Powered By Blogger

ಶುಕ್ರವಾರ, ಡಿಸೆಂಬರ್ 29, 2017

ಕುವೆಂಪು ಅವರ ಜನ್ಮದಿನಕ್ಕೊಂದು ಪದ್ಯ-


ವ್ಯೋಮವಿಸ್ತೀರ್ಣರಮಣೀಯಸ
ಚ್ಛಾಯೆಯಾ
ಗಹನಕಾಂತಾರಗಹ್ವರಪರ್ವತಶ್ರೇಣಿ
ಮೈದುಂಬಿ ನಿಂತಿರ್ಪ ರುಂದ್ರಸಹ್ಯಾದ್ರಿಯೊಳ್
ಮಲರಿರ್ಪ ಮಲರಾಗಿ ಮೇಲ್ಮೆಯಂ ಪಡೆದಿರ್ಪ
ಕಬ್ಬಿಗರ್! ಕಬ್ಬದೀ ಬನದ ಹೆಬ್ಬುಲಿಯವೋಲಂತೆ
ಪೆರರಾರ್ಗಮಿಲ್ಲಿಗೈತರ್ಪ ದರ್ಪಕೆ ನಿಂತ
ಕಠಿನಕುಲಿಶಕ್ರಕಚವಿಕಟಗತಿಯಿಂ
ಪಂಥಮಾದಿರಿ ನೀವೆ! ಅಂತಲ್ತು! ನ್ಯಗ್ರೋಧ
ಪಾದಪವದೊಂದು ಬಿಳಲುಗಳಿಂದ ಮೆಯ್ ಚಾಚಿ
ನೆರಳಿತ್ತು ಸಕಲರ್ಗೆ ಗಂಭೀರಚರ್ಯೆಯಿಂ
ಆಶ್ಚರ್ಯದಾಕೃತಿಯಿನಂತೆ ಸರ್ವಂಕಷತೆ-
ಯೊಪ್ಪಿರಲ್ ತಿಳಿದರಾರಳವನೀ ಆಲದಾ!
ಕಿರಿದಾನುಮಿಳೆಯಿಂದ ಮೊಳೆಯುತ್ತ ಬೆಳೆಯುತ್ತ
ಬರ್ದುಂಕಲೆಂದಾಶಿಸಿಹ ಸಸ್ಯರಾಜಿಗಂ
ನೆರಳೊಳಗೆ ಬಾಳಿತ್ತು, ಬಾಳಾಗಿ, ಮೀರಿಸ-
ಲ್ಕಾಗದಂದದೆ ಬಳೆದುದಲ್ತೆ! ನೀಮಂತೆ!
ಓ ಧೀರ ಓ ವೀರ ಓ ಕಾವ್ಯಸಾರರೇ
ಓ ಕಬ್ಬಿಗರ ಕುಲದ ಕಾಜಾಣ ಜಾಣರೇ
ಓ ದಿವ್ಯಚೇತನದ ಚಿನ್ಮಹಾಮೂರ್ತಿಗಳೆ
ಓ ಕುವೆಂಪುವೆ ಇಂಪಿನುಲಿಯ ಕೋಗಿಲೆಯೆ
ನಿಮ್ಮ ಜನ್ಮದ ದಿನದೊಳಿಂತು ನಿಮ್ಮಯ ಸ್ತುತಿಯ
ಗೈದಿಹೆನ್ ಮೇಣ್ ವಂದಿಸಿಹೆನಿಂತು ಕೇಳಿಂ
ಕಾವ್ಯಪಥದೊಳ್ ಸಾಗುವಾನಂದವುಣ್ಮಲ್ಕೆ
ಪೊಣ್ಮುಗುಂ ರಸದ ರೋಮಾಂಚನವೆ ನಿಮ್ಮ ಕೃತಿಯಿಂದ
ಅವತರಿಸಿಮೀ ವಾಣಿಯಾಶ್ರಯದೊಳಿನ್ನೊರ್ಮ್ಮೆ
ಮಲೆನಾಡಿನಿಂಚರದ ಮಿಂಚ ತೋರಲ್ಕೆ!

೨೯-೧೨-೨೦೧೬