Powered By Blogger

ಬುಧವಾರ, ಸೆಪ್ಟೆಂಬರ್ 15, 2010

ಮತ್ತೊಂದೆರಡು ಹವಳಗಳು

ಹಿಂದಿನ ಪೋಸ್ಟ್ ನಲ್ಲಿ ತಿಳಿಸಿದ ಕಿರಾತಾರ್ಜುನೀಯದ ಮತ್ತೆರಡು ಚಾಟು ಶ್ಲೋಕಗಳು ಇಲ್ಲಿವೆ.
ಅವು ಗತ ಪ್ರತ್ಯಾಗತ ಅಥವಾ ಪ್ರತಿಲೋಮಾನುಲೋಮಪಾದ ರೂಪದವು. ಇಂಗ್ಲಿಷ್ ನಲ್ಲಿ palindrome sequence ಎನ್ನುತ್ತಾರೆ. ಅಂದರೆ ಆ ಶ್ಲೋಕಗಳ ಪಾದಗಳನ್ನು ಹಿಂದೂ ಮುಂದಾಗಿ ಓದಿದರೂ ಅದೇ ರೀತಿಯಲ್ಲೇ ಇರುತ್ತದೆ.
ಅವುಗಳೆಂದರೆ
ವೇತ್ರ ಶಾಕಕುಜೇ ಶೈಲೇ ಲೇಶೈ ಜೇ ಕುಕ ಶಾತ್ರ ವೇ
ಯಾತ ಕಿಂ ವಿದಿಶೋ ಜೇತುಂ ತುಂಜೇಶೋ ದಿವಿ ಕಿಂ ತಯಾ
ಅದರ ಅರ್ಥ
(ಷಣ್ಮುಖ, ಅರ್ಜುನ ಮತ್ತು ಪ್ರಮಥ ಗಣಗಳ ನಡುವೆ ಯುದ್ಧ ನಡೆಯುತ್ತಿದ್ದಾಗ ಹೇಳುವುದು)
 ಸ್ವರ್ಗದಲ್ಲಿ ತುಂಜ(ದೈತ್ಯ)ರನ್ನು ಗೆಲ್ಲಲು ಸಮರ್ಥರಾದ ಪ್ರಮಥರೇ ಬೆತ್ತದ ರೂಪದಲ್ಲಿಯೂ ಒರಟಾಗಿಯೂ ಇರುವ ಗಿಡಗಳಿರುವ ಅಲ್ಲಾಡದಿರುವ (ನಿಮ್ಮನ್ನು) ಹಿಡಿಯಲು  ಅಸಮರ್ಥನಾದ ಶತ್ರುವಿರುವ ಈ ಪರ್ವತದಲ್ಲಿ ನಿಂದೆಯಿಂದ ಯುಕ್ತರಾಗಿ ದಿಕ್ಕಿನ ಮೂಲೆಗಳನ್ನು ಗೆಲ್ಲಲು ಹೋಗುತ್ತಿರುವಿರಾ?)
(ಪುಸ್ತಕ - ಸಂಸ್ಕೃತ ಭಾಷಾ ಶಾಸ್ತ್ರ ಮತ್ತು ಸಾಹಿತ್ಯ )
देवाकानिनि कावादे
वाहिकास्वस्वकाहि वा ।
काकारेभभरे का का
निस्वभव्यव्यभस्वनि ॥

Translation: "O man who desires war! This is that battlefield which excites even the gods, where the battle is not of words. Here people fight and stake their lives not for themselves but for others. This field is full of herds of maddened elephants. Here those who are eager for battle and even those who are not very eager, have to fight."
(wikipedia)

ಕರಿಮಣಿಯ ಸರದೊಳ್ ಚೆಂಬವಳಮಂ ಕೋದಂತೆ

    ಸಂಸ್ಕೃತದಲ್ಲಿ ಪಂಚ ಮಹಾ ಕಾವ್ಯಗಳು ಎಂದು ಪ್ರಸಿದ್ಧವಾಗಿರುವವು ಕಾಳಿದಾಸ'ರಘುವಂಶ' ಮತ್ತು 'ಕುಮಾರಸಂಭವ', ಭಾರವಿ'ಕಿರಾತಾರ್ಜುನೀಯ' ಮಾಘ'ಶಿಶುಪಾಲ ವಧ' ಶ್ರೀಹರ್ಷ'ನೈಷಧೀಯ ಚರಿತ' ಕನ್ನಡದಲ್ಲಿಯೂ ಹೀಗೆ ಅಸಂಖ್ಯಾತ ಕಾವ್ಯಗಳು ಮಹಾಕಾವ್ಯಗಳು ಸೃಷ್ಟಿಯಾಗಿವೆ.
    ಕಾವ್ಯವೊಂದು ಮಹಾಕಾವ್ಯ ಎಂದೆನಿಸಬೇಕಾದರೆ ಅದು ಹತ್ತು ಹಲವು ಲಕ್ಷಣಗಳನ್ನು ಹೊಂದಿರಬೇಕು. ಲಕ್ಷಣ ಕಾವ್ಯಗಳು ಈ ಲಕ್ಷಣಗಳನ್ನು ವಿವರಿಸುತ್ತವೆ. ಅಷ್ಟಾದಶ ವರ್ಣನೆಗಳು ಸರ್ಗ ಪ್ರತಿಸರ್ಗಗಳು ಇರಬೇಕಂಬ ನಿಯಮಗಳನ್ನು ಅಳವಡಿಸಿಕೊಂಡ ಕಾವ್ಯವನ್ನು ಮಹಾಕಾವ್ಯ ಎಂದು ವಿದ್ವಾಂಸರು ಪರಿಗಣಿಸುತ್ತಾರೆ.ಒಂದು ಕಾವ್ಯ ಮಹಾಕಾವ್ಯ ಎಂದೆನಿಸಿಕೊಳ್ಳಬೇಕಾದರೆ- ಚಿನ್ನವನ್ನು ಅದರ ಶುದ್ಧತೆಯ ಕುರಿತು ಪರೀಕ್ಷಿಸಿದಂತೆ  ಹತ್ತು ಹಲವು ರೀತಿ ಪರಿಶೀಲಿಸುತ್ತಾರೆ.
    'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಯಂತೆ ಜನರಿಗೆ ವಿವಿಧ ರೀತಿಯ ಹವ್ಯಾಸ ಆಸಕ್ತಿಗಳು ಇರುವುದು ಸಹಜ. ವಾಙ್ಮಯ ಜಗತ್ತಿನಲ್ಲಿ ಆಸಕ್ತರಾದವರಿಗೆ ವಿಹಾರ ಮಾಡಲಾಗದಷ್ಟು ಕಾವ್ಯರಾಶಿಯಿದೆ! ಅದರಲ್ಲಿ ಅಲ್ಪ ಮಾತ್ರ ರುಚಿ ತೋರಿಸುವ ಪ್ರಯತ್ನ ಇದು. ಒಬ್ಬ ವ್ಯಕ್ತಿ ಕ್ರೀಡೆಗಳಲ್ಲಿ ಆಸಕ್ತ, ಇನ್ನೊಬ್ಬ ಶಿಕ್ಷಣದಲ್ಲೇ ಆಸಕ್ತ, ಮತ್ತೊಬ್ಬ ಮತ್ತೊಂದರಲ್ಲಿ ಆಸಕ್ತ, ಹೀಗೆ ಆಸಕ್ತರಾದವರನ್ನು ತನ್ನೆಡೆಗೆ ಅತ್ಯಂತ ವಿಶಿಷ್ಟವಾಗಿ ಆಕರ್ಷಿಸುವುದು ಸಂಗೀತ ಮತ್ತು ಸಾಹಿತ್ಯ.
     ಮಹಾಕಾವ್ಯಗಳು ಕರಿಮಣಿಯ ಸರದಂತೆ ಆದರೆ ಅದರಲ್ಲಿ ಕೆಂಪು ಹವಳದಂತೆ ಕಾಣುವ ಒಂದು ಸುಂದರ ಶ್ಲೋಕ ಹಾಗು ಅದರ ಹಿನ್ನೆಲೆಯ ಕುರಿತು ಇಲ್ಲಿ ವಿವರಣೆ ಕೊಡಲ್ಪಟ್ಟಿದೆ.
    ಮಹಾಕವಿ ಭಾರವಿ 'ಶ್ರೇಷ್ಠ ಕವಿ' ಎಂದು ಊರಿಡೀ ಹೆಸರುವಾಸಿಯಾಗಿದ್ದ. ಅವನ ಕುರಿತು ಎಲ್ಲರೂ ಹೊಗಳುವವರೇ ಆಗಿದ್ದರು. ಭಾರವಿಗೆ ಅದೊಂದು ಹೆಮ್ಮೆ. ಆದರೆ ಅವನ ತಂದೆ ಒಮ್ಮೆಯೂ ಪ್ರಶಂಸಿಸದ ಕಾರಣ ತಂದೆಯೇ ತನ್ನ ಶತ್ರು ಎಂದು ಭಾವಿಸಿದ್ದ. ಒಂದು ಕೆಟ್ಟ ಗಳಿಗೆಯಲ್ಲಿ  ತಂದೆಯ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಸಾಯಿಸಿಬಿಡಬೇಕು ಎಂದು ಯೋಚಿಸಿಕೊಂಡ.
     ಆ ದಿನ ಕಲ್ಲನ್ನು  ಇಟ್ಟುಕೊಂಡು ಅಟ್ಟದ ಮೇಲೆ ಕುಳಿತಿದ್ದ. ಅದೇ ವೇಳೆ ಕೆಳಗಿನಿಂದ ಅವನ ತಂದೆ ತಾಯಿಯರ ಮಾತು ಕೇಳಿತು. ತಾಯಿ"ಊರವರೆಲ್ಲ ನಮ್ಮ ಮಗನನ್ನು ಹೊಗಳಿದರೂ ನೀವು ಮಾತ್ರ ಯಾಕೆ ನಮ್ಮ ಮಗನನ್ನು ಹೊಗಳುವುದಿಲ್ಲ?" ಎಂದು ಕೇಳಿದಳು. ಅದಕ್ಕೆ ಭಾರವಿಯ ತಂದೆ"ಯಾವತ್ತು ತಂದೆ ತಾಯಿಯರು ಮಕ್ಕಳನ್ನು ಹೊಗಳಬಾರದು ಅದರಿಂದ ಅವರಿಗೆ ಗರ್ವ ಬರುತ್ತದೆ. ಒಬ್ಬರ ದುರ್ಬಲತೆಯನ್ನು ಎದುರಿಗೆ ಹೇಳಬೇಕು, ಅವರ ಕುರಿತು ಹಿಂದಿನಿಂದ ಹೊಗಳಬೇಕು" ಎಂದು ಹೇಳಿದ. ಅದನ್ನು ಕೇಳಿ ಭಾರವಿಗೆ ಸಖೇದಾಶ್ಚರ್ಯವಾಯಿತು. ಅವನು ತಕ್ಷಣ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಏನು ಮಾಡಿಕೊಳ್ಳಬೇಕೆಂದು ತಂದೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಆಗ ಅವನ ತಂದೆ " ಆರು ತಿಂಗಳುಗಳ ಕಾಲ ಮಾವನ ಮನೆಯಲ್ಲಿ ವಾಸ ಮಾಡಬೇಕು" ಎಂದು ಶಿಕ್ಷೆ ನೀಡಿದ. ಮಾವನ ಮನೆಯಲ್ಲಿ ವಾಸ ಮಾಡುವಾಗ ಬಹಳಷ್ಟು ವಿಷಯಗಳು ಅನುಭವಕ್ಕೆ ಬಂದವು. ಹೆಂಡತಿಗೆ ಹಣದ ಅವಶ್ಯಕತೆಯಾದಾಗ ಏನು ಮಾಡಲೂ ತೋಚದೇ ಒಂದು ಶ್ಲೋಕವನ್ನು ಬರೆದು ಕೊಟ್ಟ.
   "ಸಹಸಾ ವಿಧಧೀತ ನ ಕ್ರಿಯಾಮವಿವೇಕ: ಪರಮಾಪದಾಂ
    ವೃಣತೇ ಹಿ ವಿಮೃಶ್ಯಕಾರಿಣಂ ಗುಣಲುಬ್ಧಾ: ಸ್ವಯಮೇವಂ ಸಂಪದ:"
ಅವನ ಕುರಿತೇ ಬರೆದಂತಿರುವ ಶ್ಲೋಕ ೧೦೦ ಸುವರ್ಣಕ್ಕೆ ಮಾರಾಟವಾಯಿತು. ಅವನು ಮಾವನ ಮನೆಯಲ್ಲಿನ ಪರಿಸ್ಥಿತಿಯ ಕುರಿತು ವ್ಯಂಗ್ಯ ವಾಗಿ ಒಂದು ಶ್ಲೋಕವನ್ನು ಹೇಳುತ್ತಾನೆ.
ಶ್ವಶುರಗೃಹನಿವಾಸಃ ಸ್ವರ್ಗ ತುಲ್ಯೋ ನರಾಣಾಂ
 ಯದಿ ವಸತಿ ದಿನಾನಿ ತ್ರೀಣಿ ಪಂಚಾಥ ಸಪ್ತ !
ದಧಿಮಧುಘೃತಭಕ್ಷ್ಯಕ್ಷೀರಸಾರಪ್ರವಾಹಃ
ತದುಪರಿ ನಿವಸೇತ್ ಚೇತ್ ಪಾದರಕ್ಷಾ ಪ್ರಯೋಗಃ!"
"ಮಾವನ ಮನೆಯಲ್ಲಿ ವಾಸ ಮಾಡುವುದು ಸ್ವರ್ಗಕ್ಕೆ ಸಮಾನ ಒಂದು ವೇಳೆ ಅವನು ಮೂರು ಐದು ಅಥವಾ ಏಳುದಿನ ವಾಸ ಮಾಡಿದರೆ ಮೊಸರು ಜೇನುತುಪ್ಪ ತುಪ್ಪ ಭಕ್ಷ್ಯ ಕ್ಷೀರ ಸಾರಗಳ ಪ್ರವಾಹವೇ ಹರಿದು ಬರುತ್ತದೆ. ಅದಕ್ಕೂ ಹೆಚ್ಚು ದಿನವಿದ್ದರೆ ಪಾದರಕ್ಷೆ ಪ್ರಯೋಗವಾಗುತ್ತದೆ." ಎಂದು.
 ಅವನು ಮಾವನ ಮನೆಯಲ್ಲಿದ್ದಾಗ ನಿತ್ಯವೂ ಹೊಲ ಕಾಯಲು ಹೋಗುತ್ತಿದ್ದ.ಆ ವೇಳೆಯಲ್ಲೇ "ಕಿರಾತಾರ್ಜುನೀಯಂ" ಮಹಾಕಾವ್ಯವನ್ನು ಬರೆದನೆಂದು ಹೇಳುತ್ತಾರೆ. ಈ ಕಥೆಯ ಸತ್ಯಾಸತ್ಯತೆಗಳ ಬಗ್ಗೆ ವಿವಾದವಿದ್ದು,ಇದು ಕೇವಲ ದಂತಕಥೆಯಾದರೂ ತಿಳಿದುಕೊಳ್ಳಲು ಬಹಳಷ್ಟು ಅಂಶಗಳಿವೆ.
   ಕಿರಾತಾರ್ಜುನೀಯದಲ್ಲಿ ೧೮ ಸರ್ಗಗಳಿವೆ.ಅದರಲ್ಲಿ ಮೂರು ಅಧ್ಯಾಯಗಳನ್ನು 'ಪಾಷಾಣ ತ್ರಯೀ' ಎಂದಿದ್ದಾರೆ. ರಾಜನೀತಿ ಶಾಸ್ತ್ರಾದಿ ಹತ್ತು ಹಲವು ವಿಷಯಗಳು ಇದರಲ್ಲಿ ವಿವರಿಸಲ್ಪಟ್ಟಿವೆ. ಅದರಲ್ಲಿ ೧೫ನೆ ಅಧ್ಯಾಯದ ೧೪ನೆ ಶ್ಲೋಕವೇ ಆ ಹೇಳಲಿಚ್ಚಿಸಿರುವಂತಹ 'ಕೆಂಪು ಹವಳ'
    ನ ನೋ ನನುನ್ನೋ ನುನ್ನೋನೋ ನಾನಾನಾನಾನನಾ ನನು
    ನುನ್ನೋ ನುನ್ನೋ ನನುನ್ನೇನೋ ನಾನೇನಾ ನುನ್ನ ನುನ್ನ ನುತ್
ಕೊನೆಯ ಅಕ್ಷರ 'ತ್' ಆಗಿದ್ದರೂ "ನಾಂತ್ಯ ವರ್ಣಸ್ತು ಭೇಧಕ:" ಎಂದು ಲಾಕ್ಷಣಿಕರು ಹೇಳಿದ್ದಾರೆ. ಇದೊಂದು ಏಕಾಕ್ಷರಿ ಶ್ಲೋಕ. ಮೇಲ್ನೋಟಕ್ಕೆ ವಿಚಿತ್ರವಾಗಿ ಕಾಣುವ ಇದರ ಅರ್ಥ ಹೀಗಿದೆ (ಕಿರಾತ ರೂಪಿ ಶಿವನು ಅರ್ಜುನನ ಕುರಿತು ಹೇಳುವುದು)
"(ಎಲೈ) ವಿವಿಧ ಮುಖಗಳಿರುವ ಪ್ರಮಥಗಣಗಳೇ , ಈತನು ಕ್ಷುದ್ರ ವಿಚಾರಗಳಿರುವಂತಹ ವ್ಯಕ್ತಿ ಅಲ್ಲ. ಈತನು ನ್ಯೂನತೆಗಳನ್ನು ಸಮೂಲವಾಗಿ ನಾಶ ಗೈಯುವ ಪುರುಷನಿಗಿಂತ ವಿಶೇಷ ರೀತಿಯ ಯಾವನೋ ಒಬ್ಬ ದೇವತೆಯಿರಬೇಕು. ಈತನಿಗೆ ಒಬ್ಬ ಒಡೆಯನೂ ಇರುವನೆಂದು ತಿಳಿದುಬರುತ್ತದೆ. ಬಾಣಗಳ ಹೊಡೆತ ತಿಂದರೂ ಏಟನ್ನು ತಿನ್ನದವನಂತೆ ಕಾಣುತ್ತಾನೆ.ದುಃಖದಿಂದ ಇರುವ ವ್ಯಕ್ತಿಗೆ ಇನ್ನಷ್ಟು ತೊಂದರೆ ಕೊಡುವ  ದೋಷಪೂರ್ಣ ಎಂಬ ಆಪಾದನೆಯಿಂದಲೂ ವಿಮುಕ್ತನಾಗಿದ್ದಾನೆ.(ಆದ್ದರಿಂದ ನೀವು ಯುದ್ಧದಿಂದ ವಿಮುಖರಾಗಿ ಹೋಗುವುದು ಸರಿಯಲ್ಲ)"
    ಕೇವಲ ಒಂದೇ ಅಕ್ಷರದಿಂದ ಇರುವ ಶಬ್ದಗಳಿಂದಲೇ ಸಂಧಿಪದ ಸಮಸ್ತಪದಗಳನ್ನು ರಚಿಸಿ ಅರ್ಥಗರ್ಭಿತವಾದ ಶ್ಲೋಕ ರಚನೆ ಮಾಡಿರುವುದರಲ್ಲಿ ಕವಿಯ ಪಾಂಡಿತ್ಯ ಕೌಶಲ ಹಿರಿಮೆಗಳು ಕಂಡುಬರುತ್ತವೆ. ಹೀಗೆ ಇದೊಂದೇ ಅಲ್ಲದೇ ಇನ್ನೂ ಹತ್ತು ಹಲವು ಚಾಟು ಶ್ಲೋಕಗಳು ಇವನಿಂದ ರಚನೆಯಾಗಿವೆ.ಇತರ ಹಲವು ಕವಿಗಳೂ ಇಂತಹ ಶ್ಲೋಕ ರಚನೆಯಲ್ಲಿ ಪಾಂಡಿತ್ಯ ತೋರಿದ್ದಾರೆ.
   "ಇದು ಒಂದು ಕರಿಮಣಿಯ ಸಾರದಲ್ಲಿ ಕಂಡ ಒಂದು ಕೆಂಪು ಹವಳ!"
(ಶ್ಲೋಕದ ಅರ್ಥ ತಿಳಿಸಿದವರು:- ಡಾ.ಈ.ಮಹಾಬಲ ಭಟ್ಟ, ಸಂಸ್ಕೃತ ವಿಭಾಗ ಶ್ರೀ ಧ ಮಂ ಕಾಲೇಜು  ಉಜಿರೆ.
                                       ಶತಾವಧಾನಿ ಡಾ.ಆರ್.ಗಣೇಶ ಬೆಂಗಳೂರು.
ಶ್ಲೋಕ ನನಗೆ ಕಂಡ ಪುಸ್ತಕ:- ಸಂಸ್ಕೃತ ಭಾಷಾ ಶಾಸ್ತ್ರ ಮತ್ತು ಸಾಹಿತ್ಯ - ವಿದ್ವಾನ್.ಎನ್ ರಂಗನಾಥ ಶರ್ಮ ಮತ್ತು ಇತರರು.
'ವಿಕಿಪೀಡಿಯ' ದಲ್ಲಿ ಕಿರಾತಾರ್ಜುನೀಯ ದ ಕುರಿತ ವಿವರಕ್ಕೆ:
http://en.wikipedia.org/wiki/Kir%C4%81t%C4%81rjun%C4%ABya)
ಈ ಲೇಖನ ೪-೧೦-೨೦೦೯ರ ಸಂಯುಕ್ತ ಕರ್ನಾಟಕಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿತ್ತು.

ಸೋಮವಾರ, ಸೆಪ್ಟೆಂಬರ್ 6, 2010

ಬಂತು ಚೌತಿ

"ಶ್ರೀ ಗಣೇಶಾಯ ನಮಃ" ಹೇಳಿ ಅಂತು ಇಂತೂ ಒಂದೆರಡು ವಾರ ಕಳೆಯುವಷ್ಟರಲ್ಲಿ ಚೌತಿ ಹಬ್ಬ ಬಂದೇ ಬಿಡ್ತು. ಗಣಪತಿ ಹಬ್ಬದ ಶುಭಾಶಯ ತಿಳಿಸುತ್ತಾ  ಗಣಪತಿ ಎಲ್ಲರಿಗು ಒಳ್ಳೆಯದು ಮಾಡಲಿ ಎಂದು ಆಶಿಸುತ್ತೇನೆ.
 ಚಕ್ಕುಲಿ ಪಂಚಕಜ್ಜಾಯ ತಿನ್ನಲು ಎಲ್ಲರೂ ನಮ್ಮ ಮನೆಗೆ ಬನ್ನಿ.:)

ಬುಧವಾರ, ಸೆಪ್ಟೆಂಬರ್ 1, 2010

ಚಾಪ್ಲಿನ್ ಬೀನ್ ಹಾಗು ಟಾಮ್ ಅಂಡ್ ಜೆರ್ರಿ

                    ಇಲ್ಲಿ ಮೂರು ಹಾಸ್ಯ ಕಥಾನಕಗಳ ಪಾತ್ರಧಾರಿಗಳನ್ನು ಹೆಸರಿಸಿದ ಕಾರಣ ಇದೊಂದು ಹಾಸ್ಯದ ಕುರಿತ ಲೇಖನ ಎಂದು ನೀವು ಊಹಿಸಿರಬಹುದು. ಖಂಡಿತ ಹೌದು.ನವರಸಗಳಲ್ಲಿ 'ಹಾಸ್ಯ'ವೇ ಪ್ರಮುಖವಾದದ್ದು, ಏಕೆಂದರೆ ಆಬಾಲವೃದ್ಧರೆಲ್ಲರೂ ಸಂತೋಷಪಡುವುದು ಹಾಸ್ಯದಿಂದ ಮಾತ್ರವೇ! ಶೃಂಗಾರ ಕೇವಲ ಯುವಕರಿಗೆ ಸಂತಸ ನೀಡಿದರೆ ಕರುಣಾ ರಸ ದುಃಖವನ್ನು ಪ್ರತಿನಿಧಿಸುತ್ತದೆ.ರೌದ್ರ ಕೂಡ ದುಃಖಕ್ಕೆ ಕಾರಣ;ಕೋಪದ ಪ್ರತೀಕ.ವೀರ ಭಯಾನಕಗಳು ಭೀಭತ್ಸ ಅಧ್ಭುತಗಳು ವಿಭಿನ್ನ ಭಾವಗಳನ್ನು ಹುಟ್ಟಿಸುತ್ತವೆ ಅಷ್ಟೇ! ಎಲ್ಲೂ ಸಹ ಹಾಸ್ಯದಂತೆ ಮನರಂಜನೆ ಸಿಗದು.'ಶಾಂತ'ರಸದ್ದು ವಿಭಿನ್ನ, ಸಂಪೂರ್ಣವಾದ ಶಾಂತರಸದ ಸೃಷ್ಟಿ ಸಾಧ್ಯವಿಲ್ಲ ಎಂದು ಕೆಲವರು ವಾದಿಸುತ್ತಾರೆ.
            ಅಭಿನಯದಲ್ಲಿ ವಾಚಿಕ ಆಂಗಿಕ ಎರಡನ್ನು ಗುರುತಿಸಬಹುದು.ಹಾಸ್ಯದಲ್ಲೂ ಸಹ. ಅಷ್ಟೇ ಅಲ್ಲದೆ ಹಾಸ್ಯದಲ್ಲಿ ಸುಶೀಲ ಮತ್ತು ಅಶ್ಲೀಲ ಇವೆರಡು ವಿಭಾಗಗಳು.ಅಶ್ಲೀಲ ಬರವಣಿಗೆಗೆ ಹೊರತಾಗಿದ್ದು ಮತ್ತು ಅನುಸಾಂಧರ್ಭಿಕವಾದದ್ದು. ಸುಶೀಲ ಬರವಣಿಗೆಗೆ ಪೂರಕ ಹಾಗು ಸದಾ ಯುಕ್ತವಾದದ್ದು.
        ಇಂಗ್ಲಿಷ್ ಮಾಧ್ಯಮಗಳಲ್ಲಿ ಈಗೀಗ ಜನ ಖುಷಿ ಪಡುತ್ತಿರುವುದು Mr.Bean ಅಥವಾ Tom and Jerry ನೋಡುವುದರ ಮೂಲಕ.ಸ್ವಲ್ಪ ಹಿಂದೆ ಸರಿದರೆ ಚಾರ್ಲಿ ಚಾಪ್ಲಿನ್ ನ ಕಾಲದಲ್ಲಿ ಅವನ ಸಿನಿಮಾಗಳು ಈ ಸ್ಥಾನವನ್ನ ಆಕ್ರಮಿಸಿದ್ದವು.
       
ಈ ಮೂರರಲ್ಲಿ ಟಾಮ್ ಅಂಡ್ ಜೆರ್ರಿ ಇದು ಕಾರ್ಟೂನ್-ಅನಿಮೇಷನ್. ಆದರು ಸಹ ಆಬಾಲವೃದ್ಧರೆಲ್ಲರೂ ನೋಡಿ ಖುಷಿ ಪಡಬಹುದು. ಬೆಕ್ಕು ಇಲಿಗಳ ನಡುವಿನ ಹೋರಾಟ, ಇಲಿಯ ಜಾಣತನ ಹೀಗೆ ಪ್ರತಿ ಸಂಚಿಕೆಯಲ್ಲೂ ವಿಭಿನ್ನ ರೀತಿಯ ಕಲ್ಪನೆ ಇದರ ಕರ್ತೃವಿನದ್ದಾಗಿದೆ. ಬೆಕ್ಕು ಹಾಗು ಇಲಿಗಳೆರಡೂ ಶತ್ರುಗಳಾದರೂ ಒಂದಕ್ಕೆ ಇನ್ನೊಂದನ್ನು ಬಿಟ್ಟಿರಲಾಗದು. ಅನೇಕ ಬಾರಿ ತನ್ನನ್ನು ತಿನ್ನಲು ಬರುವ ಬೆಕ್ಕನ್ನು ಇಲಿ ಹೊಡೆದು ಹೆದರಿಸಿ ಕಾಡುತ್ತದೆ.ಅಕಸ್ಮಾತ್ ಅದು ಪ್ರಾಣಾಪಾಯಕ್ಕೆ ಸಿಕ್ಕಿಕೊಂಡರೆ ಕಾಪಾಡುತ್ತದೆ. ಒಮ್ಮೊಮ್ಮೆ ಬೇರೆ ಬೆಕ್ಕು ಅಥವಾ ಇಲಿಯೊಡನೆ ಇವುಗಳ ಪ್ರೇಮ ಪ್ರಸಂಗ ನಡೆಯುತ್ತದೆ.ಇಲಿಯ ಕಡೆಯಿಂದ ನಾಯಿಯೊಂದು ಬಂದು ಬೆಕ್ಕನ್ನು ಹೆದೆರಿಸುತ್ತದೆ.
            ಇವುಗಳು ಯಾವ ಪಾತ್ರೆ ಅಥವಾ ಪೆಟ್ಟಿಗೆ ಇತ್ಯಾದಿಗಳಲ್ಲಿ ಬೀಳುತ್ತವೆಯೋ ಅದೇ ಆಕಾರ ಪಡೆದುಕೊಳ್ಳುತ್ತವೆ. ಅಕಸ್ಮಾತ್ ಏನಾದರು ನುಂಗಿ ಬಿಟ್ಟರೆ ಅದರದ್ದೇ ಆಕಾರ ಇವುಗಳ ದೇಹದ್ದಾಗುತ್ತದೆ. ಆಕಾಶದಲ್ಲಿ ಎಷ್ಟೋ ದೂರ ಹೋದ ನಂತರ ಕೆಳಗೆ ನೋಡಿಕೊಂಡಾಗ ತಾನು ನೆಲದ ಮೇಲಿಲ್ಲ ಎಂಬ ಅರಿವಾಗಿ ಬೀಳುತ್ತವೆ.ಬಾಗಿಲಿಗೆ ಬಡಿದರೆ ಚಪ್ಪಟೆಯಾಗುತ್ತವೆ ಏನಾದರು ಏಟು ಬಿದ್ದು ತಲೆಯ ಮೇಲೆ ಉಬ್ಬು ಬಂದು,ಅದನ್ನು ಒಳ ತಳ್ಳುತ್ತವೆ, ಆದರೆ ಅದು ಮತ್ತೊಂದು ಕಡೆ ಹೊರ ಬರುತ್ತದೆ. ಏನೇ ಆದರೂ ದೇಹದ ಯಾವ ಭಾಗವೂ ಊನವಾಗುವುದಿಲ್ಲ,ಹೀಗೆ ನಿಜವಾಗಿಯೂ ಸಾಧ್ಯವಲ್ಲದ ಊಹೆಗಳೇ ನಮಗೆ ಮನೋರಂಜನೆ ನೀಡುತ್ತವೆ.ಅದರ ಜೊತೆಗೆ ಅವುಗಳ ಮುಖ ಭಾವ ಹಾಗು ಪರಸ್ಪರ ವಿರುದ್ಧವಾಗಿ ಮಾಡುವ ಉಪಾಯಗಳು ಶಕ್ತಿಯ ಅಪರಿಮಿತಿ ಇವಷ್ಟೇ ಅಲ್ಲದೆ ಓಡುವುದು ಜಿಗಿಯುವುದು,ಹೀಗೆ ಎಲ್ಲವು ಹಾಸ್ಯವನ್ನು ಸೃಷ್ಟಿಸಿ ನೋಡುಗನನ್ನು ನಗಿಸುತ್ತದೆ.
                         ಇನ್ನು Mr.Bean ಬಗ್ಗೆ ಹೇಳಹೊರಟರೆ ಅವನೊಬ್ಬ ಸಾಮಾನ್ಯ ಮನುಷ್ಯ ಆದರೆ ವಿಭಿನ್ನ ಸಂಧರ್ಭಗಳಲ್ಲಿ ಅವನ ಪ್ರತಿಕ್ರಿಯೆ ಅನೂಹ್ಯವಾಗಿರುತ್ತದೆ.ಪಕ್ಕದವನೊಡನೆ ಇರುವುದು ತನಗಿಲ್ಲ ಎಂದು ಅಸೂಯೆಯಿಂದ ಅವನು ಅದಕ್ಕೆ ಸಮನಾಗಿ ಮಾಡುವ ಕೆಲಸಗಳು ಸಿಟ್ಟು ಬಂದಾಗ ಕುಣಿಯುವುದು ಕಷ್ಟಕರ ಪರಿಸ್ಥಿತಿಯಲ್ಲಿ ಕಂಗಾಲಾಗುವುದು,ಮುಖದ ವಿವಿಧ ಭಂಗಿಗಳು,ಕಾರು ನಡೆಸುವುದು ಟೆಡ್ಡಿಯೊಂದಿಗೆ ವರ್ತಿಸುವುದು ಇವೆಲ್ಲವೂ ನೋಡುಗರನ್ನು ಮನದಣಿಯೆ ನಗಿಸುತ್ತವೆ. ಏನೋ ಒಂದು ಕೆಲಸ ಮಾಡಲು ಹೋಗಿ ಇನ್ನೇನೋ ಮಾಡುವುದು ಅದನ್ನು ಸರಿಪಡಿಸಲು ಹೋಗಿ ಮತ್ತೇನೋ ಮಾಡುವುದು, ಘಂಟೆಗಟ್ಟಲೆ ಏನೋ ಒಂದನ್ನು ಸಾಧಿಸಿ ಆಮೇಲೆ ಅಂತ್ಯದ ವೇಳೆಯಲ್ಲಿ ಸಂಪೂರ್ಣ ಹಾನಿ ಮಾಡಿಕೊಳ್ಳುವುದು, ಹೀಗೆ ಇನ್ನು ಏನೇನೋ ರೀತಿಯಲ್ಲಿ ನೋಡುಗನನ್ನು ನಗಿಸುವುದರಲ್ಲಿ ಯಶಸ್ವಿಯಾಗುತ್ತಾನೆ  ಈತ. ಕೆಲವೊಮ್ಮೆ ಸಮಯೋಚಿತ ನಿರ್ಧಾರ ತೆಗೆದುಕೊಂಡು ಕೊನೆಯಲ್ಲಿ ಎಲ್ಲರ ಮನ್ನಣೆಗೆ ಪಾತ್ರನಾಗುವಂತಹ ಸನ್ನಿವೇಶಗಳು, ಆಗ ಅವ್ನು ಸಂತಸ ಪಡುವುದು ಊಟಮಾಡುವಾಗ ತನಗೆ ತಿನ್ನಲಾಗದ್ದನ್ನು ಹೇಗಾದರೂ ಮಾಡಿ ಖಾಲಿ ಮಾಡಬೇಕೆಂದು ಅದನ್ನು ಅವಿಸಿಡುವುದು ಇತ್ಯಾದಿ ಇತ್ಯಾದಿ, Rowan Atkinson ಇನ್ನು ಹಲವು ಗಂಭೀರ ಚಲನ ಚಿತ್ರಗಳಲ್ಲೂ ಅಭಿನಯಿಸಿದ್ದಾನೆ,ಆದರೆ ಅಲ್ಲಿ ಈ ತರಹದ ಆಂಗಿಕ ಅಭಿನಯಗಳಿಲ್ಲಡಿದ್ದರು ಮಾತುಗಳಲ್ಲಿ ಸರಳವಾದ ಹಾಸ್ಯ ತುಂಬಿದೆ.

  ಇನ್ನು  ಚಾರ್ಲಿ ಚಾಪ್ಲಿನ್ ಬಗ್ಗೆ ಹೇಳುವುದಾದರೆ ಅವನೊಬ್ಬ ವಿಶಿಷ್ಟ ಕಲಾವಿದ. ಹಾಡು ನೃತ್ಯ ಅಭಿನಯ ಸಂಗೀತ ಹೀಗೆ ಹಲವಾರು ಕಲೆಗಳನ್ನು ಸಮರ್ಥವಾಗಿ ನಿರ್ವಹಿಸುವ ನಟ. ಕಪ್ಪು ಕೋಟು,ವಾಕಿಂಗ್ ಸ್ಟಿಕ್,ದೊಗಲೆ ಪ್ಯಾಂಟು ಬಂಡಿ ಟೊಪ್ಪಿ ಇವುಗಳು ಅವನ ಯಾವತ್ತು ವಸ್ತ್ರ. ಕಣ್ಣು ಹುಬ್ಬು ಹಾರಿಸುವುದು,ಸಣ್ಣ ಹಿಟ್ಲರ್ ಮೀಸೆ,ನಡೆಯುವ ಶೈಲಿ, ಕೈ ಕಾಲುಗಳನ್ನು ಬೀಸುವುದು,ಮಖಭಾವದಲ್ಲಿ ಮನಸ್ಸಿನಲ್ಲಿದ್ದುದನ್ನು ವ್ಯಕ್ತಪಡಿಸುವುದು, ಇವೆಲ್ಲವೂ ಅವನು ಜನರನ್ನು ನಗಿಸುವ ಮಾಧ್ಯಮ.
      ಹಿಟ್ಲರ್ ನ ಸರ್ವಾಧಿಕಾರಿ ನೀತಿಯನ್ನು ನೋಡಿ ಅವನನ್ನು ಅನುಕರಿಸಿ The Great  Dictator ಎಂಬ ಚಿತ್ರ ನಿರ್ಮಿಸಿದ.ಇದರಲ್ಲಿ ಗಂಭೀರ ಚಿಂತನೆಗಳಿದ್ದರೂ ಅವನ ಹಾಸ್ಯ ಪೂರಿತ ನಟನೆಯಿಂದ ಅದು ಕೇವಲ ಗಂಭೀರ ಚಿತ್ರವಾಗದೇ ನೋಡುಗನಿಗೆ ಪೂರ್ತಿ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಒಬ್ಬ ಸಾಧಾರಣ ಕ್ಷೌರಿಕ Dictator ನಂತೆ ಕಂಡು ಕೊನೆಯಲ್ಲಿ ಅವನು ಮಾಡುವ ಭಾಷಣ ಹಾಗು ಬೇಧ ಭಾವ ತೊರೆಯಬೇಕೆಂಬ ಸಂದೇಶ ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕಾದದ್ದು. ಚಾಪ್ಲಿನ್ ಸಮಕಾಲೀನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರಗಳನ್ನು ತಯಾರಿಸುತ್ತಿದ್ದ. The modern times ಎಂಬ ಇನ್ನೊಂದು ಚಿತ್ರ ಬಹುತೇಕ 'ಮೂಕಿ'ಯಾದರು ನಿರುದ್ಯೋಗ ಸಮಸ್ಯೆ ಹಾಗು ಆಹಾರಕ್ಕಾಗಿ ಪರದಾಡುವುದು,ಅವನಿಗೊಬ್ಬಳು ಗೆಳತಿ ಸಿಕ್ಕಿ ಅವಳೊಡನೆ ಮನೆ ಮಾಡುವ ಯೋಚನೆ ಮಾಡುವುದು,ಕೆಲವು ಬಾರಿ ಜೈಲಿಗೆ ಹೋಗಿ ಬರುವುದು,ತನ್ನ ಒಳ್ಳೆ ತನದಿಂದ ಎಲ್ಲರಲ್ಲಿಯೂ ಒಳ್ಳೆ ಹೆಸರು ಪಡೆದರು ಮಾಡುವ ಕೆಲಸದಲ್ಲಿ ಅರಿವಿಲ್ಲದೆ ವ್ಯತ್ಯಾಸವಾಗಿ ಬೇರೊಬ್ಬರಿಗೆ ತೊಂದರೆಯಾಗುವುದು ಕೊನೆಯಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿ ಅಲ್ಲಿ ಹಾಡುವುದು ನೃತ್ಯ ಮಾಡುವುದು ಇವನ್ನೆಲ್ಲ  ಮಾತಿಲ್ಲದೇಯೂ ಸಮರ್ಥವಾಗಿ ನಿರ್ವಹಿಸುವುದು ಚಾಪ್ಲಿನ್ ನ ನಟನಾ ಕೌಶಲವನ್ನು ತೋರಿಸುತ್ತದೆ. ಅವನು ಕೊನೆಯಲ್ಲಿ ಹೇಳುವ ಹಾಡು ಹಾಗು ಅವನ ನೃತ್ಯ  ವಿಶಿಷ್ಟವಾಗಿದ್ದು ಅವನ ಅವನ ಸಂಪೂರ್ಣ ಕೌಶಲ ಅದರಲ್ಲಿ ತಿಳಿಯುತ್ತದೆ.
          Mr Bean ಪಾತ್ರಧಾರಿ ಚಾಪ್ಲಿನ್ ನಿಂದ ಪ್ರಚೋದನೆ ಪಡೆದ ಮತ್ತು ಟಾಮ್ ಅಂಡ್ ಜೆರ್ರಿ ಯಲ್ಲಿ ಚಾಪ್ಲಿನ್ ನ ನಡೆ ಮತ್ತು ಓಡುವಿಕೆಯ ಸ್ವಲ್ಪ ಅನುಕರಣೆ ಕಾಣುತ್ತದೆಯಾದರೂ ಮೂರು ವಿಭಿನ್ನ ರೀತಿಯಲ್ಲಿ ಮನರಂಜನೆಗೆ ಮಾಧ್ಯಮವಾಗಿದೆ. ಇವು ಮೂರು ಆಂಗಿಕ  ನಟನೆಯಿಂದ ಸುಶೀಲ ಹಾಸ್ಯಗಳನ್ನು ಪ್ರತಿಬಿಂಬಿಸುತ್ತವೆ. ಈ ಮೂರು ಅಲ್ಲದೇ ಇನ್ನೂ ಹಲವು ಪ್ರಸಿದ್ಧವಿದ್ದರೂ ಇವುಗಳಷ್ಟು ಖ್ಯಾತಿ ಪೂರ್ಣತೆ ಅಥವಾ ಅನುಭವ ಅವಕ್ಕಿಲ್ಲ. ಹಿಂದಿನಿಂದಲೂ ನಾಟಕಗಳಲ್ಲಿ ವಿದೂಷಕರಿದ್ದು ಹಾಸ್ಯ ಮಾಡುತ್ತಿದ್ದರಾದರೂ ಅವರೇ ನಾಯಕರಾಗುತ್ತಿರಲಿಲ್ಲ. ನಾಯಕ,ಪ್ರತಿನಾಯಕ,ನಾಯಿಕೆಯರೆಲ್ಲರೂ ಬೇರೆ ಬೇರೆಯಾಗಿದ್ದು ಅವನೊಬ್ಬ ಪೋಷಕ ನಟ ಮಾತ್ರ ಆಗಿರುತ್ತಿದ್ದನಷ್ಟೇ!  (ನಾನು ಕೇಳಿದಂತೆ 'ಭಾಸ'ನ ಚಾರುದತ್ತ ಇದಕ್ಕೆ ಹೊರತಾದದ್ದು.) ಆದರೆ ಇದರಲ್ಲಿ ವಿದೂಷಕರೇ  ನಾಯಕರು ಅಥವಾ ಹಾಸ್ಯಗಾರ ನಾಯಕರು. ರಂಗದಲ್ಲಿ ವಿಭಿನ್ನ ಪ್ರಯೋಗ ಮಾಡಿ ಅವುಗಳ ಮುಖ್ಯ ಉದ್ದೇಶ ಈಡೇರಿಸಿದ್ದಾರೆ.
       ಹಿರಿಯರು ಮಕ್ಕಳ ಜೊತೆ ಕೂತು ನೋಡಬಹುದಾದ ಕಾರ್ಯಕ್ರಮಗಳು ಇಂದು ಬರುತ್ತಲೇ ಇಲ್ಲ, ಇಂತಹ ಸರಳ ಹಾಸ್ಯಗಾರರು ಕನ್ನಡದಲ್ಲಿಯೂ ಇದ್ದರೂ ಅವರು ಅಷ್ಟು ಪ್ರಸಿದ್ಧಿಗೆ ಬರಲಿಲ್ಲ.'ನಾ ನಾ ರೀತಿಯ ಕೊಲೆ ಧರೋಡೆಗಳನ್ನೇ ಪ್ರಧಾನವಾಗಿರಿಸಿಕೊಂಡು ಬರುತ್ತಿರುವ ಚಲನ ಚಿತ್ರಗಳನ್ನು ನೋಡಿ ನೋಡಿಯೇ ಒಬ್ಬ ವ್ಯಕ್ತಿ ಕೊಲೆಗಾರ ಅಥವಾ ರೌಡಿಯಾದ!' ಎಂದರೆ ಅದರಲ್ಲಿ ಆಶ್ಚರ್ಯಪಡುವಂತಹದ್ದೇನೂ ಇಲ್ಲ. ಅರೆಬೆತ್ತಲೆ ನೃತ್ಯ ,ಪ್ರೀತಿ ಪ್ರೇಮಗಳಿಗಾಗಿ ನಡೆವ ಜಗಳ ಹೊಡೆದಾಟ ಕೊಲೆ ಇವೆಲ್ಲವೂ ಮನರಂಜನೆ ನೀಡುತ್ತವೆ ಎಂದು ತಿಳಿದ ನಟ ನಿರ್ದೇಶಕ ಕಥೆಗಾರರು ತಮಗರಿವಿಲ್ಲದೆ ಸಮಾಜವನ್ನು ಕೆಡಿಸುತ್ತಿದ್ದಾರೆಂದರೆ ತಪ್ಪಲ್ಲ!
   ಭರತಮುನಿ 'ನಾಟ್ಯಶಾಸ್ತ್ರ'ದಲ್ಲಿ " ಸಾಯುವ ಸನ್ನಿವೇಶ,ಅಗ್ನಿ,ಮೈಥುನ ಕದನ ಇತ್ಯಾದಿಗಳನ್ನೆಲ್ಲ ರಂಗದ ಮೇಲೆ ತೋರಿಸಬಾರದು" ಎಂದಿದ್ದಾನೆ, ಅವುಗಳ ಮೂಲ ಉದ್ದೇಶ ಅರಿಯುವುದು ಅಗತ್ಯ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಎಂದರೂ ಮೇಲೆ ಹೇಳಿದ ಮೂರು ಹಾಸ್ಯಗಳ ಮೂಲ ಕರ್ತೃಗಳು ಪಾಶ್ಚಾತ್ಯರೇ ಆಗಿದ್ದಾರೆ. ದಿನ ರಾತ್ರಿ ಕ್ರೈಂ ಸುದ್ದಿಗಳೊಂದಿಗೆ ಮಲಗುವ ಜನರ ಮನಸ್ಸಿನಲ್ಲಿ ಶಾಂತಿ ಸಂತೋಷ ಮೂಡಲು ಹಾಸ್ಯ ಕಾರ್ಯಕ್ರಮಗಳನ್ನು ನೋಡಬೇಕು, ಅದು ಶುದ್ಧ ಸುಶೀಲವಾಗಿದ್ದರೆ ಉತ್ತಮ. ಭಾಷೆಯೊಂದೇ ಭಾವಾಭಿವ್ಯಕ್ತಿಗೆ ಮಾಧ್ಯಮವಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಸ್ವಭಾಷಾಭಿಮಾನ ಇರಲಿ ಅನ್ಯ ಭಾಷಾ ದ್ವೇಷ ಬೇಡ. " ನೂರು ಮತದ ಹೊಟ್ಟ ತೂರಿ ಎಲ್ಲ ತತ್ತ್ವದೆಲ್ಲೆ ಮೀರಿ" ಎಂಬ ಕವಿ ವಾಣಿ ಸಾರಿದ ಸತ್ಯವನ್ನು ಅಳವಡಿಸಿಕೊಳ್ಳುವುದರ ಮೂಲಕ ಜೀವನದಲ್ಲಿ ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳೋಣ,ಸಂತಸವನ್ನು ಹೊಂದೋಣ.
   ಭದ್ರಂ ಕರ್ಣೇಭಿ: ಶೃಣುಯಾಮ ದೇವಾ: ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:
ಸ್ಥಿರೈರಂಗೈ: ಸ್ತುಷ್ಟುವಾಂ ಸಸ್ತನೂಭಿ: ವ್ಯಶೇಮ ದೇವ ಹಿತಂ ಯದಾಯು:
ಸ್ವಸ್ತಿ ನ ಇಂದ್ರೋ ವೃದ್ಧ ಶ್ರವಾ: ಸ್ವಸ್ತಿ ನಃ ಪೂಷಾ ವಿಶ್ವ ದೇವಾ:
ಸ್ವಸ್ತಿ ನಸ್ತಾರ್ಕ್ಷೋ ಅರಿಷ್ಟನೇಮಿ: ಸ್ವಸ್ತಿ ನೋ ಬೃಹಸ್ಪತಿರ್ದಧಾತು
ಓಂ ಶಾಂತಿ:ಶಾಂತಿ:ಶಾಂತಿ: