Powered By Blogger

ಶನಿವಾರ, ಮಾರ್ಚ್ 29, 2014

ಸಹೃದಯಕಾಲ-೩ ರನ್ನನ ಗದಾಯುದ್ಧದ ಕೆಲವು ಪದ್ಯಗಳು

ಜನ್ನನು ತನ್ನ 'ಯಶೋಧರಚರಿತೆ'ಯಲ್ಲಿ 

ಕನ್ನರನಾದರದಿಂ ಕುಡೆ
ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ
ಮನ್ನಿಸಿ ಬಲ್ಲಾಳಂ ಕುಡೆ
ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್ || (೧-೨೧)

"ಕನ್ನರನು  ಆದರದಿಂದ ಕೊಡಲು 'ಪೊನ್ನ'(ಹೊನ್ನ) ತೈಲಪನು ಮೆಚ್ಚಿ ಕೊಡಲು 'ರನ್ನ' ಹಾಗೂ ಬಲ್ಲಾಳನು ಕೊಡಲು 'ಜನ್ನ' ಈ ಮೂವರು 'ಕವಿಚಕ್ರವರ್ತಿ' ಎಂಬ ಬಿರುದನ್ನು ಪಡೆದರು" ಎಂದು ಹೇಳುತ್ತಾನೆ. 

ಅಂತಹ ಕನ್ನಡದ ರತ್ನತ್ರಯದಲ್ಲಿ ಒಬ್ಬನಾದ 'ರನ್ನ'ನ 'ಸಾಹಸಭೀಮವಿಜಯಂ' ಕಾವ್ಯವನ್ನು ಅವಲೋಕಿಸಿದರೆ ಅವನೇಕೆ ಕವಿಚಕ್ರವರ್ತಿಯೆಂಬ ಬಿರುದನ್ನು ಪಡೆದ ಎಂದು ಗೊತ್ತಾಗುತ್ತದೆ. ಅಂತಹ ವೈಶಿಷ್ಟ್ಯಪೂರ್ಣವಾದ ಶೈಲಿ, ಕಥೆಯ ನಿರೂಪಣೆಯನ್ನು ಮಾಡುವ ರೀತಿ, ವರ್ಣನೆ ಇವುಗಳೆಲ್ಲವನ್ನೂ ನೋಡಿದರೆ ಸಾರಸ್ವತಾಸಕ್ತರ ಮನಸ್ಸಿಗೆ ಆಗುವ ಆನಂದ ಅವರ್ಣನೀಯವೇ ಸರಿ.

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇೞ್ ಪರೀಕ್ಷಿಪರ್ಗೆಂಟೆರ್ದೆಯೇ ।। (೧-೪೪)

"ನಾನು ರತ್ನಪರೀಕ್ಷಕ ಅಥವಾ ಕೃತಿರತ್ನವನ್ನು ಪರೀಕ್ಷಿಸುವವನು(ವಿಮರ್ಶಕ) ಎಂದು ಫಣಿಪತಿಯ(ವಾಸುಕಿಯ) ಹೆಡೆಯ ಮೇಲಿರುವ ರತ್ನವನ್ನೂ ರನ್ನನ ಕೃತಿರತ್ನ(ಸಾಹಸಭೀಮವಿಜಯ)ವನ್ನೂ ಪರೀಕ್ಷಿಸುವುದಕ್ಕೆ ಹೊರಟವನಿಗೆ ಎಂಟೆದೆಯೇ!" ಎಂದು ಕೇಳುತ್ತಾ ತನ್ನ ಕವಿತ್ವವನ್ನು ಪರೀಕ್ಷಿಸಬೇಕೆಂದರೆ ಅಂತಹ ಧೈರ್ಯವಿರಬೇಕೆಂದು ಹೇಳುತ್ತಾ ಆರಂಭಿಸುವ ಕಾವ್ಯದಲ್ಲಿ 
 ತನ್ನ ಕಾವ್ಯಶಕ್ತಿಯ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾನೆ :-

ಆರಾತೀಯ ಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ।। (೧-೧೩)
ರನ್ನನ ಹಸ್ತಾಕ್ಷರ (Photo courtesy : Internet)

"ಹಿಂದಣ ಕವಿಗಳು ಯಾರೂ ಸಮರ್ಥರಾಗಲಿಲ್ಲ. ಆದರೆ ಈ ರತ್ನನು ಮಾತ್ರ ಸಾರಸ್ವತವೆನ್ನುವ ಕವಿತೆಯಲ್ಲಿ ವಾಗ್ದೇವಿಯ ಭಂಡಾರದ ಮುದ್ರೆ(ಬೀಗ)ವನ್ನು ಒಡೆದ" ಎಂದು. ವಾಗ್ದೇವಿಯಾದ ಸರಸ್ವತಿಯ ಭಂಡಾರದ ಬೀಗವನ್ನು ಒಡೆಯುವುದೆಂದರೆ ಅದು ಸುಲಭದ ಮಾತಲ್ಲ. ಹಿಂದಣ ಕವಿಗಳಿಗೆ ಯಾರಿಗೂ ಆಗಲಿಲ್ಲ ಎಂಬಂತಹ ಧ್ವನಿ ಈ ಪದ್ಯದಲ್ಲಿ ಕೇಳುತ್ತದೆ.. 


ರನ್ನನ ಕಾವ್ಯಪ್ರತಿಭೆಯನ್ನು ಪ್ರತಿನಿಧಿಸುವಂತೆ ಅವನ ಪದ್ಯಗಳಲ್ಲಿ ಯಾವುದಾದರೂ ಒಂದೆರಡನ್ನು ಆಯ್ಕೆಮಾಡಿಕೊಳ್ಳಲು ಹೋದರೆ ಬಹುಸಂಖ್ಯೆಯ ಪದ್ಯಗಳು 'ತಾಮುಂದೆ ತಾಮುಂದೆ' ಎನ್ನುತ್ತಾ ಬರುತ್ತವೆ. 
ಅಂತಹ ಒಂದು ಪದ್ಯ ಹೀಗಿದೆ:-

ಕುರುಭೂಭೃದ್ಬಲತೂಲಕಾಲಪವನಂ ಕೌರವ್ಯಗಂಧೇಭಕೇ
ಸರಿ  ದುಶ್ಶಾಸನರಕ್ತರಕ್ತವದನಂ ದುರ್ಯೋಧನೋರುಕ್ಷಮಾ
ಧರವಜ್ರಂ ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟಸಂ
ಗರನೆಂದೆಂದಭಿವರ್ಣಿಪೆಂ ರಣಯಶಶ್ರೀರಾಮನಂ ಭೀಮನಂ ।। (೧-೫೨)

"ಕುರುಕುಲದ ರಾಜರ ಬಲವೆಂಬುದನ್ನು ಹತ್ತಿಯಂತೆ ಹಾರಿಸಿಕೊಂಡು ಹೋಗುವ ಬಿರುಗಾಳಿಯಾದ, ಕೌರವನೆಂಬ ಮದವೇರಿದ ಆನೆಗೆ ಸಿಂಹವಾದ, ದುಶ್ಶಾಸನನ ರಕ್ತಕ್ಕೆ ಜಿಗಳೆಯಾದ, ದುರ್ಯೋಧನನ ತೊಡೆಯೆಂಬ ಪರ್ವತಕ್ಕೆ ವಜ್ರಾಯುಧವಾದ*, ಕುರುರಾಜನ ರತ್ನಕಿರೀಟವನ್ನು ಮೆಟ್ಟಿದ ರಣರಂಗದ ಯಶಸ್ಸೆಂಬ ಸಿರಿಗೆ ರಾಮನಾದ ಭೀಮನನ್ನು ವರ್ಣಿಸುವೆನು" ಎಂದು ಕಥೆಯನ್ನು ಆರಂಭಿಸುತ್ತಾನೆ. 
(*ಪರ್ವತಗಳಿಗೆ ರೆಕ್ಕೆಯಿತ್ತೆಂದೂ ಅದನ್ನು ಇಂದ್ರ ತನ್ನ ವಜ್ರಾಯುಧದಿಂದ ಕತ್ತರಿಸಿದನೆಂದೂ ಕಥೆ)

ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲಿ ಭೀಮನ ಸಾಹಸದವರ್ಣನೆ ಒಂದು ಮತ್ತೇಭವಿಕ್ರೀಡಿತವೇ (ಮದವೇರಿದ ಆನೆಯ ಆಟ) ಎಂಬಂತೆ ಭಾಸವಾಗುತ್ತದೆ. ಮೊದಲ ಸಾಲಿನಲ್ಲಿ '...ಬಲತೂಲಕಾಲಪವನಂ..' ಎಂಬಲ್ಲಿ (ಲಕಾರ-ಅನುಪ್ರಾಸ) ಎರಡನೇ ಸಾಲಿನ '..ರಕ್ತರಕ್ತವದನಂ..'ಎಂಬಲ್ಲಿ (ಯಮಕ) ಮೂರನೇ ಸಾಲಿನ '..ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟ..' ('ರ'ಮತ್ತು'ಟ'ಕಾರಗಳ ಅನುಪ್ರಾಸ) ಕೊನೆಯ ಸಾಲಿನ 'ಶ್ರೀರಾಮನಂ ಭೀಮನಂ'(ಛೇಕಾನುಪ್ರಾಸ) ಎಂಬಲ್ಲೆಲ್ಲ ಶಬ್ದಾಲಂಕಾರಗಳು ಹಿತವಾಗಿ ಕಿವಿಗೆ ಬಡಿಯುತ್ತವೆ. 
ಅಲ್ಲದೇ ಅರ್ಥಾಲಂಕಾರಕ್ಕೆ ರೂಪಕಗಳ ರತ್ನಮಾಲೆಯನ್ನೇ ತೆಗೆತೆಗೆದಿಡುತ್ತಾನೆ;  ಕುರುಕುಲದ ರಾಜರ ಬಲವೆಂಬುದೊಂದು ಹತ್ತಿ. ಅದನ್ನು ಹಾರಿಸಿಕೊಂಡು ಹೋಗುವಂತಹ ಪ್ರಳಯಕಾಲದ ಗಾಳಿ ಭೀಮ. ಕೌರವರೆಂಬ ಮದವೇರಿದ ಆನೆಯ ನೆತ್ತಿಯನ್ನು ಸೀಳುವಂತಹ ಕೇಸರಿ (ಸಿಂಹ) ಭೀಮ. ದುಶ್ಶಾಸನನ ರಕ್ತವನ್ನು ಒಂದಿನಿತೂ ಬಿಡದೆ ಹೀರಿದ ಜಿಗಳೆ/ಉಂಬಳ ಭೀಮ. ದುರ್ಯೋಧನನ ತೊಡೆಯೆಂಬ ಬೆಟ್ಟವನ್ನು ಕಡಿದುಹಾಕಿದ ವಜ್ರಾಯುಧ ಭೀಮ. ಸುಯೋಧನನ ರತ್ನ ಕಿರೀಟವನ್ನು ಮೆಟ್ಟಿ ಧೂಳಿನಲ್ಲಿ ಹೊರಳಾಡಿಸುವಂತಹ ಯೋಧ ಭೀಮ, ರಣರಂಗದ ಯಶಸ್ಸೆಂಬ ಶ್ರೀಗೆ ರಾಮನಾದ ಭೀಮನನ್ನು ವರ್ಣಿಸುತ್ತೇನೆ ಎಂದು ಹೇಳುವಾಗಲೇ ಸಾಹಸಭೀಮನ ಸಾಹಸಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. 
ಎಂತಹ ಸೊಗಸಾದ ಪದ್ಯ.
ರನ್ನ ನಿಜಕ್ಕೂ ಸರಸ್ವತಿಯ ಭಂಡಾರದ ಒಡೆದಾಗ ಹೊರಬಂದ ರನ್ನವೇ ಸರಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ