Powered By Blogger

ಭಾನುವಾರ, ಜನವರಿ 17, 2016

ಸಹೃದಯಕಾಲ೨೧- ಪಂಚಪಾಷಾಣ

    ರುದ್ರಭಟ್ಟನ ಜಗನ್ನಾಥವಿಜಯಂ ಕಾವ್ಯದ ಮೊದಲ ಐದು ಪ್ರಾರ್ಥನಾಪದ್ಯಗಳನ್ನು ವಿದ್ವಾಂಸರು ಪಂಚಪಾಷಾಣ ಎಂದು ಕರೆದಿದ್ದಾರೆ. ಅವುಗಳಿಗೆ ಸಂಸ್ಕೃತದಲ್ಲಿ ಕೂಡ ವ್ಯಾಖ್ಯಾನವನ್ನು ಬರೆದಿದ್ದಾರಂತೆ. ತನ್ನ ಇಷ್ಟದೈವವಾದ ಶ್ರೀಕೃಷ್ಣನನ್ನು ಸ್ತುತಿಸುವ ಜೊತೆಯಲ್ಲಿ ಆಶ್ರಯದಾತನಾದ ಬಲ್ಲಾಳರಾಯನನ್ನೂ ಸ್ತುತಿಸುವಂತೆ ಎರಡೆರಡು ಅರ್ಥಗಳು ಬರುವಂತೆ ಮೊದಲ ಪದ್ಯಗಳಿದ್ದರೆ ಮುಂದಿನ ಪದ್ಯಗಳಲ್ಲಿ ಕ್ರಮವಾಗಿ ಬ್ರಹ್ಮ, ಶಿವ, ಸೂರ್ಯ, ಗಣಪತಿ ಇವರ ಸ್ತುತಿಯನ್ನೂ ಅದರೊಡನೆ ಆಶ್ರಯದಾತನಾದ ಬಲ್ಲಾಳ ರಾಜನ ಪರವಾಗಿ ಹಾಗೂ ಇಷ್ಟದೈವ-ಶ್ರೀಕೃಷ್ಣನ ಪರವಾಗಿ ಕೂಡ ಅರ್ಥಗಳು ಬರುವಂತೆ ಮೂರು ಅರ್ಥಗಳುಳ್ಳ ಪದ್ಯಗಳನ್ನು ಬರೆದಿದ್ದಾನೆ. ಇವುಗಳನ್ನು ಹಿಂದೊಮ್ಮೆ facebook ಅಲ್ಲಿ ಬರೆದಿದ್ದೆನಾದರೂ ಸಂಕಲಿಸಿ ಹಾಕಿರಲಿಲ್ಲ. ಬಿಡಿ ಬಿಡಿಯಾದ ಪದ್ಯಾರ್ಥಗಳಾಗಿ ಅಲ್ಲಲ್ಲಿ ಕಿತ್ತ ಹಾರದ ಹೂಗಳಂತೆ ಚೆದುರಿ ಹೋಗಿದ್ದವು. ಮತ್ತದನ್ನೇ ಮುತ್ತು ಕಟ್ಟುವಂತೆ ಕೋದು ಇಲ್ಲಿ ಹಾಕುತ್ತಿದ್ದೇನಷ್ಟೆ. ಸ್ವಲ್ಪ ದೀರ್ಘವಾದರೂ ರುದ್ರಭಟ್ಟನ ಕ್ಲೇಶಕ್ಕೆ ಇಷ್ಟು ವಿಸ್ತಾರ ಬೇಕಷ್ಟೇ! 
   ಇಂತಹ ಪದ್ಯಗಳಲ್ಲಿ ರಸವೆಂಬುದು ಕಡಿಮೆಯೇ! ಪಾಷಾಣದಿಂದೆಂತು ರಸಮೊಸರುವುದು!! ಆದರೆ ಕವಿಯ ಪಾಂಡಿತ್ಯ ವ್ಯುತ್ಪತ್ತಿಗಳಿಗೆಲ್ಲ ನಿಕಷವಾಗಿ ತೋರುವ ಇಂತಹ ಪದ್ಯಗಳೂ ಕನ್ನಡಕಾವ್ಯಗಳಲ್ಲಿ ಸಂಸ್ಕೃತಪಂಡಿತರನ್ನೂ ಬೆಚ್ಚಿಬೀಳಿಸುವಂತೆ ಅಲ್ಲಲ್ಲಿ ಅಡಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗಾಗಿ ಅವುಗಳ ಕಡೆಗೂ ಸಹೃದಯರ ಕೃಪಾಕಟಾಕ್ಷ ಬೀಳಲಿ ಎಂಬ ಇಚ್ಛೆಯೊಡನೆ  ಪದನ್ಯಾಸ ಮಾಡುವೆ-

ಶಾ||
ಶ್ರೀರಾಮಾನಟಿ ಕೌಸ್ತುಭದ್ಯುತಿಕಿರತ್ಪುಷ್ಪಾಂಜಲಿಕ್ಷೇಪವ-

ಕ್ಷೋರಂಗಸ್ಥಿತೆಯಾದ ಪಾದನಖರೋಚಿರ್ಗಂಗೆ ಪೃಥ್ವೀಶಕೋ-
ಟೀರವ್ಯಾಪ್ತಿಗೆ ಸಂದ ಚಕ್ರರವಿ ದೈತ್ಯಧ್ವಾಂತಮಂ ಗೆಲ್ದ ಭೂ-
ಭಾರಚ್ಛೇದವಿನೋದಿ ಕೃಷ್ಣನೆಮಗೀಗಾನಂದ ಸಂದೋಹಮಂ ||೧||
(ಕೃಷ್ಣನ ಪರವಾದ ಅರ್ಥ- ಲಕ್ಷ್ಮಿಯು ನಟಿಯಂತೆ ಪುಷ್ಪಾಂಜಲಿಯನ್ನೆರಚಲು ಅದು ಯಾರ ಎದೆಯ ರಂಗದ ಮೇಲೆ ಕೌಸ್ತುಭಮಣಿಯ ಬೆಳಕಿನಂತಿದೆಯೋ, ಯಾರ ಕಾಲ ಉಗುರಿನ ಕಾಂತಿಯಂತಿರುವ ಗಂಗೆ ಭೂಮಿಯ ಈಶನ ಕಿರೀಟದ ವ್ಯಾಪ್ತಿಗೆ ಬಂದಿರುವುದೋ, ಯಾರ ಚಕ್ರವೆಂಬ ಸೂರ್ಯ ದೈತ್ಯರೆಂಬ ಕತ್ತಲೆಯನ್ನು ಸೋಲಿಸಿತೊ, ಆ ಭೂಭಾರವನ್ನು ಛೇದಿಸುವುದರಲ್ಲಿ ವಿನೋದಿಸುತ್ತಿರುವ ಕೃಷ್ಣನು ನಮಗೆ ಸಂತೋಷವನ್ನು ನೀಡಲಿ)
(ಆಶ್ರಯದಾತನಾದ ಬಲ್ಲಾಳರಾಯನ ಪರವಾದ ಅರ್ಥ- ಸಂಪತ್ತು ಎಂಬ ನಟಿ ಕೌಸ್ತುಭಮಣಿಯ ಕಾಂತಿಯಂತೆ ಯಾರ ಎದೆಯೆಂಬ ರಂಗದ ಮೇಲೆ ಪುಷ್ಪಾಂಜಲಿಯನ್ನು ಕ್ಷೇಪಿಸುತ್ತಿದ್ದಾಳೋ, ಯಾರ ಕಾಲುಗುರಿನ ಕಾಂತಿಯ ಗಂಗೆ ಉಳಿದ ರಾಜರ ಕಿರೀಟದಲ್ಲಿ ವ್ಯಾಪಿಸುವುದೋ ಯಾರ ಸೈನ್ಯವೆಂಬ ಸೂರ್ಯ ದೈತ್ಯರೆಂಬ ಕತ್ತಲೆಯ ನಾಶವನ್ನು ಮಾಡುತ್ತಿರುವುದೋ, ಭೂಭಾರವನ್ನು ಛೇದಿಸುವ ಕೃಷ್ಣನಲ್ಲಿ ಭಕ್ತನಾದ ಆ ಬಲ್ಲಾಳನು ನಮಗೆ ಆನಂದವನ್ನು ನೀಡಲಿ)

ಚಂ||
ಜನನುತರಾಜಹಂಸನಯನಂ ಕಮಲಾವಸಥಂ ಕಳಾನಿಕೇ
ತನನೆನಿಸಿರ್ದ ಪೆಂಪುಪಮೆವೆತ್ತೊಡಮೇನೊ ಹಿರಣ್ಯಗರ್ಭನೆಂ

ದೆನಿಸಿಯುದಾರನಾಗಿ ರಜಮೊಂದಿಯೆ ಸತ್ತ್ವನಿಧಾನನೆಂಬ ಪೆಂ
ಪನುಗುಣಮಾದ ಲೋಕಪಿತನೊಲ್ದು ಚತುರ್ಮುಖನೀಗೆ ರಾಗಮಂ||೨||
(ಬ್ರಹ್ಮಪರವಾದ ಅರ್ಥ-ಜನರಿಂದ ಸ್ತುತಿಸಲ್ಪಟ್ಟ ರಾಜಹಂಸವನ್ನು ವಾಹನವಾಗಿ ಉಳ್ಳ ಕಮಲದಲ್ಲಿ ವಾಸವಾಗಿರುವ, ಕಲೆಗಳಿಗೆ ಆಶ್ರಯನೆಂಬ ಗರಿಮೆಯನ್ನು ಹೊತ್ತವನೂ ಹಿರಣ್ಯಗರ್ಭ ಎಂದೆನಿಸಿ ಉದಾರನಾಗಿರುವ ರಜಸ್ಸಿನಲ್ಲಿದ್ದರೂ ಸತ್ತ್ವನಿಧಾನ ಎಂಬ ಮಹನೀಯತೆಯನ್ನು ಹೊಂದಿದ ಲೋಕಪಿತನಾದ ನಾಲ್ಕು ಮುಖವುಳ್ಳ ಬ್ರಹ್ಮನು ಒಲಿದು ರಾಗವನ್ನು ನೀಡಲಿ)
(ಕೃಷ್ಣಪರವಾದ ಅರ್ಥ- ಜನರಿಂದ ಸಂಸ್ತುತರಾದ ಚಂದ್ರಸೂರ್ಯರನ್ನೇ ಕಣ್ಣುಗಳನ್ನಾಗಿ ಹೊಂದಿದ/ ಜನರಿಂದ ಸಂಸ್ತುತರಾದ ರಾಜಹಂಸ-ಯೋಗಿಗಳನ್ನು ಪರಮಪದಕ್ಕೊಯ್ಯುವ, ಲಕ್ಷ್ಮಿಯ ಆವಾಸವಾಗಿರುವ ಕಳಾನಿ(ಗರುಡ)ಯ ಧ್ವಜವನ್ನು ಹೊಂದಿರುವವನೂ, ಹಿರಣ್ಯಗರ್ಭ ಎಂದೆನಿಸಿ ಉದಾರನಾಗಿರುವ ರಾಜಸಗುಣವಿದ್ದರೂ ಸತ್ತ್ವಕ್ಕೆ ನೆಲೆಯೆಂಬ ಮಹಿಮೆಯನ್ನು ಹೊಂದಿರುವ ಲೋಕಕ್ಕೇ ಪಿತೃವಾದ ಚತುರ್ಯುಗಮುಖ್ಯನಾದ ಕೃಷ್ಣನು ನಮಗೆ ತೋಷವನ್ನು ನೀಡಲಿ)
(ರಾಜ ಬಲ್ಲಾಳನ ಪರವಾದ ಅರ್ಥ- ಜನರಿಂದ ಸ್ತುತರಾದ ಶ್ರೇಷ್ಠರಾಜರ ನಾಯಕನಾದ, ಐಶ್ವರ್ಯಕ್ಕೆ ನಿವಾಸನಾದ, ಕಲೆಗಳಿಗೆ ಆಶ್ರಯವನ್ನು ನೀಡಿದ, ಚಿನ್ನದ ನಿಧಿಯಾದ, ಉದಾರಿಯಾದ, ರಾಜಸ ಗುಣದಿಂದ(ರಾಜನಾಗಿ) ಇದ್ದರೂ ಸತ್ತ್ವನಿಧಾನನಾಗಿರುವ ಮಹಿಮೆಯನ್ನು ಹೊಂದಿದ, ಲೋಕವನ್ನು ತಂದೆಯಂತೆ ಕಾಪಾಡುವ ಚತುರಂಗಬಲದಲ್ಲಿ/ ಉಪಾಯಚತುಷ್ಕದಲ್ಲಿ ದೃಷ್ಟಿಯುಳ್ಳ ರಾಜನು ನಮಗೆ ಸಂತಸವನ್ನು ಕೊಡಲಿ)
 ಮ.ವಿ||
ಅರಿಕಾಮಧ್ವಂಸಿ ನಾಗವ್ರಜಮಯಕಟಕಂ ರಾಜರಾಜಪ್ರತಿಷ್ಠಾ-
ನಿರತಂ ಲೀಲಾಕ್ರಮೋಂದಚಿತ ನಿರವಧಿ ಗಾಂಗೇಯಕಂ ದ್ವಿಟ್ಪುರಧ್ವಂ-
ಸರತಕ್ರೋಧಂ ವೃಷಾಂಕಂ ವಿಬುಧನುತನುಮಾಕಾಮಿನೀ ಜೀವಿತೇಶಂ
ಪರಮೈಶ್ವರ್ಯಾಸ್ಪದಂ ರಕ್ಷಿಸುಗೆ ವಸುಧೆಯಂ ಯುದ್ಧರಂಗತ್ರಿಣೇತ್ರಂ||೩||

(ಶಿವನ ಪರವಾದ ಅರ್ಥ- ಶತ್ರುವಾದ ಕಾಮನನ್ನು ನಾಶಪಡಿಸಿದವನು, ಸರ್ಪಕುಲವನ್ನೇ ಆಭರಣಗಳನ್ನಾಗಿ ಉಳ್ಳವನು ಕುಬೇರನನ್ನು ಪ್ರತಿಷ್ಠಾಪಿಸಲು ನಿರತನಾದವನು, ಲೀಲೆಯೆಂಬಂತೆ ಗಂಗೆಯನ್ನು ಉದ್ಧರಿಸಿದವನು, ಶತ್ರುಗಳಾದ ತ್ರಿಪುರಾಸುರಸಂಹಾರದ ಕ್ರೋಧವುಳ್ಳವನು, ಎತ್ತನ್ನು ಧ್ವಜವಾಗಿ ಉಳ್ಳವನು, ವಿದ್ವಾಂಸರಿಂದ ಸ್ತುತಿಸಲ್ಪಟ್ಟವನು, ಉಮಾ-ಪಾರ್ವತಿಯ ಪ್ರಾಣಕಾಂತನು, ಪರಮ ಐಶ್ವರ್ಯಗಳನ್ನು ಹೊಂದಿದ ಯುದ್ಧರಂಗದಲ್ಲಿ ಮೂರುಕಣ್ಣುಳ್ಳವನಾದ ಶಿವನು ಭೂಮಿಯನ್ನು ರಕ್ಷಿಸಲಿ.)
(ಕೃಷ್ಣನ ಪರವಾದ ಅರ್ಥ- ಶತ್ರುಗಳ ಕಾಮವನ್ನು ಧ್ವಂಸಮಾಡಿದವನು, ಕಪಿಸಮೂಹವನ್ನು ಸೈನ್ಯವಾಗಿ ಹೊಂದಿದವನು, ಧರ್ಮರಾಜನ ರಾಹ್ಯಪ್ರತಿಷ್ಠಾಪನೆಯಲ್ಲಿ ನಿರತನಾದವನು, ಲೀಲೆಯಿಂದ ವೃದ್ಧನಾದ ಭೀಷ್ಮನಿಂದಲೂ ಸ್ತುತಿಸಲ್ಪಟ್ಟವನು, ಶತ್ರುಗಳ ಪುರವನ್ನು ನಾಶಮಾಡುವ ಕೋಪವುಳ್ಳವನು, ಧರ್ಮದಲ್ಲಿ ನಡೆಯುವವನು, ವಿದ್ವಾಂಸರಿಂದ ಸ್ತುತಿಸಲ್ಪಟ್ಟವನೂ ಆ ಲಕ್ಷ್ಮಿಯ ಪ್ರಾಣಕಾಂತನು, ಪರಮ ಐಶ್ವರ್ಯಗಳಿಗೆ ಆಶ್ರಯವಾದ ಯುದ್ಧರಂಗದಲ್ಲಿ ತ್ರಿಣೇತ್ರ ಎನಿಸಿಕೊಂಡವನಾದ ಕೃಷ್ಣನು ಭೂಮಿಯನ್ನು ಕಾಪಾಡಲಿ.)
(ಬಲ್ಲಾಳ ರಾಜನ ಪರವಾದ ಅರ್ಥ- ಶತ್ರುವಾದ ಕದಂಬ ಕಾಮದೇವನನ್ನು ಧ್ವಂಸಮಾಡಿದವನು, ಗಜಸೈನ್ಯವನ್ನು ಹೊಂದಿರುವವನು, ಚೋಳರಾಜನಾದ ರಾಜರಾಜನ ಪ್ರತಿಷ್ಠೆಯಲ್ಲಿ ನಿರತನಾದವನು, ಲೀಲೆಯಿಂದ ಸುವರ್ಣಭಂಡಾರವನ್ನು ಹೊಂದಿದವನು, ಶತ್ರುಗಳ ಪುರವನ್ನು ನಾಶಮಾಡುವುದರಲ್ಲಿ ಉಂಟಾದ ಕೋಪವುಳ್ಳವನು, ಧರ್ಮದ ನೆಲೆಯೂ, ವಿಬುಧರಿಂದ ಸ್ತುತಿಸಲ್ಪಟ್ಟವನೂ ಆಗಿ, ಉಮಾ ಎಂಬ ಹೆಸರಿನ ರಾಜ್ಞಿಯ ಪ್ರಾಣಕಾಂತನೂ ಪರಮೈಶ್ವರ್ಯವುಳ್ಳವನೂ ಆದ "ಯುದ್ಧರಂಗತ್ರಿಣೇತ್ರ" ಎಂಬ ಬಿರುದನ್ನೂ ಹೊಂದಿದ ಬಲ್ಲಾಳರಾಯನು ಭೂಮಿಯನ್ನು ರಕ್ಷಿಸಲಿ. (ಆಂಡಯ್ಯನ ಕಬ್ಬಿಗರ ಕಾವದಲ್ಲಿ ಕೂಡ ಈತನೊಡನೆ ಕದಂಬ ಕಾಮದೇವನ ವಿದ್ವೇಷವಿದ್ದುದಕ್ಕೆ ಸಾಕ್ಷಿಯಾಗಿ ಪದ್ಯಗಳು ಸಿಗುತ್ತವೆ) )
ಮ.ವಿ||
ಜನಚಿತ್ತಾಹ್ಲಾದಪಾದಂ ಸಕಲಧರಣಿಭೃನ್ಮಸ್ತಕನ್ಯಸ್ತಮಾಗಿ-
ರ್ಪಿನಮುಚ್ಚಂಡಪ್ರತಾಪೋದಯಮರಿಕುಮುದಾಭೋಗವಿಧ್ವಂಸಿಯಾಗಿ-
ರ್ಪಿನಮುದ್ಯನ್ಮಂಡಲಾಗ್ರಂ ಸಲೆ ಘನಪದವೀಶೋಭೆಯಂ ಪೆರ್ಚಿಸುತ್ತಿ-
ರ್ಪಿನಮೊಳ್ಪಂ ಪೆತ್ತುದಾತ್ತಂ ಬೆಳಗುಗೆ ಜಗಮಂ ಗೋಪಮಾರ್ತಂಡದೇವಂ||೪||

(ಸೂರ್ಯನ ಪರವಾದ ಅರ್ಥ- ಜನರ ಮನಸ್ಸಿಗೆ ಆನಂದವನ್ನು ತರುವ ಕಿರಣಗಳನ್ನು ಹೊಂದಿರುವ, ಎಲ್ಲಾ ಪರ್ವತಾಗ್ರಗಳಲ್ಲಿಯೂ ಕಿರಣಗಳನ್ನು ಪಸರಿಸುತ್ತಿರುವಲ್ಲಿಗೆ, ಪ್ರಚಂಡವಾದ ತಾಪವನ್ನು ಹೊಂದಿರುವ ಉದಯದಿಂದ ಶತ್ರುಗಳಾದ ಕೆನ್ನೆಯ್ದಿಲೆ ಹೂಗಳ ಸೊಬಗನ್ನು ಮುದುಡಿಸುತ್ತಿರುವಲ್ಲಿಗೆ, ಉತ್ಕೃಷ್ಟವಾದ ಮಂಡಲದಿಂದ ಮೋಡಗಳು ಹೋಗುವ ಮಾರ್ಗವಾದ ಆಕಾಶದ ಶೋಭೆಯನ್ನು ಹೆಚ್ಚಿಸುತ್ತಿರುವಲ್ಲಿಗೆ, ಒಳ್ಳಿತನ್ನು ಹೆತ್ತು ಉದಾತ್ತನಾದ ಗೋಪಮಾರ್ತಂಡದೇವ(ಸೂರ್ಯ) ಜಗತ್ತನ್ನು ಬೆಳಗಲಿ)
(ಕೃಷ್ಣನ ಪರವಾದ ಅರ್ಥ- ಜನರ ಮನಸ್ಸಿಗೆ ಯಾರ ಪಾದಗಳು ಸಂತೋಷವನ್ನು ಕೊಡುತ್ತವೆಯೋ, ಇಡೀ ಭೂಮಂಡಲದ ರಾಜನಾದ ಬಲಿಯ ತಲೆಯ ಮೇಲೆ ಯಾರ ಪಾದಗಳು ಇಡಲ್ಪಟ್ಟವೋ, ಯಾರ ಪ್ರಚಂಡಪ್ರತಾಪದ ಉದಯದಿಂದ ಶತ್ರುರಾಜರ ಕೆಟ್ಟ ಸಂತೋಷದ ಆಭೋಗದ ವಿಧ್ವಂಸನವಾಗುತ್ತಿದೆಯೋ, ಯಾರ ಖಡ್ಗದಿಂದ ಘನಪದವಿ(ಆಕಾಶ/ ದೊಡ್ಡ ಸ್ಥಾನಗಳು)ಯ ಶೋಭೆಯನ್ನು ಹೆಚ್ಚಿಸುತ್ತಿವೆಯೋ, ಒಳ್ಳಿತನ್ನು ಹೆತ್ತ ಉದಾತ್ತನಾದ ಆ ಗೋಪಾಲಕ-ಮಾರ್ತಂಡ ಕೃಷ್ಣನು ಜಗತ್ತನ್ನು ಬೆಳಗಲಿ)
(ಬಲ್ಲಾಳರಾಯನ ಪರವಾದ ಅರ್ಥ- ಜನರಿಗೆ ಸಂತೋಷವನ್ನು ಕೊಡುವ ಪಾದಗಳುಳ್ಳ, ಸಕಲ ರಾಜರೂ ಯಾರ ಪಾದಗಳನ್ನು ತಲೆಯಲ್ಲಿ ತಳೆಯುವರೋ, ಯಾರ ಪ್ರತಾಪದಿಂದ ಅರಿರಾಜರ ಕೆಟ್ಟ ಸಂತೋಷನಾಶವಾಗುತ್ತವೆಯೋ, ಯಾರ ಹೊಳೆಯುವ ಖಡ್ಗದಿಂದ ಅವನ ಉನ್ನತ ಮಾರ್ಗದ ಶೋಭೆ ಹೆಚ್ಚುತ್ತಿದೆಯೋ ಆ ಒಳ್ಳಿತನ್ನು ಹೊಂದಿರುವ ಉದಾತ್ತನಾದ ಗೋಪಮಾರ್ತಂಡದೇವನಾದ ಬಲ್ಲಾಳರಾಯನು ಜಗತ್ತನ್ನು ಬೆಳಗಲಿ)

ಮ.ವಿ||
Image result for ರುದ್ರಭಟ್ಟ ಜಗನ್ನಾಥ
ಚಿತ್ರಕೃಪೆ-ಅಂತರ್ಜಾಲ
ಅರಿರೌದ್ರಂ ಕರದೈರ್ಘ್ಯಮುಲ್ಲಸದಹೀನಾಲಂಕೃತಂ ಮೂರ್ತಿ ಸಾ-
ಕ್ಷರಸೇವ್ಯಂ ನಿಜವಿದ್ಯೆ ವಿಶ್ವವಿನುತಂ ಪಾದಂ ಸದಾಳಿಪ್ರಿಯಂ
ವರದಾನಂ ನತಭದ್ರಲಕ್ಷಣಪದಂ ಪದ್ಮಾನುಷಂಗಿತ್ವಮಾ
ಗಿರೆ ಪೆಂಪಚ್ಚರಿಯಾಗೆ ದೇವಗಣಪಂ ರಕ್ಷಿಕ್ಕೆ ಭೂಚಕ್ರಮಂ||೫||
(ಗಣಪತಿಯ ಪರವಾದ ಅರ್ಥ- ಶತ್ರುಗಳಿಗೆ ಭುಂಕರವಾದ ದೀರ್ಘವಾದ ಸೊಂಡಿಲುಳ್ಳವನು, ಉಲ್ಲಸಿತವಾದ ನಾಗರಾಜನನ್ನು ಅಲಂಕಾರವಾಗಿ ಹೊಂದಿದವ ಮೂರ್ತಿ, ವಿದ್ವಾಂಸರಿಂದ ಸೇವಿತನಾದವನು, ಸಹಜವಾದ ವಿದ್ಯೆಯುಳ್ಳ ವಿಶ್ವವಿನುತವಾದ ಪಾದಗಳುಳ್ಳ, ಸದಾ ದುಂಬಿಗಳಿಗೆ ಪ್ರಿಯವಾದ ಮದಧಾರೆಯನ್ನು ಹೊಂದುಲಿರುವ, ನಮಸ್ಕರಿಸುವವರಿಗೆ ಮಂಗಳವನ್ನುಂಟುಮಾಡುವ, ಕಮಲವನ್ನು ಧರಿಸಿರುವ, ಅಚ್ಚರಿಯನ್ನುಂಟುಮಾಡುವ ಮಹಿಮೆಯುಳ್ಳ ದೇವನಾದ ಗಣಪನು ಭೂಮಿಯನ್ನು ರಕ್ಷಿಸಲಿ)
(ಕೃಷ್ಣನ ಪರವಾದ ಅರ್ಥ- ಶತ್ರುಗಳಿಗೆ ಭಯಂಕರವಾಗಿರುವ, ದೀರ್ಘವಾದ ಬಾಹುಗಳುಳ್ಳ, ಒಳ್ಳೆಯ ಅಲಂಕಾರಗಳನ್ನು ಹೊಂದಿರುವ, ಯೋಗಿಗಳಿಂದ ಸೇವಿತನಾದ,ವಿಶ್ವಸ್ತುತವಾದ ವಿದ್ಯೆಯಾದ, ಸದಾ ಸಜ್ಜನರಿಗೆ ಪ್ರಿಯವಾದ ಪಾದಗಳುಳ್ಳ, ವರದಾನ ಮಾಡುವ, ಭಕ್ತರಿಗೆ ಒಳ್ಳೆಯ ಸ್ಥಾನವನ್ನು ಕಲ್ಪಿಸುವ, ಲಕ್ಷ್ಮೀಸಮೇತನಾದ, ಆಶ್ಚರ್ಯವನ್ನು ಹುಟ್ಟಿಸುವಂತಹ ಮಹಿಮೆಯುಳ್ಳ, ದೇವಗಣಕ್ಕೆ ಒಡೆಯನಾದ ವಿಷ್ಣು ಭೂಮಂಡಲವನ್ನು ರಕ್ಷಿಸಲಿ.)
(ಬಲ್ಲಾಳರಾಯನ ಪರವಾದ ಅರ್ಥ- ಶತ್ರುಗಳಿಗೆ ರುದ್ರಸ್ವರೂಪನಾದ, ದೀರ್ಘವಾದ ಕರಗಳುಳ್ಳ, ಹೀನವಲ್ಲದ ಅಲಂಕಾರಗಲನ್ನು ಹೊಂದಿರುವ, ವಿದ್ವಜ್ಜನರಿಂದ ಸೇವ್ಯನಾದ, ವಿಶ್ವಸ್ತುತವಾದ ವಿದ್ಯೆಯುಳ್ಳ, ಸದಾ ಸಜ್ಜನರಿಗೆ ಪ್ರಿಯವಾದ ಪಾದವುಳ್ಳ, ವರದಾತನಾಗಿರುವ, ಆನತ ಜನರಿಗೆ ಮಂಗಳವನ್ನುಂಟುನಾಡುವ ಸ್ಥಾನದಲ್ಲಿರುವ, ಸಂಪತ್ತಿನಿಂದ ಕೂಡಿರುವ, ಆಶ್ಚರ್ಯವಾದ ಮಹಿಮೆಯುಳ್ಳ ದೇವಗಣಗಳಿಗೂ ಒಡೆಯನಾದ ಬಲ್ಲಾಳರಾಯನು ಭೂಮಿಯನ್ನು ರಕ್ಷಿಸಲಿ)


ಹಲವು ಕಾಲದಿಂದ ಡ್ರಾಫ್ಟನಲ್ಲಿದ್ದ ಈ ಲೇಖನಕ್ಕೆ ಮುಕ್ತಿ ಸಿಕ್ಕ ಕಾರಣ ಹೊಸದಾಗಿ ಶೀಘ್ರದಲ್ಲಿ ರಸಮಯವಾದ ಪದ್ಯಗಳನ್ನು ಮತ್ತೆ ಹಂಚಿಕೊಳ್ಳಲು ಪ್ರಾರಂಭಿಸುವೆ. 

ಮಂಗಳವಾರ, ಜೂನ್ 30, 2015

ಸಹೃದಯಕಾಲ-೨೦ ಸೂರ್ಯೋದಯ

ಮಹಾಕಾವ್ಯದ ಬಗ್ಗೆ ಅದರಲ್ಲಿ ಬರುವ ಅಷ್ಟಾದಶ ವರ್ಣನೆಗಳು ಬಗ್ಗೆ ಎಲ್ಲ ಈ ಹಿಂದೆ ಬರೆದ ಲೇಖನಗಳಲ್ಲಿ ವಿವರಿಸಿದ್ದೆ. ಹಾಗೆ ಪೂರ್ವಕವಿಗಳ ಕಾವ್ಯವನ್ನು ಅವಲೋಕಿಸಿದಾಗ ಸಿಗುವ ಅನೇಕ ಪದ್ಯಗಳಲ್ಲಿ ಪ್ರಕೃತಿಯ ವರ್ಣನೆ ಅಸಂಖ್ಯವಾಗಿ ಸಿಗುತ್ತವೆ. ಅವುಗಳನ್ನೇ ಒಂದು ಸಂಗ್ರಹವಾಗಿ ಬರೆದ ಕೃತಿಗಳೂ ಅನೇಕ. ಕಾವ್ಯಾವಲೋಕನದಲ್ಲಿ ಅಲಂಕಾರಗಳನ್ನು ವಿವರಿಸುವಾಗ ಲಕ್ಷ್ಯಕ್ಕೆ ಬೇರೆ ಬೇರೆ ಕವಿಗಳ ಪದ್ಯಗಳನ್ನು ಉದ್ಧರಿಸಿದರೆ ಸೂಕ್ತಿಸುಧಾರ್ಣವದಂತಹ ಕೃತಿಗಳಲ್ಲಿ ಅಷ್ಟಾದಶವರ್ಣನೆಗಳನ್ನೇ ಆಶ್ವಾಸಗಳಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ.
ಹೀಗೆ ಮಲ್ಲಿಕಾರ್ಜುನ ಕವಿಯ "ಸೂಕ್ತಿಸುಧಾರ್ಣವ"ವನ್ನು ಅವಲೋಕಿಸುತ್ತಿರುವಾಗ ಸಿಕ್ಕ ಪದ್ಯ- ಲೀಲಾವತಿಯಿಂದ ಉದ್ಧೃತವೆಂದು ಅಲ್ಲಿಯೇ ಕೊಟ್ಟಿದ್ದ. ಸೂರ್ಯೋದಯವನ್ನು ವರ್ಣಿಸುವ ಪದ್ಯ ಹೀಗಿದೆ.

ವಾರುಣಿ ಕಳ್ಳನೀಂಟಿ ಮಱೆದಿಕ್ಕಿದ ಬಟ್ಟಲೊ ಭೀತಿಯಿಂ ನಿಶಾ-
ಸ್ವೈರಿಣಿ ಪೋಗೆ ಬಿರ್ದ ಕಿವಿಯೋಲೆಯ ಮೌಕ್ತಿಯ ಪತ್ರಮೋ ನಭೋ -
ವಾರಣಮೊಲ್ಲದೊಕ್ಕ ದಧಿಪಾಂಡುರಪಿಂಡಮೊ ಪೇೞೆನಲ್ಕೆ ನೀ-
ಹಾರಮಯೂಖಮಂಡಲಮದೇನೆಸೆದಿರ್ದುದೊ ಪಶ್ಚಿಮಾದ್ರಿಯೊಳ್||
(ಲೀಲಾವತಿ ೩-೩)

ವಾರುಣಿ (ಪಶ್ಚಿಮ ದಿಕ್ಕು/ ಮದ್ಯದ ಒಂದು ವಿಧ) ಕಳ್ಳನ್ನು ಕುಡಿದು ಮರೆತು ಇಟ್ಟ ಬಟ್ಟಲೋ, ಭೀತಿಯಿಂದ ರಾತ್ರಿ ಎನ್ನುವ ಸ್ವೈರಿಣಿ ಹೋಗುವಾಗ ಅವಳ ಕಿವಿಯಿಂದ ಬಿದ್ದ ಓಲೆಯ ಚಿಪ್ಪೋ,  ಅಥವಾ ಆಕಾಶ ಎನ್ನುವ ಆನೆ ತಿನ್ನಲು ಒಲ್ಲದೆ ದೂರವಿಟ್ಟ ಮೊಸರನ್ನದ ಉಂಡೆಯೋ ಎಂಬ ರೀತಿಯಲ್ಲಿ ಹಿಮದ ಕಿರಣಮಂಡಲ(ಚಂದ್ರ) ಪಶ್ಚಿಮದ ಬೆಟ್ಟದಲ್ಲಿ ಕಾಣುತ್ತಿತ್ತು
ಇಲ್ಲಿ ಕೊಡುವ ನಾಲ್ಕು ಚಿತ್ರಣಗಳನ್ನು ನೋಡಿದರೆ ಕವಿಯ ಕಲ್ಪನೆ ಎಷ್ಟು ಸುಂದರ ಎನಿಸುತ್ತದೆ. ಕುವೆಂಪು ಅವರು "ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ" ಎಂದು ಹೇಳಿದ್ದು ಎಷ್ಟು ಸತ್ಯ ಎನಿಸುತ್ತದೆ. ಸಾಮಾನ್ಯರಿಗೆ ಪ್ರಕೃತಿಯ ಶಕ್ತಿಯ ಮೂಲವಾಗಿ ಅಲ್ಲದೆ ಹಲವು ರೀತಿಯಿಂದ ವರವೆನಿಸಿದರೆ, ಕವಿಗಳ ಪಾಲಿಗೆ ಹೊಸ ಕಲ್ಪನೆಯನ್ನು ಹುಟ್ಟಿಸುವುದರಿಂದ, ಸಹೃದಯರ ಪಾಲಿಗೆ ಕವಿಕಲ್ಪನೆಯನ್ನು ಆಸ್ವಾದಿಸಲು ಉಪಯುಕ್ತವಾಗಿರುವುದರಿಂದ ವರವೆನಿಸಿದೆ ಎಂಬುದು ನಿಸ್ಸಂಶಯ.

ಮಂಗಳವಾರ, ಜೂನ್ 2, 2015

ಸಹೃದಯಕಾಲ-೧೯ ಅಗಸ್ತ್ಯ ಚರಿತೆ

ರಸ-ಧ್ವನಿ-ಔಚಿತ್ಯ ಇವುಗಳಿಗೆ ಪೂರಕವಾಗಿ ಕಾವ್ಯವೊಂದು ಬರೆಯಲ್ಪಟ್ಟರೆ ಸತ್ಕಾವ್ಯವೆನಿಸಿಕೊಳ್ಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಬರೆಯುವ ಓಘದಲ್ಲಿ ಹೇಗೆ ಹೇಗೋ ಸಾಗುವ ಕಾವ್ಯದಲ್ಲಿ ಇದು ಸಾಧ್ಯವಾಗುವುದು ಸಿದ್ಧರಿಗೆ ಮಾತ್ರ. ಯಾಕೆಂದರೆ ಅವರು ಸಾಧನೆ ಮಾಡಿರುತ್ತಾರೆ.
ಹೀಗೆ ಬರೆಯುವಾಗ ಅಲ್ಲಲ್ಲಿ ಪೂರ್ವಕವಿಗಳನ್ನು ಹಿಮ್ಮೆಟ್ಟಿಸಿ ಮುಂದೆ ಧಾವಿಸುವ ಬಯಕೆ ಹುಟ್ಟದೇ ಹೋಗುವುದಿಲ್ಲ. ಅದರಲ್ಲಿ ಸಫಲರಾಗದಿದ್ದರೂ ಪದ್ಯದಲ್ಲಿ ಪೂರ್ವಕವಿಯ ಛಾಯೆ ಗೊತ್ತಾಗುವುದು ಸಹಜ.
ಹಾಗೆ ಇತ್ತೀಚೆಗೆ ಬರೆದು ಮುಗಿಸಿದ "ಅಗಸ್ತ್ಯಚರಿತೆ"ಕಾವ್ಯದಲ್ಲಿ ಎಷ್ಟೋ ನೀರಸ-ಧ್ವನಿರಹಿತ-ಅನುಚಿತ ಪದ್ಯಗಳು ಸೇರಿಕೊಂಡಿವೆ. ಚಿತ್ರಚಮತ್ಕಾರಗಳನ್ನು ಶ್ಲೇಷವನ್ನು ಮಾಡುವಲ್ಲಿ ಕ್ಲೇಶವೊದಗಿ ಅಲಂಕಾರ "ಅಲಂ"ಕಾರ(ಸಾಕಪ್ಪಾ ಸಾಕು ಎನಿಸುವಂತೆ) ಕೂಡ ಆಗಿದೆ. ಕವಿಗಳಿಗೂ ಸಹೃದಯರಿಗೂ ಇವೆಲ್ಲ ವೇದ್ಯವಾದ ಕಾರಣ ಹೆಚ್ಚು ವಿಸ್ತರಿಸುವ ಆವಶ್ಯಕತೆ ಇಲ್ಲ.

ಇಲ್ಲಿ ರಸಮಯ ಎಂದೆನಿಸಿದ ಕೆಲವು ಪದ್ಯಗಳನ್ನು ಹಂಚಿಕೊಳ್ಳುವ ಬಯಕೆಯಿಂದ ಹಾಕುತ್ತಿದ್ದೇನೆ. ಬಾಣನಂತೆ ಪರಿಸಂಖ್ಯಾಲಂಕಾರದ ಮೋಹ ಕವಿದಿದೆ.
ಅಗಸ್ತ್ಯ ಸಮುದ್ರಪಾನವನ್ನು ಮಾಡಲು ಬರುವಾಗಿದ್ದ ಸಮುದ್ರವರ್ಣನೆಯ ಪದ್ಯ.

ಮತ್ತೇಭವಿಕ್ರೀಡಿತ||

ಘನದಂದಂ ಜಲಗರ್ಭನಂಬರನದೀಧಾಮಂ ಹರಂಬೋಲ್ತು ಜೀ-

ವನಲಾವಣ್ಯಕರಂ ವಿರಿಂಚಿಕೃತಲೇಖಂಬೊಲ್ ಸಮುದ್ರಂ ಸ್ವಯಂ
ಧನಮಂಜೂಷೆಯವೊಲ್ ಸದಾನವಪಥಂ ಕಾಡೆಂಬವೋಲೇ ಸುರೇಂ-
ದ್ರನವೊಲ್ ವಾರ್ಧಿಯದಾಯ್ತಧಃಕೃತಮಹಾದಿಙ್ನಾಗದಿಂದಾವಗಂ||
ತಾತ್ಪರ್ಯ- ಸಮುದ್ರವು ಮೋಡದಂತೆ ಜಲಗರ್ಭ(ನೀರನ್ನು ಗರ್ಭದಲ್ಲಿ ಉಳ್ಳದ್ದು) ,
ಶಿವನಂತೆ ಅಂಬರನದೀಧಾಮ (ಗಂಗಾನದಿ ಸೇರುವ ಸ್ಥಳ), ಬ್ರಹ್ಮ ಬರೆದ ಹಣೆಯ ಬರೆಹದಂತೆ ಜೀವನಲಾವಣ್ಯಕರ(ಬ್ರಹ್ಮಲೇಖ- ಜೀವನದಲ್ಲಿ ಲಾವಣ್ಯವನ್ನು ಉಂಟುಮಾಡುತ್ತದೆ. ಸಮುದ್ರ- ಜೀವನ ಅಂದರೆ ನೀರನ್ನು ಲಾವಣ್ಯ ಅಂದರೆ ಲವಣದ ಭಾವ-ಉಪ್ಪು ರುಚಿ ಆಗುವಂತೆ ಮಾಡುತ್ತದೆ)
ಸ್ವಯಂ ಧನಮಂಜೂಷೆ-ದುಡ್ಡಿನ ಪೆಟ್ಟಿಗೆಯಂತೆ ಸಮುದ್ರ (ಸಮುದ್ರ ಎಂದರೆ ಮುದ್ರೆ/ಬೀಗದಿಂದ ಕೂಡಿದ್ದು ಎಂಬ ಅರ್ಥವೂ ಇದೆ) ಕಾಡಿನಂತೆ ಸದಾನವಪಥ (ಸ+ದಾನವಪಥ-ರಾಕ್ಷಸರ ಹಾದಿಯಿಂದ ಕೂಡಿದ್ದು, ಸದಾ+ನವಪಥ- ಯಾವಾಗಲೂ ಹೊಸ ಹಾದಿಯನ್ನೇ ಉಳ್ಳದ್ದು) ಸುರೇಂದ್ರನಂತೆ ಅಧಃಕೃತಮಹಾದಿಙ್ನಾಗದಿಂದ (ಇಂದ್ರ-ಯಾವತ್ತೂ ಮಹಾದಿಗ್ಗಜ ಐರಾವತವನ್ನು ಏರುತ್ತಾನೆ, ಸಮುದ್ರಕೂಡ ಅಷ್ಟದಿಗ್ಗಜಗಳನ್ನೂ ಕೆಳಕ್ಕೆ ಹಾಕಿರುತ್ತದೆ)
ಇಲ್ಲಿ ಬಳಸಿದ ಶಬ್ದಗಳ ಸಮಸ್ತಪದದ ಬದಲು ಅದೇ ಅರ್ಥ ಕೊಡುವ ಬೇರೆ ಶಬ್ದಗಳನ್ನು ಹಾಕಿದರೆ ಹೊಂದಾಣಿಕೆ ಇರುವುದಿಲ್ಲ. ಸಮಸ್ತಪದದ ಶ್ಲೇಷ ಉಪಮಾನ ಉಪಮೇಯ ಇವೆರಡಕ್ಕೂ ಅನ್ವಯವಾಗುವಂತಿರುತ್ತದೆ ಎಂಬುದೇ ಸ್ವಾರಸ್ಯ. ಬಾಣಭಟ್ಟನನ್ನು ಓದಿದವರಿಗೆ- ಸಾವಿರ ರೂಪಾಯಿ ನೋಟನ್ನು ಹಿಡಿದುಕೊಂಡವನಿಗೆ -ನಾಕಾಣೆ ಬಿಲ್ಲೆಯನ್ನು ತೋರಿಸಿದಂತೆ ಆಗುತ್ತದೆ ಅಷ್ಟೆ :-)

ಬುಧವಾರ, ಮೇ 6, 2015

ಸಹೃದಯಕಾಲ -೧೮ ಛತ್ರ

ಸಮಾಸಭೂಯಿಷ್ಠವಾದ ಪದ್ಯರಚನೆ ಹಲವು ಕವಿಗಳಿಗೆ ತುಂಬ ಇಷ್ಟವಾದ ಪ್ರಕಾರವಷ್ಟೇ ಅಲ್ಲದೇ ಶೈಲಿಯಲ್ಲಿ ಒಂದು ಬಿಗುವನ್ನಿಡುವ ಕಾರಣ ಅದು ಸಹೃದಯಾನಂದಕರವಾಗಿರುತ್ತದೆ ಕೂಡ. ಆದರೆ ಸುಲಭವೇದ್ಯವಲ್ಲವೆಂಬ ಕಾರಣ ನಾರಿಕೇಳಪಾಕವೆಂದು ಜರಿಯಲೂ ಬಹುದು. ಭಾರತೀಯ ಭಾಷೆಗಳಿಗೆ ಸಮಾಸವೆನ್ನುವುದು ಒಂದು ವರದಾನವೇ ಆಗಿದೆ. ಏಕೆಂದರೆ ಹೀಗೆ ಸಮಸ್ತ ಪದಗಳಲ್ಲಿ ಅದೆಷ್ಟೋ ವಿಸ್ತಾರವಾದ ವಾಕ್ಯವನ್ನೂ ಕೂಡ ಸುಲಭವಾಗಿ ಹೇಳಬಹುದು. ಪ್ರಾಚೀನ ಕವಿಗಳಲ್ಲಿ ತುಂಬಾ ಬಳಕೆಯಾದ ಒಂದು ರೂಪಕವನ್ನೇ ಉದಾಹರಿಸುವುದಾದರೆ- " ಈ ರಾಜನು ಸಮಸ್ತವೈರಿಗಳನ್ನೂ ನಾಶಮಾಡುವವನು" ಎಂಬರ್ಥದಲ್ಲಿ "ರಾಜಂ ರಿಪುಕುಲವಜ್ರಂ" ಎನ್ನಬಹುದು. ಅಲ್ಲಿ ಒಂದು ರೂಪಕವೂ ಇದೆ. ವೈರಿಕುಲಕ್ಕೆ ಇಂದ್ರನ ವಜ್ರಾಯುಧವೇ ಈ ರಾಜ ಎಂದು. ಹಾಗೆ "ಕೌರವ್ಯಗಂಧೇಭಕೇಸರಿ" ಎಂದು ರನ್ನ ಭೀಮನ ಬಗ್ಗೆ ಹೇಳುತ್ತಾನೆ. ದುರ್ಯೋಧನಾದಿಗಳೆಂಬ ಮದ್ದಾನೆಗಳಿಗೆ ಸಿಂಹದಂತೆ ಇದ್ದಾನೆ ಎಂದು. ಇಲ್ಲೆಲ್ಲ ಸಮಸ್ತಪದಗಳನ್ನು ಬಳಸಿದಾಗ ಆದ ವೈಶಿಷ್ಟ್ಯ ಗಮನಾರ್ಹ. ಅಲ್ಲದೇ ಪದಶಿಲ್ಪ ಹಾಗೂ ಬಂಧದ ಬಿಗಿ ಕೂಡ ಸಡಿಲ ಪದಗಳಿಗಿಂತ ಚೆನ್ನಾಗಿರುತ್ತದೆ. 


ಇಂತಹ ಒಂದು ಪದ್ಯ-ಹಿಂದೊಮ್ಮೆ ಶತಾವಧಾನಿ ಡಾ||ಆರ್ ಗಣೇಶ್ ಅವರಿಗೆ ಭಾರತೀಯ ವಿಜ್ಞಾನಮಂದಿರದಲ್ಲಿ ನಡೆದ ಅವಧಾನವೊಂದರಲ್ಲಿ ಕೊಡೆಯ ಬಗ್ಗೆ ಪದ್ಯ ರಚಿಸಲು ಕೇಳಿದಾಗ ಅವರು ಉತ್ತರಿಸಿದ್ದು.

ಸೀಸಪದ್ಯ||
ಮಾರ್ತಂಡಚಂಡಕರಪರಿಮಾರ್ಜನೈಕಘನನೀಲಜೀಮೂತಸಂಕಾಶಕಾಯ
ದುರ್ದಮ್ಯಝಂಝಾನಿಲಪ್ರೋದ್ಧತಪ್ರಾವೃಡಾಘಾತಶಮನಗೋವರ್ಧನಧನ
ಋಣದಾತೃನಿರ್ಘೃಣಾರುಣವೀಕ್ಷಣಾಸಿಹತಿದುರ್ಭೇದ್ಯರಕ್ಷಣಾಫಲಕೋಪಮ
ಮಾರ್ಗಸ್ಥನಿರ್ಣಾಥಸಾರಮೇಯಸಮೂಹಸೇನಾನಿವಾರಣಮಹೇಂದ್ರಾಯುಧ!

ಅಂಬುಜೋಪಮಗಾತ್ರ ಸರ್ವಜನತಾಪ್ತಿಪಾತ್ರ
ಅಬಲಾಕರಾತ್ತನವರಾಗಾನುರಾಗಚೈತ್ರ
ವೃದ್ಧಸಂಧ್ಯಾವಿಹಾರೋಚಿತಾಧಾರವೇತ್ರ
ಎಂತು ಪ್ರಶಂಸಿಪುದು ನಿನ್ನನಾಂ ಮಿತ್ರ ಛತ್ರ!

(ಮಾರ್ತಂಡ ಎಂದರೆ ಸೂರ್ಯನ ಪ್ರಚಂಡವಾದ ಕಿರಣಗಳನ್ನು ತೊಳೆದುಹಾಕುವಂತಹ ಕಪ್ಪಾದ ಮೋಡಗಳಂತೆ ಮೆಯ್ಯಿರುವವನೇ!

ತಡೆಯಲಾರದಂತಹ ಗಾಳಿಬೀಸುತ್ತಾ ಮಳೆ ಬರುವಾಗ ಅದರ ಆಘಾತವನ್ನು ತಡೆಯಲು ಗೋವರ್ಧನಗಿರಿಯಂತೆ ಇರುವವನೆ 

ಸಾಲಕೊಟ್ಟವರ ನಿರ್ಘೃಣವಾದ ದೃಷ್ಟಿಯೆಂಬ ಖಡ್ಗದ ಹೊಡೆತದಿಂದ ತಪ್ಪಿಸಿಕೊಳ್ಳಲು ದುರ್ಭೇದ್ಯವಾದ ರಕ್ಷಣಾಫಲಕದಂತಿರುವವನೇ

ದಾರಿಯಲ್ಲಿರುವ ಯಾವುದೇ ಒಡೆಯನಿಲ್ಲದ ನಾಯಿಗಳ ಸಮೂಹವೆಂಬ ಸೇನೆಯನ್ನು ನಿವಾರಿಸಲು ಇಂದ್ರನ ವಜ್ರಾಯುಧದಂತೆ ಇರುವವನೇ

ಕಮಲದಂತಹ ಮೈಯವನೇ, ಎಲ್ಲ ಜನರಿಗೂ ಆಪ್ತನಾದವನೇ,

ಅಬಲೆಯರ ಕೈಸೇರಿ ಹೊಸ ರಾಗ ಅನುರಾಗದಿಂದ ಚೈತ್ರದಂತಿರುವವನೇ

ವೃದ್ಧರ ಸಂಜೆಯ ವಿಹಾರಕ್ಕೆ ಆಧಾರವಾದ ಬೆತ್ತದಂತಿರುವವನೇ

ನಿನ್ನನ್ನು ಹೇಗೆ ಪ್ರಶಂಸಿಸಲಿ  ಓ ಮಿತ್ರನೇ! ಛತ್ರನೇ!)


ಗಂಭೀರವಾಗಿ ಬಿಸಿಲಿಗೆ ಅಡ್ಡವಾಗುತ್ತದೆ, ನೆರಳುಕೊಡುತ್ತದೆ, ಮಳೆಯಿಂದ ಸಂರಕ್ಷಣೆ ನೀಡುತ್ತದೆ ಇತ್ಯಾದಿ ವಿವರಗಳು ಅಲಂಕಾರಭರಿತವಾಗಿ ಉಚಿತವಾಗಿ ಬಂದಿದೆ.  ಅಲ್ಲದೇ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಬಳಸುವ ಬಗೆ, ಬೀದಿ ನಾಯಿಗಳನ್ನು ಓಡಿಸಲು ಬಳಸುವುದು ಇಲ್ಲೆಲ್ಲ ಹಾಸ್ಯರಸಲೇಪನವಿದೆ. 


ಇಲ್ಲಿ ಸಮಸ್ತಪದಗಳಲ್ಲಿ ಅವಧಾನಿಗಳು ಕೊಟ್ಟ ಚಿತ್ರಣ ರೂಪಕ ಉಪಮಾ ಮೊದಲಾದ ಅಲಂಕಾರಗಳ ಮೂಲಕ ಅನಿರ್ವಚನೀಯವಾಗಿ ಮೂಡಿ ಬಂದಿದೆ. ಜೊತೆಗೆ ಅನುಪ್ರಾಸಾದಿ ಪ್ರಾಸಾದಿಕ ಗುಣಗಳು ಯಥೋಚಿತವಾಗಿ ಎಲ್ಲ ಸಾಲುಗಳಲ್ಲಿಯೂ ಇದೆ. ಕೊನೆಗೆ "ಮಿತ್ರ ಛತ್ರ" ಎಂಬ ಛೇಕಾನುಪ್ರಾಸ ಕೂಡ ಇದೆ. ಅದನ್ನೂ ಸಮಾಸವನ್ನಾಗಿ ಮಾಡಿದರೆ ಸ್ವಂತದ್ದಲ್ಲದೆ ಬೇರೆಯ ಮಿತ್ರರ ಬಳಿ ಎರವಲು ಪಡೆದುಕೊಂಡ ಕೊಡೆ' ಎಂದು ಅರ್ಥೈಸಿ ಇನ್ನಷ್ಟು ಹಾಸ್ಯಕ್ಕೆ ಅವಕಾಶ ಮಾಡಿಕೊಳ್ಳಬಹುದು.  

ಒಟ್ಟಾರೆ ರಸಿಕರ ಆಸ್ವಾದನೆಗೆ "ಇಲ್ಲುಂಟು ಅನಂತ ಅವಕಾಶ"...

ಶುಕ್ರವಾರ, ಏಪ್ರಿಲ್ 17, 2015

ಸಹೃದಯಕಾಲ-೧೭ ಮತ್ತೆ ವಸಂತ

ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯಲ್ಲಿ ಬರುವ ವಸಂತರ್ತುವಿನ ವರ್ಣನೆಯನ್ನು ಹಿಂದೆ
ಸಹೃದಯಕಾಲ-೪ರಲ್ಲಿ ನೋಡಿದ್ದೇವೆ. ಇಲ್ಲಿ ಕೂಡ ಮತ್ತೆ ವಸಂತದ ವರ್ಣನೆಯನ್ನೇ ಆಯ್ಕೆ ಮಾಡುವುದರಲ್ಲಿ ಎರಡು ಉದ್ದೇಶಗಳಿವೆ. ಒಂದು ಪ್ರಸ್ತುತ ಪ್ರಕೃತಿಯಲ್ಲಿ ಅದಾಗಲೇ ವಸಂತಪ್ರವೇಶವಾಗಿರುವುದು, ಎರಡನೇಯದೆಂದರೆ ಪಂಪ ಹಾಗೂ ಕುಮಾರವ್ಯಾಸರಿಬ್ಬರೂ ಒಂದು ಸಂದರ್ಭವನ್ನು ಹೇಗೆ ವರ್ಣಿಸಿದ್ದಾರೆ ಎಂಬುದರ ಪರಿಚಯವಾಗುತ್ತದೆ ಎಂಬುದು. ಸಹೃದಯರಲ್ಲಿ  ತೌಲನಿಕವಾಗಿ ನೋಡಬಯಸುವವರಿಗೂ ಕೊರತೆಯಿಲ್ಲವಷ್ಟೆ!

ಸಂದರ್ಭ: ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದ ದ್ವಿತೀಯಾಶ್ವಾಸದ ೧೨ನೆಯ ಪದ್ಯ ಮತ್ತು ನಂತರದ ಆಯ್ದ ಭಾಗಗಳು- ಪಾಂಡುವಿಗೆ ಕುಂತಿಮಾದ್ರಿಯರ ಮೂಲಕ ದೂರ್ವಾಸ ಮಹರ್ಷಿಯ ಮಂತ್ರಫಲವಾಗಿ ಸಂತಾನಭಾಗ್ಯವಾಗಿರುತ್ತದೆ. ಆ ಸಂದರ್ಭದಲ್ಲಿ ಶತಶೃಂಗ ಪರ್ವತಗಳಲ್ಲಿ ವಸಂತರ್ತು ಬರುತ್ತದೆ.

ಚಂ|| ಅಲರ್ದದಿರ್ಮುತ್ತೆ ಪೂತ ಪೊಸ ಮಲ್ಲಿಗೆ ಕಂಪನವುಂಕುತಿರ್ಪ ತೆಂ
ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ|
ಗಿಲೆ ನನೆದೋಱ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್|| ೧೨||
(ಹೂ-ತಳೆದ ಅದಿರ್ಮುತ್ತೆ-ಮಾಧವೀಲತೆ, ಹೊಸದಾದ ಮಲ್ಲಿಗೆ, ಕಂಪನ್ನು ಹರಡುತ್ತಿರುವ ತಂಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿಗಳು, ತಮ್ಮ ಇಂಪಾದ ಕಂಠದ ಧ್ವನಿಯಿಂದ ಕುಕಿಲಿಡುತ್ತಿರುವ ಕೋಗಿಲೆ ಮೊಗ್ಗನ್ನು ತೋರಿ ಚೆನ್ನಾಗಿ ಕಾಣಿಸುತ್ತಿದ್ದ ಮಾವಿನಮರ,ಒಂದು ಮೊದಲು ಅಲ್ಲದೇ ತೂಗುತ್ತಿದ್ದ ಉಯ್ಯಾಲೆಯ ಹೊಸ ಗದ್ದಲ(ಗಾವರ) ಇವೆಲ್ಲವೂ ವಸಂತಮಾಸದ ಪ್ರವೇಶದಲ್ಲಿ ಏನು ರಾಜಿಸುತ್ತದ್ದವೋ! )
(ವಚನಭಾಗದಲ್ಲಿಯೂ ಸ್ವಾರಸ್ಯವಿದ್ದರೂ ಅದನ್ನು  ಸೇರಿಸಿದಾಗ ವಿಸ್ತಾರ ಹೆಚ್ಚುವುದೆಂದು ಹಾಗೆಯೇ ಬಿಡುತ್ತಿದ್ದೇನೆ)

ಚಂ|| ಬಿರಯಿಯ ಮಿೞ್ತುವೆಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ
ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ|
ಱರನಿರದೂಱ ಸಾಱ ಜಡಿವಂತೆಸೆಗುಂ ಸಹಕಾರ ಕೋಮಳಾಂ
ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್|| ೧೩||
(ನಂದನವನಗಳಲ್ಲಿ ಮಾವಿನ ಮರದ ಕೋಮಲವಾದ ಅಂಕುರ(ಚಿಗುರು)ಗಳಿಂದ ಪರಿತುಷ್ಟವಾದ ಪರಪುಷ್ಟ(ಕೋಗಿಲೆ)ಗಳ ಧ್ವನಿ-  "ವಿರಹಿಯ ಮೃತ್ಯು ನಾನು, ಅವರನ್ನು ಮಿದಿದು(ಮೆಟ್ಟಿ)ದಲ್ಲದೆ ಕೋಪ ಆರದು ಎಂದು ಹಲ್ಲುಕಡಿಯುತ್ತ ಮನ್ಮಥ ಬೇಟಕಾರ(ಪ್ರಣಯಿ)ಗಳಿಗೆ ಇಲ್ಲಿ ಬರಬೇಡಿ" ಎಂದು ಹೇಳುವಂತೆ ತೋರುತ್ತಿತ್ತು.)
Image result for ಕೋಗಿಲೆ
ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ|
ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ|| ೧೫||
Image result for ದುಂಬಿ
(ಈ ಪದ್ಯದಲ್ಲಿ ವಸಂತ ಒಂದು ಆನೆ ಎಂದು ಸಾವಯವ ರೂಪಕದಲ್ಲಿ ಹೇಳಿದ್ದಾನೆ; ಎಲ್ಲೆಡೆ ಹಾಡುತ್ತಿರುವ ದುಂಬಿಗಳೇ ಆನೆಯ ಬ್ರೂಂಕಾರ, ಚಂದ್ರಕಾಂತಿಯೇ ಉಗ್ರತೆ/ಕೋಪ(?), ಬೀಸುತ್ತಿರುವ ತಂಗಾಳಿಯೇ ಆನೆ ಕಿವಿಗಳನ್ನು ಬೀಸಿದಾಗ ಉಂಟಾಗುವ ಗಾಳಿ ಆಗಿದೆ, ಕಾಯಿಗಳಿಂದ ಅಲ್ಲಲ್ಲಿ ಸೋರುತ್ತಿರುವ ಸೋನೆ(ರಸ) ಆನೆಯ ಮದಧಾರೆಯಾಗಿರಲು, ಮಾವಿನ ಕೋಡು (ಮಾವಿನ ಹೂವು ಕೋಡಿನಂತಿರುತ್ತದೆಯೆಂಬ ಕಾರಣದಿಂದ) ಆನೆಯ ದಂತಗಳು. ಹೀಗೆ ವಸಂತ ಎನ್ನುವ ಆನೆ ವಿಯೋಗಿಗಳನ್ನು ಹರಿದು ಪೀಡಿಸುತ್ತಿತ್ತು)
Image result for indian vasanta seasonಹೀಗೆ ವಸಂತ ಬಂದದ್ದು ಕಂಡು ಮಾದ್ರಿ ವನದಲ್ಲಿ ಆಟವಾಡುವ ಬಯಕೆಯಿಂದ ಹೋಗುತ್ತಾಳೆ ಅವಳು ವಸಂತನ ಕಾಂತೆಯಂತೆ ಕಾಣುತ್ತಾಳೆ ಅವಳು ಹೂವಿನ ತೊಡುಗೆಯನ್ನೇ ತೊಟ್ಟಿದ್ದು ಮನ್ಮಥನ ಹೂಬಾಣಗಳಂತೆ ಕಾಣುತ್ತಿತ್ತು ಹೀಗಿರಲು  

ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ
ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|
ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ
ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್|| ೧೮।।
(ಸೊಗಸಾಗಿ ತೊಟ್ಟ ಹೂವಿನ ತೊಡುಗೆ ಮೆಲ್ಲನೆ ಎದೆಯಲ್ಲಿ ಸೇರಿದರೆ  ಕಣ್ಣುಗಳಲ್ಲಿ ಅನಂಗರಾಗರಸ ಹೊಮ್ಮುವಂತೆ ನೋಡಿ ನೋಡಿ ತಟ್ಟನೆ ಮೇಲೆ ಹಾಯ್ದು ಪಾಂಡು ತನ್ನ ಶಾಪವನ್ನು ನೆನಪಿಸಿಕೊಳ್ಳದೆ ಮೃತ್ಯುದೇವತೆಯನ್ನು ಅಕ್ಕರೆ ಹೆಚ್ಚಾಗಿ ಅಪ್ಪಿಕೊಳ್ಳುವಂತೆ  ಅವಳನ್ನು ಅಪ್ಪಿಕೊಂಡನು.)

ಹಾಗೆ ವಿಷಮ ವಿಷದ ಬಳ್ಳಿಯನ್ನು ಅಪ್ಪಿದಂತೆ ಇದ್ದ ನಲ್ಲಳ ಮೃದು ಮೃಣಾಲ ಸಮನಾದ ಕೋಮಲ ಬಾಹುಪಾಶಗಳೇ ಅವನ ಪಾಲಿಗೆ ಯಮಪಾಶಗಳಂತೆ ಆಯಿತು ಎಂದು ಆ ಪ್ರಸಂಗವನ್ನು ಮುಂದುವರೆಸುತ್ತಾನೆ. 

ಇಲ್ಲಿ ವಸಂತದ ವರ್ಣನೆಯಲ್ಲಿ ಕೂಡ ವಸಂತ ಆನೆಯಂತೆ ವಿಯೋಗಿಗಳನ್ನು ಪೀಡಿಸುವುದು ಹಾಗೇ ಪ್ರಣಯಿಗಳು ಬರಬೇಡಿ ಎಂದು ಸಾರಿ ಹೇಳುವುದು ಇವೆಲ್ಲ ಒಳ್ಳೆಯ ವಿಭಾವಗಳಾಗಿ ಶೃಂಗಾರ ರಸದಿಂದ ಕರುಣಾರಸಕ್ಕೆ ಸಾಗುವಲ್ಲಿ ಸೊಗಸಾಗಿ ಹೊಂದಿಕೊಳ್ಳುತ್ತವೆ.. ಕುಮಾರವ್ಯಾಸನೂ ಇದನ್ನು ಯೋಗಿಗೆತ್ತಿದ ಖದ್ಗಧಾರೆ ಎಂದೆಲ್ಲ ಬಣ್ಣಿಸಿರುವುದನ್ನು ಅವಲೋಕಿಸಬಹುದು. ಹಾಗೆಯೇ ಇಲ್ಲಿ ಸುಂದರಿಯಾದ ಮಾದ್ರಿಯನ್ನು ಮೊದಲು ಮನ್ಮಥನ ಬಾಣಕ್ಕೆ ಆಬಳಿಕ ವಿಷದ ಬಳ್ಳಿಗೆ ಮೃತ್ಯು ದೇವತೆಗೆ ಹೋಲಿಸಿ ಹೇಳಿರುವುದು ಔಚಿತ್ಯಪೂರ್ಣವಾಗಿದೆ.