Powered By Blogger

ಶುಕ್ರವಾರ, ಮಾರ್ಚ್ 21, 2014

ಸಹೃದಯಕಾಲ-೧

'ಸಹೃದಯಕಾಲ'
ಕವಿಯ ಕಾವ್ಯದ ಸ್ವಾರಸ್ಯವನ್ನು ಅರಿಯಬಲ್ಲವನೇ ಸಹೃದಯ. ಹಲಕೆಲವು ಹಳೆಗನ್ನಡ ಕಾವ್ಯಗಳ ಸ್ವಾರಸ್ಯಕರ ಪದ್ಯಗಳನ್ನು 'ಸಹೃದಯಕಾಲ'ದಲ್ಲಿ ಚುಟುಕಾಗಿ ನೋಡೋಣ.
ಹಳಗನ್ನಡ ಕಾವ್ಯದಲ್ಲಿ ನನಗೆ ಚೆನ್ನಾಗಿ ಕಂಡ ಪದ್ಯಗಳಿಗೆ ಹಾಗೆಯೇ ಬೇರೆಯವರು 'ಈ ಪದ್ಯ ಚೆನ್ನಾಗಿದೆ' ಎಂದು ಹೇಳಿದ ಪದ್ಯಗಳಿಗೆ ನನ್ನದೇ ಆದ ಅಡಿಟಿಪ್ಪಣಿಯೊಂದಿಗೆ ಯಥಾಮತಿ ವಿಮರ್ಶಿಸಿ ಇಲ್ಲಿ ಹಾಕುತ್ತೇನೆ. ಒಟ್ಟಾರೆ ಸಹೃದಯರಿಗೆ ಸಂತೋಷವಾದರೆ ನಾನಷ್ಟು ಕೃತಾರ್ಥನಾದಂತೆ.

ಸಾಂದರ್ಭಿಕ ಚಿತ್ರ-ಅಂತರ್ಜಾಲಕೃಪೆ
ಆದಿಕವಿ ಪಂಪನ ಎರಡು ಕೃತಿಗಳೆಂದರೆ 'ವಿಕ್ರಮಾರ್ಜುನವಿಜಯ' ಹಾಗೂ 'ಆದಿಪುರಾಣ'. ವಿಕ್ರಮಾರ್ಜುನವಿಜಯದಲ್ಲಿ ಮಹಾಭಾರತ ಕಥೆಯನ್ನು ಹಲವು ಬದಲಾವಣೆಗಳೊಂದಿಗೆ ಕನ್ನಡದಲ್ಲಿ ಚಂಪೂ(ಗದ್ಯಪದ್ಯಮಿಶ್ರಿತ)ಶೈಲಿಯಲ್ಲಿ ಬರೆದಿದ್ದಾನೆ. ಇದರಲ್ಲಿ ತನಗೆ ಆಶ್ರಯವನ್ನು ಕೊಟ್ಟ ಚಾಲುಕ್ಯರಾಜ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಡನೆ ಸಮೀಕರಿಸಿ ವರ್ಣಿಸುತ್ತಾನೆ. ಕೆಲವುಕಡೆಗಳಲ್ಲಿ ಇದು ರಸಾಭಾಸಕ್ಕೆ ಕಾರಣವಾದರೂ ಕೆಲವು ಅರಿಕೇಸರಿಯನ್ನು ವರ್ಣಿಸುವ ಪದ್ಯಗಳಲ್ಲಿ ಒಳ್ಳೆಯ ಕಲ್ಪನೆಯನ್ನು ಕಾಣಬಹುದಾಗಿದೆ. ಅಂತಹ ಒಂದು ಪದ್ಯ ಮೊದಲ ಆಶ್ವಾಸದ ೪೬ನೆಯದು-

ಕಂದಪದ್ಯ
ಉಡೆವಣಿ ಪಱಿಯದ ಮುನ್ನಮೆ
ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡ
ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ||

ಈ ಪದ್ಯದಲ್ಲಿ ಪಂಪನು ಅರಿಕೇಸರಿಯ ಬಗ್ಗೆ ಹೀಗೆ ಹೇಳುತ್ತಾನೆ :- "ಅರಿಕೇಸರಿ ರಾಜನು ಹುಟ್ಟಿ ಇನ್ನೂ ಉಡುದಾರ ಹರಿದುಹೋಗುವ ಮುನ್ನವೇ( ಅಂಬೆಗಾಲಿಕ್ಕುವ ಕಾಲದಲ್ಲಿ)  ಅವನ ಸಾಹಸವು ಬೆಳೆದು ಶತ್ರುಗಳ ಬಲವನ್ನು ನಾಶಮಾಡಿ ಶತ್ರುಬಲದ ರಕ್ತವೆಂಬ ಸಮುದ್ರದಲ್ಲಿ ಜಿಗಳೆ(ಜಿಗಣೆ/ಜಿಗುಳೆ/leach) ಬೆಳೆಯುವಂತೆ (ಅಂಬೆಗಾಲಿಕ್ಕುತ್ತಾ/ತೆವಳುತ್ತಾ) ಬೆಳೆದ"
ಇಲ್ಲಿ 'ಶತ್ರುಗಳ ಬಲದ ರಕ್ತಸಮುದ್ರದ ಜಿಗಳೆ' ಎಂಬ ಒಂದು ರೂಪಕವನ್ನು ಕೊಡುವುದರ ಮೂಲಕ ತನ್ನ ರಾಜನು ಹುಟ್ಟುವಾಗಳೇ ಶತ್ರುರಾಜರು (ಅರಿಕೇಸರಿಯ ತಂದೆಯಿಂದಲೋ ತಾತನಿಂದಲೋ-ಇರಬಹುದು-) ನಾಶವಾದದ್ದನ್ನೂ ರಿಪುಗಳ ಬಲದ ರಕ್ತವೇ ಸಮುದ್ರದಂತಿತ್ತೆಂಬುದನ್ನೂ ಅರಿಕೇಸರಿ ಅಂಬೆಗಾಲಿಕ್ಕುವುದು ಜಿಗಳೆ ಹೋದಂತಿತ್ತೆಂಬ ಅತಿಶಯೋಕ್ತಿಯ ಭಾವವನ್ನೂ ಅತಿಚಿಕ್ಕ ಛಂದಸ್ಸಾದ ಕಂದಪದ್ಯದಲ್ಲಿ ತಂದು ಸೊಗಸಾದ ಪದ್ಯ ರಚಿಸಿದ್ದಾನೆ.

8 ಕಾಮೆಂಟ್‌ಗಳು:

  1. ಒಳ್ಳೆ ಪ್ರಯತ್ನ...ಚೆನ್ನಾಗಿದೆ. ಕಂದ ಪದ್ಯದಲ್ಲಿ ಇಷ್ಟೊಂದು ಸೇರಿಸಿರುವುದು ನಿಜಕ್ಕೂ ದೊಡ್ಡಮಾತೆ. ಹಾಗಂದು ಹೀಗನ್ನುವಷ್ಟರಲ್ಲಿ ನಾಲ್ಕು ಸಾಲು ಮುಗಿದುಬಿಡುವ ಕಂದದಲ್ಲಿ ಇಷ್ಟೆಲ್ಲ ಅಲಂಕಾರಯುಕ್ತ ವರ್ಣನೆ ತರುವುದು ದೊಡ್ಡಕವಿಯ ಪಳಗಿದ ಕೈಗಷ್ಟೇ ಸಾಧ್ಯ.
    ಒಂದು ಸಣ್ಣ ತಿದ್ದುಪಡಿ ಪರಬಲದ ನೆತ್ತರ ಕಡಲ್ - ಉಪಮೆ ಅಲ್ಲ ರೂಪಕ.

    ಇಲ್ಲಿಯ ಅತಿಶಯೋಕ್ತಿಗೆ ಒಂದು ಸ್ವಾಭಾವಿಕವಾದ ಕಾವ್ಯೋತ್ಸಾಹವಿಲ್ಲ. ಕೇವಲ exaggeration ತರಹ ಇರುವುದರಿಂದ, ತನ್ನ ರಾಜನನ್ನು ಹೊಗಳಿದ್ದೇ ಹೆಚ್ಚಾಗಿ ಕಾಣುತ್ತದೆ ಅನ್ನಿಸುತ್ತದೆ. ನಿನಗೆ?

    ಮಿಕ್ಕಂತೆ ಪದ್ಯ ಸೊಗಸಾಗಿದೆ.

    ಪ್ರತ್ಯುತ್ತರಅಳಿಸಿ
  2. @Shreesha Karantha ನಿಮ್ಮ ಮಾತು ನಿಜ, ಪಂಪ ಆದಿಕವಿ ಎನ್ನಿಸಿಕೊಂಡಿದ್ದಾನಾದರೂ ಕೆಲವೆಡೆ ಔಚಿತ್ಯಪ್ರಜ್ಞೆ ಕಳೆದುಕೊಂಡು ವರ್ಣಿಸುತ್ತಾನೆ. ಆದರೆ ಹಳಗನ್ನಡದ ಕಾಠಿಣ್ಯ ಸ್ವಲ್ಪ ಹೆಚ್ಚು.

    ರೂಪಕ ಉಪಮೆ ಅವಳಿಜವಳಿಗಳಲ್ಲವೇ! ಹಾಗಾಗಿ ತೊಂದರೆ ಇಲ್ಲ ;-) :-)

    ಪ್ರತ್ಯುತ್ತರಅಳಿಸಿ
  3. ಒಳ್ಳೆಯ ಶ್ಲಾಘ್ಯಪ್ರಯತ್ನ. ಇಂಥದ್ದು ಕನ್ನಡದಲ್ಲಿ ತಡವಾಗಿಯಾದರೂ ಮೊದಲಾದುದಕ್ಕಾಗಿ ಮೆಚ್ಚಬೇಕು. ಪದ್ಯದ ಆಯ್ಕೆಯೂ ವಿವರಣೆಯೂ ಚೆನ್ನಾಗಿವೆ. ಮುಖ್ಯವಾಗಿ ಪಂಪನ "ರಾದರಾಜಕಮೆನಿಸಿದ ಸಾಜದ ಪುಲಿಗೆರೆಯ ತಿರುಗನ್ನಡ" ಬಲುಚೆಲುವಾದುದು. ಇದನ್ನು ಎಲ್ಲರೂ ಆಸ್ವಾದಿಸುವಂತಾದಲ್ಲಿ ಒಳಿತು. ಆದರೆ ಉಪಮೆ-ರೂಪಕಗಳು ಅವಳಿಗಳೆಂದು ಬಗೆದು ಅವುಗಳಿಗೆ ಅಭೇದವನ್ನು ಹೇಳುವುದಾದರೆ ನನಗೆ ಬವಳಿಬಂದಂತಾದೀತು:-) ಇದು ಹಸುವೂ ಎಮ್ಮೆಯೂ ಒಂದೇ ಎಂಬಂತೆ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಎಂತಹ ಒಳ್ಳೆಯ ಕಜ್ಜಮ ಗೈಯುತಿರ್ಪೆ ನೀಂ ಕೊಪ್ಪಲತೊಟಾ!! ಧನ್ಯವಾದಗಳು.

      ಅಳಿಸಿ
    2. ಧನ್ಯವಾದಗಳು ಗಣೇಶ್ ಸರ್.. ಅವಳಿ ಜವಳಿಗಳಿಬ್ಬರನ್ನೂ ಕೆಲವೊಮ್ಮೆ ಪರಿಚಿತರೂ ಕೂಡ ಹೆಸರಿನಲ್ಲಿ ಗೊಂದಲ ಮಾಡಿಕೊಂಡು ಅದಲುಬದಲಾಗಿ ಕರೆಯುತ್ತಾರಲ್ಲ ಹಾಗೇ ಆಯಿತು ಅಷ್ಟೇ..ತಿದ್ದಿದ್ದೇನೆ ;-)

      ಕಾಂಚನಾ ಅವರೇ.. ಧನ್ಯವಾದಗಳು

      ಅಳಿಸಿ
  4. ಬಹಳ ಒಳ್ಳೆಯ ಪ್ರಯತ್ನವನ್ನು ಮಾಡುತ್ತಿದ್ದೀಯೆ. ಒಳ್ಳೆದಾಗಲಿ, ಹೀಗೆಯೇ ಮುಂದುವರೆಸು

    ಪ್ರತ್ಯುತ್ತರಅಳಿಸಿ