Powered By Blogger

ಸೋಮವಾರ, ಮಾರ್ಚ್ 16, 2015

ಸಹೃದಯಕಾಲ-೧೬-ಸೂರ್ಯೋದಯ

ಮಹಾಕಾವ್ಯದಲ್ಲಿ ಯಥೋಚಿತವಾಗಿ ಅಷ್ಟಾದಶವರ್ಣನೆಗಳು ಇರಬೇಕೆಂಬುದು ಹಿಂದಿನಿಂದಿರುವ ನಿಯಮವಷ್ಟೇ ಅಲ್ಲದೆ ಅದು ಕಾವ್ಯಕ್ಕೆ ನಿಜವಾದ ಅಲಂಕಾರವೂ ಅಹುದು. ಈ ಅಷ್ಟಾದಶ ವರ್ಣನೆಗಳಲ್ಲಿ ನಗರ,ಅರ್ಣವ,ಋತು,ಶೈಲ ಇತ್ಯಾದಿಯಾಗಿ ಆಲಂಕಾರಿಕರು ಪಟ್ಟಿ ಮಾಡಿದ್ದಾರಷ್ಟೆ. ಈ ಎಲ್ಲವೂ ಕಥಾವಿಸ್ತಾರಕ್ಕೆ ಅನುಕೂಲವಾಗುವಂತೆ ಅಲ್ಲದೇ ಸಂದರ್ಭಕ್ಕೆ ಯೋಗ್ಯವಾಗಿ ಕಾವ್ಯದಲ್ಲಿ ಬಂದಲ್ಲಿ ಅದಕ್ಕೆ ಸೊಗಸು ಹೆಚ್ಚು. ಉದಾಹರಣೆಗೆ - ಜಲಕ್ರೀಡೆಯ ವರ್ಣನೆ- ಕಾವ್ಯದಲ್ಲಿ ಜಲಕ್ರೀಡಾ ವರ್ಣನೆ ಇರಬೇಕೆಂದು ಯಾರೋ ಜಲಕೇಳಿಯಾಡಿದರೆಂದಲ್ಲಿ ಸ್ವಾರಸ್ಯವಿಲ್ಲ. ಇತ್ತೀಚೆಗೆ ಮಿತ್ರರೊಬ್ಬರ ಜೊತೆ ಮಾತನಾಡುವಾಗ ಇದೇ ಪ್ರಸ್ತಾಪ ಬಂತು- ಅಲ್ಲಿ ಅವರು ಹೇಳಿದ್ದು-ಅಭಿನಂದನ ರಾಮಚರಿತದಲ್ಲಿ-ಜಲಕೇಳಿಯ ವರ್ಣನೆ  ಮಾಡಬೇಕೆಂದು ವೃದ್ಧನಾದ ದಶರಥಮಹಾರಾಜ(ಅದಾಗಲೇ ಅದೆಷ್ಟೋ ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಎಂದೂ ಹೇಳಿ) ತನ್ನ ರಾಣಿಯರ ಜೊತೆ ಜಲಕೇಳಿಯಾಡಿದ್ದನ್ನು ವರ್ಣಿಸಿದರೆ ಅದನ್ನು ಮೆಚ್ಚಲಾಗುತ್ತದೆಯೇ! ಅಥವಾ ಊಹಿಸಲಾದರೂ ಸಾಧ್ಯವೇ? ಆದರೆ ಕಾಲಿದಾಸನ ರಘುವಂಶಮಹಾಕಾವ್ಯದಲ್ಲಿ ಕೈಸನ್ನೆ ಜಲಕ್ರೀಡೆಯ ವರ್ಣನೆ ಬರುತ್ತದೆ. ಆ ಸಂದರ್ಭದಲ್ಲೇ ಅವನು ಉಂಗುರವನ್ನು ಕಳೆದುಕೊಂಡು ಅದು ಮುಂದಿನ ಕಥಾವಿಸ್ತರಣ ತಂತ್ರವಾಗಿ ಬೆಳೆಯುತ್ತದೆ. ಇದು ಔಚಿತ್ಯಪೂರ್ವಕವಾದ ವರ್ಣನೆ ಎಂದು.
ಕನ್ನಡದ ಹಲವು ಕವಿಗಳು ಎಡವಿರುವುದು ಇಂತಹ ಔಚಿತ್ಯಪ್ರಜ್ಞೆಯ ಕೊರತೆಯಿಂದಲೇ, ಅವರಲ್ಲಿ ಪಂಪ ರನ್ನರೂ ಹೊರತಾಗಿಲ್ಲ ಎಂದಮೇಲೆ ಬಡಪಾಯಿ ಆಂಡಯ್ಯನಾಗಚಂದ್ರ ಮೊದಲಾದವರು ಬದುಕಿಯಾರೇ! ಕುಮಾರವ್ಯಾಸನೊಬ್ಬ ಇಂತಹ ಹಲವರ ಸಾಲಿನಿಂದ ತುಂಬಾ ಮೇಲೇ ಉಳಿಯುತ್ತಾನೆ.(ರಾಘವಾಂಕ ಮೊದಲಾದವರ ಬಗ್ಗೆ ಗೊತ್ತಿಲ್ಲ) ಅಲ್ಲದೇ ಅವನಲ್ಲಿ ಅನೌಚಿತ್ಯ ತುಂಬಾ ಕಡಿಮೆ-ಇಲ್ಲವೆಂದೇ ಹೇಳಬಹುದು. ಏಕೆಂದರೆ ಅವನು ಯಾವುದೇ ಪೂರ್ವಾಗ್ರಹ ಇಲ್ಲದೇ ಬರೆದವನು ಎಂಬುದಂತೂ ಮುಖ್ಯ ಕಾರಣವಾಗುತ್ತದೆ. ಪಂಪರನ್ನಾದಿಗಳಿಗೆ ಆಶ್ರಯದಾತರನ್ನು ಮೆಚ್ಚಿಸುವ ಬಯಕೆಯೇ ಮುಖ್ಯವಾಗುತ್ತದೆ,ಆಂಡಯ್ಯನಂತಹವರಿಗೆ ವೈದಿಕದೇವರಾದ ಶಿವನನ್ನು ಮನ್ಮಥನಿಂದ ಸೋಲಿಸುವುದೇ ಮುಖ್ಯವಾಗುತ್ತದೆ. ನಾಗಚಂದ್ರನಂತಹವರಿಗೆ ರಾವಣನನ್ನು ಒಳ್ಳೆಯವನನ್ನಾಗಿಸುವ ಉದ್ದೇಶವೇ ಕಾಣುತ್ತದೆ. ಕುಮಾರವ್ಯಾಸ 'ಕೃಷ್ಣ ಮೆಚ್ಚಲಿಕೆ'ಬರೆದದ್ದಲ್ಲವೇ!
ಇನ್ನು ಆಧುನಿಕ ಕವಿಗಳ ಕೃತಿಗಳನ್ನು ನೋಡಿದರೆ ನನ್ನ ಅರಿವಿನ ಮಿತಿಯಲ್ಲಿ ಕುವೆಂಪುರವರ ಶ್ರೀರಾಮಾಯಣದರ್ಶನಂ ಒಂದು ಮಹಾಕಾವ್ಯವಾಗಿ ಇದೆ.  ಪ್ರಶಸ್ತಿಗಳು ಬಂದವೆಲ್ಲ ಮಹಾಕಾವ್ಯ ಎಂದು ಹೇಳುವುದನ್ನು ನಾನಂತೂ ಸುತರಾಂ ಒಪ್ಪಲಾರೆ. ಯಾವ ಕೃತಿಯಲ್ಲಿ ಕಾವ್ಯತ್ವ ಸ್ವಲ್ಪವೂ ಇಲ್ಲವೋ ಅದನ್ನು ಕಾವ್ಯ ಎನ್ನುವುದೇ ಕಷ್ಟ, ಇನ್ನು ಮಹಾಕಾವ್ಯ ಎಂದು ಹೇಗೆ ಒಪ್ಪಲಿ!! ಕವೃ-ವರ್ಣನೇ ಎಂಬ ಧಾತುವಿನಿಂದ ಕವಿ-ಕಾವ್ಯ ಎಂಬ ಶಬ್ದಗಳು ಹುಟ್ಟಿದವಂತೆ. ಅಂದರೆ ಒಂದನ್ನು(ವಸ್ತುವನ್ನು) ವರ್ಣಿಸುವುದು ಕವಿತ್ವ ಎಂತಾದರೆ ವರ್ಣನಾಂಶಗಳೇ ಇಲ್ಲದಿದ್ದಲ್ಲಿ ಅದು ಹೇಗೆ ಕಾವ್ಯವಾಗುತ್ತದೆ!
ಕುವೆಂಪು ಅವರ ಕಾವ್ಯ ವರ್ಣನೆಯ ವಿಷಯದಲ್ಲಿ ಹಿಂದೆ ಬೀಳುವುದೇ ಇಲ್ಲ. ಅವರ ವರ್ಣನೆಗೆ ಅವರೇ ಸಾಟಿ. ಹೀಗಿದ್ದರೂ ಹಲವುಕಡೆ ಕಾವ್ಯದೋಷಗಳನ್ನು ಮೀರಿಲ್ಲವೆಂಬುದು ಸ್ವಲ್ಪ ಬೇಸರದ ಸಂಗತಿ. (ಮೊದಲ ಸಾಲಿನಲ್ಲೇ) ವಿಸಂಧಿದೋಷ, ಅರಿಸಮಾಸಗಳು,ವ್ಯಾಕರಣವಿರುದ್ಧಪದಗಳು ಇತ್ಯಾದಿ ಕೆಲವು ಅಲ್ಲಿಲ್ಲಿ ಹಾಗೆ ಹೀಗೆ ಸುಳಿದಾಡಿದರೂ ಕವಿತ್ವದ ಬಿರುಗಾಳಿಯಲ್ಲಿ ಕೊಚ್ಚಿಹೋಗುತ್ತವೆ!
ಅವರ ಮಾತನ್ನೇ ಹೇಳುವುದಾದರೆ- ಕವಿಗೆ ಕರ್ಣಂ ಪ್ರಮಾಣಂ- ವ್ಯಾಕರಣಮಲ್ತು! ವ್ಯಾಕರಣಮೇಕೆಂದೊಡೆ ಮರೆವುದಕೆ ಕಲ್ತು!!"
ಹಾಗಿದ್ದರೂ ದೋಷಗಳನ್ನು ಮೀರಲು ವ್ಯಾಕರಣಾದಿಗಳು ಬೇಕೇ ಬೇಕು ಎಂಬುದಂತೂ ಸತ್ಯ.
ಈವೊತ್ತಿನ ಪದ್ಯ ಕುವೆಂಪು ಅವರದೇ- ಅವರೇ ಹೇಳಿದಂತೆ ಸೂರ್ಯೋದಯಚಂದ್ರೋದಯ ದೇವರ ದಯೆಯೇ ಅಲ್ಲವೇ! ಹಾಗೆ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಶಿಲಾತಪಸ್ವಿನಿ ಸಂಚಿಕೆಯಲ್ಲಿ ಬರುವ ಸೂರ್ಯೋದಯದ ವರ್ಣನೆಯ ಸಂದರ್ಭ- ಅಯೋಧ್ಯೆಯಿಂದ ವಿಶ್ವಾಮಿತ್ರರ ಜೊತೆ ರಾಮಲಕ್ಷ್ಮಣರು ಅವರ ಯಜ್ಞಕ್ಕೆ ಕಾವಲಾಗಲು ಹೊರಟಿರುತ್ತಾರೆ. ಆ ಸಂದರ್ಭದಲ್ಲಿ ಸರಯೂ ನದಿಯ ತೀರದಲ್ಲಿ ರಾತ್ರಿ ಕಳೆದ ಬಳಿಕ ಕಂಡ ದೃಶ್ಯ:-
ಪ್ರಾಚೀದಿಗಂಗನೆಯ ಕಣ್ದೆರಹಿನೊಳಬೆಳಗೊ
ಕನಕಮೇರುವನೇರಿಬಹ ತೇರನೆಳೆಯುತಿಹ
ತಪನಹಯಖುರಪುಟದಿನೆದ್ದ ಹೊಂದೂಳಿಯೋ
ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ
ಗಾಯಗೊಂಡಿರ್ಪಿರುಳ್ ಕಾರ್ದ ನೆತ್ತರ್ ಸೋರ್ವ
ಸೋನೆ ತುಂತುರ್ ಮಳೆಯೊ ಪೇಳೆನಲ್ ಮರುದಿನಂ
ಬೆಳಗಾದುದಿಂದ್ರದಿಕ್ತಟದಿ. ತುಂಬಿತ್ತೊಡನೆ
ವನದೇಶಮಂ ಲಕ್ಷಪಕ್ಷಿಯಲಿ ರಾಜಿಸಿತು
ಸರಯೂ ನದಿಯ ವಕ್ಷಮೋಕುಳಿಯ ಕಾಂತಿಯಿಂ
ತಳಿಸಿ.
(ಪೂರ್ವದಿಕ್ಕೆನ್ನುವ ಸುಂದರಿ ಕಣ್ಣನ್ನು ತೆರೆದಾಗ ಕಂಡ ಕಾಂತಿಯೋ,  ಕನಕಗಿರಿ ಮೇರುವನ್ನು ಹತ್ತಿಬರುತ್ತಿರುವ ಸೂರ್ಯನ ತೇರನ್ನು ಎಳೆಯುತ್ತಿದ್ದ ಕುದುರೆಗಳ ಖುರಪುಟ(ಗೊರಸು)ಗಳಿಂದೆದ್ದ ಬಂಗಾರದ ಬಣ್ಣದ ಧೂಳಿಯೋ, ಕತ್ತಲೆಯನ್ನು ಅಟ್ಟಿ ಬರುತ್ತಿರುವ ಸೂರ್ಯನ ಬಾಣಕ್ಕೆ ತುತ್ತಾಗಿ ಗಾಯಗೊಂಡ ರಾತ್ರಿ ಕಾರುತ್ತಿರುವ ರಕ್ತವೋ ಎಂಬಂತೆ ಇಂದ್ರನ ದಿಕ್ಕಾದ ಪೂರ್ವದಲ್ಲಿ ಮಾರನೆಯ ದಿನ ಬೆಳಗಾದುದು. ಆಗ ವನದಲ್ಲೆಲ್ಲ ಲಕ್ಷಾಂತರ ಪಕ್ಷಿಗಳು ತುಂಬಿಕೊಂಡವು, ಸರಯೂ ನದಿಯ ವಕ್ಷಸ್ಥಳದಲ್ಲಿ ಓಕುಳಿಯ ಬಣ್ಣ ತುಂಬಿಕೊಂಡು ರಾಜಿಸುತ್ತಿತ್ತು)
ಇಂತಹ ಅದ್ಭುತವಾದ ವರ್ಣನೆ ಆ ಸೂರ್ಯೋದಯದೃಶ್ಯದ ಆಸ್ವಾದ ಮಾಡುವಾಗ ಗರಿಗೆದರುವ ಕಲ್ಪನೆ ಇವನ್ನೆಲ್ಲ ಕೇಳಿ-ಓದಿದಾಗ ನಮಗನ್ನಿಸುವುದೂ -ಕವಿವಿಭೂತಿಗೆ ನಮೋ ಕೃತಿವಿಭೂತಿಗೆ ನಮೋ!!

ಸೋಮವಾರ, ಮಾರ್ಚ್ 9, 2015

ಸಹೃದಯಕಾಲ-೧೫-ಮೇಘಸಂದೇಶ

ಸಂಸ್ಕೃತ ಸಾಹಿತ್ಯದ ಪರಿಚಯ ಇರುವವರಿಗಂತೂ ಕಾಲಿದಾಸನ ಸ್ಥಾನ ಏನೆಂಬುದು ತಿಳಿದೇ ಇದೆ. ಉಳಿದ ಭಾರತೀಯರೂ, ಸಂಸ್ಕೃತವನ್ನರಿಯದಿದ್ದವರೂ ಆ ಮಹಾಕವಿಯ ಬಗ್ಗೆ ಸಾಕಷ್ಟು ಕೇಳಿರುತ್ತಾರೆ. ಅಂತಹ ಮಹಾಕವಿಯ ಕಾವ್ಯಗಳ ಸ್ವಾರಸ್ಯವನ್ನು ಎಷ್ಟು ಸವಿದರೂ ಇನ್ನೊಮ್ಮೆ ಸವಿಯಬೇಕೆನಿಸುತ್ತದೆ.ಅವನ  ಏಳುಕಾವ್ಯಗಳನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿದವರೆಷ್ಟೋ ವಿದ್ವಾಂಸರಿದ್ದಾರೆ, ಸಹೃದಯರಿದ್ದಾರೆ. ನಾನು ಮೂಲವನ್ನು ಓದಿಕೊಂಡವನಲ್ಲ. ಅವರಿವರು ಹೇಳಿದ್ದನ್ನು ಕೇಳಿಕೊಂಡವನಷ್ಟೆ. ಅವರಷ್ಟು ಚೆನ್ನಾಗಿ ವ್ಯಾಖ್ಯಾನಿಸಬಲ್ಲೆನೆಂದಾಗಲೀ ಅಥವಾ ಮೂಲಕ್ಕೆ ಒಪ್ಪುವಂತೆ ಅರ್ಥ ಹೇಳುತ್ತೇನೆ ಎಂಬ ಭಾವವಾಗಲೀ ಇಲ್ಲ. ಆದರೂ ಸಹೃದಯರಿಗೆ ಸವಿಯಿರುವುದೆಂದು ತೋರಿಸಿಕೊಡಬಲ್ಲೆ . ಇರುವೆಗೆ ಸಕ್ಕರೆಯ ಮೂಟೆಯನ್ನು ತೋರಿಸುವ ಕೆಲಸ ಎಂದುಕೊಳ್ಳಿ ಬೇಕಾದರೆ :-) ಅಲ್ಲದೇ ಇಲ್ಲಿ ಕನ್ನಡಕಾವ್ಯಸ್ವಾರಸ್ಯವಿಸ್ತರಣೆ ಮಾಡುವ ಬಯಕೆ ಇರುವ ಕಾರಣ ಮೂಲಕ್ಕಿಂತ ಅನುವಾದಕ್ಕೆ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಅನೌಚಿತ್ಯವೇನೂ ಆಗಲಾರದು ಎಂದುಕೊಳ್ಳುತ್ತೇನೆ.
ಸಂದರ್ಭ- ಮೇಘದೂತದಲ್ಲಿ ಯಕ್ಷ ತನ್ನ ಪ್ರಿಯೆಗೆ ಮೇಘದ ಮೂಲಕ ಸಂದೇಶ ಕಳಿಸುತ್ತಾ ಮೇಘಕ್ಕೆ ಮಾರ್ಗವನ್ನು ಸೂಚಿಸುತ್ತಾ ಬೇರೆ ಬೇರೆ ಪ್ರದೇಶಗಳನ್ನು ಅಲ್ಲಿಯ ಜನಜೀವನವನ್ನು ವರ್ಣನೆ ಮಾಡುತ್ತಾ ಸಾಗುತ್ತಾನೆ. ಹೀಗೆ
ಮೇಘಸಂದೇಶದಲ್ಲಿ ಬರುವ ಒಂದು ಪದ್ಯ -

ಕರ್ತುಂ ಯಚ್ಚ ಪ್ರಭವತಿ ಮಹೀಮುಚ್ಛಿಲೀನ್ಧ್ರಾಮವನ್ಧ್ಯಾಂ
ತಚ್ಛ್ರುತ್ವಾ ತೇ ಶ್ರವಣಸುಭಗಂ ಗರ್ಜಿತಂ ಮಾನಸೋತ್ಕಾಃ|
ಆಕೈಲಾಸಾದ್ ಬಿಸಕಿಸಲಯಚ್ಛೇದಪಾಥೇಯವನ್ತಃ
ಸಂಪತ್ಸ್ಯನ್ತೇ ನಭಸಿ ಭವತೋ ರಾಜಹಂಸಾಃ ಸಹಾಯಾಃ||

ಇದನ್ನು ಕನ್ನಡದಲ್ಲಿ ಪ್ರಸಿದ್ಧವಾದ "ಅಂಬಿಕಾತನಯದತ್ತರ ಮೇಘದೂತ"ದಲ್ಲಿ ಹೀಗೆ ಅನುವಾದ ಮಾಡಿದ್ದಾರೆ.

ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿ ಅಣಬೆ ತಾಳಿ
ಕಿವಿಗೆ ಸವಿಯೆನಿಪ ಮೊಳಗ ಕೇಳಿ ಮಾನಸಕೆ ಬಂತು ದಾಳಿ
ತುಂಡು ತಾವರೆಯ ಬುತ್ತಿಕಟ್ಟಿ ಕೈಲಾಸಕಾಗಿ ಸಾಗಿ
ಬಾನಬಯಲಿನಲಿ ಕೊನೆಗು ಬರುವವರಸಂಚೆ ಜೋಡಿಯಾಗಿ||
(ಮೊದಲ ಬಾರಿ ಮೊಳಗಿದಾಗಳೇ ಭೂಮಿ ಬಂಜೆತನವನ್ನು ತೊರೆಯಿತು. ಅಣಬೆಗಳು ಬೆಳೆದುವು. ಕಿವಿಗೆ ಸವಿಯೆನಿಸುವ ಗುಡುಗಿನ ದನಿಯನ್ನು ಕೇಳಿ ಮಾನಸಸರೋವರಕ್ಕೆ ದಾಳಿ ಬಂತು; ಅವು ತಾವರೆಯ ಎಸಳುಗಳನ್ನೇ ಬುತ್ತಿಯಂತೆ ಕಟ್ಟಿಕೊಂಡು ಬರುವ ರಾಜಹಂಸಗಳು, ಕೈಲಾಸಕ್ಕಾಗಿ ಸಾಗಿ ಕೊನೆಯವರೆಗೂ ಬಾನಿನ ದಾರಿಯಲ್ಲಿ ಜೊತೆಯಾಗಿ ಬರುತ್ತವೆ)

ಇದನ್ನೇ ಇನ್ನೊಬ್ಬ ಕವಿಗಳಾದ ಶ್ರೀ. ಗಣಪತಿ ಮೊಳೆಯಾರರು ಮೂಲದ ಮಂದಾಕ್ರಾಂತಾಚ್ಛಂದಸ್ಸಿನಲ್ಲಿಯೇ ಹೀಗೆ ಅನುವಾದ ಮಾಡಿದ್ದಾರೆ.

ನಿನ್ನಾರಾವಕ್ಕಣಬೆ ವೆಳೆಗುಂ ಭೂಮಿಸಂಪನ್ನಮಕ್ಕುಂ
ಕೇಳ್ದಾ ಕರ್ಣಕ್ಕನಿದು ದನಿಯಂ ರಾಜಹಂಸಂಗಳೆಲ್ಲಂ
ಪಾರುತ್ತುಂ ಮಾನಸಕೆ ನಭದೊಳ್ ಕೂಡುತೊತ್ತಾಸೆಗೆಂದಾ
ಕೈಲಾಸಂ ಸೇರ್ವನಕ ಬಿಸಪಾಥೇಯಮಂ ತಾಳ್ದಿವರ್ಕುಂ||
(ನಿನ್ನ ಧ್ವನಿಗೆ ಅಣಬೆ ಬೆಳೆಯುವುದು, ಭೂಮಿ ಸಂಪನ್ನವಾಗುತ್ತದೆ. ಕಿವಿಗೆ ಇಂಪಾಗಿರುವ ಆ ದನಿಯನ್ನು ಕೇಳಿ ರಾಜಹಂಸಗಳೆಲ್ಲ ಹಾರುತ್ತಾ ಮಾನಸದೆಡೆಗೆ ಹೊರಟು ಬರುತ್ತವೆ. ಕಮಲದ ಮೊಗ್ಗುಗಳ ಬುತ್ತಿಯನ್ನು ತಮ್ಮೊಡನೆ ಇಟ್ಟುಕೊಂಡ ರಾಜಹಂಸಗಳು ಆಕಾಶದಲ್ಲಿ ಕೈಲಾಸವನ್ನು ಸೇರುವತನಕವೂ ಒತ್ತಾಸೆಯಾಗಿರುತ್ತವೆ. )


ಈ ಎರಡು ಅನುವಾದಗಳನ್ನೂ ಅವಲೋಕಿಸಿದಾಗ ಬೇಂದ್ರೆಯವರ ಅನುವಾದ ಹೊಸಗನ್ನಡದ ತಳಹದಿಯಲ್ಲಿ  ಸುಲಭವೇದ್ಯವಾಗುವಂತಿದೆ ಅಲ್ಲದೇ ಬುತ್ತಿ,ದಾಳಿ,ತುಂಡುತಾವರೆ ಇತ್ಯಾದಿಶಬ್ದಗಳಿಂದ ನಮ್ಮದೇ ಜಾಡಿನದೆಂದು  ಆತ್ಮೀಯವಾಗೆನಿಸುತ್ತದೆ ಎಂಬುದಂತೂ ನಿಜ.
ಮೊಳೆಯಾರರ ಅನುವಾದ ಹಳಗನ್ನಡದಿಂದ ಸಂಪನ್ನವಾಗಿರುವುದಲ್ಲದೇ  ಸಂಸ್ಕೃತಕ್ಕೆ ತುಂಬಾ ಸಮೀಪವಾಗಿದೆ., ಸಂಸ್ಕೃತಶಬ್ದಗಳನ್ನು ಗಂಭೀರವಾದ ವೃತ್ತದಲ್ಲಿ ಹೊಂದಿಸಿಕೊಂಡು ಕಾಲಿದಾಸೀಯವಾಗಿಯೇ ಭಾಸವಾಗುತ್ತದೆ. ಅಲ್ಲದೇ ಮೂಲದ ಛಂದಸ್ಸಿನಲ್ಲಿ ಅನುವಾದ ಮಾಡುವುದು ದುಷ್ಕರವಷ್ಟೇ ಅಲ್ಲದೇ ಭಾವವನ್ನು ತರುವುದೆಷ್ಟು ಕಷ್ಟ ಎಂಬುದು ಅನುಭವವೇದ್ಯವಷ್ಟೆ. ಹಾಗೆಯೇ ಛಂದಸ್ಸಿನ    ಔಚಿತ್ಯದ ವಿಚಾರ ಬಂದಾಗ ಬೇಂದ್ರೆಯವರ ಪದ್ಯ ಸಂತುಲಿತಮಧ್ಯಾವರ್ತಗತಿ ಪ್ರಕೃತ ಸಂದರ್ಭಕ್ಕೆ ಸೂಕ್ತವಾದುದಲ್ಲ ಎಂದು ಛಂದೋವಿದರ ಅಭಿಮತ. ನಮಗೆ ಎರಡೂ ಪದ್ಯಗಳ ಆಸ್ವಾದನೆಯೂ ಸೊಗಸನ್ನು ನೀಡುತ್ತದೆಯೆಂಬುದಂತೂ ನಿಜ!