್ರನುಂ-ಚಂದ್ರನೂ, ವಾರುಣಿಯುಂ-ವಾರುಣಿಯೆಂಬ ಮದ್ಯವೂ, ಅಮಮೃತಮುಂ-ಅಮೃತವೂ, ವಾಜಿಯುಂ-ಕುದುರೆಯೂ, ಹಸ್ತಿಯುಂ-ಆನೆಯೂ, ಮೇಣ್-ಮತ್ತೆ, (ಎಲ್ಲಂ ಪುಟ್ಟಿದವು-ಎಲ್ಲವೂ ಹುಟ್ಟಿದವು) ಎನ್ನುತ್ತೆ-ಎನ್ನುತ್ತಾ, ಏಗಳ್-ಯಾವಾವಗಳೂ, ವಿಕತ್ಥಿಪ್ಪನೆ-ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವವನು/ಬಡಾಯಿ ಕೊಚ್ಚಿಕೊಳ್ಳುವವನು,  ಕುಣಿದಪನೈ-ಕುಣಿಯುತ್ತಿದ್ದನು, ಮುನ್ನಂ-ಹಿಂದೆ, ಮಂಥಾನದೊಳ್-ಸಮುದ್ರಮಥನದಲ್ಲಿ/ಸಮುದ್ರವನ್ನು ಕಡೆದಾಗ, ಮಂದರಗಿರಿಚಲಿತಕ್ಷೋಭೆಯಿರ್ಪಂ-(ಕಡಗೋಲಾದ) ಮಂದರಗಿರಿಯು ಚಲಿಸುವಾಗ ಉಂಟಾಗಿರುವ ಕ್ಷೋಭೆ/ಚಂಚಲತೆ ಇರುವಂತಹವನು, ಸಮುದ್ರಂ-ಸಮುದ್ರನು, ಕಾರಣಂ-ನಿಜವಾದ ಕಾರಣವನ್ನು, ಮಾಜುತಿರ್ಪಂ-ಮರೆಮಾಚುತ್ತಿದ್ದಾನೆ. ಸ್ರಗ್ಧರಾ ವೃತ್ತ.

ತನ್ನಿಂದಲೇ ಚಂದ್ರನೂ, ಸಂಪತ್ತೂ, ಅಮೃತವೂ, ಅಶ್ವಹಸ್ತಿಗಳೂ ಎಲ್ಲವೂ ಹುಟ್ಟಿದವು ಎಂದು ಬಡಾಯಿಕೊಚ್ಚಿಕೊಳ್ಳುತ್ತ ಕುಣಿಯುತ್ತಿದ್ದಾನೆ ಈ ಸಮುದ್ರ, ಆದರೆ ನಿಜವಾದ ಕಾರಣ ಮಂದರಪರ್ವತ ಸಮುದ್ರವನ್ನು ಕಡೆಯುವಾಗ ಆದ ಕಲ್ಲೋಲದಿಂದ ಅವನು ಹಾಗೆ ಉಕ್ಕೇರುತ್ತಿರುವುದಷ್ಟೇ, ಅದನ್ನು ಅವನು ಮರೆಮಾಚುತ್ತಿದ್ದಾನೆ ಎಂದು ಪದ್ಯದ ತಾತ್ಪರ್ಯ.)


ರಗಳೆ॥

ತುಂಬಿ ಬರ್ಪ ತೊರೆಗಳಿಂ ನೆಗೞ್ದು ಮೊರೆವ ನೀರ್ಗಳಿಂ

ಪಲವು ಕಾಡ ಪೊಳೆಗಳಿಂ ವಿಶಾಲಮಾದ ನದಿಗಳಿಂ

ತೇಲಿ ಬರ್ಪ ಕಾಯ್ಗಳಿಂ ಮುಳುಂಗಿ ಬರ್ಪ ಮೀನ್ಗಳಿಂ

ತಟದಿನೆಯ್ದ ಮಣ್ಗಳಿಂ ಜಗುಳ್ವ ತೋರ ಕಲ್ಗಳಿಂ

ಪರಿದು ಬೀಳ್ವ ಲತೆಗಳಿಂ ಸಮೂಲಮಾದ ಮರಗಳಿಂ

ಒಡೆಯನಿರದ ಪೆಣಗಳಿಂ ಮಲರ್ದ ಚೆಲ್ವ ಪೂಗಳಿಂ

ಮೆಯ್ಯ ತುಂಬಿಕೊಳ್ಳುತುಂ ಗಭೀರಮಾಗಿ ಬೀಗುತುಂ

ತೆರೆಗಳಿಂದೆ ಮುಚ್ಚುತುಂ ಪ್ರಶಾಂತತೆಯನೆ ಕೊಲ್ಲುತುಂ

ಜಗದ ಜಡಮನೆಲ್ಲಮಂ ಸಮಸ್ತಜೀವನಿಚಯಮಂ

ತಡೆಯೆವರ್ಪ ಬನ್ನಮಂ ಕರಂಗಿಸುತ್ತೆ ಸರ್ವಮಂ

ನುಂಗಿ ನೊಣೆವ ಪಾಂಗಿನಿಂ ಭಯಂಗೊಳಿಪ್ಪ ಕೂಗಿನಿಂ

ಮೆರೆದುದಲ್ಲಿ ಬಲ್ಮೆಯಿಂ ಸಮುದ್ರಮೆಂಬ ಖ್ಯಾತಿಯಿಂ ॥೧೦॥

(ಟೀ-ತುಂಬಿಕೊಂಡು ಬರುವ ಹಳ್ಳಗಳಿಂದ, ಹೆಚ್ಚಾಗಿ ಶಬ್ದಮಾಡುತ್ತಿರುವ ನೀರುಗಳಿಂದ, ಹಲವಾರು ಕಾಡಿನ ಹೊಳೆಗಳಿಂದ, ವಿಶಾಲವಾದ ನದಿಗಳಿಂದ, ತೇಲಿಕೊಂಡು ಬರುವ ಕಾಯಿಗಳಿಂದ(ತೆಂಗು ಮೊದಲಾದ ಕಾಯಿಗಳು ಸಮುದ್ರಕ್ಕೆ ಸೇರಿಕೊಂಡು ತೇಲುತ್ತಿರುವುದು) ಮುಳುಗಿಕೊಂಡು ಬರುವ ಮೀನುಗಳಿಂದ, ದಡದಿಂದ ಕೊಚ್ಚಿಕೊಂಡು ಬರುವ ಮಣ್ಣುಗಳಿಂದ, ಜಾರಿ ಬರುತ್ತಿರುವ ಕಲ್ಲುಗಳಿಂದ, ಹರಿದು ಬೀಳುವ ಬಳ್ಳಿಗಳಿಂದ, ಬೇರಿನಿಂದ ಕೂಡಿಕೊಂಡೇ ಬರುವ ಮರಗಳಿಂದ, ಅನಾಥವಾದ ಶವಗಳಿಂದ, ಅರಳಿಕೊಂಡು ಬರುವ ಚೆಲುವಾದ ಹೂವುಗಳಿಂದ ತನ್ನ ಮೈಯನ್ನು ತುಂಬಿಕೊಳ್ಳುತ್ತಾ, ಆಳವಾಗುತ್ತ ಬೀಗುತ್ತಾ, ಅಲೆಗಳಿಂದ ಅವನ್ನೆಲ್ಲವನ್ನೂ ಮುಚ್ಚುತ್ತಾ, ಶಾಂತತೆಯನ್ನು ಕೊಲ್ಲುತ್ತಾ,ಜಗತ್ತಿನ ಎಲ್ಲ ಜಡವನ್ನೂ(ನೀರನ್ನೂ) ಸಮಸ್ತಜೀವಿಗಳ ಗುಂಪನ್ನೂ, ತಡೆಯಲು ಬರುವ ಕಷ್ಟವನ್ನೂ ಎಲ್ಲವನ್ನೂ ಕರಗಿಸುತ್ತಾ, ನುಂಗಿ ನೊಣೆಯುವ ಹಾಗೆಯೇ, ಭಯವನ್ನುಂಟು ಮಾಡುವ ಕೂಗಿನಿಂದ(ಮೊರೆತದಿಂದ) ಅಲ್ಲಿ ಸಮುದ್ರವೆಂಬ ಖ್ಯಾತಿಯನ್ನು ಹೊಂದಿರುವ ಇದು ಬಲ್ಮೆಯಿಂದ(ಹೆಚ್ಚುಗಾರಿಕೆಯಿಂದ) ಮೆರೆಯುತ್ತಿತ್ತು.

ಉತ್ಸಾಹಗತಿಯ ರಗಳೆ; ಸುಲಭವಾಗಿ ಅನ್ವಯವಾಗುವ ಕಾರಣ ಪದಪದಶಃ ಅರ್ಥವನ್ನು ವಿವರಿಸಿಲ್ಲ. ಈ ರೀತಿಯ ರಗಳೆಯಲ್ಲಿ ಪಂಪ-ನಾಗವರ್ಮ ಮೊದಲಾದ ಕವಿಗಳ ಕಾವ್ಯಗಳಲ್ಲಿ ಕೆಲವು ಕಡೆ ಅಂತ್ಯಪ್ರಾಸವು ಮಾತ್ರ ಕಾಣುತ್ತದೆ. ಅದನ್ನೇ ಇಲ್ಲೂ ಅನುಸರಿಸಿದೆ. ರಗಳೆಯ ಕವಿಯೆಂದೇ ಪ್ರಸಿದ್ಧವಾದ ಹರಿಹರನೇ ಮೊದಲಾದ ಕೆಲವು ಕವಿಗಳಲ್ಲಿ ಆದಿಪ್ರಾಸವೂ ಅಂತ್ಯಪ್ರಾಸವೂ ಇರುವುದನ್ನೂ ಕಾಣಬಹುದು.)


ಬಡಬಾಗ್ನಿಯಡಿಗಿರಲ್ ಮೇಲೆ ವಿಸ್ತಾರದಿಂ

ನೀಲಗೋಲಕಮಾದ ಪಾತ್ರೆಯಂ ಚಂದದಿಂ

ಬೋನಮಂ ಬೇಯಿಸಲ್ಕಿಟ್ಟಂತೆ ತಾನಿಟ್ಟು

ಕುದಿಯಲ್ಕೆ ಮುನ್ನಮೊಳ್ನೀರನೇ ತುಂಬಿಟ್ಟು

ಬಹುವಿಧದ ಜೀವಿಗಳನದರೊಳ್ ಮುಳುಂಗಿಪಂ

ವಿಧಿಯೆಂಬ ಬಾಣಸಿಗನೆಲ್ಲರಂ ಕೊರಗಿಪಂ

ಉರ್ಕೇರೆ ತೆರೆಗಳುಂ ಸೊರ್ಕೇರೆ ಸಾಗರಂ

ಕಡೆಗಾಲಕೆಯ್ದಿರ್ಪ ರವಿಗೆ ತಾನಾಗರಂ

ರತ್ನಾಕರಂ ನಾನೆ ವಸುಧೆ ಮೇಣೆನ್ನಿಂದೆ

ಪಡೆದುದೆಲ್ಲಮನೆಂದು ಬೀಗುತಿರೆ ಮದದಿಂದೆ

ಚಂಡಮಾರುತಮತ್ತಣಿಂ ಬೀಸಿ ಬರುತಿರಲ್

ತೊಂಡಾಗಿ ಕನಲಿ ಪಡಿಯಾಗಿ ಪೋರುತ್ತಿರಲ್

ಬಾನೆತ್ತರಕೆ ಚಿಮ್ಮಿ ಪಾತಾಳದೆಡೆಗಿಳಿದು

ಸೋಲ್ತುದೆಂಬಂದದಿಂ ಪಟಪಟನೆ ಕೈಮುಗಿದು

ಪರಿಚರಿಸುತಿರ್ಪವೊಲ್ ತೆರೆಗಯ್ಯ ಬಿತ್ತರಿಸಿ

ಪೂಗಳಂ ಸುರಿವವೊಲ್ ನೊರೆಗಳಂ ಸಲೆ ಸೃಜಿಸಿ

ಪಿಂತೆೞ್ದುವಂದಲೆಗಳುಂ ತಲೆಯ ಬಾಗಿಸುತೆ

ಎರಗಿ ಮತ್ತೆಲ್ಲಮುಂ ಪಿಂದಕಡಿಗಳನಿಡುತೆ

ಸಾಗಿದಂದದೆ ಸಾಗರಂ ತೋರುತಿರ್ಪನೈ

ಬಲಶಾಲಿಗರಿಯಾಗದೆಯೆ ಬರ್ದುಂಕಿರ್ಪನೈ॥೧೧॥

(ಟೀ-ಸಮುದ್ರದ ಅಡಿಯಲ್ಲಿ ಬಡಬಾಗ್ನಿ ಇರಲು, ಮೇಲೆ ವಿಸ್ತಾರದಿಂದ ನೀಲವಾದ ಗೋಳವಾದ ಪಾತ್ರೆಯನ್ನು ಅನ್ನವನ್ನು ಬೇಯಿಸಲೋ ಎಂಬಂತೆ ಇಟ್ಟು, ಕುದಿಸುವುದಕ್ಕೋಸ್ಕರವಾಗಿ ಮೊದಲು ಒಳ್ಳೆಯ ನೀರನ್ನೇ ತುಂಬಿಸಿಟ್ಟು, ಬಹಳಷ್ಟು ವಿಧವಾದ ಜೀವಿಗಳನ್ನು ಅದರಲ್ಲಿ ಮುಳುಗಿಸಿ, ವಿಧಿ/ಬ್ರಹ್ಮ ಎಂಬಂತಹ ಬಾಣಸಿಗ ಎಲ್ಲರನ್ನೂ ಕೊರಗಿಸುತ್ತಿದ್ದಾನೆ. ತೆರೆಗಳು ಉಕ್ಕೇರುತ್ತಿರಲು, ಸಾಗರವು ಸೊಕ್ಕಿನಿಂದ ಏರುತ್ತಿರಲು, ತನ್ನ ಅಂತ್ಯಕಾಲಕ್ಕೆ ಬಂದಿರುವ(ಸಾಯುತ್ತಿರುವ) ಸೂರ್ಯನಿಗೆ ತಾನು ಆಗರವಾಗಿ, ಎಲ್ಲ ರತ್ನಗಳನ್ನೂ ತನ್ನೊಳಗೇ ಇಟ್ಟುಕೊಂಡಿದ್ದ ರತ್ನಾಕರನು ತಾನು, ಭೂಮಿ (=ವಸುಧೆ-ವಸು/ಸಂಪತ್ತನ್ನು ಧರಸಿದವಳು) ತನ್ನಿಂದಲೇ ಎಲ್ಲವನ್ನೂ ಪಡೆದುಕೊಂಡಿರುವುದು ಎಂದು ಮದದಿಂದ ಬೀಗುತ್ತಾ, ಚಂಡಮಾರುತವು ಒಂದು ಕಡೆಯಿಂದ ಬೀಸಿ ಬರುತ್ತಿರುವಾಗ, ಉಗ್ರವಾಗಿ, ಕೂಗಿಕೊಂಡು, ಅದಕ್ಕೆ ಪ್ರತಿಯಾಗಿ ಹೋರಾಡುತ್ತಿರಲು, ಆಕಾಶದೆತ್ತರಕ್ಕೆ ಚಿಮ್ಮಿ, ಪಾತಾಳದ ಆಳಕ್ಕೆ ಇಳಿದು, ಸೋತಿದ್ದೇನೆ ಎಂದು ಪಟಪಟನೆ ಕೈಮುಗಿಯುತ್ತಾ, ಸುತ್ತ ಓಡಾಡುತ್ತಿರುವಂತೆ, ತೆರೆಗಳೆಂಬ ಕೈಗಳನ್ನು ವಿಸ್ತಾರವಾಗಿ ಮಾಡಿ, ಹೂವುಗಳನ್ನು ಸುರಿಯುತ್ತಿರುವ ಹಾಗೆಯೇ, ನೊರೆಯನ್ನು ಸೃಷ್ಟಿಸಿ, ಹಿಂದೆ ಎದ್ದು ಬಂದ ಅಲೆಗಳೂ ತಲೆಯನ್ನು ಬಾಗಿಸುತ್ತಾ, ನಮಸ್ಕರಿಸುತ್ತಾ, ಮತ್ತೆ ಎಲ್ಲವೂ ಹಿಂದಕ್ಕೆ ಹಿಂದಕ್ಕೆ ಹಜ್ಜೆಯನ್ನು ಇಡುತ್ತಾ ಸಾಗುತ್ತಿರುವಂತೆ ಸಾಗರನು ತೋರುತ್ತಿದ್ದನು. ಬಲಶಾಲಿಗಳಿಗೆ ಶತ್ರುವಾಗದೆಯೇ ಬದುಕಿದ್ದನು.

ಲಲಿತರಗಳೆ ಎಂದು ಪ್ರಸಿದ್ಧವಾದ ಪಂಚಮಾತ್ರಾಗತಿಯ ರಗಳೆ)


ವ॥ಅಂತಿರೆ

(ಹಾಗಿರಲು)


ಕಂ॥ ಕಡಲಿನ ಮೊರೆತಮನಾಲಿಸು

ತಡಿಯಿಡುತುಂ ರಮ್ಯಮಾದ ದೃಶ್ಯಂಗಳನೇ

ಪಡಿಯಾಗಿ ತೋರ್ಪ ಪರಿಯಂ

ತಡಿಯಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೨॥

(ಟೀ- ಕಡಲಿನ-ಸಮುದ್ರದ, ಮೊರೆತಮಂ-ಶಬ್ದವನ್ನು, ಆಲಿಸುತೆ-ಕೇಳುತ್ತಾ, ಅಡಿಯಿಡುತುಂ-ಹಜ್ಜೆಯನ್ನು ಇಡುತ್ತಾ, ರಮ್ಯಮಾದ-ಸುಂದರವಾದ, ದೃಶ್ಯಂಗಳನೇ-ದೃಶ್ಯಗಳನ್ನು, ಪಡಿಯಾಗಿ-ಪ್ರತಿಯಾಗಿ, ತೋರ್ಪ-ತೋರುವ, ಪರಿಯಂ-ಪರಿಯನ್ನು/ವಿಧವನ್ನು, ತಡಿಯಿಂ-ದಡದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ)


ಅಸುರರ್ಗಾಶ್ರಯಮಿತ್ತಿಂ

ದು ಸುರರ್ಗಮರ್ದಿತ್ತನೀ ತಟಸ್ಥನೆನುತ್ತುಂ

ರಸಧಿಯ ತಟಸ್ಥರೆನೆ ಬೆ

ಕ್ಕಸದಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೩॥

(ಟೀ- ಅಸುರರ್ಗೆ-ರಾಕ್ಷಸರಿಗೆ, ಆಶ್ರಯಂ+ಇತ್ತು-ಆಶ್ರಯವನ್ನು ಕೊಟ್ಟು, ಇಂದು-ಇಂದು,  ಸುರರ್ಗೆ-ದೇವತೆಗಳಿಗೆ, ಈ ತಟಸ್ಥಂ-ಈ ತಟಸ್ಥನಾದ ಸಮುದ್ರನು (ಪಕ್ಷಪಾತವಿಲ್ಲದವನು) ಅಮರ್ದು+ಇತ್ತಂ-ಅಮೃತವನ್ನು ಕೊಟ್ಟನು,  ಎನುತ್ತುಂ-ಎನ್ನುತ್ತಾ, ರಸಧಿಯ-ಸಮುದ್ರದ, ತಟಸ್ಥರ್-ದಡದಲ್ಲಿರುವವರು, ಎನೆ-ಎನ್ನಲು, ಬೆಕ್ಕಸದಿಂ-ಆಶ್ಚರ್ಯದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ)


ಅಂದು ವರಾಹದ ಸದ್ರೂ

ಪಿಂದಂ ಹರಿಯಿಳೆಯ ತರ್ಪೊಡಾದುಲ್ಲೋಲಂ

ಸಂದುದು ನಿರುತಮೆನುತ್ತುಂ

ಚಂದದೆ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೪॥

(ಟೀ-ಅಂದು-ಆ ದಿನ, ವರಾಹದ-ವರಾಹಾವತಾರದಲ್ಲಿ, ಸದ್ರೂಪಿಂದಂ-ಒಳ್ಳೆಯ ರೂಪದಿಂದ, ಹರಿಯು-ಶ್ರೀಮನ್ನಾರಾಯಣನು, ಇಳೆಯ-ಭೂಮಿಯನ್ನು, ತರ್ಪೊಡೆ-ತರುವಾಗ, ಆದ- ಆಗಿರುವ, ಉಲ್ಲೋಲಂ-ಅಲೆಗಳು,ನಿರುತಂ-ಸದಾಕಾಲ, ಸಂದುದು-ಸಲ್ಲುತ್ತಿವೆ, ಎನುತ್ತುಂ-ಎನ್ನುತ್ತಾ, ಚಂದದೆ-ಚಂದದಿಂದ,ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ )


ತಳಮಂ ಕಾಂಬೆನೆನೆ ರಸಾ

ತಳಮಂ ಕಂಡಲ್ಲಿ ವಾರ್ಧಿಯಿರ್ಪುದೆನುತ್ತುಂ

ಬಲದಿಂದತ್ರಿಯೆನಲ್ ಪಂ

ಬಲದಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೫॥

(ಟೀ-ತಳಮಂ-(ಸಮುದ್ರದ)ತಳವನ್ನು/ಕೊನೆಯನ್ನು, ಕಾಂಬೆಂ+ಎನೆ-ನೋಡುತ್ತೇನೆ ಎಂದು, ರಸಾತಳಮಂ-ರಸಾತಳವನ್ನು, ಕಂಡು+ಅಲ್ಲಿ-ನೋಡಿ ಅಲ್ಲಿ, ವಾರ್ಧಿಯು-ಸಮುದ್ರವು, ಇರ್ಪುದು-ಇದೆ, ಎನುತ್ತುಂ-ಎನ್ನುತ್ತಾ, ಬಲದಿಂದೆ-ತನ್ನ ಬಲದಿಂದ/ಶಕ್ತಿಯಿಂದ, ಅತ್ರಿಯು-ಅತ್ರಿ ಮಹರ್ಷಿಯು, ಎನಲ್-ಹೇಳಲು, ಪಂಬಲದಿಂ-ಹಂಬಲದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ. "ತಳಮಂ...ರಸಾತಳಮಂ" ಎಂಬಲ್ಲಿ ಹಾಗೂ "ಬಲದಿಂ...ಪಂಬಲದಿಂ" ಎಂಬ ಲ್ಲಿ ಪಾದದ ಆದಿಯಲ್ಲಿ ಯಮಕಾಲಂಕಾರವಿದೆ. ಮುಂದಿನ ಮೂರು ಪದ್ಯಗಳಲ್ಲೂ ಈ ಯಮಕಪ್ರಭೇದವು ಬಳಸಲ್ಪಟ್ಟಿದೆ)


ನಡುಗಡ್ಡೆಗಳೋ ಮೆರೆವವು

ನಡುಗಲ್ಕಾಶ್ರಯಮನಾಂತ ಮೈನಾಕಮೊ ಸೋ

ಲ್ತಡಿಯಿಟ್ಟನೆಂದು ನುಡಿಯುತೆ 

ತಡಿಯಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೬॥

(ಟೀ-ಮೆರೆವವು-ಮೆರೆಯುತ್ತಿರುವವು, ನಡುಗಡ್ಡೆಗಳೋ-ದ್ವೀಪಗಳೋ, (ಅಥವಾ) ನಡುಗಲ್ಕೆ- ನಡುಗುತ್ತಿರಲು/ಕಂಪಿಸುತ್ತಿರಲು, ಆಶ್ರಯಮಂ+ಆಂತ-ಆಶ್ರಯವನ್ನು ಹೊಂದಿದ/ಮೊರೆಹೊಕ್ಕ, ಮೈನಾಕಮೊ-ಮೈನಾಕವೆಂಬ ಪರ್ವತವೋ, ಸೋಲ್ತು-ಸೋತು, ಅಡಿಯಿಟ್ಟಂ- ಕಾಲನ್ನು ಇಟ್ಟನು, ಎಂದು-ಹೀಗೆಂದು, ನುಡಿಯುತೆ-ಹೇಳುತ್ತಾ, ತಡಿಯಿಂ-ದಡದಿಂದ, ನೋಡುತ್ತೆ-ನೋಡುತ್ತ,ಇರ್ವರ್-ಇಬ್ಬರೂ, ಸತಿಯರ್-ಸತಿಯರು,ಬಂದರ್-ಬಂದರು. ಕಂದಪದ್ಯ. ನಡುಗಡ್ಡೆ.... ನಡುಗಲ್, ಸೋಲ್ತಡಿಯಿಟ್ಟ..ತಡಿಯಿಂ ಎಂಬಲ್ಲಿ ಯಮಕಾಲಂಕಾರವಿದೆ)


ನಗಮಂ ಮರೆಮಾಜಲ್ ತ-

ನ್ನಗಮಂ ಗುರುಸೇವೆಯಿಂದೆ ಕಳೆದಪೆನೆನುತಿ-

ಬ್ಬಗೆಯಿಂದಲೆಗೆಯ್ದಪನಂ

ಬಗೆಯಿಂದರಱಿಯುತ್ತೆ ಬಂದರಿರ್ವರ್ ಸತಿಯರ್ ॥೧೭॥

(ಟೀ-ನಗಮಂ-ಪರ್ವತವನ್ನು, ಮರೆಮಾಜಲ್-ಅಡಗಿಸಿಡಲು, ತನ್ನ-(ಸಮುದ್ರದ) ಅಗಮಂ-ಪಾಪವನ್ನು, ಗುರುಸೇವೆಯಿಂದೆ-ಹಿರಿಯರ ಸೇವೆಯಿಂದ, ಕಳೆದಪೆಂ-ಕಳೆದುಕೊಳ್ಳುತ್ತೇನೆ, ಎನುತೆ-ಎಂದುಕೊಳ್ಳುತ್ತಾ, ಇಬ್ಬಗೆಯಿಂದೆ- ಎರಡು ಮನಸ್ಸಿನಿಂದ, ಅಲೆಗೆಯ್ದಪನಂ- ಅಲೆಗಳನ್ನು ಉಂಟು ಮಾಡುತ್ತಿರುವವನನ್ನು, ಬಗೆಯಿಂದೆ-ಮನಸ್ಸಿನಿಂದ, ಅಱಿಯುತ್ತೆ-ತಿಳಿದುಕೊಳ್ಳುತ್ತ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ಬಂದರ್-ಬಂದರು. ಕಂದಪದ್ಯ. ನಗಮಂ.. ತನ್ನಗಮಂ.. ಇಬ್ಬಗೆಯಿಂ.. ಬಗೆಯಿಂ.. ಎಂಬಲ್ಲಿ ಯಮಕಾಲಂಕಾರವಿದೆ)


ಗಣಿಸಲ್ ವಿಚಿತ್ರರತ್ನದ

ಗಣಿ ಸಲ್ವಂ ವಾಹಿನೀಪನೀತನಮೂಲ್ಯಂ

ಮಣಿಯುತಗರ್ಭನೆನುತ್ತುಂ

ಮಣಿಯುತೆ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೮॥

(ಟೀ-ಗಣಿಸಲ್-ಲೆಕ್ಕ ಹಾಕಿದರೆ/ಆಲೋಚಿಸಿದರೆ, ವಿಚಿತ್ರರತ್ನದ-ಆಶ್ಚರ್ಯಜನಕವಾದ ರತ್ನಗಳ, ಗಣಿ-ಆಗರ/ಖನಿ,  ಸಲ್ವಂ-ಸಲ್ಲುತ್ತಿರುವ, ವಾಹಿನೀಪಂ-ನದಿಗಳ ಒಡೆಯನಾದ ಸಮುದ್ರನು, ಈತಂ-ಈತನು, ಅಮೂಲ್ಯಂ-ಅಮೂಲ್ಯನಾದವನು/ಬೆಲೆಕಟ್ಟಲಾಗದವನು/ಬಹಳ ಬೆಲೆಯುಳ್ಳವನು, ಮಣಿಯುತಗರ್ಭಂ-ರತ್ನಮಣಿಗಳಿಂದ ಕೂಡಿದ ಗರ್ಭವನ್ನು ಉಳ್ಳವನು (ಗರ್ಭದಲ್ಲಿ ಮುತ್ತು ರತ್ನಗಳನ್ನು ಹೊಂದಿರುವವನು) ಎನುತ್ತುಂ-ಎನ್ನುತ್ತಾ, ಮಣಿಯುತೆ-ಅವನಿಗೆ ನಮಸ್ಕರಿಸುತ್ತಾ, ನೋಡುತ್ತೆ-ನೋಡುತ್ತಾ ಇರ್ವರ್-ಇಬ್ಬರೂ, ಸತಿಯರ್-ಸತಿಯರು, ಬಂದರ್-ಬಂದರು. ಕಂದಪದ್ಯ. ಗಣಿಸಲ್... ಗಣಿ ಸಲ್ವಂ... ಮಣಿಯುತಗರ್ಭ.. ಮಣಿಯುತೆ.. ಇಲ್ಲಿ ಯಮಕಾಲಂಕಾರವಿದೆ.)


ವ॥ ಅಂತು ಮುಂ ಬರುತಿರೆಯಿರೆ

(ಅಂತು-ಹಾಗೆ, ಮುಂ-ಮುಂದೆ, ಬರುತೆ+ಇರೆ+ಇರೆ-ಬರುತ್ತಿರಲು)


ಚಂ॥ ಕೊರಲನೆ ಕೊಂಕುಗೆಯ್ಯುತೆ ಪದಂಗಳನೆತ್ತಿ ನೆಗೞ್ದು ಚಿಮ್ಮುತುಂ

ಭರದೆ ನಿಮಿರ್ಚುತುಂ ಕಿವಿಗಳಂ ಪಸುರ್ವುಲ್ಗಳನೊಲ್ದು ತಿನ್ನುತುಂ

ಗೊರಸಿನೊಳಲ್ಲಿ ಬೇಗದೆ ಬೆಱಂಟುತೆ ಚಂಚಲಮಾದ ಚರ್ಯೆಯಿಂ

ಪೆಱೆಗೆಣೆಯಾದ ಬಣ್ಣದೊಳಗಿರ್ದುದು ವಾಜಿಯದೋ ಸುರೇಂದ್ರನಾ ॥೧೯॥

(ಟೀ- ಅದೋ-ಅದೋ, ಸುರೇಂದ್ರನಾ-ದೇವೆಂದ್ರನ ಆ, ವಾಜಿಯು-ಕುದುರೆಯು  (ಉಚ್ಚೈಶ್ರವಸ್ಸು), ಕೊರಲನೆ-ಕೊರಳನ್ನು/ಕುತ್ತಿಗೆಯನ್ನು, ಕೊಂಕುಗೆಯ್ಯುತೆ-ವಕ್ರವಾಗಿಸುತ್ತ/ಡೊಂಕಾಗಿಸುತ್ತ, ಪದಂಗಳಂ-ಕಾಲುಗಳನ್ನು, ಎತ್ತಿ ನೆಗೞ್ದು-ಮೇಲೆತ್ತಿ ಚೆನ್ನಾಗಿ, ಚಿಮ್ಮುತುಂ- ಜಿಗಿಯುತ್ತಾ, ಭರದೆ-ಬೇಗದಲ್ಲಿ, ಕಿವಿಗಳಂ-ತನ್ನ ಕಿವಿಗಳನ್ನು, ನಿಮಿರ್ಚುತುಂ-ನಿಗುರಿಸುತ್ತಾ/ನಿಮಿರಿಸಿಕೊಂಡು, ಪಸುರ್ವುಲ್ಗಳಂ-ಹಸುರು ಹುಲ್ಲುಗಳನ್ನು, ಒಲ್ದು-ಒಲಿದು, ತಿನ್ನುತುಂ-ತಿನ್ನುತ್ತಾ, ಗೊರಸಿನೊಳ್-ತನ್ನ ಕಾಲಿನ ಗೊರಸಿನಲ್ಲಿ, ಅಲ್ಲಿ-ಆ ಸ್ಥಳದಲ್ಲಿ, ಬೇಗದೆ-ವೇಗದಲ್ಲಿ, ಬೆಱಂಟುತೆ-ನೆಲವನ್ನು ಕೆದರುತ್ತಾ/ಪೆರಟುತ್ತಾ, ಚಂಚಲಂ+ಆದ-ಚಾಂಚಲ್ಯದಿಂದ ಕೂಡಿದ, ಚರ್ಯೆಯಿಂ-ನಡತೆಯಿಂದ, ಪೆಱೆಗೆ-ಚಂದ್ರನಿಗೆ, ಎಣೆಯಾದ-ಸಮಾನವಾದ, ಬಣ್ಣದೊಳಗೆ- ಬಣ್ಣದಲ್ಲಿ ಇರ್ದುದು-ಇತ್ತು, ಚಂಪಕಮಾಲಾವೃತ್ತ)


ವ॥ಅದನೀಕ್ಷಿಸಲ್ಕೆ ಕದ್ರುವುಂ ವಿನತೆಯುಂ ಸ್ತುತಿಸಿದರ್

(ಅದಂ-ಅದನ್ನು, ಈಕ್ಷಿಸಲ್ಕೆ-ನೋಡುವುದಕ್ಕೆ, ಕದ್ರುವುಂ-ಕದ್ರುವೂ, ವಿನತೆಯುಂ-ವಿನತೆಯೂ, ಸ್ತುತಿಸಿದರ್-ಸ್ತುತಿ ಮಾಡಿದರು-)

ಶ್ಲೋ॥ ವಿಶ್ವವಿಖ್ಯಾತಮಾಗಿರ್ಪೈ ಶಾಶ್ವತರ್ ಮೆಚ್ಚಿ ಕೊಂಡಿರಲ್

ಅಶ್ವ!ದರ್ಶನಮೀಯೈ ನೀಂ ನಶ್ವರರ್ಗೆ ದಯಾಪರಾ॥೨೦॥

(ಟೀ-ಶಾಶ್ವತರ್-ಶಾಶ್ವತರು/ದೇವತೆಗಳು, (ನಿನ್ನನ್ನು) ಮೆಚ್ಚಿಕೊಂಡಿರಲ್-ಮೆಚ್ಚಿಕೊಂಡಿರಲು, ವಿಶ್ವವಿಖ್ಯಾತಂ-ಜಗತ್ಪ್ರಸಿದ್ಧನು, ಆಗಿರ್ಪೈ-ಆಗಿದ್ದೀಯಾ, ಅಶ್ವ!-ಕುದುರೆಯೇ (ಉಚ್ಚೈಶ್ರವಸ್ಸೇ) ದಯಾಪರಾ-ದಯೆಯುಳ್ಳವನೇ, ನಶ್ವರರ್ಗೆ-ನಾಳೆ ಇಲ್ಲದವರಾಗುವವರಿಗೆ/ನಶ್ವರರಾದವರಿಗೆ (ನಮಗೆ) ನೀಂ-ನೀನು, ದರ್ಶನಂ+ಈಯೈ-ದರ್ಶನವನ್ನು ಕೊಡು/ಕಾಣಿಸಿಕೋ. ಅನುಷ್ಟುಪ್/ಶ್ಲೋಕಚ್ಛಂದಸ್ಸು )


ಪುಣ್ಯಶ್ಲೋಕ!ವರಾಕಾರ! ಪಣ್ಯದೂರ! ಖಗಾಮಿಯೇ

ಗಣ್ಯನೇಕಧರಾ ಸ್ಫಾರ!ಗುಣ್ಯಶ್ವಾ! ರಯಗಾಮಿಯೇ ॥೨೧॥

(ಟೀ-ಪುಣ್ಯಶ್ಲೋಕ!-ಪುಣ್ಯವಾದ ಕೀರ್ತಿಯುಳ್ಳವನೇ, ವರಾಕಾರ!-ಒಳ್ಳೆಯ ಶರೀರವನ್ನು/ಆಕಾರವನ್ನು ಹೊಂದಿರುವವನೇ,  ಪಣ್ಯದೂರ!-ದುಡ್ಡಿಗೆ ಸಿಗಲಾರದವನೇ, ಖಗಾಮಿಯೇ-ಆಕಾಶದಲ್ಲಿಯೂ ಸಂಚರಿಸುವ ಶಕ್ತಿಯುಳ್ಳವನೇ, ಗಣ್ಯಂ-ಸ್ತುತ್ಯರ್ಹನಾದವನು, ಏಕಧರಾ-ಒಬ್ಬನನ್ನೇ ಧರಿಸಿರುವವನೇ(?) ಸ್ಫಾರ!-ಕಾಂತಿಯುಳ್ಳವನೇ, ಗುಣ್ಯಶ್ವಾ!-ಗುಣವುಳ್ಳ ಕುದುರೆಯೇ, ರಯಗಾಮಿಯೇ-ವೇಗವಾಗಿ ಹೋಗುವವನೇ!

ಅನುಷ್ಟುಪ್/ಶ್ಲೋಕಚ್ಛಂದಸ್ಸು. ಈ ಪದ್ಯದಲ್ಲಿ ಎಲ್ಲವೂ ಉಚ್ಚೈಶ್ರವಸ್ಸಿಗೆ ವಿಶೇಷಣಗಳಾಗಿ ಕೇವಲ ಸಂಬೋಧನೆಯೇ ಇದೆ. ಗೋಮೂತ್ರಿಕಬಂಧವೂ ಇದೆ.)


ಚಂ॥ ಸಿರಿಯೊಡೆ ಪುಟ್ಟಿ ಮೆಯ್ಸಿರಿಯನಾಂತೆ ಸುಧಾಂಶುವೊಡಂ ನೆಗೞ್ದೊಡಂ

ಸುರುಚಿರರೂಪನಾಂತೆ ಸುಧೆಯೊಂದುತೆ ಸಂದು ಸಮಸ್ತಸೇವ್ಯನಾ

ಸುರಪತಿಯೊಲ್ಮೆಯಾಂತೆ ಸುರೆಗಾದ ಸಹೋದರಭಾವದಿಂದೆ ದಲ್

ಬರಿದೆನೆ ಚಂಚಲತ್ವಕಿದೊ ನೋಂತೆ ಹಯಾ! ಸುರಲೋಕರಾಣ್ನಯಾ ॥೨೨॥

(ಟೀ-ಸಿರಿಯೊಡೆ-ಸಂಪತ್ತಿನ ಜೊತೆಯಲ್ಲಿ/ಲಕ್ಷ್ಮಿಯ ಜೊತೆಯಲ್ಲಿ, ಪುಟ್ಟಿ-ಹುಟ್ಟಿ, ಮೆಯ್ಸಿರಿಯಂ-ಮೈಯಲ್ಲಿ ಸಿರಿಯನ್ನು, ಆಂತೆ-ಹೊಂದಿದೆ, ಸುಧಾಂಶುವೊಡಂ-ಚಂದ್ರನ ಜೊತೆಯಲ್ಲಿಯೂ, ನೆಗೞ್ದೊಡಂ-ಬಂದಿದ್ದರಿಂದಲೂ/ಪ್ರಸಿದ್ಧನಾಗಿರುವುದರಿಂದಲೂ, ಸುರುಚಿರರೂಪಂ+ಆಂತೆ-ಸುಂದರವಾದ ರೂಪವನ್ನು ಹೊಂದಿದೆ. ಸುಧೆಯ+ಒಂದುತೆ-ಅಮೃತವನ್ನು ಹೊಂದಿಕೊಂಡು, ಸಂದು-ಸಲ್ಲುವುದರಿಂದ, ಸಮಸ್ತಸೇವ್ಯನಾ-ಎಲ್ಲರಿಂದಲೂ ಸೇವಿಸಲ್ಪಡುತ್ತಿರುವ ಆ, ಸುರಪತಿಯ-ದೇವೇಂದ್ರನ, ಒಲ್ಮೆ+ಆಂತೆ-ಪ್ರೀತಿಯನ್ನು ಹೊಂದಿದೆ, ಸುರೆಗೆ-ಸುರೆ/ಸಾರಾಯಿಗೆ, ಆದ-ಆಗಿರುವ ಸಹೋದರಭಾವದಿಂದೆ-ಸಹೋದರತ್ವದಿಂದ (ಸಾರಾಯಿಯ ಜೊತೆಯಲ್ಲಿ ಹುಟ್ಟಿದ್ದರಿಂದ)  ಬರಿದೆನೆ-ಬರಿದಾಗಿ/ವ್ಯರ್ಥವಾಗಿ, ಇದೊ-ಇದೋ, ಚಂಚಲತ್ವಕೆ-ಚಾಂಚಲ್ಯಕ್ಕೆ, ನೋಂತೆ-ವ್ರತತೊಟ್ಟೆ, ದಲ್-ಅಲ್ಲವೇ! ಹಯಾ!-ಕುದುರೆಯೇ! ಸುರಲೋಕರಾಣ್ನಯಾ- (ಸುರಲೋಕ-ರಾಟ್+ನಯಾ)ದೇವಲೋಕದ ರಾಜನಾದ ಇಂದ್ರನನ್ನು ಹೊರುವವನೇ! ಚಂಪಕಮಾಲಾವೃತ್ತ)


(ಮುಂದಿನ ಭಾಗದಲ್ಲಿ ಕದ್ರೂವಿನತೆಯರ ಪಂದ್ಯದ ಫಲ, ಗರುಡನ ಜನನ)