Powered By Blogger

ಶುಕ್ರವಾರ, ಡಿಸೆಂಬರ್ 24, 2010

ಒಂದು ಕ್ಷಮೆ ಕೋರಿಕೆ.

ಹಿಂದೆ "ಭಕ್ತಿಯಲ್ಲೆಂತು ಈ ಪರಿ ನಾರಯಣ" ಎಂದು ಬರೆದಿದ್ದ ಲೇಖನದಲ್ಲಿ ಒಂದು ತಪ್ಪು ಆಗಿತ್ತು. ಬಹುಶಃ ಯಾರೂ ಗಮನಿಸಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೋರುತ್ತೇನೆ.

ವೇದ ಪುರುಷನ ಸುತನ ಸುತನ ಸ-
-ಹೋದರನ "ಮೊಮ್ಮಗನ" ಮಗನ ತ
-ಳೋದರಿಯ ಮಾತುಳನ "ಮಾವನನ"ತುಳ ಭುಜ ಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ-
-ನಾದಿ ಮೂರುತಿ ಸಲಹೊ ಗದುಗಿನ ವೀರ ನಾರಯಣ

ಎಂಬ ಪಾಠ ಸರಿಯಾದದ್ದು. ಉದ್ಧರಣ ಚಿಹ್ನೆಯಲ್ಲಿ ಬಳಸಿದ ಶಬ್ದಗಳು ಬದಲಾಗಿವೆ.
ಉತ್ತರ:- ಮೊದಲಿನಂತೆಯೇ ಆದರೂ ನಾರದನ ಸಹೋದರ ಮರೀಚಿ ಹಾಗು ಅವನ 'ಮೊಮ್ಮಗ' ಇಂದ್ರ ಎಂಬ ಅರ್ಥ ಕೊಡುತ್ತದೆ. ಹಿಂದೆ ತಿಳಿಸಿದ್ದ ನಾರದನ ಸಹೋದರ ಕಶ್ಯಪ ಎಂಬುದು ಸರಿ ಅಲ್ಲ. ಕಶ್ಯಪ ಮರೀಚಿಯ ಮಗ. ಆನಂತರ 'ರೂಪನನ' ಎಂಬ ಶಬ್ದದ ಬದಲು ಮಾವನನ ಅಂಬುದನ್ನು ಹಾಕಿದಾಗ ಕೂಡಾ ಅದೇ ಅರ್ಥ ಸರಿಯಾಗಿದೆ.

ಮಂಗಳವಾರ, ಡಿಸೆಂಬರ್ 21, 2010

ಪರಾಗ ಸ್ಪರ್ಶ

ಪ್ರತಿಯೊಬ್ಬರಿಗೂ ಇಷ್ಟಾಗುವಂತೆ, ಅರ್ಥವಾಗುವಂತೆ ಸರಳವಾಗಿ "ವಿಜಯ ಕರ್ನಾಟಕ" ಪತ್ರಿಕೆಯಲ್ಲಿ ಪ್ರತಿ ಭಾನುವಾರ ಅಂಕಣ ಬರೆಯುವ  ಶ್ರೀವತ್ಸ ಜೋಶಿ ಅವರ ಪರಾಗ ಸ್ಪರ್ಶದ ಲೇಖನ ಓದಲು/ಕೇಳಲು/ನೋಡಲು http://www.sjoshi.podbean.com/ ಗೆ ಭೇಟಿ ಕೊಡಿ.

ಭಾನುವಾರ, ನವೆಂಬರ್ 21, 2010

ಬಣ್ಣ ಬಣ್ಣದ ಕಾಗದ

ಸೇರಿಸಿಟ್ಟಿಹೆ ನಾನು ಹತ್ತೆಂಟು ಪುಟಗಳ
ಬರೆದವೋ-ಖಾಲಿಯೋ? ಮರೆತೇ ಬಿಟ್ಟೆ!
ಕರಿಯವೋ-ಬಿಳಿಯವೋ? ಬಣ್ಣಬಣ್ಣದವುಗಳ
ದಾರದಿಂದ ಗಂಟುಕಟ್ಟಿ ಸುತ್ತಿ ಬಿಟ್ಟೆ ಬಿಳಿಬಟ್ಟೆ!

         ಒಳಗಿನಾ ಬಣ್ಣ ಮರೆಮಾಚಿದ ಮೋಸ ನಂದಲ್ಲ!
         ಬಣ್ಣಗಳ ವ್ಯತ್ಯಾಸ ತಿಳಿಯದವ ನಾನಲ್ಲ!
          ಒಂದರ ಬಣ್ಣ ಇನ್ನೊಂದಕ್ಕೆ; ಅದರ ಬಣ್ಣ ಮತ್ತೊಂದಕ್ಕೆ
           ಬಳಿಯಲೂ ಬಹುದು, ಇಲ್ಲದೆಯೂ ಇರಬಹುದು.
"ದೇಶದ ಮಾದರಿಗೆ ಇದನ್ನು ತೋರಿಸುವೆ
ಎಲ್ಲರನು ಛೇಡಿಸಿ ಬಣ್ಣ ಬಯಲಿಗೆಳೆಯುವೆ"
ಇತ್ಯಾದಿ ಬಯಕೆಯಲ್ಲ!!
"ಮೂಢ ಜನರೇ ನಿಮ್ಮತನ ನಿಮ್ಮಲ್ಲಿರಲಿ
ಹೇರಬೇಡಿರಿ ಇತರರಿಗೆ, ಅವರಿಷ್ಟ  ಅವರಿರಲಿ!"
ಎಂದು ಹೇಳಲೂ ಅಲ್ಲ!
ಕಲಿಸಬೇಕಿರುವವ ನಾನಲ್ಲ!
          "ನಿಮ್ಮ ಗುದ್ದಾಟದಲಿ ಬಣ್ಣ ಬಳಿಯುವ  ನೆಪದಲ್ಲಿ  
           ಶುಭ್ರವಾಗಿಹ  ಹೊರಬಟ್ಟೆ ಹೊಲಸಾಗದಿರಲಿ!
           ದೇಶದ ಭದ್ರತೆ ಹಾಳಾಗದಿರಲಿ
           ನಮ್ಮಲ್ಲಿ ಇಕ್ಕಟ್ಟು ಬಿಕ್ಕಟ್ಟು ಬಿಟ್ಟು ಒಗ್ಗಟ್ಟು ಬರಲಿ!"
           ಇದನ್ನು ಹೇಳಿ ಕಲಿಸಲು ಇವರೆಲ್ಲ ಚಿಕ್ಕವರಲ್ಲ!

ಸೇರಿಸಿಟ್ಟಿಹೆ ನಾನು ಹತ್ತೆಂಟು ಪುಟಗಳ!
ಏಕೆಂದರೆ ಇಷ್ಟೇ " ರದ್ದಿಯೊಡನೆ ಸೇರಿ ಕಸವಾಗದಿರಲಿ!
                       ಗಾಳಿಯಲಿ ಹಾರಿ ದೂರವಾಗದಿರಲಿ
                        ಕಳೆದು ಮತ್ತೆ ಹುಡುಕುವ ಸ್ಥಿತಿ ಬಾರದಿರಲಿ!!"

ಶುಕ್ರವಾರ, ನವೆಂಬರ್ 19, 2010

ಮೇಘ

ದಾರಿಹೋಕರ ಸೆಳೆವ ನೀಳವೃಕ್ಷದ ಹಣ್ಣು
ತೊಪತೊಪನೆ ಇಳೆ ಸೇರಿ ಆಗಿಹುದು ಅದು ಮಣ್ಣು.
ಶ್ರುತಿಯ ಹಿಡಿದಳು ತನ್ನ ದನಿಯಲ್ಲಿ ಆ ಹೆಣ್ಣು,
ಏರ ತೊಡಗಿದಳಯ್ಯ ಮೇಘ ರಾಗದಿ ಕಣ್ಣು-
ಅರ್ಧ ತೆರೆದಿರೆ ಮಂದ ಗಾಳಿ ಸಂಚರಿಸಿರಲು,
ಮೃದುದನಿಗೆ ಇಹಮರೆತು ಎಲ್ಲ ತಲೆದೂಗಿರಲು,
ಸಕಲ ಜಗವೇ ಸ್ತಬ್ದ,ಮೌನವಾ ಹೊಂದಿರಲು,
ಸ್ವರದ ಮೇಲೆಲ್ಲ ನಲಿದಾಡಿ ಮೇಲೆರಿರಲು,
ಸುತ್ತಮುತ್ತಲ ಜಗದಿ ಬೆಳಕು ಕಳೆಯುತ್ತಿರುಳು-
ಬಂದು, "ಸರೆಮಪನಿಸ"ವ ನುಡಿಸುತ್ತ ಕೊಳಲಿರಲು,
ಘನ ಮೆಘವೆಲ್ಲವೂ ಹನಿಗೂಡಿ ಅಳುವಂತೆ,
ಭುವಿಯ ತೊಯಿಸಲವನಿಯಾಯ್ತು ಸಜ್ಜನವಂತೆ!
ಬೆಳಗಿನಸ್ತದ ವೇಳೆ ಹಸಿರು ಸುತ್ತಲು ಹೊರಗೆ
ಬದುಕ ಬವಣೆಯ ತೆರೆದು ತೋರ್ವ ತರದಲಿ ಭುವಿಗೆ,
ತಟತಟನೆ ಜಲಬಿಂದು ಪತನದಾ ಜೊತೆಜೊತೆಗೆ,
ಗುಡುಗು ಸಿಡಿಲೈ ಭರದಿ ತಲೆಗಪ್ಪಳಿಸಿತಿಳೆಗೆ!
ಕಟಕಟನೆ ನಡುಗುತ್ತ ಸಾಗೋ ನಡೆಯೊಡಲಿಗೆ
ಭರಭರದಿ ಬೆಳೆದಿರುವ ತೃಣ,ತುಷ್ಟಿಯವುಗಳಿಗೆ.
ಮನಸೋತು ತನ್ನಯಾ ರಾಗಕ್ಕೆ ತಾನಾಗೆ
ರಾಗಲೋಕವ ಬಿಟ್ಟು ತಾ ಹೊರಗೆ ಬರುತಾಳೆ.
ಜಿಟಿಜಿಟಿಯ ಮಳೆಕಂಡು ನಾಚಿದಳು ಆ ಬಾಲೆ,
ಗಾನ ನಿಂತೊಡನಿಲ್ಲಿ ನಿಲ್ಲುವುದು ಮಳೆಯೆಲ್ಲಿ ?
ತನ್ನ ರಭಸವ ಬಿಡದೆ ಭೋರ್ಗರೆಯಿತಿಳೆಯಲ್ಲಿ!!
**********************************
*ನವೆಂಬರ್ ೨೦೧೦ ರ 'ಪತ್ರ-ಸಂಸ್ಕೃತಿ' ಮಿತ್ರರ "ಪಿಸುಮಾತು" ತ್ರೈಮಾಸಿಕ ದಲ್ಲಿ ಪ್ರಕಟವಾಗಿದೆ.
*"ಸರೆಮಪನಿಸ" - ಮೇಘರಾಗದಲ್ಲಿ ಈ ಸ್ವರಗಳು ಮಾತ್ರ ಬರುತ್ತವೆ. ರಾಗಗಳ ಬಗ್ಗೆ ಸೂಕ್ತವಾದ ರೀತಿಯಲ್ಲಿ ವಿವರಿಸಿ ತಿಳಿಸುತ್ತಿರುವ ಮಿತ್ರ "ವಿನಾಯಕ ಹೊನ್ನಾವರ" ಇವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೆ ಸಂಗೀತಾಸಕ್ತಿ ಹುಟ್ಟಿಸಿ ಹೆಚ್ಚಿಸಿದ ಮಿತ್ರ "ಮಹೇಂದ್ರ ಸ್ವಾಮಿ ಹಿರೇಮಠ" ಇವನಿಗೂ ಕೃತಜ್ಞತೆಗಳು.

ಸೋಮವಾರ, ನವೆಂಬರ್ 15, 2010

ಕನ್ನಡ ತಾಯಿಗೆ ನಮನ

ಕನ್ನಡಾಮ್ಬೆಯೆ ನಿನ್ನ ಪದಗಳಿಗೆ ನಮಿಸುವೆನು
ಮುನ್ನ ನೀನೆನಗಿತ್ತೆ ಮಧುರಸದ ಹನಿಗಳನು!
ಆಹ!! ಸವಿರುಚಿಯೇನದರದ್ದು ಮಾತೆ !
ಜಗದಿ ನಾ ಹರಡುವೆನು ನಿನ್ನ ಯಶಗಾಥೆ!

ಬುಧವಾರ, ನವೆಂಬರ್ 3, 2010

ಸೋಮವಾರ, ಅಕ್ಟೋಬರ್ 18, 2010

ಉತ್ತರ ಸಿಕ್ಕಿತಾ ???

ವೇದ ಪುರುಷ -'ಶ್ರೀಮನ್ನಾರಾಯಣ'ನ
 ಸುತನಾದ -ಬ್ರಹ್ಮನ
ಸುತನಾದ -ನಾರದನ
ಸಹೋದರನಾದ -ಕಶ್ಯಪನ
ಹಿರಿ ಮಗನಾದ -ಇಂದ್ರನ
ಮಗನಾದ -ಅರ್ಜುನನ
ತಳೋದರಿ(ಹೆಂಡತಿ)ಯಾದ -ಸುಭದ್ರೆಯ
ಮಾತುಲನಾದ -ಕಂಸನ
ರೂಪದವನಾದ (ಮಾವನ ರೂಪದ) -ಜರಾಸಂಧನ
ಅತುಲ ಭುಜ ಬಲದಿ  ಕಾದಿಗೆಲಿದವನಾದ -ಭೀಮನ
ಅಣ್ಣನಾದ  -ಯುಧಿಷ್ಠಿರನ
ಅವ್ವೆಯಾದ  -ಕುಂತಿಯ
ನಾದಿನಿಯಾದ  -ದೇವಕಿಯ
ಜಠರದಲ್ಲಿ ಜನಿಸಿದ ಆದಿ ಮೂರುತಿ
ಗದುಗಿನ ವೀರ ನಾರಯಣ(ಕೃಷ್ಣ) ನಮ್ಮನ್ನು ಸಲಹು.