Powered By Blogger

ಶುಕ್ರವಾರ, ನವೆಂಬರ್ 19, 2010

ಮೇಘ

ದಾರಿಹೋಕರ ಸೆಳೆವ ನೀಳವೃಕ್ಷದ ಹಣ್ಣು
ತೊಪತೊಪನೆ ಇಳೆ ಸೇರಿ ಆಗಿಹುದು ಅದು ಮಣ್ಣು.
ಶ್ರುತಿಯ ಹಿಡಿದಳು ತನ್ನ ದನಿಯಲ್ಲಿ ಆ ಹೆಣ್ಣು,
ಏರ ತೊಡಗಿದಳಯ್ಯ ಮೇಘ ರಾಗದಿ ಕಣ್ಣು-
ಅರ್ಧ ತೆರೆದಿರೆ ಮಂದ ಗಾಳಿ ಸಂಚರಿಸಿರಲು,
ಮೃದುದನಿಗೆ ಇಹಮರೆತು ಎಲ್ಲ ತಲೆದೂಗಿರಲು,
ಸಕಲ ಜಗವೇ ಸ್ತಬ್ದ,ಮೌನವಾ ಹೊಂದಿರಲು,
ಸ್ವರದ ಮೇಲೆಲ್ಲ ನಲಿದಾಡಿ ಮೇಲೆರಿರಲು,
ಸುತ್ತಮುತ್ತಲ ಜಗದಿ ಬೆಳಕು ಕಳೆಯುತ್ತಿರುಳು-
ಬಂದು, "ಸರೆಮಪನಿಸ"ವ ನುಡಿಸುತ್ತ ಕೊಳಲಿರಲು,
ಘನ ಮೆಘವೆಲ್ಲವೂ ಹನಿಗೂಡಿ ಅಳುವಂತೆ,
ಭುವಿಯ ತೊಯಿಸಲವನಿಯಾಯ್ತು ಸಜ್ಜನವಂತೆ!
ಬೆಳಗಿನಸ್ತದ ವೇಳೆ ಹಸಿರು ಸುತ್ತಲು ಹೊರಗೆ
ಬದುಕ ಬವಣೆಯ ತೆರೆದು ತೋರ್ವ ತರದಲಿ ಭುವಿಗೆ,
ತಟತಟನೆ ಜಲಬಿಂದು ಪತನದಾ ಜೊತೆಜೊತೆಗೆ,
ಗುಡುಗು ಸಿಡಿಲೈ ಭರದಿ ತಲೆಗಪ್ಪಳಿಸಿತಿಳೆಗೆ!
ಕಟಕಟನೆ ನಡುಗುತ್ತ ಸಾಗೋ ನಡೆಯೊಡಲಿಗೆ
ಭರಭರದಿ ಬೆಳೆದಿರುವ ತೃಣ,ತುಷ್ಟಿಯವುಗಳಿಗೆ.
ಮನಸೋತು ತನ್ನಯಾ ರಾಗಕ್ಕೆ ತಾನಾಗೆ
ರಾಗಲೋಕವ ಬಿಟ್ಟು ತಾ ಹೊರಗೆ ಬರುತಾಳೆ.
ಜಿಟಿಜಿಟಿಯ ಮಳೆಕಂಡು ನಾಚಿದಳು ಆ ಬಾಲೆ,
ಗಾನ ನಿಂತೊಡನಿಲ್ಲಿ ನಿಲ್ಲುವುದು ಮಳೆಯೆಲ್ಲಿ ?
ತನ್ನ ರಭಸವ ಬಿಡದೆ ಭೋರ್ಗರೆಯಿತಿಳೆಯಲ್ಲಿ!!
**********************************
*ನವೆಂಬರ್ ೨೦೧೦ ರ 'ಪತ್ರ-ಸಂಸ್ಕೃತಿ' ಮಿತ್ರರ "ಪಿಸುಮಾತು" ತ್ರೈಮಾಸಿಕ ದಲ್ಲಿ ಪ್ರಕಟವಾಗಿದೆ.
*"ಸರೆಮಪನಿಸ" - ಮೇಘರಾಗದಲ್ಲಿ ಈ ಸ್ವರಗಳು ಮಾತ್ರ ಬರುತ್ತವೆ. ರಾಗಗಳ ಬಗ್ಗೆ ಸೂಕ್ತವಾದ ರೀತಿಯಲ್ಲಿ ವಿವರಿಸಿ ತಿಳಿಸುತ್ತಿರುವ ಮಿತ್ರ "ವಿನಾಯಕ ಹೊನ್ನಾವರ" ಇವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೆ ಸಂಗೀತಾಸಕ್ತಿ ಹುಟ್ಟಿಸಿ ಹೆಚ್ಚಿಸಿದ ಮಿತ್ರ "ಮಹೇಂದ್ರ ಸ್ವಾಮಿ ಹಿರೇಮಠ" ಇವನಿಗೂ ಕೃತಜ್ಞತೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ