Powered By Blogger

ಭಾನುವಾರ, ಆಗಸ್ಟ್ 30, 2020

ವೈನತೇಯವಿಜಯಂ- ಗರುಡನ ಕಥೆ-೪

(ಸಮುದ್ರಮಥನ ಆದಾಗ ಹುಟ್ಟಿದ ಉಚ್ಚೈಶ್ರವಸ್ಸು ಎಂಬ ಕುದುರೆಯ ವಿಷಯದಲ್ಲಿ ಕದ್ರು ಹಾಗೂ ವಿನತೆಯರು  ಪಂದ್ಯ ಕಟ್ಟಿಕೊಂಡ ಕಥೆ. ಕದ್ರು ಮಕ್ಕಳಿಗೆ ಶಾಪ ಕೊಟ್ಟ ಕಥೆ)

 ವ॥ ಅಂತಿರಲತ್ತಲ್ ದೇವದಾನವರ್ಕಳ್ ಕ್ಷೀರಸಾಗರಮಂ ಮಥಿಸೆ ಐರಾವತಮುಂ ಉಚ್ಛೈಶ್ರವಸ್ಸುಂ ಸಕಲಸಂಪತ್ತಿಯುಂ ಲಕ್ಷ್ಮಿಯುಂ ಪೆಱೆಯುಂ ಬಹುವಿಧದ ಜೀವಜಂತುಗಳುಂ ಕಲ್ಪವೃಕ್ಷಮುಂ ಕಾಮಧೇನುವುಂ ದೊರೆತುದುಂ ತನ್ಮಧ್ಯದೊಳ್ ಕಾಲಕೂಟಮೆಂಬ ವಿಷಮುಂ ದೊರೆಕೊಂಡುದುಂ ಶಿವನಾ ಕಾಲಕೂಟಮಂ ಕುಡಿಯಲ್ ತಗುಳ್ದು ಪಾರ್ವತಿಯು ಕೊರಳೊಳೆ ತಡೆದುದುಂ ಸರ್ಪದಿಂ ಪಾರ್ವತಿ ಗರಳಮಂ ಶಿವನ ಕಂಠದೊಳೆ ಬಂಧಿಸೆ ಶಿವಂ ಸರ್ಪಾಭರಣನಾದುದುಂ ನೀಲಕಂಠನಾದುದುಂ ಅಂತ್ಯದೊಳ್ ಅಮೃತಮುಂ ದೊರೆತುದುಂ ಮೋಹಿನಿಯ ರೂಪಿಂ ಮಹಾವಿಷ್ಣುವು ದಾನವರ್ಕಳಂ ಬಂಚಿಸಿ ದೇವರ್ಕಳದಂ ಪಡೆದು ಕುಡಿದು ಬರ್ದಿಲರಾದುದುಂ ದುರದೃಷ್ಟವಶಾತ್ ಅಮರ್ದಂ ರಕ್ಕಸನೊರ್ವಂ ಕುಡಿಯಲ್ ವಿಷ್ಣುವಿನ ಚಕ್ರಾಯುಧದಿಂದವನ ಕೊರಳ್ ಕಳ್ತರಿಸಿ ರಾಹುಕೇತುವೆಂಬೆರಡು ಗರಂಗಳಾಗಿ ಆತಂ ಚಲಿಸುತ್ತುಮಿರ್ಪುದುಂ ಐರಾವತಮೆಂಬಾನೆಯಂ ಉಚ್ಛೈಶ್ರವಸ್ಸೆಂಬ ಕುದುರೆಯಂ ಸಂಪತ್ತಿಯಂ ಕಲ್ಪವೃಕ್ಷಕಾಮಧೇನುಗಳಂ ಸಕಲಮಂ ಇಂದ್ರಂ ಕೊಂಡುದುಂ ಬೞಿಕಂ ಮತ್ತೆ ದೇವದಾನವರ್ಕಳೊಳ್ ಯುದ್ಧಮಾದುದುಂ ದಾನವರ್ಕಳ್ ಸೋಲ್ತುದುಂ ಅಮರ್ದಂ ಸುರೇಂದ್ರಂ ಕಾಪಿಟ್ಟುದುಂ ಸಂದತ್ತು ಅಂತಲ್ಲದೆಯುಂ

(ಅಂತಿರಲ್-ಹೀಗಿರಲು, ಅತ್ತಲ್-ಅತ್ತ, ದೇವದಾನವರ್ಕಳ್-ದೇವತೆಗಳೂ ರಾಕ್ಷಸರೂ, ಕ್ಷೀರಸಾಗರಮಂ-ಕ್ಷೀರಸಾಗರವನ್ನು/ಹಾಲ್ಗಡಲನ್ನು, ಮಥಿಸೆ-ಕಡೆಯಲು, ಐರಾವತಮುಂ-ಐರಾವತವೆಂಬ ಆನೆಯೂ, ಉಚ್ಛೈಶ್ರವಸ್ಸುಂ-ಉಚ್ಛೈಶ್ರವಸ್ಸೆಂಬ ಕುದುರೆಯೂ, ಸಕಲಸಂಪತ್ತಿಯುಂ-ಎಲ್ಲಾ ಸಂಪತ್ತುಗಳೂ, ಲಕ್ಷ್ಮಿಯುಂ-ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯೂ, ಪೆಱೆಯುಂ-ಚಂದ್ರನೂ, ಬಹುವಿಧದ- ಹಲವು ಬಗೆಯಾದ, ಜೀವಜಂತುಗಳುಂ-ಜೀವಜಂತುಗಳೂ, ಕಲ್ಪವೃಕ್ಷಮುಂ-ಕೇಳಿದ್ದನ್ನು ಕೊಡುವ ಕಲ್ಪವೃಕ್ಷವೆಂಬ ಮರವೂ, ಕಾಮಧೇನುವುಂ-ಬಯಸಿದ್ದನ್ನು ನೀಡುವ ಕಾಮಧೇನುವೆಂಬ ಹಸುವೂ, ದೊರೆತುದುಂ-ಸಿಕ್ಕಿರುವುದೂ, ತನ್ಮಧ್ಯದೊಳ್-ಅದರ ಮಧ್ಯದಲ್ಲಿ, ಕಾಲಕೂಟಮೆಂಬ-ಕಾಲಕೂಟವೆಂಬ,  ವಿಷಮುಂ-ವಿಷವೂ ದೊರೆಕೊಂಡುದುಂ-ದೊರೆತಿರುವುದೂ, ಶಿವನಾ(ಶಿವಂ+ಆ)-ಮಹಾಶಿವನು ಆ, ಕಾಲಕೂಟಮಂ-ಕಾಲಕೂಟವೆಂಬ ವಿಷವ್ನು, ಕುಡಿಯಲ್-ಕುಡಿಯುವುದಕ್ಕೆ, ತಗುಳ್ದು-ತೊಡಗಿ, ಪಾರ್ವತಿಯು-ಶಿವನ ಪತ್ನಿಯಾದ ಗಿರಿಜೆಯು, ಕೊರಳೊಳೆ-ಶಿವನ ಗಂಟಲಲ್ಲಿಯೇ, ತಡೆದುದುಂ-ವಿಷವನ್ನು ತಡೆಹಿಡಿದುದೂ, ಸರ್ಪದಿಂ-ಹಾವಿನಿಂದ, ಪಾರ್ವತಿ-ಪರಮೇಶ್ವರಿಯು, ಗರಳಮಂ-ವಿಷವನ್ನು, ಶಿವನ-ಶಿವನ, ಕಂಠದೊಳೆ-ಗಂಟಲಿನಲ್ಲಿಯೆ, ಬಂಧಿಸೆ-ಕಟ್ಟಿರಲು, ಶಿವಂ-ಪರಮೇಶ್ವರನು, ಸರ್ಪಾಭರಣನಾದುದುಂ-ಹಾವನ್ನೇ ಆಭರಣವಾಗಿ ಧರಿಸಿದವನಾದದ್ದೂ, ನೀಲಕಂಠನಾದುದುಂ-ಕಪ್ಪಾದ ಗಂಟಲನ್ನು ಹೊಂದಿದವನಾದುದೂ, ಅಂತ್ಯದೊಳ್-ಕೊನೆಯಲ್ಲಿ, ಅಮೃತಮುಂ-ಅಮೃತವೂ, ದೊರೆತುದುಂ-ದೊರೆತದ್ದೂ, ಮೋಹಿನಿಯ ರೂಪಿಂ-ಮೋಹಿನಿಯೆಂಬ ಸ್ತ್ರೀಯ ಅವತಾರದಲ್ಲಿ, ಮಹಾವಿಷ್ಣುವು-ಶ್ರೀಮನ್ನಾರಾಯಣನು, ದಾನವರ್ಕಳಂ-ರಾಕ್ಷಸರಿಗೆ, ಬಂಚಿಸಿ-ವಂಚನೆ ಮಾಡಿ, ದೇವರ್ಕಳ್-ದೇವತೆಗಳು, ಅದಂ-ಅದನ್ನು, ಪಡೆದು-ಹೊಂದಿ, ಕುಡಿದು-ಕುಡಿದು, ಬರ್ದಿಲರ್-ಮುಪ್ಪಿಲ್ಲದವರು, ಆದುದುಂ-ಆದದ್ದೂ, ದುರದೃಷ್ಟವಶಾತ್-ದುರದೃಷ್ಟದಿಂದ, ಅಮರ್ದಂ-ಅಮೃತವನ್ನು, ರಕ್ಕಸನೊರ್ವಂ(ರಕ್ಕಸಂ+ಒರ್ವಂ)-ರಾಕ್ಷಸನೊಬ್ಬನು, ಕುಡಿಯಲ್-ಕುಡಿದುಬಿಡಲು, ವಿಷ್ಣುವಿನ-ಶ್ರೀಹರಿಯ, ಚಕ್ರಾಯುಧದಿಂದ-ಚಕ್ರವೆಂಬ ಆಯುಧದಿಂದ, ಅವನ-ಆ ರಾಕ್ಷಸನ, ಕೊರಳ್-ಕುತ್ತಿಗೆಯು, ಕಳ್ತರಿಸಿ-ಕತ್ತರಿಸಲ್ಪಟ್ಟು, ರಾಹುಕೇತುವೆಂಬೆರಡು-ರಾಹು ಮತ್ತು ಕೇತು ಎಂಬ ಎರಡು, ಗರಂಗಳಾಗಿ-ಗ್ರಹಗಳಾಗಿ, ಆತಂ-ಆ ರಾಕ್ಷಸನು, ಚಲಿಸುತ್ತುಂ-ಚಲಿಸುತ್ತಾ, ಇರ್ಪುದುಂ-ಇರುವುದೂ, ಐರಾವತಮೆಂಬಾನೆಯಂ-ಐರಾವತವೆಂಬ ಆನೆಯನ್ನು, ಉಚ್ಛೈಶ್ರವಸ್ಸೆಂಬ-ಉಚ್ಚೈಶ್ರವಸ್ಸು ಎಂಬ, ಕುದುರೆಯಂ-ಕುದುರೆಯನ್ನು,, ಸಂಪತ್ತಿಯಂ-ಸಂಪತ್ತುಗಳೆಲ್ಲವನ್ನು, ಕಲ್ಪವೃಕ್ಷಕಾಮಧೇನುಗಳಂ-ಕಲ್ಪವೃಕ್ಷಕಾಮಧೇನುಗಳನ್ನು, ಸಕಲಮಂ-ಎಲ್ಲವನ್ನೂ, ಇಂದ್ರಂ-ಇಂದ್ರನು, ಕೊಂಡುದುಂ-ತೆಗೆದುಕೊಂಡದ್ದೂ, ಬೞಿಕಂ-ಆ ಬಳಿಕ, ಮತ್ತೆ-ಇನ್ನೊಮ್ಮೆ, ದೇವದಾನವರ್ಕಳೊಳ್-ದೇವತೆಗಳು ಹಾಗೂ ದಾನವರ ಮಧ್ಯೆ, ಯುದ್ಧಮಾದುದುಂ-ಯುದ್ಧವಾದದ್ದೂ, ದಾನವರ್ಕಳ್-ದಾನವರು, ಸೋಲ್ತುದುಂ-ಸೋತುಹೋದದ್ದೂ, ಅಮರ್ದಂ-ಅಮೃತವನ್ನು, ಸುರೇಂದ್ರಂ-ದೇವೇಂದ್ರನು, ಕಾಪಿಟ್ಟುದುಂ-ಕಾಪಾಡಿಕೊಂಡು ಇಟ್ಟಿರುವುದೂ, ಸಂದತ್ತು-ಆಗಿತ್ತು, ಅಂತಲ್ಲದೆಯುಂ-ಹಾಗಲ್ಲದೇ-)


ಚಂ॥ ವಿನತೆಯೊ ತನ್ನಪುತ್ರರನೆ ಕಾಣುವ ವಾಂಛೆಯೊಳಿರ್ಕೆ ಕದ್ರುವುಂ

ವಿನುತಸಹಸ್ರಪುತ್ರಪರಿಪಾಲನಕರ್ಮದೆ ನೋಂತು ನಿಂತಿರಲ್

ಘನತರಮಾದುವೆಲ್ಲಮಿವು ಗಾಥೆಗಳಾದುವು ಕಾಲಯಂತ್ರದಿಂ

ದೆನೆ ಮನೆವಾೞ್ತೆಯೊಳ್ ತಗುಳಲಾರ್ ಕುತುಕರ್ ಗಡ ಲೋಕವಾರ್ತೆಯೊಳ್ ॥೬೪॥

(ಟೀ-ವಿನತೆಯೊ-ವಿನತೆಯಾದರೋ, ತನ್ನ ಪುತ್ರರನೆ- ತನ್ನ ಮಕ್ಕಳನ್ನು, ಕಾಣುವ-ನೋಡುವ, ವಾಂಛೆಯೊಳ್-ಬಯಕೆಯಲ್ಲಿ, ಇರ್ಕೆ-ಇರಲಿ, ಕದ್ರುವುಂ-ಕದ್ರುವೂ, ವಿನುತ-ಸಹಸ್ರ-ಪುತ್ರ-ಪರಿಪಾಲನ-ಕರ್ಮದೆ-ವಿನುತರಾದ ಸಾವಿರ ಮಕ್ಕಳನ್ನು ಪರಿಪಾಲಿಸುವ ಕೆಲಸದಲ್ಲಿ, ನೋಂತು-ವ್ರತಳಾಗಿ, ನಿಂತಿರಲ್-ನಿಂತಿರಲು, ಘನತರಮಾದುವು-ದೊಡ್ಡದು ಎಂದೆನಿಸಿರುವ, ಎಲ್ಲಂ+ಇವು-ಈ ಘಟನೆಗಳೆಲ್ಲವೂ, ಕಾಲಯಂತ್ರದಿಂದ-ಕಾಲವೆಂಬ ಯಂತ್ರದಿಂದ, ಗಾಥೆಗಳಾದುವು-(ಕೇವಲ)ಕಥೆಗಳಾದವು, ಎನೆ-ಎನ್ನಲು, ಮನೆವಾೞ್ತೆಯೊಳ್-ಮನವಾರ್ತೆಯಲ್ಲಿ/ಮನೆಯ ಕೆಲಸದಲ್ಲಿ, ತಗುಳಲ್ -ತೊಡಗಿಕೊಳ್ಳಲು, ಆರ್ ಗಡ-ಯಾರು ತಾನೇ, ಲೋಕವಾರ್ತೆಯೊಳ್-ಜಗತ್ತಿನಲ್ಲಿ ನಡೆಯುವ ಘಟನೆಗಳ ಕುರಿತು/ಲೋಕವ್ಯಾಪಾರದಲ್ಲಿ, ಕುತುಕರ್-ಕುತೂಹಲವುಳ್ಳವರಾಗುತ್ತಾರೆ?

ಚಂಪಕಮಾಲಾವೃತ್ತ, ಸಮುದ್ರಮಥನ, ದೇವದಾನವರ ಯುದ್ಧ ಇವೆಲ್ಲವೂ ಜಗತ್ತಿನ ದೃಷ್ಟಿಯಲ್ಲಿ ದೊಡ್ಡ ಘಟನೆಗಳಾದರೂ, ವಿನತೆ ಹಾಗೂ ಕದ್ರುವಿಗೆ ತಮ್ಮ ಮಕ್ಕಳನಿರೀಕ್ಷೆ ಹಾಗೂ ಪರಿಪಾಲನೆಯ ಕರ್ಮದಲ್ಲಿ ತೊಡಗಿಕೊಂಡ ಕಾರಣ ಕುತೂಹಲವನ್ನು ಉಂಟು ಮಾಡದೇ ಹೋಯಿತು. ಅವೆಲ್ಲವೂ ಕೇವಲ ಕಥೆಗಳಾಗಿ ಕೇಳಲ್ಪಟ್ಟವು ಅಷ್ಟೇ ಎಂದು ತಾತ್ಪರ್ಯ. "ಮನೆವಾಳ್ತೆಯಲ್ಲಿ ಮುಳುಗಿದವರಿಗೆ ಯಾರಿಗೆ ತಾನೇ ಲೋಕವಾರ್ತೆಯಲ್ಲಿ  ಕುತೂಹಲವಿರುತ್ತದೆ" ಎಂಬಲ್ಲಿ ಅರ್ಥಾಂತರ ನ್ಯಾಸಾಲಂಕಾರವೂ ಇದೆ.)


ವ॥ ಅಂತಾದೊಡಂ ಆಪ್ತರುಂ  ಸಖಿಯರುಂ ಪುನಃಪುನರಪಿ ಪೇೞುತ್ತಿರಲ್ಕೆ ಕುತೂಹಲಂದಾಳ್ದು ಕೇಳುತ್ತುಂ ಸಮುದ್ರಮಥನಕಥಾನಕಮಂ ತಿಳಿದರ್ ಅದೆಂತೆನೆ-

(ಅಂತಾದೊಡಂ-ಹಾಗಿರಲು, ಆಪ್ತರುಂ-ಆಪ್ತರಾದವರೂ,  ಸಖಿಯರುಂ-ಗೆಳತಿಯರೂ, ಪುನಃಪುನರಪಿ-ಮತ್ತೆ ಮತ್ತೆ, ಪೇೞುತ್ತಿರಲ್ಕೆ-ಹೇಳುತ್ತಿರುವಾಗ, ಕುತೂಹಲಂದಾಳ್ದು(ಕುತೂಹಲಂ+ತಾಳ್ದು)-ಕುತೂಹಲವನ್ನು ಹೊಂದಿ,  ಕೇಳುತ್ತುಂ-ಕೇಳುತ್ತಾ, ಸಮುದ್ರಮಥನಕಥಾನಕಮಂ-ಸಮುದ್ರಮಥನದ ಕಥೆಯನ್ನು, ತಿಳಿದರ್-ತಿಳಿದುಕೊಂಡರು, ಅದೆಂತೆನೆ-ಅದು ಹೇಗೆಂದರೆ-)


ಕಂ॥ ಮರನೊಳ್ ಬೇರ್ಗಳ್ ಕುಡಿಯಲ್

ಭರದಿಂದಂ ನೀರನಂತು ಚಿಗುರೆಲೆಗಳ್ ತಾಂ 

ಸೊರಗದೆ ಪಡೆವವೊಲೆಲ್ಲರ್

ನಿರುತಂ ತಮ್ಮಾಪ್ತರಿಂದೆ ತಿಳಿವರ್ ಜಗಮಂ ॥೬೫॥

(ಟೀ-ಮರನೊಳ್-ಮರದಲ್ಲಿ, ಬೇರ್ಗಳ್-ಬೇರುಗಳು, ಭರದಿಂದಂ-ಭರದಲ್ಲಿ/ವೇಗವಾಗಿ, ನೀರಂ-ನೀರನ್ನು, ಕುಡಿಯಲ್-ಕುಡಿಯಲು, ಅಂತು-ಹಾಗೆ, ಚಿಗುರೆಲೆಗಳ್-ಚಿಗುರು ಹಾಗೂ ಎಲೆಗಳು, ತಾಂ-ತಾವು, ಸೊರಗದೆ-ಸೊರಗದೇ, ಪಡೆವವೊಲ್- (ನೀರನ್ನು) ಪಡೆಯುವಂತೆ, ಎಲ್ಲರ್-ಎಲ್ಲರೂ, ನಿರುತಂ-ಸದಾಕಾಲ, ತಮ್ಮ+ಆಪ್ತರಿಂದೆ-ತಮಗೆ ಆಪ್ತರಾದವರಿಂದ/ಪ್ರೀತಿಪಾತ್ರರಿಂದ,ಜಗಮಂ-ಜಗತ್ತನ್ನು, ತಿಳಿವರ್-ತಿಳಿಯುತ್ತಾರೆ. ಕಂದಪದ್ಯ.)


ವ॥ ಅಂತು ಕೇಳ್ದು ತಿಳಿದ ಕಥೆಗಳಂ ಕದ್ರೂವಿನತೆಯರ್ ಗೞಪುತ್ತುಮಿರಲ್ಕೆ ವಿನತೆಯೆಂದಳ್

(ಅಂತು-ಹಾಗೆ, ಕೇಳ್ದು-ಕೇಳಿಕೊಂಡು, ತಿಳಿದ-ತಿಳಿದ, ಕಥೆಗಳಂ-ಕಥೆಗಳನ್ನು, ಕದ್ರುೂವಿನತೆಯರ್-ಕದ್ರು ಹಾಗೂ ವಿನತೆಯರಿಬ್ಬರೂ, ಗೞಪುತ್ತುಂ- ಮಾತನಾಡುತ್ತ,ಇರಲ್ಕೆ- ಇರುವಾಗ, ವಿನತೆಯೆಂದಳ್- ವಿನತೆ ಹೇಳಿದಳು-)


ಪೃ॥ ಸಮುದ್ರಮಥನಕ್ಕೆನಲ್ ಸುರರೆ ದಾನವರ್ಕಳ್ ಗಡಾ

ಸಮಂತು ಬೆರೆತೆಂತುಟೋ ಕಡೆಯೆ ಪುಟ್ಟಿತೆಲ್ಲಂ ಗಡಾ

ದ್ರುಮಂ ಸಕಲವಾಂಛೆಯಂ ಕುಡುವುದುಂ ಬೞಿಕ್ಕಂ ಗಡಾ

ಕ್ರಮೇಣ ಗಜವಾಜಿಗಳ್ ಪೆಱೆಯ ಬಣ್ಣಮೆಂಬರ್ ಗಡಾ ॥೬೬॥

(ಟೀ-ಸಮುದ್ರಮಥನಕ್ಕೆ-ಸಮುದ್ರವನ್ನು ಕಡೆಯುವುದಕ್ಕೆ, ಎನಲ್-ಎನ್ನಲು, ಸುರರೆ-ದಾನವರ್ಕಳ್ ಗಡಾ-ದೇವತೆಗಳು ರಾಕ್ಷಸರೂ ಅಂತೆ,  ಸಮಂತು-ಚೆನ್ನಾಗಿ, ಬೆರೆತು- ಸೇರಿಕೊಂಡು, ಎಂತುಟೋ-ಹೇಗೋ, ಕಡೆಯೆ-ಕಡೆಯಲು, ಎಲ್ಲಂ- ಎಲ್ಲವೂ, ಪುಟ್ಟಿತು ಗಡಾ-ಹುಟ್ಟಿತಂತೆ, ಸಕಲವಾಂಛೆಯಂ-ಬಯಸಿದ್ದು ಎಲ್ಲವನ್ನೂ, ಕುಡುವುದುಂ-ಕೊಡುವುದೂ (ಆದ) ದ್ರುಮಂ-ಮರವು, ಬೞಿಕ್ಕಂ ಗಡಾ-ಆಮೇಲೆ ಅಂತೆ, ಕ್ರಮೇಣ-ಕ್ರಮದಲ್ಲಿ, ಗಜವಾಜಿಗಳ್-ಆನೆ ಕುದುರೆಗಳು, ಪೆಱೆಯ-ಚಂದ್ರನ, ಬಣ್ಣಂ- ವರ್ಣದವು,ಎಂಬರ್ ಗಡಾ-ಎನ್ನುತ್ತಾರಂತೆ. ಪೃಥ್ವಿ ವೃತ್ತ. ತಾತ್ಪರ್ಯದಲ್ಲಿ ವಿನತೆಯು “ದೇವತೆಗಳೂ ದಾನವರೂ ಸೇರಿಕೊಂಡರಂತೆ, ಸಮುದ್ರವನ್ನು ಕಡೆದರಂತೆ, ಕಲ್ಪವೃಕ್ಷವು,ಐರಾವತವು ಎಲ್ಲ ಹುಟ್ಟಿತಂತೆ.."ಎಂದು ಪರೋಕ್ಷದಲ್ಲಿ ನಡೆದ ಘಟನೆಯನ್ನು ಹೇಳುತ್ತಿರುವುದು ಇಲ್ಲಿಯ ವಿಶೇಷ. ಹಳಗನ್ನಡದಲ್ಲಿ ವ್ಯರ್ಥಪದಗಳು/ಪಾದಪೂರಣಗಳು ಎಂದು ಹೇಳುವ ದಲ್, ಗಡಾ, ವಲಂ ಮೊದಲಾದ ಶಬ್ದಗಳನ್ನು ಈ ರೀತಿಯಲ್ಲಿ “ಹಾಗಂತೆ ಹೀಗಂತೆ” ಎಂದು ಹೇಳುವ ನುಡಿಗಟ್ಟಿನಂತೆ ಬಳಸುವುದನ್ನು ಕಾಣಬಹುದು. ಉಾಹರಣೆಗೆ ರನ್ನನ “ಓಜಂ ಗಡ! ಚಿಃ ಭಾರದ್ವಾಜಂ ಗಡ!..” ಎಂಬ ಪದ್ಯವನ್ನು ನೋಡಬಹುದು.)


ಕಂ॥ ಮೊಸರಂ ಕಡೆಯಲ್ ಪುಟ್ಟಿದ

ಪೊಸತೆನಲಾ ಬೆಣ್ಣೆಯಂತೆ ಕಡಲಂ ಕಡೆಯಲ್

ಜಸದಿಂ ಪೂರ್ಣಂ ಬೆಳ್ಪಾಂ-

ತೆಸೆಗುಂ ಗಡಮೆಂಬರಲ್ತೆ ವಾಜಿಗಜಂಗಳ್ ॥೬೭॥

(ಟೀ-ಮೊಸರಂ-ಮೊಸರನ್ನು, ಕಡೆಯಲ್-ಕಡೆಯಲು, ಪೊಸತೆನಲ್-ಹೊಸದು ಎಂಬಂತೆ, ಪುಟ್ಟಿದ-ಹುಟ್ಟಿದ, ಆ ಬೆಣ್ಣೆಯಂತೆ-ಆ ಬೆಣ್ಣೆಯ ಹಾಗೆ, ಕಡಲಂ-ಸಾಗರವನ್ನು, ಕಡೆಯಲ್-ಕಡೆಯುತ್ತಿರಲು, ಜಸದಿಂ-ಯಶಸ್ಸಿನಿಂದ, ವಾಜಿಗಜಂಗಳ್-ಕುದುರೆ ಹಾಗೂ ಆನೆಗಳು/ಉಚ್ಚೈಶ್ರವಸ್ಸು ಹಾಗೂ ಐರಾವತಗಳು, ಪೂರ್ಣಂ-ಸಂಪೂರ್ಣವಾಗಿ, ಬೆಳ್ಪಾಂತು (ಬೆಳ್ಪು+ಆಂತು)-ಬಿಳಿಯ ಬಣ್ಣವನ್ನು ಹೊಂದಿ, ಎಸೆಗುಂ ಗಡಂ-ಶೋಭಿಸುತ್ತದೆಯಂತೆ, ಎಂಬರಲ್ತೆ-ಎನ್ನುತ್ತಾರಲ್ಲವೇ! ಕಂದಪದ್ಯ)


ವ॥ ಅಂತೆನೆ ಕದ್ರುವು ಸಹೋದರಿಯೊಳ್ ಸಾಪತ್ನಮಿರ್ಪುದರಿಂದಂ ಮೇಣ್ ತಾನೇ ಪೆರ್ಚಂ ತಿಳಿದಿರ್ಪೆನೆಂದು ಮಿಗೆ  ತೋರಿಸಲ್ವೇಳ್ಕುಮೆಂದುಂ ಯೋಚಿಸಿ ಪೇೞ್ದಪಳ್

(ಅಂತೆನೆ-ಹಾಗೆನ್ನಲು, ಕದ್ರುವು-ಕದ್ರುವು, ಸಹೋದರಿಯೊಳ್-ಸಹೋದರಿಯಾದ ವಿನತೆಯಲ್ಲಿ, ಸಾಪತ್ನಂ-ದ್ವೇಷ/ಸವತಿಯ ಮತ್ಸರ, ಇರ್ಪುದರಿಂದಂ-ಇರುವುದರಿಂದಲೂ, ಮೇಣ್-ಹಾಗೂ, ತಾನೇ-ತಾನೇ, ಪೆರ್ಚಂ-ಹೆಚ್ಚನ್ನು, ತಿಳಿದಿರ್ಪೆನೆಂದು-ತಿಳಿದಿದ್ದೇನೆಂದು, ಮಿಗೆ-ಅತಿಶಯವಾಗಿ,  ತೋರಿಸಲ್+ವೇಳ್ಕುಂ- ತೋರಿಸಬೇಕು, ಎಂದುಂ-ಎಂದೂ, ಯೋಚಿಸಿ-ಆಲೋಚಿಸಿ, ಪೇೞ್ದಪಳ್-ಹೇಳಿದಳು)


ಕಂ॥ ಅಲ್ತಲ್ತು ವಾಜಿ ಬೆಣ್ಣೆಯ

ವೊಲ್, ತಾಳ್ದುರು ಕಾಂತಿಯೊಳ್ ಕಲಂಕದ ಪಾಂಗಿಂ

ಮೇಲ್ ತಗುಳ್ದು ನೋಡೆ ಪೆಱೆಯಂ

ಪೋಲ್ತಿರ್ಕುಂ ಬಾಲಮೊಂದೆ ಕರ್ಪೆನಿಸಿರ್ಕುಂ ॥೬೮॥

(ಟೀ- ವಾಜಿ-ಕುದುರೆಯು, ಬೆಣ್ಣೆಯವೊಲ್-ಬೆಣ್ಣೆಯಂತೆ, ಅಲ್ತಲ್ತು-ಅಲ್ಲ ಅಲ್ಲ (ಅಲ್ಲವೇ ಅಲ್ಲ), ತಾಳ್ದ-ಹೊಂದಿದ, ಉರುಕಾಂತಿಯೊಳ್-ಅತಿಶಯವಾದ ಕಾಂತಿಯಲ್ಲಿ, ಮೇಲ್-ಮೇಲೆ, ಕಲಂಕದ-ದೋಷದ/ಕಳಂಕದ, ಪಾಂಗಿಂ-ಹಾಗೆ ತಗುಳ್ದು-ಹತ್ತಿಕೊಂಡು, ನೋಡೆ-ನೋಡಲು, ಪೆಱೆಯಂ-ಚಂದ್ರನನ್ನು, ಪೋಲ್ತಿರ್ಕುಂ-ಹೋಲುತ್ತಿರುವುದು, ಬಾಲಮೊಂದೆ-ಬಾಲವೊಂದೇ, ಕರ್ಪೆನಿಸಿರ್ಕುಂ-ಕಪ್ಪು ಎನ್ನಿಸಿದೆ. ಕಂದಪದ್ಯ)


ವ॥ ಅಂತೆನೆ ವಿನತೆಗೆ ಕದ್ರು ಪುಸಿಯನಾಡುತ್ತಿರ್ಪಳೆಂದು ತಿಳಿದು ಸಪತ್ನೀಮತ್ಸರಂಬೆರಸು ಚಿಂತಿಸಿ ಅವಳಂ ಗೆಲಲ್ಕೆ ಅವಕಾಶಂ ದೊರೆತುದೆನುತೆ ಪರಿಣಾಮಮಂ ಚಿಂತಿಸದೆ ಪೇೞ್ದಪಳ್

(ಅಂತೆನೆ-ಹಾಗೆನ್ನಲು, ವಿನತೆಗೆ-ವಿನತೆಗೆ, ಕದ್ರು-ಕದ್ರುವು, ಪುಸಿಯಂ-ಸುಳ್ಳನ್ನು, ಆಡುತ್ತಿರ್ಪಳ್-ಹೇಳುತ್ತಿದ್ದಾಳೆ, ಎಂದು-ಎಂದು, ತಿಳಿದು-ತಿಳಿದು, ಸಪತ್ನೀಮತ್ಸರಂಬೆರಸು-(ಸಪತ್ನೀ+ಮತ್ಸರಂ+ಬೆರೆಸು)-ಸವತಿಯ ಮತ್ಸರವನ್ನು ಬೆರೆಸಿ, ಚಿಂತಿಸಿ-ಯೋಚಿಸಿ, ಅವಳಂ-ಅವಳನ್ನು, ಗೆಲಲ್ಕೆ-ಗೆಲ್ಲುವುದಕ್ಕೆ, ಅವಕಾಶಂ-ಅವಕಾಶವು/ಸಂದರ್ಭವು, ದೊರೆತುದು- ದೊರಕಿದೆ/ಸಿಕ್ಕಿದೆ, ಎನುತೆ-ಎಂದು, ಪರಿಣಾಮಮಂ-ಮುಂದೆ ಆಗುವುದನ್ನು/ ಫಲವನ್ನು, ಚಿಂತಿಸದೆ-ಯೋಚಿಸದೇ, ಪೇೞ್ದಪಳ್-ಹೇಳಿದಳು-)


ಚಂ॥ ಎಲಗೆ ವಿಚಿತ್ರಮಾಯ್ತು ಭವದೀಯವಚೋವಿಭವಂ ತುರಂಗಮಂ

ಸುಲಲಿತಮಾಗಿ ಪಾಂಡುಮಯಮಾದುದೆನುತ್ತಿರಲುಚ್ಚಕೋಟಿಯಂ

ಕಲಿತಕಲಂಕಮೆಂದು ಪುಸಿಯಾಡಿದೆಯೌ ಪುಸಿಯಲ್ಲದಿರ್ದೊಡಂ

ನೆಲಸೆುವೆನೊಪ್ಪಿ ದಾಸಿ ನಿನಗಾಗುತೆ ನೀಂ ನನಗೇನನೀವೆಯೌ ॥೬೯॥

(ಟೀ- ಎಲಗೆ-ಎಲೌ! ಭವದೀಯ-ವಚೋ-ವಿಭವಂ-ನಿನ್ನ ಮಾತುಗಳ ವೈಭವವು, ವಿಚಿತ್ರಂ-ಆಶ್ಚರ್ಯಕರವಾದುದು, ಆಯ್ತು-ಆಗಿದೆ, ತುರಂಗಮಂ-ಉಚ್ಚೈಶ್ರವಸ್ಸೆಂಬ ಕುದುರೆಯು, ಸುಲಲಿತಮಾಗಿ (ಸುಲಲಿತಂ+ಆಗಿ)-ಚೆನ್ನಾಗಿ/ಲಾಲಿತ್ಯದಿಂದ ಕೂಡಿ,  ಪಾಂಡುಮಯಂ-ಬಿಳಿಯ ಬಣ್ಣದಿಂದ ಕೂಡಿದ್ದು, ಆದುದೆನುತ್ತಿರಲ್-ಆಗಿರುವುದು ಎಂದು ಹೇಳುತ್ತಿರಲು, ಉಚ್ಚಕೋಟಿಯಂ-ಶ್ರೇಷ್ಠವಾದುದ್ದನ್ನು, ಕಲಿತ-ಕಲಂಕಂ-ಕಳಂಕದಿಂದ ಕೂಡಿದ್ದು/ದೋಷವುಳ್ಳದ್ದು, ಎಂದು-ಎನ್ನುತ್ತ, ಪುಸಿ+ಆಡಿದೆಯೌ-ಸುಳ್ಳುಹೇಳುತ್ತಿದ್ದೀಯಾ! ಪುಸಿಯು+ಅಲ್ಲದಿರ್ದೊಡಂ-ಅದು ಸುಳ್ಳಲ್ಲದಿದ್ದರೆ/(ನೀನು ಹೇಳಿದ್ದು) ಸತ್ಯವಾಗಿದ್ದರೆ ಒಪ್ಪಿ-ಒಪ್ಪಿಕೊಂಡು, ನಿನಗೆ ದಾಸಿ-ಆಗುತೆ-ನಿನ್ನ ತೊತ್ತಾಗಿ/ನಿನ್ನ ದಾಸಿಯಾಗಿ, ನೆಲಸೆುವೆಂ-ನೆಲೆಸುತ್ತೇನೆ/ಬದುಕುತ್ತೇನೆ,  ನೀಂ-ನೀನು, ನನಗೆ+ಏನಂ+ಈವೆಯೌ-ಏನನ್ನು ಕೊಡುತ್ತೀಯಾ! ಚಂಪಕಮಾಲಾವೃತ್ತ. 

ಮಗ ಅರುಣನು ಕೊಟ್ಟ ಶಾಪವನ್ನು ಮರೆತ ವಿನತೆ, ಕದ್ರುವಿನ ಜೊತೆ ಮತ್ಸರದಿಂದ, ಅವಳು ಹೇಳಿದಂತೆ ಉಚ್ಚೈಶ್ರವಸ್ಸಿನ ಬಾಲವೊಂದೇ ಕಪ್ಪಾಗಿಲ್ಲದಿದ್ದರೆ ನಿನಗೆ ದಾಸಿಯಾಗುತ್ತೇನೆ ಎಂದು ಪಣವನ್ನು ಒಡ್ಡಿದಳು. ಅವಳ ಬಳಿ ಅಕಸ್ಮಾತ್ ಕುದುರೆ ಪುರ್ತಿಯಾಗಿ ಬೆಳ್ಳಗೇ ಇದ್ದರೆ ನೀನು ನನಗೆ ಏನನ್ನು ಕೊಡುತ್ತೀಯಾ ಎಂದೂ ಕೇಳಿದಳು. ಪರಿಣಾಮದ ಅರಿವಿದಲ್ಲದೇ ಸ್ಪರ್ಧೆಗೆ ಒಡ್ಡಿಕೊಂಡಳು)


ವ॥ ಎಂತೆನೆ ಕದ್ರುವಿಂತೆಂದಳ್

(ಎಂತೆನೆ-ಹೀಗೆನ್ನಲು, ಕದ್ರುವು+ಇಂತೆಂದಳ್-ಕದ್ರುವು ಹೀಗೆಂದಳು)


ಉ॥ ದಾಸಿಯ ಪಟ್ಟಮಂ ಪಣಮನಾಗಿಸುತೊಡ್ಡಿದೆ ಬಾೞ್ತೆಯೆಂಬುದೇ

ಪಾಸೆನೆ, ದಾಳಮಾಯ್ತೆ ಕಡಲಿಂದೊಗೆತಂದುದು ವಾಜಿಯೆಂದೆನಲ್

ದೂಸಱದಿಲ್ಲಮೆನ್ನ ನುಡಿ ತಪ್ಪದು ತಪ್ಪಿರೆ ನಿನ್ನ ಕಾಲ್ಗಳೊಳ್

ದಾಸಿಯೆ ಸಲ್ವೆನಾನೆಸಗುತೂಳಿಗಮಂ ನಿಜಜೀವನಂಬರಂ ॥೭೦॥

(ಟೀ-ದಾಸಿಯ-ಸೇವಕಿಯ, ಪಟ್ಟಮಂ-ಸ್ಥಾನವನ್ನು, ಪಣಮಂ-ಪಣವನ್ನು ಆಗಿಸುತೆ-ಮಾಡುತ್ತಾ, ಒಡ್ಡಿದೆ-ಎದುರಿಗೆ ಇಟ್ಟೆ,, ಬಾೞ್ತೆಯೆಂಬುದೇ-ಜೀವನವೆಂಬುದೇ, ಪಾಸು+ಎನೆ-ಹಾಸು ಎಂದಾಗಲು,  ಕಡಲಿಂದೆ-ಸಮುದ್ರದಿಂದ, ಒಗೆತಂದುದು-ಹುಟ್ಟಿಬಂದುದು, ವಾಜಿಯು-ಉಚ್ಚೈಶ್ರವಸ್ಸು, ದಾಳ-ಜೂಜಿನ ದಾಳವು, ಆಯ್ತೆ-ಆಗಿದೆಯೇ, ಎಂದೆನಲ್-ಹೀಗೆಂದು ಹೇಳಲು,ಅದು-ಅದು, ದೂಸಽಱ್-ಅಪವಾದವು,  ಇಲ್ಲಂ-ಇಲ್ಲ, ಎನ್ನ-ನನ್ನ, ನುಡಿ-ಮಾತು, ತಪ್ಪದು-ತಪ್ಪುವುದಿಲ್ಲ, ತಪ್ಪಿರೆ-ಒಂದು ವೇಳೆ ತಪ್ಪಿದರೆ, ನಿನ್ನ-ನಿನ್ನ, ಕಾಲ್ಗಳೊಳ್-ಕಾಲುಗಳಲ್ಲಿ,ನಿಜಜೀವನಂಬರಂ-ನನ್ನ ಜೀವಮಾನದ ಕೊನೆಯ ತನಕ, ಊಳಿಗಮಂ-ಸೇವೆಯನ್ನು,ಎಸಗುತೆ-ಮಾಡುತ್ತಾ  ದಾಸಿಯೆ-ದಾಸಿಯೇ/ಸೇವಕಿಯೇ, ಆಂ-ನಾನು, ಸಲ್ವೆಂ-ಸಲ್ಲುತ್ತೇನೆ ಉತ್ಪಲಮಾಲಾವೃತ್ತ

ಈ ಜೂಜಿನಲ್ಲಿ ಅವರ ಜೀವನವೇ ಪಗಡೆಯ ಹಾಸಾಗಿದೆ, ಉಚ್ಚೈಶ್ರವಸ್ಸೇ ದಾಳವಾಗಿದೆ, ದಾಸಿಯ ಪಟ್ಟವೇ ಪಣವಾಗಿದೆ ಎಂದು ಹೇಳಿ ತನ್ನ ಮಾತು ತಪ್ಪಿದರೆ ತಾನೂ ಜೀವನಪೂರ್ತಿ ವಿನತೆಯ ದಾಸಿಯಾಗಿರುತ್ತೇನೆ ಎಂದು ಕದ್ರುವೂ ಪಂತವನ್ನು ಒಡ್ಡುತ್ತಾಳೆ)


ವ॥ ಇಂತೆಂದು ಕದ್ರುವುಂ ನುಡಿಯಲ್ಕೆ ಮಱುದೆವಸಂ ಇರ್ವರುಂ ಉಚ್ಛೈಶ್ರವಸ್ಸೆಂಬ ಪೆಸರಿನ ಬೆಳ್ಗುದುರೆಯಂ ನೋಡಲ್ಕೆ ಪೋಪುದೆಂದು ನಿಶ್ಚಯಿಸಿದರ್

(ಇಂತೆಂದು-ಹೀಗೆಂದು, ಕದ್ರುವುಂ-ಕದ್ರುವೂ, ನುಡಿಯಲ್ಕೆ-ಹೇಳಲು, ಮಱುದೆವಸಂ-ಮಾರನೆಯ ದಿನ, ಇರ್ವರುಂ-ಇಬ್ಬರೂ, ಉಚ್ಛೈಶ್ರವಸ್ಸೆಂಬ-ಉಚ್ಚೈಶ್ರವಸ್ಸು ಎಂಬ,  ಪೆಸರಿನ-ಹೆಸರಿನ, ಬೆಳ್ಗುದುರೆಯಂ-ಬಿಳಿಯ ಕುದುರೆಯನ್ನು, ನೋಡಲ್ಕೆ-ನೋಡುವುದಕ್ಕೆ, ಪೋಪುದೆಂದು-ಹೋಗುವುದು ಎಂದು, ನಿಶ್ಚಯಿಸಿದರ್-ನಿಶ್ಚಯವನ್ನು ಮಾಡಿದರು)


ಕಂ॥ ಸದ್ರುಮಖಂಡಪರಶುವಿಂ

ಛಿದ್ರಂ ಮೇಣ್ ಕಾನನಂಗಳಾಗುವ ತೆಱದಿಂ

ಕದ್ರುವು ತನ್ನಯ ಮಾತಿಂ 

ವಿದ್ರೋಹಂ ತನಗಿದಾಯ್ತೆನುತ್ತುಂ ಬಗೆದಳ್॥೭೧॥

(ಟೀ- ಸ-ದ್ರುಮ-ಖಂಡ-ಪರಶುವಿಂ-ಮರದ ತುಂಡಿನಿಂದ ಕೂಡಿದ ಕೊಡಲಿಯಿಂದಲೇ,  ಮೇಣ್ ಕಾನನಂಗಳ್-ಮತ್ತೆ ಕಾಡುಗಳೆಲ್ಲ, ಛಿದ್ರಂ-ಆಗುವ-ಛಿದ್ರ/ನಾಶವಾಗುವ, ತೆಱದಿಂ-ಹಾಗೆಯೇ, ಕದ್ರುವು-ಕದ್ರುವು, ತನ್ನಯ ಮಾತಿಂ- ತಾನು ಆಡಿದ ಮಾತಿನಿಂದಲೇ, ತನಗೆ-ವಿದ್ರೋಹಂ- ತನೆಗೇ ಮೋಸವು ಆಯ್ತು- ಆಯಿತು, ಎನುತ್ತುಂ-ಎಂದು, ಬಗೆದಳ್-ಯೋಚಿಸಿದಳು. ಕಂದಪದ್ಯ)


ಹರಿಣೀ॥ ಮನದೆ ತಿಳಿದಳ್ ಕಷ್ಟಂ ನಷ್ಟಂ ಭವಿಷ್ಯದೆ ಬರ್ಪುದಂ

ತನಗೆ ಜಯಮೆಂತಕ್ಕುಂ ಕರ್ಪಿಂದೆ ಬಾಲಮದಿಲ್ಲದೇ 

ವಿನತೆ ಗೆಲಲಾಂ ಬಾೞೆಂ ಸೋಲ್ತುಂ ಬರ್ದುಂಕುವುದೆಂತುಟೆಂ-

ದೆನುತೆ ಕಪಟಂಗೆಯ್ಯಲ್ ನೋಂತಳ್ ಭುಜಂಗಮಮಾತೆ ತಾಂ॥೭೨॥

(ಟೀ-ಭುಜಂಗಮಮಾತೆ-ಸರ್ಪಗಳ ಜನನಿಯಾದ ಕದ್ರುವು, ತಾಂ-ತಾನು, ಮನದೆ-ಮನಸ್ಸಿನಲ್ಲಿಯೇ, ಕಷ್ಟಂ-ಕಷ್ಟವೂ, ನಷ್ಟಂ-ನಷ್ಟವೂ, ಭವಿಷ್ಯದೆ-ಮುಂದಿನ ಕಾಲದಲ್ಲಿ, ಬರ್ಪುದಂ-ಬರುವುದನ್ನು, ತಿಳಿದಳ್-ತಿಳಿದಳು. ತನಗೆ-ತನಗೆ(ಕದ್ರುವಿಗೆ) ಕರ್ಪಿಂದೆ-ಕಪ್ಪುಬಣ್ಣದಿಂದ, ಬಾಲಂ- ಕುದುರೆಯ ಬಾಲವು, ಅದು ಇಲ್ಲದೇ- ಅದು ಇಲ್ಲದಿರಲು, ಜಯಂ-ಗೆಲುವು, ಎಂತಕ್ಕುಂ-ಹೇಗೆ ತಾನೇ ಆಗುತ್ತದೆ! ವಿನತೆ-ಸವತಿಯಾದ ವಿನತೆಯು ಗೆಲಲ್- ಜಯವನ್ನು ಹೊಂದಲು, ಆಂ-ನಾನು, ಬಾೞೆಂ-ಬಾಳುವುದಿಲ್ಲ. ಸೋಲ್ತುಂ-ಸೋತರೂ, ಬರ್ದುಂಕುವುದು-ಬದುಕುವುದು, ಎಂತುಟು-ಹೇಗೆ! ಎಂದೆನುತೆ-ಎಂದೆನ್ನುತ್ತ, ಕಪಟಂಗೆಯ್ಯಲ್-ಕಪಟವನ್ನು ಮಾಡಲು/ಮೋಸವನ್ನು ಮಾಡಲು, ನೋಂತಳ್-ಸಿದ್ಧಳಾದಳು/ನಿಶ್ಚಯಿಸಿದಳು. ಹರಿಣೀವೃತ್ತ)


ಅನವದ್ಯ॥ ಕರೆದು ಮಕ್ಕಳನಾಕೆಯೆ ಕಟ್ಟೇಕಾಂತದೆ ಪೇೞುತೆ ಸಂದುದಂ

ಭರದೆ ಸೂಚಿಸಿದಳ್ ಸುತರೆಲ್ಲರ್ ತಾಯಿಯೊ ದಾಸ್ಯಕೆ ಸಲ್ಲದಂ-

ತರರೆ! ಕಾಯ್ವುದು ನಿಮ್ಮಯ ಕರ್ತವ್ಯಂ ಜವದಿಂ ಹಯಪುಚ್ಛಕಂ

ನೆರೆದೊಡಪ್ಪುದು ಬಾಲಮೆ ಕರ್ಪಿಂದೊಪ್ಪುತೆ ಗೆಲ್ವೆನದಾಗಳಾಂ ॥೭೩॥

(ಟೀ-ಆಕೆಯೆ-ಕದ್ರುವು, ಮಕ್ಕಳಂ-ತನ್ನ ಮಕ್ಕಳಾದ ಸಾವಿರ ಸರ್ಪಗಳನ್ನು/ಕಾದ್ರವೇಯರನ್ನು,  ಕಟ್ಟೇಕಾಂತದೆ-ಬಹಳ ಏಕಾಂತದಲ್ಲಿ, ಕರೆದು-ಕರೆದು, ಸಂದುದಂ-ಆಗಿದ್ದೆಲ್ಲವನ್ನೂ, ಪೇೞುತೆ-ಹೇಳುತ್ತ, ಭರದೆ-ಬೇಗನೇ, ಸೂಚಿಸಿದಳ್- ಸೂಚಿಸಿದಳು, ಅರರೆ!-ಅರರೇ! ಸುತರೆಲ್ಲರ್-ಮಕ್ಕಳೆಲ್ಲರೂ ತಾಯಿಯೊ-ತಾಯಿಯು, ದಾಸ್ಯಕೆ ಸಲ್ಲದಂತೆ-ದಾಸ್ಯವೆಂಬ ಕೆಲಸಕ್ಕೆ ಇನ್ನೊಬ್ಬಬರ ಸೇವಕಿಯಾಗದಂತೆ/ತೊತ್ತಾಗದಂತೆ, ಕಾಯ್ವುದು-ಕಾಪಾಡುವುದು, ನಿಮ್ಮಯ-ನಿಮ್ಮೆಲ್ಲರ, ಕರ್ತವ್ಯಂ-ಕರ್ತವ್ಯ/ಮಾಡಲೇಬೇಕಾದ ಕೆಲಸ. ಜವದಿಂ-ಬೇಗದಲ್ಲಿ, ಹಯಪುಚ್ಛಕಂ-ಉಚ್ಚೈಶ್ರವಸ್ಸೆಂಬ ಆ ಕುದುರೆಯ ಬಾಲಕ್ಕೆ, ನೆರೆದೊಡೆ-ಸೇರಿಕೊಳ್ಳಲು/ನೆರೆಯಲು, ಬಾಲಮೆ-ಬಾಲವೇ, ಕರ್ಪಿಂದೆ-ಕಪ್ಪುಬಣ್ಣದಿಂದ, ಅಪ್ಪುದು-ಆಗುವುದು, ಅದಾಗಳ್-ಅದು ಆದಾಗ, ಒಪ್ಪುತೆ-ಒಪ್ಪುತ್ತ/ಶೋಭಿಸುತ್ತ, ಆಂ-ನಾನು, ಗೆಲ್ವೆಂ-ಗೆಲ್ಲುತ್ತೇನೆ. ಇದು ಕನ್ನಡದಲ್ಲಿ ವಿರಳವಾಗಿ ಕಾಣುವ ಅನವದ್ಯ ಎಂಬ ವೃತ್ತ.)


ಚಂ॥ ಚಿರದಿನೆ ಮಕ್ಕಳಂ ಕುದುರೆಬಾಲದೊಳಂಟಿಕೊಳಲ್ಕೆ ಪೇ-

ೞ್ದರಸುತೆ ಸುಳ್ಳುದಾರಿಯೊಳೆ ಮೋಸದ ಮಂಟಪಕೆಂದು ಸಾರ್ದು ಮೇಣ್

ಪಿರಿದಭಿಸಾರಮಂ ನಡೆಸಿದಳ್ ಗಡ ದುರ್ಯಶದಾ ಬೊಜಂಗನೊಳ್

ತರಮೆನೆ ನಾಮದಿಂ ಭುಜಗಮಾತೆಯೆ ಸಂದಪಳಲ್ತೆ ಕದ್ರುವೇ ॥೭೪॥

(ಟೀ-ಚಿರದಿನೆ-ಶೀಘ್ರದಲ್ಲಿ, ಮಕ್ಕಳಂ-ಮಕ್ಕಳನ್ನು, ಕುದುರೆಬಾಲದೊಳ್-ಕುದುರೆಯ ಬಾಲದಲ್ಲಿ, ಅಂಟಿಕೊಳಲ್ಕೆ-ಅಂಟಿಕೊಳ್ಳಲು, ಪೇೞ್ದು-ಹೇಳಿ, ಅರಸುತೆ-ಹುಡುಕುತ್ತಾ, ಸುಳ್ಳುದಾರಿಯೊಳೆ-ಸುಳ್ಳಿನ ದಾರಿಯಲ್ಲಿ, ಮೋಸದ ಮಂಟಪಕೆಂದು-ಮೋಸದ ಮಂಟಪಕ್ಕೆ ಎಂದು, ಸಾರ್ದು-ಹೋಗಿ, ಮೇಣ್-ಮತ್ತೆ, ಪಿರಿದು-ದೊಡ್ಡ, ಅಭಿಸಾರಮಂ-ಅಭಿಸಾರವನ್ನು, ದುರ್ಯಶದಾ-ದುರ್ಯಶ/ಕೆಟ್ಟ ಯಶಸ್ಸು ಎಂಬ, ಬೊಜಂಗನೊಳ್-ಬೊಜಂಗನಲ್ಲಿ/ಭುಜಂಗನಲ್ಲಿ/ಜಾರನಲ್ಲಿ, ನಡೆಸಿದಳ್ ಗಡ- ನಡೆಸಿದಳಲ್ಲವೇ! ತರಮೆನೆ(ತರಂ+ಎನೆ)-ಮೇಲಾಗಿ, ಕದ್ರುವೇ-ಕದ್ರುವು, ನಾಮದಿಂ-ಹೆಸರಿನಿಂದ, ಭುಜಗಮಾತೆಯೆ-ಭುಜಗಮಾತೆ/ಹಾವುಗಳ ತಾಯಿಯೇ, ಸಂದಪಳ್+ಅಲ್ತೆ-ಅಲ್ಲವೇ!  ಚಂಪಕಮಾಲಾವೃತ್ತ.

ಅಭಿಸಾರಿಕೆ ಎಂದರೆ ಗುಟ್ಟಿನಲ್ಲಿ ಪ್ರಿಯತಮನನ್ನು ಸೇರುವುದಕ್ಕೆ ಹೋಗುವವಳು. ಅಭಿಸಾರವೆಂದರೆ ಗುಟ್ಟಾಗಿ ಪ್ರಿಯರನ್ನು ಸೇರುವುದು. ಈ ಪದ್ಯದಲ್ಲಿ- ಕದ್ರು ಸುಳ್ಳಿನ ದಾರಿಯಲ್ಲಿ ಮೋಸದ ಮಂಟಪದಲ್ಲಿ ದುರ್ಯಶವೆನ್ನುವ ಜಾರನನ್ನು ಸೇರಿದಳು ಎಂದು ಮೊದಲ ಮೂರು ಸಾಲಿನಲ್ಲಿ ತಾತ್ಪರ್ಯ. ಹಳಗನ್ನಡದಲ್ಲಿ ಬೊಜಂಗ ಎಂದರೆ ಜಾರ-ವಿಟ ಎನ್ನುವಂತಹ ಅರ್ಥವಿದೆ.ಅದು ಸಂಸ್ಕೃತದ ಜಾರ-ವಿಟ ಎಂಬರ್ಥದ ಭುಜಂಗ ಎಂಬ ಶಬ್ದದ ತದ್ಭವ. ಭುಜಂಗ ಎಂದರೆ ಭುಜದಲ್ಲಿ ಸಾಗುವ ಸರ್ಪಗಳು ಎಂಬ ಅರ್ಥವೂ ಇದೆ. ಹಾಗಾಗಿ ಕದ್ರು ದುರ್ಯಶವೆನ್ನುವ ಭುಜಂಗನಲ್ಲಿ ಸೇರಿದಳು, ಎಷ್ಟಂದರೂ ಹೆಸರಿನಿಂದಲೇ ಅವಳು ಭುಜಂಗಮಾತೆಯೇ ಅಲ್ಲವೇ- ಎಂದು ಹೇಳುವಲ್ಲಿ ಶ್ಲೇಷವಿದೆ.)


ವ॥ ಅವಳಿಂತೆನೆ ಸಹಸ್ರಪುತ್ರರ್ಕಳೊಳ್ ಪಂಚಶತಪುತ್ರರ್ ತಾಯ ಮಾತಿಂಗೆ  ಬೆಸನಂಬಟ್ಟು ಪುಸಿಯಿಂ ಕಿತವದಿಂ ಗೆಲ್ವುದುಚಿತಮಲ್ಲಮೆಂದು ಚಿಂತಿಸಿ

(ಅವಳ್-ಅವಳು, ಇಂತೆನೆ-ಹೀಗೆನ್ನಲು, ಸಹಸ್ರಪುತ್ರರ್ಕಳೊಳ್-ಸಾವಿರ ಜನ ಮಕ್ಕಳಲ್ಲಿ, ಪಂಚಶತಪುತ್ರರ್-ಐದು ನೂರು ಜನ ಮಕ್ಕಳು, ತಾಯ-ತಾಯಿಯಾದ ಕದ್ರುವಿನ, ಮಾತಿಂಗೆ-ಮಾತಿಗೆ,  ಬೆಸನಂಬಟ್ಟು-ವ್ಯಸನವನ್ನು ಹೊಂದಿ, ಪುಸಿಯಿಂ-ಸುಳ್ಳಿನಿಂದ, ಕಿತವದಿಂ-ಮೋಸದಿಂದ, ಗೆಲ್ವುದು-ಗೆಲ್ಲುವುದು, ಉಚಿತಂ-ಯೋಗ್ಯವಾದದ್ದು, ಅಲ್ಲಂ-ಅಲ್ಲ, ಎಂದು-ಎಂದು, ಚಿಂತಿಸಿ-ಯೋಚಿಸಿ)


ಮ॥ ಜನನೀ ನಿನ್ನಯ ವಾಕ್ಯಮಾಯ್ತನುಚಿತಂ ಪಾಪಂಗಳಂ ನೀೞ್ವುದುಂ

ತನುಜರ್ಗಂಬೆಯೊ ನೋಡೆ ಸತ್ಯದೆಡೆಗಂ ಕೊಂಡೊಯ್ಯವೇಳ್ಕುಂ ಸ್ವಯಂ

ಮನುಜರ್ ಕಷ್ಟದೆ ದುಷ್ಟರಪ್ಪರೆನುವಂತಾದತ್ತು ನಿನ್ನಾಜ್ಞೆಯುಂ

ಜನಕಂ ನೆಟ್ಟ ಮರಕ್ಕೆ ನೇಣ ಬಿಗಿವರ್ ಮೂಢರ್ಕಳೇ ಸಲ್ವರೌ॥೭೫॥

(ಟೀ-ಜನನೀ-ತಾಯಿಯೇ! ನಿನ್ನಯ-ನೀನು ಹೇಳಿದ, ವಾಕ್ಯಂ-ಮಾತುಗಳು,ಅನುಚಿತಂ-ಅಯೋಗ್ಯವಾದದ್ದು/ಉಚಿತವಲ್ಲದವು, ಆಯ್ತು- ಆದವು, ಪಾಪಂಗಳಂ-ಪಾಪಗಳನ್ನೂ, ನೀೞ್ವುದುಂ-ಕೊಡುತ್ತದೆ, ನೋಡೆ-ನೋಡಿದರೆ, ತನುಜರ್ಗೆ-ಮಕ್ಕಳಿಗೆ, ಅಂಬೆಯೊ-ತಾಯಿಯೋ,  ಸತ್ಯದೆಡೆಗಂ-ಸತ್ಯದ ಕಡೆಗೆ, ಕೊಂಡೊಯ್ಯವೇಳ್ಕುಂ-ಕರೆದುಕೊಂಡು ಹೋಗಬೇಕು. ಸ್ವಯಂ-ಸ್ವತಃ, ಮನುಜರ್-ಮನುಷ್ಯರು, ಕಷ್ಟದೆ-ಕಷ್ಟದಲ್ಲಿ, ದುಷ್ಟರ್- ದುಷ್ಟರು,ಅಪ್ಪರ್-ಆಗುತ್ತಾರೆ, ಎನುವಂತೆ-ಎನ್ನುವಂತೆ, ನಿನ್ನ+ಆಜ್ಞೆಯುಂ-ನೀನು ಆಜ್ಞೆ ಮಾಡಿರುವುದೂ, ಆದತ್ತು-ಆಗಿದೆ, ಜನಕಂ-ತಂದೆಯಾದವನು, ನೆಟ್ಟ-ನೆಟ್ಟಿರುವ, ಮರಕ್ಕೆ-ಮರಕ್ಕೆ, ನೇಣ-ನೇಣುಹಗ್ಗವನ್ನು, ಬಿಗಿವರ್-ಕಟ್ಟುವವರು, ಮೂಢರ್ಕಳೇ-ಮೂರ್ಖರೇ, ಸಲ್ವರೌ-ಆಗುತ್ತಾರೆ. ಮತ್ತೇಭವಿಕ್ರೀಡಿತವೃತ್ತ.

ನಿನ್ನ ಮಾತುಗಳು ಅನುಸರಿಸಲು ತಕ್ಕದಲ್ಲ. ಪಾಪವೂ ಬರುವಂತಹ ಕೆಲಸ, ತಾಯಿಯಾದವಳು ಮಕ್ಕಳನ್ನು ಸತ್ಯದ ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕು,ಮನುಷ್ಯರು ಕಷ್ಟದಲ್ಲಿ ದುಷ್ಟರಾಗುತ್ತಾರೆ ಎಂಬಂತೆ ನಿನ್ನ ಆಜ್ಞೆಯೂ ಆಯ್ತು, ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದು ಮೂರ್ಖತನ ಎಂದು ಹೇಳುವ ಲೋಕೋಕ್ತಿಯಂತೆ ತಾಯಿಯಾದರೂ ಅವಳು ಹೇಳಿದ್ದು ಕೆಟ್ಟದ್ದಾದ ಕಾರಣ ಅದನ್ನು ಆಚರಿಸುವುದು ಸರಿಯಲ್ಲ ಎಂದು ಕದ್ರುವಿನ ಐನೂರು ಮಕ್ಕಳು ಆಲೋಚಿಸಿ ಹಾಗೆಯೇ ಅವಳಿಗೆ ಹೇಳಿದರು. )


ವ॥ ಎಂದು ತಾಯಂ ಮೂದಲಿಸೆ ಕೋಪದಿಂದಾಕೆ

(ಎಂದು-ಹೀಗೆಂದು, ತಾಯಂ-ತಾಯಿಯನ್ನು, ಮೂದಲಿಸೆ-ಮೂದಲಿಸಲು/ಬಯ್ಯಲು, ಕೋಪದಿಂದ-ಸಿಟ್ಟಿನಿಂದ, ಆಕೆ-ಅವಳು/ಕದ್ರುವು)


ಮ॥ ಸುತರೇ! ನೀವುಗಳೆನ್ನ ಬಾೞ್ತೆಸೆಱಗೊಳ್ ಸ್ಫಾರಸ್ಫುಲಿಂಗಂಗಳೇ

ಹಿತರೇ! ಕೊಳ್ಳಿಗಳಾದಿರೇ! ಬರ್ದುಕಿರಲ್ ತಾಯ್ಗಿಂತು ಕಿರ್ಚೀವರೇ 

ಮೃತಿಯಕ್ಕುಂ ನಿಮಗೆನ್ನ ಮಾತನದಟಿಂ ಮೀರಿರ್ಪುದರ್ಕಿಂತುಟೇ

ಹುತಭುಗ್ಜ್ವಾಲೆಗಳೊಳ್ ಕಱುಂಕೆಗಳವೊಳ್ ನೀಂ ಸಲ್ವುದುಂ ನಿಶ್ಚಿತಂ ॥೭೬॥

(ಟೀ-ಸುತರೇ!-ಮಕ್ಕಳೇ! ನೀವುಗಳ್-ನೀವೆಲ್ಲರೂ, ಎನ್ನ-ನನ್ನ, ಬಾೞ್ತೆಸೆಱಗೊಳ್-ಬದುಕೆಂಬ ಸೆರಗಿನಲ್ಲಿ, ಸ್ಫಾರಸ್ಫುಲಿಂಗಂಗಳೇ-(ಕಟ್ಟಿಕೊಂಡಿರುವ)ಉಣ್ಮುತ್ತಿರುವ ಬೆಂಕಿಯ ಕಿಡಿಗಳು, ಹಿತರೇ!-ಹಿತಕಾರಿಗಳೇ!/ಒಳ್ಳೆಯದನ್ನು ಮಾಡುವವರೇ! ಕೊಳ್ಳಿಗಳಾದಿರೇ-ಕೊಳ್ಳಿಗಳೇ ಆದಿರೇ-ಬೆಂಕಿಯ ಸೂಡಿಗಳೇ ಆದಿರೇ! ಬರ್ದುಕಿರಲ್-ಬದುಕಿರುವಾಗಳೇ, ತಾಯ್ಗೆ-ತಾಯಿಗೆ/ಹೆತ್ತವಳಿಗೆ, ಕಿರ್ಚೀವರೇ-ಬೆಂಕಿಯನ್ನು ಕೊಡುವವರೇ/ಬೆಂಕಿ ಹಾಕುವವರೇ! ಎನ್ನ-ನನ್ನ, ಮಾತಂ-ಮಾತನ್ನು, ಅದಟಿಂ-ಸೊಕ್ಕಿನಿಂದ/ಪರಾಕ್ರಮದಿಂದ, ಮೀರಿರ್ಪುದರ್ಕೆ-ಮೀರಿರುವುದಕ್ಕೆ, ಇಂತುಟೇ-ಹೀಗೆಯೇ, ನಿಮಗೆ-ನಿಮಗೆ ಮೃತಿಯಕ್ಕುಂ-ಸಾವು ಉಂಟಾಗುತ್ತದೆ,  ಹುತಭುಗ್ಜ್ವಾಲೆಗಳೊಳ್-ಬೆಂಕಿಯ ಜ್ವಾಲೆಗಳಲ್ಲಿ, ಕಱುಂಕೆಗಳವೊಳ್-ಗರಿಕೆ ಹುಲ್ಲಿನ ಹಾಗೆ, ನೀಂ-ನೀವುಗಳು, ಸಲ್ವುದುಂ-ಸಲ್ಲುವುದು, ನಿಶ್ಚಿತಂ-ನಿಶ್ಚಿತವಾದದ್ದು. ಮತ್ತೇಭವಿಕ್ರೀಡಿತವೃತ್ತ)


ವ॥ ಇಂತೆಂದು ಕದ್ರು ಕೋಪದಿಂ ಶಪಿಸಲ್ ಪುತ್ರರ್ಕಳ್ ಖಿನ್ನಮಾನಸರಾಗಿ ಪೊರಮಟ್ಟರ್

(ಇಂತೆಂದು-ಹೀಗೆಂದು, ಕದ್ರು-ಕದ್ರುವು, ಕೋಪದಿಂ-ಸಿಟ್ಟಿನಿಂದ, ಶಪಿಸಲ್-ಶಾಪವನ್ನು ಕೊಡಲು, ಪುತ್ರರ್ಕಳ್-ಮಕ್ಕಳು, ಖಿನ್ನಮಾನಸರಾಗಿ-ದುಃಖವನ್ನು ಹೊಂದಿದ ಮನಸ್ಸಿನಿಂದ, ಪೊರಮಟ್ಟರ್-ಹೊರಟರು.)


ಕಂ॥ ನವೆಯುತೆ ಮನದೊಳ್ ಚಿಂತಿಸು-

ತವಿಲಂಬದೆ ದಾಸ್ಯಮಪ್ಪುದೆನುತುಂ ಖತಿಯೊಳ್

ತವೆ ಕದ್ರು ದುಃಖಿಸಿರ್ದಳ್

ಭವಿತವ್ಯದ ಚಿಂತೆ ಸಾಜಮೈ ಸರ್ವರ್ಗಂ ॥೭೭॥

(ಟೀ-ನವೆಯುತೆ-ನವೆಯುತ್ತಾ/ಕಷ್ಟಪಡುತ್ತಾ, ಮನದೊಳ್-ಮನಸ್ಸಿನಲ್ಲಿಯೇ, ಚಿಂತಿಸುತೆ- ಆಲೋಚಿಸುತ್ತಾ, ಅವಿಲಂಬದೆ-ವಿಳಂಬವಿಲ್ಲದೇ, ದಾಸ್ಯಂ-ದಾಸ್ಯವು/ವಿನತೆಗೆ ದಾಸಿಯಾಗುವ ಸಂದರ್ಭವು, ಅಪ್ಪುದು-ಆಗುತ್ತದೆ, ಎನುತುಂ- ಎಂದು, ಖತಿಯೊಳ್-ಕೋಪದಲ್ಲಿ, ತವೆ-ಅತಿಶಯವಾಗಿ, ಕದ್ರು-ಕದ್ರುವು, ದುಃಖಿಸಿರ್ದಳ್-ದುಃಖಿಸಿದಳು. ಭವಿತವ್ಯದ-ಭವಿಷ್ಯದ/ಮುಂದೆ ಆಗುವುದರ, ಚಿಂತೆ-ಚಿಂತೆಯು, ಸರ್ವರ್ಗಂ-ಎಲ್ಲರಿಗೂ, ಸಾಜಮೈ-ಸಹಜವಾದದ್ದೇ ಆಗಿದೆ. ಕಂದಪದ್ಯ, ಭವಿಷ್ಯದ ಚಿಂತೆ ಎಲ್ಲರಿಗೂ ಇರುವುದೇ ಆಗುತ್ತದೆ ಎಂದು ಹೇಳುವಲ್ಲಿ ಲೋಕಸಾಮಾನ್ಯವ್ಯವಹಾರಕ್ಕೆ ಸಮೀಕರಿಸಿದ ಕಾರಣ ಅರ್ಥಾಂತರನ್ಯಾಸಾಲಂಕಾರವೂ ಆಗುತ್ತದೆ)


ವ॥ ಅಂತಲ್ಲದೆಯುಂ 

(ಹಾಗಲ್ಲದೆಯೂ)


ಕಂ॥ ಭರದಿಂ ಕೋಪಂಗೊಳುತುಂ

ವರಪುತ್ರರನಿಂತು ಶಪಿಸಿದೆಂ ಲೋಕದೊಳಂ

ಸುರಸಾಸೂನುಗಳಂದದೊ-

ಳುರಗಿಯು ಮಕ್ಕಳನೆ ತಿಂಬಳೆಂಬಂತಾಯ್ತೇ ॥೭೮॥

(ಟೀ-ಭರದಿಂ-ಬೇಗದಲ್ಲಿ, ಕೋಪಂಗೊಳುತುಂ(ಕೋಪಂ+ಕೊಳುತುಂ)-ಕೋಪವನ್ನು ಹೊಂದುತ್ತಾ, ವರಪುತ್ರರಂ-ಒಳ್ಳೆಯ ಮಕ್ಕಳನ್ನು, ಇಂತು-ಹೀಗೆ, ಶಪಿಸಿದೆಂ-ಶಪಿಸಿದೆ/ಶಾಪವನ್ನು ಕೊಟ್ಟೆ, ಲೋಕದೊಳಂ-ಜಗತ್ತಿನಲ್ಲಿ, ಸುರಸಾಸೂನುಗಳಂದದೊಳ್-ಸುರಸೆಯ ಮಕ್ಕಳ ಹಾಗೆ, ಉರಗಿಯು-ಹಾವುಗಳ ತಾಯಿ/ಹೆಣ್ಣು ಹಾವು, ಮಕ್ಕಳನೆ-ತನ್ನ ಮಕ್ಕಳನ್ನೇ, ತಿಂಬಳ್-ತಿನ್ನುತ್ತಾಳೆ, ಎಂಬಂತಾಯ್ತೇ-ಎನ್ನುವ ಹಾಗೆ ಆಯಿತೇ! 

ಕಂದಪದ್ಯ, ಸುರಸೆ ಎಂಬುವವಳೂ ಕಶ್ಯಪನ ಹೆಂಡತಿಯರಲ್ಲಿ ಇನ್ನೊಬ್ಬಳು. ಅವಳೂ ಕೂಡ ಸರ್ಪಗಳ ತಾಯಿ ಎಂದು ಪುರಾಣಪ್ರಸಿದ್ಧ. ಹಾವುಗಳು ತಮ್ಮ ಮೊಟ್ಟೆಗಳಲ್ಲೇ ಕೆಲವನ್ನು ತಿಂದುಬಿಡುತ್ತವೆ ಎಂಬುದೂ ಲೋಕದಲ್ಲಿ ಕಂಡುಬರುವುದೇ ಆಗಿದೆ. ಹಾಗಾಗಿ ಹಾವುಗಳ ತಾಯಿ ಹಾವನ್ನು ತಿನ್ನುತ್ತಾಳೆ ಎಂಬಂತೆ ತನ್ನ ಮಕ್ಕಳಿಗೆ ತಾನೇ ಸಾಯುವಂತೆ ಶಾಪಕೊಟ್ಟೆ ಎಂದು ಪರಿತಪಿಸಿದಳು ಎಂದು ಪದ್ಯದ ತಾತ್ಪರ್ಯ.)


ಕಂ।। ಕೋಪದಿನಾಂತರ್ಯದೊಳೀ

ತಾಪಂ ತಾಪದಿನೆ ಶಾಪಮಿತ್ತುದುಮಂತೇ

ಶಾಪದಿನನ್ವಯನಾಶಂ

ಕೋಪಂ ತಾಂ ಸರ್ವನಾಶಕಂ ಸಂದುದಲಾ ॥೭೯॥

(ಟೀ-ಕೋಪದಿಂ-ಕೋಪದಿಂದ/ಸಿಟ್ಟಿನಿಂದ, ಆಂತರ್ಯದೊಳೀ-ಮನಸ್ಸಿನಲ್ಲಿ, ತಾಪಂ-ಬಿಸಿ/ತಾಪವು, ತಾಪದಿನೆ-ತಾಪದಿಂದಲೇ/ಆ ಬಿಸಿಯಿಂದಲೇ, ಶಾಪಮಿತ್ತುದುಂ(ಶಾಪಂ+ಇತ್ತುದು)-ಶಾಪವಿತ್ತುದೂ, ಅಂತೇ-ಹಾಗೆಯೇ, ಶಾಪದಿಂ-ಶಾಪವನ್ನು ಕೊಟ್ಟಿದ್ದರಿಂದ, ಅನ್ವಯನಾಶಂ-ವಂಶದ ನಾಶವು(ಆಗುತ್ತದೆ) ಕೋಪಂ-ಸಿಟ್ಟು ಎಂಬುದು, ತಾಂ-ತಾನು, ಸರ್ವನಾಶಕಂ-ಎಲ್ಲವನ್ನೂ ನಾಶವನ್ನು ಮಾಡುವುದು, ಸಂದುದಲಾ-ಆಯಿತಲ್ಲವೇ! ಕಂದಪದ್ಯ,ಕಾರಣಮಾಲಾ ಎಂಬ ಅಲಂಕಾರ)


ಕಂ।। ವೇದನೆಯಾದೊಡೆ ಪಡೆವೊಡೆ

ಮೋದದೆ ತಳೆದಿರ್ದ ಮಕ್ಕಳಂ ಶಪಿಸಿರ್ಪೆಂ

ಛೇದಿಸಿಕೊಂಡೆಂ ಮೂಗಂ

ಖೇದಂಬಡೆ ಮತ್ತೆ ಮೊಳೆವುದೇ ಎಂದೞಲ್ದಳ್॥೮೦॥

(ಟೀ-ಪಡೆವೊಡೆ-ಪಡೆಯುವಾಗ/ಹಡೆಯುವಾಗ, ವೇದನೆಯಾದೊಡೆ-ನೋವಾದರೂ, ಮೋದದೆ-ಸಂತೋಷದಿಂದ, ತಳೆದಿರ್ದ-ಹೊಂದಿದ್ದ, ಮಕ್ಕಳಂ-ಮಕ್ಕಳನ್ನು, ಶಪಿಸಿರ್ಪೆಂ-ಶಪಿಸಿದೆ, ಮೂಗಂ-ಮೂಗನ್ನು, ಛೇದಿಸಿಕೊಂಡೆಂ-ಕತ್ತರಿಸಿಕೊಂಡೆ,ಖೇದಂಬಡೆ-ದುಃಖವನ್ನು ಪಟ್ಟರೆ, ಮತ್ತೆ-ಇನ್ನೊಮ್ಮೆ, ಮೊಳೆವುದೇ-ಮೊಳಕೆಯೊಡೆಯುತ್ತದೆಯೇ/ಹುಟ್ಟುತ್ತದೆಯೇ/ಚಿಗುರುತ್ತದೆಯೇ, ಎಂದೞಲ್ದಳ್-ಎಂದು ದುಃಖಿಸಿದಳು.)


ವ॥ ಎಂದು ಪಲವುಂ ತೆಱದಿಂದೆ ಅೞಲುತ್ತುಮಿರಲಿತ್ತಲ್

(ಎಂದು-ಹೀಗೆಂದು, ಪಲವುಂ-ಹಲವು, ತೆಱದಿಂದೆ-ವಿಧದಿಂದ, ಅೞಲುತ್ತುಂ-ದುಃಖಿಸುತ್ತ, ಇರಲ್-ಇರಲು, ಇತ್ತಲ್-ಇತ್ತ ಕಡೆಯಲ್ಲಿ)


ತೋಟಕ॥ ಘಟಿತಂ ಘಟಿತಂ ಭವಿತವ್ಯದೊಳಾಂ

ಸ್ಫುಟದಿಂ ಚಟುಲಾಗ್ನಿಗೆ ಬಿಳ್ದಪೆವೈ

ತ್ರುಟಿಯಾಗದವೊಲ್ ಬರ್ದುಕಲ್ಕೆನೆ ನಿ

ಚ್ಚಟದಿಂ ಘನಮಾರ್ಗಮೆ ದಲ್ ದೊರೆಗುಂ॥೮೧॥

(ಟೀ-ಘಟಿತಂ-ಆಗಿರುವುದು, ಘಟಿತಂ-ಆಯ್ತು, ಭವಿತವ್ಯದೊಳ್- ಭವಿಷ್ಯದಲ್ಲಿ/ಮುಂದಿನ ಕಾಲದಲ್ಲಿ, ಆಂ-ನಾವು, ಸ್ಫುಟದಿಂ-ಸ್ಪಷ್ಟವಾಗಿ, ಚಟುಲಾಗ್ನಿಗೆ-ತೀಕ್ಷ್ಣವಾದ ಅಗ್ನಿಯಲ್ಲಿ/ಬೆಂಕಿಯಲ್ಲಿ, ಬಿಳ್ದಪೆವೈ-ಬೀಳುತ್ತೇವೆ, ತ್ರುಟಿಯಾಗದವೊಲ್-ತ್ರುಟಿ-ತೊಂದರೆಯಾಗದಂತೆ, ಬರ್ದುಕಲ್ಕೆ+ಎನೆ-ಬದುಕುವುದಕ್ಕೆನ್ನಲು, ನಿಚ್ಚಟದಿಂ-ನಿಶ್ಚಯದಿಂದ, ಘನಮಾರ್ಗಮೆ-ಗಟ್ಟಿಯಾದ/ದೊಡ್ಡದಾದ ದಾರಿಯು, ದಲ್ ದೊರೆಗುಂ-ದೊರೆಯುವುದಲ್ಲವೇ! ತೋಟಕವೃತ್ತ.)


ದ್ರು॥ ಜನನಿ ಕಷ್ಟಮನಾಂತೊಡೆ ಖೇದಮೆಂ-

ದೆನುತೆ ಮಕ್ಕಳೆ ಚಿಂತಿಸಿ ಸರ್ವರುಂ

ಘನವಟಕ್ಕೆ ಬಿಳಲ್ಗಳವೋಲೆ ಶ-

ಕ್ರನ ಸದಶ್ವದ ಬಾಲಕೆ ಜೋಲ್ದುವೈ ॥೮೨॥

(ಟೀ-ಜನನಿ-ತಾಯಿಯು, ಕಷ್ಟಮಂ-ಕಷ್ಟವನ್ನು,ಆಂತೊಡೆ-ತಳೆದರೆ/ಹೊಂದಿದರೆ, ಖೇದಂ-ದುಃಖವು, ಎಂದೆನುತೆ-ಎಂದೆನ್ನುತ್ತಾ, ಮಕ್ಕಳೆ-ಸರ್ಪಗಳೆಲ್ಲವೂ, ಚಿಂತಿಸಿ-ಯೋಚನೆ ಮಾಡಿ, ಸರ್ವರುಂ-ಎಲ್ಲರೂ, ಘನವಟಕ್ಕೆ-ದೊಡ್ಡ ಆಲದ ಮರಕ್ಕೆ, ಬಿಳಲ್ಗಳವೋಲೆ-ಬಿಳಲುಗಳು ಇರುವಂತೆ, ಶಕ್ರನ-ಇಂದ್ರನ, ಸದಶ್ವದ-ಒಳ್ಳೆಯ ಕುದುರೆಯ, ಬಾಲಕೆ-ಬಾಲಕ್ಕೆ, ಜೋಲ್ದುವೈ-ಜೋತವು/ನೇತಾಡಿದವು. ದ್ರುತವಿಲಂಬಿತವೃತ್ತ)


ವ॥ ಅಂತು ಕಾದ್ರವೇಯರ್ ತಾಯ್ಗೆ ಸಲ್ವ ಕಷ್ಟಮಂ ಕಳೆಯಲೆಂದು ನೋಂತು ಉಚ್ಛೈಶ್ರವಸ್ಸಿನ ಬಾಲಕ್ಕೆ ಅಂಟಿಕೊಂಡುಂ ತಾಯ ಶಾಪದಿಂ ಮೋಕ್ಷಮಂ ಪಡೆಯಲಾಱದಾದುವು. ಅಂತೆನೆ ತಾಯ ಶಾಪದ ಕಾರಣದಿಂ ಜನಮೇಜಯಂ ಗೆಯ್ದ ಸರ್ಪಸತ್ರದೊಳ್ ಸರ್ಪಂಗಳ್ ಕ್ರಮದಿಂ ಅಗ್ನಿಗಾಹುತಿಯಾದುದುಂ ಸಂದತ್ತು ಎಂದು ಸೂತಪುರಾಣಿಕರ್ ಕಥಾನಕಮಂ ಮುಗಿಸಲ್ ತಗುಳೆ ಶೌನಕಾದಿ ಮುನಿಗಳ್ ಕೇಳ್ದಪರ್

(ಅಂತು-ಹೀಗೆ, ಕಾದ್ರವೇಯರ್-ಕದ್ರುವಿನ ಮಕ್ಕಳು, ತಾಯ್ಗೆ-ತಾಯಿಗೆ/ಕದ್ರುವಿಗೆ, ಸಲ್ವ-ಸಲ್ಲುವ, ಕಷ್ಟಮಂ-ಕಷ್ಟವನ್ನು, ಕಳೆಯಲೆಂದು-ಕಳೆಯಬೇಕೆಂದುಕೊಂಡು, ನೋಂತು-ನಿರ್ಧರಿಸಿ, ಉಚ್ಛೈಶ್ರವಸ್ಸಿನ-ಸಮುದ್ರಮಥನದಲ್ಲಿ ಬಂದ ಉಚ್ಚೈಶ್ರವಸ್ಸೆಂಬ ಬಿಳಿಯ ಕುದುರೆಯ, ಬಾಲಕ್ಕೆ-ಬಾಲಕ್ಕೆ/ಪುಚ್ಛಕ್ಕೆ, ಅಂಟಿಕೊಂಡುಂ-ಅಂಟಿಕೊಂಡರೂ, ತಾಯ-ಜನನಿಯ, ಶಾಪದಿಂ-ಶಾಪದಿಂದ, ಮೋಕ್ಷಮಂ-ಬಿಡುಗಡೆಯನ್ನು, ಪಡೆಯಲಾಱದಾದುವು-ಪಡೆಯಲಾರದವು ಆದವು. ಅಂತೆನೆ-ಹಾಗೆನ್ನಲು, ತಾಯ-ತಾಯಿಯ, ಶಾಪದ-ಶಾಪದ, ಕಾರಣದಿಂ-ಕಾರಣದಿಂದ, ಜನಮೇಜಯಂ-ಜನಮೇಜಯನು, ಗೆಯ್ದ-ಮಾಡಿದ, ಸರ್ಪಸತ್ರದೊಳ್-ಸರ್ಪಯಾಗದಲ್ಲಿ, ಸರ್ಪಂಗಳ್-ಈ ಸರ್ಪಗಳು/ಹಾವುಗಳು, ಕ್ರಮದಿಂ-ಕ್ರಮವಾಗಿ, ಅಗ್ನಿಗೆ-ಯಜ್ಞದ ಅಗ್ನಿಯಲ್ಲಿ, ಆಹುತಿಯಾದುದುಂ-ಆಹುತಿಯಾದದ್ದೂ/ಸತ್ತು ಹೋದದ್ದೂ, ಸಂದತ್ತು-ಆಯಿತು, ಎಂದು-ಎಂದು, ಸೂತಪುರಾಣಿಕರ್-ಸೂತಪುರಾಣಿಕರು, ಕಥಾನಕಮಂ-ತಾವು ಹೇಳುತ್ತಿರುವ ಕಥೆಯನ್ನು, ಮುಗಿಸಲ್-ಮುಗಿಸಲು/ಕೊನೆಗೊಳಿಸಲು, ತಗುಳೆ-ಹತ್ತಲು/ನಿಶ್ಚಯಿಸಲು, ಶೌನಕಾದಿ ಮುನಿಗಳ್-ಶೌನಕರೇ ಮೊದಲಾದ ಮುನಿಗಳು, ಕೇಳ್ದಪರ್-ಕೇಳಿದರು)


ಚಂ॥ ಅರರೆ! ಪುರಾಣವಿನ್ಮುನಿಪರೇ ಕಥನಕ್ರಮಮದ್ಭುತಂ ಮಗುಳ್

ಸುರುಚಿರಕೌತುಕಾನ್ವಿತವಿಶೇಷವಿಶಾಲವಿನೋದಘಟ್ಟದೊಳ್

ಭರದೆ ಸಮಾಪ್ತಿಗೆಯ್ದೊಡಿದು ಸಲ್ಲದು ಸಲ್ಲದು ಪೇೞಿಮಿನ್ನುಮಿಂ-

ತುರಗಕುಲಕ್ಕೆ ಮೇಣ್ ವಿನತೆಗಾದುದನೆಲ್ಲಮನೆಂದು ಪೇೞ್ದಪರ್ ॥೮೩॥

(ಟೀ-ಅರರೆ!-ಅರರೇ, ಪುರಾಣವಿನ್ಮುನಿಪರೇ(ಪುರಾಣವಿತ್+ಮುನಿಪರೇ)-ಪುರಾಣವನ್ನು ತಿಳಿದುಕೊಂಡ ಮುನೀಂದ್ರರೇ, ಕಥನಕ್ರಮಂ-ಕಥೆಯನ್ನು ಹೇಳುವ ಕ್ರಮವು, ಅದ್ಭುತಂ-ಅದ್ಭುತವಾದದ್ದು,  ಮಗುಳ್-ಮತ್ತೆ, ಸುರುಚಿರ-ಕೌತುಕಾನ್ವಿತ-ವಿಶೇಷ-ವಿಶಾಲ-ವಿನೋದ-ಘಟ್ಟದೊಳ್-ಸುಂದರವಾದ ಕುತೂಹಲವುಳ್ಳ ವಿಶೇಷವಾದ ವಿಶಾಲವಾದ ವಿನೋದದ ಘಟ್ಟದಲ್ಲಿ, ಭರದೆ-ಬೇಗನೇ, ಸಮಾಪ್ತಿಗೆಯ್ದೊಡೆ-ಮುಗಿಸಿಬಿಟ್ಟರೆ, ಇದು-ಈ ಕ್ರಮವು, ಸಲ್ಲದು ಸಲ್ಲದು-ಸಲ್ಲುವುದಿಲ್ಲ ಸಲ್ಲುವುದಿಲ್ಲ. ಇನ್ನುಂ-ಇನ್ನೂ, ಇಂತು-ಹೀಗೆ, ಉರಗಕುಲಕ್ಕೆ-ಸರ್ಪಕುಲಕ್ಕೆ, ಮೇಣ್-ಮತ್ತೆ, ವಿನತೆಗೆ-ವಿನತೆಗೆ, ಆದುದಂ- ಆದದ್ದನ್ನು ಎಲ್ಲಮಂ-ಎಲ್ಲವನ್ನೂ ಪೇೞಿಂ-ಹೇಳಿರಿ, ಎಂದು-ಎಂದು ಪೇೞ್ದಪರ್-ಹೇಳಿದರು ಚಂಪಕಮಾಲಾವೃತ್ತ.)


ವ॥ಅಂತಲ್ಲದೆಯುಂ 

(ಹಾಗಲ್ಲದೆಯೂ)


ಕಂ॥ ಮುಗಿಯದೆ  ಕುತುಕಂ ಕಥೆಯೊಳ್

ತಗದಿಂತುಟು ನಿಲ್ಲಿಸಲ್ಕೆ ಮುನಿಪರೆ ಮುನಿವರ್ 

ಸೊಗದೆ ರಸಘಟ್ಟಿ ಬಾರದೆ

ಜಗುೞಲ್ ಮೇಣ್ ಸಲ್ಲದಲ್ತೆ ಕತೆಯೊಳ್ ರತದೊಳ್ ॥೮೪॥

(ಟೀ-ಕಥೆಯೊಳ್-ಕಥೆಯಲ್ಲಿ, ಕುತುಕಂ-ಕುತೂಹಲವು,  ಮುಗಿಯದೆ-ಮುಗಿಯದೇ ಇದ್ದಾಗ, ಇಂತುಟು-ಹೀಗೆ, ನಿಲ್ಲಿಸಲ್ಕೆ-ನಿಲ್ಲಿಸುವುದಕ್ಕೆ ತಗದು-ಯೋಗ್ಯವಾಗುವುದಿಲ್ಲ. ಮುನಿಪರೆ-ಋಷಿಗಳೇ, ಮುನಿವರ್-ಸಿಟ್ಟಾಗುತ್ತಾರೆ. ಸೊಗದೆ-ಚೆನ್ನಾಗಿ, ರಸಘಟ್ಟಿ-ರಸಘಟ್ಟಿ/ರಸಸ್ಥಾನವು, ಬಾರದೆ-ಬರದಿರುವಾಗ, ಜಗುೞಲ್-ದೂರ ಹೋಗಲು, ಮೇಣ್-ಮತ್ತೆ, ಕತೆಯೊಳ್-ಕಥೆಯಲ್ಲಿಯೂ, ರತದೊಳ್-ರತಿಕ್ರೀಡೆಯಲ್ಲಿಯೂ, ಸಲ್ಲದಲ್ತೆ-ಸಲ್ಲುವುದಿಲ್ಲ ಅಲ್ಲವೇ! ಕಂದಪದ್ಯ)


ಕಂ।। ಮುಂದಿನ ದಿನದೊಳ್ ಪಂದ್ಯದೆ

ಸಂದುದದೇಂ ಕದ್ರುವಾ ವಿನತೆಯುಮದೆಂತಾ

ನಂದದೆ ಪೋದರ್ ನೋಡಲ್

ಬೃಂದಾರಕಕುಲಪವಾಜಿಯೆಂತೆಸೆದಿರ್ಕುಂ ॥೮೫॥

(ಟೀ-ಮುಂದಿನ-ಮಾರನೆಯ, ದಿನದೊಳ್-ದಿನದಲ್ಲಿ, ಪಂದ್ಯದೆ-ಸ್ಪರ್ಧೆಯಲ್ಲಿ, ಅದೇಂ-ಅದೇನು, ಸಂದುದು- ಆಯಿತು.  ಕದ್ರುವು-ಕದ್ರುವು, ಆ ವಿನತೆಯುಂ-ಆ ವಿನತೆಯೂ, ಅದೆಂತು-ಅದ ಹೇಗೆ, ಆನಂದದೆ-ಸಂತೋಷದಿಂದ, ನೋಡಲ್-ನೋಡಲು, ಪೋದರ್-ಹೋದರು, ಬೃಂದಾರಕ-ಕುಲಪ-ವಾಜಿಯು- ದೇವತೆಗಳ ಕುಲದ ಒಡೆಯನಾದ ಇಂದ್ರನ ಕುದುರೆಯು, ಎಂತು-ಹೇಗೆ, ಎಸೆದಿರ್ಕುಂ-ಶೋಭಿಸಿತ್ತು. ಕಂದಪದ್ಯ)


ಕಂ।। ದೊರೆತೊಡೆ ಶಾಪಂ ಬರ್ದುಕುವು

ದರಿದೆನುತೇಂ ಬಾೞ್ವ ಬಯಕೆಯಂ ಬಿಟ್ಟವೆ ಮೇಣ್

ಮರಣಂ ಸಾರ್ದೊಡೆ ಜಗದೊಳ

ಗಿಱುಂಪೆಯುಂ ಪೋರ್ವುದೈ ಜಿಜೀವಿಷೆಯಿಂದಂ॥೮೬॥

(ಟೀ-(ಕದ್ರುವಿನ ಮಕ್ಕಳು)ಶಾಪಂ-ಶಾಪವು, ದೊರೆತೊಡೆ-ಬಂದಾಗ,  ಬರ್ದುಕುವುದು-ಬದುಕುವುದು, ಅರಿದು+ಎನುತೆ-ಕಷ್ಟವೆನ್ನುತ್ತ, ಬಾೞ್ವ-ಬದುಕುವ, ಬಯಕೆಯಂ-ಆಸೆಯನ್ನೇ ಬಿಟ್ಟವೆ ಏಂ-ಬಿಟ್ಟವೇನು? ಮೇಣ್-ಮತ್ತೆ, ಮರಣಂ-ಮೃತ್ಯುವು, ಸಾರ್ದೊಡೆ-ಸನಿಹಕ್ಕೆ ಬಂದಾಗ, ಜಗದೊಳಗೆ-ಜಗತ್ತಿನಲ್ಲಿ, ಇಱುಂಪೆಯುಂ-ಇರುವೆಯೂ ಕೂಡ, ಜಿಜೀವಿಷೆಯಿಂದಂ-ಬದುಕುವ ಇಚ್ಛೆಯಿಂದ, ಪೋರ್ವುದೈ-ಹೋರಾಡುವುದು! ಕಂದಪದ್ಯ)


ಕಂ।। ವಿನತೆಗೆ ಪುಟ್ಟಿದ ಮಕ್ಕಳೊ

ಳೆನಿತೋ ವೀರತ್ವಮಿರ್ಪನಿನ್ನೊರ್ವ ಸುತಂ

ಮುನಿದಣ್ಣನಿತ್ತ ಶಾಪಮ

ನೆನಿತೇಂ ಪರಿಹರಿಸಿ ಕಾಯ್ದನೋ ಪೇೞಿಮಲಾ! ॥೮೭॥

(ಟೀ- ವಿನತೆಗೆ-ವಿನತೆಗೆ, ಪುಟ್ಟಿದ-ಹುಟ್ಟಿದ, ಮಕ್ಕಳೊಳ್-ಮಕ್ಕಳಲ್ಲಿ, ಎನಿತೋ-ಎಷ್ಟೋ, ವೀರತ್ವಂ-ವೀರತ್ವ/ಪರಾಕ್ರಮವು, ಇರ್ಪಂ-ಇರುವವನು, ಇನ್ನೊರ್ವ-ಇನ್ನೊಬ್ಬ, ಸುತಂ-ಮಗನು,ಮುನಿದು-ಸಿಟ್ಟಾಗಿ, ಅಣ್ಣಂ-ಅಣ್ಣನಾದ ಅರುಣನು, ಇತ್ತ-ಕೊಟ್ಟ, ಶಾಪಮಂ-ಶಾಪವನ್ನು, ಎನಿತೇಂ-ಹೇಗೆ ಏನು, ಪರಿಹರಿಸಿ-ಪರಿಹಾರ ಮಾಡಿ/ನಿವಾರಿಸಿ, ಕಾಯ್ದನೋ-ಕಾಪಾಡಿದನೋ, ಪೇೞಿಮಲಾ!-ಹೇಳಿರಿ. ಕಂದಪದ್ಯ)


ಕಂ।। ಅವನಾರ್ ಬೀರದೆ ಗೆಲ್ದಂ

ಸವತಿಯದೆಂತೊಪ್ಪಿದಳ್ ಬಿಡಲ್ ದಾಸ್ಯಮನೇ

ಜವದಿಂ ಕುತುಕಮನೞುಪಲ್

ಕವನಿಸಿ ನೀಮಿಂತು ಪೇೞಿಮುಳಿದುದನೀಗಳ್ ॥೮೮॥

(ಟೀ-ಅವನಾರ್-ಅವನು ಯಾರು, ಬೀರದೆ-ಪರಾಕ್ರಮದಿಂದ, ಗೆಲ್ದಂ-ಗೆದ್ದವನು? ಸವತಿಯು- ಸವತಿಯಾದ ಕದ್ರುವು, ಅದೆಂತು-ಅದು ಹೇಗೆ, ದಾಸ್ಯಮನೇ-(ವಿನತೆಯ)ದಾಸ್ಯವನ್ನೇ, ಬಿಡಲ್-ಬಿಡುವುದಕ್ಕೆ,  ಒಪ್ಪಿದಳ್-ಒಪ್ಪಿದಳು? ಜವದಿಂ-ಬೇಗದಿಂದ, ಕುತುಕಮಂ-ಕುತೂಹಲವನ್ನು, ಅೞುಪಲ್-ಅಳಿಸಲು/ಕಳೆಯಲು, ಈಗಳ್-ಈಗ, ಕವನಿಸಿ-ಕವಿತೆಗಳನ್ನು ರಚಿಸಿ, ನೀಂ ಇಂತು-ನೀವು ಹೀಗೆ, ಉಳಿದುದಂ-ಉಳಿದಿರುವುದನ್ನು, ಪೇೞಿಂ-ಹೇಳಿರಿ. ಕಂದಪದ್ಯ)


ವ॥ ಎಂದು ಸಮಸ್ತಮುನಿಕುಲಂ ಕೇಳ್ದೊಡಂ ಸೂತಪುರಾಣಿಕರ್ ಸಂತಸಂದಾಳ್ದು 

(ಎಂದು-ಹೀಗೆಂದು, ಸಮಸ್ತ-ಮುನಿಕುಲಂ-ಸಂಪೂರ್ಣವಾದ ಮುನಿಗಳ ಗುಂಪು, ಕೇಳ್ದೊಡಂ-ಕೇಳಿದೊಡನೆ, ಸೂತಪುರಾಣಿಕರ್-ಸೂತಪುರಾಣಿಕರು, ಸಂತಸಂದಾಳ್ದು-(ಸಂತಸಂ+ತಾಳ್ದು)-ಸಂತೋಷವನ್ನು ಹೊಂದುತ್ತಾ- )


ಕಂ॥ ಉತ್ತರಿಪೆಂ ಸಕಲಮನಾಂ

ಬಿತ್ತರಿಪೆಂ ಕಥೆಯನಿಂತು ತ್ವತ್ಕೌತುಕದಿಂ

ಚಿತ್ತಂ ಪಕ್ವಮೆ ಎನುತುಂ

ಸತ್ತಮರೆ ಪರೀಕ್ಷಿಸಲ್ಕೆ ನಿಲಿಸಿದೆನೆಂದರ್॥೮೯॥

(ಟೀ-ಸತ್ತಮರೆ-ಸತ್ತ್ವಶಾಲಿಗಳೇ!/ಸಜ್ಜನರೇ! ಸಕಲಮಂ-ಎಲ್ಲವನ್ನೂ, ಆಂ-ನಾನು, ಉತ್ತರಿಪೆಂ-ಉತ್ತರಿಸುತ್ತೇನೆ. ಕಥೆಯಂ-ಕಥೆಯನ್ನು, ಇಂತು-ಹೀಗೆ, ಬಿತ್ತರಿಪೆಂ-ವಿಸ್ತರಿಸುತ್ತೇನೆ/ವಿಸ್ತಾರವಾಗಿ ಹೇಳುತ್ತೇನೆ. ತ್ವತ್ಕೌತುಕದಿಂ(ತ್ವತ್+ಕೌತುಕದಿಂ)-ನಿಮ್ಮ ಕುತೂಹಲದಿಂದ, ಚಿತ್ತಂ-ಮನಸ್ಸು, ಪಕ್ವಮೆ-ಪಕ್ವವಾಗಿದೆಯಾ, ಎನುತುಂ- ಎನ್ನುತ್ತ, ಪರೀಕ್ಷಿಸಲ್ಕೆ-ಪರೀಕ್ಷಿಸುವುದಕ್ಕೆ,  ನಿಲಿಸಿದೆಂ-ನಿಲ್ಲಿಸಿದೆ, ಎಂದರ್-ಎಂದರು. ಕಂದಪದ್ಯ)


ವ॥ ಬೞಿಕಂ ವೈನತೇಯನ ಕಥೆಯಂ ಮುಂದುವರೆಸಲ್ ಗರುತ್ಮಂತನಂ ಸ್ತುತಿಸಿದರ್ ಅದೆಂತೆನೆ-

(ಬೞಿಕಂ-ಆಮೇಲೆ, ವೈನತೇಯನ-ಗರುಡನ, ಕಥೆಯಂ-ಕಥೆಯನ್ನು, ಮುಂದುವರೆಸಲ್-ಮುಂದುವರೆಸಲು, ಗರುತ್ಮಂತನಂ-ಗರುತ್ಮಂತನನ್ನು/ಗರುಡನನ್ನು, ಸ್ತುತಿಸಿದರ್-ಸ್ತುತಿ ಮಾಡಿದರು, ಅದೆಂತೆನೆ-ಅದು ಹೇಗೆಂದರೆ-)


ಖಚರಪ್ಲುತ॥

ಪಕ್ಷಚಾಲನವೇಗದೆ ಜಂಝಾವಾತಮೆ ಬಂದುದೊ ನೋಡೆ ಸ

ಲ್ಲಕ್ಷಣಾನ್ವಿತರೂಪದೆ ನೇಸರ್ ಮೇಣಿಳೆಗೆಯ್ದವೊಲೆಯ್ದಿರ

ಲ್ಕೀ ಕ್ಷಮಾತಳಭಾರಮೆ ಬಲ್ಪಿಂದಂ ಪರಮಾಣುವೆನಿಪ್ಪೊಡಂ

ದಕ್ಷಖೇಚರರಾಜನೆ ನಿನ್ನೀ ಮೈಮೆಯನೇವೊಗಳ್ವೆಂ ವಲಂ ॥೯೦॥

(ಟೀ- ಪಕ್ಷ-ಚಾಲನ-ವೇಗದೆ-ರೆಕ್ಕೆಯನ್ನು ಬೀಸುವ ವೇಗದಲ್ಲಿ, ಜಂಝಾವಾತಮೆ-ಚಂಡಮಾರುತವೇ/ಬಿರುಗಾಳಿಯೇ, ಬಂದುದೊ-ಬಂದಿದೆಯೋ, ನೋಡೆ-ನೋಡಲು, ಸಲ್ಲಕ್ಷಣಾನ್ವಿತರೂಪದೆ-(ಸತ್+ಲಕ್ಷಣಾನ್ವಿತ-ರೂಪದೆ)-ಒಳ್ಳೆಯ ಲಕ್ಷಣದಿಂದ ಕೂಡಿದ ರೂಪದಿಂದ, ನೇಸರ್-ಸೂರ್ಯನೇ, ಮೇಣ್-ಮತ್ತೆ, ಇಳೆಗೆ-ಭೂಮಿಗೆ, ಎಯ್ದವೊಲ್-ಬಂದ ಹಾಗೆಯೇ, ಎಯ್ದಿರಲ್ಕೆ ಈ- ಬಂದಿರಲು ಈ,  ಕ್ಷಮಾತಳ-ಭಾರಮೆ-ಭೂತಳದ ಭಾರವೇ, ಬಲ್ಪಿಂದಂ-ಬಲ್ಮೆಯಿಂದ, ಪರಮಾಣು-ಪರಮಾಣು/ಅತಿಸೂಕ್ಷ್ಮವಾದ ವಸ್ತು, ಎನಿಪ್ಪೊಡಂ-ಎಂದೆನ್ನಿಸುತ್ತಿರಲು, ದಕ್ಷ-ಖೇಚರ-ರಾಜನೆ-ಸಮರ್ಥನಾದ ಪಕ್ಷಿಸಂಕುಲದ ರಾಜನೇ, ನಿನ್ನೀ-ನಿನ್ನ ಈ, ಮೈಮೆಯಂ-ಮಹಿಮೆಯನ್ನು, ಏವೊಗಳ್ವೆಂ ವಲಂ-ಏನು ತಾನೇ ಹೊಗಳಬಲ್ಲೆ!

ಇದು ಖಚರಪ್ಲುತ ಎಂಬ ವಿರಳವಾಗಿ ಬಳಕೆಯಲ್ಲಿರುವ ವೃತ್ತ. ಖಚರ-ಪಕ್ಷಿಯ/ಗರುಡನ, ಪ್ಲುತ-ನೆಗೆತ ಎಂಬ ಅರ್ಥವೂ ಬರುವುದರಿಂದ ಗರುಡನ ಸ್ತುತಿಗೆ ತಕ್ಕದ್ದಾಗಿದೆ.)


ಇಂತು ಸಮಸ್ತಬುಧಜನರೋಮಹರ್ಷಣತತ್ಪರವೈಚಿತ್ರವಿಲಾಸೋಚಿತವಕ್ರೋಕ್ತಿಧ್ವನಿಮಯಮರಂದಮಾಧುರ್ಯಪರಿವೇಷ್ಟಿತರಸನಿರ್ಭರೌಜಃಪೂರ್ಣಪ್ರಸನ್ನಕವಿತಾವನಿತಾವಿಭ್ರಮವಿಷಯಲೋಲುಪವಾವದೂಕ ಚತುರ್ವಿಧಕವಿತ್ವಸತ್ರಚತುರ್ಮುಖ ಕರ್ಣಾಟಾವಧಾನೀ ಕೇಶದ್ವಯಮಾತ್ರಾವರಕೇಶವರಾಜೇತ್ಯಾದಿ ಬಿರುದಾಲಂಕೃತ ಕೊಪ್ಪಲತೋಟ ಗಣೇಶಭಟ್ಟವಿರಚಿತ ವೈನತೇಯವಿಜಯಮೆಂಬ ಲಘುಪ್ರಬಂಧಕಾವ್ಯದೊಳ್ ಪೀಠಿಕಾಪ್ರಕರಣಮೆಂಬ 

ಪ್ರಥಮಾಶ್ವಾಸಂ ॥

(ಹೀಗೆ ಎಲ್ಲ ವಿದ್ವಾಂಸರಾದವರ ರೋಮಾಂಚನವನ್ನುಂಟು ಮಾಡುವುದರಲ್ಲಿ ತತ್ಪರವಾದ ವೈಚಿತ್ರ್ಯವುಳ್ಳ, ವಿಲಾಸದ ಔಚಿತ್ಯವಕ್ರೋಕ್ತಿಧ್ವನಿಗಳೆಲ್ಲ ಕೂಡಿಕೊಂಡಿರುವ, ಮಕರಂದದ ಮಾಧುರ್ಯದಿಂದ ಸುತ್ತುವರೆಯಲ್ಪಟ್ಟ, ರಸನಿರ್ಭರವಾದ, ಓಜಸ್ಸಿನಿಂದ ಕೂಡಿದ, ಪ್ರಸನ್ನವಾದ ಕವಿತೆಯೆಂಬ ವನಿತೆಯ ವಿಭ್ರಮದ ವಿಷಯದಲ್ಲಿ ಲೋಲುಪನಾದ, ವಾಚಾಳಿಯಾದ, ಚತುರ್ವಿಧಕವಿತ್ವವೆಂಬ ಯಜ್ಞಕ್ಕೆ ಚತುರ್ಮುಖನಾದ, ಕನ್ನಡದ ಅವಧಾನಿಯಾದ, ಕೇಶದ್ವಯಮಾತ್ರಾವರಕೇಶವರಾಜ (ಕೇಶಿರಾಜನಿಗೆ ಎರಡು ಕೂದಲಷ್ಟು ಕಡಿಮೆ) ಎಂಬುದೇ ಮೊದಲಾದ ಬಿರುದುಗಳಿಂದ ಅಲಂಕರಿಸಲ್ಪಟ್ಟ, ಕೊಪ್ಪಲತೋಟದ ಗಣೇಶಭಟ್ಟನು ಬರೆದ "ವೈನತೇಯವಿಜಯವು" ಎಂಬ ಲಘುಪ್ರಬಂಧಕಾವ್ಯದಲ್ಲಿ ಪೀಠಿಕಾಪ್ರಕರಣವೆಂಬ ಮೊದಲ ಆಶ್ವಾಸವು)

ಶುಕ್ರವಾರ, ಆಗಸ್ಟ್ 21, 2020

ವೈನತೇಯವಿಜಯಂ- ಗರುಡನ ಕಥೆ -೩

(ಕದ್ರುವಿನ ಮೊಟ್ಟೆಗಳಿಂದ ಸಾವಿರ ಸರ್ಪಗಳು ಹುಟ್ಟುವುದು, ವಿನತೆಯ ಮೊಟ್ಟೆಯಿಂದ ಅರುಣ ಹುಟ್ಟುವುದು ಹಾಗೂ ಅವನು ಸೂರ್ಯನ ಸಾರಥಿಯಾದ ಕಥೆ)

 ವ॥ ಆ ಪೊೞ್ತೊಳ್ ಕದ್ರುವಿಟ್ಟ ಮೊಟ್ಟೆಗಳಿಂ ಕಾದ್ರವೇಯರೆನಿಸಿರ್ಪ ಸರ್ಪಂಗಳ್ ಜನ್ಮಂದಾಳ್ದುವದೆಂತೆನೆ-

(ಟೀ-ಆ ಪೊೞ್ತೊಳ್- ಆ ಹೊತ್ತಿನಲ್ಲಿ, ಕದ್ರುವು-ಕದ್ರುವು, ಇಟ್ಟ-ಇಟ್ಟಿರುವ, ಮೊಟ್ಟೆಗಳಿಂ- ಮೊಟ್ಟೆಗಳಿಂದ/ಅಂಡಗಳಿಂದ, ಕಾದ್ರವೇಯರ್- ಕದ್ರುವಿನ ಮಕ್ಕಳು ಎನಿಸಿರ್ಪ-ಎನಿಸಿರುವ, ಸರ್ಪಂಗಳ್-ಸರ್ಪಗಳು, ಜನ್ಮಂದಾಳ್ದುವು(ಜನ್ಮಂ+ತಾಳ್ದುವು)-ಜನ್ಮವನ್ನು ಪಡೆದವು, ಅದೆಂತೆನೆ-ಅದು ಹೇಗೆಂದರೆ-)


ಪೃ॥ ಪೊಗೞ್ದ ಬಿಳಿಮೊಟ್ಟೆಯೊಂದೊಡೆಯೆ ಕಾಯುತುಂ ಕಾಲದೊಳ್

ಜಗುಳ್ದು ಸಿತಕೋಶದಿಂ ಪೊಳೆದು ಮೌಕ್ತಿಕಂ ಕರ್ಪಿನಿಂ

ತಗುಳ್ದ ತೆಱದಿಂದೆ ಮೇಣ್ ನಯನಯುಗ್ಮಮುಂ ಮಿಳ್ಮಿಳಂ

ನೆಗೞ್ದು ಸಲುತಿರ್ದೊಡಂ ಭುಜಗರಾಜನೇ ಪುಟ್ಟಿದಂ ॥೪೩॥

(ಟೀ-ಪೊಗೞ್ದ-ಹೊಗಳಲ್ಪಟ್ಟ,  ಬಿಳಿಮೊಟ್ಟೆಯು+ಒಂದು-ಒಂದು ಬಿಳಿಯ ಮೊಟ್ಟೆಯು, ಒಡೆಯೆ-ಒಡೆಯಲು, ಕಾಲದೊಳ್-ಕಾಲದಲ್ಲಿ, ಕಾಯುತುಂ-ಕಾಯುತ್ತಾ, ಜಗುಳ್ದು- ಸರಿದು/ಹೊರಗೆಬಂದು, ಸಿತಕೋಶದಿಂ-ಬಿಳಿಯ ಕೋಶದಿಂದ/ಚಿಪ್ಪಿನಿಂದ, ಪೊಳೆದು-ಹೊಳೆಯುತ್ತಾ, ಮೌಕ್ತಿಕಂ-ಮುತ್ತು, ಕರ್ಪಿನಿಂ-ಕಪ್ಪಿನಿಂದ, ತಗುಳ್ದ-ಹತ್ತಿಕೊಂಡ, ತೆಱದಿಂದೆ ಮೇಣ್-ರೀತಿಯಂದ ಮತ್ತೆ,  ನಯನಯುಗ್ಮಮುಂ-ಕಣ್ಣುಗಳೆರಡೂ, ಮಿಳ್ಮಿಳಂ-ಮಿಳಮಿಳನೆ ನೆಗೞ್ದು-ಚೆನ್ನಾಗಿ, ಸಲುತಿರ್ದೊಡಂ-ಸಲ್ಲುತ್ತಿರಲು, ಭುಜಗರಾಜನೇ-ಸರ್ಪರಾಜನೇ, ಪುಟ್ಟಿದಂ-ಹುಟ್ಟಿದನು, ಪೃಥ್ವೀವೃತ್ತ)


ಭು॥ ಸದಾ ಚಿಂತಿಸಿರ್ಪಳ್ ಸುತಾಕಾಂಕ್ಷೆಯಿಂದಂ

ಮುದಂಬೆತ್ತವಳ್ ಕದ್ರು ಬೀಜಸ್ವರೂಪಂ

ತದೀಯಾಶೆಯೇನಂಕುರಂಗೊಂಡ ಪಾಂಗಿಂ

ದದೋ ಪುಟ್ಟಿತಿನ್ನೊಂದುರೋಗಾಮಿಪೋತಂ ॥೪೪॥

(ಟೀ-ಮುದಂಬೆತ್ತವಳ್-(ಮುದಂ+ಪೆತ್ತವಳ್) ಸಂತೋವನ್ನು ಪಡೆದವಳು, ಕದ್ರು-ಕದ್ರುವು, ಸುತಾಕಾಂಕ್ಷೆಯಿಂದಂ-(ಸುತ+ಆಕಾಂಕ್ಷೆಯಿಂದಂ) ಮಕ್ಕಳು ಬೇಕೆಂಬ ಬಯಕೆಯಿಂದ, ಸದಾ-ಯಾವತ್ತೂ, ಚಿಂತಿಸಿರ್ಪಳ್-ಚಿಂತಿಸುತ್ತಿದ್ದಳು. ತದೀಯಾಶೆ-(ತದೀಯ+ಆಶೆ)ಅವಳ ಆಶೆ,  ಏಂ-ಏನು, ಬೀಜಸ್ವರೂಪಂ- ಬೀಜದ ರೂಪದಲ್ಲಿ ಇದ್ದುದು, ಅಂಕುರಂಗೊಂಡ-ಮೊಳಕೆಯೊಡೆದ, ಪಾಂಗಿಂದ-ಹಾಗೆಯೇ, ಅದೋ-ಅದೋ ಅಲ್ಲಿ, ಇನ್ನೊಂದು-ಮತ್ತೊಂದು, ಉರೋಗಾಮಿಪೋತಂ-ಸರ್ಪದ ಮರಿಯು, ಪುಟ್ಟಿತು-ಹುಟ್ಟಿತು.

ಸರ್ಪದ ಮರಿಯು ಮೊಟ್ಟೆಯನ್ನು ಒಡೆದುಕೊಂಡು ಹೊರಬರುತ್ತಿರುವುದು, ಅವಳ ಆಶೆಯೆಂಬ ಬೀಜ ಮೊಳಕೆಯೊಡೆದಿರುವುದಕ್ಕೆ ಹೋಲಿಸಲ್ಪಟ್ಟಿದೆ. ಭುಜಂಗಪ್ರಯಾತವೃತ್ತ.)


ತೇ॥ ಅಂತು ಪಲವಾರು ಪಾವುಗಳ್ ಪುಟ್ಟಿ ಬರುತುಂ

ಪಿಂತೆ ಕದ್ರು ಪಡೆದಿರ್ಪ ವರದೊಂದು ಬಲದಿಂ

ಸಂತಸಂ ನೀೞ್ದುವಾಕೆಗಂ ಬಳೆಯುವಾಗಳ್

ನೋಂತ ನೋಂಪಿ ಫಲಮಿತ್ತಿರಲ್ ಸೊಗಮೆ ಸಲ್ಗುಂ ॥೪೫॥

(ಟೀ- ಪಿಂತೆ-ಹಿಂದೆ, ಕದ್ರು-ಕದ್ರುವು, ಪಡೆದಿರ್ಪ-(ಕಶ್ಯಪನಿಂದ) ಪಡೆದಿದ್ದ, ವರದೊಂದು- ವರದ ಒಂದು, ಬಲದಿಂ- ಶಕ್ತಿಯಿಂದ, ಅಂತು-ಹಾಗೆ, ಪಲವಾರು-ಹಲವಾರು, ಪಾವುಗಳ್-ಹಾವುಗಳು, ಪುಟ್ಟಿ ಬರುತುಂ- ಹುಟ್ಟಿ ಬರುತ್ತಾ,  ಬಳೆಯುವಾಗಳ್-ಬೆಳೆಯುತ್ತಿರುವಾಗ, ಆಕೆಗಂ-ಕದ್ರುವಿಗೆ, ಸಂತಸಂ-ಸಂತೋಷವನ್ನು, ನೀೞ್ದುವು-ಕೊಟ್ಟವು, ನೋಂತ-ತೊಟ್ಟಂತಹ, ನೋಂಪಿ-ವ್ರತವು, ಫಲಮಿತ್ತಿರಲ್-ಸಫಲವಾದಾಗ, ಸೊಗಮೆ-ಸುಖವೇ, ಸಲ್ಗುಂ-ಸಲ್ಲುತ್ತದೆ. ತೇಟಗೀತಿ, ಅರ್ಥಾಂತರನ್ಯಾಸಾಲಂಕಾರ.)


ವ॥ ಅಂತು ಕಾಲಂ ಕೞೆಯುತ್ತಿರಲ್ಕೆ ಕದ್ರುವಿನ ಸಹಸ್ರಾಂಡಂಗಳುಂ ಸಹಸ್ರನಾಗಂಗಳಾಗಿ ಬಲಮಂ ಪಡೆದು ಬಳೆಯುತ್ತುಮಿರಲ್

(ಅಂತು-ಹಾಗೆ, ಕಾಲಂ-ಕಾಲವು, ಕೞೆಯುತ್ತಿರಲ್ಕೆ-ಕಳೆಯುತ್ತಿರಲು, ಕದ್ರುವಿನ-ಕದ್ರುವಿನ, ಸಹಸ್ರಾಂಡಂಗಳುಂ-ಸಾವಿರ ಮೊಟ್ಟೆಗಳೂ, ಸಹಸ್ರನಾಗಂಗಳಾಗಿ-ಸಾವಿರ ಸರ್ಪಗಳಾಗಿ, ಬಲಮಂ-ಬಲವನ್ನು, ಪಡೆದು-ಪಡೆದುಕೊಂಡು, ಬಳೆಯುತ್ತುಮಿರಲ್-ಬೆಳೆಯುತ್ತಿರಲು-)


ಕಂ॥ ತನ್ನಯ ತತ್ತಿಗಳೆರಡುಂ

ಮುನ್ನಂ ತೋರಿರ್ಪ ತೆಱದೊಳೇ ಸಲ್ವುದೆನು-

ತ್ತನ್ನೆಗಮಿರ್ದ ತಿತಿಕ್ಷೆಯೆ

ಬನ್ನಮೆನುತ್ತಲ್ಲಿ ವಿನತೆ ದುಡುಕಿದಳಲ್ತೇ ॥೪೬॥

(ಟೀ-ತನ್ನಯ- ನನ್ನ ಎರಡುಂ ತತ್ತಿಗಳ್-ಎರಡೂ ಮೊಟ್ಟೆಗಳು, ಮುನ್ನಂ-ಈ ಹಿಂದೆ, ತೋರಿರ್ಪ-ತೋರಿಕೊಂಡ/ಕಾಣುವ, ತೆಱದೊಳೇ-ಹಾಗೆಯೇ, ಸಲ್ವುದು- ಇವೆ, ಎನುತ್ತ-ಎಂದುಕೊಂಡು, ಅನ್ನೆಗಂ- ಅಲ್ಲಿಯ ತನಕ, ಇರ್ದ-ಇದ್ದ, ತಿತಿಕ್ಷೆಯೆ-ತಾಳ್ಮೆಯೆ, ಬನ್ನಂ- ಕಷ್ಟವಾದದುದು,ಎನುತ್ತ-ಎಂದು, ಅಲ್ಲಿ-ಆ ಸಂದರ್ಭದಲ್ಲಿ, ವಿನತೆ-ವಿನತೆಯು, ದುಡುಕಿದಳಲ್ತೇ-ದುಡುಕಿದಳಲ್ಲವೇ! ಕಂದಪದ್ಯ)


ಚಂ॥ ಮೊದಲೊಳಗಿಟ್ಟ ಮೊಟ್ಟೆಯನೆ ನೋೞ್ಪೆನೆನುತ್ತೆ ವಿಚಿಂತಿಸುತ್ತೆ ಮ-

ತ್ತದಱೊಳಗಿರ್ಪ ಬಾಲಕನನೀಕ್ಷಿಪ ಕಾತರದೊಳ್ ಜಗುೞ್ದು ತಾಂ

ಸೊದೆಗದಿರಂಗೆ ಪೋಲ್ವದನೆ ತನ್ನ ನಖಾಗ್ರದೆ ಗೀರ್ದು ಬೇಧಿಸ-

ಲ್ಕದಱೊಳೆ ಕಂಡುದೋ ಹೃದಯವೇಧಕಮಾದಪ ದೃಶ್ಯಮಾಗಳೇ ॥೪೭॥

(ಟೀ-ಮೊದಲ್-ಮೊದಲು, ಒಳಗಿಟ್ಟ-ಒಳಗೆ ಇ್ಟಿರುವಂತಹ, ಮೊಟ್ಟೆಯನೆ-ಮೊಟ್ಟೆಯನ್ನೇ, ನೋೞ್ಪೆಂ-ನೋಡುತ್ತೇನೆ, ಎನುತ್ತೆ-ಎಂದುಕೊಂಡು, ವಿಚಿಂತಿಸುತ್ತೆ-ಆಲೋಚಿಸುತ್ತಾ, ಮತ್ತೆ-ಮತ್ತೆ, ಅದಽಱೊಳಗಿರ್ಪ-ಅದರಲ್ಲಿರುವ, ಬಾಲಕನಂ-ಬಾಲಕನನ್ನು, ಈಕ್ಷಿಪ-ನೋಡುವ, ಕಾತರದೊಳ್-ತವಕದಲ್ಲಿ, ಜಗುೞ್ದು-ಹೋಗಿ, ತಾಂ-ತಾನು, ಸೊದೆಗದಿರಂಗೆ-(ಸುಧಾಕಿರಣ)ಚಂದ್ರನಿಗೆ, ಪೋಲ್ವ-ಹೋಲುವ, ಅದನೆ-ಅದನ್ನು, ತನ್ನ-ತನ್ನ, ನಖಾಗ್ರದೆ-ಉಗುರಿನ ತುದಿಯಿಂದ, ಗೀರ್ದು-ಗೀರಿ/ಗೆರೆಯೆಳೆದು, ಬೇಧಿಸಲ್ಕೆ-ಒಡೆದಾಗ, ಅದಱೊಳೆ-ಅದರಲ್ಲಿ, ಓ ಹೃದಯವೇಧಕಮಾದಪ-ಓ, ಎದೆಯನ್ನೇ ಒಡೆಯುವಂತಹ, ದೃಶ್ಯಂ- ದೃಶ್ಯವು, ಆಗಳೇ-ಆ ಕ್ಷಣದಲ್ಲಿ, ಕಂಡುದು- ಕಂಡಿತ್ತು. ಚಂಪಕಮಾಲಾವೃತ್ತ)


ಕಂ॥ ಮೊಳೆಯದ ಕಾಲ್ಗಳ ಬಾಲಕ-

-ನಳಲಿಂದಂ ಕೋಪದಿಂದಮಾವೇಗದೊಳೇ

ಕಳವಳಿಸುತೆ ತೊಳತೊಳಗುತೆ

ತಳಮಳಗೊಂಡಿರ್ಪ ತಾಯ್ಗೆ ನುಡಿದಂ ಜಡಿದಂ ॥೪೮॥

(ಟೀ-ಮೊಳೆಯದ-ಹುಟ್ಟದ/ಚಿಗುರದ, ಕಾಲ್ಗಳ-ಕಾಲುಗಳು ಉಳ್ಳ, ಬಾಲಕಂ-ಬಾಲಕನು, ಅಳಲಿಂದಂ-ದುಃಖದಿಂದ, ಕೋಪದಿಂದಂ-ಸಿಟ್ಟಿನಿಂದ, ಆವೇಗದೊಳೇ-ಆವೇಗದಲ್ಲಿ, ಕಳವಳಿಸುತೆ-ಕಳವಳಗೊಳ್ಳುತ್ತಾ, ತೊಳತೊಳಗುತೆ-ತೊಳಲಾಡುತ್ತಾ ತಳಮಳಗೊಂಡಿರ್ಪ-ತಳಮಳಗೊಂಡಿದ್ದ, ತಾಯ್ಗೆ-ತನ್ನ ತಾಯಿಗೆ, ನುಡಿದಂ-ಹೇಳಿದನು, ಜಡಿದಂ-ಬಯ್ದನು. ಕಂದಪದ್ಯ)


ಶಾ॥ ಮುನ್ನಂ ತಾಳ್ಮೆಯನಾಂತವಳ್ ಮನದೆ ತಾಳುತ್ತೆಂತೊ ಮಾತ್ಸರ್ಯಮಂ

ಬನ್ನಂ ನೀಳ್ದಪೆಯಲ್ತೆ ತಾಯೆ! ಪರಿಪೂರ್ಣಂ ದೇಹದಿಂದಿಂತು ಸ

ಲ್ವನ್ನಂ ತಾಳದೆ ಕೊಂದೆಯೌ! ನಿನಗಿದಕ್ಕಂ ಶಾಪಮೆಂಬಂದದಿಂ

ದಿನ್ನಕ್ಕುಂ ಗಡ ದಾಸ್ಯಮೆಂತೊ ಸಹಿಸಲ್ವೇಳ್ಕುಂ ಸ್ವಯಂ ಸರ್ವಮಂ॥೪೯॥

(ಟೀ-ಮುನ್ನಂ-ಮೊದಲು, ತಾಳ್ಮೆಯಂ-ತಾಳ್ಮೆಯನ್ನು, ಆಂತವಳ್-ಹೊಂದಿದ್ದವಳು, ಮನದೆ-ಮನಸ್ಸಿನಲ್ಲಿ, ಎಂತೊ-ಹೇಗೋ, ಮಾತ್ಸರ್ಯಮಂ-ಹೊಟ್ಟೆಕಿಚ್ಚನ್ನು, ತಾಳುತ್ತೆ-ತಳೆಯುತ್ತಾ,  ಬನ್ನಂ-ಕಷ್ಟವನ್ನು, ನೀಳ್ದಪೆಯಲ್ತೆ-ಕೊಟ್ಟೆಯಲ್ಲವೇ, ತಾಯೆ!-ತಾಯಿಯೇ/ಮಾತೆಯೇ! ಪರಿಪೂರ್ಣಂ-ಎಲ್ಲವೂ ತುಂಬಿಕೊಂಡು, ದೇಹದಿಂದ-ಶರೀರದಿಂದ, ಇಂತು-ಹೀಗೆ, ಸಲ್ವನ್ನಂ-ಸಲ್ಲುವ ತನಕ, ತಾಳದೆ-ತಾಳಿಕೊಳ್ಳದೇ, ಕೊಂದೆಯೌ!-ಕೊಂದುಬಿಟ್ಟೆ, ನಿನಗೆ-ನಿನಗೆ, ಇದಕ್ಕಂ-ಇದಕ್ಕೆ, ಶಾಪಂ-ಶಾಪವು ಎಂಬಂದದಿಂದ-ಎನ್ನುವಂತೆ, ದಾಸ್ಯಂ-ದಾಸ್ಯವು, ಇನ್ನಕ್ಕುಂ ಗಡ-ಇನ್ನಾಗುತ್ತದೆ, ಎಂತೊ-ಹೇಗೋ, ಸ್ವಯಂ-ಸ್ವತಃ ಸರ್ವಮಂ-ಎಲ್ಲವನ್ನೂ, ಸಹಿಸಲ್ವೇಳ್ಕುಂ-ಸಹಿಸಬೇಕಾಗುತ್ತದೆ. ಶಾರ್ದೂಲವಿಕ್ರೀಡಿತವೃತ್ತ)


ಮ॥ ಎನಗಿಂತಾದುದು! ತಮ್ಮನಂ ಕೊಲೆದೆ ಕಾಯೌ! ಪುಟ್ಟುವಂ ಕಾಲದೊಳ್

ಜನನೀ! ನಿನ್ನಯ ದಾಸ್ಯಮಂ ಪರಿಹರಿಪ್ಪಂ ಶಕ್ತನಾತಂ ವಲಂ!

ಮುನಿದೆನ್ನಂ ಕ್ಷಮಿಸೌ!ಸಮಸ್ತ ಜಗದೊಳ್ ತಾಯ್ ಕೆಟ್ಟವಳ್ ಸಲ್ಲಳೆಂ-

ದೆನುವರ್ ನನ್ನಿಯದಕ್ಕೆ! ಕಾರ್ಯಮೆನಗಂ ಪೇೞೆಂದನಾ ಪುತ್ರಕಂ ॥೫೦॥

(ಟೀ- ಆ ಪುತ್ರಕಂ-ಆ ಮಗನು, ಎನಗೆ-ನನಗೆ, ಇಂತಾದುದು-ಹೀಗಾಯ್ತು, ತಮ್ಮನಂ-ನನ್ನ ತಮ್ಮನನ್ನು, ಕೊಲೆದೆ-ಕೊಲ್ಲದೇ, ಕಾಯೌ-ಕಾಪಾಡು.ಕಾಲದೊಳ್- ಕಾಲ ಕಳೆಯುತ್ತಿರುವಾಗ, ಪುಟ್ಟುವಂ-ಹುಟ್ಟುತ್ತಾನೆ.  ಜನನೀ!-ತಾಯೇ, ನಿನ್ನಯ ದಾಸ್ಯಮಂ-ನಿನಗೆ ಶಾಪದಿಂದ ಬಂದಿರುವಂತಹ ದಾಸ್ಯವನ್ನು, ಪರಿಹರಿಪ್ಪಂ-ಪರಿಹರಿಸುತ್ತಾನೆ. ಆತಂ-ಅವನು, ಶಕ್ತಂ ವಲಂ- ಖಂಡಿತವಾಗಿಯೂ ಸಮರ್ಥನಾಗಿದ್ದಾನೆ, ಮುನಿದ-ಸಿಟ್ಟಾದ, ಎನ್ನಂ-ನನ್ನನ್ನು, ಕ್ಷಮಿಸೌ-ಕ್ಷಮಿಸು! ಸಮಸ್ತಜಗದೊಳ್-ಎಲ್ಲಾ ಜಗತ್ತಿನಲ್ಲಿ, ತಾಯ್-ಮಾತೆಯು, ಕೆಟ್ಟವಳ್-ಕೆಟ್ಟವಳಾದವಳು, ಸಲ್ಲಳ್-ಸಲ್ಲುವುದಿಲ್ಲ, ಎಂದೆನುವರ್-ಎಂದು ಹೇಳುತ್ತಾರೆ, ಅದು- ಆ ಮಾತು, ನನ್ನಿಯು-ಸತ್ಯವು ಅಕ್ಕೆ-ಆಗಲಿ! ಕಾರ್ಯಂ+ಎನಗಂ-ನನಗೆ ಕಾರ್ಯವನ್ನು, ಪೇೞ್-ಹೇಳು, ಎಂದಂ-ಎಂದನು, ಮತ್ತೇಭವಿಕ್ರೀಡಿತವೃತ್ತ)


ವ॥ ಅವನಂತೆನಲ್ಕೆ ಏನೊಂದುಮಂ ನುಡಿಯಲಾಱದೆ ವಿನತೆ ಖಿನ್ನಮನಸ್ಕೆಯಾಗಿ ಕುಳಿತಿರ್ದಾಗಳ್

(ಅವಂ-ಅವನು, ಅಂತೆನಲ್ಕೆ-ಹಾಗೆನ್ನಲು, ಏನೊಂದುಮಂ-ಏನೊಂದನ್ನೂ, ನುಡಿಯಲಾಱದೆ-ಹೇಳಲಾರದೇ, ವಿನತೆ-ವಿನತೆಯು, ಖಿನ್ನಮನಸ್ಕೆಯಾಗಿ-ಖಿನ್ನತೆಯಲ್ಲಿ, ಕುಳಿತಿರ್ದಾಗಳ್-ಕುಳಿತಿರುವಾಗ)


ಶಾ॥ ತೇಜಃಪುಂಜಮೆ ಕಂಡುದೊಂದು ನಭದೊಳ್ ಕಲ್ಯಾಣರೂಪಂಗಳಿಂ

ದೋಜಸ್ಸಿಂದದು ಗೋಳದಾಕೃತಿಯನಾಂತಾಗಳ್ ಸುಶೋಭಿಪ್ಪೊಡಂ

ರಾಜಿಕ್ಕುಂ ಬಹುರಮ್ಯಮಾದ ತೆಱದಿಂ ದ್ಯೌಲೋಕದಾ ದ್ವಾರಮೇ

ಸಾಜಂ ತಾನೆನುವಾಗಳಲ್ಲಿ ಸುರಪಾದ್ಯಾಶಾಧರರ್ ಸಾರ್ದಪರ್ ॥೫೧॥

(ಟೀ- ಒಂದು-ಒಂದು, ತೇಜಃಪುಂಜಮೆ-ತೇಜಸ್ಸಿನ/ಪ್ರಕಾಶದ  ರಾಶಿ/ಗುಂಪು, ನಭದೊಳ್-ಆಕಾಶದಲ್ಲಿ, ಕಲ್ಯಾಣರೂಪಂಗಳಿಂದ-ಮಂಗಳಕರವಾದ ರೂಪಗಳಿಂದ,  ಕಂಡುದು-ಕಾಣಿಸಿತು. ಅದು-ಆ ತೇಜಸ್ಸಿನ ಪುಂಜವು, ಓಜಸ್ಸಿಂದ-ಹೊಳಪಿನಿಂದ/ಕಾಂತಿಯಿಂದ, ಗೋಳದ+ಆಕೃತಿಯಂ+ಆಂತು-ಗೋಳಾಕಾರವನ್ನು ಪಡೆದುಕೊಂಡು, ಆಗಳ್-ಆಗ, ಸುಶೋಭಿಪ್ಪೊಡಂ-ಸುಶೋಭಿಸುತ್ತಿರಲು, ಬಹುರಮ್ಯಮಾದ-ಬಹಳ ಸುಂದರವಾದ, ತೆಱದಿಂ-ರೀತಿಯಲ್ಲಿ, ರಾಜಿಕ್ಕುಂ-ರಾಜಿಸುತ್ತಿತ್ತು. ಸಾಜಂ-ಸಹಜವಾದ, ದ್ಯೌಲೋಕದಾ-ಸ್ವರ್ಗಲೋಕದ, ದ್ವಾರಮೇ-ಬಾಗಿಲೇ,  ತಾಂ+ಎನುವಾಗಳ್- ತಾನೆಂಬಂತಿರಲು, ಅಲ್ಲಿ-ಆ ಸ್ಥಳದಲ್ಲಿ, ಸುರಪಾದಿ-ದೇವೇಂದ್ರನೇ ಮೊದಲಾದ, ಆಶಾಧರರ್-ದಿಕ್ಕುಗಳನ್ನು ಧರಿಸಿದವರು/ದಿಕ್ಪಾಲಕರು, ಸಾರ್ದಪರ್-ಬಂದರು. ಶಾರ್ದೂಲವಿಕ್ರೀಡಿತ ವೃತ್ತ)


ವ॥ ಅಂತು ದಿಕ್ಪಾಲಕರ್ ಸಕಲರ್ ಅಲ್ಲಿಗೈತಂದು ವಿನತಾಪುತ್ರಂಗೆ ವಿನತರಾಗಿ ಅವನಂ ಸ್ತುತಿಸಿದರ್ ಅದೆಂತೆನೆ-

(ಅಂತು-ಹೀಗೆ, ದಿಕ್ಪಾಲಕರ್-ದಿಕ್ಕುಗಳ ಒಡೆಯರು ಸಕಲರ್-ಎಲ್ಲರೂ, ಅಲ್ಲಿಗೆ- ಆ ಸ್ಥಳಕ್ಕೆ, ಐತಂದು- ಬಂದು, ವಿನತಾಪುತ್ರಂಗೆ- ಆ ವಿನತೆಯ ಮಗನಿಗೆ, ವಿನತರಾಗಿ- ನಮಸ್ಕರಿಸಿ, ಅವನಂ-ಅವನನ್ನು, ಸ್ತುತಿಸಿದರ್-ಸ್ತುತಿ ಮಾಡಿದರು, ಅದೆಂತೆನೆ- ಅದು ಹೇಗೆಂದರೆ-)


ತ॥ ಅರುಣವರ್ಣದೆ ಕಾಂತಿಯಾಂತನೆ ರಾಜಿಪಂಗದ ಕಾಶ್ಯಪಾ

ತರುಣವಕ್ತ್ರದೆ ಶಾಂತಿಯಾಂತನೆ ರಾಗಪರ್ಣದ ವಶ್ಯವಾಕ್

ವರಮೆ ಶಾಪಮಿದಾಯ್ತೆ ನಿನ್ನದು ಶಕ್ತಿಯೇ ಜಗಕಿರ್ಕೆ ತಾಂ

ನರದಶಾಹಮಿದಾಯ್ತೆ ಮುನ್ನಮೆ ಶಂಕೆಯೇ ಸೊಗಮಕ್ಕೆ ಪೇೞ್॥೫೨॥

(ಇದು ಗೋಮೂತ್ರಿಕಮುಂ ಯಮಲನಾಗಬಂಧಮುಮಕ್ಕುಂ)

(ಟೀ-ಅರುಣವರ್ಣದೆ- ಕೆಂಪುಬಣ್ಣದಲ್ಲಿ, ಕಾಂತಿ+ಆಂತನೆ-ಪ್ರಕಾಶವನ್ನು ಹೊಂದಿದವನೇ! ರಾಜಿಪ-ಶೋಭಿಸುತ್ತಿರುವ, ಅಂಗದ-ಮೈಯುಳ್ಳ/ದೇಹವುಳ್ಳ, ಕಾಶ್ಯಪಾ-ಕಶ್ಯಪನ ಮಗನೇ! ತರುಣವಕ್ತ್ರದೆ-ಎಳೆಯ ಮುಖದ, ಶಾಂತಿ+ಆಂತನೆ-ಶಾಂತಿಯನ್ನು ಹೊಂದಿದವನೇ!  ರಾಗಪರ್ಣದ-ಕೆಂಪು ರೆಕ್ಕೆಯ, ವಶ್ಯವಾಕ್-ಮಾತನ್ನು ವಶದಲ್ಲಿಟ್ಟುಕೊಂಡಿರುವವನೇ! ಶಾಪಂ- ಈ ಶಾಪವು, ವರಮೆ-ವರವೇ, ಇದಾಯ್ತೆ-ಇದಾಗಿಬಿಟ್ಟಿತೆ, ನಿನ್ನದು- ನಿನ್ನಯ, ಶಕ್ತಿಯೇ-ಬಲವು, ತಾಂ-ತಾನು ಜಗಕೆ+ಇರ್ಕೆ-ಜಗತ್ತಿಗೆ ಇರಲಿ, ನರದಶಾಹಂ-ಮನುಷ್ಯರ ದೆಸೆಯನ್ನು ನಿವಾರಿಸುವುದು, ಇದು+ಆಯ್ತೆ-ಇದಾಯಿತೇ! ಮುನ್ನಮೆ-ಮೊದಲೇ, ಶಂಕೆಯೇ-ಅನುಮಾನವೇ! ಸೊಗಂ+ಅಕ್ಕೆ-ಸುಖವಾಗಲಿ, ಪೇೞ್-ಹೇಳು

-ಇದರಲ್ಲಿ ಮೊದಲೆರಡು ಪಾದಗಳಲ್ಲಿ ವಿನತೆಯ ಮಗನಾದ ಅರುಣನನ್ನು ಹೊಗಳಿರುವುದೂ, ಆಮೇಲೆ ಅವನ ಶಾಪವೇ ವರವಾಯಿತೆಂದೂ, ಅವನಿಂದ ಜನರ ಉದ್ಧಾರ ಆಗಬೇಕೆಂದೂ ಕೇಳಿಕೊಳ್ಳುವುದರ ಮೂಲಕ, ದೇವತೆಗಳು ಅವನನ್ನು ಲೋಕೋಪಕಾರಕ್ಕೆ ಒಡಂಬಡಿಸುವುದಕ್ಕೆ ತೊಡಗಿದರು ಎಂದು ತಾತ್ಪರ್ಯ. ತರಳ ವೃತ್ತ, ಇದು ಚಿತ್ರಬಂಧದ ಪ್ರಕಾರಗಳಾದ ಗೋಮೂತ್ರಿಕವೂ, ಯಮಲನಾಗಬಂಧವೂ ಆಗುತ್ತದೆ.)


ಕಂ॥ ಜಗಮಿದು ತಾಳದೆಯೞಿಗುಂ

ಖಗಪತಿ! ಖಗನಾದ ಸೂರ್ಯನಾ ಬಿಸುಪಂ ಕೇಳ್

ಸೊಗದಿಂ ಸಾರಥಿಯಾಗಲ್

ಮಿಗೆಯುೞಿಗುಂ ನಿನ್ನ ಛಾಯೆಯೊಳಗಿಳೆಯೇಗಳ್ ॥೫೩॥

(ಟೀ-ಖಗಪತಿ!- ಪಕ್ಷಿರಾಜನೇ, ಖಗನಾದ-ಆಕಾಶಗಾಮಿಯಾದ, ಸೂರ್ಯನಾ- ಸೂರ್ಯನ ಆ,  ಬಿಸುಪಂ-ಬಿಸಿಯನ್ನು, ತಾಳದೆ-ತಾಳಿಕೊಳ್ಳಲಾರದೇ, ಜಗಂ+ಇದು- ಈ ಜಗತ್ತು, ಅೞಿಗುಂ-ನಾಶವಾಗುತ್ತದೆ, ಕೇಳ್-ಕೇಳು, ಸೊಗದಿಂ-ಸೊಗದಿಂದ, (ನೀನು) ಸಾರಥಿಯಾಗಲ್-ಸೂರ್ಯನ ರಥಕ್ಕೆ ಸಾರಥಿಯಾಗಲು, ನಿನ್ನ-ನಿನ್ನ, ಛಾಯೆಯೊಳಗೆ-ನೆರಳಿನಲ್ಲಿ, ಇಳೆಯು-ಭೂಮಿಯು, ಏಗಳ್-ಯಾವತ್ತೂ,  ಮಿಗೆ-ಹೆಚ್ಚಾಗಿ, ಉೞಿಗುಂ-ಉಳಿಯುತ್ತದೆ. ಕಂದಪದ್ಯ )


ವ॥ ಅಂತು ಸಂಸ್ತುತಿಸಿ ಅರುಣವರ್ಣದಿಂದರುಣನೆಂಬ ಪೆಸರಾಂತನನಾತನಂ ಸೂರ್ಯಂಗಡ್ಡಮಾಗಿ ಕಣ್ಗೆಡ್ಡಮಾಗಿ ಚಲಿಸಲ್ಕೊಡಂಬಡಿಸಲ್ಕರುಣನಿಂತೆಂದಂ-

(ಅಂತು-ಹೀಗೆ, ಸಂಸ್ತುತಿಸಿ- ಸ್ತುತಿ ಮಾಡಿ, ಅರುಣವರ್ಣದಿಂದ-ಕೆಂಪಾದ ಬಣ್ಣದಿಂದ, ಅರುಣನೆಂಬ-ಅರುಣ ಎನ್ನುವ, ಪೆಸರಾಂತನಂ-ಹೆಸರನ್ನು ಹೊಂದಿದವನಾದ, ಆತನಂ-ಅವನನ್ನು, ಸೂರ್ಯಂಗೆ-ಸೂರ್ಯನಿಗೆ, ಅಡ್ಡಮಾಗಿ-ಅಡ್ಡವಾಗಿ, ಕಣ್ಗೆ+ಎಡ್ಡಮಾಗಿ-ಕಣ್ಣುಗಳಿಗೆ ಸುಂದರವಾಗಿ ಕಾಣುವಂತೆ,  ಚಲಿಸಲ್ಕೆ-ನಡೆಯುವುದಕ್ಕೆ, ಒಡಂಬಡಿಸಲ್ಕೆ-ಒಪ್ಪಿಸಲು, ಅರುಣಂ- ಅರುಣನು ಇಂತೆಂದಂ-ಹೀಗೆ ಹೇಳಿದ)


ಚಂ॥ ಸುರರೆ ದಿಶಾಧಿಪರ್ಕಳೆ ವಿಚಾರಿಸೆ ನಿಮ್ಮಯ ವಾಕ್ಯದಿಂದಮಾ-

ನುರುತರಮೋದಮಾಂತೆನೆನೆ ಬರ್ಪೆನಿದೀಗಳೆ ದೇವವಾಕ್ಯಮಂ

ಧರೆಯೊಳೆ ಮೀರಲಾರ್ದಪರದಾರ್ ಗಡ!ಬಾೞ್ತೆಗೆ ಕಂಡುದೊಂದು ಸಂ-

ಬರಮೊದವಿರ್ಪಮಾರ್ಗಮೆನಲುತ್ಸುಕರಾದಪರಲ್ತೆ ಸರ್ವರುಂ ॥೫೪॥

(ಟೀ-ಸುರರೆ-ದೇವತೆಗಳೆ! ದಿಶಾಧಿಪರ್ಕಳೆ-ದಿಕ್ಪತಿಗಳೇ! ವಿಚಾರಿಸೆ-ವಿಚಾರಿಸಲು, ನಿಮ್ಮಯ-ನಿಮ್ಮ, ವಾಕ್ಯದಿಂದಂ- ಮಾತುಗಳಿಂದ, ಆಂ-ನಾನು, ಉರುತರ- ಅತಿಶಯವಾದ, ಮೋದಂ+ಆಂತೆಂ-ಸಂತೋಷವನ್ನು ಹೊಂದಿದೆ, ಎನೆ-ಎನ್ನಲು, ಇದೀಗಳೆ-ಇದೋ ಈಗಳೇ, ಬರ್ಪೆಂ-ಬರುತ್ತೇನೆ. ದೇವವಾಕ್ಯಮಂ-ದೇವತೆಗಳ ಮಾತನ್ನು, ಧರೆಯೊಳೆ-ಭೂಮಿಯಲ್ಲಿ, ಮೀರಲ್-ಮೀರುವುದಕ್ಕೆ, ಆರ್ದಪರ್- ಸಮರ್ಥರಾದವರು, ಅದಾರ್ ಗಡ!-ಅದುಯಾರು ಅಲ್ಲವೇ! ಬಾೞ್ತೆಗೆ-ಬದುಕಿಗೆ,  ಅದೊಂದು-ಅದೊಂದು ಸಂಬರಂ-ಸಂಭ್ರಮವು, ಒದವಿರ್ಪ-ಒದಗಿರುವ, ಮಾರ್ಗಂ-ದಾರಿಯು, ಕಂಡುದು-ಕಾಣಿಸಿದೆ, ಎನಲ್-ಎಂದೆನ್ನಲು, ಸರ್ವರುಂ-ಎಲ್ಲರೂ, ಉತ್ಸುಕರ್-ಉತ್ಸಾಹಭರಿತರು, ಆದಪರಲ್ತೆ-ಆಗುತ್ತಾರಲ್ಲವೇ! ಚಂಪಕಮಾಲಾವೃತ್ತ)


ವ॥ ಎಂದು ಮೋದದಿಂದೊಪ್ಪಲ್ ವಿನತೆ ದೇವರ್ಕಳೊಳ್ ಕೇಳ್ದಪಳ್

(ಎಂದು-ಹೀಗೆಂದು, ಮೋದದಿಂದ-ಸಂತೋಷದಿಂದ,ಒಪ್ಪಲ್-ಒಪ್ಪಿಕೊಳ್ಳಲು, ವಿನತೆ-ಅವನ ತಾಯಿ ವಿನತೆಯು, ದೇವರ್ಕಳೊಳ್-ದೇವತೆಗಳಲ್ಲಿ, ಕೇಳ್ದಪಳ್-ಕೇಳಿದಳು)


ಕಂ॥ ಅಕಟ! ಮದೀಯಸುತಂಗಂ

ವಿಕಲತೆಯೊದಗಿರ್ದೊಡೆಂತು ಕಜ್ಜಂಗೆಯ್ವಂ

ಸಕಲಧರಿತ್ರಿಯೊಳಾರುಂ

ವಿಕಟರ್ ಮೇಣ್ ಕಲಿಗಳಿಲ್ಲಮೇಂ ಕಾರ್ಯಕ್ಕಂ ॥೫೫॥

(ಟೀ-ಅಕಟ!-ಅಯ್ಯೋ! ಮದೀಯಸುತಂಗಂ-ನನ್ನ ಮಗನಿಗೆ, ವಿಕಲತೆಯು- ಅಂಗವೈಕಲ್ಯವು, ಒದಗಿರ್ದೊಡೆ-ಬಂದಿರುವುದರಿಂದ, ಎಂತು-ಹೇಗೆ, ಕಜ್ಜಂಗೆಯ್ವಂ-ಕೆಲಸವನ್ನು ಮಾಡುತ್ತಾನೆ. ಸಕಲಧರಿತ್ರಿಯೊಳ್-ಇಡಿಯ ಭೂಮಿಯಲ್ಲಿ, ಆರುಂ-ಯಾರೂ, ವಿಕಟರ್-ವಿಗಡರಾದವರು/ಸಮರ್ಥರಾದವರು, ಮೇಣ್-ಮತ್ತು, ಕಲಿಗಳ್-ಪರಾಕ್ರಮಿಗಳಾದವರು, ಕಾರ್ಯಕ್ಕಂ-ಈ ಕಾರ್ಯಕ್ಕೆ, ಇಲ್ಲಮೇಂ-ಇಲ್ಲವೇ! ಕಂದಪದ್ಯ)


ಕಂ।। ಎಂದೆನೆ ಸುರರಿಂತೆಂದರ್

ಸಂದುದು ನಿನ್ನೆಲ್ಲ ಮಾತು ತಾಯ್ತನದಿಂದಂ

ಸಂದೆಗಮೇಂ ಪೇೞ್ ತವಸುತ-

ನಿಂದನ್ಯರ್ ಸಲ್ಲರಿಹದೆ ಕಲಿಯುಂ ಬಲಿಯುಂ ॥೫೬॥

(ಟೀ-ಎಂದೆನೆ-ಎಂದೆನ್ನಲು, ಸುರರ್-ದೇವತೆಗಳು, ಇಂತೆಂದರ್-ಹೀಗೆಂದರು, "ನಿನ್ನೆಲ್ಲ ಮಾತು-ನಿನ್ನ ಈ ಎಲ್ಲ ಮಾತುಗಳೂ, ತಾಯ್ತನದಿಂದಂ-ತಾಯ್ತನದಿಂದ/ಮಾತೃಸಹಜವಾದ ಭಾವದಿಂದ, ಸಂದುದು-ಸಲ್ಲುತ್ತಿವೆ, ಸಂದೆಗಮೇಂ-ಸಂದೇಹವೇನು? ಪೇೞ್- ಹೇಳು, ತವಸುತನಿಂದ-ನಿನ್ನ ಮಗನಿಂದ, ಅನ್ಯರ್-ಬೇರೆಯಾದವರು, ಇಹದೆ-ಈ ಲೋಕದಲ್ಲಿ, ಕಲಿಯುಂ-ಪರಾಕ್ರಮಿಗಳಾದವರು, ಬಲಿಯುಂ-ಶಕ್ತಿಶಾಲಿಗಳಾದವರೂ, ಸಲ್ಲರ್-ಸಲ್ಲುವುದಿಲ್ಲ. ಕಂದಪದ್ಯ)


ವ॥ ಅಂತಲ್ಲದೆಯುಂ

(ಹಾಗಲ್ಲದೇ)


ಕಂ॥ ದಿನಮುಂ ರವಿಯಾಗಮಿಸಲ್

ತನುಜಂ ಮೇಣ್ ಬರ್ಪನವನ ಪೂರ್ವದೊಳಿದನೇ

ಮನನೀಯಮೆಂದು ನುತಿಪರ್

ಜನರರುಣೋದಯಮೆನುತ್ತೆ ನಿಚ್ಚಂ ಕಾಣೌ ॥೫೭॥

(ಟೀ-ದಿನಮುಂ-ಪ್ರತಿದಿನವೂ, ರವಿಯು-ಸೂರ್ಯನು, ಆಗಮಿಸಲ್-ಬರಲು, ತನುಜಂ ಮೇಣ್-ಮಗನೂ ಕೂಡ,ಅವನ-ಸೂರ್ಯನ, ಪೂರ್ವದೊಳ್-ಮೊದಲು, ಬರ್ಪಂ- ಬರುತ್ತಾನೆ,  ಇದನೇ-ಇದನ್ನೇ, ಮನನೀಯಂ-ಮನನ ಮಾಡುವುದು/ಚೆನ್ನಾಗಿರುವುದು, ಎಂದು-ಎನ್ನುತ್ತಾ, ಜನರು-ಎಲ್ಲ ಮನುಷ್ಯರೂ, ಅರುಣೋದಯಂ-ಅರುಣೋದಯವು, ಎನುತ್ತೆ-ಎನ್ನುತ್ತಾ ನಿಚ್ಚಂ-ನಿತ್ಯವೂ ನುತಿಪರ್-ಹೊಗಳುತ್ತಾರೆ ಕಾಣೌ-ನೋಡು. ಕಂದಪದ್ಯ)


ವ॥ ಅವರಂತೆನೆ ವಿನತೆಯುಂ ಸಂತಸದಿಂದಂ ಮಗನಂ ಬೀಳ್ಕೊಟ್ಟಳತ್ತಣಿಂ ನೇಸಱ ತೇರ್ ಕಂಡುದು

(ಅವರ್- ಅವರು, ಅಂತೆನೆ-ಹಾಗೆನ್ನಲು, ವಿನತೆಯುಂ-ವಿನತೆಯೂ, ಸಂತಸದಿಂದಂ-ಸಂತೋಷದಿಂದ, ಮಗನಂ-ಮಗನನ್ನು, ಬೀಳ್ಕೊಟ್ಟಳ್-ಬೀಳ್ಕೊಟ್ಟಳು, ಅತ್ತಣಿಂ-ಆ ದಿಕ್ಕಿನಿಂದ, ನೇಸಱ-ಸೂರ್ಯನ, ತೇರ್-ರಥವು, ಕಂಡುದು-ಕಂಡಿತ್ತು)


ರಥೋದ್ಧತಾ॥

ಬೆಂಕೆಯುಂಡೆಗದೊ ಗಾಲಿಯೊಂದೆನಲ್

ಕೊಂಕ ಕತ್ತಿನೊಳಗೇಳು ವಾಜಿಗಳ್

ಬಿಂಕದಿಂದೆಳೆದು ಸಾರುತಿರ್ಪುದ-

ಕ್ಕಂಕವಾವುದತಿ ರಮ್ಯಮಾದುದೋ!॥೫೮॥

(ಟೀ-ಅದೊ-ಅದೋ! ಬೆಂಕೆಯುಂಡೆಗೆ-ಬೆಂಕಿಯ ಉಂಡೆಗೆ,  ಗಾಲಿಯು+ಒಂದು+ಎನಲ್-ಒಂದೇ ಚಕ್ರವೆನ್ನುವಂತೆ, ಕೊಂಕ-ವಕ್ರವಾಗಿಸಿದ, ಕತ್ತಿನೊಳಗೆ-ಕುತ್ತಿಗೆಯಲ್ಲಿ ಏಳು ವಾಜಿಗಳ್-ಏಳು ಸಂಖ್ಯೆಯ ಕುದುರೆಗಳು, ಬಿಂಕದಿಂದ-ವಿಲಾಸದಿಂದ/ಗರ್ವದಿಂದ, ಎಳೆದು-ಎಳೆದುಕೊಂಡು, ಸಾರುತಿರ್ಪುದಕ್ಕೆ- ಬರುತ್ತಿರುವುದಕ್ಕೆ, ಅಂಕವು-ಸ್ಪರ್ಧಿಯಾದದ್ದು, ಆವುದು- ಯಾವುದಿದೆ? ಅತಿರಮ್ಯಮಾದುದೋ!-ಇದು ಬಹಳ ಸುಂದರವಾದದ್ದು. ರಥೋದ್ಧತಾ ವೃತ್ತ.)


ಸ್ವಾಗತಾ॥

ಚಾರುವಾಜಿಗಳೊ ಕಾಮನಬಿಲ್ಲಂ

ತೋರುವಂತೆ ಸಲೆ ಬಣ್ಣಮನಾಂತುಂ

ಪಾರುತುಂ ಕಿಡಿಯನುಣ್ಮಿಸುತಾಗಳ್

ತೇರನಲ್ಲಿಗೆಳೆತಂದುವು ಬೇಗಂ ॥೫೯॥

(ಟೀ-ಚಾರುವಾಜಿಗಳೊ-ಸುಂದರವಾದ ಕುದುರೆಗಳು, ಕಾಮನಬಿಲ್ಲಂ-ಕಾಮನ ಬಿಲ್ಲನ್ನು, ತೋರುವಂತೆ-ತೋರಿಸುತ್ತಿರುವಂತೆ, ಸಲೆ-ಸಲ್ಲುತ್ತಾ, ಬಣ್ಣಮಂ+ಆಂತುಂ-ಬಣ್ಣವನ್ನು ಹೊಂದಿ, ಪಾರುತುಂ-ಹಾರುತ್ತಾ, ಕಿಡಿಯಂ-ಬೆಂಕಿಯ ಕಿಡಿಯನ್ನು, ಉಣ್ಮಿಸುತ-ಉಕ್ಕಿಸುತ್ತಾ, ಆಗಳ್-ಆ ಹೊತ್ತಿನಲ್ಲಿ, ತೇರಂ- ರಥವನ್ನು, ಅಲ್ಲಿಗೆ-ಆ ಸ್ಥಳಕ್ಕೆ, ಬೇಗಂ-ವೇಗವಾಗಿ, ಎಳೆತಂದುವು- ಎಳೆದುಕೊಂಡು ಬಂದುವು. ಸ್ವಾಗತಾವೃತ್ತ.)


ವ॥ ಅಂತಲ್ಲಿ ಸೂರ್ಯನಂ ಕಂಡು ಅರುಣಂ ಸಂಸ್ತುತಿಸುತುಂ

(ಅಂತಲ್ಲಿ-ಹಾಗೆ ಅಲ್ಲಿ, ಸೂರ್ಯನಂ-ಸೂರ್ಯನನ್ನು, ಕಂಡು-ನೋಡಿ, ಅರುಣಂ-ಅರುಣನು, ಸಂಸ್ತುತಿಸುತುಂ-ಸ್ತುತಿಯನ್ನು ಮಾಡುತ್ತಾ-)


ಅಶ್ವಧಾಟೀ॥ ನೋಟಂ ವಿಶಾಲಮೆನೆ ಕೂಟಂ ಮಹಾಗ್ನಿಯೆನಲೂಟಕ್ಕೆ ತುಯ್ಯಲೆಸೆಯಲ್

ಪೇಟೀಕೃತಾಂಬುಕಣವಾಟೀಸ್ಥಲನ್ಯಸನಮಾಟಂ ಗಡಲ್ತೆ ನಿನಗಂ

ಚಾಟುಸ್ಫುರನ್ನಯನಘೋಟಪ್ರತಾಪಯುತಧಾಟೀಕ ಧೀರ ರವಿ ನೀಂ

ವೀಟೀಕೃತಾಗಮಕರೋಟೀವಿರಾಜಿತನೆ ಚೇಟತ್ವಮೀವುದೆನಗಂ ॥೬೦॥

(ಟೀ-ನೋಟಂ-ನಿನ್ನ ದೃಷ್ಟಿಯು, ವಿಶಾಲಂ-ವಿಶಾಲವಾದದ್ದು, ಎನೆ-ಎನ್ನಲು, ಕೂಟಂ-ನಿನ್ನ ಜೊತೆ ಮಹಾಗ್ನಿಯು-ದೊಡ್ಡದಾದ ಬೆಂಕಿಯು, ಎನಲ್-ಎಂದೆನ್ನಲು, ಊಟಕ್ಕೆ-ನಿನ್ನ ಊಟಕ್ಕೆ, ತುಯ್ಯಲ್- ಪಾಯಸವು, ಎಸೆಯಲ್-ಸಲ್ಲುತ್ತಿರಲು, ಪೇಟೀಕೃತ+ಅಂಬುಕಣ-ವಾಟೀಸ್ಥಲನ್ಯಸನಂ-ಮೂಟೆಯನ್ನಾಗಿಸಿ ಮಾಡಿದ ನೀರಿನ ಹನಿಗಳನ್ನು ಉದ್ಯಾನವನಗಳಲ್ಲಿ ಸುರಿಸುವುದು, ಆಟಂ-ಆಟವು/ಕ್ರೀಡೆಯು ಗಡಲ್ತೆ-ಅಲ್ಲವೇ ನಿನಗಂ-ನಿನಗೆ! ಚಾಟುಸ್ಫುರತ್+ನಯನಘೋಟಪ್ರತಾಪಯುತಧಾಟೀಕ-ಚಟುವಟಿಕೆಯಿಂದ ಸ್ಫುರಿಸುತ್ತಿರುವ ಕಣ್ಣುಗಳ ಕುದುರೆಗಳ ಪ್ರತಾಪದಿಂದ ಕೂಡಿದ ಗತಿಯುಳ್ಳವನು, ಧೀರ-ಧೀರನಾದ, ರವಿ-ಸೂರ್ಯನು, ನೀಂ-ನೀನು! ವೀಟೀಕೃತ+ಆಗಮಕರೋಟೀವಿರಾಜಿತನೆ-ಆಗಮಗಳ ಉನ್ನತಭಾಗವನ್ನು ವೀಳೆಯವನ್ನಾಗಿಸಿಕೊಂಡು ವಿರಾಜಮಾನನಾಗಿರವವನೇ, ಎನಗಂ-ನನಗೆ, ಚೇಟತ್ವಂ+ಈವುದು-ನಿನ್ನ ಸೇವಕನ ಕೆಲಸವನ್ನು ಕೊಡುವುದು. ಇದು ಕನ್ನಡದಲ್ಲಿ ವಿರಳವಾಗಿರುವ ಅಶ್ವಧಾಟೀ ಎಂಬ ವೃತ್ತ. ಇದರಲ್ಲಿ ಪ್ರತಿಸಾಲಿನಲ್ಲೂ ಮೂರು ಆಂತರಿಕಪ್ರಾಸಗಳು ಇರಬೇಕು ಎಂಬುದು ನಿಯಮ)


ವ॥ ಎಂದೆನೆ ಸೂರ್ಯಂ ಪ್ರಸನ್ನನಾಗುತ್ತುಂ ಅರುಣನಂ ಸಾರಥಿಯನಾಗಿಸಿ ಪೊರಮಟ್ಟನಾಗಳ್

(ಎಂದೆನೆ-ಎಂದೆನ್ನಲು, ಸೂರ್ಯಂ-ಸುರ್ಯದೇವನು, ಪ್ರಸನ್ನಂ-ಸಂತುಷ್ಟನು ಆಗುತ್ತುಂ-ಆಗುತ್ತಾ, ಅರುಣನಂ-ಅರುಣನನ್ನು, ಸಾರಥಿಯಂ-ಸಾರಥಿಯನ್ನು ಆಗಿಸಿ-ಮಾಡಿಕೊಂಡು, ಪೊರಮಟ್ಟಂ-ಹೊರಟನು, ಆಗಳ್-ಆಗ-)


ಕಂ॥ ಕ್ರಮದಿಂ ವಿರಿಂಚಿ ಚಿತ್ರಮ

ನಮಮ! ಧರಿತ್ರಿಯೊಳದೆಂತುಟೆಸಗಿದನೆನೆ ವಿ

ಭ್ರಮಿಸಿದರೆಲ್ಲರ್ ನೋಡುತೆ

ಕ್ರಮಿಸಲ್ಕರುಣಂ ಜಗುಳ್ದು ನೇಸಱ ತೇರೊಳ್ ॥೬೧॥

(ಟೀ-ಅರುಣಂ-ಅರುಣನು, ಜಗುಳ್ದು-ಹೊರಟು, ನೇಸಱ-ಸೂರ್ಯದೇವನ, ತೇರೊಳ್-ರಥದಲ್ಲಿ, ಕ್ರಮಿಸಲ್ಕೆ-ಸಾಗಲು,ಎಲ್ಲರ್-ಎಲ್ಲರೂ, ನೋಡುತೆ-ನೋಡುತ್ತಾ, "ಅಮಮ!-ಅಬ್ಬಬ್ಬ! ಕ್ರಮದಿಂ-ಈ ರೀತಿಯಲ್ಲಿ, ವಿರಿಂಚಿ-ಬ್ರಹ್ಮನು, ಚಿತ್ರಮಂ-ಚಿತ್ರವನ್ನು/ಆಶ್ಚರ್ಯನ್ನು ಧರಿತ್ರಿಯೊಳ್-ಭೂಮಿಯಲ್ಲಿ, ಅದೆಂತುಟು-ಅದು ಹೇಗೆ,  ಎಸಗಿದನೆನೆ-ರಚಿಸಿದ್ದಾನೋ!" ಎಂದು, ವಿಭ್ರಮಿಸಿದರ್-ಆಶ್ಚರ್ಯವನ್ನು ಪಟ್ಟಿದ್ದರು. ಕಂದಪದ್ಯ)


ಕಂ।। ವಿನತೆಯುಮಾನಂದದಿನೇ

ತನುಜಂ ಚೆಂಬೆಳಕನೀಯುತುಂ ಸಾರ್ದಪನೆಂ-

ದೆನುತುಂ ಸಂಭ್ರಮಮಾಂತಳ್

ಜನನಿಗೆ ಪುತ್ರಾಭ್ಯುದಯಕೆ ಮಿಗಿಲಾವುದು ದಲ್ ॥೬೨॥

(ಟೀ-ವಿನತೆಯುಂ-ವಿನತೆಯೂ, ಆನಂದದಿನೇ-ಸಂತೋಷದಲ್ಲಿಯೇ, ತನುಜಂ-ಮಗನು, ಚೆಂಬೆಳಕಂ-ಕೆಂಪಾದ ಬೆಳಕನ್ನು, ಈಯುತುಂ-ಕೊಡುತ್ತಾ, ಸಾರ್ದಪಂ- ಬಂದನು, ಎಂದೆನುತುಂ-ಎಂದೆನ್ನುತ್ತಾ ಸಂಭ್ರಮಮಾಂತಳ್-ಸಂಭ್ರಮವನ್ನು ತಳೆದಳು. ಜನನಿಗೆ-ತಾಯಿಗೆ, ಪುತ್ರಾಭ್ಯುದಯಕೆ-ಮಕ್ಕಳ ಅಭ್ಯುದಯಕ್ಕೆ, ಮಿಗಿಲ್-ಹೆಚ್ಚಾಗಿರುವುದು, ಆವುದು ದಲ್-ಯಾವುದು ತಾನೇ ಇದೆ. ಕಂದಪದ್ಯ, ಅರ್ಥಾಂತರನ್ಯಾಸಾಲಂಕಾರ)


ಕಂ।। ಸುತನ ವಚೋವಿನ್ಯಾಸದ

ಕೃತಿಯಂ ಮನದೊಳಗೆ ನೆನೆಯುತುಂ ಮತ್ತೇಗಳ್

ತನಗಿನ್ನೊರ್ವಂ ಮಗನೇ

ಜನಿಸುವನೆಂದಾಕೆ ಕಾಯುತಿರ್ದಳ್ ನಿರುತಂ ॥೬೩॥

(ಟೀ-ಸುತನ-ಮಗನ, ವಚೋವಿನ್ಯಾಸದ-ಮಾತುಗಳ ವಿನ್ಯಾಸದ, ಕೃತಿಯಂ-ಕೃತಿಯನ್ನು, ಮನದೊಳಗೆ-ಮನಸ್ಸಿನಲ್ಲಿಯೇ, ನೆನೆಯುತುಂ-ನೆನೆಸಿಕೊಳ್ಳುತ್ತಾ, ಮತ್ತೆ- ಮತ್ತೆ ಏಗಳ್-ಯಾವತ್ತೂ, ತನಗೆ-ನನಗೆ ಇನ್ನೊರ್ವಂ-ಇನ್ನೊಬ್ಬನು, ಮಗನೇ-ಮಗನೇ ಜನಿಸುವಂ-ಹುಟ್ಟುತ್ತಾನೆ, ಎಂದು-ಎಂದುಕೊಂಡು, ಆಕೆ-ಅವಳು/ವಿನತೆ, ನಿರುತಂ-ಸತತವಾಗಿ, ಕಾಯುತಿರ್ದಳ್-ಕಾಯುತ್ತಿದ್ದಳು)


--

(ಮುಂದೆ- ಸಮುದ್ರಮಥನದ ಕಥೆ, ಕದ್ರುವಿನತೆಯರ ನಡುವೆ ಸ್ಪರ್ಧೆನಡೆಯುವ ಕಥೆ)


೫೨ನೇ ಪದ್ಯದ ಚಿತ್ರಬಂಧದಲ್ಲಿ ಗೋಮೂತ್ರಿಕವು ಪ್ರಸಿದ್ಧವೇ ಆದ ಕಾರಣ ಯಮಲನಾಗಬಂಧದ ಪ್ರಸ್ತಾರವನ್ನು ಮಾತ್ರ ಇಲ್ಲಿ ತೋರಿಸಲಾಗಿದೆ.