Powered By Blogger

ಬುಧವಾರ, ಮೇ 28, 2014

ಸಹೃದಯಕಾಲ-೧೩: ಮತ್ತೆ ಸಾಗರ

ಕುವೆಂಪು ಅವರ "ಚಿತ್ರಾಂಗದಾ" ಖಂಡಕಾವ್ಯ ಅವರ 'ಶ್ರೀರಾಮಾಯಣದರ್ಶನಂ' ಮಹಾಕಾವ್ಯದ ಛಂದಸ್ಸಿನಲ್ಲಿಯೇ ಇರುವ ಇನ್ನೊಂದು ಕಾವ್ಯವಾಗಿದೆ. ಇಲ್ಲಿನ ಕಥೆ ಜೈಮಿನಿ ಭಾರತದಲ್ಲಿ ಬರುವ ಬಭ್ರುವಾಹನನ ಕಥೆಯ ಆಶ್ರಯವನ್ನೇ ಪಡೆದಿದ್ದರೂ  ಅಲ್ಲಿರುವ ಅತಿಮಾನುಷಘಟನೆಗಳಾವುವೂ ಇಲ್ಲಿಲ್ಲ. ಕೊನೆಯಲ್ಲಿ ಅರ್ಜುನ ಸತ್ತು ಬದುಕುವ ಬದಲು ನಾಟಕೀಯವಾಗಿ ಚಿತ್ರಾಂಗದೆಯೇ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ.
ಇಲ್ಲಿನ ಛಂದಸ್ಸಿನಲ್ಲಿ ಕೂಡ ಐದು ಮಾತ್ರಗಳ ಸಹಜವಾದ ಗತಿಯಿದ್ದರೂ ಎಲ್ಲೋ ಒಂದೆರಡು ಕಡೆ ಅದಕ್ಕೆ ಹೊಂದಿಕೊಳ್ಳದಂತೆ ಏಳು ಮಾತ್ರಗಳಾಗಿ ಹೆಚ್ಚಾಗುವುದೂ ಅಲ್ಲದೇ ಗಣಮಧ್ಯದಲ್ಲಿ ಪಾದ ಮುಗಿದು ಬೇರೆಯ ಪಾದ ಪ್ರಾರಂಭವಾಗಿ ಆ ಗಣವನ್ನೂ ಪಾದದ ಮಾತ್ರೆಗಳ ಲೆಕ್ಕವನ್ನೂ ಪೂರ್ಣಗೊಳಿಸಿಕೊಂಡು ಹೋಗುತ್ತದೆ. ಆದಿಪ್ರಾಸದ ನಿಯಮವನ್ನೇನೂ ಇಟ್ಟುಕೊಳ್ಳದ  ಲಲಿತರಗಳೆಯ ಮತ್ತೊಂದು ರೂಪವೇ ಇದು ಎಂದರೆ ತಪ್ಪೇನೂ ಆಗಲಾರದು. ಇಲ್ಲದಿದ್ದರೆ ಸರಳರಗಳೆ (-ಕವಿನಿರ್ದೇಶಿತ ಹೆಸರು) ಎನ್ನಬಹುದು. ಮಹಾಛಂದಸ್ಸೆಂಬುದೂ ಅಷ್ಟೇ. (ಚಿತ್ರಾಂಗದಾ ಕಾವ್ಯವನ್ನೂ ಮಹಾಛಂದಸ್ಸಿಗೆ ತಿದ್ದಿದ್ದಾಗಿ ಹೇಳಿದ್ದಾರೆ. ಎರಡೂ ಒಂದೇ ; ಆದರೂ 'ಅಳಿಯ ಅಲ್ಲ ಮಗಳ ಗಂಡ' ಎಂಬಂತೆ ಎನ್ನಬಹುದು.) ಅದರಲ್ಲಿ ಕೂಡ ಮತ್ತೆ ಯಾವ ಮಹತ್ತೂ ಇಲ್ಲ.
ಕುವೆಂಪು ಅವರ ಕಾವ್ಯದ ಭಾಷೆ; ಅರ್ಥವಾಗದಂತಹ ಪಂಪನ ಕಠಿನ ಹಳೆಗನ್ನಡವೂ ಅಲ್ಲ!! ಅರ್ಥವಿಲ್ಲದಂತಹ ಇತ್ತೀಚಿನ ಕುಕವಿಗಳ (ಸ್ವಯಂಘೋಷಿತ ಸತ್ಕವಿಗಳ) ಹೊಸಗನ್ನಡದ ಭಾಷೆಯೂ ಅಲ್ಲ!!! ಕೆಲವೊಂದು ಕಡೆಗಳಲ್ಲಿ ಕೋಶಗತವಾದ ಶಬ್ದಗಳೇ ಹೆಚ್ಚು ಬಳಸಲ್ಪಟ್ಟರೂ ನಿರಂತರ ಕೋಶದ ಮೊರೆಹೋಗುವಂತಹ ಪೀಡನೆಯೂ ಇಲ್ಲ. ಅಲ್ಲದೇ ಅಲ್ಲಲ್ಲಿ ಹಳಗನ್ನಡವ್ಯಾಕರಣರೂಪಕ್ಕೆ ವಿರುದ್ಧವಾಗ ಪದಪ್ರಯೋಗಗಳೂ,  ವಿಸಂಧಿ ದೋಷಗಳೂ ಬೇಕಾದಷ್ಟು ಸಿಗುತ್ತವೆ.
ಈ ಚಿತ್ರಾಂಗದ ಕಾವ್ಯದಲ್ಲಿ ಆರು ಪರ್ವಗಳಿವೆ. ಅದರಲ್ಲಿ ಅಲ್ಲಲ್ಲಿ ದೃಷ್ಟಾಂತ ಉಪಮಾ ಇತ್ಯಾದಿ ಅಲಂಕಾರಗಳನ್ನು  ಯಥೇಷ್ಟವಾಗಿ ಸವಿಯಬಹುದು. ಅಲ್ಲದೇ ಅನುಪ್ರಾಸಾದಿ ಶಬ್ದ ಚಮತ್ಕಾರವೂ ಇದೆ.
 
ಅಲ್ಲಿ ಕಾಣುವ ಒಂದು ಸಾಗರದ ವರ್ಣನೆಯನ್ನು ಅವಲೋಕಿಸುವುದಾದರೆ-
ಉರುಳುರುಳು ಸಾಗರವೆ ಮುನ್ನೀರಿನಾಗರವೆ
ತೆರೆತೋಳ್ಗಳಿಂದೆಯಾಲಂಗಿಸಿ ಧರಿತ್ರಿಯಂ
ವರುಷಶತಗತವಾದರಳಿಯದನುರಾಗದಲಿ         ೧೭೬೦
ಹರುಷ ಭೋಗದಲಿ! ಸುರನೀಲ ಸುಂದರಮೂರ್ತಿ
ಗಂಭೀರವಿಸ್ತಾರ ಸುಗಭೀರನೀರನಿಧಿ
ನೇಸರಿಂ ಕೆಲಸಿಡಿದು ನಮ್ಮೀ ಧರಾದೇವಿ
ಬೆಂಕಿ ಮೀಹದೊಳಂದು ಮಿಂದೆದ್ದ ಮೊದಲಲ್ಲಿ
ಹೆತ್ತ ಬಾಳ್ಗಿಂಬಿತ್ತ ದಾತೃವೆ ನಮೋ ನಮಃ!
ಗಡಿಮೀರಿ ನಿಡುಬೆಳೆದ ನಿನ್ನ ತಡಿಗುಂಟೆ ಗುಡಿ?
ಅಲ್ಲಿಯಾತ್ಮದ ಬಯಕೆವಳ್ಳಿ ದಾಂಗುಡಿ ದಾಂಟಿ
ಕಾಲದೇಶಾಂಡವನೊಡೆದು ಮೀಂಟಿ ಬ್ರಹ್ಮಮಂ
ತಬ್ಬುವುದಂತತೆಯನೀಂಟಿ! ಮಾನವನೆದೆಗೆ 
ಧೀರತೆಯ ಕಿಡಿಗರೆದು ಸಾಹಸಕ್ಕೆಳದೊಯ್ವ
ಕರೆ ನಿನ್ನ ಮೊರೆ, ನಿರಂತರ ಚೇತಸ ಜಲಧಿ!
ನರನ ನಾಗರಿಕತೆಯ ತೀರ್ಥಯಾತ್ರೆಯ ಮಹಾ
ವಿಸ್ತೃತ ಸಲಿಲ ಪಥವೆ ಮೊರೆದುರುಳು ರತ್ನಧಿಯೆ
ಉಲ್ಲೋಲಕಲ್ಲೋಲ ರುದ್ರಾಟ್ಟಹಾಸದಿಂ
ಶಂಕರಭಯಂಕರದ ಮೋಹವನೆರಚಿ ಬೀಸಿ 

ಸಮುದ್ರಕ್ಕೆ ತೆರೆಗಳೇ ತೋಳುಗಳು. ಆ ತೋಳ್ಗಳಿಂದ ಧರೆಯನ್ನು ಆಲಂಗಿಸುತ್ತಿರುವುದೆಂಬ ಕಲ್ಪನೆ ಸೊಗಸಾಗಿದೆಯಷ್ಟೆ! 
"ಸೂರ್ಯನಿಂದ ಸಿಡಿದ ಈ ಧರಾದೇವಿ ಬೆಂಕಿಯ ಸ್ನಾನದಲ್ಲಿ ಮಿಂದೆದ್ದ ಮೊದಲಲ್ಲಿ ತಣ್ಪನ್ನು ಕೊಟ್ಟು ಹೆತ್ತ ಬಾಳ್ಗೆ ಒಳ್ಳೆಯದನ್ನು ಮಾಡಿದ ದಾತೃವೇ  ನಿನಗೆ ನಮಸ್ಕಾರ" ಎಂಬುದೂ ಅಷ್ಟೆ.
"ಗಡಿಮೀರಿ ಬೆಳೆದು ನಿಂತ ನಿನ್ನ ತಡಿಗೆ ಗುಡಿಯುಂಟೇ? ಅಲ್ಲಿ ಬಯಕೆಯ ಬಳ್ಳಿ ದಾಟುತ್ತಾ ಕಾಲದೇಶಗಳ ಗರ್ಭವನ್ನು ಬೇಧಿಸಿ ಬ್ರಹ್ಮವನ್ನು ತಬ್ಬಿ ಅನಂತತೆಯನ್ನು ಸವಿಯುವುದು.. ಮಾನವನ ಮನಸಿನಲ್ಲಿ ಧೀರತೆಯ ಕಿಚ್ಚನ್ನು ಹಚ್ಚುವುದು, ಸಾಹಸವನ್ನು ಮಾಡಲು ಎಳೆದೊಯ್ಯುವುದು ಅದೇ ನಿನ್ನ ಕರೆ ನಿನ್ನ ಮೊರೆ(>ಮೊರೆತ=ಧ್ವನಿ) ನಿರಂತರ ಚೇತಸ ಜಲಧಿಯೇ! ನರನ ನಾಗರಿಕತೆಯೆಂಬ ತೀರ್ಥಯಾತ್ರೆಯ ನೀರಿನ ಹೆದ್ದಾರಿ.. ಧ್ವನಿಗಯ್ಯುತ್ತಾ ಉರುಳು.. ರತ್ನಗಳಿಗಾಗರವಾದ ಸಮುದ್ರವೇ ಉಲ್ಲೋಲಕಲ್ಲೋಲದ ರುದ್ರಾಟ್ಟಹಾಸ್ಸದಿಂದ ಭಯಂಕರವಾದರೂ ಶಂಕರ(ಒಳ್ಳೆಯದನ್ನು ಮಾಡುವ)ಮೋಹವನ್ನು ಬೀಸು!" ಎಂದು ಸಾಗರವನ್ನು ಸಂಬೋಧಿಸುತ್ತಾರೆ. ಇಲ್ಲಿ ಹಿಂದೆ ಷಡಕ್ಷರಿಯ ವರ್ಣನೆಗಳಲ್ಲಿ ಬರುವಂತೆ ಶ್ಲೇಷಾದಿ ಚಮತ್ಕಾರಗಳಿಲ್ಲದಿದ್ದರೂ ಸಾಗರದ ಗಂಭೀರತೆಯೂ ನಿರಂತರ ಮೊರೆತವೂ ವಿಸ್ತಾರವೂ ಅಲ್ಲದೇ ಅದರ ರುದ್ರಾಟ್ಟಹಾಸವೂ ಚಿತ್ರಿತವಾಗಿದೆ.ಅಲ್ಲದೇ ಮಾನವನ ಮನಸ್ಸಿಗೆ ಧೀರತೆ ಹುಟ್ಟೂವುದು, ಸಾಹಸವನ್ನು ಮಾಡುವ ಪ್ರವೃತ್ತಿ ಬೆಳೆಯುವುದು ಇವುಗಳನ್ನೆಲ್ಲ ಸಾಗರದ ಗುಣಗಾತ್ರಗಳ ಜೊತೆಗೆ ತಂದಿರುವುದು ಇಲ್ಲಿ ಒಂದು ವಿಶೇಷ. 

2 ಕಾಮೆಂಟ್‌ಗಳು:

  1. ಕುವೆಂಪು ಕನ್ನಡ ಮತ್ತು ಸಂಸ್ಕೃತವನ್ನು ಹದವಾಗಿ ಬೆರಸಿ ಬರೆದವರು. ಬಹಳ ಚೆನ್ನಾಗಿದೆ ಬರಹ. ಧನ್ಯವಾದಗಳು. ತೆರೆಪರಂಪರೆ ಮೊರೆಪರಂಪರೆಯ ಪರಂಪರೆ ಅವರಿಗಿಷ್ಟವೇನೋ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು :-) ಕುವೆಂಪು ಅವರ ವರ್ಣನೆಗಳು "ಮನಮೋಹನ" :-) ಮೌನವಾಗಿಯೇ ಎಲ್ಲವನ್ನೂ ಕಾಣಿಸಿಬಿಡುತ್ತವೆ:-) ;-)

      ಅಳಿಸಿ