Powered By Blogger

ಭಾನುವಾರ, ಜುಲೈ 29, 2018

ಮಧುವನಮರ್ದನಂ -೨

ಮೊದಲ ಭಾಗ-  ಮಧುವನಮರ್ದನಂ-೧
ಈ ಭಾಗವನ್ನು ಇಲ್ಲಿ ಕೇಳುತ್ತ ಓದಬಹುದು.

~ಮಧುವನಮರ್ದನಂ-೨ ~
ಅಂಗದಾದಿಗಳಿತ್ತಲುತ್ತರದ ತೀರದೊಳ್
ಕಾತರಿಸಿ ನಿಂದಿರ್ದಪರ್ ಮಾರುತಿಯ ಬರವ-
ನೀಕ್ಷಿಸುತೆ. ಮ್ಲಾನತೆಯೆ ಮೂರ್ತಿವೆತ್ತಂದದಿಂ-
ದಾ ಮಹೇಂದ್ರಾದ್ರಿಯಿದಿರೊಳ್ ದಿಗಂತಮನೆಂತೊ
ಬಯಕೆ ಬತ್ತಿರ್ಪ ಕಂಗಳೊಳೆ ವೀಕ್ಷಿಸಿ ಕಳೆದ
ಬಲ್ಮೆಯೌತ್ಸುಕ್ಯದಿಂ ತಿನದೆ ತಿನಿಸಿನಿತುಮಂ
ಕುಡಿಯಲಾರದೆ ನೀರನೆಂತುಟೋ ಮೌನದಿಂ
ದನಿಮೇಷರಾಗಿ ಮೇಣ್ ವ್ಯಾಕುಲಾಂತರ್ಯದಿಂ
ವೆಟ್ಟಿನೊಳ್ ಪೊಸತಾಗಿ ನಟ್ಟ ಶಿಲೆಗಳ ತೆರದಿ      ೧೧೦
“ಹನುಮನೇಂ ಬಂದನೋ!” ಎನುತೆ ಪಕ್ಕಿಯದೊಂದು
ಗೋಚರಿಸೆ ಸಂಭ್ರಮದಿ ಸಂಭ್ರಾಂತರಾಗುತುಂ
ಕುಳಿತಿರ್ಪರ್
                 ಅತ್ತಣಿಂ ದೂರದಿಂದಾಗಮಿಪ
ಮಾರುತಿಯ ದೂತನಂತೆಯ್ದಿತೈ ಗರ್ಜನೆಯ
ಮೇಘಸ್ವನಂ ವಲಂ ಗಂಭೀರಗಹನಮುಂ
“ದೃಷ್ಟಾ ಧರಾಸುತಾ- ದೃಷ್ಟಾ ಧರಾಸುತಾ”
ಎನ್ನುತುಂ ಪೇಳ್ದಪುದು.
        ಮೊದಲ ಗುಡುಗಂ ಕೇಳ್ದು
ಗರಿಬಿಚ್ಚಿ ನರ್ತಿಸಿರ್ದಪ ನವಿಲ್ಗಳವೊಲೇ
ಪವನಸುತವಚನದಿಂ ಸಕಲರುಂ ಬಹುವಾದ
ಜಯಜಯೋದ್ಘೋಷದಿಂ ಕುಣಿದಾಡತೊಡಗಿದರ್   ೧೨೦
ದೂರದೊಳ್ ಪೊಳೆದಿರ್ಪ ನಕ್ಷತ್ರದಂದದಿಂ
ತೋರ್ದಪಂ, ಬಳೆಯುತ್ತೆ ಗುರುವಂತೆ ಮತ್ತೆ ತಾಂ
ಚಂದ್ರನಂದದೆ ಮುಗಿಲಿನೋಳಿಯೊಳ್. ದಿನಪನಂ-
ತಮಿತಪ್ರಕಾಶದಿಂ ಸಾರ್ದಪಂ. ವಾನರರ್
ಪುಷ್ಪಗುಚ್ಛಂಬಿಡಿದು ಕೈವೀಸಿ ಕುಣಿದಿರಲ್
ಧರೆಗೆ ಪದಯುಗಮನಿಟ್ಟಂ ನೋಡಲದನಿಂತು
ಗಿರಿಯ ಶಿಖರದೆ ಮತ್ತೆ ಗಿರಿಯೆ ಅವತರಿಪಂತೆ
ಅಂತಾದೊಡಂ ಗಾಳಿಯೊಳ್ ಪಾರ್ದ ಪತ್ತಿಯೇ
ಇಳೆಗಿಳಿದ ತೆರದೆ ಕಂಡಿರ್ದುದಾಕ್ಷಣಕೆ
ಇನಿತೊಂದು ಸದ್ದಿಲ್ಲಮರೆಯೊಂದು ಸರಿದಿಲ್ಲಮ್  ೧೩೦
“ಅರರೆ! ಮಾರುತಿಯೆಮ್ಮನೆಲ್ಲರಂ ದಿಟದಿಂದೆ
ಕೃತಕೃತ್ಯರಂಗೆಯ್ದ”ನೆಂದುಲಿದನಂಗದಂ. 
ಜಾಂಬವಂಬೆರೆಸಂಗದಂ ಹನುಮನೊಡನಲ್ಲಿ
ನಡುವೆ ಕುಳಿತಿರೆ ಸುತ್ತಲೆಲ್ಲರುಂ ಕುಳ್ಳಿರ
ಲ್ಕಾ ರುಂದ್ರ ಸಾಗರೋಲ್ಲಂಘನಕಥಾನಕ
ಶ್ರವಣಕುತುಕಾನ್ವಿತಕಪೀಶಚಿತ್ತಾನಂದ
ಸಂಪ್ರದಾಯಕವಚೋನಿಪುಣ ಮಾರುತಿಯಂತು
ಬಣ್ಣಿಸಿದನೊಲ್ಮೆಯಿಂದೆಲ್ಲಮಂ ಕಿರಿದಾಗಿ.
ರಾಮನಿದಿರೊಳ್ ಪೇಳ್ವುದುತ್ಸುಕತೆಯುಂ ಸಂದು
ತ್ವರೆಯಿಂದೆ ಪೇಳ್ದಪಂಹನುಮನೀ ವೃತ್ತಮಂ ೧೪೦
ಬಳಿಕಮೇಂ ಗೆಯ್ವುದೆಂದೆಲ್ಲರುಂ ಚಿಂತಿಸಲ್
ನಾಮೆಲ್ಲರುಂ ಪೋಗಿ ಸೀತೆಯಂ ಕರೆದುಯ್ವ-
ಮೆಂದಾಂಜನೇಯನೇ ನುಡಿದಿರಲ್ಕಂಗದಂ
“ದಿಟಮಲ್ತೆ! ಸೀತೆಯಂ ಕಂಡುಮೇಂ ರಕ್ಷಿಸದೆ
ಪಿಂದಿರುಗಿ ಪೋಪುದನುಚಿತಮಲ್ತೆ  ವಿಖ್ಯಾತ
ವೀರರಾಗಿರ್ಪೆಮ್ಮ ಕಪಿಕುಲಕೆ?” ಎಂದೆನಲ್
ಸಕಲರುಂ ಸಮ್ಮತಿಸಿ ಸುಸ್ವರದೆ ಘೇ ಎನಲ್
ವೃದ್ಧಜಾಂಬವನೊರ್ಮೆ ಚಿಂತಿಸುತೆ  ಪೇಳ್ದಪಂ
“ಕೆಳೆಯರಿರ! ರಘುವೀರನಾಜ್ಞೆಯಿರ್ಪುದು ನಮಗೆ
ಬರಿದೆ ಸೀತಾನ್ವೇಷಣಂ. ದಶಾನನಹತಿಯು ೧೫೦
ಸೀತೆಯಂ ರಕ್ಷಿಪುದುಮವನ ಪ್ರತಿಜ್ಞೆಯೈ!
ಪುಸಿಗೆಯ್ವುದೊಳ್ಳಿತಲ್ಲಂ ಮಹಾತ್ಮರ ನುಡಿಯ-
ನೀಗಳಾಂ ಮರಳ್ದು ಪೋಪುದೆ ಕಜ್ಜಮೆಂದಿರಲ್
ದಿಟಮೆನುತ್ತೆಲ್ಲರುಂ ನಡೆದಪರ್ ಪಾರ್ದಪರ್
ಗಗನದೆಡೆಗಾ ಮಹೇಂದ್ರಾದ್ರಿಯಿಂ ಸಿಡಿಲಂತೆ
ನಿಟ್ಟುಸಿರ್ ಬಿಟ್ಟಿತೇಂ ವೆಟ್ಟೆಂಬ ಪಾಂಗಿನಿಂ
ದಟ್ಟಮಾಗುತೆ ಗಾಳಿ ಸುಳಿದತ್ತು ಪರ್ವತದೆ
ಸೀತೆಯಂ ಕಂಡಿರ್ಪ ಮುದದಿಂದೆ ಪಾರುತ್ತೆ
ರಾಮಕಾರ್ಯಂ ಸಫಲಮಾಯ್ತೆಂದು ಪೇಳುತ್ತೆ
ಯುದ್ಧಮಂ ಗೆಯ್ವಮೆಂಬುತ್ಸಾಹದೊಳ್ ಮತ್ತೆ ೧೬೦
ಮೂದೆಸೆಗೆ ಪೋಗಿರ್ಪ ಕಪಿವೀರರಂ ಮೀರಿ-
ಪಂದದಿಂದಾಂ ಕಂಡು ಬಂದಿರ್ಪ ಗರ್ವದಿಂ 
ಮೆಯ್ಮರೆತು ಪಾರ್ದಪರ್
                         ಮಾರ್ಗದೊಳ್ ಕಂಡುದೊಂ-
ದದ್ಭುತಂ ನಂದನವನಾಭಮೇಂ ತೋಂಟಮಿದು
ಮೇಣಲ್ತು ಸಗ್ಗಮಂ ಸೃಷ್ಟಿಪೊಡೆ ಕೌಶಿಕಂ
ನಂದನಕೆ ಪ್ರತಿಯಾಗಿರಲ್ ತ್ರಿಶಂಕುವಿಗೆಂದು
ನಿರ್ಮಿಸಿರ್ದಪ ವನಮೊ! ಬೊಮ್ಮನೇನಾದಿಯೊಳ್
ಸಕಲವನಮಂ ರಚಿಪ ಮೂಲಮಾತೃಕೆಯೇನೊ!
ಎಂದೆನಿಪ ಚೆಲುವಿನಿಂದೆಸೆದತ್ತು ಮಧುವನಂ!
ಪಾನಸಕ್ತೋನ್ಮಾದಕಾರಕಂ ನಿಧುವನಂ! ೧೭೦
“ಅರರೆ! ಈಂಟಲ್ ಪೋಪಮೆಲ್ಲರುಂ ಮಧುವನೀ
ರಾಮಕಾರ್ಯಂಗೆಯ್ದ ಸಾಧನೆಗೆ ಸೊಗಮೀಯ-
ಲಾನಂದಪರಿವರ್ಧಕೋನ್ಮಾದಸಂಜನಕ
ಮಧುಪಾನಮೊಂದಲ್ತೆ! ಮಾರ್ಗದೊಳೆ ಸಂದುದೇಂ!”
ಎನುತುಮುಲಿಯಲ್ ಪಲವು ಕಪಿಗಳಾಲಿಸಿಯದಂ
ನುಡಿದನಂಗದನೊಲ್ದು ನೀಡುತಪ್ಪಣೆಯನೇ
“ಕಪಿವೀರರೇ! ಕೇಳಿಮಿದುವನಂ ಮಧುವನಂ
ರಾಜಸುಗ್ರೀವನಾ ಮಾವನಿಂ ಪಾಲಿತಂ
ದಧಿಮುಖಂ ರಕ್ಷಕಂ ತಾನಿಲ್ಲಿ. ನೀವಿಂತು
ಮಧುವನೀಂಟಿಂ ಮತ್ತೆ ನಿಗ್ರಹದೊಳಿರ್ಪುದೈ ೧೮೦
ಜಾಂಬವಂತಂ ಹನೂಮಂತನುಂ ಸಮ್ಮತಿಸೆ
ನಮಗೆಲ್ಲರೊಪ್ಪಿಗೆಯೆ ದೊರೆತಂತೆ ಅಕ್ಕುಂ”
ಅನುಮತಿಸೆ ಹನುಮನುಂ ಮೇಣೊಪ್ಪೆ ಜಾಂಬವಂ
ಪರಿದುದೇಂ ಧುಮ್ಮಿಕ್ಕಿ ನದಿಯಿಂತು ಕಣಿವೆಯೊಳ-
ಗೆಂಬಂತೆ ರಭಸದಿಂ ನುರ್ಗಿದರ್ ವಾನರರ್.
ಕದಳಿವನದೊಳಗಾನೆಗುಂಪೊಂದು ನುರ್ಗಿದಂ-
ತರರೆ! ಕಪಿಸಹಜಚಪಲತೆಯೊಳೇಂ ಗೆಯ್ದರೋ!
ಮಧುಭಾಂಡಮಂ ಸೆಳೆದು ಗಟಗಟನೆ ಪೀರುತುಂ
ಸರಸರನೆ ಮರನೇರಿ ದರದರನೆ ಸೆಳೆಯುತ್ತೆ
ಸುರುಸುರ್ರೆನುತೆ ಪೀರ್ದು ಡರಡರ್ರೆನುತೆ ತೇಗು- ೧೯೦
ತಮಲೊಳಗೆ ಮೆಯ್ಮರೆತರೊಂದೆಡೆಗೆ.
ಮಧುವನಂಫ ಲಪುಷ್ಪನಿಚಯದಿಂ ತರುಲತೆಯ ನಿಕರದಿಂ
ಸುರುಚಿರಸುಮೋದ್ಯಾನಮೆಂಬ ತೆರನಿರ್ದಪುದು
ತಣ್ನೆಳಲ್ ತುಂಬಿರ್ಪ ಶಾದ್ವಲಪರೀತಮುಂ
ಬಹುವಿಧದ ವೃಕ್ಷಂಗಳಿಂದೆ ತಾಂ ಮೆರೆದಪುದು
ಸುಗ್ರೀವಭೀತಿಯಿಂದಾರ್ಗಮುಂ ಪುಗಲಿದಕೆ
ಸಾಧ್ಯಮಿಲ್ಲಂ ನೋಡಿಮೆಂಬಂತೆ ಪೆಸರ್ವಡೆದ
ನಿಬಿಡತರುಗುಲ್ಮಂಗಳಿಂದೊಪ್ಪುತೆಸೆದಪುದು
ಜಗದ ಚಿತ್ರಂಬಿಡಿಪ ಕವಿ ಚಿತ್ರಕಾರನೇ
ವರ್ಣಸಂಮಿಶ್ರಣಕೆ ಪಿಡಿದಿರ್ಪ ಫಲಕಮಿದು ೨೦೦
ತಾನೆಂಬ ಪಾಂಗಿನಿಂ ಪೂಗಳಿಂ ತುಂಬಿರ್ಪು-
ದಾ ಸುಮದ ಮಕರಂದಪಾನದಿಂದುನ್ಮತ್ತ-
ಸಂಭ್ರಮದ್ ಭ್ರಮರಕುಲವಿಭ್ರಮಭರಂ ವಲಂ
ವನದೇವತಾಲಾಸ್ಯನೃತ್ತೋಪಹಾರಕೃತ
ಭೂಮಿದೇವಿಯ ಚೆಲ್ವದಾಣಮಾಗಿರ್ದಪುದು
ದೂರದಿಂ ವೆಟ್ಟೆಲ್ಲ ಕಣ್ಗೆ ನುಣ್ಣಗೆಯೆಂಬ
ನಾಣ್ಣುಡಿಯನಿದು ಪುಸಿಯ ಗೈದಿರ್ಪುದೆಂಬವೊಲ್
ನವುರಾದ ನೆಲದಿಂದೆ ನೆಲಸಿರ್ಪ ನಲವಿಂದೆ
ಮೆರೆದಿರ್ದಪುದು

ಮುಂದುವರೆಯುತ್ತದೆ.....

ಬುಧವಾರ, ಜುಲೈ 25, 2018

ಮಧುವನಮರ್ದನಂ - ೧

ಲಿಂಕ್ ಅಲ್ಲಿ ಇದನ್ನು ಕೇಳುತ್ತಾ ಓದಬಹುದು.


ಕನ್ನಡದಲ್ಲಿ ಸರಳರಗಳೆ- blank verse ಎಂದು ಪ್ರಸಿದ್ಧವಾದ ಛಂದಸ್ಸನ್ನು ಹಲವಾರು ಕವಿಗಳು ಈ ತನಕ ಬಳಸಿದ್ದಾರೆ. ಐದು ಮಾತ್ರೆಗಳ ನಾಲ್ಕು ಗಣಗಳು ಪ್ರತಿಯೊಂದು ಸಾಲಿಗೂ ಬರುತ್ತವೆ. ಇದರಲ್ಲಿ ಆದ್ಯಂತಪ್ರಾಸಯುಕ್ತವಾದದ್ದನ್ನು ಲಲಿತರಗಳೆ ಎಂದು ಕರೆದಿದ್ದಾರೆ. ನಮ್ಮ‌ಚಂಪೂಕವಿಗಳಾದ ಪಂಪ ರನ್ನ ನಾಗವರ್ಮ ರುದ್ರಭಟ್ಟ ಮೊದಲಾದವರ ಕಾವ್ಯಗಳಲ್ಲಿ ಕೂಡ ಈ ರಗಳೆಯೆಂಬ ಛಂದಸ್ಸು ಕಂಡುಬರುತ್ತವೆ. ಆದರೆ ಪ್ರಾಸವನ್ನು ಬಿಟ್ಟು ಕೇವಲ ಮಾತ್ರಾಗಣಘಟಿತವಾಗಿ ಕಂಡುಬರುವುದು ಬಹುಶಃ ಮೊದಲು ಗೋವಿಂದ ಪೈಗಳ ಖಂಡಕಾವ್ಯಗಳಲ್ಲಿಯೇ ಇರಬಹುದು. ಪ್ರಾಸತ್ಯಾಗವನ್ನು ಮಾಡಿದ ಮೊದಲಿಗರು ಗೋವಿಂದಪೈಗಳು. ಅವರು ಈ ಛಂದಸ್ಸನ್ನು "ಝಂಪೆ" ಎಂದು ಕರೆದಿದ್ದಾರೆ. ಅದೇ ಮಾದರಿಯಲ್ಲಿ ಮುಂದೆ ಹಲವಾರು ಕವಿಗಳು ಇದೇ ಮಾತೃಕೆಯ ರಗಳೆಯನ್ನು ಬಳಸಿದ್ದಾರೆ. ಕುವೆಂಪು ಅವರ ಚಿತ್ರಾಂಗದಾ ಮತ್ತು ರಾಮಾಯಣದರ್ಶನಂ ಕಾವ್ಯಗಳಲ್ಲಿ ಇದನ್ನೇ ಮಹಾಛಂದಸ್ಸು ಎಂದು ಕರೆದಿದ್ದಾರೆ. 
ಈ ಬಗೆಯ ರಗಳೆಗಳಲ್ಲಿ ಪಾದಗಳ ಮಿತಿಯಿಲ್ಲದ ಕಾರಣ ಕಲ್ಪನೆಯ ಚಿಗುರು ಮಹಾವೃಕ್ಷವೂ ಆಗಬಹುದು.ಹೀಗೆ ಬಹಳಷ್ಟು ಕವಿಗಳಿಗೆ ಪ್ರಿಯವಾದ ಈ ಛಂದಸ್ಸಿನಲ್ಲಿ "ಮಧುವನಮರ್ದನಂ" ಕಾವ್ಯವೂ ರಚನೆಯಾಗಿದೆ. ಕಥಾನಕವು ಪ್ರಸಿದ್ಧವಾದ ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ಸೀತೆಯನ್ನು ಕಂಡು ಹಿಂತಿರುಗಿ ಬಂದ ಪ್ರಸಂಗವೇ ಆಗಿದೆ. ಕುವೆಂಪು ಅವರ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಈ ಭಾಗವನ್ನು ಅಷ್ಟು ವಿಸ್ತರಿಸಲಿಲ್ಲವಾದ ಕಾರಣ ನನ್ನ ಕಲ್ಪನೆಯನ್ನು ಒಂದಿಷ್ಟು ಬೆಳೆಸಿ ಈ ರೀತಿ ವಿಸ್ತರಿಸಿದ್ದೇನೆ. ಸೊಗಸಾದ ಕಥೆಯ ಹೂಬನದಲ್ಲಿ ನನ್ನ ಕಲ್ಪನೆಯ ಕಪಿಗಳು ನುಗ್ಗಿ ಹಾಳುಗೆಡವಿದವೋ ಏನೋ ಗೊತ್ತಿಲ್ಲ. ಇಲ್ಲಿನ ಕೆಲವೊಂದು ಉಪಮೆಗಳೆಲ್ಲ ಮೂಲದ ವಾಲ್ಮೀಕಿರಾಮಾಯಣದ ಉಪಮೆಗಳೇ ಆಗಿವೆ. ಆದರೂ ಯಥೋಚಿತವಾಗಿ ನನ್ನ ಮಾತುಗಳನ್ನೂ ಅಲ್ಲಲ್ಲಿ ಸೇರಿಸಿದ್ದೇನೆ. ಅಲ್ಲಿ ನಾಲ್ಕೈದು ಸರ್ಗಗಳಲ್ಲಿ ವಿಸ್ತಾರವಾಗಿರುವುದನ್ನು ಸಂಕ್ಷಿಪ್ತಗೊಳಿಸಿಕೊಂಡು ಬರೆದ ಈ ಕಾವ್ಯಖಂಡದಲ್ಲಿರುವ ಗುಣದೋಷಗಳನ್ನು ರಸಜ್ಞರು ಕಂಡು‌ ತಿಳಿಸುವುದು. 

~~~~~~~~~

~:ಮಧುವನಮರ್ದನಂ:~
“ಜಯಜಯ ಶ್ರೀರಾಮ” ಎನುತುಮುದ್ಘೋಷಿಸುತೆ
ಸಾಗರೋಲ್ಲಂಘನದ ಕಾರ್ಯಸಾಫಲ್ಯದಿಂ
ಕೃತಕೃತ್ಯನಾಗಿರ್ಪ ಮಾರುತಿಯನೇಕಧಾ-
ಲಂಕಾಪುರೋತ್ಪಾತಕೃತ್ಯಂಗಳಂ ಗೆಯ್ದು
ಪರಿಪರಿಯೊಳಲ್ಲಿರ್ಪ ರಕ್ಕಸರನುರೆ ಬಡಿದು
ಜಡಿದು ಕೆಡಪುತೆ ಮತ್ತೆ ಕೀಲ್ಗಳಂ ಸಡಿಲ್ಚುತ್ತೆ
ಪೀಡಾಪ್ರದೋನ್ಮಾದಕಾನಂದಸಂಪ್ರಾಪ್ತ
ಶ್ರೀರಾಮದೂತಂ ಪುನಃಸಾಗರದ ತರಣ-
ಚಿತ್ತಂ, ದಶಾನನಮನೋರಥಕ್ಕಿಕ್ಕಿರ್ಪ
ಕಿರ್ಚಂತೆ ಪುಚ್ಛಕಾಲಿಪ್ತಸಪ್ತಾರ್ಚಿಯಿಂ         ೧೦
ರಾವಣಾಸುರಪುರಮನಿರ್ದಿಲಾಗಿಸಿ, ಸೀತೆ
ಸೌಖ್ಯದಿಂದಿರ್ಪುದಂ ಮತ್ತೊರ್ಮೆಗಂ ತಿಳಿದು
ಶರಧಿಯಂ ಲಂಘಿಸಲ್ಕನ್ಯವೇಲೆಯೊಳಿರ್ಪ
ಸಖರನೀಕ್ಷಿಸಿ ದೌತ್ಯಸಾಫಲ್ಯನೈವೇದ್ಯ-
ಕಾತುರಂ ತಾನಾಗರಿಷ್ಟಪರ್ವತಶಿಖರ-
ಮಂ ಸಾರ್ದು ನಿಂದು ಮೇಣ್ ಮನದೆ ಮುಂ ಗೈವುದಂ
ನಿಶ್ಚಯಿಸಿದಂ ಪರ್ವತಾಗ್ರದೊಳ್ ಸಂದಿರ್ಪ
ಹನುಮಂತನಂ ವೀಕ್ಷಿಪೊಡನೆಂತುಟದ್ಭುತಂ!
ಮಂಗಲಾಂಕುರಮೊಂದು ಮಾರ್ಮಲೆವರೆಡೆಯೊಳಗೆ
ಮೊಳೆತು ಭವ್ಯಾಕೃತಿಯೊಳನ್ಯಾಯಮಂ ಕಳೆಯ-   ೨೦   
ಲಿಳೆಯಿಂದೆ ಪೊರಮಟ್ಟ ತೆರದಿಂದೆ ತೋರ್ದಪಂ!
ಬಳೆದಪಂ ಭೀಕರಾಕೃತಿಯಾಗಿ. “ವೃತ್ರನೇಂ
ಮತ್ತೆ ಜನಿಸಿದನೆಂತುಟುಸಿರ್ಗೊಂಡು ಶೀಘ್ರದಿಂ-
ದಿಂತುಟಾದನೆ” ಎಂದು ನಿರ್ಜರೇಶ್ವರನೊರ್ಮೆ
ಬೆಮರ್ದಪಂ ಬೆದರ್ದಪಂ. ತಾನೋಡಿ ಪೋಗಲ್ಕೆ
ಮುಗಿಲ ರಥಮಂ ದೂರಕಂ ಸರಿಸಿದನೆ ಎಂಬ
ಪಾಂಗಿನಿಂದಾಗಸಂ ತಿಳಿಯಾಯ್ತು. ಹನುಮನಂ
ಕಂಡಳ್ಕದವರುಂಟೆ? ರೌದ್ರಮೂರ್ತಿಯೆ ದಿಟಂ!
ನಗಮಿರ್ಪುದುನ್ನತಂ ಭೂರ್ಜವೃಕ್ಷಂಗಳಿಂ
ಪರಿಧಾನಪರಿವೇಷ್ಟಿತಮಿದೆಂಬ ಪಾಂಗಿನಿಂ.      ೩೦
ಮೇಘದೋಘಂ ತೂಗಿರಲ್ ಸಾನುದೇಶದೊಳ್
ಸಂದಿರ್ದಪುದು ಮತ್ತಮುತ್ತರೀಯದ ತೆರದೆ.
ಸೂರ್ಯನೆಳ್ಚರಿಸಲ್ ಕರಂಗಳಿಂ, ಪರ್ವತಂ
ಧಾತುಮಣಿಶಿಲೆಗಳಿಂ ಪೊಳೆಯುತ್ತೆ ನಿರ್ನೆರಂ
ಕಣ್ಗಳಂ ತೆರೆದಂತೆ ಭಾಸಿಪುದು. ತೋಯೌಘ-
ನಿಸ್ವನಂ ವೇದಘೋಷಸ್ವನಂ. ಸಂಗೀತ-
ಮಂಜುಲನಿನಾದದಂತೆಸೆದತ್ತು ನಿರ್ಝರಿಣಿ
ಪರಿವತುಲ ಮಂದ್ರಗಹನಸ್ವನಂ ಸುಸ್ವನಂ.
ರಾಮಸಂದರ್ಶನೋತ್ಸುಕನದಂ ಪತ್ತಿರಲ್
ಪದಘಾತದಿಂದುಪಲಚಯಮೆಲ್ಲ ಘೂರ್ಣಿತಂ     ೪೦
ಪುಡಿಪುಡಿಯದಾದತ್ತು. ಶಿಖರದೊಳ್ ನಿಂತಿರಲ್
ಹನುಮನಿವುಗಳುಮೆಲ್ಲಮವನ ಪದತಲದಲ್ಲಿ
ನಿಷ್ಪೀಡಿತಂಗಳಾದಪುವೆನಲ್ ಮಾರುತಿಯ
ರೂಪಮೇಂ! ಕಾಂಚನಾಭಂ ಕೇಸರಂಗಳಿಂ
ಮೇರುವಿನ ಖಂಡಮೇಂ ಜಗುಳಿತೋ ಪರಮೇಶ-
ದಿಙ್ಮಹಾತ್ಮೆಗೆ ನೆಲದ ಬಸಿರಿಂದಮೆಂದಿನಂ
ಪ್ರತಿಫಲಿಪ ನಿಜಕಿರಣನಿಕರಮಂ ಕಂಡು ಮೇಣ್
ಸಂಭ್ರಾಂತನಾದಪಂ. ವ್ಯೋಮಗೋಲಕಮಾತ-
ನುತ್ತಮಾಂಗದ ಮಕುಟದಿಂ ರಂಧ್ರಮಂ ತಳೆದು
ನಕ್ಷತ್ರಸಂಕುಲಂ ನೆರೆ ಬಿಳ್ದುದೋ ಎನಲ್             ೫೦
ದೇವಲೋಕದ ಪುಷ್ಪವೃಷ್ಟಿಯಾದುದು ನೋಡೆ
ಜಯಜಯೋದ್ಘೋಷದೊಡನೊಡನೆ ಆಗಳ್!
  
ಪರ್ವತನಿವಾಸಿಗಳ್ ಯಕ್ಷಕಿನ್ನರರಂತೆ
ಭುಜಗಗಂಧರ್ವಾದ್ಯರೀ ರೂಪಮಂ ಕಾಣ-
ಲೆನುತೆ ಪೊರಮಟ್ಟರೋ, ಮೇಣಾದಿ ದೇವನೆ-
ಳ್ತರವನಳೆಯಲ್ಕಜಂ ಪಲವಾರು ಮೆಯ್ದಳೆದು
ಚಿಮ್ಮಿರ್ಪನೋ ಎಂಬ ಪಾಂಗಿನಿಂ ಪಾರ್ದಪರ್!
ನೋಡುತ್ತುಮಿದನಿಂತು ಸ್ತಬ್ಧಂ ಜಗಚ್ಚಕ್ಷು
ಬೆಳ್ಪಾದಪಂ ಚಂದ್ರಮಂ ಭಯಂದೀವುತುಂ
“ಅಕಟ! ಸಾಲ್ಗುಂ ನಿನ್ನ ಬೆಳವಣಿಗೆ! ನಾಮಿರ್ಪ      ೬೦
ಲೋಕಮಂ ವಿಚ್ಛಿದ್ರಮಂ ಗೆಯ್ದಪುದು ಎಂದು
ಸ್ತುತಿಸಿದರ್ ವಾಯುಪುತ್ರನನೂರ್ಧ್ವಲೌಕಿಕರ್.
ಪಾತಾಳಲೋಕದಿಂ ಬಲಿಚಕ್ರವರ್ತಿಯೇಂ
ತಲೆಯ ಪೊರಮಡಿಸಿದನೊ! ಕಂಡದಂ ಹರಿ ಮತ್ತೆ
ತಳೆದಿರ್ದಪನೊ ತನ್ನ ದಿವ್ಯತ್ರಿವಿಕ್ರಮಾ-
ಕೃತಿಯಂ ಗಡೆಂದುದೊಂದೆಡೆಗಿಳೆಯ ಜನಮೆಲ್ಲ-
ಮೇನಿಂತುಟದ್ಭುತಮೊ! ಅಕ್ಕಜಮೊ! ಅಮಮ! ಜಗ-
ದೊಳಗಿದಂ ಕಂಡವರ್ ತಾಮೆಂತು ಧನ್ಯರೋ!

ಪದಯುಗಮನಿಳೆಗೊತ್ತಿ, ಮೊಳಕಾಲ್ಗಳಂ ಬಾಗಿ-
ಸೆಳೆಯುತ್ತೆ ಶ್ವಾಸಮಂ ಬಿಗಿಯುತೆರ್ದೆಯೊಳಗಂತು       ೭೦
ಜೀಂಕಿದಂ ಗಗನಕ್ಕೆ ಪೆರ್ವೆರಲ್ ತುದಿಯಿಂದೆ,
ಕಂಪಿಸಲ್ಕಿಳೆಯೊರ್ಮೆಗರೆಗುಣ್ಪು ಪುಡಿಯಾಯ್ತು
ಸುಳಿಗಾಳಿಯೆಳ್ದು ಮೇಣ್ ತಿರುಗಿದುದು, ಬಲಿಯಂತೆ
ಭೂಧರಂ ರಸೆಯನೇ ಪೊಕ್ಕಿರ್ಪುದಾಕ್ಷಣಂ.
ಶಿವಕಾರ್ಮುಕದಿನಂದು ನಾರಾಯಣಾಖ್ಯಶರ-
ಮೆಂತು ಪೊಣ್ಮಿತೊ ಅದಂ ಪಡಿಮಿಸಲ್ ನೋಂತನೇಂ!
ಸುರರ ಸೊದೆಗೊಬ್ಬಂ ಕರಗಿಪೆನೆನೆ ರಾವಣಂ
ಪೂಡಿರ್ಪುದಸ್ತ್ರಮೇಂ ನಮ್ಮೆಡೆಗೆ ಬರ್ಪುದೈ
ಎನುತೆ ಭೀತಿಯನಾಂತಿರಲ್ ಸುರೇಂದ್ರಂ ವಲಂ
ಬಳಿಕದೊಳ್ ಮಾರುತಿಯೆ ಪೊಣ್ಮುತುಣ್ಮಿರ್ಪುದಂ
ಕಂಡು -”ಶೈಶವದೊಳಗೆ ಸೂರ್ಯಮಂಡಲಮನೇ
ಪಣ್ಣೆಂದು ತಿಳಿದು ತಾಂ ತಿನಲೆಂದು ಪಾರಿರ್ಪ-
ನಿಂದೇನಜಾಂಡಮಂ ನುಂಗಲ್ಕೆ ಬಂದನೋ!
ಹರಿ ಹರೀ! ರಕ್ಷಿಸೈ” ಎನುತೆ ಕೂಗಿರ್ದಪಂ!

ಮೇಘಶೈವಲಯುಕ್ತಮುಂ ಚಂದ್ರಕುಮುದಾನ್ವಿ
ತಮುಮರ್ಕಕಾರಂಡವಂಗೂಡಿಕೊಂಡಿರ್ಪ
ಗ್ರಹತಾರಕಾಳಿಯೇ ತಿಮಿತಿಮಿಂಗಿಲಕುಲಂ
ನೀಹಾರಿಕಾನಕ್ರನಿಕರಯುತಮುಂ ಸಂದ
ಐರಾವತಾದಿ ದಿಗ್ಗಜಮೆಲ್ಲ ದ್ವೀಪಂಗ
ಳೆನಿಸಿರ್ಪ ಚಂಡಮಾರುತತರಂಗಾನ್ವಿತಂ    ೯೦
ಚಂದ್ರಿಕಾಸಲಿಲಿಸಂಚಯಮಿರ್ಪಪಾರಮಂ
ಗಗನಾರ್ಣವಮನಿಂತು ಹನುಮಂತನೇ ಬೃಹನ್
ನೌಕೆಯಾಗುತೆ ತೇಲುತುಂ ಸಾಗಿ ದಾಂಟಿದಂ!
ಸೀತೆ ಸಿಲ್ಕಿದಳೆಂಬ ಸೊದೆವಾತನುಯ್ದಿರ್ಪ-
ನೀತಂ ಸುಪರ್ಣನೇಂ! ರಾಮನಾ ವಿರಹಮಂ
ತಣಿಸಲ್ಕೆ ಭೇಷಜಮನರಿತಿರ್ಪ ಬೆಜ್ಜನೇಂ!
ಮೇಘಮಾಲಿಕೆಯೀತನಂ ಪುರಸ್ಕರಿಸಿರ್ಪ
ಪುಷ್ಪಮಾಲಿಕೆಯಾಯ್ತೆ!
ಅಕಟ! ಮತ್ತಿನ್ನಾರೊ
ಸಾಗರದ ಮಥನಕ್ಕೆ ಮಂದರಮನುರಗದಿಂ
ಬಿಗಿದು ತರುತಿರ್ಪರೇಂ! ವಿಷಮೆ ಪುಟ್ಟುಗುಮೆಂದು   ೧೦೦
ಬೆದರಿದಪಳುಮೆ ಕಪಿಯ ಬಾಲಮಂ ಕಂಡು!

~~~~~~~~
ಮುಂದುವರೆಯುತ್ತದೆ....