Powered By Blogger

ಬುಧವಾರ, ಆಗಸ್ಟ್ 1, 2018

ಮಧುವನಮರ್ದನಂ- ೩

ಮೊದಲ ಭಾಗ- ಮಧುವನಮರ್ದನಂ-೧
ಎರಡನೆ ಭಾಗ- ಮಧುವನಮರ್ದನಂ- ೨

ಲಿಂಕಿನಲ್ಲಿ ಈ ಭಾಗವನ್ನು ಕೇಳುತ್ತಾ ಓದಬಹುದು

~ಮಧುವನಮರ್ದನಂ -೩ ~

ಮತ್ತೆ ನಾರಿಕೇಳಾದಿ ತರು-
ಬೃಂದಂಗಳೊಳ್ ತಾಲವೃಕ್ಷಂಗಳೊಳ್ ಮಗುಳ್ ೨೧೦
ಕಿರಿದಾನುಮೆಸೆದಿರ್ಪುದೀಚಲ ಮರಂಗಳೊಳ್
ನಿಡಿದಾಗಿ ಕೊರೆಯಿಲ್ಲದಂತಿರ್ದಪುದು ನೋಡೆ   
ಮಧುಮಯಂ ಹೃದಯಮಂ ಸೊದೆಯೆ ಮೇಣ್
ತಣಿಪಂತೆ
ಫಲದಂತೆ ತೂಗಿರ್ಪ ಕುಂಭಂಗಳುಂ ಮತ್ತೆ
ಕಿರಿದಾದ ಭಾಂಡಂಗಳುಂ ನಿರುಕಿಸಲ್ಕದೇಂ
ದನುಜರಿಂ ಸುರೆಯನೇಂ ಕಳ್ದುಯ್ಯಲೆನುತೆ ತಾಂ
ಸುರಪತಿಯೆ ಕಳುಪಿರ್ಪ ಸೈನಿಕರ್ ರಕ್ಕಸರ
ಜಾದುವಿಂ ಮರವಟ್ಟು ನಿಂತಿರ್ಪರಿಂತುಟೇಂ!
ಅಲ್ತಲ್ತು! ಖಗಕುಲಕೆ ವೃಕ್ಷಸಂಕುಲಮೊಲ್ದು
ಪಾಥೇಯಮಂ ನೀಡಲೆಂದು ಕೆಯ್ ನೆಗಪಿದುವೆ! ೨೨೦
ತಂಗಾಳಿ ತೀಡಿರಲ್ ಸಂಸ್ಪರ್ಶಮಪ್ಪುದೈ
ಮಧುರಗಂಧಂ ತೀವಿ ನಾಸಿಕಕೆ ಸೊಗಸೆನಿಸೆ    
ಇಂಪೆನಿಪ ಕಲರವಂ ಕರ್ಣಕಾನಂದನಂ
ಕಂಗಳ್ಗೆ ಸುಂದರಂ ಬನದ ಸದ್ದೃಶ್ಯಮುಂ
ಸೊಗಸೆನಿಸೆ ನಾಲಗೆಗೆ ಸಂದಿರ್ಪುದೇನೆನಲ್
ರುಚಿಯಿರ್ಪ ವಾರುಣಿಯ ಕುಂಭಂಗಳಿಕೊ! ಕೊಳ್!
ಎಂದು ಪೇಳ್ವಂದದಿಂ ವೃಕ್ಷಂಗಳೊಳ್ ಸಂದ
ಸವಿಯಾದ ರಸಮಿರ್ಪ ಮಧುಪಾತ್ರದಿಂ ಕೂಡಿ
ಮಧುವನಂ ಭವ್ಯಮಾಗಿರ್ದಪುದು
ಕಪಿಕುಲಂ  ೨೩೦
ತಾಂ ಪ್ರವೇಶಂ ಗೈದುದೆನೆ ಭಾಂಡಮೆಲ್ಲಮುಂ
ಚಂಡಕಿರಣಂಗಿದಿರ್ ಸಿಲ್ಕಿರ್ಪ ಹಿಮದಂತೆ    
ಬಡಬಾಗ್ನಿಗೆದುರಾದ ನೀರಿನೊರ್ಪನಿಯಂತೆ
ಹವ್ಯವಾಹನಮುಖಕೆ ಘೃತಮಿಕ್ಕಿದಂದದಿಂ
ಶೂನ್ಯಮಾದುದು.
    ಹನುಮನಾಶ್ವಾಸನೆಯನೀಯೆ
“ಅವ್ಯಗ್ರಮನದಿಂದೆ ಮಧುವನೀಂಟಿಂ ಸಖರೆ!
ನಿಮಗಡ್ಡಿ ಗೈವರಂ ಪರಿಹರಿಪೆನಾಂ ದಿಟದೆ!”
ಎಂತೆನಲ್ ವಾಲಿಸುತನೊಲ್ದುತ್ತರಮನಿತ್ತ-
ನಿಂತು ಮಿತ್ರರೆ ಕಾರ್ಯಸಾಧಕಂ ಹನುಮನೇ
ವಚನಮಿತ್ತೊಡನವನ ಕೃತ್ಯಸಂತೋಷಕಂ  ೨೪೦
ಗೆಯ್ವುದುಚಿತಮನೆಲ್ಲರುಂ ನಾವೆ ಮಾರುತಿಯ
ನುಡಿಯನನುಸರಿಪುದೇ ಯುಕ್ತಮೀ ವೇಳೆಯೊಳ್
ಪೇಳ್ದೊಡಮಕಾರ್ಯಮಂ ಗೆಯ್ವುದೇ ಕರ್ತವ್ಯ-
ಮಿದು ವಾಯುಪುತ್ರನಾಣತಿಯೆಂದು ಬಗೆಯಿರೈ”
ಎನೆ ಮತ್ತಕಪಿಕುಲಂ ಮತ್ತೆ ದಾಳಿಯಗೈದು
ವಾರುಣಿಯ ವಾರಿಧಿಗಗಸ್ತ್ಯೋಪಮಾನರೆನೆ
ಮೇಣ್ ಪೆರ್ಚಿದುತ್ಸಾಹದಿಂದೀಂಟತೊಡಗಿದರ್
ಮಧುವನಾ ಬನದೊಳಗೆ ಸಿಲ್ಕಿರ್ಪ ಪಣ್ಗಳಂ
ಕಿಳ್ತು ತಿಂದರ್ ಪೂಗಳಂ ಪರಿದು ಬಿಸುಟರೇಂ
ಗೆಯ್ಯುತಿರ್ಪೆವೊ ಎಂದು ತಿಳಿಯದೆಯೆ ಗೆಯ್ದಿರಲ್ ೨೫೦
ನಿರ್ವಿಕಾರದಿನೆಲ್ಲಮಂ ನೋಡುತಿರ್ದಪಂ
ಶಾಂತಚಿತ್ತಂ ಹನೂಮಂತನಾ ಚಿತ್ರಮಂ    
ಜಗದಸೃಷ್ಟಿಯ ಬಳಿಕದೊಳ್ ನಡೆವ ಘಟನೆಗಳ-
ನೀಕ್ಷಿಸುತೆ ನಿರ್ಲಿಪ್ತನಾಗಿರ್ಪ ಪರಮಾತ್ಮ
ಸದೃಶನೀತಂ. ನೋಡಿ ವಾನರವಿನೋದಮಂ
ಕೊನೆಗೊಂದು ಕಿರುನಗೆಯನತ್ತ ಬೀರ್ದಪನೊಲ್ದು
ಮತ್ತರಾ ಕೇಳಿಯಂ ಕಂಡು ಪ್ಲವಂಗರೀ
ವಿಪ್ಲವಮನಿದನಂತು ಮಧುವನದ ಮರ್ದನದೆ.
ನಿಂದನೊರ್ವಂ ರಾಜಗಾಂಭಿರ್ಯದಿಂದೆ ಮೇಣ್
ಉನ್ಮತ್ತಕಪಿವೀರನವನೆಡೆಗೆ ನಡೆದಪರ್  ೨೬೦
ಮತ್ತಿರ್ವರುಂ ಮತ್ತವಾನರವರೇಣ್ಯರೇ
ಸೇವಕರ ಪಾಂಗಿನಿಂದಿನ್ನೊಂದು ಕಡೆ ನೋಡೆ     
ಕುಣಿದಪರ್ ಕೆಲರೊಲ್ದು ಮತ್ತೆ ಕೆಲವರ್ ಪಾಡೆ
ನಗುತಿರ್ಪರೊಂದೆಡೆಗೆ ದುಃಖಿಪರ್ ಮತ್ತೆ ಕೆಲ-
ರಭಿನಯಿಪ ನಟನಟಿಯರಂತಿರ್ಪರಿರ್ವರೇ-
ನೊಂದೊಂದು ಕಡೆಗೊಂದು ಚಿತ್ರಚಿತ್ರಣಮಿರಲ್
ಮರನನೇರುವನೊರ್ವನಿಳಿದು ಬೀಳುವನೊರ್ವ-
ನಳಲಿಂದೆ ಕಾಲ್ಗಳಂ ಪಿಡಿಯುವವನಿನ್ನೊರ್ವ-
ನಿಂತು ಕಂಡವರೆಡೆಗೆ ಕೈಮುಗಿದನೊರ್ವನೆನೆ
ಕೇಕೆ ಹಾಕುವನೊರ್ವನವನ ತಳ್ಳುವನೊರ್ವ-  ೨೭೦
ನಿವರೊಳಾರ್ ಮತ್ತರಲ್ಲದೆ ಬೇರೆಯಿರದಿರಲ್
ಪಣ್ಗಳಂ ತಿನುತೆ ಮೇಣ್ ಲತೆಗಳಂ ಪರಿಯುತ್ತೆ    
ವಿಧ್ವಂಸಮಂ ಗೆಯ್ಯುತಿರ್ಪರ್ ಕೆಲರ್ ಮತ್ತೆ
ಕಪಿಸಹಜಕೃತ್ಯಮಂ ತೋರ್ದಪರ್.
            ದಧಿಮುಖಂ
ತಡೆಯವೇಳ್ಕುಂ ಬನದ ನಾಶನಮನೆನ್ನುತುಂ
ಪಟುಭಟರ ಸಂಘಟನೆಯೊಡನೈದಿ ಬಂದಿರಲ್
ಶಸ್ತ್ರಸಹಿತರ್ ಭಟರ್ಗಾಣತಿಯನಿತ್ತನೈ
“ಪೊಡೆಯಿರೈ ಜಡಿಯಿರೈ ತೊಡೆಯಿರೈ ನಡೆಯಿರೈ
ಸಕಲಕಪಿಗಳನಿಕ್ಕಿ ಮೆಟ್ಟಿರೈ ಕುಟ್ಟಿರೈ
ಬಂಧಿಸಿರಿ ಮಧುವನವಿನಾಶಮಂ ತಡೆಯಿರೈ  ೨೮೦
ರಾಜಸುಗ್ರೀವನಿದಿರೊಳಗೆ ಮಾನ್ಯತೆ ನಿಮಗೆ
ದಕ್ಕುಗುಂ. ಮಧುವನಂ ರಕ್ಷಿತಮೆನಿಪ್ಪೊಡಂ   
ತ್ವರೆಯಿಂದೆ ಪೋಗಿ”ಮೆಂತೆಂದೊಡಂ ಸಾರ್ದಪರ್
ಅದಟನೇನಳೆಯಲ್ಕೆ ಶಕ್ಯಮೇ ಕಪಿಗಳಾ!
ಸೈನಿಕರನೀಕ್ಷಿಸುತೆ ಮತ್ತೆ ಕೊರ್ವುತೆ ಸಿಡಿದು
ಜಡಿದರೈ ಬಡಿದರೈ ಪೊಡೆದರೈ ಕೆಡೆದರೈ
ನಡೆದರೈ ಮೆಟ್ಟುತ್ತೆ ತೊಡೆದರೈ ಕುಟ್ಟುತ್ತೆ
ಕಾವಲಿನ ಭಟರನೇ ಕಾಲಬುಡದೊಳಗಿಕ್ಕಿ
ಪೀಡಿಸಲ್ ತೀಡಿಸಲ್ ಕಾಡಿಸಲ್ ಬೇಡಿದರ್
“ಬಿಡಿಮೆಮ್ಮನೆಲ್ಲರಂ ಕಾಪಿಡಿಂ ನೀವೆನಲ್” ೨೯೦
ಕಪಿಗಳಾ ಭಟರ್ಗಳಂ ಮೊಣಕಾಲ್ಗಳೊಳ್ ಪಿಡಿದು
ಸೆಳೆದು ಮೆಟ್ಟುತೆ ದೇವಮಾರ್ಗಮನೆ ತೋರಿರ-     
ಲ್ಕೆಂತೆಂತೊ ಅವರ್ಗಳಿಂ ತಪ್ಪಿಸಿಕೊಳುತ್ತೆ ತಾಂ
ದಧಿಮುಖನ ಬಳಿಗೋಡಿ ದೂರನಿತ್ತರ್ ಖತಿಯೊ-
“ಳಿವರ್ಗಳಂ ಪಿಡಿವೆನಾಂ ದರ್ಪಮಂ ದಹಿಸುವೆಂ
ಬನ್ನಿ”ಮೆನಲಾತನೆಲ್ಲರ್ ಮತ್ತೆ ಬಂದಪರ್
ಧೈರ್ಯದಿಂ
    ವನಪಾಲಕರ್ ವೃಕ್ಷಮಂ ಕಿಳ್ತು
ಪೊಡೆದಪರ್ ಪೀಡಿಸಿರ್ದಪ ಕಪಿಗಳಂ ವಲಂ.
ದಧಿಮುಖಂ ವೃಕ್ಷಾಯುಧಂ ಸ್ವಯಂ ಸಾರ್ದೊಡಂ
ನೋಡುತ್ತುಮಂಗದಂ ಕೋಪದಿಂದೈದಿದಂ  ೩೦೦
ದಧಿಮುಖಮುಖಚಪೇಟಮಂ ನೀಡಿ ಪೊಯ್ದಪಂ
ಮೊಸರ್ಮೊಗನೆ ಕೆಸರ್ಮೊಗಂ ಸಂದೆ ನೀನೆನ್ನುತುಂ   
ಪೂಜ್ಯತ್ವಮಂ ಮರೆತು ಮಲೆತು ನೆಲಕಿಕ್ಕಿದಂ
ಕುಕ್ಕಿದಂ ಸೊರ್ಕಿಂದಮುರ್ಕಿರ್ಪ ಕೋಪದಿಂ
ನೆಲಕೆ ದಧಿಮುಖನ ಮುಖಮಂ ತೀಡಿದಂ ಗಡಾ!
ಭೀತಿಯಿಂದವಮಾನದಿಂ ಮತ್ತೆ ಬೇಗದಿಂ-
ದೋಡಿದಂ ದಧಿಮುಖಂ ಕಪಿಮುಷ್ಟಿ ತಪ್ಪಿರಲ್
“ಬರ್ದುಕಿದೆಯ ಬಡಬಾಳೆ” ಎಂದುಸುರಿಕೊಳ್ಳುತುಂ
ವನಪಾಲಕರ್ಗಳುಳಿದವರವನ ಪಿಂ ಪೋಗೆ
“ಸುಗ್ರೀವನಿದಿರರೊಳಾನಿವರ್ಗಳಂ ನೋಡುವೆಂ. ೩೧೦
ವೃತ್ತಾಂತಮಂ ತಿಳುಪಿ ದಂಡನೆಯನಿತ್ತಪೆಂ”
ಇಂತೆಂದು ಪೊರಮಟ್ಟು ಶ್ರೀರಾಮಲಕ್ಷ್ಮಣರಿ-     
ನಾಪ್ತರಿಂ ಕೂಡಿರ್ಪ ಸುಗ್ರೀವನಿರ್ಪೆಡೆಗೆ
ಕಿಷ್ಕಿಂಧೆಗಂ ಪಾರುತುಂ ಪೋದಪಂ ಸ್ವಯಂ
ಮಧುವನಸುರಕ್ಷಾವ್ರತೈಕನಿಷ್ಠಾತ್ಮಕಂ
ದಧಿಮುಖಂ ಕಪಿವೀರಪೀಡಿತನಧೋಮುಖಂ.

ಮುಂದುವರೆಯುತ್ತದೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ