Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ ೧- ಕಾವ್ಯಗಳನ್ನು ಏಕೆ ಓದಬೇಕು!

ಬಹುಶಃ ಬರವಣಿಗೆಗೆ ಮೊದಲು ಮಾಡುವವರೆಲ್ಲ
ಒಂದಿಷ್ಟು ಕವಿತೆಗಳನ್ನಂತೂ ಬರೆದಿರುತ್ತಾರೆ ಎಂಬುದು
ಹಲವರಲ್ಲಿ ಕಂಡು-ಕೇಳಿ ತಿಳಿದ ಸತ್ಯ. ಆ ಬಳಿಕ ಅವರ
ಮನೋಧರ್ಮಕ್ಕೆ ತಕ್ಕಂತೆ ಪದ್ಯವೋ
ಲಲಿತಪ್ರಬಂಧವೋ ಕಥೆಯೋ ಕಾದಂಬರಿಯೋ
ಅಥವಾ ಇನ್ನಾವುದೋ ಮಾರ್ಗವನ್ನು ಕಂಡುಕೊಂಡಿರುತ್ತಾರೆ.
ಈ ಎಲ್ಲವೂ ಸಾಹಿತ್ಯ ಎಂಬ ವರ್ಗಕ್ಕೆ ಸೇರುತ್ತದೆಯಷ್ಟೆ.
ಸಹಿತತೆಯೇ ಸಾಹಿತ್ಯ. ಇವೆಲ್ಲವನ್ನೂ ಆಲಂಕಾರಿಕರು
ಕಾವ್ಯ ಎಂಬ ಒಂದೇ ಪದದಿಂದ ಗುರುತಿಸುತ್ತಾರೆ.
ವರ್ಣನೆಯಲ್ಲಿ ನಿಪುಣನಾದವನು ಕವಿ.
ಕವಿಯ ರಚನೆ ಕಾವ್ಯ, ಶಬ್ದಾರ್ಥಗಳಿಂದ ಕೂಡಿರುವುದು ಕಾವ್ಯ,
ರಸಾತ್ಮಕವಾದ ವಾಕ್ಯವೇ ಕಾವ್ಯ,ರಮಣೀಯಾರ್ಥಪ್ರತಿಪಾದಕವಾದ
ಶಬ್ದವೇ ಕಾವ್ಯ- ಹೀಗೆ ಹಲವು ವಿಧದಲ್ಲಿ ಕಾವ್ಯ ಎಂಬ ಶಬ್ದಕ್ಕೆ
ಅರ್ಥವನ್ನು ವಿವರಿಸುತ್ತಾರೆ. ಅದೆಂತೇ ಇರಲಿ.
ಕಾವ್ಯವೆಂದರೇನು ಎಂಬುದರ ಸ್ಥೂಲ ಕಲ್ಪನೆಯಂತೂ
ನಮಗೆಲ್ಲ ಇದ್ದೇ ಇದೆ.
    ಇನ್ನು ಕಾವ್ಯಪ್ರಯೋಜನವೇನು ಎಂಬುದನ್ನು
ಸ್ವಲ್ಪ ಅವಲೋಕಿಸಿದರೆ ಯಶಸ್ಸನ್ನು ಪಡೆಯಲು,
ಧನಾರ್ಜನೆಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಕೆಟ್ಟದ್ದನ್ನು
ಕಳೆದುಕೊಳ್ಳುವುದಕ್ಕಾಗಿ, ತತ್ಕ್ಷಣದ ನಿರ್ವೃತಿಗೆ
(ಪರಮಾನಂದವನ್ನು ಅನುಭವಿಸುವುದಕ್ಕೆ) ಕಾಂತೆಯಂತೆ
ಉಪದೇಶಿಸುವುದಕ್ಕೆ ಎಂದೆಲ್ಲ ಮಮ್ಮಟ
ತನ್ನ ಕಾವ್ಯಪ್ರಕಾಶದಲ್ಲಿ ಸಂಗ್ರಹಿಸಿ ಹೇಳುತ್ತಾನೆ..
ಹಾಗಿದ್ದರೂ ಕಾವ್ಯದ ಮೂಲ ಪ್ರಯೋಜನ ಎಂದರೆ
ಆನಂದವನ್ನು ಹೊಂದುವುದಷ್ಟೇ ಆಗಿದೆ. ಯಾರಾದರೂ
ಯಾವುದಾದರೂ ಕೆಲಸವನ್ನು ತಾವಾಗಿಯೇ
ಮಾಡುತ್ತ ಇದ್ದಾರೆ ಎಂದರೆ ಅದು ಅವರಿಗೆ ಇಷ್ಟವಾಗಿದೆ,
ಸಂತೋಷವನ್ನು ಕೊಡುತ್ತದೆ ಎಂಬುದೇ ಕಾರಣವಲ್ಲವೇ!
ಕವಿಯಾದರೂ ಯಾರ ಒತ್ತಾಯಕ್ಕೆ ಬರೆಯುವುದಿಲ್ಲ.
ತಾನಾಗಿಯೇ ತನ್ನಿಷ್ಟದಂತೆ ಬರೆಯುತ್ತಾನೆ.
ಹಾಗಾಗಿ ಅಲ್ಲಿ ಆನಂದದ ಅನುಭವವೇ ಮುಖ್ಯ
ಎಂಬುದು ಸ್ಪಷ್ಟ. ಇನ್ನು ಓದುಗರಿಗಾದರೂ ಅಷ್ಟೇ!
ಓದುತ್ತ ರಸಾಸ್ವಾದನೆಯನ್ನು ಮಾಡುವುದು
ಹಾಗೂ ಸಂತೋಷ ಪಡುವುದು ಇದೇ ಕಾವ್ಯವನ್ನು
ಓದುವಾಗ ಇರುವ ಪರಮಾರ್ಥ. ಅದಿಲ್ಲದಿದ್ದರೆ
ಯಾರು ತಾನೇ ಕಾವ್ಯಗಳನ್ನು ಓದುತ್ತಾರೆ.
ಈ ಆನಂದಾನುಭೂತಿ ಉನ್ನತ ಮಟ್ಟದಲ್ಲಿ
ದೊರೆತಾಗ ಅದನ್ನು ಉತ್ತಮಕಾವ್ಯವೆಂದು
ಪುರಸ್ಕರಿಸುತ್ತಾರೆ,ಅಂತಹ ಅನುಭವ ಆಗದಿದ್ದಾಗ
ಅದನ್ನು ಕೆಟ್ಟ ಕಾವ್ಯ ಎಂದು ತಿರಸ್ಕರಿಸುತ್ತಾರೆ.
    ಹೀಗೆ ಕವಿಗಳು ಆತ್ಮಾನಂದಕ್ಕಾಗಿ ರಚಿಸಿದ
ಕಾವ್ಯವೆಂಬ ಹೂವಿನಿಂದ ರಸವೆಂಬ
ಮಕರಂದವನ್ನುದುಂಬಿಯಂತೆ ನಾವೂ ಆಸ್ವಾದಿಸೋಣ.
ಕಾವ್ಯಗಳ ಅವಲೋಕನವೇ ಕಾವ್ಯಾವಲೋಕನ.
ಇದೇ ಹೆಸರಿನಲ್ಲಿ ನಾಗವರ್ಮನು ಒಂದು ಗ್ರಂಥವನ್ನು
ರಚಿಸಿದ್ದಾನೆ ಕೂಡ. ಅದರಲ್ಲಿ ಕೂಡ ಕಾವ್ಯದ
ಲಕ್ಷಣಗಳನ್ನು ಲಕ್ಷ್ಯಗಳನ್ನು ವಿವಿಧ
ಸಂಸ್ಕೃತಾಲಂಕಾರಗ್ರಂಥಗಳ ಆಧಾರದ ಮೂಲಕ
ವಿಸ್ತರಿಸಿದ್ದಾನೆ.
ನಾವೂ ಇಲ್ಲಿ ಬೇರೆ ಬೇರೆ ಕಾವ್ಯಗಳ ಸ್ವಾರಸ್ಯವನ್ನು
ಹುಡುಕಾಡುತ್ತಾ ಹೋಗುವ ಕಾರಣದಿಂದ
ಇದೂ ಕಾವ್ಯಾವಲೋಕನವೇ ಆಗಿದೆ. ಈ
ಲೇಖನಮಾಲಿಕೆಯಲ್ಲಿ ಕಾವ್ಯವೆಂದರೆ
ಮಾರ್ಗಕಾವ್ಯವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುವುದು.
ರಸಮಯವಾದ ಪದ್ಯಗಳನ್ನು ಅಥವಾ
ಕಥಾನಕಗಳನ್ನು ಹಾಗೂ ಅವುಗಳ ಸೂಕ್ಷ್ಮತೆಯನ್ನು
ಅವಲೋಕಿಸಲು ಇದು ಸಹಾಯಕವಾಗಬಲ್ಲದು
ಎಂದು ನಂಬಿರುವೆ.
    ಕಾವ್ಯಗಳನ್ನು ಅರ್ಥ ಮಾಡಿಕೊಳ್ಳಲು ಮುಖ್ಯವಾಗಿ
ಬೇಕಾಗಿರುವುದು ಆ ಭಾಷೆಯಲ್ಲಿ ಹಿಡಿತ.
ಗ್ರೀಕಿನ ನಾಟಕವೊಂದನ್ನು ಕವಿಗಳೊಬ್ಬರು
ಹಳಗನ್ನಡಕ್ಕೆ ಅನುವಾದ ಮಾಡಿದಾಗ ಇನ್ನೊಬ್ಬ
ಕವಿಗಳು ಹೇಳಿದ್ದರಂತೆ- ನೀವು ಒಂದು ಗ್ರೀಕಿನಿಂದ
ಇನ್ನೊಂದು ಗ್ರೀಕಿಗೆ ಅನುವಾದ ಮಾಡಿದ್ದೀರಾ ಅಂತ!
ಹಳಗನ್ನಡ ಈಗಿನವರಿಗೆ ಏಕೆ ಕಬ್ಬಿಣದ ಕಡಲೆಯಾಗಿದೆ
ಎಂದರೆ ಅದರಲ್ಲಿ ಹಿಡಿತವಿಲ್ಲದ ಕಾರಣಕ್ಕೆ.
ಹಳಗನ್ನಡವೇ ಇಂದಿನ ಕನ್ನಡಕ್ಕೆ ಮೂಲವೆಂಬುದರ
ಅರಿವಿದ್ದರೂ ಆ ಸೂಕ್ಷ್ಮರೂಪಾಂತರಗಳನ್ನು
ಅಧ್ಯಯನ ಮಾಡದಿದ್ದರೆ ಅರಿತುಕೊಳ್ಳುವುದು
ಕಷ್ಟವೇ ಸರಿ! ಹಾಗಾಗಿಯೇ ಭಾಷೆಯನ್ನೇ ಅಧ್ಯಯನ
ಮಾಡುವವರಿಗೂ ಎಷ್ಟೋ ಕಾವ್ಯಗಳನ್ನು ಕೋಶಗಳು
ಹಾಗೂ ಟೀಕೆಗಳಿಲ್ಲದೇ ಅರ್ಥ ಮಾಡಿಕೊಳ್ಳಲಾಗದ
ಪರಿಸ್ಥಿತಿ ಉಂಟಾಗಿದೆ. ಆದರೆ ಒಂದು ಉಪಾಯವುಂಟು!
ಹೇಗೆ ಅನ್ಯಭಾಷೆಯ ಚಲನಚಿತ್ರವನ್ನು ನೋಡಿ
ನೋಡಿ ನಮಗೆ ಆ ಭಾಷೆಯ ಸ್ಥೂಲ
ಪರಿಚಯವಾಗುತ್ತದೆಯೋ ಹಾಗೇ ಹಳಗನ್ನಡದ
ಕಾವ್ಯಗಳನ್ನು ಓದಿ ಓದಿ ಅದರ ಸ್ಥೂಲಪರಿಚಯವಾಗಬಲ್ಲದು.
ಆಮೇಲೆ ಉಳಿದ ರಸಾಸ್ವಾದಕ್ಕೇನೂ ತೊಂದರೆ ಇರುವುದಿಲ್ಲ.
ಹಾಗಾಗಿ ನಮಗೆ ಅರ್ಥವಾಗದಿದ್ದರೂ ಅರ್ಥ/ಅನುವಾದವನ್ನು
ಓದಿಕೊಂಡು ಆಮೇಲೆ ಎರಡು ಬಾರಿ ಮೂಲವನ್ನು ಓದಿದಾಗ
ಆಸ್ವಾದನೆ ಸಾಧ್ಯವಾಗುತ್ತದೆ. ಕಾಲಕ್ರಮದಲ್ಲಿ ಪದ್ಯದ
ಆಶಯವಂತೂ ಸ್ಪಷ್ಟವಾಗುವ ಮಟ್ಟಕ್ಕೆ ಓದಿ ಅರ್ಥೈಸಿಕೊಳ್ಳಲು
ಸಾಧ್ಯವಾಗುತ್ತದೆ. ಇದಕ್ಕೆ ಸ್ವಾನುಭವವೇ ಪ್ರಮಾಣ!
    ಹಿರಿಯರೊಬ್ಬರು ಪದ್ಯ ಹೇಗೆ ಸಹಜವಾದ ಅಭಿವ್ಯಕ್ತಿ
ಎಂಬುದಕ್ಕೆ ಒಂದು ಸುಂದರವಾದ ದೃಷ್ಟಾಂತವನ್ನು ಹೇಳುತ್ತಾರೆ.
ರಸ್ತೆಯಲ್ಲಿ ಹೋಗುವ ವ್ಯಕ್ತಿಯೊಬ್ಬ ಸುಮ್ಮನೆ ಗದ್ಯದಲ್ಲಿ
ಏನಾದರೂ ಹೇಳುತ್ತಾ ಹೋದರೆ "ಪಾಪ! ಹುಚ್ಚು ಹಿಡಿದಿರಬೇಕು"
ಎಂದು ಹೇಳುತ್ತೇವೆ. ಅದೇ ಆತ ಪದ್ಯವನ್ನು ಹಾಡಿಕೊಂಡು
ಹೋಗುತ್ತಿದ್ದರೆ "ಏನೋ ತುಂಬಾ ಸಂತೋಷದಲ್ಲಿರಬೇಕು!"
ಎಂದು ಮೆಚ್ಚಿಕೊಳ್ಳುತ್ತೇವೆ. ಅದೇ ರೀತಿ ಮುಷ್ಕರಗಳಲ್ಲಿ
"ಬೇಕೇ ಬೇಕು ನ್ಯಾಯ ಬೇಕು" ಎಂದೋ ಅಥವಾ ಇನ್ನಾವುದೋ
ಘೋಷಣೆಯನ್ನು ಕೂಗುವಾಗ, ಗಾದೆಗಳಲ್ಲಿ ಮೊದಲಾಗಿ
ಹಲವು ಕಡೆಗಳಲ್ಲಿ ಆ ಪದ್ಯದ ಛಾಯೆಯನ್ನು ಕಾಣುತ್ತೇವೆ.
ಅಲ್ಲಿರುವುದೇ ಛಂದಸ್ಸು. ಇದು ಕವಿತೆಗೆ ಒಂದು
ಗೇಯತ್ವವನ್ನು ಕೊಡುತ್ತದೆ. ಆಹ್ಲಾದವನ್ನು ಉಂಟು ಮಾಡುತ್ತದೆ.
ಛಂದಸ್ಸಿನ ಆವಶ್ಯಕತೆಯ ಬಗ್ಗೆ ಚರ್ಚಿಸುವವರು
ಈ ಅಂಶವೊಂದನ್ನು ಗಮನಿಸಿದರೆ ಸಾಕು.
ತೀನಂಶ್ರೀ ಅವರು ಕೂಡ "ಭಾರತೀಯಕಾವ್ಯಮೀಮಾಂಸೆ"ಯಲ್ಲಿ
ಭಾವಾಭಿವ್ಯಕ್ತಿಗೆ ಪದ್ಯಗಳೇ ಸೂಕ್ತ ಎಂಬುದನ್ನು ಹೇಳಿದ್ದಾರೆ.
ಚಂಪೂಕಾವ್ಯಗಳಲ್ಲಿ ಗದ್ಯಪದ್ಯಗಳು ಮಿಶ್ರ ವಾಗಿರುತ್ತವೆ
ಆದರೂ ಉತ್ಕಟವಾದ ಭಾವವನ್ನು ವ್ಯಕ್ತ ಪಡಿಸುವಾಗ
ಕವಿ ಗದ್ಯಕ್ಕಿಂತ ಪದ್ಯವನ್ನೇ ಆಶ್ರಯಿಸುತ್ತಾನೆ ಎಂಬುದೂ
ಕಾಣುತ್ತದೆ. ಈ ಎಲ್ಲವನ್ನು ಅವಲೋಕಿಸಿದರೆ
ಛಂದೋಮಯಪದ್ಯದ ವಿಶಾಲತೆ ಮತ್ತು ಸಹಜತೆಯ ಅರಿವಾಗುತ್ತದೆ
    ಇನ್ನು ಕೆಲವು ಕವಿಸಮಯವನ್ನು ಇಲ್ಲಿ ವಿವೇಚಿಸೋಣ.
ಈ ವಿಷಯದಲ್ಲಿ ನೇರವಾಗಿ ನಾಗವರ್ಮನ
ಕಾವ್ಯಾವಲೋಕನದಿಂದಲೇ ಆಯ್ದ ಪದ್ಯಗಳನ್ನೂ ಸರಳವಾದ
ಗದ್ಯಾನುವಾದಗಳನ್ನು ಪ್ರಸ್ತುತಪಡಿಸುವೆ.
ಕವಿಸಮಯ ಎಂದರೇನು-
ಆವುದಶೇಷಲೋಕವಿಷಯಸ್ಥಿತಿಯಲ್ತಖಿಳಾಗಮಾರ್ಥಮುಂ
ಭಾವಿಪೊಡಲ್ತು ಸತ್ಕವಿಪರಂಪರೆಯಿಂ ಪರಿಗೀತಮಾಗಿ ನಿ-
ಷ್ಕೇವಳಮಾದ ರೂಢಿವಶದಿಂ ಸಲೆ ಸಲ್ವುದಿದಲ್ತೆ ಶಿಷ್ಟಸಂ-
ಭಾವಿತಮಪ್ಪ ಕಾವ್ಯಸಮಯಂ ಭುವನತ್ರಯವಸ್ತುಗೋಚರಂ ||೮೪೪||
(ಆವುದು-ಯಾವುದು, ಅಶೇಷ-ಸಂಪೂರ್ಣವಾದ, ಲೋಕವಿಷಯಸ್ಥಿತಿ- 
ಲೋಕದ ವಾಸ್ತವಿಕಸ್ಥಿತಿ, ಅಲ್ತು- ಅಲ್ಲವೋ, ಅಖಿಳಾಗಮಮಾರ್ಥಮುಂ-
ಎಲ್ಲ ಆಗಮಗಳ ಅರ್ಥವೂ, ಭಾವಿಪೊಡೆ-ಭಾವಿಸಿದರೆ, 
ಅಲ್ತು-ಅಲ್ಲವೋ, ಸತ್ಕವಿಪರಂಪರೆಯಿಂ-ಸತ್ಕವಿಗಳ ಪರಂಪರೆಯಿಂದ, 
ಪರಿಗೀತಮಾಗಿ-ಹೇಳಲ್ಪಟ್ಟು, ನಿಷ್ಕೇವಳಮಾದ ರೂಢಿವಶದಿಂ-
ಕೇವಲವಲ್ಲದ ರೂಢಿಯಿಂದ, ಸಲೆ ಸಲ್ವುದು-ಎಲ್ಲರಿಂದಲೂ 
ಒಪ್ಪಿಕೊಳ್ಳಲ್ಪಟ್ಟಿದೆಯೋ, ಭುವನತ್ರಯವಸ್ತುಗೋಚರಂ-ಮೂರು 
ಲೋಕಗಳಲ್ಲಿಯ ವಸ್ತುಗಳಲ್ಲೂ ಗೋಚರವಾಗುವುದು, 
ಶಿಷ್ಟಸಂಭಾವಿತಂ ಅಪ್ಪ-ಶಿಷ್ಟರಿಂದ ಒಪ್ಪಿಗೆ ಆಗುವ, ಕಾವ್ಯಸಮಯಂ-
 ಕವಿಸಮಯ/ಕಾವ್ಯಸಮಯ, ಇದಲ್ತೆ- ಇದಲ್ಲವೇ!)
ಅಂದರೆ ವಾಸ್ತವದಲ್ಲಿ ಸಾಧ್ಯವಲ್ಲದ ಆದರೆ ಕವಿಗಳ
ಪರಂಪರೆಯಿಂದಲೂ ಶಿಷ್ಟರಿಂದಲೂ ಸಹೃದಯದರಿಂದಲೂ
ಒಪ್ಪಿಕೊಳ್ಳಲ್ಪಟ್ಟಕೆಲವು ರೂಢಿವಶದಿಂದ ಬಂದ ವಿಶೇಷವಾದ
ವಿಷಯಗಳೇ ಕವಿಸಮಯಗಳು. ಇದಕ್ಕೆ ಉದಾಹರಣೆಗಳನ್ನು
ನೋಡಿದರೆ ಗೊತ್ತಾಗುತ್ತದೆ.
ಕೀರ್ತಿ ಬಿಳಿ ಬಣ್ಣ, ಪಾಪ ಕಪ್ಪು ಬಣ್ಣ. ಇತ್ಯಾದಿಗಳು.
“ಅವನ ಕೀರ್ತಿ ಹಾಲಿನಂತೆ ಬೆಳ್ಳಗೆ" “ಆದರೆ ಇದೊಂದು ಕೆಲಸ
ಅವನ ಕೀರ್ತಿಗೆ ಕಳಂಕ ತಂದುಬಿಟ್ಟಿತು" ಇಲ್ಲಿ ಕಳಂಕ ಎಂದಾಗ
ಕಪ್ಪು ಎಂಬುದು ವೇದ್ಯವಾಗುತ್ತದೆ. ಇನ್ನೂ ಹಲವು
ಉದಾಹರಣೆಗಳನ್ನು ಹೇಳುವುದಿದ್ದರೆ-
ಸೂರ್ಯ ಬಂದಾಗ ಕಮಲಗಳು ಅರಳುತ್ತವೆ. ನೈದಿಲೆಗಳು
ಬಾಡುತ್ತವೆ. ಚಂದ್ರ ಬಂದಾಗ ಕಮಲಗಳು ಬಾಡುತ್ತವೆ.
ನೈದಿಲೆಗಳು ಅರಳುತ್ತವೆ.ಮೋಡಗಳನ್ನು ಕಂಡು ನವಿಲು
ನರ್ತಿಸುತ್ತದೆ. ಚಾತಕಪಕ್ಷಿ ಮಳೆಯ ನೀರನ್ನು ಮಾತ್ರ
ಕುಡಿದು ಬದುಕಿರುತ್ತದೆ. “ಅವನ ಬರುವಿಕೆಗೆ ಅವಳು
ಚಾತಕಪಕ್ಷಿಯಂತೆ ಕಾಯುತ್ತಿದ್ದಳು" ಎಂದೆಲ್ಲ ಹೇಳುತ್ತೇವೆ.
ಹಾಗೆಯೇ ಚಕೋರ ಬೆಳದಿಂಗಳನ್ನು ಕುಡಿದು ಜೀವಿಸಿರುತ್ತದೆ.
ಕೋಗಿಲೆ ವಸಂತಋತುವಿನಲ್ಲಿ ಮಾವಿನ ಚಿಗುರನ್ನು
ತಿಂದು ಪಂಚಮಸ್ವರದಲ್ಲಿ ಹಾಡುತ್ತದೆ. ಆನೆಯ ಕುಂಭಸ್ಥಲದಲ್ಲಿ
ಮುತ್ತು ಇರುತ್ತದೆ. ಬಿದಿರನಲ್ಲಿ ಮುತ್ತು ಇರುತ್ತದೆ.
ರೋಹಣಗಿರಿಯಲ್ಲಿ ರತ್ನ ಸಿಗುತ್ತದೆ. ಚಕ್ರವಾಕ ಪಕ್ಷಿಗಳಿಗೆ ರಾತ್ರಿ 
ಹೊತ್ತು ವಿರಹ!ಪಕ್ಕದಲ್ಲೇ ಇದ್ದರೂ ತನ್ನ ಜೋಡಿಹಕ್ಕಿಯನ್ನು 
ಕಾಣಲಾರದೇ ರಾತ್ರಿಯಿಡೀ ಗೋಳಾಡುತ್ತದೆ.
ಇವೆಲ್ಲ ಕವಿಸಮಯಗಳು. ಕೆಲವು ಹೂವಿನ ಗಿಡಗಳು ಹೂಬಿಡಲು
 ಸುಂದರಿಯರಾದ ಸ್ತ್ರೀಯರು ದೋಹದವನ್ನು ಮಾಡಬೇಕು. 
ಉದಾಹರಣೆಗೆ- ಅಶೋಕವೃಕ್ಷ ಹೂಬಿಡಲು
ಸುಂದರಸ್ತ್ರೀ ಅದನ್ನು ಒದೆಯಬೇಕು. ತಿಲಕವೆಂಬ ಹೂವಿನ 
ಗಿಡವನ್ನು ಸುಂದರಿ ನೋಡಿದರೇ ಅದು ಹೂ ಬಿಡುತ್ತದೆ. 
ಕುರವಕವನ್ನು ಆಲಿಂಗಿಸಿಕೊಂಡರೆ ಹೂ ಬಿಡುತ್ತದೆ. 
ಕರ್ಣಿಕಾರದ ಎದುರು ನರ್ತನ ಮಾಡಿದರೆ ಅದು ಹೂ ಬಿಡುತ್ತದೆ.
ಹೀಗೇ ಇನ್ನೂ ಹಲವು ಕವಿಸಮಯಗಳು. ಇವನ್ನೆಲ್ಲ ಯಥೋಚಿತವಾಗಿ 
ಕವಿಗಳು ಬಳಸಿದಾಗ ಪದ್ಯಗಳ ಸೊಗಸು ಇನ್ನೂ ಹೆಚ್ಚುತ್ತದೆ.
ಅವುಗಳೆಲ್ಲವುಗಳಿಗೆ ಉದಾಹರಣೆಗಳನ್ನು ಆಯಾ ಸಂದರ್ಭದಲ್ಲೇ ನೋಡೋಣ.
    ಇಂತಹ ಈ ಕಾವ್ಯವೆಂಬ ವಿಸ್ತಾರವಾದ ಪ್ರಪಂಚಕ್ಕೆ ಕವಿಯೇ ಬ್ರಹ್ಮ. 
ಅವನಿಗೆ ಹೇಗೆ ರುಚಿಸುತ್ತದೆಯೋ ಹಾಗೇ ಈ ಜಗತ್ತೂ 
ಪರಿವರ್ತನೆಯಾಗುತ್ತದೆ ಎಂಬುದೊಂದು ಸಂಸ್ಕೃತದ ಶ್ಲೋಕವಿದೆ. 
ಮುಂದುವರೆದು ಹೇಳಿದರೆ ಈ ಜಗತ್ತಿಗೆ ಯಾರಿಗೆ ಬೇಕಾದರೂ 
ಮುಕ್ತವಾದ ಪ್ರವೇಶವಿದೆ. ವೀಸಾ ಪಾಸ್ಪೋರ್ಟ್ ಏನೂ ಬೇಡ! 
ಇಲ್ಲಿ ಯಾವಾಗ ಬೇಕಾದರೂ ಬರಬಹುದು. ಯಾರ ಅಡೆತಡೆಗಳಿಲ್ಲದೇ 
ವಿಹಾರ ಮಾಡಬಹುದು. ಹೋಗುವ ಮನಸ್ಸಾದರೆ ಯಾವಾಗ ಬೇಕಾದರೂ 
ನಿರ್ಗಮಿಸಬಹುದು. ಇದಕ್ಕೆ ಯಾವ ತೆರಿಗೆ ಸುಂಕ ಇಲ್ಲ!
ಕಾಲದ ನಿಯಮ ಇಲ್ಲಿ ನಡೆಯುವುದಿಲ್ಲ! ಇಲ್ಲಿರುವ ಕವಿಗಳೆಲ್ಲ 
ಚಿರಂಜೀವಿಗಳು! ಬಂದ ರಸಿಕರಿಗೆ ರೋಗವಾಗಲೀ 
ಮುಪ್ಪಾಗಲೀ ಬಾಧಿಸುವುದಿಲ್ಲ! ಎಷ್ಟು ಜನರು ಬಂದರೂ
ಸಾಕಷ್ಟು ಅವಕಾಶವುಳ್ಳ ಈ ಜಗತ್ತಿನಲ್ಲಿ ಇಂತಹ ಅನ್ಯಾದೃಶವಾದ 
ಆನಂದವನ್ನು ಅನುಭವಿಸುವುದಕ್ಕೋಸ್ಕರವಾಗಿಯೇ ಇಷ್ಟೊಂದು
 ಜನರು ಇಷ್ಟೊಂದು ಕಾಲದಿಂದ ಇಲ್ಲಿ ವಿಹರಿಸುತ್ತಿದ್ದಾರೇನೋ! 
ಹೀಗೆ ವಿಹರಿಸಿಕೊಂಡು ಬರಲು ಈ ಕಾವ್ಯಾವಲೋಕನದ 
ಯಾನವಂತೂ ಸಿದ್ಧವಾಗಿದೆ

ಭಾನುವಾರ, ನವೆಂಬರ್ 10, 2019

ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ


ಎಂದೋ ಕಳೆದುದು ನಿನ್ನಯ
ಸುಂದರಮಾಗಿರ್ಪ ಸದನಮದನಾರಚಿಸಲ್
ಸಂದುದು ನಿರ್ಣಯಮೀಗಳ್
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೧||

ಸಂದೆಗಮೇಂ ನೀಂ ಧರೆಗೈ-
ತಂದಿರ್ದಪ ತಾಣಮದುವೆ ಸಾಕೇತಪುರಂ
ಚಂದದೊಳಯೋಧ್ಯೆಯೆನಿಪುದು
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೨||

ಬಂದಪರಾ ಯವನರ್ಕಳ್
ಕುಂದಾದುದು ನಿನ್ನ ಮನೆಯನುಂ ಕೆಡಪಿದರೇ!
ಸಂದಿರಲೀಗಳ್ ನ್ಯಾಯಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೩||

ಅಂದು ಮಸೀದಿಯನೇ ಬಲ
ದಿಂದಂ ಕಟ್ಟುತ್ತೆ ಮೆಟ್ಟಿದರ್ ನಿನ್ನೆಡೆಯಂ
ಬಂದುದು ಕಾಲಮಿದೀಗಳ್
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೪||

ತಂದಪರಿಟ್ಟಿಗೆಗಳನೇ
ತಂದೆಯೆ!  ನಿನ್ನೊಂದು ಮನೆಯನೇ ಕಟ್ಟಲ್ ಮೇಣ್
ಸಂದುದು ಶ್ರಮಕಿದೊ ಫಲಮೆನೆ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೫||

ಅಂದಬ್ಧಿಸೇತುವಿಗೆ ಕಪಿ-
ವೃಂದಂ ಜತೆಯಾಗಲಾಯ್ತು, ಮನೆಯಂ ರಚಿಸಲ್
ಬಂದಿರೆ ಭಾರತಮೆಲ್ಲಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೬||

ಮಂದಿಗಳಿರೆ ಸಾಹಸಿಗಳ್
ಕುಂದಿನ ಕಟ್ಟಡಮನಲ್ಲಿ ಕೆಡಪಿದರಾಗಳ್
ಬೃಂದಾರಕರುಂ ಮೆಚ್ಚಿರೆ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೭||

ನೊಂದರ್ ನಿನ್ನ ಸ್ಥಿತಿಗಂ
ಮುಂದೇನೆಂದರಿಯದಾದವರ್ಗಂ ದೊರೆಯ-
ಲ್ಕಿಂದೀ ನ್ಯಾಯದ ಬಲಮುಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೮||

ಒಂದೆರಡಲ್ಲಂ ಜೀವಂ
ಸಂದುದು ಮೃತಿಗಂದು ನಿನ್ನ ಸೇವೆಗೆನುತ್ತುಂ
ನಿಂದವರ ಪುಣ್ಯಕೃತಿಯಿಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೯||

ಅಂದದೆ ತ್ವನ್ನಾಮಸುಧಾ-
ಸ್ಪಂದನದಿಂ ಬಲಮನೊಂದಿ  ಕಜ್ಜಂಗೆಯ್ವರ್
ಸುಂದರಮದ್ಭುತಭವ್ಯಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೧೦||

ಶನಿವಾರ, ಮೇ 11, 2019

ಮೋಜಿನ ಮಂಜಗುಣಿ ತೇರು

Places to visit near sisri ಎಂದು ಗೂಗಲ್ ನಲ್ಲಿ ಹಿಂದೆಂದೋ ಟೈಪಿಸಿದಾಗ ಶಿರಸಿಯಲ್ಲಿರುವ ಅನ್ಯ ಪ್ರೇಕ್ಷಣೀಯ ಸ್ಥಳಗಳೊಟ್ಟಿಗೆ ಕಣ್ಣಿಗೆ ಬಿದ್ದದ್ದು ಮಂಜಗುಣಿ ದೇವಸ್ಥಾನ. ಅದಕ್ಕೂ ಮೊದಲು ಗೊತ್ತಿರಲಿಲ್ಲವೆಂದಲ್ಲ, ಕೇಳಿ ಬಲ್ಲವಳಾಗಿದ್ದೆ. ಹೇಳಿ ಕೇಳಿ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆ ಮಗಳು. ಇಂಥ ದೇವಸ್ಥಾನಗಳ ಬಗ್ಗೆ ಅಲ್ಲ್ಪ ಸಲ್ಪ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಹೇಗೆ. ಆದರೂ ನನ್ನ ಇಪ್ಪತ್ತೇಳು ವರ್ಷಗಳ ಸುದೀರ್ಘ ಜೀವನದಲ್ಲಿ ಅಲ್ಲಿಗೆ ಹೋಗುವ ಅವಕಾಶ ಒದಗಿರಲಿಲ್ಲ. ಶಿರಸಿಗೆ ಸೊಸೆಯಾಗಿ ಬಂದು ಇನ್ನೇನು ಒಂದು ವರ್ಷ ತುಂಬಿ ಬಿಡುತ್ತದೆ ಎಂದಾಗಲೂ ಆ ಜಾಗಕ್ಕೆ ಹೋಗಲು ಮುಹೂರ್ತ ಒದಗಿರಲಿಲ್ಲ (ಗಂಡನ ಆಸ್ಥೆಯ ಮೇಲೆ ಅಂತಹ ಮುಹೂರ್ತಗಳು ಕೂಡಿ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರದ ಸತ್ಯ).ಆ ದೇವಸ್ಥಾನದ ಸ್ಥಳ ಪುರಾಣ, ದೇವರ ಮಹಿಮೆಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲದಿದ್ದರೂ ನಮ್ಮ ಮನೆಯಿಂದ ಏಳೆಂಟು ಕಿಲೋಮಿಟರ್ ದೂರವಷ್ಟೇ ಅಗಿರುವುದರಿಂದ ಹೋಗಿ ನೋಡಬಹುದಲ್ಲ ಎಂಬ ಆಸೆಯಂತೂ ಇತ್ತು. ಈ ಸಲ ಮನೆಗೆ ಹೋದದ್ದರ ಉದ್ದೇಶ ಮತದಾನ ಮಾಡುವುದಕ್ಕಾಗಿಯಾದರೂ ಸಹ ಮಂಜಗುಣಿಗೆ ಹೋಗುವ ಅವಕಾಶ ಅಚಾನಕ್ಕಾಗಿ ದೊರೆಯಿತು.

ಬೆಂಗಳೂರು ಪುರವಾಸಿನಿಯಾಗಿ ನಾಲ್ಕೈದು ವರ್ಷಗಳಾದರೂ ಮತದಾರರ ಗುರುತಿನ ಚೀಟಿಯ ವಿಳಾಸವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡಿರದಿದ್ದುದು ಒಳ್ಳೆಯದೇ ಆಯಿತು. ಚುನಾವಣೆಯ ಹೆಸರಿನಲ್ಲಿ ಒಂದೆರಡು ದಿನ ಹೆಚ್ಚಿಗೆ ರಜಾ ಹಾಕುವ ಅವಕಾಶವೂ ಸಿಕ್ಕಿತು. ಎಪ್ರಿಲ್ ೧೭ರಿಂದ ಸತತವಾಗಿ ಐದು ದಿವಸಗಳ ರಜೆ ಅಪರೂಪಕ್ಕೆ ದೊರತದ್ದರಿಂದಲೂ, ಕೆನರಾ ಲೋಕಸಭಾ ಕ್ಷೇತ್ರದಲ್ಲಿ ೨೩ಕ್ಕೆ ಮತದಾನವಾದ್ದರಿಂದ, ನನ್ ಬಾಸ್ ಬಳಿ ನಾನು ವೋಟು ಹಾಕಲೇಬೇಕೆಂದು ಹೇಳಿದ್ದರಿಂದಲೂ  ನನಗೆ ಇಷ್ಟೊಂದು ಸುದೀರ್ಘ ರಜೆಯು ಪೂರ್ವ ಜನ್ಮದ ಪುಣ್ಯದಿಂದಲೋ ಎಂಬಂತೆ ದೊರೆಯಿತು. ಕಾರಣ ಯಾವುದಾದರೇನು, ಮತದಾನವೇ ಇರಲಿ ಮದುವೆಯೇ ಇರಲಿ, ಯಾವ ಕಾರ್ಯವೂ ಇಲ್ಲದಿರಲಿ. ಊರಿಗೆ ಹೋಗುವುದೆಂದರೆ ಹೆಣ್ಣುಮಕ್ಕಳಿಗೆ ಪ್ರಿಯವೇ ಅಲ್ಲವೇ? ಅದೂ ಹೊಸದಾಗಿ ಮದುವೆಯಾದ ಗಂಡನೊಟ್ಟಿಗೆ!

ಹೀಗೆ ನಾನು ಅತೀವ ಸಂತೋಷದಿಂದ ನನ್ನ ಗಂಡನೊಟ್ಟಿಗೆ ನಮ್ಮ ಮನೆ ತಲುಪಿದ್ದೆ. ಮಾರನೇ ದಿನ ಮಂಜಗುಣಿಯಲ್ಲಿ ತೇರು ಇದೆಯೆಂದು ನನಗೆ ಮೊದಲು ಹೇಳಿದ್ದು ನನ್ನ ಅತ್ತೆ. ನನ್ನ ಉತ್ಸಾಹಕ್ಕೆ ರೆಕ್ಕೆಪುಕ್ಕಗಳು ಬಂದಂತಾಗಿ, ಮದುವೆಯಾಗಿ ಇಷ್ಟು ದಿನವಾದರೂ ಮಂಜಗುಣಿಗೆ ಕರೆದುಕೊಂಡು ಹೋಗದ- ಮನೆಗೆ ಬಂದಾಗ ಬೆಂಗಳೂರಿನಲ್ಲಿ ಇರುವಾಗಿನಗಿಂತ ಹೆಚ್ಚು ಆಲಸ್ಯತನದಿಂದಿರುವ ನನ್ನ ಗಂಡನನ್ನು ಹೊರಡಿಸಲು ಇದೊಂದು ಸುವರ್ಣಾವಕಾಶವೆಂದು ಮನಸ್ಸಿನಲ್ಲಿಯೇ ಅಂದುಕೊಂಡು, ತೇರಿಗೆ ಹೋಗೋಣವೆಂದು ಅತ್ತೆಗೆ ಹೇಳಿದ್ದೆ. ಅತ್ತೆಯೇ ಹೇಳಿದ ಮೇಲೆ ಇನ್ನು ಮಂಜಗುಣಿಗೆ ಹೋಗುವುದನ್ನು ತಪ್ಪಿಸಲು ಯಾವ ದೇವರಿಗೇನು, ಸಾಕ್ಷಾತ್ ನನ್ನ ಗಂಡನಿಗೂ ಸಾಧ್ಯವಿರಲಿಲ್ಲ.  ಮನೆಗೆ ಹೋದಾಗೆಲ್ಲ ಸದಾಕಾಲ ಹೆಬ್ಬಾಗಿಲಲ್ಲಿ ಯಾರೇ ಮಾತಿಗೆ ಸಿಕ್ಕರೂ ಕತೆ ಹೇಳುತ್ತ ಕೂರುವ ನನ್ನ ಗಂಡನಿಗೆ ಈ ವಿಷಯದ ಬಗ್ಗೆ ಸುಳಿವಿರಲಿಲ್ಲ.

ನನ್ನ ಯಜಮಾನರು ಈ ಸಲದ ಸುದೀರ್ಘ ರಜೆಯಲ್ಲಿ ಮಾವನ ಮನೆಗೂ ಸಹ ಹೋಗದೇ ಬೇರೆ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದವರು. ಹಾಗಾಗಿ ಬೇರೆ ಯಾವುದೇ ಯೋಜನೆಗಳಿಗೆ ಅಷ್ಟಾಗಿ ಉತ್ಸಾಹ ತೋರುವುದಿಲ್ಲವೆಂದು ನಾನು ಅಂದುಕೊಂಡಿದ್ದೆ. ಏತನ್ಮಧ್ಯೆ ನನ್ನ ಚಿಕ್ಕ ಅತ್ತಿಗೆಯೂ ಮಂಜಗುಣಿಯ ತೇರಿಗೆ ಹೋಗುವ ಬಗ್ಗೆ ಉತ್ಸಾಹ ತೋರಿದಾಗ ಗಂಡ ಬರಲು ಒಂದಾನುವೇಳೆ ಒಪ್ಪದಿದ್ದರೂ ತೇರಿಗೆ ಹೋಗುವುದಕ್ಕೆ ಜನವಿದ್ದಾರಲ್ಲ ಎಂದು ಖುಷಿಪಟ್ಟೆ. ಇದೇ ವಿಶ್ವಾಸದಲ್ಲಿ ನನ್ನ ಗಂಡನಿಗೆ ಹೇಳಿದ್ದೆ, ‘ತೇರಿಗೆ ನೀವು ಬಾರದಿದ್ದರೂ ನಾವಂತೂ ಹೋಗುವವರೇ’ ಎಂದು. ಇದೇ ಹೊತ್ತಿಗೆ ನನ್ನ ಮೂರನೇ ಮಾವ ಅತ್ತೆ ಹಾಗೂ ಅವರ ಮಕ್ಕಳೂ ಕೂಡ ತೇರಿಗೆ ಹೊರಡಲು ತುದಿಗಾಲಲ್ಲಿ ನಿಂತದ್ದಾರೆಂದು ನನ್ನ ಅತ್ತೆ ಹೇಳಿದ್ದರು.

ತೇರು ಇದ್ದಲ್ಲಿ ಜಾತ್ರೆ, ಜಾತ್ರೆಯೆಂದರೆ ಜನ. ಈ ವರ್ಷ ಶಿರಸಿ ಜಾತ್ರೆ ಇಲ್ಲವಾದ್ದರಿಂದ ಈ ಸಲದ ಮಂಜಗುಣಿ ತೇರಿಗೆ ಜನ ಜಾಸ್ತಿಯೆಂದು ನನ್ನ ಚಿಕ್ಕತ್ತೆಯು ತನ್ನ ಅನೇಕ ವರ್ಷಗಳ ಅನುಭವದಿಂದ ಹೇಳಿದ್ದಳು. ನಮ್ಮ ಮನೆಯಿಂದಲೇ ಒಂದು ಓಮಿನಿ ತುಂಬುವಷ್ಟು ಜನ ಹೊರಡುವುದಕ್ಕೆ ತರಾತುರಿಯಲ್ಲಿದ್ದರು. ಹೀಗಿರುವಾಗ ತೇರಿಗೆ ಜನ ಜಾಸ್ತಿಯಾಗದೇ ಇರುತ್ತಾರೆಯೇ?

ಕಲ್ಲಂಗಡಿ ಹಣ್ಣಿನ ಪರಮಪ್ರಿಯನಾದ ನನ್ನ ಮೂರನೇ ಮಾವನಿಗೆ ತೇರು ನೋಡುವುದಕ್ಕಿಂತ ಹೆಚ್ಚಾಗಿ ಕಲ್ಲಂಗಡಿ ಹಣ್ಣು ತಿನ್ನುವ ಅವಕಾಶ ಸಿಗಲಿದೆಯೆಂದೇ ಹೊರಟಿದ್ದುದನ್ನು ಅವನೇ ಬಾಯಿ ಬಿಟ್ಟು ಹೇಳಿದ್ದ.ತನ್ನ ಪತ್ನಿ ಹಾಗೂ ಪುತ್ರಿಯರೊಟ್ಟಿಗೆ ಮೂರನೇ ಮಾವ ತೇರಿಗೆ ಹೊರಡಲು ಓಮಿನಿಗೆ ಬರಲು ಹೇಳಿದ್ದಾನೆಂದೂ ಸಂಜೆ ಐದೂವರೆಯ ಹೊತ್ತಿಗೆ ಓಮಿನಿಯು ಬರಲಿದೆಯೆಂದೂ, ಅದರಲ್ಲಿಯೇ ಎಲ್ಲರೂ ಹೋಗುವುದೆಂದು  ಸುದ್ದಿ ಗೊತ್ತಾದ ಹಾಗೆ ನಾನೂ ನನ್ನ ಅತ್ತಿಗೆಯರೂ ಸರಿಯಾಗಿ ಐದೂವರೆಗೆ ಇನ್ನೂ ಒಂದು ನಿಮಿಷ ಬಾಕಿ ಇದೆ ಎನ್ನುವಾಗಲೇ ಸಾಲಂಕೃತರಾಗಿ ತೇರಿಗೆ ಹೊರಡಲು ಸನ್ನದ್ಧರಾಗಿದ್ದೆವು. ನನ್ನ ಗಂಡನೂ ಕೂಡ ಲುಂಗಿ ಉಟ್ಟವರು ಅದ್ಯಾವುದೋ ಮಾಯೆ ಎನ್ನುವಂತೆ ಕ್ಷಣಾರ್ಧದಲ್ಲಿ ಪ್ಯಾಂಟು ತೊಟ್ಟು ಬಂದೇ ಬಿಟ್ಟರು.

ಈ ಮಧ್ಯೆ ನಾನು ಅಡುಗೆ ಮನೆಯೊಳಗೆ ಹೋದಾಗ ನನ್ನ ಮಾವನವರು ನನಗಾಗಿಯೇ ಕಾಯುತ್ತಿರುವವರಂತೆ, ನನ್ನ ಕಂಡವರೇ ಐದುನೂರು ರುಪಾಯಿಯನ್ನು ಕೊಟ್ಟು ಅದರ  ಜೊತೆಗೆ ಚಿಲ್ಲರೆಗೆ ತೊಂದರೆಯಾಗದಿರಲೆಂದು ಹತ್ತು, ಇಪ್ಪತ್ತು, ಐವತ್ತು, ನೂರರ ಚಿಲ್ಲರೆಯನ್ನು ಬೇಡವೆಂದರೂ ಕೈಯಲ್ಲಿ ಹಿಡಿಸಿದ್ದರು. ಇದೆಲ್ಲ ಬೇಡ, ನನ್ನ ಬಳಿಯಿದೆಯೆಂದರೂ ಕೇಳಲಿಲ್ಲ. ಕಡೆಗೆ ನನ್ನ ಅತ್ತೆಯೇ, ‘ತೇರಿಗೆ ಹೋಗುವವರಿಗೆ ಹಿರಿಯರಾದವರು ಖರ್ಚಿಗೆ ಕೊಡುವ ಪದ್ಧತಿಯಂತೆ ಕೊಟ್ಟಿದ್ದಾರೆ, ಇಟ್ಟುಕೋ’ ಎಂದದ್ದಕ್ಕೆ ಆಗಬಹುದು ಎಂದು ಇಟ್ಟುಕೊಂಡೆ. ಇಲ್ಲಿ ಹೇಳಲೇಬೇಕಾದ ವಿಷಯವೆಂದರೆ ಇದಕ್ಕೂ ಮೊದಲು ಐದುನೂರು ರೂಪಾಯಿಗಳ ಎರಡು ನೋಟು ನನ್ನ ಪರ್ಸನ್ನು ಸೇರಿತ್ತು. ಹೇಗೆ ಅಂತಲೋ?  ಅದರ ಹಿಂದಿನ ದಿನವಷ್ಟೇ ಅಹೋ ರಾತ್ರಿ ಒಂದು ಗಂಟೆಯವರೆಗೆ ನಮ್ಮೂರಿನ ದೇವಸ್ಥಾನದಲ್ಲಿ ಅಷ್ಟಾವಧಾನ ಮಾಡಿದ ನನ್ನ ಗಂಡನಿಗೆ ಆಯೋಜಕರು ಕರುಣಿಸಿದ ಸಂಭಾವನೆಯಿಂದ ಅದನ್ನು ಹಾರಿಸಿದ್ದು ಅಷ್ಟೇ. ಈ ವಿಷಯ ಗೊತ್ತಾದ ಬಳಿಕ ನನ್ನ ಗಂಡನೇನೂ ನನ್ನನ್ನು ಈ ಬಗ್ಗೆ ಕೇಳಿರಲಿಲ್ಲ. ಕೇವಲ ಎರಡೇ ನೋಟುಗಳನ್ನು ತೆಗೆದುಕೊಂಡು ಉಳಿದದ್ದನ್ನು ಹಾಗೆಯೇ ಇರಿಸಿದ್ದ ಅವರ ಹೆಂಡತಿಯ ಉದಾರತೆಯ ಬಗ್ಗೆ ಅವರಿಗೇ ಆನಂದವಾಗಿರಬಹುದು.

ಎಲ್ಲರೂ ತಯಾರಾಗಿ ಹೆಬ್ಬಾಗಿಲಲ್ಲಿ ಕುಳಿತು ಹರಟುವಷ್ಟು ಹರಟಿದ ಮೇಲೆ ಐದೂವರೆಗೇ ಬರಬೇಕಿದ್ದ ನಮ್ಮ ಗಾಡಿ ಆರು ಗಂಟೆಯಾದರೂ ಬರಲಿಲ್ಲವೆಂದು ನಮಗೆ ಜ್ಞಾನೋದಯ ವಾಯಿತು. ಈ ನಡುವೆ ದೊಡ್ಡ ಮಾವನಿಂದ ತಿಳಿದು ಬಂದ ವಿಷಯವೇನೆಂದರೆ, ಬೆಂಗಳೂರಿನಲ್ಲಿರುವ ಅತ್ತೆಗೂ ಮತ್ತು ಮಂಜಗುಣಿ ತೇರಿಗೂ ಒಂದು ಮರೆಯಲಾರದ ಕಹಿ ನೆನಪೊಂದಿದೆ ಎಂಬುದು. ಮದುವೆಯಾದಾಗಿನಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಆ ಅತ್ತೆಯು ಒಂದೊಮ್ಮೆ ಮಂಜಗುಣಿ ತೇರಿಗೆ ಬಂದಿದ್ದಾಗ ಅವಳ ಹೊಚ್ಚ ಹೊಸ ಬಾಟಾ ಚಪ್ಪಲಿಯನ್ನು ಕಳೆದುಕೊಂಡಿದ್ದಳಂತೆ. ಅದು ಕಪ್ಪು‌ ಮತ್ತು ಕೆಂಪು ಬಾರಿಂದ ಮಾಡಲ್ಪಟ್ಟಿತ್ತು, ಆಗಿನ ಕಾಲದಲ್ಲಿ ಸುಮಾರು ದುಬಾರಿಯ ಚಪ್ಪಲಿಯೇ ಆಗಿತ್ತು ಎಂಬುದು ದೊಡ್ಡ ಮಾವನ ವಿವರಣೆ. ಆ ಘಟನೆಯ ನಂತರ ತೀವ್ರವಾಗಿ ಮನ ನೊಂದ ಅತ್ತೆಯು, ಇನ್ನು ಎಲ್ಲಿ ಕರೆದರೂ ಬರುತ್ತೇನೆ, ಆದರೆ ಮಂಜುಗುಣಿ ತೆರಿಗೆ ಮಾತ್ರ ಬರಲಾರೆ ಎಂದು ಶಪಥ ತೊಟ್ಟಿದ್ದಳಂತೆ. ಆ ದಿನದ ತೆರಿಗೆ ಬಂದ ಸುಮಾರು ಮೂವತ್ತರಿಂದ ಐವತ್ತು ಸಾವಿರ ಜನರೆಲ್ಲರೂ ಕೂಡ ಬೆಂಗಳೂರು ಅತ್ತೆಯ ಬೈಗುಳಕ್ಕೆ ಸಿಕ್ಕಿ ನಲುಗಿದ್ದರೆಂಬುದು ನನಗೆ ಹೊಸ ವಿಷಯವಾಗಿತ್ತು. ಅವಳ ಚಪ್ಪಲಿಯನ್ನು ಇನ್ಯಾರೋ ಹಾಕಿಕೊಂಡು ಹೋಗುತ್ತಿದ್ದುದನ್ನು ನನ್ನ ಎರಡನೇ ಅತ್ತಿಗೆ ನೊಡುತ್ತ ಸುಮ್ಮನೇ ನಿಂತಿದ್ದಳು ಎಂಬುದು ನನ್ನ ಗಂಡನ ಆಪಾದನೆ. ನನ್ನ ಗಂಡನಾದವನೂ ಆಗ ಅದನ್ನೇ ಮಾಡುತ್ತಿದ್ದನೆಂದು ಬೇರೆ ಹೇಳಬೇಕಿಲ್ಲ.

ನಾವೆಲ್ಲ ಓಮಿನಿಗೆ ಕಾಯುತ್ತಿದ್ದರೆ ನನ್ನ ಗಂಡನೂ ಮತ್ತು  ಚಿಕ್ಕ ಮೈದುನನೂ ಹೆಬ್ಬಾಗಿಲಿಗೆ ಹಾಕಿದ್ದ ಜೀರೋ ವೋಲ್ಟೇಜ್ ನ ಬಲ್ಬಿಗೆ ಯಾರು ಮೊದಲು ಬಾಲನ್ನು ತಾಗಿಸುತ್ತಾರೆ ಮತ್ತು ಯಾರು ಹೆಚ್ಚು ಬಾರಿ ತಾಗಿಸುತ್ತಾರೆ ಎಂಬ ಒಂದು ವಿನಾಶಕಾರಿ ಆಟವನ್ನು ಆಡಲು ಮೊದಲು ಮಾಡಿದ್ದರು. ನನ್ನ ಅತ್ತಿಗೆಯರ ಕೈಯಲ್ಲಿ (ಅಲ್ಲ, ಬಾಯಲ್ಲಿ ) ಇಬ್ಬರೂ ಸೇರಿ ಬೈಸಿಕೊಂಡರೂ ಸಹ ಇವರ ಆಟದ ಉತ್ಸಾಹಕ್ಕೇನು ಕುಂದು ಬರಲಿಲ್ಲ. ಅದೇ ಹೊತ್ತಿಗೆ ನಾವು ಬರಲು ಹೇಳಿದ್ದ ಗಾಡಿಯ ಡ್ರೈವರನಿಗೆ ಯಾರೋ ಫೋನ್ ಮಾಡಿ ಕೇಳಿದಾಗ ಅವನು ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಬಂದು ತಲುಪುವನೆಂಬುದಾಗಿ ತಿಳಿಸಿರುವುದು ತಿಳಿದು ಬಂತು. ಅಲ್ಲೇ ಅಂಗಳದಲ್ಲಿ ಚಾಲಿ ಅಡಿಕೆ ಆರಿಸುತ್ತಿದ್ದ ಚಿಕ್ಕ ಮಾವ ಇದನ್ನು ಕೇಳಿದವನು, ಮಂಜಗುಣಿ ತೇರಿನ ಕಾರಣದಿಂದ ಊರಲ್ಲಿ ಆ ದಿನ ನಮ್ಮ ಡ್ರೈವರನಿಗಿರುವ ಬೇಡಿಕೆಯನ್ನು ಅಂದಾಜಿಸಿ, ಇನ್ನೂ ಎಷ್ಟು ತಡವಾಗಬಹುದೆಂದು ಊಹಿಸಿದ. ಊರಲ್ಲಿ ಒಮಿನಿ ಇಟ್ಟುಕೊಂಡು ಬಾಡಿಗೆ ಓಡಿಸುವವರಿಗೆ ದಿನಾಲೂ  ಗಿರಾಕಿಗಳಿರುವುದಿಲ್ಲ. ಹೀಗೆ ಸಂತೆಯೋ, ಜಾತ್ರೆಯೋ, ಹಬ್ಬವೋ ಇದ್ದಾಗ ಮಾತ್ರ ಅವರಿಗೆ ಬೇಡಿಕೆ. ಇಂಥಹ ಅವಕಾಶಗಳಿದ್ದಾಗ ಎಷ್ಟೇ ಒತ್ತಡವಿದ್ದರೂ ಸಹ ಅವರು ಬರಲು ಒಪ್ಪಿಕೊಳ್ಳುತ್ತಾರೆ. ಅವರ ಜೀವನೋಪಾಯವೂ ಅದ ಹಾಗೆ, ಊರಿನ ಜನರಿಗೂ ಸಹಾಯವಾದ ಹಾಗೆ. ಸಂಜೆ ಹೊರಟ ಜನವೆಲ್ಲ ವಾಪಸ್ಸು ಬರುವುದು ರಾತ್ರಿ ಹನ್ನೊಂದು ಹನ್ನೆರಡು ಗಂಟೆಯ ನಂತರವೇ. ಆದಿನ ನಾವು ಹೇಳಿದ ಗಾಡಿಯ ಡ್ರೈವರ್ ಎಷ್ಟು ಟ್ರಿಪ್ಪು ಹೊಡೆಯಲು ಒಪ್ಪಿಕೊಂಡಿದ್ದನೋ ಗೊತ್ತಿಲ್ಲ.

ನಾವು ಹೆಣ್ಣು ಮಕ್ಕಳಾಗಿಯೂ, ಹೇಳಿದ ಸಮಯಕ್ಕೆ ಸರಿಯಾಗಿ ತಯಾರಾಗಿದ್ದು ಮೂಗಿನ ಮೇಲೆ ಬೆರಳಿಡುವ ಸಂಗತಿಯಾದರೆ, ಗಾಡಿ ಬರಲಿಲ್ಲವೆಂದು ಯಾರೊಬ್ಬರೂ ಬೈದುಕೊಳ್ಳದೇ ಕುಳಿತದ್ದು ನಮ್ಮೆಲ್ಲರ ಒಳ್ಳೆಯತನ. ತಡವಾದರೆ ನಮ್ಮ ಅಲಂಕಾರ ಆರಿ ಹೋಗುದೆಂಬ ಆತಂಕವೊಂದೇ ನಮ್ಮಲ್ಲಿತ್ತು. ಗಾಡಿ ಒಂದು ತಾಸಿಗಿಂತ ಹೆಚ್ಚೇನೂ ತಡವಾಗಿ ಬಂದಿರಲಿಲ್ಲ. ಹೊರಡಬೇಕು ಎನ್ನುವಷ್ಟರಲ್ಲಿ ಎಲ್ಲರಿಗೂ ಬೆಂಗಳೂರು ಅತ್ತೆಗಾದ ಕಹಿ ಘಟನೆಯ ನೆನಪಾಗಿ ಎಲ್ಲರೂ ಅಪ್ಪಂದಿರ ಅಮ್ಮಂದಿರ ಹಳೆ ಚಪ್ಪಲಿಯನ್ನು ಹುಡುಕಿ, ಅದಕ್ಕಿರುವ ಧೂಳನ್ನು ಒರೆಸುವುದಕ್ಕೆ ಮುಂದಾದರು.

ಅಂತೂ ಗಾಡಿ ಹತ್ತಿ ಕುಳಿತು ಮನೆಯಿಂದ ಸಲ್ಪ ದೂರ ದಾಟಿದ ಮೇಲೆ ಗಾಡಿಯೊಳಗಿದ್ದ ಯುವ ಜನತೆ ತಮ್ಮ ತಮ್ಮ ಮೊಬೈಲ್ ತೆಗೆದು ಸಿಗ್ನಲ್ ಗಾಗಿ ಕಾಯತೊಡಗಿತು. ನನ್ನ ಎರಡನೇ ಅತ್ತಿಗೆಯಂತೂ ತನ್ನ ಮೊಬೈಲ್ ಒಂದೇ ಅಲ್ಲದೇ ತನ್ನ ಆಫೀಸಿನ ಮೊಬೈಲನ್ನೂ ಕೂಡ ಕೈಯಲ್ಲಿಟ್ಟುಕೊಂಡು, ಸಿಗ್ನಲ್ ಬಂದಾಗ ಹಾಟ್ಸ್ಪಾಟ್ ಆನ್ ಮಾಡಿಕೊಡುತ್ತಿದ್ದಳು. ಇಂಟರ್ನೆಟ್ ದಾನ ಮಾಡುವುದೂ ಪುಣ್ಯದ ಕೆಲಸವೇ ಅಲ್ಲವೇ. ಆದರೇನು ಮಾಡೋಣ, ಅವಳ ಪಾಸ್ವರ್ಡ್ ಟೈಪಿಸಿ ನಾವು ಕನೆಕ್ಟ್ ಮಾಡಿಕೊಳ್ಳುವಷ್ಟರಲ್ಲಿ ನಮ್ಮ ಗಾಡಿ ವ್ಯಾಪ್ತಿ ಪ್ರದೇಶದಿಂದ ದೂರ ಹೋಗಿರುತ್ತಿತ್ತು. ಹೀಗಾಗಿ ಅವಳಿಗೆ ಪುಣ್ಯ ಪ್ರಾಪ್ತಿಯಾಗಲಿಲ್ಲ. ಬೆಂಗಳೂರಿನಲ್ಲಿ ೪ಜಿ ಪ್ಯಾಕಿನಲ್ಲೂ ಸರಿಯಾಗಿ ಬರದೇ ಉಪದ್ರವ ಕೊಡುವ ಬಿಎಸ್ಎನ್ಎಲ್ ನೆಟ್ವರ್ಕ್ ಆ ಕಾಡಿನ ದಾರಿಯಲ್ಲಿ ತುಂಬಿ ತುಳುಕಾಡಿಕೊಂಡು ಬರುತ್ತಿತ್ತು. ಆದರೆ ನಮ್ಮ ಬಳಿ ಅದರ ನೆಟ್ ಪ್ಯಾಕ್ ಇಲ್ಲದಿದ್ದ ಕಾರಣ ಹಲ್ಲಿದ್ದಾಗ ಕಡಲೆಯಿಲ್ಲ ಕಡಲೆ ಇದ್ದಾಗ ಹಲ್ಲಿಲ್ಲ ಎಂಬ ಪರಿಸ್ಥಿತಿ ಉಂಟಾಯಿತು. ನೆಟ್ವರ್ಕ್ ಇಲ್ಲದೇ ದಿನಗಟ್ಟಲೆ ಕಳೆಯುವ ರೂಢಿಯಿರುವ ಹುಟ್ಟು ಮಲೆನಾಡಿನವರಾದ ನಮಗೆ ಈ ಕೊರತೆಯೇನೂ ಹೆಚ್ಚು ಬಾಧಿಸಲಿಲ್ಲ. ಈ ಮಧ್ಯೆ ನನ್ನ ಅತ್ತಿಗೆಯರು,ಅದೆಷ್ಟು ಜನ ಪರಿಚಯದವರು ತೇರಿನಲ್ಲಿ ಸಿಗುತ್ತಾರೋ, ಅವರಿಗೆಲ್ಲ ಹಲ್ಲು ಗಿಂಜಿ ಕೈ ಮಾಡಬೇಕಲ್ಲ ಎಂದು  
ಚಿಂತಿಸುತ್ತಿದ್ದರು. ಜಾತ್ರೆ ಪೇಟೆ ಹತ್ತಿರವಾದಂತೆ ನನ್ನ ಗಂಡನ ಹೈಸ್ಕೂಲ್ ಸಹಪಾಠಿ ಹುಡುಗಿಯೊಬ್ಬಳು ಅವರ ಕಣ್ಣಿಗೆ ಬಿದ್ದು, ಪಕ್ಕದಲ್ಲಿ ಹೆಂಡತಿಯನ್ನು ಇಟ್ಟುಕೊಂಡು ಅವಳನ್ನು ಹೇಗೆ ಮಾತನಾಡಿಸುವುದು ಎಂಬ ಗಲಿಬಿಲಿಯಲ್ಲಿದ್ದರು. ಆದರೆ ಹೈಸ್ಕೂಲಿನಲ್ಲಿ ಮೂರು ವರ್ಷ ಜೊತೆಗೇ ಓದುತ್ತಿದ್ದರೂ ಅವಳನ್ನು ಮಾತನಾಡಿಸಲಿಲ್ಲವಲ್ಲ, ಈಗ ಮದುವೆಯಾದ ಮೇಲೆ, ಅದೂ ಹೆಂಡತಿಯು ಪಕ್ಕದಲ್ಲಿರುವಾಗ ಮಾತನಾಡಿಸಿದರೆ  ಏನು ಪ್ರಯೋಜನವೆಂದು ಸುಮ್ಮನಾಗಿರಬೇಕು.

ನಾವು ಒಟ್ಟೂ ಒಂಭತ್ತು ಜನ ಓಮಿನಿ ಇಳಿದವರೇ ಅಲ್ಲೇ ಇದ್ದ ಕೆರೆಗೆ ಹೋಗಿ ಕಾಲು ಒದ್ದೆ ಮಾಡಿ, ಕಣ್ಣಿಗೆ ನೀರು ಒತ್ತಿ, ತಲೆಗೆ ನೀರು ಪ್ರೋಕ್ಷಣೆ ಮಾಡಿ, ಒಂದೆರಡು ಸೆಲ್ಫಿಯನ್ನೂ ತೆಗೆದು ಪಕ್ಕದಲ್ಲೇ ಇದ್ದ ಹನುಮಂತನಿಗೆ ಮುಖ ತೋರಿಸಿ ತೇರು ಇರುವ ಜಾಗಕ್ಕೆ ತಲುಪಿದೆವು. ತೇರ ಬಳಿ ತಲುಪುವಾಗ ಜನವೋ ಜನ. ತೇರು ಹತ್ತಲು ಎಷ್ಟೋ ಜನ ಉದ್ದುದ್ದ ಸರತಿಯಲ್ಲಿ ನಿಂತಿದ್ದರು. ಪಕ್ಕದಲ್ಲೇ ಬಳೆ ಪೇಟೆ. ಬಳೆ ಪೇಟೆಯೆಂದರೆ ಕೇವಲ ಬಳೆಯಷ್ಟೇ ಅಲ್ಲ. ಹೆಂಗಸರ ಆಭರಣ, ಅಲಂಕಾರಕ್ಕೆ ಸಂಬಂಧಿಸಿದ ಎಲ್ಲವೂ ಮಾರಾಟಕ್ಕಿಟ್ಟಿರುವ ಜಾಗ. ಆಟದ ಸಾಮಾನುಗಳ ಅಂಗಡಿ ಅದರ ಪಕ್ಕದಲ್ಲಿಯೇ. ಇನ್ನೊಂದು ಕಡೆ ಸಾಲಾಗಿ ಚಾಟ್ಸ್ ಅಂಗಡಿಗಳು, ಕಬ್ಬಿನ ಹಾಲು, ಜ್ಯೂಸ್ ಅಂಗಡಿಗಳು, ಕಲ್ಲಂಗಡಿ ಹಣ್ಣಿನ ಅಂಗಡಿಗಳು ಕೂಡ ಇದ್ದವು. ನಾವೆಲ್ಲಿ ಈ ಜನಜಂಗುಳಿಯಲ್ಲಿ ಕಳೆದು ಹೋಗಿಬಿಟ್ಟರೆ ಎಂಬ ಹೆದರಿಕೆಯಲ್ಲಿ ಒಬ್ಬರನ್ನೊಬ್ಬರು ಕೈ ಹಿಡಿದು ಹೋಗಬೇಕೆಂದು ನಮಗೆ ನಾವೇ ಮುನ್ನೆಚ್ಚರಿಕೆ ವಹಿಸಿಕೊಂಡಿದ್ದೆವು. ಆದರೆ ತೇರು ಹತ್ತಿರವಾದಂತೆ ಫಳ ಫಳನೆ ಹೊಳೆಯುವ, ಹೂವಿನಿಂದ ಲೈಟಿನಿಂದ ಅಲಂಕೃತವಾದ ತೇರು ಕಂಡಾಗ ಫೋಟೋ ತೆಗಯದೇ ಇರಲು ಹೇಗಾದರೂ ಮನಸ್ಸು ಒಪ್ಪುತ್ತದೆ?. ನಮ್ಮ ಯುವ ಜನತೆ ಒಂದೆರಡು ಫೋಟೋ ತೆಗೆಯುವಷ್ಟರಲ್ಲಿಯೇ ಇತ್ತ ಮೂರನೇ ಮಾವ ತನ್ನ ಧರ್ಮಪತ್ನಿ ಯನ್ನೂ ಸೇರಿದಂತೆ ಚಿಕ್ಕ ಮೈದುನನೊಡನೆ ಕಳೆದುಹೋಗಿಬಿಟ್ಟಿದ್ದ. ಅವರು ಕಾಣೆಯಾಗುವುದಕ್ಕೆ ಅವರ ಕೈಯಲ್ಲಿ ಸ್ಮಾರ್ಟ್ ಫೋನ್ ಇಲ್ಲದಿರುವುದೇ ಕಾರಣ ಎಂದು ನನಗೆ ಅನ್ನಿಸುತ್ತಿತ್ತು.‌ ಹೌದಲ್ಲವೇ, ಅವರ ಕೈಯಲ್ಲೂ ಸ್ಮಾರ್ಟ್ ಫೋನುಗಳಿದ್ದರೆ ಅವರೂ ನಮ್ಮಂತೆಯೇ ಮೊಬೈಲ್ ನೋಡುತ್ತಲೋ, ಫೋಟೋ ತೆಗೆಯುತ್ತಲೋ ನಮ್ಮೊಟ್ಟಿಗೇ ಇರುತ್ತಿದ್ದರಲ್ಲ,. ಹೀಗೆ ಇದ್ದಕ್ಕಿಂದ್ದಂತೆ ಜಾತ್ರೆಯಲ್ಲಿ ಕಳೆದು ಹೋಗುವ ಸಾಧ್ಯತೆಗಳು ಕಡಿಮೆ ಇರುತ್ತಿತ್ತು.  

ನಾವು ಎಷ್ಟು ದೂರ ಕಣ್ಣು ಹಾಯಿಸಿದರೂ ಕಳೆದು ಹೋದವರ ಪತ್ತೆಯಿಲ್ಲ. ದೇವಸ್ಥಾನದ ಒಳಗಿರಬಹುದು, ಅಥವಾ ಕಾಯಿ ಒಡೆಸುವ ಜಾಗದಲ್ಲಿರಬಹುದು ಎಂದೆಲ್ಲ ಊಹಿಸಿ  ಕುತ್ತಿಗೆಯನ್ನು ಉದ್ದ ಮಾಡಿ ನೋಡಿಯಾಯ್ತು. ಎಲ್ಲಿಯೂ ಕಾಣದೇ ನನ್ನ ಗಂಡನಂತೂ ಅರ್ಧ ಚಂದ್ರಾಕೃತಿಯ ರೀತಿಯಲ್ಲಿ ತಲೆಯ ಹಿಂದಿನ ಭಾಗ ಅರ್ಧ ಬೋಳಾದವರನ್ನು ಹುಡುಕಲು ಶುರು ಮಾಡಿದ್ದರು. ಆ ಜನರ ಸಂಖ್ಯೆಯೆನು ಕಡಿಮೆಯೇ? ಮೂರನೇ ಮಾವನ ಅರ್ಧಚಂದ್ರಾಕೃತಿಯ ಬೋಳುತಲೆ ಅಂತಹ ಅದೆಷ್ಟೋ ಸಹಸ್ರ ಬೋಳುತಲೆಯ ಮಧ್ಯೆ ಸೇರಿ ಹೋಗಿತ್ತು. ಯಾರ ಫೋನಿಗೂ ನೆಟ್ವರ್ಕ್ ಇಲ್ಲದೇ ಹೋದ್ದರಿಂದ ಕರೆ ಮಾಡುವುದಕ್ಕೂ ಸಾಧ್ಯವಿಲ್ಲದಂತ ಅಸಹಾಯಕ ಪರಿಸ್ಥಿತಿ ನಮ್ಮದು.  ಕಡೆಗೆ ಎಲ್ಲೂ ಕಾಣದಾದಾಗ ನಮಗೆ ನಾವೇ ಸಮಾಧಾನ ಮಾಡಿಕೊಂಡೆವು. ಮೂರನೇ ಮಾವನ ಕಲ್ಲಂಗಡಿ ಹಣ್ಣಿನ ಪ್ರೀತಿಯ ಬಗ್ಗೆ ತಿಳಿದೂ ಕೂಡ ಹೀಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ, ಎಲ್ಲೂ ಸಿಗದಿದ್ದರೆ ಅವನನ್ನು ಕಲ್ಲಂಗಡಿ ಹಣ್ಣಿನ ಅಂಗಡಿಯಿದ್ದಲ್ಲೆಲ್ಲ ಹುಡುಕಿದರಾಯ್ತು, ಎಲ್ಲೂ ಸಿಗದವನು ಅಲ್ಲಿ ಖಂಡಿತವಾಗಿಯೂ ಸಿಗಬಲ್ಲ. ಈ ಮಾವನ ಕಲ್ಲಂಗಡಿ ಪ್ರೀತಿಗೆ ನಾವೆಲ್ಲ ಇಟ್ಟ ನಂಬುಗೆಯೇ ನಮ್ಮ ಚಿಂತೆಯನ್ನು ಶಮನ ಮಾಡಿತ್ತು.

ಮೂರನೇ ಮಾವ, ಅತ್ತೆ ಮತ್ತು ಚಿಕ್ಕ ಮೈದುನನನ್ನು ಕಳೆದುಕೊಂಡ ನಾವುಗಳು ಬಲು ಎಚ್ಚರದಿಂದ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಹೆಜ್ಜೆ ಹೆಜ್ಜೆಗೂ ಹಾಜರಿ ಹಾಕಿಕೊಳ್ಳುತ್ತಿದ್ದೆವು. ನಾವಷ್ಟೇ ಅಲ್ಲ, ನಮ್ಮ ಚಪ್ಪಲಿಗಳೂ ಕೂಡ ಕಳೆದುಹೋಗಬಾರದೆಂದು ಮತ್ತು ಬೆಂಗಳೂರು ಅತ್ತೆಗಾದ ಕಹಿ ಘಟನೆ ನಮ್ಮ ಬಾಳಿನಲ್ಲಿ ನಡೆಯಕೂಡದೆಂದು ನಾವು ನಮ್ಮ ಚಪ್ಪಲಿಗಳಿಗೆ ವಿಶೇಷ ಸುರಕ್ಷತೆಯನ್ನು ಕಲ್ಪಿಸಿದ್ದೆವು. ಒಬ್ಬರ ಚಪ್ಪಲಿಯ ಮೇಲೆ ಇನ್ನೊಬ್ಬರ ಚಪ್ಪಲಿಯನ್ನು ಮಗುಚಿ ಹಾಕಿ, ಜೋಡಿ ಚಪ್ಪಲಲ್ಲಿ ಒಂದನ್ನು ಮಾರ ದೂರಕ್ಕೆ ವಿಕಾರವಾಗಿ ಎಸೆದ ಹಾಗೆ ಕಾಣುವಂತೆ, ಅಶಿಸ್ತಿಗೆ ಉದಾಹರಣೆ ಇದುವೇ ಎಂಬಂತೆ ಇಟ್ಟಿದ್ದೆವು. ಯಾವುದೇ ಕಾರಣಕ್ಕೂ ಚಪ್ಪಲಿ ಕಳ್ಳರಿಗೆ ಚಪ್ಪಲಿ ಕದಿಯಲು ಪ್ರಚೋದನೆಯಾಗಬಾರದೆಂದು ಇಷ್ಟೆಲ್ಲ ಉಪಾಯ.

ಮಂಜಗುಣಿಯ ದೇವರಾದ ವೆಂಕಟರಮಣನನ್ನು ಕಾಣಲು ದೇವಸ್ಥಾನದ ಒಳಹೊಕ್ಕು ದೇವರಲ್ಲಿ ಮೂರನೇ ಮಾವ ಮತ್ತು ಜೊತೆಯಲ್ಲಿ ಕಳೆದು ಹೋದವರ ಸುರಕ್ಷಿತ ವಾಪಸಾತಿಗೆ ಅರ್ಜಿ ಹಾಕಿದ್ದಾಯತ್ತು.‌ ಇಲ್ಲಿಯ ವೆಂಕಟರಮಣನಿಗೆ ಚಿಕ್ಕ ತಿರುಪತಿ ಎಂದು ಕರೆಯುತ್ತಾರಂತೆ. ಚಿಕ್ಕವನಾದರೇನು, ನಮ್ಮ ಬೇಡಿಕೆಯೂ ಚಿಕ್ಕದೇ ಅಲ್ಲವೇ? ಹಾಗಾಗಿ ಅರ್ಜಿ ಸ್ವೀಕಾರವಾಗಿರಬಹುದು. ರಾತ್ರಿಯಾಗಿದ್ದರಿಂದ ಮತ್ತು ತುಂಬಾ ಜನರಿದ್ದ ಕಾರಣಕ್ಕಾಗಿ ಅಲ್ಲಿಯ ಶಿಲ್ಪ ಕಲೆಗಳನ್ನು ನೋಡುವ ಹಾಗೂ ಅ ದೇವಸ್ಥಾನದ ಆಯಕಟ್ಟುಗಳ ಬಗ್ಗೆ ಅಂದಾಜಿಸುವ ಅವಕಾಶವಾಗಲಿಲ್ಲ. ಕಳೆದು ಹೋಗುವ ಭಯ, ಕಳೆದವರಿಗಾಗಿ ಹುಡುಕಾಟ, ನಮಗಿಂತ ಹೆಚ್ಚಾಗಿ ನಮ್ಮ ಮೊಬೈಲು ಪರ್ಸುಗಳ ಕಾಳಜಿಯಲ್ಲಿ ದೇವಸ್ಥಾನದಲ್ಲಿದ್ದೇವೆಂಬ ಭಾವವೂ ಉಂಟಾಗಲಿಲ್ಲ.

ಹೊರಗಡೆಯ ಪ್ರಾಂಗಣದಲ್ಲಿ ದೇವರ ಪ್ರಸಾದವೆಂದು ಅತ್ರಾಸ, ಪಂಚಕಜ್ಜಾಯ, ಕಲ್ಲುಸಕ್ಕರೆ, ಭಸ್ಮ, ಕುಂಕುಮ, ತೀರ್ಥ, ಒಣದ್ರಾಕ್ಷಿ, ಖರ್ಜೂರ ಎಲ್ಲವನ್ನು ಒಳಗೊಂಡ ಸರ್ವ ಪ್ರಸಾದವನ್ನು ಮಾರಾಟಕ್ಕಿಟ್ಟಿರುತ್ತಾರೆ. ಎಂಥ ನಾಸ್ತಿಕರಾದರೂ ಸಹ ಈ ತರದ ಪ್ರಸಾದಕ್ಕಾಗಿಯಾದರೂ ದೇವಸ್ಥಾನಕ್ಕೆ ಬರಬೇಕು. ನಾವು ಸರತಿಯಲ್ಲಿ ಕೈಯೊಡ್ಡಿ ನಿಂತಾಗ, ಮಂಜುಗುಣಿ ವೆಂಕಟರಮಣನ ಪ್ರಸಾದವೋ ಎಂಬಂತೆ ಕಳೆದು ಹೋದ ಮೂವರೂ ಕೂಡ ಪ್ರಸಾದ ಕೊಡುವ ಕೌಂಟರಿನಲ್ಲಿ ಕಣ್ಣಿಗೆ ಬಿದ್ದು ನಮ್ಮ ಕಣ್ಣುಗಳಿಗೆ ಆನಂದವನ್ನುಂಟು ಮಾಡಿದರು. ಅಂತೂ ಚಿಕ್ಕ ತಿರುಪತಿಯು ನಮ್ಮನ್ನು ದೊಡ್ಡ ಗಂಡಾಂತರದಿಂದ ಪಾರುಮಾಡಿದನೆಂದು ಆನಂದಾಶ್ರುಗಳನ್ನು ಕಣ್ಗಳಲ್ಲಿ ತುಂಬಿಸಿಕೊಂಡೆವು.

ಎಲ್ಲರೂ ಒಟ್ಟಾಗಿ ಹೊರಗೆ ಬಂದ ಮೇಲೆ ತೇರು ಹತ್ತುವುದೋ ಬೇಡವೋ ಎಂಬ ಚರ್ಚೆ ಸುಮಾರು ಹೊತ್ತು ನಡೆಯಿತು. ನನ್ನನ್ನು ಹೊರತಾಗಿ ಎಲ್ಲರೂ ಈ ಮೊದಲು ತೇರು ಹತ್ತಿದವರೇ. ಬೇಗ ತೇರು ಹತ್ತಿ ದೇವರನ್ನು ನೋಡುವುದಾದರೆ ತಲೆಗೆ ಐವತ್ತು ರೂಪಾಯಿಯಂತೆ ಟಿಕೆಟ್ ಪಡೆದೇ ಹೋಗಬೇಕಿತ್ತು. ಇಲ್ಲವಾದರೆ ಉದ್ದ ಸರತಿ ಸಾಲಲ್ಲಿ ನಿಲ್ಲಬೇಕು. ಕಡೆಗೂ ತೇರು ಹತ್ತುವುದೆಂದು ತೀರ್ಮಾನವಾಗಿ ತನ್ನ ಹೆಂಡತಿಗೂ ಸೇರಿದಂತೆ ಉಳಿದೆಲ್ಲರಿಗೂ ತೇರು ಹತ್ತಿಸಿಯೇ ಬಿಡುವೆನೆಂದು ನನ್ನ ಗಂಡ ಟಿಕೆಟ್ ಪಡೆದೇ ಬಿಟ್ಟರು. ದೇವರಿಗೆ ಲಂಚ ಕೊಟ್ಟು ದರ್ಶನ ಪಡೆಯುವವರ ಸಂಖ್ಯೆಯೂ ಕಡಿಮೆಯೇನಲ್ಲ. ಹಾಗಾಗಿ ಅಲ್ಲಿಯೂ ಒಂದು ಸಣ್ಣ ಸಾಲಿನಲ್ಲಿ ನಿಲ್ಲಬೇಕಾಯಿತು. ಅಷ್ಟು ಹತ್ತಿರದಿಂದ ಅಷ್ಟು ಭವ್ಯವಾದ ತೇರನ್ನು ಇದೇ ಮೊದಲ ಬಾರಿಗೆ ನಾನು ನೋಡಿದ್ದು. ಬಣ್ಣದ ಕಾಗದಗಳಿಂದ,ಮಿರಿ ಮಿರಿ ಮಿಂಚುವ ಲೈಟುಗಳಿಂದ ಅಲಂಕೃತವಾದ ತೇರು. ನಾನಾ ಬಗೆಯ ಹೂವಿನ ಮಾಲೆಗಳನ್ನು ಹೊತ್ತು ಕಂಗೊಳಿಸುತಿದ್ದ ತೇರನ್ನು ನೋಡುವುದೇ ಸೊಗಸು. ಸುಮಾರು ಮೆಟ್ಟಿಲುಗಳನ್ನು ಹತ್ತಿ ತೇರೊಳಗೆ ಹೋದರೆ ಒಳಗಿರುವ ಚಿಕ್ಕ ಜಾಗದಲ್ಲಿ ಜನ ಜಂಗುಳಿ. ದೇವರಿಗೆ ರಕ್ಷಣೆ ಕೊಡಲೆಂಬಂತೆ ಅಲ್ಲಿಯೂ ಎರಡು ಪೋಲೀಸರು ಕಾವಲು ನಿಂತಿದ್ದರು. ಅಷ್ಟು ದೂರದಿಂದ ಬಂದು, ಸರತಿಯಲ್ಲಿ ನಿಂತಿದ್ದರೂ ದೇವರ ಮುರ್ತಿಯನ್ನು ಒಂದು ನಿಮಿಷವೂ ನೋಡಲಿಕ್ಕಾಗಲಿಲ್ಲವೆಂದ ಮೇಲೆ ಇನ್ನು ದೇವರ ಬಳಿ ಕಷ್ಟ ಸುಖ ಹೇಳಿಕೊಳ್ಳುವುದೆಲ್ಲಿಂದ ಬಂತು?ಎಲ್ಲಾ ಪ್ರಸಿದ್ಧ ದೇವಸ್ಥಾನಗಳಲ್ಲಿಯೂ ಇಷ್ಟೇ ಕತೆಯೇ ಅಲ್ಲವೇ? ಅದರಲ್ಲೂ ಇಂತಹ ವಿಶೇಷ ದಿನಗಳಲ್ಲಿ ಹೋದರೆ ಮನಸ್ಸಿಗೆ ದೊರಕುವ ಶಾಂತಿಗಿಂತ ನೂಕುನುಗ್ಗಲಿನಿಂದಾಗುವ ತೊಂದರೆಯೇ ಹೆಚ್ಚು.  ಈ ಗೌಜಿಯಲ್ಲಿ ಹೇಗೋ ದಾಟಿಕೊಂಡು ತೇರಿನಲ್ಲಿ ಕುಳ್ಳಿರಿಸಿದ ದೇವರನ್ನು ದರ್ಶನ ಮಾಡುವ ಅವಕಾಶಮಾಡಿಕೊಂಡೆವು.
ತೇರಿಳಿದು ಕೆಳಗೆ ಬಂದರೆ ಹೆಂಡತಿಯನ್ನು ತೇರು ಹತ್ತಿಸಿದೆನೆಂಬ ಖುಷಿ ನನ್ನ ಗಂಡನ ಮುಖದಲ್ಲಿ ಕಾಣುತ್ತಿತ್ತು.

ಕೆಳಗಿನಿಂದ ದೇವರಿಗೆ ಕಡಲೆ ಬೀಜವನ್ನು ಎಸೆದು, ದೇವರಿಗೆ ಸಂಬಂಧಿಸಿದ ಕಾರ್ಯಕ್ರಮಗಳೆಲ್ಲ ಮುಗಿಯಿತೆಂದಾದ ಮೇಲೆ  ನಮಗೆ ನಿಜವಾದ ಜಾತ್ರೆ ಶುರು. ತುಂಬಾ ಸುರಕ್ಷಿತವಾಗಿರಿಸಿದ್ದ ನಮ್ಮ ಚಪ್ಪಲಿಗಳನ್ನು ನಾವೇ ಹಾಕಿಕೊಂಡು ಜಾತ್ರೆ ಪೇಟೆಗೆ ಹೊರಟೆವು. ನಮ್ಮ ಮನೆಯಿಂದ ಹೋದವರಲ್ಲಿ ಹೆಣ್ಣುಮಕ್ಕಳೇ  ಬಹುಸಂಖ್ಯಾತರಾದ್ದರಿಂದ ಬಳೆ ಪೇಟೆಗೇ ಮೊದಲು ಹೋಗಬೇಕಾಯ್ತು. ನನ್ನ ಮೂರನೇ ಅತ್ತೆಯು ಮಕ್ಕಳ ಮದುವೆಗೂ ಸೇರಿಸಿ ಬಳೆ ತೆಗೆದುಕೊಂಡಳೆಂದು ತೋರುತ್ತದೆ. ಬಳೆ ಪೇಟೆಯಲ್ಲಿನ ಧೂಳನ್ನು ತಡೆಯಲು ಆಗಲೇ ನೆಗಡಿಯಾಗಿದ್ದ ಮೂರನೇ ಅತ್ತಿಗೆಯು ಕರ್ಚೀಫಿನಲ್ಲಿ ಮೂಗು ಮುಚ್ಚಿಕೊಂಡೇ ಬರುತ್ತಿದ್ದಳು. ಈ ನಡುವೆ ರೊಚ್ಚಿಗೆದ್ದ ಗಂಡಸರು ತಾವೇನೂ ಕಡಿಮೆಯಿಲ್ಲ ಎಂದು ಲೇಸರ್ ಲೈಟ್, ಪಿಂಗ್ ಪಾಂಗ್ ಬಾಲ್, ಮತ್ತು ಗುಳ್ಳೆ ಮಾಡುವ ನೊರೆಯನ್ನು ಖರೀದಿಸಿದರು. ಮತ್ತು ಅದನ್ನು ಹೆಣ್ಣುಮಕ್ಕಳಿಗೆ ಆಡಲು ಕೊಡುವುದಿಲ್ಲ ಎಂದು ನನ್ನ ಗಂಡನು ಕಂಡಿಷನ್ ಹಾಕಿಯೂ ಆಯ್ತು. ನಾವು ಯುವತಿಯರು ಕಿವಿಗೆ ಹಾಕುವ ಓಲೆ, ಕತ್ತಿಗೆ ಹಾಕಲು ಸರ, ಕೈಗೆ ಹಾಕಲು ಬಳೆ ಹೀಗೆ ಸುಮಾರು ವೀಕ್ಷಣೆ ಮತ್ತು ಖರೀದಿ ನಡೆಸಿ ಗಂಡಸರ ಕೆಂಗಣ್ಣಿಗೆ ಗುರಿಯಾಗುವುದರಲ್ಲಿದ್ದೆವು. ಆದರೂ ನಮಗೆ ಅಷ್ಟೇನು ಶಾಪಿಂಗ್ ಮಾಡುವ ಉಮೇದು ಉಂಟಾಗಲಿಲ್ಲ. ಮಂಜುಗುಣಿ ತೇರಿನ ಬಳೆ ಪೇಟೆ ಚಿಕ್ಕದಾಗಿ ಕಂಡಿತ್ತು. ಎಷ್ಟೆಂದರೂ  ನಾವು ಶಿರಸಿ, ಯಲ್ಲಾಪುರ ಜಾತ್ರೆಯಂತ ದೊಡ್ಡ ದೊಡ್ಡ ಜಾತ್ರೆ ಗಳನ್ನು ನೋಡಿದವರಲ್ಲವೇ?

ಇಷ್ಟರಲ್ಲಿಯೇ ನಮಗೆಲ್ಲರಿಗೂ ಹಸಿವಾಗಿ ಚಾಟ್ಸ್ ತಿನ್ನಲೇಬೇಕೆಂದು ಸರ್ವಾನುಮತದಿಂದ ಎಲ್ಲರೂ ನಿರ್ಧರಿಸಿ ಅಲ್ಲಿಯೇ ಇದ್ದ sweet corn ಭಕ್ಷಿಸಿದೆವು. ಅಷ್ಟಕ್ಕೇ ಎಲ್ಲಿ ಸಾಲುತ್ತದೆ? ಸಾಲುಸಾಲಾಗಿ ನಿಂತ ಐಸ್ಕ್ರೀಮಿನ ಅಂಗಡಿಗಳು ಕಣ್ಣಿಗೆ ಬೀಳದೇ ಇರುತ್ತವೆಯೇ. ಯಾವ ಅಂಗಡಿಯಲ್ಲಿ ಯಾವ ಐಸ್ ಕ್ರೀಮ್ ತಿನ್ನಬೇಕೆಂಬ ಅಯ್ಕೆಯನ್ನು ಗಂಡಸರಿಗೇ ಬಿಟ್ಟುಕೊಟ್ಟೆವು. ಅವರೇನೂ ಆಯ್ಕೆ ಮಾಡುವಲ್ಲಿ ಹೆಂಗಸರಿಗಿಂತ ಕಮ್ಮಿಯಿರಲಿಲ್ಲ. ಒಬ್ಬರು ಕರಾವಳಿ ಎಂದರೆ ಇನ್ನೊಬ್ಬರು ಹಿಮಾಲಯ ಎಂದು. ಹಿಮಾಲಯ ಚೆನ್ನಾಗಿರುವುದಿಲ್ಲವೆಂದು ಇನ್ನೊಬ್ಬರು ಹೇಳಿದ್ದಕ್ಕೆ ಅದುವೂ ಬೇಡವೆಂದಾಯ್ತು. ಕಡೆಗೆ ನನ್ನ ಮೈದುನನ ಆಯ್ಕೆಯಂತೆ ಪಂಚಮಿ ಐಸ್ ಕ್ರೀಮ್ ಅಂಗಡಿಗೆ ಹೋಗಿ ಗಡಿ ಬಿಡಿ ಮಾಡಿಕೊಳ್ಳದೇ  ಗಡ್ ಬಡ್ ತಿಂದೆವು. ತಿಂದ ಪ್ರೂಫಿಗಾಗಿ ಸೆಲ್ಫಿಯನ್ನೂ ತೆಗೆದುಕೊಂಡೆವು. ಅಷ್ಟಕ್ಕೇ ಮುಗಿಯಲಿಲ್ಲ. ತಿನ್ನುವುದಕ್ಕೆಂದೇ ತೇರಿಗೆ ಬಂದವರ ಹಾಗಾಗಿತ್ತು ನಮ್ಮ ಕತೆ. ಒಂದಷ್ಟು ಜನ ಮಸಾಲೆಪುರಿಯನ್ನೂ ಒಂದಷ್ಟು ಜನ ಪಾನಿ ಪುರಿಯನ್ನೂ, ತಿಂದೆವು. ಇಷ್ಟಾದ ಮೇಲೆ ಮೂರನೇ ಮಾವನ ಬಯಕೆಯನ್ನು ಪೂರೈಸದಿದ್ದ ಮೇಲೆ ಅದೆಂತ ನ್ಯಾಯ? ಕಲ್ಲಂಗಡಿ ಹಣ್ಣಿನ ಅಂಗಡಿಗಳು ಮೂರನೇ ಮಾವನನ್ನು ಕೈಬೀಸಿ ಕರೆಯುತ್ತಿದ್ದವು. ಅದಕ್ಕಾಗಿ ಒಂದು ಅಂಗಡಿಗೆ ಹೋದರೆ ಅಲ್ಲಿ ಹಣ್ಣು ಕೊಡುವ ಹುಡುಗ ನೋಡಲು ಚೆನ್ನಾಗಿರಲಿಲ್ಲ ಎಂದು ಈ ಮಾವನ ಆರೋಪ. ನೋಡಲು ಚೆನ್ನಾಗಿರುವ ಕಲ್ಲಂಗಡಿ ಹಣ್ಣನ್ನು ಮಾರುವ ಹುಡುಗನ್ನು ಹುಡುಕಿಕೊಂಡು ಹೋಗಿ ಅಲ್ಲಿ ಕಲ್ಲಂಗಡಿ ತಿಂದರೆ, ಆ ಹಣ್ಣು ಸಿಹಿಯೇ ಇರಲಿಲ್ಲ. ಹಣ್ಣಿನ ಸಿಹಿ ಮಾರುವವನ ಮುಖದಲ್ಲಿರುತ್ತದೆಯೇ? ಜಾತ್ರೆ ಪೇಟೆಯಲ್ಲಿ ಈ ಜ್ಞಾನೋದಯವೂ ಮಾವನಿಗೆ ಆಗಿರಬೇಕು.. ನೆಗಡಿಯೆಂದು ಬಳೆಪೇಟೆಯಲ್ಲಿ ಮೂಗು ಮುಚ್ಚಿಕೊಂಡು ಬರುತ್ತಿದ್ದ ನನ್ನ ಮೂರನೇ ಅತ್ತಿಗೆ ನೆಗಡಿ ಮತ್ತು ಕರ್ಚೀಫನ್ನು ಮರೆತು ಎಲ್ಲವನ್ನು ಸ್ವಾಹಾ ಮಾಡಿದ್ದಳು. ಹೊಟ್ಟೆಯಲ್ಲಿ ಸರಿಯಾಗಿ ಅಕ್ಕಚ್ಚು ಆಗಿದೆ ಎಂದೆನ್ನಿಸಿದರೂ ಕೊನೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವುದನ್ನು ಮರೆಯಲಿಲ್ಲ. ಜಾತ್ರೆಯ ಧೂಳೂ, ಜನಜಂಗುಳಿಯೂ ಸಾಕೆಂದೆನಿಸಿ ಹೊರಡೋಣ ಎಂದು ನಿರ್ಧರಿಸಿದೆವು. ಹೊಟ್ಟೆ ಹಾಳಾಗುವಷ್ಟು ತಿಂದಿದ್ದೆವು.  ರಾತ್ರಿ ಹನ್ನೊಂದು ಗಂಟೆಯೂ ದಾಟಿತ್ತು.

ನಮ್ಮ ಡ್ರೈವರನನು ಆ ಉದ್ದನೆಯ ಟ್ರಾಫಿಕ್ ಜಾಮನ್ನು ಭೇದಿಸಿ ನಾವಿರುವ ಪಾರ್ಕಿಂಗ್ ಜಾಗಕ್ಕೆ ಬಂದು ಮತ್ತೆ ನಮ್ಮನ್ನು ಮನೆಗೆ ಬಿಡಲು ಹೊರಟ. ಓಮಿನಿ ಹತ್ತಿ ಗಾಡಿ ಹೊರಟು ಕೆಲವೇ ನಿಮಿಷಗಳಾಗಿರಬೇಕು. ಮೂರನೇ ಮಾವ ಡ್ರೈವರನ ಪಕ್ಕದ ಸೀಟಿನ ಕಿಟಕಿಯ ಬಳಿ ಕುಳಿತಿದ್ದ. ನೆನೆದವರ ಮನದಲ್ಲಿ ಎಂಬಂತೆ ಕಲ್ಲಂಗಡಿ ಮಾರುವವನೊಬ್ಬ ಇವನನ್ನು ಕರೆದು ಕಲ್ಲಂಗಡಿ ಬೇಕೆ ಎಂದು ಕೇಳಬೇಕೇ? ಎಷ್ಟಂದರೂ ಹೋಗುತ್ತಿದ್ದ ಗಾಡಿಯದು. ಅವನಿಗೂ ವ್ಯಾಪಾರವಾಗಬೇಕಿತ್ತು. ಇವನಿಗೂ ಕಲ್ಲಂಗಡಿ ಬೇಕಿತ್ತು. ಕ್ಷಣಾರ್ಧದಲ್ಲಿ ಐವತ್ತು ರೂಪಾಯಿಗೆ ಕಲ್ಲಂಗಡಿಯನ್ನು ಚೌಕಾಸಿ ಮಾಡಿ ಕೊಂಡುಕೊಂಡೇ ಬಿಟ್ಟ. ಎಲ್ಲರೂ ಮೂರನೇ ಮಾವನ ಈ ಅದೃಷ್ಟಕ್ಕೆ ಆಶ್ಚರ್ಯ ಪಟ್ಟೆವು. ನಮ್ಮ ಬಯಕೆಗಳು ಹೀಗೆ ಅನಿರೀಕ್ಷಿತವಾಗಿ ಕೈಗೆ ಸಿಕ್ಕರೆ ಎಷ್ಟು ಖುಷಿಯಲ್ಲವೇ? ಜೀವನದಲ್ಲಿ ಅತೀ ಮಹತ್ತರವಾದದ್ದೇನೋ ಬಯಸಿ ಪಡೆಯುವುದಕ್ಕಿಂತ ಸಣ್ಣ ಪುಟ್ಟದ್ದನ್ನು ಬಯಸಿ ಅವಗಳನ್ನೇ ಮನಸಾರೆ ಆನಂದಿಸುವ ಮನೋಧರ್ಮವೇ ದೊಡ್ಡದೆಂದೆನಿಸಿತು.

ಇಷ್ಟೆಲ್ಲ ಅದ ಮೇಲೆ ಗಾಡಿಯಲ್ಲಿ ನಮ್ಮ ಅಂತ್ಯಾಕ್ಷರಿ ಶುರು. ಅಂತ್ಯಾಕ್ಷರಿಯ ನಿಯಮದಂತೆ ನಾಲ್ಕಾರು ಹಾಡು ಹಾಡಿದ್ದೇವೇನೋ. ಅನಂತರ ನನ್ನ ಅತ್ತಿಗೆಯರೂ, ನನ್ನ ಗಂಡನೂ   ಸ್ವರಚಿತವಾದ, ಅನರ್ಥಕವಾದ, ಆಶುಕವಿತೆಗಳ ಜುಗಲ್ ಬಂದಿ ನಡೆಸಲು ಶುರು ಮಾಡಿದ್ದರು. ರೇವಣಕಟ್ಟೆಗೆ ಬರುವವರೆಗೂ ಇದು ಮುಂದುವರೆಯಿತು. ನಾನಂತೂ ನಕ್ಕು ನಕ್ಕು ಸುಸ್ತಾಗಿದ್ದೆ. ಮುಂದೆ ಕುಳಿತ ಚಿಕ್ಕ ಮೈದುನ ಹಾಗೂ ಮೂರನೇ ಮಾವ ಮನೆಗೆ ಬರುವವರೆಗೂ ತಾವೇನೂ ಕೇಳಿಸಿಕೊಳ್ಳಲಿಲ್ಲ ಎಂಬಂತೆ ಇದ್ದರು. ಮನೆಗೆ ಬಂದು ಲೈಟಿನ ಬೆಳಕಿಗೆ ನೋಡಿದರೆ ನನ್ನ ನೀಲಿ ಪ್ಯಾಂಟು ಕೆಂಪು ಬಣ್ಣವಾಗಿತ್ತು. ನನ್ನ ಕಪ್ಪು ಬಣ್ಣದ ಬ್ಯಾಗು ಧೂಳಿನಲ್ಲಿ ಮುಳುಗೇಳಿಸಿದಂತಿತ್ತು. ತಲೆಗೆ ಮೆಹಂದಿ ಹಚ್ಚಿದಂತಾಗಿತ್ತಿರಬಹುದು. ಇವೆಲ್ಲ ಜಾತ್ರೆ ಪೇಟೆಗೆ ಹೋಗಿ ಬಂದಿದ್ದರ ಕುರುಹುಗಳು.

ಮಾರನೇ ದಿನ ಕತೆ ಹೇಳಲು ನನ್ನ ಗಂಡನಿಗೆ ತೇರಿನದೇ ಸುದ್ದಿ. ಮೂರನೇ ಮಾವ ಪಿಂಗ್ ಪಾಂಗ್ ಬಾಲ್ ಆಡಲು ಬಾರದೇ ಕೈಚೆಲ್ಲಿದ. ನಾನು ನನ್ನ ಅತ್ತಿಗೆಯರು ನನ್ನ ಗಂಡನು ತಂದ ನೊರೆ ಗುಳ್ಳೆಯನ್ನು ಕಸಿದುಕೊಳ್ಳಲು ಪಡಬಾರದ ಕಷ್ಟ ಪಟ್ಟೆವು. ತೇರಿನ ಫೋಟೋ ವಾಟ್ಸಪ್ಗೆ ಹಾಕಲು ನೆಟ್ವರ್ಕ್ ಗಾಗಿ ಬೆಟ್ಟ ಹತ್ತಿದ್ದಾಯ್ತು. ಗುಳ್ಳೆ ಒಡೆಯುವ ವೀಡಿಯೋ ವನ್ನು ವಾಟ್ಸಪ್ ಸ್ಟೇಟಸ್ ಗೆ ಹಾಕಲು ನನ್ನ ಚಿಕ್ಕ ಅತ್ತಿಗೆ ಪಟ್ಟ ಕಷ್ಟ ಅಂತಿಂತದ್ದಲ್ಲ. ಆದರೂ ಪಕ್ಕದ ಮನೆಗೆ ರಾತ್ರಿಯಲ್ಲಿ ಲೇಸರ್ ಲೈಟ್ ಬಿಡುವ ಕೆಲಸವೊಂದು ಉಳಿದೇ ಹೋಯಿತು. ಮಂಜಗುಣಿಯ ಪ್ರಸಾದ ನಮ್ಮ ಮನೆಗಷ್ಟೇ ಅಲ್ಲದೇ ನನ್ನ ತವರಿನ ಮನೆಯವರೆಗೂ ತಲುಪಿತು. ಅಲ್ಲಿಂದ ಇನ್ನೆಲ್ಲೆಲ್ಲಿ ಸಾಗಣೆಯಾಗಿದೆಯೋ ಗೊತ್ತಿಲ್ಲ.

ತೇರಿಗೆ ಹೋಗಿ ಬಂದವರ ನೆನಪುಗಳು, ತೇರಿಗೆ ಹೋಗುವವರ ಉಮೇದು, ಹೋದಾಗಿನ ಸಂಭ್ರಮ, ಹೋಗಿ ಬಂದವರ ಅನುಭವ ಎಲ್ಲವೂ ವಿಶೇಷ. ಒಬ್ಬರೇ ಇಬ್ಬರೇ ಹೋದರೆ ಅದರಲ್ಲೇನು ಛಂದ? ಜೊತೆಗೆ ಮನೆಯವರೆಲ್ಲ ಇರಬೇಕು, ಬಂದರೆ ನೆಂಟರೂ ಬೇಕು, ಹತ್ತಿರ ಎನಿಸುವಂತೆ ಖುಷಿ ಪಡಿಸುವ ಖುಷಿ ಪಡುವ ಜನವಿರಬೇಕು. ಒಬ್ಬರಿಗೊಬ್ಬರು ಗೇಲಿ ಮಾಡಿಕೊಂಡು ಆನಂದಿಸಬೇಕು. ಆಗ ತಾನೇ ಜಾತ್ರೆಯ ಗೌಜಿ, ಅಲ್ಲಿನ ಧೂಳು ಎಲ್ಲವೂ ಇಷ್ಟವಾಗುವುದು, ರುಚಿಯಿಲ್ಲದಿದ್ದರೂ ಕಂಡಿದ್ದೆಲ್ಲ ತಿನ್ನುವುದು?  ನಾವಂತೂ ಮಂಜಗುಣಿ ತೇರನ್ನು ಮನಸಾ ಆನಂದಿಸಿದ್ದೇವೆ. ಮುಂದಿನ ಬಾರಿ ನೀವೆಲ್ಲರೂ ಬನ್ನಿ. ಖುಷಿ ಪಡೋಣ‌.

~ಸುಮನ

ಭಾನುವಾರ, ಸೆಪ್ಟೆಂಬರ್ 30, 2018

ಭಾಷಾಶುದ್ಧಿಯ ಆಂದೋಲನಗಳು ಹಾಗೂ ತೊಡಕುಗಳು

ಪ್ರಸ್ತುತ ಸಾಮಾಜಿಕಮಾಧ್ಯಮಗಳಲ್ಲಿ ಭಾಷೆಯ ಕುರಿತು ಎರಡು ಬಗೆಯಲ್ಲಿ ಚರ್ಚೆಗಳಾಗುತ್ತಿವೆ. ಕನ್ನಡದಲ್ಲಿ ಮಹಾಪ್ರಾಣಗಳನ್ನು ಬಳಸಬಾರದು, ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಬೇಕು ಎಂಬ "ಎಲ್ಲರ ಕನ್ನಡ" ಎಂಬುದು ಒಂದು ವಾದ. ಇನ್ನೊಂದು- ಕನ್ನಡದಲ್ಲಿ ಬಳಸುವ ಎಷ್ಟೋ ಶಬ್ದಗಳು ತಪ್ಪಾಗಿ ಬಳಸಲ್ಪಡುತ್ತಿವೆ, ಅವುಗಳ ಸರಿಯಾದ ರೂಪ ಹೇಗೆ ಎಂಬುದನ್ನು ವಿವರಿಸುವ ಚರ್ಚೆ. ಇದರಲ್ಲಿ ಮೊದಲನೆಯ ಎಲ್ಲರ ಕನ್ನಡ ಎಂಬ ವಾದ- ಅಥವಾ ಎಲ್ಲರ ಕನ್ನಡ ಎಂದು ಕನ್ನಡವನ್ನು ಸಂಕೋಚಿಸುತ್ತಿರುವ ಅವರ ಆಂದೋಲನ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಹಾನಿಕಾರಕ ಎಂಬುದಂತೂ ಸುವಿದಿತ. ಯಾವ ದುರುದ್ದೇಶದಿಂದ ಅದನ್ನು ಅವರು ಸ್ವೀಕರಿಸಿದ್ದಾರೋ ಗೊತ್ತಿಲ್ಲ. ಕನ್ನಡವನ್ನು ಕಲಿಯಲಾಗದ ಅಜ್ಞಾನವೋ ಅಥವಾ ಸಂಸ್ಕೃತದ್ವೇಷಿಮನಃಸ್ಥಿತಿಯೋ ಈ ಎಲ್ಲರ ಕನ್ನಡವೆಂಬ ಮೂರ್ಖರ ಗುಂಪಿಗೆ ಬೆನ್ನೆಲುಬಾಗಿರಬಹುದು. (ಮೂರ್ಖ ಎಂದು ಏಕೆ ಹೇಳಿದೆನೆಂದರೆ- ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬ ವಾದವನ್ನು ಮಾಡುವವರಿಗೆ, ಕಣ್ಣುಗಳನ್ನು ಮುಚ್ಚಿಕೊಂಡು ಸೂರ್ಯನೇ ಇಲ್ಲ ಎಂದು ಹಗಲಿಡೀ ಪರಿತಪಿಸುವವರಿಗೆ ಇನ್ನೇನು ಹೇಳಬೇಕೋ ಗೊತ್ತಿಲ್ಲ. ಇವರನ್ನು ಬದಲಾಯಿಸಲು ಸಾಧ್ಯವಿಲ್ಲ. ಭರ್ತೃಹರಿ ಕೂಡ ಹೇಳಿದ್ದಾನಲ್ಲ- ಸರ್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ ಎಂದು. ಹಾಗಾಗಿ ಇದೇ ಸೂಕ್ತ ಪದವೆನಿಸಿತು. ಅಥವಾ ಧೂರ್ತರು ಎಂದು ಬೇಕಾದರೂ ಇಟ್ಟುಕೊಳ್ಳಿ.) ಎಲ್ಲರ ಕನ್ನಡದ ದೋಷಗಳನ್ನೇ ಮತ್ತೆ ಚರ್ಚಿಸುವುದಾಗಲೀ  ವಿರೋಧಿಸುವುದಾಗಲೀ ನನ್ನ ಮೂರ್ಖತೆಯಾದೀತು. ಅಲ್ಲದೇ ಈ ವಿಷಯದಲ್ಲಿ ಸರಿ ಮತ್ತು ತಪ್ಪುಗಳ ನಡುವೆ ತುಂಬಾ ಅಂತರ ಇರುವುದರಿಂದ ಎಲ್ಲ ಜನರಿಗೂ ವಿವೇಚಿಸುವುದು ಕಷ್ಟವಿಲ್ಲ -ಎಂದು ಅದರ ಕಡೆ ಹೋಗದೇ ಇನ್ನೊಂದು ವಿಷಯದ ಕಡೆ ಬರುತ್ತಿದ್ದೇನೆ. ಹುಲಿಯ ಚರ್ಮ ಹೊದೆದುಕೊಂಡ ಇಲಿಯನ್ನು ಇಲಿ ಎಂದು ಗುರುತಿಸಬಹುದು. ಆದರೆ ಬೇರೆ ಪ್ರಾಣಿಯೊಂದು ಹುಲಿಯ ಚರ್ಮ ಧರಿಸಿಕೊಂಡ ಕಥೆ ನಮಗೆಲ್ಲ ಗೊತ್ತೇ ಇದೆ. 

ಈ ಇನ್ನೊಂದು ಸಂಗತಿಗೆ ಪ್ರವೇಶಿಸುವ ಮುನ್ನ- ಅಪಶಬ್ದ‌ಪ್ರಯೋಗದಿಂದ ಏನಾಗುತ್ತದೆ ಎಂಬುದನ್ನು ನೋಡೋಣ. ಅಪಶಬ್ದ ಎಂದರೆ ತಪ್ಪಾದ ಶಬ್ದ. ಅಪಶಬ್ದದ ಪ್ರಯೋಗದಿಂದ  ಯಾವ ಅರ್ಥವನ್ನು ಪ್ರಕಟಿಸುವುದಕ್ಕೆ ನಾವು ಆ ಶಬ್ದವನ್ನು ಪ್ರಯೋಗಿಸುತ್ತೇವೆಯೋ ಆ ಅರ್ಥವು ಅದರಿಂದ ಸ್ಫುರಿಸದೇ ಹೋಗಬಹುದು. ಉದಾಹರಣೆಗೆ ಹೇಳಬೇಕೆಂದರೆ ಒಂದು ಕಡೆ ರಸ್ತೆಯಲ್ಲಿ ಇರುವ ಸೂಚನಾ ಫಲಕದಲ್ಲಿ ಹೀಗೆ ಇತ್ತು- "ರಸ್ತೆಯಲ್ಲಿ ಹುಬ್ಬು ಇದೆ".  ವಸ್ತುತಃ ರಸ್ತೆಯಲ್ಲಿ ಹುಬ್ಬು ಹೇಗೆ ಇರಲು ಸಾಧ್ಯ. ಮನುಷ್ಯರ ಕಣ್ಣಿನ ಮೇಲೆ ಇರುವ ರೋಮಾವಳಿಗೆ ಹುಬ್ಬು ಎನ್ನುತ್ತಾರಲ್ಲವೇ! ಆ ಸೂಚನಾಫಲಕದಲ್ಲಿ ಹುಬ್ಬು ಎಂಬ ಶಬ್ದದ ಬದಲಿಗೆ " ಉಬ್ಬು" ಎಂಬ ಶಬ್ದ ಇರಬೇಕಾಗಿತ್ತು. ಈ ಅ-ಕಾರ ಮತ್ತು ಹ-ಕಾರಗಳ ನಡುವೆ ಬಹಳಷ್ಟು ಜನರಿಗೆ ಗೊಂದಲವುಂಟಾಗುತ್ತಿದೆ. "ಅಕುಹವಿಸರ್ಜನೀಯಾನಾಂ ಕಂಠಃ" ಅ-ಹ-ಕವರ್ಗ- ವಿಸರ್ಗಗಳನ್ನು ಉಚ್ಚರಿಸುವುದು ಕಂಠದಿಂದ. ಹಾಗಾಗಿಯೇ ಈ ಅಕ್ಷರಗಳಲ್ಲಿ ಉಚ್ಚಾರಣೆಯಲ್ಲಿ ಸಾಮ್ಯವಿದೆ. ತಮಿಳಿನಲ್ಲಿ ಮಹೇಶ- ಮಗೇಶ ಆಗುವುದೂ ಇದೇ ಕಾರಣಕ್ಕೆ. ಹೀಗಾಗಿ ಅ ಮತ್ತು ಹ ಅಕ್ಷರಗಳನ್ನು ಎಲ್ಲಿ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದಿರುವ ಅನೇಕ ಬರೆಹಗಾರರ ಲೇಖನದಲ್ಲಿ, ಪುಸ್ತಕಗಳಲ್ಲಿ ಅಯಾಚಿತವಾಗಿ ಈ ತಪ್ಪು ನುಸುಳುತ್ತದೆ. ಹೊಸತಲೆಮಾರಿನ ಬರೆಹಗಾರರ ಬಗ್ಗೆ ಹಿಂದೊಮ್ಮೆ ಲೇಖನವನ್ನು ಬರೆದಾಗ- ಇಂತಹ ತಪ್ಪುಗಳನ್ನು ಮಾಡಿದ ಹಲವು ಲೇಖಕರು- ಹಳ್ಳಿಯ ಜನರು ಆಡುಮಾತಿನಲ್ಲಿ ಇಷ್ಟೆಲ್ಲ ಶಾಸ್ತ್ರಶುದ್ಧವಾಗಿ ಮಾತನಾಡುವುದಿಲ್ಲ. ಅವರೆಲ್ಲ ಹೇಳುವುದು ರಸ್ಯವಾಗಿರುವುದಿಲ್ಲವೇ? ಕೇವಲ ಹಳಗನ್ನಡದ ಪಂಡಿತರು ಮಾತ್ರ ಬರೆಯಬೇಕೆ? ಎಂದೆಲ್ಲ ಪ್ರಶ್ನಿಸಿದ್ದರು. ದಿಟವೇ! ಕೆಲವು ವಿಷಯಗಳಲ್ಲಿ ನಮ್ಮ ಅಜ್ಞಾನವನ್ನು ಒಪ್ಪಿಕೊಳ್ಳಲೂ ಪ್ರಾಮಾಣಿಕತೆ ಬೇಕಾಗುತ್ತದೆ‌. ಹಳಗನ್ನಡ ಪಂಡಿತರು ಮಾತ್ರ ಬರೆಯಬೇಕು ಅಂತೇನೂ ಅಲ್ಲ. ಆದರೆ ಅವರು ಹೇಳಿದ್ದನ್ನು ಒಪ್ಪಿಕೊಂಡರೆ ಇವರಿಗೇನು ನಷ್ಟ? "ನಡೆವರೆಡಹದೆ ಕುಳಿತರೆಡಹುವರೆ" ಎಂದಂತೆ ನಡೆಯುವರು ಎಡಹುವುದು ಸಹಜ. ಆದರೆ ಎಡಹಿದಾಗ ತಿದ್ದಿ ಹೇಳಿದವರ ಮಾತು ಕೇಳದೇ ನಾನು ಎಡವಿಕೊಂಡೇ ನಡೆಯುತ್ತೇನೆ/ ಬೀಳುತ್ತೇನೆ ಎಂದರೆ ಏನು ಹೇಳುವುದು!  

ಅಂತಲ್ಲದೇ ಭಾಷೆಗೆ ಎರಡು ರೂಪಗಳಿವೆ. ಒಂದು ಮೌಖಿಕ ಇನ್ನೊಂದು ಗ್ರಾಂಥಿಕ. ಮೌಖಿಕರೂಪವನ್ನು ಗ್ರಾಂಥಿಕವಾಗಿ ಬಳಸಬಾರದು ಎಂದೇನೂ ಇಲ್ಲ. ಆದರೆ ನಿರೂಪಣೆಯಲ್ಲಿ ಔಚಿತ್ಯವನ್ನು ಗಮನಿಸಬೇಕು. ಕಥೆಯೊಂದರಲ್ಲಿ ಒಬ್ಬ ಅನಕ್ಷರಸ್ಥ ಹಳ್ಳಿಯ ಮನುಷ್ಯ- ಗ್ರಾಂಥಿಕವಾದ ರೂಪಗಳಲ್ಲಿ ದಪ್ಪ ದಪ್ಪ ಸಂಸ್ಕೃತ ಶಬ್ದಗಳನ್ನು ಬಳಸಿ ಸಮಾಸಭೂಯಿಷ್ಠವಾಗಿ ಮಾತನಾಡಿದರೆ ಎಷ್ಟು ಅನೌಚಿತ್ಯ ಎನಿಸುತ್ತದೆಯೋ ಅಷ್ಟೇ ಅನೌಚಿತ್ಯವು ಕವಿಪ್ರೌಢೋಕ್ತಿಯಲ್ಲಿ ಅಪಶಬ್ದಪ್ರಯೋಗವಾದಾಗ/ಅಗ್ರಾಂಥಿಕರೂಪಗಳು ಬಂದಾಗ ಅನಿಸುತ್ತದೆ. ಅಂದರೆ ಕವಿಯು ಅಥವಾ ಕತೆಗಾರನು ಕತೆಯನ್ನು ನಿರೂಪಿಸುವ ಮಾತಿನಲ್ಲಿ ಸಂಪೂರ್ಣವಾಗಿ ಆಡುಮಾತಿನ ಶೈಲಿಯಲ್ಲಿರದೇ ಎಲ್ಲೋ ಕೆಲವೊಂದಿಷ್ಟು ಶಬ್ದಗಳು ಆಡುಮಾತಿನವೂ ಅಪಶಬ್ದಗಳೂ ಬಂದರೆ ಅನೌಚಿತ್ಯವಾಗುತ್ತದೆಯಲ್ಲದೇ ಬರೆಹಗಾರನ ಅಜ್ಞಾನ ಎದ್ದು ತೋರುತ್ತದೆ.

ಒಬ್ಬ ಸಾಮಾನ್ಯ ಓದುಗನಿಗೆ ಇದೆಲ್ಲ ಅಷ್ಟು ಗಂಭೀರವೇ ಎಂದೆನಿಸಬಹುದು.  ಖಂಡಿತವಾಗಿಯೂ ಅಲ್ಲ. ಭಾಷೆ ಎನ್ನುವುದೇ ಒಂದು ಪ್ರದೇಶದ ಜನರೆಲ್ಲರೂ ಒಟ್ಟಾಗಿ ಒಪ್ಪಿಕೊಂಡಿರುವ ಮಾಧ್ಯಮ. ಅಲ್ಲದೇ ಕನ್ನಡದಂತಹ ಭಾಷೆಗಳೆಲ್ಲ ಪ್ರತಿದಿನವೂ ಬೆಳೆಯುತ್ತಿವೆ. ಆದರೆ ಅದರ ಗ್ರಾಂಥಿಕರೂಪಕ್ಕೆ ಒಂದಿಷ್ಟು ನಿರ್ದಿಷ್ಟವಾದ ನಿಯಮಗಳಿರಬೇಕು. ಹಾಗೂ ಅದನ್ನು ಎಲ್ಲರೂ ಒಪ್ಪಿರಬೇಕು. ಅಂದರೆ ಎರಡು ಸಾವಿರ ವರ್ಷದ ಇತಿಹಾಸ ಇರುವ ಭಾಷೆಯಲ್ಲಿ ನಾವು ಈಗ ಹೊಸ ನಿಯಮ ಮಾಡಿ ರೂಢಿಸಲು ಸಾಧ್ಯವಿಲ್ಲ. ಹಿಂದಿನಿಂದ ಒಪ್ಪಿಕೊಂಡು ಬಂದ ನಿಯಮಗಳನ್ನು ನಾವೂ ಒಪ್ಪಿ ಅದರಂತೆಯೇ ಬಳಸಬೇಕಷ್ಟೇ! ನಾವು ಹಾಗೆ ಬಳಸದೇ ನಮ್ಮದೇ ಬೇರೆ ರೀತಿ ಬಳಸುವುದರಿಂದ ಯಾರಿಗೂ ಅರ್ಥವಾಗುವುದಿಲ್ಲ- ಎಂಬುದು ಒಂದಾದರೆ, ಎರಡನೆಯದು ನಮಗೆ ಶುದ್ಧವಾದ ಭಾಷೆ ಬರುವುದಿಲ್ಲ ಎಂದೂ ಅರ್ಥ ಆಗುತ್ತದೆ. ಎಲ್ಲರ ಕನ್ನಡ ಎಂದು ಹೇಳುತ್ತಿರುವವರದ್ದು ಇದೇ ಪಾಡಾಗಿದೆ. ಕುವೆಂಪು ಅವರು "ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾಷೆ ಎಂಬುದು ಶಿಲೆಯಿದ್ದಂತೆ. ಅದನ್ನು ನಾವು ಯುಕ್ತವಾದ ರೀತಿಯಲ್ಲಿ ಬಳಸಿ ಗದ್ಯಪದ್ಯಗಳೆಂಬ ಸುಂದರ ಶಿಲ್ಪಗಳನ್ನು ರಚಿಸಬಹುದೇ ಹೊರತು ನಾವೇ ಭಾಷೆಯನ್ನು ಸೃಷ್ಟಿಸುತ್ತೇವೆ, ಅದನ್ನು ತಿದ್ದುತ್ತೇವೆ ಎಂಬುದು ಕಲ್ಲನ್ನು ಸೃಷ್ಟಿಸುತ್ತೇವೆ ಎನ್ನುವಷ್ಟೇ ಹಾಸ್ಯಾಸ್ಪದವಾಗುತ್ತದೆ. ಹಾಗಾಗಿ  ಬರವಣಿಗೆ ಮಾಡುವವರಿಗೆ ಆ ಭಾಷೆಯ ಶುದ್ಧಪದಗಳ ಅರಿವಿರಬೇಕಾದದ್ದು ಹಾಗೂ ಸರಿಯಾದ ಪದವನ್ನು ಬಳಸಬೇಕಾದದ್ದು ಕರ್ತವ್ಯವಾಗುತ್ತದೆ. ಎಲ್ಲರೂ ಸರ್ವಜ್ಞರೇನೂ ಅಲ್ಲವಲ್ಲ! ತಪ್ಪು ಮಾಡುವುದು ಸಹಜ. ಆದರೆ ತಿದ್ದಿಕೊಳ್ಳುವ ಪ್ರಾಮಾಣಿಕತೆ ಇರಬೇಕಾದದ್ದು ಮುಖ್ಯ. ಹಿಂದೆಲ್ಲ ಮಹಾಕವಿಗಳೇ ತಮ್ಮ ಕಾವ್ಯಗಳನ್ನು ಬಲ್ಲವರೊಬ್ಬರ ಬಳಿ ತಿದ್ದಿಸಿಕೊಳ್ಳುತ್ತಿದ್ದರು ಎಂಬುದನ್ನು ನಮಗೆ ಕವಿಚಕ್ರವರ್ತಿ ರನ್ನ ದುರ್ಗಸಿಂಹ ಮೊದಲಾದವರ ಕಾವ್ಯಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ.

ಭಾಷೆಗೆ ವೈಜ್ಞಾನಿಕವಾಗಿ ಚರ್ಚೆ ಮಾಡುವಾಗ ಶುದ್ಧ ರೂಪವಿರಬೇಕಾಗುತ್ತದೆ. ಗಣಿತದಂತೆ ಭಾಷೆಗೂ ಒಂದು ಮಟ್ಟದ ನಿಖರತೆ ಇರಬೇಕು ಎನ್ನುತ್ತಾರೆ. ಗಣಿತದಷ್ಟು ಕರ್ಕಶವಲ್ಲದಿದ್ದರೂ, ಕಠೋರವಾದ ತರ್ಕದಿಂದ ಕೂಡಿರದಿದ್ದರೂ ಭಾಷೆ ಬೆಳೆಯಲು ಈ ಆಯಾಮ ಅವಶ್ಯಕ. ಇಂಗ್ಲಿಷಿನಂತಹ ವಿಶ್ವವ್ಯಾಪಿ ಭಾಷೆಗೂ ಕೂಡ ತುಂಬಾ ವ್ಯವಸ್ಥಿತವಾದ ಚೌಕಟ್ಟಿದೆ. ಗಣ್ಯರಾದ ಪ್ರಕಾಶಕರ ಮೂಲಕ ಒಂದು ಪುಸ್ತಕ ಪ್ರಕಟವಾಗಬೇಕೆಂದರೆ ಪುಸ್ತಕದ ಭಾಷೆಯನ್ನು ಹಾಗೂ ಬಳಕೆಯನ್ನು ಸಂಪಾದಕರು ಹಲವು ಹಂತಗಳಲ್ಲಿ ತಿದ್ದುತ್ತಾರಂತೆ. ಹಲವು ಖಂಡಗಳಲ್ಲಿ ದೇಶಗಳಲ್ಲಿ ಹಲವು ರೂಪಗಳಲ್ಲಿ ಪಸರಿಸಿರುವ ಭಾಷೆಯಲ್ಲಿಯೇ- ಪುಸ್ತಕದ ಪ್ರಕಟಣೆಯಲ್ಲಿ ಭಾಷೆಯ ದೃಷ್ಟಿಯಿಂದ ಲೋಪದೋಷಗಳನ್ನು ಪರೀಕ್ಷಿಸುವುದಕ್ಕೆಂದೇ ಇರುತ್ತಾರಂತೆ. ಸಾಮಾಜಿಕವಾಗಿ ಶ್ರೇಣೀಕೃತವಾಗಿ ದೇಶಕಾಲಗಳಲ್ಲಿ ವೈವಿಧ್ಯವನ್ನು ತಳೆದ  ಈ ಭಾಷೆಯನ್ನು ಅಭಿವೃದ್ಧಿ ಪಡಿಸಲು ಹೀಗೆ ಅವರು ಸಾಕಷ್ಟು ಬಾರಿ ನಿಘಂಟುಗಳನ್ನು ಪರಿಷ್ಕರಿಸುತ್ತಾರೆ, ಹೊಸ ಶಬ್ದಗಳನ್ನು ಸೇರಿಸುತ್ತಾರೆ. ಇಷ್ಟೆಲ್ಲ ಹೆಣಗಾಟಗಳನ್ನು ಮಾಡುತ್ತಾರೆ.  ಇದೆಲ್ಲವೂ ಭಾಷೆಯಲ್ಲಿ ಒಂದು ಅಧಿಕಾರ ಸ್ಥಾಪಿಸಿಕೊಳ್ಳಬೇಕಾದವರು,  ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ವ್ಯಾವಹಾರಿಕವಾಗಿ ಬೆಳೆಯಬೇಕು ಎಂದು ಮಾಡಿಕೊಂಡಿರುವುದು. ಬಲಿಷ್ಠವಾದ ಅಥವಾ ಶಕ್ತವಾದ ಭಾಷೆ ಎನ್ನುವುದು ಸಮರ್ಥವಾದ ಬೊಕ್ಕಸವಿದ್ದಂತೆ. ಮಸೆದಿಟ್ಟ ಆಯುಧವಿದ್ದಂತೆ. ಬಳಕೆಯನ್ನು ಬಲ್ಲ ಅವರು ಹೀಗೆ ಅವರ ಭಾಷೆಯನ್ನು ಉಳಿಸಿಕೊಳ್ಳುತ್ತಿದ್ದಾರೆ.  ಕನ್ನಡಕ್ಕೂ ಈ ಪ್ರಮೇಯದ ಅವಶ್ಯಕತೆ ಇದ್ದೇ ಇದೆ. ಕನ್ನಡಕ್ಕೆ (ಎಲ್ಲರ ಕನ್ನಡದಂತಹ) ಕೃತಕ ಭಾಷೆಯ ಸೃಷ್ಟಿ ಎಷ್ಟು ಅನರ್ಥಕಾರಿಯೋ ಅಷ್ಟೇ ಅನರ್ಥ‌- ಔಚಿತ್ಯವಿಲ್ಲದೇ ಯಾವ ಯಾವ ಸಂದರ್ಭದಲ್ಲಿ ಹೇಗೆ ಪದಗಳನ್ನು ಬಳಸಬೇಕು ಎಂದು ತಿಳಿದುಕೊಳ್ಳದೇ ಬಳಕೆ ಮಾಡುವುದೂ ಆಗುತ್ತದೆ. ಹಾಗಾಗಿ ಸಾವಿರಾರು ವರ್ಷಗಳ ಪರಂಪರೆಯನ್ನು ಅವಲೋಕಿಸದೇ ಇರುವುದೂ ಕೂಡ ಸಾಧುವಲ್ಲ.
ಹೀಗಿರುವಾಗ ಭಾಷಾಶುದ್ಧಿಯನ್ನು ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹವಾಗಿದೆ. ಇಂತಹ ಸ್ವಚ್ಛಭಾಷೆಯ ಅಭಿಯಾನದಲ್ಲಿ ಒಬ್ಬರು ಲೇಖಕರು ಇಂತಿಂತಹ ಶಬ್ದಗಳು ತಪ್ಪು ಬಳಕೆ ಆಗುತ್ತಿವೆ. ಇಂತಿಂತಹ ಶಬ್ದಗಳ ಶುದ್ಧರೂಪ ಹೀಗಾಗಬೇಕು ಎಂದು ವಿವರವಾಗಿ ಹೇಳುತ್ತಿದ್ದಾರೆ. ಸಾಮಾನ್ಯ ಓದುಗನಿಗೆ ಅವರು ಹೇಳಿದ್ದು ಸತ್ಯ ಎಂಬಂತೆ ಅನಿಸುತ್ತದೆ. ಆದರೆ ಅಲ್ಲಿ ಕೆಲವೊಂದು ಸಣ್ಣ ದೋಷಗಳೂ ಇದ್ದವು. ಸಾಕಷ್ಟು ಪ್ರಮಾಣದಲ್ಲಿ ಕನ್ನಡ-ಸಂಸ್ಕೃತಗಳೆರಡರಲ್ಲೂ ಸಂಶೋಧನೆಯನ್ನು ಮಾಡಿದ, ಗದ್ಯಪದ್ಯಗಳನ್ನು ಬರೆದ ಒಬ್ಬ ವಿದ್ವಾಂಸರು ಈ ಸ್ವಚ್ಛಭಾಷೆಯ ಲೇಖಕರಿಗೆ ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಈ ದೋಷಗಳಿವೆ ಎಂದು ಹೇಳಿದಾಗ ಅವರಿಗೆ ಇವರು ಸೌಜನ್ಯಪೂರಕವಾಗಿ ಉತ್ತರಿಸಿ ತಮ್ಮ ದೋಷಗಳನ್ನು ತಿದ್ದಿಕೊಳ್ಳಬೇಕಲ್ಲವೇ!  ಉದಾಹರಣೆಗೆ- ಮೂಷಕ ಎಂಬ ಶಬ್ದವೇ ಸರಿ. ಮೂಷಿಕ ಎಂಬ ಶಬ್ದ ತಪ್ಪು- ಎಂಬುದು ಲೇಖಕರ ವಾದ. ಅದಕ್ಕೆ ಪ್ರತಿಕ್ರಿಯೆಯಲ್ಲಿ ಬಂದ ಉತ್ತರ- 
ಮೂಷಕ ಮತ್ತು ಮೂಷಿಕ ಎರಡೂ ಶಬ್ದಗಳು ಸರಿಯಾಗೇ ಇವೆ. ಸ್ತೇಯ ಎಂಬ ಅರ್ಥದ ಮುಷ್ ಧಾತುವಿಗೆ ಮುಷೇರ್ದೀರ್ಘಶ್ಚ ಎಂಬ ಸೂತ್ರದ ಪ್ರಕಾರ "ಕಿಕನ್" ಪ್ರತ್ಯಯ ಬಂದಾಗ "ಮೂಷಿಕ" ಶಬ್ದವಾಗುತ್ತದೆ. 
ಅದೇ "ಮೂಷ್" ಧಾತುವಿಗೆ "ಣ್ವುಲ್ ತೃಚೌ" ಎಂಬ ಸೂತ್ರದಿಂದ ಣ್ವುಲ್ ಪ್ರತ್ಯಯ ಬಂದಾಗ "ಮೂಷಕ" ಎಂಬ ಶಬ್ದವಾಗುತ್ತದೆ. 
ಈ ಉತ್ತರ ಗಮನಿಸಿದ ಮೇಲೆ ಲೇಖಕರು ಮೂಲದಲ್ಲೇ ತಿದ್ದಿದ್ದರೆ ಉಳಿದ ಓದುಗರಿಗೆ ಅನುಕೂಲವಾಗಿರುತ್ತಿತ್ತು. ಅಥವಾ ಮೂಲಲೇಖನದ ಕೊನೆಗೇ ಇನ್ನೊಂದು ಟಿಪ್ಪಣಿ ಸೇರಿಸಿದ್ದರೂ ಸಾಧುವಾಗುತ್ತಿತ್ತು. ಅವರೇ ಹೇಳಿದಂತೆ ಇದು ಅವರ‌ ಲೇಖನಕ್ಕೆ ಪೂರಕ ಮಾಹಿತಿಯಂತೆ. ಹಾಗಿದ್ದರೆ ಲೇಖನದಲ್ಲೇ ಸೇರಿಸಬಹುದಿತ್ತು. ಲೇಖನದ ದೋಷವನ್ನು ತೋರಿಸಿದ್ದಕ್ಕೆ ಅದು ಅವರ ಅಭಿಪ್ರಾಯವನ್ನು ವಿರೋಧಿಸಿದಂತೆ ಎಂದಾದ ಕಾರಣ ಅದನ್ನು ಸೇರಿಸಿಕೊಳ್ಳಲಿಲ್ಲವೇ! 
ಇನ್ನೊಂದು ಲೇಖನದಲ್ಲಿ "ದಂಪತಿಗಳು" ಎಂಬ ಶಬ್ದವನ್ನು ಒಂದಕ್ಕಿಂತ ಹೆಚ್ಚು ಜೋಡಿಗಳಿರುವಾಗ ಬಳಸಬೇಕು. ಒಂದೇ ಜೋಡಿ ಇದ್ದರೆ "ದಂಪತಿ" ಎಂದಷ್ಟೇ ಏಕವಚನದಲ್ಲಿ ಬಳಸಬೇಕು ಎಂಬುದು ಲೇಖಕರ ವಾದ. ಆದರೆ ವಸ್ತುತಃ ದಂಪತಿ ಎನ್ನುವುದನ್ನು ಏಕವಚನದಲ್ಲಿ ಬಳಸುವುದು ಹೇಗೆ ಸಾಧ್ಯ ಎಂದು ಒಬ್ಬರು ಓದುಗರು - " ದಂಪತಿ ಬರುತ್ತಿದ್ದಾನೆ/ಬರುತ್ತಿದ್ದಾಳೆ/ಬರುತ್ತಿದೆ" ಹೇಗೆ ಹೇಳಬಹುದು?" ಎಂದು ಪ್ರಶ್ನಿಸಿದರು. ಅದಕ್ಕೆ "ಬರುತ್ತಿದ್ದಾರೆ" ಎಂದು ಹೇಳಬಹುದು ಎಂದು ಉತ್ತರಿಸಿದರು. ಓದುಗರು- "ದಂಪತಿ ಏಕವಚನವಾಗಿರುವಾಗ ಕ್ರಿಯಾಪದ ಬಹುವಚನವಾಗುತ್ತದೆಯೇ" ಎಂದರೆ, ಅದಕ್ಕೆ ಲೇಖಕರು- "ನೀವು ನಿಮಗೆ ಬೇಕಾದ ಹಾಗೆ ಬರೆಯಿರಿ" ಅಂತ ಉತ್ತರಿಸಿದರು. ಇದರ ಅರ್ಥವೇನು?
ದಂಪತಿ ಶಬ್ದದ ಬಗ್ಗೆ ಸಂಸ್ಕೃತದಲ್ಲಿ ನೀಲಕಂಠದೀಕ್ಷಿತನ ಒಂದು ಪ್ರಸಿದ್ಧ ಪದ್ಯವೇ ಇದೆ. ಅರ್ಧನಾರೀಶ್ವರಸ್ತುತಿಯಾಗಿ. "ವಂದೇ ವಾಂಛಿತಲಾಭಾಯ ಕರ್ಮ ಕಿಂ ತನ್ನ ಕಥ್ಯತೇ|
ಕಿಂ ದಂಪತಿಮಿತಿ ಬ್ರೂಯಾಮುತಾಹೋ ದಂಪತೀ ಇತಿ||"
(ತಾತ್ಪರ್ಯತಃ ಹೇಳುವುದಾದರೆ- ಇಷ್ಟಾರ್ಥ ಸಿದ್ಧಿಗಾಗಿ ನಮಸ್ಕರಿಸುತ್ತೇನೆ. ಯಾರಿಗೆ ಎಂದು ಹೇಳುವುದಿಲ್ಲ. ಯಾಕೆಂದರೆ ಒಂದೇ ದೇಹವಿರುವ ಅರ್ಧನಾರೀಶ್ವರನಿಗೆ "ದಂಪತಿ" ಎಂದು ಏಕವಚನದಲ್ಲಿ ಹೇಳಬೇಕೋ ಅಥವಾ ನಿತ್ಯದ್ವಿವಚನದಲ್ಲಿ "ದಂಪತಿಗಳು" ಎಂದು ಹೇಳಬೇಕೋ ಗೊತ್ತಿಲ್ಲ) ಇಂತಹ ಪ್ರಸಿದ್ಧ ಶ್ಲೋಕಗಳ ಬಗ್ಗೆ ಪ್ರಸ್ತುತ ಲೇಖಕರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅದೇ ಪೋಸ್ಟಿಗೆ ಇನ್ನೊಂದು ಉತ್ತರದಲ್ಲಿ ವಿದ್ವಾಂಸರೊಬ್ಬರು - "ದಂಪತಿ ಎನ್ನುವುದು ಸಂಸ್ಕೃತದಲ್ಲಿ ನಿತ್ಯದ್ವಿವಚನ. ಕನ್ನಡದಲ್ಲಿ ದ್ವಿವಚನ‌ವಿಲ್ಲದ ಕಾರಣ ಬಹುವಚನ ಬಳಸುವುದು ರೂಢಿ. ಹಾಗಾಗಿ ದಂಪತಿಗಳು ಎನ್ನುವುದೇ ಸೂಕ್ತ." ಎಂದು ಉತ್ತರಿಸಿದ್ದರು. ಅಷ್ಟೇ ಅಲ್ಲದೇ ಹಳಗನ್ನಡದ ಕವಿಗಳಾದ ಲಕ್ಷ್ಮೀಶನ ಜೈಮಿನಿಭಾರತದಿಂದ, ರುದ್ರಭಟ್ಟನ ಜಗನ್ನಾಥವಿಜಯದಿಂದ "ದಂಪತಿಗಳು" ಎಂಬ ಬಹುವಚನದ ಶಬ್ದಗಳಿರುವ ಪದ್ಯಗಳನ್ನೂ ಉದಾಹರಣೆಯಾಗಿ ಕೊಟ್ಟಿದ್ದರು. ಮೂಲ ಪೋಸ್ಟ್ ಅಲ್ಲಿ ಬದಲಾಯಿಸಿದರೆ ಮಾತ್ರ ಅದನ್ನು ಓದುವವರಿಗೆ ಅನುಕೂಲ ಎಂದೂ ಹೇಳಿದ್ದರು. ಅದಕ್ಕೆ ಲೇಖಕರು ಉತ್ತರಿಸಿದ್ದು- " ನಿಮ್ಮ ಪ್ರತಿಕ್ರಿಯೆಗೆ like click ಮಾಡಿದ್ದು ನಾನು ನಿಮ್ಮ ಅಭಿಪ್ರಾಯ ಓದಿದ್ದೇನೆ ಎಂದು ನಿಮಗೆ ತಿಳಿಸಲಿಕ್ಕೆ.  ಅದಕ್ಕಿಂತ ಹೆಚ್ಚಿನದು ನಿಮಗೆ ತಿಳಿಸುವ ವಿಚಾರ ನನ್ನದೇನಿಲ್ಲ. ನಿಮಗೆ ಧನ್ಯವಾದಗಳು" ಎಂದು. ಅಂದರೆ ಈ ಲೇಖಕರಿಗೆ ವಿದ್ವಾಂಸರ ಮಾತುಗಳು ಸಹ್ಯವಾಗುವುದಿಲ್ಲವೇ? ಕನ್ನಡದ ಪೂರ್ವಕವಿಗಳ ಪ್ರಯೋಗ ಕೂಡ ಗ್ರಾಹ್ಯವಾಗುವುದಿಲ್ಲವೇ? ಲೇಖಕರು ತಾರ್ಕಿಕವಾಗಿ ಉತ್ತರಿಸಲು ಸಮರ್ಥರಲ್ಲದೇ ಹೋದಾಗ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ? ಹಿಂದಿನ ಮಹಾಕವಿಗಳ ಪ್ರಯೋಗವನ್ನು ತೋರಿಸಿದ ಬಳಿಕವೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವವರಲ್ಲ ಎಂದಾದರೆ ಇವರು ಆ ಮಹಾಕವಿಗಳಿಗಿಂತ ಹಿರಿಯರೇ! ಪ್ರಸ್ತುತ ಲೇಖಕರು ಭಾಷೆಯ ವಿಷಯದಲ್ಲಿ ಏನು ಸಂಶೋಧನೆ ಮಾಡಿದ್ದಾರೆ? ವಿದೇಶದಲ್ಲಿದ್ದುಕೊಂಡೂ ಕನ್ನಡದಲ್ಲಿ ಒಂದಿಷ್ಟು ಕೃಷಿ ಮಾಡುತ್ತಿದ್ದಾರೆ ಎಂಬುದನ್ನು ಬಿಟ್ಟರೆ ಎಷ್ಟು ಹಳಗನ್ನಡ/ಸಂಸ್ಕೃತಕಾವ್ಯಗಳನ್ನು ಆಮೂಲಾಗ್ರವಾಗಿ ಓದಿದ್ದಾರೆ? ಅಥವಾ ಅವರು 'ಇದು ಶುದ್ಧ- ಇದು ಅಶುದ್ಧರೂಪ' ಎಂದು ಹೇಳಲು ಯಾವ ವ್ಯಾಕರಣದ ನಿಯಮಗಳ ಆಧಾರವನ್ನು ಕೊಡಬಲ್ಲರು? ಇದು ಕೇವಲ ಮೇಲೆ ಉಲ್ಲೇಖಿಸಿದ ಎರಡು ಶಬ್ದಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ಸುಮಾರು ಇಪ್ಪತ್ತು ಕಂತುಗಳಲ್ಲಿ ವಿಸ್ತೃತವಾದ ಅಭಿಯಾನದಲ್ಲಿ ಹಲವಾರು ದೋಷಗಳಿವೆ. ಹಾಗೂ ಆ ದೋಷಗಳನ್ನೆಲ್ಲ ಸಂಗ್ರಹಿಸಿ ಬೇರೆಯವರೂ ಲೇಖನ ಬರೆಯುತ್ತಿದ್ದಾರೆ.
ಅವರ ಲೇಖನದ ಓದುಗರೊಬ್ಬರು "ಸಂಸ್ಕೃತ ವಿದ್ವಾಂಸರಿಗೆ ಹಳೆಯ ಗ್ರಂಥಗಳಲ್ಲೂ ಕಾಗುಣಿತ ವ್ಯಾಕರಣ ದೋಷಗಳು ನುಸುಳಿರಬಹುದು ಎಂಬ ಜ್ಞಾನವಿರಬೇಕಾದದ್ದು ಬಹುಮುಖ್ಯ" ಎಂದು ಹಾಕಿದ್ದಾರೆ. ಅಂದರೆ ಅವರಿಗೆ 'ವ್ಯಾಕರಣನಿಯಮಗಳಿಂದ ಹೇಳಿದ ಶುದ್ಧತೆಗಿಂತ ತಮ್ಮ ಲೇಖಕರೇ ಹೆಚ್ಚು ಮಾನ್ಯ' ಎಂದೇ ಅರ್ಥವಾಯಿತಲ್ಲ. ಇಂತಹ ಓದುಗರು ಇವರ ಲೇಖನದಿಂದ ಏನು ಸ್ವಚ್ಛಭಾಷೆಯನ್ನು ಕಲಿಯುತ್ತಾರೆ. ಇವರಂತೆಯೇ ಬೇರೆಯವರ ಮಾತನ್ನು ಕೇಳದಿರುವ ಸ್ವಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ ಅಷ್ಟೆ.
 ಅದೆಲ್ಲ ಬದಿಗಿರಲಿ. ಪ್ರಸ್ತುತಲೇಖಕರ ಅಂಕಣದ ಹೆಸರಿನಲ್ಲಿರುವ ಶಬ್ದಕ್ಕೆ ಯಾವ ರೀತಿ ಅವರು ಅರ್ಥವನ್ನು ಕೊಡಬಲ್ಲರು? ಆ ಶಬ್ದವನ್ನು ಇವರೂ ಇವರ ಪತ್ರಿಕೆಯ ಸಂಪಾದಕರೂ ಒಂದಿಷ್ಟು ಅಭಿಮಾನಿಗಳೂ ಮೆಚ್ಚಿಕೊಳ್ಳಬಲ್ಲರಷ್ಟೇ! ವಾಸ್ತವವಾಗಿ ಈ ಕುರಿತು ಅಂಕಣ ಪ್ರಾರಂಭವಾಗುವಾಗ, ಇವರು ಹೆಸರನ್ನು ಹೀಗಿದೆ ಎಂದು ಹೇಳಿದಾಗಳೇ ಸಾಕಷ್ಟು ಚರ್ಚೆ ಆಯಿತು. ತಮ್ಮ ಅಂಕಣದ ಹೆಸರಿನಲ್ಲೇ ದೋಷ ಇರುವವರು ಭಾಷಾಶುದ್ಧಿ ಮಾಡುತ್ತಾರೆ ಎಂದರೆ ಹಾಸ್ಯಾಸ್ಪದವೇ ಅಲ್ಲವೇ! ಬೇರೆಯವರ ತಟ್ಟೆಯಲ್ಲಿದ್ದ ನೊಣವನ್ನು ತೋರಿಸುವ ಮೊದಲು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದ ಪ್ರಾಣಿಯನ್ನು ನೋಡಿಕೊಳ್ಳುವುದು ಉತ್ತಮ ಅಲ್ಲವೇ!
 ಹಿಂದೊಮ್ಮೆ  "ದಿನಪತ್ರಿಕೆಯಲ್ಲಿ ಒಂದಿಷ್ಟು ಅಂಕಣ ಬರೆದ ಬಹಳಷ್ಟು ಲೇಖಕರು ಬರುತ್ತಾ ಬರುತ್ತಾ  ತಮ್ಮನ್ನು ತಾವೇ ಉಳಿದವರಿಗೆ ಉಪದೇಶ ಮಾಡುವ ಸ್ಥಾನದಲ್ಲಿ ನಿಲ್ಲಿಸಿಕೊಂಡುಬಿಡುತ್ತಾರೆ. ಆ ಬಳಿಕ ಅವರ ಲೇಖನದಲ್ಲಿ ಇಂತಹ ಉಪದೇಶಗಳೇ ತುಂಬಿಕೊಂಡು ಏನೂ ಸ್ವಾರಸ್ಯ ಇರುವುದಿಲ್ಲ. ಆದರೆ ಈ ಲೇಖಕರ ಅಂಕಣಗಳು ಹಾಗಲ್ಲ." ಎಂದು ಇವರದ್ದೇ ಒಂದು ಪುಸ್ತಕಬಿಡುಗಡೆಗೆ ಬಂದ ಮುಖ್ಯ- ಅತಿಥಿಗಳು ಹೇಳಿದಂತೆ ನೆನಪು. (ಬಹುಶಃ ೨೦೧೦ರ ಸುಮಾರಿನಲ್ಲಿ ಎಂದೆನಿಸುತ್ತದೆ) ಅಲ್ಲಿ ಹೇಳಿದ್ದರೋ ಇಲ್ಲವೋ- ಒಟ್ಟಾರೆ ಆ ವಾಕ್ಯ ಒಂದು ರೀತಿಯಲ್ಲಿ ಎಚ್ಚರಿಕೆಯ ಮಾತೆಂಬುದಂತೂ ನಿಜ. ಲೇಖಕರೇ ಹೇಳಿದಂತೆ ಹಲವಾರು ಜನ ಓದುಗರು, ಸೆಲೆಬ್ರಿಟಿಗಳೂ ಇವರ ಲೇಖನವನ್ನು ಓದುತ್ತಿರುತ್ತಾರೆ. ಅವರಲ್ಲಿ ಎಷ್ಟೋ ಜನರಿಗೆ ಉಳಿದ ಕಮೆಂಟುಗಳಲ್ಲಿ ಆದ ಚರ್ಚೆಯನ್ನು ಗಮನಿಸುವ ವ್ಯವಧಾನವಿರುವುದಿಲ್ಲ. ಹಾಗಿರುವ ಪರಿಸ್ಥಿತಿಯಲ್ಲಿ ಸ್ವಚ್ಛಭಾಷೆಯನ್ನು ಕಲಿಯಬೇಕಾದವರಿಗೆ ಇವರು ಹೇಗೆ ಅನುಕೂಲವನ್ನು ಮಾಡುತ್ತಿದ್ದಾರೆ?  ಯಾವಾಗ ಲೇಖಕನಿಗೆ ಲೇಖನಕ್ಕಿಂತ ಸ್ವಪ್ರತಿಷ್ಠೆಯ ಕಡೆ ಹೆಚ್ಚು ಒಲವು ಬರುತ್ತದೆಯೋ, ಅಥವಾ ಲೇಖಕರು "ಸೆಲೆಬ್ರಿಟಿ" ಆಗಿ ತನ್ನನ್ನು ಅನುಸರಿಸುವ ಅಭಿಮಾನಿಗಳ ಬಳಗದ ಎದುರು ತಾನು ತಪ್ಪೊಪ್ಪಿಕೊಂಡಾಗ ಸಣ್ಣವನಾಗಿಬಿಡುತ್ತೇನೆ ಎಂಬ ಭಾವನೆ ಬರುತ್ತದೆಯೋ, ಅಥವಾ ತಾನು ಹೇಳಿದ್ದನ್ನು ಉಳಿದವರು ಒಪ್ಪಿಕೊಳ್ಳಲೇಬೇಕು ಎಂಬ ಅಹಂಕಾರತೃಪ್ತಿಯ ಆಸೆ ಹೆಚ್ಚಾಗುತ್ತದೆಯೋ ಆಗ ಇವೆಲ್ಲ ಅನರ್ಥಗಳು ಸಂಭವಿಸುತ್ತವೆ. ಡಿವಿಜಿ ಅವರ ಕಗ್ಗದ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು- "ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಹೆಣ್ಣುಗಂಡೊಲವು| ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದದಾತ್ಮವನೆ ಮಂಕುತಿಮ್ಮ||" ಹೇಳಿ ಕಲಿಸುವ ಕಾಲ ಹಳೆಯದಾಯ್ತು. ಈಗೇನಿದ್ದರೂ ಕಲಿತುಕೊಳ್ಳುವ ಕಾಲ. ನಾವು ನಮ್ಮ ಯೋಗ್ಯತೆಯನ್ನೂ ಶಕ್ತಿಯನ್ನೂ ತಿಳಿದುಕೊಳ್ಳದೇ ಹೋದರೆ, ಆಳ ಗೊತ್ತಿಲ್ಲದ ನದಿಯಲ್ಲಿ ಈಜು ಕಲಿಯಲು ಹೋದಂತಾಗುವುದು ನಿಸ್ಸಂಶಯ. ನಮಗಿಂತ ಆ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನ ಇರುವವರು ಹೇಳಿದಾಗ ಒಪ್ಪಿಕೊಳ್ಳುವುದು ಜಾಣತನ. ಅಷ್ಟಲ್ಲದೇ ಹಿರಿಯರು ಸುಮ್ಮನೇ ಹೇಳಿದ್ದಾರೆಯೇ "ವಿದ್ಯೆಗೆ ವಿನಯವೇ ಭೂಷಣ" ಎಂದು. ಹುಲಿಯ ಚರ್ಮವನ್ನು ಹೊದೆದ ಕಾರಣ ಈ ಪ್ರಾಣಿಯನ್ನೂ ನಾವು ಹುಲಿಯೆಂದೇ ಭಾವಿಸುತ್ತಿರುವಂತೆ ಪರಿಸ್ಥಿತಿ ಉಂಟಾಗಿದೆ. ಮಿತ್ರರೊಬ್ಬರು ಹೇಳಿದಂತೆ ಬಾಯಿ ಬಿಟ್ಟರೆ ಬಣ್ಣಗೇಡಾಗುವ ಮೊದಲು  ತನ್ನ ಹುಲಿಯ ರೂಪವನ್ನು ತ್ಯಜಿಸುವುದು ಒಳ್ಳೆಯದು ಎಂದು ನನ್ನ ಭಾವನೆ.

~~~~~~~~
-ಗಣೇಶ ಭಟ್ಟ ಕೊಪ್ಪಲತೋಟ

ಶನಿವಾರ, ಸೆಪ್ಟೆಂಬರ್ 29, 2018

ಹೊಸತಲೆಮಾರಿನ ಬರಹಗಳು

(೨೦೧೭ರಲ್ಲಿ ಹಾಕಿದ ಫೇಸ್ಬುಕ್ ಪೋಸ್ಟ)
ಅಭಿವ್ಯಕ್ತಿಮಾಧ್ಯಮವಾಗಿ ಸಾಹಿತ್ಯ ಬಹುಬೇಗ ಎಲ್ಲರಿಗೂ ಒಗ್ಗಿಬರುತ್ತದೆ ಎಂಬ ಕಾರಣಕ್ಕೇ ಇರಬಹುದೇನೋ ಇತ್ತೀಚೆಗೆ ಬಹಳಷ್ಟು ಜನ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಇಂದಿನ ಸುಲಭಸಾಧ್ಯಸಂವಹನಮಾಧ್ಯಮಗಳಿಂದ ಲೇಖಕರು ಬಹಳಷ್ಟು ಜನರನ್ನು ಬೇಗ ತಲುಪಲು ಸಾಧ್ಯವಾಗುತ್ತದೆ ಎಂಬ ಸಂತಸದ ಜೊತೆಗೆ, ಪ್ರಬುದ್ಧತೆಯನ್ನು ಕಾಣುವ ಮೊದಲೇ ಅಪಕ್ವಕೃತಿಗಳು ಲೋಕಾರ್ಪಣೆಗೊಳ್ಳುತ್ತಲಿವೆ ಎಂಬುದು ಖೇದಕರ.
ಗದ್ಯಪದ್ಯಗಳಲ್ಲಿ ಮೊದಲು ಗದ್ಯವನ್ನು ಅವಲೋಕಿಸಿದರೆ-
ಗದ್ಯಕ್ಕೆ ಪದ್ಯಕ್ಕೆ ಬೇಕಾದ ಕಲಾತ್ಮಕತೆಯ ಆವಶ್ಯಕತೆ ಇಲ್ಲದಿದ್ದರೂ ಒಂದು ಹದ ಬೇಕು. ವಾಕ್ಯಗಳು ಸುಲಭವಾಗಿ ಅರ್ಥವಾಗುವಂತಿರಬೇಕು. ವ್ಯರ್ಥವಾದ ಅಸ್ಪಷ್ಟವಾದ ನಿರೂಪಣೆಗೆ ಪೂರಕವಲ್ಲದ ಪದಪುಂಜಗಳನ್ನು ತೆಗೆದು ಹಾಕಬೇಕು. ಇದೆಲ್ಲವನ್ನೂ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವುದೇ ಹೌದು. ಆದರೆ ಹಲವು ದೋಷಗಳು ಲೇಖಕರ ಕಣ್ಣಿಗೆ ಬೀಳದೇ ಉಳಿದುಬಿಡುತ್ತದೆ. ಆ ಕಾರಣಕ್ಕಾಗಿಯೇ ಬಲ್ಲವರ ಬಳಿ ಮೊದಲು ಓದಿ ತಿದ್ದಿಸಿಕೊಳ್ಳಬೇಕು ಎಂದು ಹಿಂದಿನವರು ಹೇಳಿದ್ದಾರೆ. ಎಲ್ಲರಿಗೂ ಎಲ್ಲದೂ ತಿಳಿದಿರುವುದಿಲ್ಲ ಎಂಬ ಕಾರಣಕ್ಕೇ ತಿಳಿಸಿ ಹೇಳುವವರ ಮಾತಿಗೆ ಬೆಲೆ ಕೊಡಬೇಕಲ್ಲವೇ! ಕವಿಚಕ್ರವರ್ತಿ ರನ್ನನೂ ತನ್ನ ಕಾವ್ಯವನ್ನು ತಿದ್ದಿಸಿಕೊಂಡಿದ್ದನ್ನು ಉಲ್ಲೇಖಿಸುತ್ತಾನೆ. ಎಂದರೆ ಅದರಲ್ಲಿ ಮುಜುಗರ- ನಾಚಿಕೆಗಳನ್ನು ಹೊಂದುವಂತಹ ಅವಶ್ಯಕತೆ ಇಲ್ಲವೆಂದೇ ಅರ್ಥ.
*ಅಳವಿನ ಅರಿವು- ಎಲ್ಲಕ್ಕಿಂತ ಮುಖ್ಯವಾಗಿ ಲೇಖಕನಿಗೆ ತನ್ನ ಪರಿಮಿತಿಯ ಅರಿವಿರಬೇಕು. ಆದರೆ ಅರಿವಿಲ್ಲದುದನ್ನು ಬರೆಯುವಾಗ ಸೂಕ್ಷ್ಮವಾಗಿ ಅವಲೋಕಿಸಿ ತಿಳಿದುಕೊಳ್ಳುವ ಸ್ವಭಾವ ಇರಬೇಕು. ಆದರೆ ತಿಳಿದುಕೊಂಡದ್ದೇ ಪರಿಪೂರ್ಣ ಎಂಬ ಮನಸ್ಸ್ಥಿತಿ ಇರಬಾರದು. ಗದ್ಯವೊಂದರಲ್ಲಿ ತಾನೆಲ್ಲೋ ಕೇಳಿದ ಸಂಸ್ಕೃತದ ಯಾವುದೋ ಶ್ಲೋಕವನ್ನು ಉದ್ಧರಿಸಬೇಕು ಎಂತಾದರೆ ಸಂಸ್ಕೃತವನ್ನು ಕಲಿಯದ ಲೇಖಕ ಅದನ್ನು ಬಳಸಿದ್ದರೂ ಅದರ ಬಗ್ಗೆ ತಿಳಿದವರಿಂದ ಖಚಿತ ಪಡಿಸಿಕೊಳ್ಳಬೇಕು. ಇಲ್ಲವೆಂದರೆ ಅರ್ಥಕ್ಕೆ ಚ್ಯುತಿಯೋ ಅಪಾರ್ಥವೋ ಆಗುವ ಸಾಧ್ಯತೆ ಇರುತ್ತದೆ. ಉದಾ- "ಮನಃಕಂಪನ" ಎನ್ನುವುದಕ್ಕೂ "ಮನೋಕಂಪನ" ಎನ್ನುವುದಕ್ಕೂ ತದ್ವಿರುದ್ಧವಾದ ಅರ್ಥಗಳೇ ಇವೆ.
* ಪುನರುಕ್ತಿಯ ದೋಷ- ಒಂದೇ ಶಬ್ದವನ್ನು ಎರಡೆರಡು ಬಾರಿ ಬಳಸುವುದು. ಉದಾ- ಅಜ್ಜಿಮುದುಕಿ, ದೊಣ್ಣೆಕೋಲು, ವನಕಾನನ, ನೀರವಮೌನ ಇತ್ಯಾದಿ. ಇಲ್ಲಿ ಅಜ್ಜಿಯೂ ಮುದುಕಿಯೂ ಒಬ್ಬಳೇ, ದೊಣ್ಣೆಯೂ ಕೋಲೂ ಒಂದೇ ಅರ್ಥ, ವನವೂ ಕಾನನವೂ ಒಂದೇ ಅರ್ಥ, ನೀರವವೂ ಮೌನವೂ ಒಂದೇ ಅರ್ಥ. ಹೀಗಾದಾಗ ಪುನರುಕ್ತಿಯೆಂಬ ದೋಷವಾಗುತ್ತದೆ. ಇದು ಕೇವಲ ಶಬ್ದಗಳಿಗಷ್ಟೇ ಅಲ್ಲ. ಘಟನೆಗಳಿಗೂ ಅನ್ವಯಿಸುತ್ತದೆ. ಮತ್ತೆ ಮತ್ತೆ ಓದುಗರನ್ನು ಎಚ್ಚರಿಸಲೋ ಎಂಬಂತೆ ಬಂದ ಘಟನೆಗಳನ್ನೇ ಪುನರಪಿ ಹೇಳುವುದು ತರವಲ್ಲ. ಅಥವಾ ಪ್ರಜ್ಞಾಪ್ರವಾಹವೊಂದರ ಮಧ್ಯೆ ಮಧ್ಯೆ ವ್ಯಕ್ತಿಯ ಆಂಗಿಕವಿನ್ಯಾಸವನ್ನೋ ಅಥವಾ ಲೌಕಿಕಕಾರ್ಯವನ್ನೋ ಒಂದೆರಡು ಬಾರಿಗಿಂತ ಹೆಚ್ಚು ಹೇಳಿದರೆ ಅಷ್ಟಾಗಿ ರುಚಿಸದು. ಒಂದು ಆಳಕ್ಕೆ ಹೋಗುತ್ತಿರುವವರನ್ನು ಉಸಿರು ಕಟ್ಟಿಸಿ ಮೇಲೆಳೆದು ತಂದಂತೆ ಭಾಸವಾಗುತ್ತದೆ.
*ಕಥೆಗೆ ಪೂರಕವಲ್ಲದ ಚಿತ್ರಣ- ಮುಖ್ಯ ಕಥಾಸೂತ್ರಕ್ಕೆ ಪೂರಕವಾಗಿರದಂತೆ ಬೇರೆಯದೇನೋ ಅಸಂಬದ್ಧವನ್ನು ತಂದು ತುರುಕುವುದು ಓದುಗನಿಗೆ ರಸಾಭಾಸವನ್ನು ಉಂಟುಮಾಡುತ್ತದೆ. ಕಥೆಗೆ ಪೂರಕವಿದ್ದರೂ ನೀರಸವಾಗಿ ವಿಸ್ತರಿಸುವುದೂ ಕೂಡ ರಸಕ್ಕೆ ಮಾರಕ.
*ಶಾಸ್ತ್ರಪಾಂಡಿತ್ಯಪ್ರದರ್ಶನ- ಲೇಖಕನಿಗೆ ಯಾವುದೋ ಶಾಸ್ತ್ರದಲ್ಲಿ ಪಾಂಡಿತ್ಯವಿದೆ ಎಂದು ತನ್ನ ಕಥೆಯಲ್ಲಿಯೋ ಕಾವ್ಯದಲ್ಲಿಯೋ ಕಾದಂಬರಿಯಲ್ಲಿಯೋ ಆ ಶಾಸ್ತ್ರವನ್ನೇ ಚರ್ಚಿಸಿದರೆ ಅದು ಓದುಗರಿಗೆ ಕಬ್ಬಿಣದ ಕಡಲೆಯಾಗುತ್ತದೆ. ಸರಳವಾಗಿ ಜನರಿಗೂ ತಲುಪುವಂತೆ ಶಾಸ್ತ್ರವನ್ನು ವಿಸ್ತರಿಸಬಹುದಾದರೂ ಅದೂ ಅಷ್ಟು ಸೊಗಸೆನಿಸದು. ಕಥಾನಾಯಕ ವ್ಯಾಕರಣಪಂಡಿತನೆಂದು ಇನ್ನೊರ್ವನ ಜೊತೆ ಚರ್ಚೆ ನಡೆಸುವುದನ್ನೇ ಅರ್ಧ ಕಥೆ ತುಂಬಿಸಿಬಿಟ್ಟರೆ ಓದುಗರಿಗೆ ಕಥೆ ಎಂಬ ಇಲಿ ಹಿಡಿಯಲು ಶಾಸ್ತ್ರದ ಗುಡ್ಡವನ್ನು ಅಗೆಯೇಕಾಗುತ್ತದೆ.
*ಅಶ್ಲೀಲವರ್ಣನೆ- ಕಥೆಯಲ್ಲಿ ಶೃಂಗಾರಾದಿರಸಗಳೂ ಅದಕ್ಕೆ ಪೂರಕವಾದ ವಿಭಾವಾನುಭಾವಗಳೂ ಬರುಬೇಕು. ದಿಟವೇ. ಆದರೆ ಶೃಂಗಾರದಲ್ಲಿ ಅದರಲ್ಲೂ ಸಂಭೋಗಶೃಂಗಾರದ ವರ್ಣನೆಯಲ್ಲಿ ಅಶ್ಲೀಲತೆ ಬರುವ ಸಂಭವ ಹೆಚ್ಚು. ಆ ಒಂದು ಮರ್ಯಾದೆಯ ಸೂಕ್ಷ್ಮಸೀಮಾರೇಖೆಯನ್ನು ಅರಿಯದಿದ್ದರೆ ರಸ ಶೃಂಗಾರದಿಂದ ಬೀಭತ್ಸದ ಕಡೆಗೆ ಹೊರಳುತ್ತದೆಯಷ್ಟೆ!
*ಪ್ರದರ್ಶನತೃಷೆ- ಲೇಖಕ ತನ್ನ ಜ್ಞಾನವನ್ನು ಹಾಗೇ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೆ ಕಾವ್ಯ-ಕಥೆ-ಕಾದಂಬರಿಗಳು ಸೂಕ್ತವಲ್ಲ. ಅದಕ್ಕೆ ಸಂಶೋಧನಾಲೇಖನವನ್ನೋ ಇನ್ನಾವುದೋ ಪ್ರಬಂಧವನ್ನೋ ಮಂಡಿಸಬಹುದು. ರಸೈಕದೃಷ್ಟಿಯಿಂದ ಯಾವುದು ಸೂಕ್ತವಲ್ಲವೋ ಅದೆಲ್ಲವೂ ಹಾನಿಕಾರಕವೇ ಹೌದು. ಪ್ರದರ್ಶನತೃಷೆ- ತನಗೆ ಗೊತ್ತು ಎಂದು ತೋರಿಸಿಕೊಳ್ಳುವುದು. ಎಷ್ಟೋ ವಿಷಯಗಳಲ್ಲಿ ಜ್ಞಾನವಿಲ್ಲದಿದ್ದರೂ ತನಗೆ ಗೊತ್ತು ಎಂಬಂತೆ ತೋರಿಸಿಕೊಳ್ಳುವ ತೃಷೆ ಹಲವರಲ್ಲಿ ಕಾಣುತ್ತದೆ. ಆದರೆ ಕಥೆಯಲ್ಲಿ ಅದರ ಜೊಳ್ಳು ಗೊತ್ತಾದಾಗ ಓದುಗನಿಗೆ ಲೇಖಕನ ಬಗ್ಗೆ ಹಗುರವಾದ ಭಾವನೆ ಬರುತ್ತದೆಯಷ್ಟೇ!
*ಪ್ರಬಂಧಧ್ವನಿ- ಒಟ್ಟಾರೆಯಾಗಿ ಕೃತಿಯೊಂದು ಓದುಗನ ಮನಸ್ಸಿನ ಮೇಲೆ ಬೀರುವ ಪರಿಣಾಮ ಏನು! ಓದಿ ಎಷ್ಟು ಕಾಲ‌ದ ವರೆಗೆ ಓದುಗ ಅದನ್ನು ಆಲೋಡನೆ ಮಾಡುತ್ತಾನೆ! ಅದರಿಂದಲೇ ಕೃತಿಯ ಗುರುತ್ವ ತಿಳಿಯುತ್ತದೆ. ಪುನಃ ಪುನಃ ಓದಬೇಕೆಂದೆನಿಸುವುದು, ಓದಿದ ಬಳಿಕ ಅವ್ಯಕ್ತವಾದ ಆನಂದವನ್ನು ಕೊಡುವುದು ಸತ್ಕೃತಿಗಳ ಲಕ್ಷಣ ಎನ್ನಬಹುದು.

ಇನ್ನು ಪದ್ಯವನ್ನು ಅವಲೋಕಿಸಿದರೆ-
ಪದ್ಯಕ್ಕೆ ಬೇಕಾದ ಪ್ರಾಸಾದಿಕಗುಣಗಳು ಕಾಣೆಯಾಗುತ್ತಿವೆ. ಕಲಾತ್ಮಕತೆ ಇಲ್ಲವಾಗುತ್ತಿದೆ. ಛಂದಸ್ಸು ಅಲಂಕಾರಗಳೆಂಬುದನ್ನು ಎಂದಿಗೋ ಬಿಟ್ಟರೂ ಕನಿಷ್ಠ- ಅವಶ್ಯಕತೆಗಳಾದ ಔಚಿತ್ಯವೂ ಭಾವವೂ ಇಲ್ಲದೆ ಶುಷ್ಕವಾಗಿ ಕಾಣುತ್ತವೆ. ಇವುಗಳಲ್ಲಿಯೇ ಹಲವು ಪ್ರಭೇದಗಳನ್ನು ಹೇಳುತ್ತಾರಾದರೂ ಎಲ್ಲವನ್ನೂ ಸ್ಥೂಲವಾಗಿ ಅವಲೋಕಿಸಿದಾಗ ಎಲ್ಲವುಗಳಲ್ಲೂ ಇದೇ ಕೊರತೆ ಎದ್ದು ಕಾಣುತ್ತದೆ. ಹಳೆಯ ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಹೊಸದಾದ ಪಂಥವನ್ನು ಕಂಡುಕೊಂಡ ಈ ನವ್ಯ-ಬಂಡಾಯ- ಇತ್ಯಾದಿ ಕವಿತೆಗಳು ಎಷ್ಟು ಕಾಲ ನಮಗೆ‌ ಸಂತಸವನ್ನು ಕೊಡಬಲ್ಲವು? ಎಷ್ಟು ಕಾಲ ಒಂದು ಕವಿತೆಯನ್ನು ಓದಿದಾಗ ಉಂಟಾದ ಭಾವ ಸ್ಥಿರವಾಗಿ ಇರುತ್ತದೆ? ಹಾಗಾದರೆ ಈ ಭಾವವನ್ನು ಹಿಡಿದಿಡಲು ಇಂತಹ ಕವಿತೆಗಳು ಏಕೆ ಅಸಮರ್ಥವಾಗುತ್ತಿವೆ? ಇಲ್ಲಿ ಕಾಣುವುದು ಕವಿಯ ಅಸಾಮರ್ಥ್ಯವೇ? ಇದನ್ನು ದಾಟಲು ಹೇಗೆ ಸಾಧ್ಯ ಎಂದರೆ- ಹೇಳಬೇಕಾದದ್ದನ್ನು ಸ್ಪಷ್ಟವಾಗಿ ಒಂದು ವಾಕ್ಯವನ್ನಾಗಿಸಿ ಅದನ್ನು ಸರಿಯಾದ ಹದದಲ್ಲಿ ಪದಗಳಲ್ಲಿ ಓದುವಾಗ ಕರ್ಕಶವಾಗದಂತೆ ಗತಿಸುಭಗವಾಗಿ ಇಡುವುದು. ಮಾರ್ಗಕಾವ್ಯದಲ್ಲಿ ಛಂದಸ್ಸು ಈ ಪದಗಳನ್ನು ಹದವಾಗಿ ಹಿಡಿದಿಡುವ ಕೆಲಸ ಮಾಡುತ್ತಿತ್ತು. ಆ ಭಾಷೆಗೆ ಆ ಛಂದಸ್ಸು ಎಂಬಂತೆ ಹೊಸಗನ್ನಡಕ್ಕೆ ತಕ್ಕ ಛಂದಸ್ಸೂ ರೂಪುಗೊಂಡಿತ್ತು. ಉದಾಹರಣೆಗಳನ್ನು ನಾವು ಕುವೆಂಪು, ಡಿವಿಜಿ, ಗೋವಿಂದ ಪೈ, ಸೇಡಿಯಾಪು, ಮಾಸ್ತಿ, ಬೇಂದ್ರೆ, ಬಿ.ಎಂ.ಶ್ರೀ, ಕೆ.ಎಸ್.ನ ಮೊದಲಾದವರ ಕವಿತೆಗಳಲ್ಲಿ ಕಾಣಬಹುದು. ಆ ಕಾರಣಕ್ಕೇ ಇವರೆಲ್ಲರ ಕವಿತೆಗಳು ಚಿರಯೌವನದಲ್ಲಿವೆ. ಇಂದಿನ ಕವಿತೆಗಳೆಂದರೆ ಅರ್ಥಹೀನವಾದ ವ್ಯರ್ಥವಾದ ಪದಗಳ ಗುಂಪಿನ ಅನಿಯಂತ್ರಿತವಿನ್ಯಾಸವಾಗಿದೆ. ಹಿಂದಿನ ಕವಿಗಳ ಅಧ್ಯಯನದಿಂದ ಮಾತ್ರ ಆ ಹದವನ್ನು ಕಂಡುಕೊಳ್ಳಲಾಗುತ್ತದೆ. ಹಿಂದಿನ ಯೋಗ್ಯಕವಿಗಳ ಸಾವಿರ ಪದ್ಯಗಳನ್ನು ಓದಿ ಕನಿಷ್ಠ ಐವತ್ತು ಪದ್ಯಗಳನ್ನು ಕಂಠಪಾಠ ಮಾಡಿದ್ದರೆ ಹೊಸದಾಗಿ ಪದ್ಯ ಬರೆಯುವಾಗ ಅದರಲ್ಲಿ ಕಿಂಚಿತ್ ಸೌಂದರ್ಯವನ್ನು ಕಾಣಬಹುದು. ಏವಂ ಚ ಪ್ರತಿಭೆ ಕಲ್ಪನೆ ಕವಿತ್ವಶಕ್ತಿಗಳನ್ನು ಕಲಿಸಲು ಸಾಧ್ಯವಿಲ್ಲ. ಒಂದು ಲಯದಲ್ಲಿ ಹಾಡಿಕೊಳ್ಳಬಹುದಾದ ಪದ್ಯಗಳು ಕೊಡುವ ಭಾವವನ್ನು ಈ ತರಹದ ನವ್ಯಾದಿಕವಿತೆಗಳು ಕೊಡಲು ಅಸಮರ್ಥವಾಗುವುದೇ ಅದಕ್ಕೆ. ಆ ಕಾರಣಕ್ಕೇ ಸಿನಿಮಾ ಹಾಡುಗಳು ಕೂಡ ಈ ಕವಿತೆಗಳಿಗಿಂತ ಜನರ ಮನಸ್ಸಿಗೆ ಹೆಚ್ಚು ಹತ್ತಿರವಾಗುತ್ತವೆ. ನಾವು ಆಡಿದ ಮಾತು ಇನ್ನೊಬ್ಬರಿಗೆ ಅರ್ಥವಾಗದಿದ್ದಲ್ಲಿ ನಾವು ಮಾತನಾಡುವುದೇ ವ್ಯರ್ಥವಲ್ಲವೇ! ಈ ಕವಿತೆಯ ಉದ್ದೇಶವಾದರೂ ಸಂತಸವನ್ನು ಕೊಡುವುದೇ ಅಲ್ಲವೇ? ಅಲ್ಲದೇ ಹೇಳುವುದನ್ನು ನೇರವಾಗಿ ಹೇಳದೇ ಪರ್ಯಾಯವಾಗಿ ಹೇಳಿದಾಗ ಆಗುವ ಪರಿಣಾಮ ಹೆಚ್ಚು ಆಸ್ವಾದ್ಯ. ಇದೆಲ್ಲವನ್ನೂ ನಮ್ಮ ಆಲಂಕಾರಿಕರು ಅದೆಷ್ಟೋ ಹಿಂದಿನಿಂದಲೇ ಹೇಳಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಅವರನ್ನು ಗೌರವಿಸುವ ಸ್ವಭಾವವೇ ಇಲ್ಲವಾಗುತ್ತಿರುವ ಕಾರಣ ಅವರ ಬರಹಗಳನ್ನು ಓದುತ್ತಾರೆ ಎಂದು ನಿರೀಕ್ಷಿಸುವುದೂ ಹಾಸ್ಯಾಸ್ಪದವಾಗುತ್ತದೆ.